ಹಾವೇರಿ ಜಿಲ್ಲೆಯ ಎಂಟು ತಾಲೂಕುಗಳ ಕಿರು ಪರಿಚಯ....!!!!

ಶಿಗ್ಗಾಂವ (ಅರಟಾಳ)
ರಾಣೇಬೆನ್ನೂರು
ಹಿರೇಕೆರೂರು (ಹಳ್ಳೂರು)
ಬ್ಯಾಡಗಿ
(ಹಾವನೂರು ಹನುಮಂತಗೌಡರ ಶಿಲ್ಪ)
ಹಾವೇರಿ ಜಿಲ್ಲೆಯಲ್ಲಿ ಅನೇಕ ಪ್ರೇಕ್ಷಣೀಯ ಸ್ಥಳಗಳಿದ್ದು ಅವುಗಳ ಇತಿಹಾಸವು ಅಮುಲ್ಯವಾಗಿದೆ. ಇಂತಹ ಸ್ಥಳಗಳನ್ನು ನಾವು ವೀಕ್ಷಿಸಲು ನಮ್ಮ ಕುಟುಂಬ ಪರಿವಾರ ಸಮೇತ ಹೋಗುತ್ತಿರುವಾಗ, ಅದರ ಇತಿಹಾಸ ನಮಗೆ ಗೊತ್ತಿರುವುದು ಒಳ್ಳೆಯದು, ಏಕೆಂದರೆ ಅವುಗಳ ಇತಿಹಾಸವನ್ನು ತಿಳಿಸುವುದರಿಂದ ಆ ಸ್ಥಳಗಳ ಬಗೆಗಿನ ಆಕರ್ಷಣೆ ಇಮ್ಮಡಿಗೊಳ್ಳುತ್ತದೆ.

ವಿಶೇಷವಾಗಿ ಶೈಕ್ಷಣಿಕ ಪ್ರವಾಸದ ವೇಳೆ ಇಂತಹ ಅನುಭವ ಇರುವ ವ್ಯಕ್ತಿ ನಮ್ಮೊಂದಿಗೆ ಮಾರ್ಗದರ್ಶಕರಾಗಿದ್ದರೆ ಬಹಳ ಒಳ್ಳೆಯದು ಎನ್ನುವ ಭಾವನೆ ನನ್ನದು. ಹಾವೇರಿಯನ್ನು ಧಾರವಾಡ ಜಿಲ್ಲೆಯಿಂದ ಬೇರ್ಪಡಿಸಿ ಪ್ರತ್ಯೇಕ ಜಿಲ್ಲೆಯನ್ನಾಗಿ 24/08/1997 ರಂದು ಘೋಷಣೆ ಮಾಡಿದರು. ಕರ್ನಾಟಕದ ಮಧ್ಯಭಾಗದಲ್ಲಿರುವ ಈ ಜಿಲ್ಲೆಗೆ ಎಂಟು ತಾಲೂಕುಗಳನ್ನು ಸೇರಿಸಿ ಇದರ ಸೋಬಗನ್ನು ಮತ್ತಷ್ಟು ಹೆಚ್ಚಿಸಿದರು. 


ಹಾವೇರಿ ಜಿಲ್ಲೆಯಲ್ಲಿ  07 ( ಇತ್ತೀಚಿಗೆ 01 ಸೇರಿಕೊಂಡು 08) ತಾಲೂಕುಗಳು, 703 ಗ್ರಾಮಗಳು ಮತ್ತು 10 ಪಟ್ಟಣಗಳಿವೆ.

ಭಾರತ 2011 ರ ಜನಗಣತಿಯ ಪ್ರಕಾರ, ಹಾವೇರಿ ಜಿಲ್ಲೆಯಲ್ಲಿ 330414 ಕುಟುಂಬಗಳಿವೆ, 1597668 ಜನಸಂಖ್ಯೆಯಲ್ಲಿ 819128 ಪುರುಷರು ಮತ್ತು 778540 ಮಹಿಳೆಯರು. 0-6 ವರ್ಷದೊಳಗಿನ ಮಕ್ಕಳ ಜನಸಂಖ್ಯೆಯು 195317 ಆಗಿದೆ, ಇದು ಒಟ್ಟು ಜನಸಂಖ್ಯೆಯ 12.23% ಆಗಿದೆ.

