ಹಾವೇರಿ ಜಿಲ್ಲೆಯ ಕೆಲವು ಶಾಸನಗಳ ದರ್ಶನ
ಶಾಸನಗಳು ನಮ್ಮ ನಾಡಿನ ಜ್ಞಾನದ ಗಣಿ. ಈ ಗಣಿಯನ್ನು ನಾವು ಸಂರಕ್ಷಿಸಬೇಕು, ಸಂಶೋಧಿಸಬೇಕು, ಅಭಿವೃದ್ದಿಗೊಳಿಸಬೇಕು. ಈ ಶಾಸನಗಳು ದೊರೆಯದಿದ್ದರೆ ನಮ್ಮ ಚರಿತ್ರೆ ಕತ್ತಲ ಕೋಣೆಯಾಗಿರುತ್ತಿತ್ತು. ಭಾರತೀಯ ಲಿಪಿಶಾಸ್ತ್ರದ ಚರಿತ್ರೆಯಲ್ಲಿ ಅಶೋಕನ ಬ್ರಾಹ್ಮೀಲಿಪಿಯಿಂದ ಪ್ರಾರಂಭವಾಗಿ ಇಂದಿನ ಭಾರತೀಯ ಲಿಪಿಗಳವರೆಗೂ ನಾವು ಅನೇಕ ಹಂತಗಳನ್ನು ಕಾಣುತ್ತೇವೆ. ಕನ್ನಡ ಲಿಪಿಯು ಅಶೋಕನ ದಕ್ಷಿಣದ ಬ್ರಾಹ್ಮೀಲಿಪಿಯಿಂದ ಉಗಮವಾಯಿತು. ಅಂದರೆ ಅಶೋಕನ ಬ್ರಾಹ್ಮೀಲಿಪಿಯು ಕಾಲಕ್ರಮದಲ್ಲಿ ಶಾತವಾಹನ, ಕದಂಬ, ಗಂಗ, ರಾಷ್ಟ್ರಕೂಟ. ಚಾಳುಕ್ಯ, ಹೊಯ್ಸಳ, ವಿಜಯನಗರ ಹಾಗೂ ಮೈಸೂರು ಒಡೆಯರ ರಾಜಮನೆತನಗಳ ಕಾಲದಲ್ಲಿ ಬದಲಾವಣೆಗಳನ್ನು ಹೊಂದಿದವು. ಈ ಲಿಪಿಯ ವಿಕಾಸಕ್ಕೆ ಮೂಲ ಕಾರಣಗಳು ಲೇಖನ ಸಾಮಗ್ರಿಗಳು (ಬರೆಯುವ ಲೇಖನದ ತುದಿ ದುಂಡಾಗಿರಬಹುದು, ತ್ರಿಕೋನಾಕಾರದಲ್ಲಿ ಅಥವಾ ಚೌಕಾಕಾರದಲ್ಲಿರಬಹುದು) ಅಥವಾ ಲೇಖನವನ್ನು ತಾಮ್ರ ಪಟದ ಮೇಲೆ ಬರೆದಾಗ ಅದು ಕಲ್ಲು ಮತ್ತು ಭೋಜ ಪತ್ರ (ಗಿಡದ ತೊಗಟೆ) ಮೇಲೆಯ ಬರವಣಿಗೆಯು ವಿಭಿನ್ನವಾಗಿ ಕಾಣುತ್ತದೆ ಅಥವಾ ಅಕ್ಷರಗಳು ಅಲಂಕೃತಗೊಂಡಿರಬಹುದು. ಇಂತಹ ಮನಸ್ಸಿನ ಭಾವನೆಗಳನ್ನು ಹೊರಹಾಕಲು ಸಿಕ್ಕ ಮಾರ್ಗವೇ ಈ ಕನ್ನಡ ಲಿಪಿಯ ಉಗಮಕ್ಕೆ ಕಾರಣವಾಗಿದೆ. ನಮ್ಮ ಜಿಲ್ಲೆಯಲ್ಲಿ ಸುಮಾರು ೧೩೦೦ ಶಾಸನಗಳು ದೊರೆತ್ತಿದ್ದು ಅವುಗಳು ಪ್ರಮುಖ ಘಟನೆಗಳನ್ನು, ವ್ಯಕ್ತಿಗಳನ್ನು ಮತ್ತು ಕಾಲಜ್ಞಾನದ ಕುರಿತು ಮಾಹಿತಿಯನ್ನು ನೀಡುತ್ತವೆ. ಅಂತಹ ಕೆಲವು ಪ್ರಮುಖ ಶಾಸನಗಳನ್ನು ಕುರಿತು ಈ ಕೆಳಗೆ ಮಾಹಿತಿ ನೀಡಲಾಗಿದೆ.