ಹಾವೇರಿ ಜಿಲ್ಲೆಯ ಲಿಂಗ-ಅನುಪಾತವು ಕರ್ನಾಟಕ ರಾಜ್ಯದ ಸರಾಸರಿ 973 ಕ್ಕೆ ಹೋಲಿಸಿದರೆ 950 ರಷ್ಟಿದೆ. ಹಾವೇರಿ ಜಿಲ್ಲೆಯ ಸಾಕ್ಷರತೆ ಪ್ರಮಾಣವು 67.94% ರಷ್ಟಿದ್ದು ಅದರಲ್ಲಿ 73.71% ಪುರುಷರು ಸಾಕ್ಷರರು ಮತ್ತು 61.87% ಮಹಿಳೆಯರು ಸಾಕ್ಷರರಾಗಿದ್ದಾರೆ. ಹಾವೇರಿಯ ಒಟ್ಟು ವಿಸ್ತೀರ್ಣ 4823 ಚ.ಕಿ.ಮೀ. ಜನಸಾಂದ್ರತೆ ಪ್ರತಿ ಚ.ಕಿ.ಮೀ.ಗೆ 331. ಒಟ್ಟು ಜನಸಂಖ್ಯೆಯಲ್ಲಿ, 77.75% ಜನಸಂಖ್ಯೆಯು ನಗರ ಪ್ರದೇಶದಲ್ಲಿ ಮತ್ತು 22.25% ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ ಒಟ್ಟು ಜನಸಂಖ್ಯೆಯಲ್ಲಿ 13.77% ಪರಿಶಿಷ್ಟ ಜಾತಿ (SC) ಮತ್ತು 8.85% ಪರಿಶಿಷ್ಟ ಪಂಗಡ (ST) ಇದ್ದಾರೆ.

07 ತಾಲೂಕುಗಳ ಜನಸಂಖ್ಯೆ (ರಟ್ಟಿಹಳ್ಳಿ ತಾಲೂಕನ್ನು ಹಿರೇಕೆರೂರಿನಲ್ಲಿ ಸೇರಿಸಿ) ಕೆಳಗಿನಂತೆಯಿದೆ.

ರಾಣಿಬೆನ್ನೂರು - 335281
ಹಾವೇರಿ - 280362
ಹಾನುಗಲ್ - 260455
ಹಿರೇಕೆರೂರು - 231115
ಶಿಗ್ಗಾಂವ್-187910
ಸವಣೂರು-161521
ಬ್ಯಾಡಗಿ - 141024 

ಈ ಜಿಲ್ಲೆಯಲ್ಲಿರುವ ಪ್ರೇಕ್ಷಣಿಯ ಸ್ಥಳಗಳಿಂದಾಗಿ ಹಾಗೂ ಅವುಗಳ ಇತಿಹಾಸದಿಂದ, ಪದಾರ್ಥಗಳಿಂದ, ಸಾಧಕರಿಂದ ಹಾಗೂ ಕೈಗಾರಿಕೆಗಳಿಂದಾಗಿ ನಾಡಿನ ಎಲ್ಲಾ ಜನರನ್ನು ತನ್ನ ಕಡೆಗೆ ಆಕರ್ಷಿಸುತ್ತಿದೆ ಎಂಬುದೆ ಹೆಮ್ಮೆಯ ವಿಷಯ.

1. ಹಿರೇಕೆರೂರು ತಾಲೂಕಾ ದರ್ಶನ:
ಹಿರೇಕೆರೂರು ಪ್ರಾಚೀನ ಕಾಲದ ಶಾಸನಗಳಲ್ಲಿ “ಪಿರಿಯ ಕೆರೆಯೂರು”, “ಮಹಾತಟಾಕಗ್ರಾಮ” ಎಂದೆಲ್ಲಾ ಉಲ್ಲೇಖಿತಗೊಂಡಿದೆ. ಈ ಊರಿನಿಂದ ಈ ವರೆಗೆ ರಾಷ್ಟ್ರಕೂಟ, ಕಲ್ಯಾಣದ ಚಾಳುಕ್ಯ ಹಾಗೂ ವಿಜಯನಗರ ಅರಸರ ಆಳ್ವಿಕೆಯ ಬಗ್ಗೆ ಮಾಹಿತಿ ಸಿಕ್ಕಿದೆ. 

ಈ ತಾಲೂಕು ಮಲೆನಾಡಿನ ಸೆರಗಿನಲ್ಲಿರುವದರಿಂದ ಇದು ಜಿಲ್ಲೆಯನ್ನು ಮತ್ತಷ್ಟು ಹಸಿರಾಗಿಸಿದೆ. ಈ ತಾಲೂಕಿನಲ್ಲಿರುವ ಪ್ರೇಕ್ಷಣೀಯ ಸ್ಥಳಗಳೆಂದರೆ ಹೆಗ್ಗೆರೆ, ದುರ್ಗಾದೇವಿ ದೇವಸ್ಥಾನ (3 ವರ್ಷಕ್ಕೊಮ್ಮೆ ವಿಜೃಂಭಣೆಯಿಂದ ಜಾತ್ರೆ ನಡೆಯುತ್ತದೆ, ಇಲ್ಲಿ ದುರ್ಗಾದೇವಿಯ ಅಕ್ಕಪಕ್ಕದಲ್ಲಿ ಸಹೋದರಿಯಾದಂತಹ ಮರಿಯಮ್ಮ, ಸಾವಿತ್ರಮ್ಮ ಹಾಗೂ ಕಾವಲುಗಾರರಾದಂತಹ ಶ್ರೀ ಸವರೆಪ್ಪಾ ಹಾಗೂ ಶ್ರೀ ದೊಣ್ಣೆಪ್ಪನವರ ವಿಗ್ರಹಗಳನ್ನು ನೋಡಬಹುದು),  ಆದಿಲ್ ಷಾಹಿ ಕಾಲಕ್ಕೆ ಸೇರಿದ ಜಾಮಿಯಾ ಮಸಿದಿ, ರಟ್ಟಿಹಳ್ಳಿಯ ಕದಂಬೇಶ್ವರ ದೇವಸ್ಥಾನ, ಮದಗದ ಕೆಂಚಮ್ಮನ ಕೆರೆ, ಕಣವಿ ಸಿದ್ದಗಿರಿಯ ದೇವಸ್ಥಾನ ಮೇದುರು, ಬಾಳಂಬಿಡು, ನಾಗವಂದ, ಚಿನ್ನಮುಳಗುಂದ, ಚಿಕ್ಕೆರೂರು, ಕಚ್ಚವಿ, ಕುಂಚೂರು, ಅಬ್ಬಲೂರು, ಹಳ್ಳೂರು, ಗುಡ್ಡದ ಮಾದಾಪುರ, ದಿಂಡಿಗಿಹಳ್ಳಿ, ಸಾತನಹಳ್ಳಿ ಹಾಗೂ ಚಿಕ್ಕಮತ್ತೂರಿನಲ್ಲಿ ಎಂಟು ಅಡಿಯ ಮಹಾಸತಿ ಕಲ್ಲು ವಿಷೇಶವಾಗಿದೆ. ಹಿರೇಕೆರೂರು ಮಾಜಿ ಉಪಸಭಾಪತಿಗಳು ಹಾಗೂ ಸಾಹಿತಿಗಳಾದಂತಹ ಶ್ರೀ ಬಿ.ಜಿ.ಬಣಕಾರವರು ಊರು ಇದಾಗಿದೆ. ಕನ್ನಡ ಚಲನಚಿತ್ರ ನಟರಾದಂತಹ ಶ್ರೀ ಬಿ.ಸಿ.ಪಾಟೀಲರವರು ಈ ತಾಲೂಕಿನ ಶಾಸಕರು.