• ಹಾವೇರಿಯು ಯಾದವರ (ಸೇಉಣ) ಮತ್ತು ಹೊಯ್ಸಳರ ಅಂಚಿನಲ್ಲಿ ಇದ್ದ ನಗರವಾಗಿದ್ದು, ಇಲ್ಲಿ ಅನೇಕ ಯುದ್ಧಗಳು ನಡೆದಿವೆ. ಹಾವೇರಿಯನ್ನು ಕೃತಯುಗದಲ್ಲಿ “ನಳಚಕ್ರವರ್ತಿಯು” ಕಟ್ಟಿಸಿದನೆಂದು ರಾಷ್ಟ್ರಕೂಟ ಅರಸನಾದ (ಕ್ರಿ.ಶ ೧೦ನೇ ಶತಮಾನ) ಮೂರನೇಯ ಕೃಷ್ಣನ ಕಾಲದ ಶಾಸನದಲ್ಲಿದೆ. ಹಾವೇರಿಯ “ಕಿರಿಯಮೂಕಣ” ನೆಂಬ ಶಾಸನ ಕವಿಯೊಬ್ಬನು (ಕ್ರಿ.ಶ ೧೧೩೩) ಇದನ್ನು ನಿಸರ್ಗ ಸೌಂದರ್ಯದ ಹಾಗೂ ಸರಸ್ವತಿಯ ಬೀಡು ಎಂದು ವರ್ಣಿಸಿದ್ದಾನೆ. ಇಂತಹ ಶಾಸನಗಳ ಕೆಳಗೆ ಇದನ್ನು ಹಾನಿಮಾಡದಿರಲು ಮತ್ತು ಈ ಶಾಸನಗಳಲ್ಲಿ ಇರುವ ನಿಯಮಗಳನ್ನು ಪಾಲಿಸಲು ಕಟ್ಟಪ್ಪಣೆಯನ್ನು ಬರೆಯುತ್ತಿದ್ದರು.
• ಹಾವೇರಿಯ ಸಿದ್ದೇಶ್ವರ ದೇವಾಲಯ ಅಂದಿನ ಕಾಲದಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆ ಕೇಂದ್ರವಾಗಿದ್ದು, ಈ ದೇವಾಲಯದ ನಿರ್ಮಿತ ಬಗ್ಗೆ ಮಾಹಿತಿಯನ್ನು ನೀಡಿದೆ. “ಕ್ರಿ.ಶ ೧೧೦೯ ರಲ್ಲಿ ಚಾಲುಕ್ಯ ಅರ್ಮಡಿ ವಿಕ್ರಮಾದಿತ್ಯನ ಅಧಿಕಾರಿ “ನಿಂಬ” ನೆಂಬುವವನು ದೇವರಿಗೆ ಕೆಲವು ದಾನಗಳನ್ನು ನೀಡಿದನು. ಈ ದೇವಾಲಯದ ಆಗಿನ ಆಚಾರ್ಯರು “ಕಾಳಮುಖ ಪಂಥಕ್ಕೆ” ಸೇರಿದವರೆಂದು ತಿಳಿಸುತ್ತದೆ.
• ಹಾವೇರಿಯ ಇನ್ನೊಂದು ಶಾಸನದಲ್ಲಿ “ಸಿದ್ದನಾಥಕ್ಷೇತ್ರ” ವೆಂದು ಪ್ರಸಿದ್ಧಿ ಪಡೆದ ಈ ನಗರದಲ್ಲಿ ಕಾಳಮುಖ ಪಂಥಕ್ಕೆ ಸೇರಿದ “ಜ್ಞಾನರಾಶಿ” ಯೆಂಬ ಯತಿಗಳ ಉಲ್ಲೇಖ (ಪುರಸಿದ್ದೇಶ್ವರ ದೇವಾಲಯದ ಗರ್ಭಗೃಹದಲ್ಲಿರುವ ಜಡೆ ಮತ್ತು ಗಡ್ಡಗಳುಳ್ಳ ಮೂರ್ತಿಯೆ ಇರಬಹುದು) ಬಂದಿದ್ದು ಅವರಿಗೆ ದೇವಾಲಯದ ದತ್ತಿಗಳನ್ನು ಒಪ್ಪಿಸಲಾಯಿತು.
• ಹಾವೇರಿಯ ವೀರಭದ್ರ ದೇವಾಲಯದಲ್ಲಿಯ ಒಂದು ಶಾಸನದಲ್ಲಿ
“ಪರಹಿತ ಚರಿತಂ ಪಾವನತರ ತತ್ವ ವಿಚಾರನಮಳ ಗುಣಮಣಿಕೋಶಂ ಸುರಚಿತ
ನವಪದಮಂ ಮಾದರಸಂ ಮಾಡಿಸಿದನೆಸಯ ಜಿನಮಂದಿರದೊಳ್”
ಎಂದು ಹೇಳಿದ್ದರಿಂದ ಈ ದೇವಾಲಯ ಜೈನ ಬಸದಿಯಾಗಿದ್ದು, ಮುಂದೆ ಶೈವ ಪಂಥದ ಉಚ್ಛ್ರಾಯಕಾಲದಲ್ಲಿ ವೀರಭದ್ರ ದೇವಾಲಯವಾಯಿತೆಂದು ಊಹಿಸಬಹುದು.
• ಇನ್ನೊಂದು ಶಾಸನದಲ್ಲಿ ಹಾವೇರಿಯ ಪುರಾತನ ದೇವಾಲಯ “ಇಂದ್ರೇಶ್ವರ” (ಈಗಿನ ನರಸಿಂಹದೇವಾಲಯ) ಮತ್ತು ಕಲ್ಲು ಮಂಟಪದ ಬಗ್ಗೆ ಮಾಹಿತಿಯಿದೆ.
• ಹಾವೇರಿಯ ಪ್ರಸಿದ್ಧ ಕೆರೆಯಾದಂತಹ ಹೆಗ್ಗೇರಿಯಲ್ಲಿ “ಹೆಗ್ಗಡೆ ರುದ್ರ” ದೇವನೆಂಬವನು ಈ ಕೆರೆಗೆ ಉತ್ತರಾಯಣ ಸಂಕ್ರಮಣ ದಿನ ಪುಣ್ಯ ಸ್ನಾನಕ್ಕೆ ಬಂದ ಎಂದು ಶಾಸನ ತಿಳಿಸುತ್ತದೆ. ಇನ್ನೊಂದು ಶಾಸನದಲ್ಲಿ ಕ್ರಿ.ಶ ೧೧೩೪ ರಲ್ಲಿ ಕದಂಬ ವಂಶದ ಮಲ್ಲಿಕಾರ್ಜುನನೆಂಬ ಅರಸ ಈ ಕೆರೆಗೆ ನಿಂತು ಹೋದ ದತ್ತಿಗಳನ್ನು ಪುನಃ ಕೊಡಿಸಿದನು.
• ದೇವಗಿರಿಯಲ್ಲಿ (ತಾ|| ಹಾವೇರಿ) ದೊರೆತ ತಾಮ್ರ ಪಟಗಳಿಂದ ಹಲಸಿಯಲ್ಲಿ (ಬೆಳಗಾವಿ) ಒಂದು ಜೈನ ಬಸದಿ ನಿರ್ಮಾಣಗೊಂಡು ಅದಕ್ಕೆ ನೀಡಿದ ದಾನದ ಬಗ್ಗೆ ಮಾಹಿತಿಯನ್ನು ನೀಡುತ್ತದೆ.
• ಬದಾಮಿಯ ಚಾಳುಕ್ಯರು ಮತ್ತು ಮುಳಖೇಡದ ರಾಷ್ಟ್ರಕೂಟರು ನೀಡಿದ ಗೋಸಹಸ್ರದಾನ ಮಾಡಿದ ಬಗ್ಗೆ ಸೂಚಿಸುವ ಗೋಸಾಸಕಲ್ಲು (ಮೇಟಿ) ಗಳು ಹಳೆರಿತ್ತಿಯಲ್ಲಿ ದೊರೆತಿವೆ. ಕ್ರಿ.ಶ ೧೦೩೦ ರಲ್ಲಿ “ಅಂಗಿಯಬ್ಬೆ” ಎಂಬಾಕೆ ಮಲ್ಲಿಕಾರ್ಜುನ ದೇವಾಲಯವನ್ನು “ಗುಂಡೆನಹಳ್ಳಿ” (ಬ್ಯಾಡಗಿ) ಯಲ್ಲಿ ನಿರ್ಮಿಸಿದಳು.
• ಕ್ರಿ.ಶ ೧೦೬೭ ರಲ್ಲಿ ಮಹಾಮಂಡಲೇಶ್ವರ “ಲಕ್ಷö್ಮರಸನು” ಲಚ್ಚಿಮಯ್ಯ ಕಟ್ಟಿಸಿದ ಬೆಣ್ಣೆವೂರಲ್ಲಿಯ (ಮೋಟೆಬೆನ್ನೂರ) ಬಸದಿಗೆ ಬಿಟ್ಟ ಭೂದಾನದ ಬಗ್ಗೆ ಶಾಸನ ತಿಳಿಸುತ್ತದೆ.
• ಕ್ರಿ.ಶ ೧೦೭೨ ರ ದಾನ ಶಾಸನದಲ್ಲಿ “ಜಕ್ಕಗಾವುಂಡ” ಮುಂತಾದ ಅಧಿಕಾರಿಗಳು ಗ್ರಾಮೇಶ್ವರ ದೇವರಿಗೆ ನೀಡಿದ ಬಗ್ಗೆ ಕಾಗಿನೆಲೆಯಲ್ಲಿ ತಿಳಿಸುತ್ತದೆ.