ಹೆಗ್ಗೆರೆ: ಹಿರೇಕೆರೂರಿನಿಂದ ಕೇವಲ ಎರಡು ಕೀ.ಮಿ ದೂರದಲ್ಲಿರುವ ಕೇಂದ್ರ. ಇದು ಸುಮಾರು ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದೆ. ಇದರ ದಂಡೆಯ ಮೇಲೆ ದುರ್ಗಾದೇವಿಯ ದೇವಸ್ಥಾನವಿದೆ. ಮೂರು ವರ್ಷಕ್ಕೊಮ್ಮೆ ಭರತ ಹುಣ್ಣಿಮೆಯೆಂದು ದೇವಿಯ ಜಾತ್ರೆ ಅದ್ದೂರಿಯಾಗಿ ಜರಗುತ್ತದೆ. ಈ ಜಾತ್ರೆಯು ನಮ್ಮ ಜಿಲ್ಲೆಯಲ್ಲಿಯೆ ಅತಿ ದೊಡ್ಡದು ತದನಂತರದು ರಾಣೆಬೆನ್ನೂರಿನ ಚೌಡೇಶ್ವರಿ ಜಾತ್ರೆ.

2. ರಟ್ಟಿಹಳ್ಳಿ
ಶಾಸನದಲ್ಲಿ ಈ ಊರಿಗೆ “ರಟ್ಟಪಳ್ಳಿ” ಎಂದು ಇದ್ದು ಇದನ್ನು ರಾಷ್ಟ್ರಕೂಟ ವಂಶಸ್ಥರು ಎಂದು ಹೇಳಿಕೊಳ್ಳುತ್ತಿದ್ದ 'ರಟ್ಟರಸರು' ಈ ಕ್ಷೇತ್ರದ ಆಳ್ವಿಕೆಯನ್ನು ನಡೆಸುತ್ತಿದ್ದರು. ಹಿಂದೆ ಇದು ನೂರುಂಬಾಡ ರಾಜಧಾನಿ ಪಟ್ಟಣವಾಗಿತ್ತು. 

ಈ ಊರು ಕುಮದ್ವತಿ ದಂಡೆಯಲ್ಲಿರುವ ಪುರಾತನ ಸ್ಥಳವಾಗಿದೆ. ಇಲ್ಲಿರುವ ಕದಂಬೇಶ್ವರ ದೇವಾಲಯ ಚಾಳುಕ್ಯ ತ್ರಿಕೂಟಾಚಲವಾಗಿದ್ದು, ಒಂದು ಬೃಹದಾಕಾರವಾದ ಕಟ್ಟಡವಾಗಿದೆ. ಇದರಲ್ಲಿ ಮೂರು ಗರ್ಭಗೃಹಗಳು, ಮೂರು ಅಂತರಾಳಗಳು, ಒಂದೇ ಕೇಂದ್ರ ನವರಂಗ ಹಾಗೂ ಮುಂಭಾಗದಲ್ಲಿ ವಿಶಾಲವಾದ ಕಂಬಗಳಿಂದ ಅಲಂಕೃತರವಾಗಿರುವ ತೆರೆದ ಸಭಾಮಂಟಪವಿದೆ. ಕೇಂದ್ರ ಗರ್ಭಗೃಹದ ಬಾಗಿಲುವಾಡವು ಪಂಚಶಾಖಾಲಂಕೃತವಾಗಿದ್ದು, ಕಮಾನಾಗಿರುವ ಲಲಾಟದಲ್ಲಿ ಗಜಲಕ್ಷ್ಮೀಯನ್ನು ಹೊಂದಿದೆ. ಇದರ ಒಳಗಿರುವ ಚಾಳುಕ್ಯ ಶೈಲಿಯ ಪಾಣಿಪೀಠದ ಮೇಲೆ ಪ್ರಾಚೀನ ಲಕ್ಷಣವುಳ್ಳ ಶಿವಲಿಂಗವಿದೆ. ಅಂತರಾಳದ ಬಾಗಿಲುವಾಡವು ಸಹ ಪಂಚಶಾಖಾಲಂಕೃತವಾಗಿದ್ದು, ಇಕ್ಕೆಲಗಳಲ್ಲಿ ಜಾಲಾಂದ್ರಗಳಿವೆ, ಉಳಿದ ಎರಡು ಗರ್ಭಗೃಹದಲ್ಲಿ ಶಿವಲಿಂಗಗಳಿದ್ದು ಅಲಂಕೃತ ಬಾಗಿಲವಾಡವನ್ನು ಹೊಂದಿದೆ. ಇಲ್ಲಿಯ ವಿಶೇಷವೆಂದರೆ ದೇವಾಲಯದ ಮೇಲೆ ಹೊಯ್ಸಳ ಪರಾಕ್ರದು ಬಿಂಬಿತ ಶಿಲ್ಪವನ್ನು ನೋಡಬಹುದು. 