• ಕ್ರಿ.ಶ ೧೦೮೦ ರ ಶಾಸನದಲ್ಲಿ ಪುಲ್ಲಣಿ (ಗಳಗನಾಥ) ಗ್ರಾಮದ ಗಳಗೇಶ್ವರ ದೇವರಿಗೆ ಸಾಮ್ರಾಜ್ಯದ ಮಹಾಮಂಡಲೇಶ್ವರ ದತ್ತಿಯನ್ನು ಪುನರ್ಜ್ಜೀವಿಸಿದ ಬಗ್ಗೆ ತಿಳಿಸುತ್ತದೆ.
• ಕ್ರಿ.ಶ ೧೧೨೧ ರ ಶಾಸನದಲ್ಲಿ “ದಾಸಿಮಯ್ಯ” ಎಂಬಾತನು “ನೆರೇಗಲ್” ನಲ್ಲಿ ಸೂರ್ಯಮಂದಿರ ನಿರ್ಮಿಸಿದನು. ಕ್ರಿ.ಶ ೧೧೨೧ ರ ಶಾಸನದಲ್ಲಿ “ಜಟಾಚೋಳ” ಎಂಬವನು ಪ್ರಸಿದ್ದ “ಚೌಡಯ್ಯಧಾನಪುರದ ಮುಕ್ತೇಶ್ವರ ಮಂದಿರವನ್ನು ನಿರ್ಮಿಸಿದನು. ಕ್ರಿ.ಶ ೧೧೨೧ ರಲ್ಲಿ “ಬಾಸವೂರಿನ ಕಾಳಸೆಟ್ಟಿ” ಕಾಗಿನೆಲೆಯಲ್ಲಿ ಕಾಳೇಶ್ವರ ದೇವಾಲಯ ನಿರ್ಮಿಸಿದನು.
• ಕ್ರಿ.ಶ ೧೧೫೮ ರಲ್ಲಿ “ರುದ್ರದೇವ”ನೆಂಬ ಕಲ್ಯಾಣ ಚಾಳುಕ್ಯರ ಅಧಿಕಾರಿಯು ಹಾವೇರಿಯ ಕೆರೆಯ ದುರಸ್ತಿಗಾಗಿ ದಾನಮಾಡಿದ ಮತ್ತು ಈತನೆ ಅರಳೇಶ್ವರದ (ತಾ|| ಹಾನಗಲ್) ಕದಂಬೇಶ್ವರ ದೇವಾಲಯವನ್ನು ವಿಸ್ತರಿಸಿದನು.
• ಕ್ರಿ.ಶ ೧೧೫೪ ರಲ್ಲಿ ಬಿಜ್ಜಳನ ತಂತ್ರಪಾಲ “ಬಲ್ಲರಸ” ಗೆಜ್ಜೆಹಳ್ಳಿಯ (ಹಾನಗಲ್ ತಾ||) ತೈಲೇಶ್ವರ ದೇವರಿಗೆ ದಾನ ನೀಡಿದ ಎಂದು ಶಾಸನ ಹೇಳುತ್ತದೆ. ಬಿಜ್ಜಳನ ಕಾಲದಲ್ಲಿ “ಕಲಿದೇವಸೆಟ್ಟಿಯು” ಮಂತಗಿ (ಹಾನಗಲ್ ತಾ||) ಯಲ್ಲಿ ಬಸದಿಯನ್ನು ಸ್ಥಾಪಿಸಿ “೨೪” ತಿರ್ಥಂಕರನ್ನು ಪ್ರತಿಷ್ಠಾಪಿಸಿದ ಉಲ್ಲೇಖವಿದೆ.
• ಕ್ರಿ.ಶ ೧೧೮೧ ರ ಶಾಸನದಲ್ಲಿ ಅಧಿಕಾರಿ “ಜೋಯಿದೇವರಸನು” ದೇವಾಲಯಕ್ಕೆ ನೀಡಿದ ಬಗ್ಗೆ ಹರಳಹಳ್ಳಿ(ಹಾವೇರಿ ತಾ||) ಶಾಸನ ತಿಳಿಸುತ್ತದೆ.
• ಗುತ್ತರಸರ ಜೋಯಿದೇವನು ತಮ್ಮ ವಂಶದ ವಿಕ್ರಮೇಶ್ವರ ಮತ್ತು ಗುತ್ತೇಶ್ವರ ಮಂದಿರಗಳಿಗೆ ವಿಕ್ರಮಪುರ (ಹರಳಹಳ್ಳಿ) ಗ್ರಾಮವನ್ನು ನಿರ್ಮಿಸಿ ದಾನವನ್ನಾಗಿ ನೀಡಿದನು.
• ಕ್ರಿ.ಶ ೧೨೪೪-೪೫ ರಲ್ಲಿಯ ತಾಮ್ರಪಟ “ಬೀಚಸೆಟ್ಟಿಯು ದ್ವಾರಸಮುದ್ರವನ್ನು ಸೂರೆ ಮಾಡಿದ್ದನೆಂದು ಮತ್ತು ಈತನೆ ಹರಳಹಳ್ಳಿಯಲ್ಲಿ(ಹಾವೇರಿ ತಾ||) ಶಿವಾಲಯವನ್ನು ನಿರ್ಮಿಸಿದನು.
• ಕ್ರಿ.ಶ ೧೨೪೫ ರಲ್ಲಿ ಹಾನುಗಲ್ ಕದಂಬ ವಂಶದ ಮಲ್ಲಿದೇವನ ಪತ್ನಿ “ಪದ್ಮಲದೇವಿ” ಹುಲಗೂರಲ್ಲಿ(ಶಿಗ್ಗಾಂವಿ ತಾ||) ಒಂದು ಅಗ್ರಹಾರವನ್ನು ನಿರ್ಮಿಸಿದಳು.
• ಬನವಾಸಿ ಕದಂಬರ ವಂಶದ ಒಂದನೇಯ ಕೃಷ್ಣವರ್ಮನು ತ್ರಿಪರ್ವತದಲ್ಲಿ(ದೇವಗಿರಿಯಲ್ಲಿ ತಾಮ್ರಪಟದ ಆದರದ ಮೇಲೆ) ಮಾಂಡಳಿಕನಾಗಿದ್ದು ಅಣ್ಣನ ವಿರುದ್ದ ಬಂಡದ್ದೆನೆಂದು ಹೇಳುತ್ತದೆ. ಇನ್ನೊಂದು ತಾಮ್ರಪಟದಲ್ಲಿ “ದೇವವರ್ಮನು”ಜೈನ ಸನ್ಯಾಸಿಗಳಿಗೆ ತ್ರಿಪರ್ವತದಿಂದಲೆ ದಾನ ಮಾಡಿದ್ದನ್ನು ತಿಳಿಸುತ್ತದೆ.
• ಕಿರ್ತಿವರ್ಮನ(ಬಾದಾಮಿ ಚಾಳುಕ್ಯರು) ಆಜ್ಞೆಯಂತೆ ಅಲ್ಲಿಯ ಮಾಂಡಳಿಕನು “ಗಂಗೀಪಾಂಡಿ”ಯಲ್ಲಿ(ಆಡೂರ) ಜಿನಭವನವೊಂದಕ್ಕೆ “ಸೇಂದ್ರಕ ಮಾದವತ್ತಿ ಅರಸನು” ದಾನ ಮಾಡಿದ ಉಲ್ಲೇಖವಿದೆ.
• ಕ್ರಿ.ಶ ೮೫೯ ರಲ್ಲಿಯ ರಾಣಿಬೆನ್ನೂರ ಶಾಸದಲ್ಲಿ “ಪೊಲ್ಲಬ್ಬೆ” ಎಂಬವಳು ಕಟ್ಟಿಸಿದ ಬಸದಿಗೆ ಭೂದಾನ ನೀಡಿದ ವಿಚಾರವಿದೆ.
• ದೇವಿಹೊಸುರಿನ(ಹಾವೇರಿ ತಾ||) ಕ್ರಿ.ಶ ೯೬೧ ರ ಶಾಸನದಲ್ಲಿ ಆ ಊರ ಅಗ್ರಹಾರ ಮತ್ತು ಬನವಾಸಿ ನಾಡನ್ನು ‘ ಗರ್ವಿಂದರನು’ ಆಳುತ್ತಿದ್ದರೆಂದು ತಿಳಿಸುತ್ತದೆ.
• ಕ್ರಿ.ಶ ೧೦೫೮ ರ ಶಾಸನ ಹಿರೇಕೆರೂರು ಮತ್ತು ಬಾಳಂಬೀಡುಗಳ ನಡುವೆ ಇರುವ ಕೆರೆಯ ಬಗ್ಗೆ ವರ್ಣನೆಯನ್ನು ಕೊಡುತ್ತಾ ವಿಶಪರಿಹಾರೇಶ್ವರ ದೇವರಿಗೆ ದಾನದ ಬಗ್ಗೆ ತಿಳಿಸುತ್ತದೆ.
• ಕಚವಿಯ (ಕಚ್ಚಪಿ) ಶಾಸನದಲ್ಲಿ ಮದೆಯೂರ ಮಾರಾನು ಬನವಾಸಿ-೧೨೦೦೦ ವನ್ನು ಆಳುತ್ತಿದ್ದು, ಮಾರಬ್ಬೆ ಗುಡಿಗೆ ದಾನವನ್ನು ನೀಡಿದ ದಾಖಲೆಯಿದೆ.
• ಅಬಲೂರ (ಹಿರೇಕೆರೂರು ತಾ||) ಶಾಸನದಲ್ಲಿ ಜೈನರ ವಿರುದ್ಧ ವಾದನಡೆಸಿ ಗೆದ್ದ ವೀರಶೈವದ “ಏಕಾಂತರಾಮಯ್ಯ” ನಿಗೆ ಜಯ ಪತ್ರವನ್ನು ಬಿಜ್ಜಳನು ಕೊಟ್ಟದ್ದಾಗಿ ತಿಳಿಸುತ್ತದೆ.
• ಹಾನಗಲ್ ಬಿಲ್ಲೇಶ್ವರ(ಬಿಲ್ಲುಗಾರರ ಆರಾಧ್ಯ ದೇವತೆ) ದೇವಾಲಯದ ಸ್ಥಾನಪತಿಗಳಾಗಿದ್ದ ಅಥವಾ ಸ್ಥಾನಚಾರ್ಯರಾಗಿದ್ದ ಚಂದ್ರಭೂಷಣದೇವರ ಬಗ್ಗೆ ಮಾಹಿತಿ ಇದೆ (ಶೈವ ಸಂಪ್ರದಾಯದ ಪಾಶುಪತ ಮತ್ತು ಕಾಳಮುಖ ಪಂಗಡಕ್ಕೆ ಸೇರಿದ ಮಠಗಳ ಆಚಾರ್ಯರೇ ಸ್ಥಾನಾಚರ್ಯರು). ಪಲ್ಲವರು ಮೂಲತಃ ಶೈವ ಪಂಥದವರು ಇವರ ಕಾಲದಲ್ಲಿ ಈ ಸಂಪ್ರದಾಯ ಉಚ್ಛ ಸ್ಥಿತಿಯಲ್ಲಿತ್ತು.
• ಹಿಂದೂಗಳಲ್ಲಿ ರಾಹು ಸೂರ್ಯನನ್ನು ನುಂಗುತ್ತಿರುವುದರಿಂದ ಸೂರ್ಯಗ್ರಹಣವಾಗುತ್ತದೆ. ಎಂಬ ನಂಬಿಕೆ ಇದೆ. ಸೂರ್ಯನಿಗೊದಗಿದ ಈ ಕಷ್ಟ ಸಂದರ್ಭದಲ್ಲಿ ಸಹಾನುಭೂತಿ ತೋರಿಸುವ ರೂಪದಲ್ಲಿ ಚಿತಾಪ್ರವೇಶ ಮಾಡಿ ಆತ್ಮಸಮರ್ಪಣೆ ಮಾಡಿಕೊಳ್ಳುತ್ತಿದ್ದರು. ಹೀಗೆ ಮಾಡಿಕೊಳ್ಳುವುದರಿಂದ ಮೋಕ್ಷ ಸಿಗುತ್ತದೆಯೆಂಬ ನಂಬಿಕೆ ಬಲವಾಗಿತ್ತು ಇಂತಹ ಶಾಸನಗಳು ಬಾಳೂರು ಮತ್ತು ತಿಳವಳ್ಳಿಯಲ್ಲಿ ದೊರೆಯುತ್ತವೆ (ಇಲ್ಲಿ ಹಾವು ಸೂರ್ಯನನ್ನು ನುಂಗುವ ಚಿತ್ರ ಇರುತ್ತದೆ).
• ಕಲಕೇರಿಯ ಶಾಸನದಲ್ಲಿ ಬೆಂಗೇರಿಯ ಉರ್ಗಾಂವುಂಡನಾದ ಬರ್ಮಗಾವುಂಡನು ೧೨ ಜನ “ಭೋಗದ ಸೂಳೆಯರಿಗೆ ೧೨ ಮನೆಗಳನ್ನು ದಾನಮಾಡುತ್ತಾನೆ. ಪ್ರಾಚಿನ ಕಾಲದಲ್ಲಿ ದೇವರಿಗೆ ಅಂಗಭೋಗ (ದೇವರಿಗೆ ಅಷ್ಟ ವಿದಾರ್ಚನೆ – ಜಲ, ಗಂಧ, ಅಕ್ಷತೆ, ಪುಷ್ಪ ಧೂಪ, ದೀಪ, ನೈವೇದ್ಯೆ ಮತ್ತು ತಾಂಬೂಲ ಸಮರ್ಪಿಸುವುದು) ಮತ್ತು ರಂಗಭೋಗ (ದೇವರ ಮುಂದೆ ನರ್ತನ, ಸಂಗೀತ, ಗಾಯನ, ಸೇವೆಗಳನ್ನು ಮಾಡುವದು) ಗಳು ನಡೆಯುತ್ತಿದ್ದುದ್ದನ್ನು ತಿಳಿಸುತ್ತದೆ.
• ಜೈನಧರ್ಮದಲ್ಲಿ “ ಮುಪ್ಪಿನ ಕಾಲದಲ್ಲಿ ಗುಣವಾಗದ ರೋಗ ಬಂದರೆ “ ಸಲ್ಲೇಖನ” ವೆಂಬ ವೃತವನ್ನು ಹಿಡಿದು ಮರಣವನ್ನು ಅಪ್ಪುವುದÀಕ್ಕೆ ಸಮಾಧಿ ಮರಣ ಎಂದು ಕರೆಯುತ್ತಿದ್ದರು. ಸಮಾಧಿ ಮರಣ ವೃತವನ್ನು ಅಂಗೀಕರಿಸಿದವನು ಅನ್ನಪಾನಾದಿಗಳನ್ನು ತ್ಯಜಿಸಿ ಎಲ್ಲ ರೀತಿಯ ಸ್ನೇಹ, ವೈರ, ಸಂಗಗಳನ್ನು ತ್ಯಜಿಸಿ ತನ್ನ ಕರ್ಮಗಳನ್ನು ಕುರಿತು ಯಾಚಿಸಿ ಪಶ್ಚಾತಾಪ ಪಡುತ್ತಾ ಪಂಚ ಪರಮೇಷ್ಠೀಗಳನ್ನು ಧ್ಯಾನಿಸುತ್ತಾ ತನಗೆ ಉತ್ತಮ ಗತಿ ದೊರೆಯಲೆಂದು ಹಾರೈಸುತ್ತಾ ಪ್ರಾಣ ತ್ಯಾಗ ಮಾಡುವುದು. ಹೀಗೆ ಮರಣಿಸಿದವರಿಗೆ ಈ ಧರ್ಮದಲ್ಲಿ ಸ್ಮಾರಕಕ್ಕಾಗಿ ನೆಟ್ಟ ಕಲ್ಲುಗಳೆ “ನಿಷೀಧಿ ಕಲ್ಲುಗಳು. ಇದಕ್ಕೆ ಸಾಕ್ಷಿಯಾಗಿ ಕಲಕೇರಿಯಲ್ಲಿ (ಹಾನಗಲ್) ಅನೇಕ ಇಂತಹ ನಿಷೀಧಿ ಕಲ್ಲುಗಳಿವೆ.
• ಗೋಸಂರಕ್ಷಣೆಗಾಗಿಯೋ, ಕಳ್ಳಕಾಕರು ಊರನ್ನು ಮುತ್ತಿದಾಗಲೊ, ಗಡಿ ಸಂರಕ್ಷಣೆಗಾಗಿಯೋ, ಹೆಣ್ಣು ಸಂರಕ್ಷಣೆಗಾಗಿಯೋ ಕಾಡುಪ್ರಾಣಿಗಳೋಡನೆ ಕಾದಾಡಿಯೋ ಅಥವಾ ವಡೆÀಯನ ಪರವಾಗಿ ಹೋರಾಡಿ ಯುದ್ದದಲ್ಲಿ ಪ್ರಾಣ ತ್ಯಾಗ ಮಾಡಿದ ವೀರರ ಸ್ಮಾರಕಕ್ಕಾಗಿ ನೆಡಲ್ಪಟ್ಟ ಕಲ್ಲುಗಳೆ ವೀರಗಲ್ಲುಗಳು. ಸಾಮಾನ್ಯವಾಗಿ ವೀರಗಲ್ಲುಗಳಿಗೆ ಮೂರು ಭಾಗಗಳಿರುತ್ತವೆ (ಐದು ಹಾಗೂ ಏಳು ಭಾಗಗಳಿರುವ ವೀರಗಲ್ಲುಗಳು ವಿರಳ [ದೇವಗಿರಿಯಲ್ಲಿ ೫ ಭಾಗಗಳ ವೀರಗಲ್ಲನ್ನು ಮಾಡಲು). ಅವುಗಳಲ್ಲಿ ಕೆಳಗಿನ ಭಾಗದಲ್ಲಿ ಎರಡು ಸೈನ್ಯಗಳ ಚಿತ್ರ ಹಾಗೂ ವೀರನ ಹೋರಾಟ, ಮದ್ಯದಲ್ಲಿ ದೇವತೆಗಳು ಅವನನ್ನು ಕರೆದುಕೊಂಡು ಹೋಗುವ ಚಿತ್ರ ಹಾಗೂ ಮೇಲ್ಭಾಗದಲ್ಲಿ ದೇವರ ಸಾನಿದ್ಯದಲ್ಲಿ ಅವನಿರುವ ಚಿತ್ರ, ಇವುಗಳ ಮದ್ಯದ ಪಟ್ಟಿಯಲ್ಲಿ ವೀರನ ಬಗ್ಗೆ ಬರಹವಿರುತ್ತದೆ. ಇಂತಹ ವೀರಗಲ್ಲುಗಳ ಮೇಲೆ “ಜಯಶಾಲಿಯಾದರೆ ಲಕ್ಷ್ಮೀಲಭಿಸುತ್ತಾಳೆ. ಮೃತವಾದರೆ ದೇವಾಂಗನೆಯರು ಲಭಿಸುತ್ತಾರೆ. ನಿಮಿಷದಲ್ಲಿ ಅಳಿಯುವ ಈ ದೇಹಕ್ಕೆ ಕಾಳಗದಲ್ಲಿ ಸಾಯುವೆನೆಂಬ ಕೊರಗೇಕೆ? ಎಂಬುದನ್ನು ಸಂಸ್ಕೃತಶ್ಲೋಕದಲ್ಲಿ ಬರೆಯುತ್ತಿದ್ದರು. ಇಂತಹ ಅನೇಕ ವೀರಗಲ್ಲುಗಳನ್ನು ಹಾವೇರಿ ಜಿಲ್ಲೆಯಲ್ಲಿ ನೋಡಬಹುದು.
• ಪ್ರಾಚೀನ ಕಾಲದಲ್ಲಿ ಹಿರೇಕೆರೂರು ಮತ್ತು ಹಾನಗಲ್ ಪರಿಸರದಲ್ಲಿ ಹುಲಿಗಳು ಮತ್ತು ಚಿರತೆಗಳು ಹೆಚ್ಚಿನ ಸಂಖ್ಯೆಗಳಲ್ಲಿದ್ದವು ಎಂಬುದಕ್ಕೆ ಸಾಕ್ಷಿಯಾಗಿ “ಹುಲಿವೀರರ ಸ್ಮರಣೆಗಾಗಿ ವೀರಗಲ್ಲುಗಳನ್ನು ಈ ಸ್ಥಳದಲ್ಲಿ ನೋಡಬಹುದು. ಈ ಕಾಡು ಪ್ರಾಣಿಗಳು ಊರಿಗೆ ಆಕ್ರಮಣವನ್ನು ಮಾಡಿದಾಗ ಈ ವೀರರು ಅದರೊಡನೆ ಹೋರಾಡಿ ಮರಣವನ್ನಪ್ಪಿದ್ದರಿಂದ ಇವರ ನೆನಪಿಗೆ ನೆಟ್ಟಂತಹ ಈ ಕಲ್ಲುಗಳೆ ಹುಲಿ ವೀರಗಲ್ಲುಗಳು.
• ಪ್ರಾಚೀನ ಕಾಲದಲ್ಲಿ ಪತಿಯು ಮರಣಿಸಿದಾಗ ಆತನ ಸತಿಯು ಪತಿಯ ಶವದ ಮೇಲೆ ಚಿತೆಯೇರಿ ಪ್ರಾಣಾರ್ಪಣೆ ಮಾಡಿಕೊಳ್ಳುತ್ತಿದ್ದರು. ಇದನ್ನೆ “ಸತಿ” ಹೋಗುವುದು ಎಂದು ಕರೆಯಲಾಗುತ್ತಿತ್ತು. ಈಕೆಯ ಸ್ಮರಣೆಗಾಗಿ ನೆಟ್ಟಕಲ್ಲೇ “ಮಹಾಸತಿಕಲ್ಲು”
ಇಂತಹ ಅನೇಕ ಶಾಸನಗಳ ವಿಷಯವನ್ನು ನಾವು ಗಮನಿಸಿದಾಗ ಆಗಿನ ಜನರು ಮತ್ತು ಪ್ರಭುಗಳು ಧರ್ಮಸಂರಕ್ಷಕರಾಗಿದ್ದರು ಎಂದು ತಿಳಿಯುತ್ತದೆ. ಅಲ್ಲದೆ ಅವರ ಆಡಳಿತ ಕ್ರಮ, ಭಾಷೆಯ ಮೇಲಿನ ಹಿಡಿತ, ಪ್ರಜೆಗಳ ಕಲ್ಯಾಣದ ಅರಿವು, ಅವರ ಉಡುಗೆಗಳು (ಗಂಡಸರು ಪಂಚೆಯನ್ನು ತೊಡುತ್ತಿದ್ದರು ಮತ್ತು ಅವರು ಕೂದಲವನ್ನು ತುರುಬಿನಿಂದ ಕಟ್ಟಿಕೊಂಡು ಬರಿಮೈಮೇಲೆ ಇರುತ್ತಿದ್ದರು, ಆದರೆ ಹೆಣ್ಣುಮಕ್ಕಳು “ಕುಪ್ಪಸ” ವನ್ನು ತೊಡುತ್ತಿದ್ದರು) ಹಾಗೂ ಅನೇಕ ವೀರಗಲ್ಲುಗಳನ್ನು ಗಮನಿಸಿದಾಗ ಅಂಗವೈಕಲ್ಯತೆ ಆವಾಗಲು ಇತ್ತು ಎಂದು ತಿಳಿಯುತ್ತದೆ (ಪೊಲೀಯೊ ಪೀಡಿತರು).
Comments
Post a Comment