ಆವರಣದಲ್ಲಿ ಭಗ್ನಗೊಂಡ ಜೈನ ತಿರ್ಥಂಕರರ ಮೂರ್ತಿಯನ್ನು ನೋಡಬಹುದು.
ಈ ದೇವಾಲಯಕ್ಕೆ ಕಲಚೂರಿ ಅರಸು ಸೋಮದೇವನು (1174), ಮಹಾಮಂಡಲೇಶ್ವರ ಪಂಡ್ಯದೇವ ಮತ್ತು ಹೊನ್ನಬಮ್ಮಿಶೆಟ್ಟಿ ಎಂಬ ವರ್ತಕನು ಇದೇ ದೇವಾಲಯದ ಸ್ಥಾನಾಚಾರ್ಯ ರಾಜಗುರು ಮೂರುಜಾವಿದೇವರಿಗೆ ಬಿಟ್ಟ ದಾನವನ್ನು ಇಲ್ಲಿಯ ಶಾಸನಗಳು ತಿಳಿಸುತ್ತದೆ. ಇಲ್ಲಿ ಪ್ರಾಚೀನ ವೀರಭದ್ರೇಶ್ವರ ದೇವಾಲಯ ಹಾಗೂ ನಾಲ್ಕು ಮಸೀದಿಗಳಿವೆ (ಕಾರಂಜಿ, ಮಸೀದಿ,ಮಹಮದಿಯ ಮಸೀದಿ, ಅಹಲೆಹದಿಸ್ ಮಸೀದಿ). ಕನ್ನಡ ಚಲನ ಚಿತ್ರದ ಸುಪ್ರಸಿದ್ದ ನಿರ್ಮಾಪಕರಾದಂತಹ ಶ್ರೀ ಆರ್.ಎನ್.ಜಯಗೋಪಾಲ (RnJ) ಹಾಗೂ ಇವರ ಮಕ್ಕಳಾದಂತಹ ನಟ ಆರ್.ಸುದರ್ಶನ್ ಹಾಗೂ ಸಂಗೀತ ನಿರ್ದೇಶಕರಾದಂತಹ ಶ್ರೀ ಆರ್.ವಿಜಯಬಾಸ್ಕರ್ ಇವರ ಜನ್ಮ ಭೂಮಿ ಇದಾಗಿದೆ ಎಂಬುವುದೆ ಹೆಮ್ಮೆಯ ವಿಷಯ.

ಇಲ್ಲಿಂದ 4 ಕಿ.ಮೀ ದೂರದಲ್ಲಿ ಕಣವಿ ಸಿದ್ದಗಿರಿ ಎಂಬ ಪ್ರಾಚೀನ ಸ್ಥಳವಿದೆ ಈ ಗ್ರಾಮ ಶ್ರೀ ಸಿದ್ದೇಶ್ವರ ದೇವಸ್ಥಾನ ಮತ್ತು ಓಂ ಬೆಟ್ಟದಿಂದ ಖ್ಯಾತಿ ಪಡೆದಿದೆ. ಇಲ್ಲಿನ ಎರಡು ಬೆಟ್ಟಗಳ ಮಧ್ಯೆದೇವಸ್ಥಾನವಿದ್ದು ಇದು ಕಣವಿ ಸಿದ್ದೇಶ್ವರ ದೇವಸ್ಥಾನ ಎಂದು ಪ್ರಸಿದ್ಧಿಯನ್ನು ಹೊಂದಿದೆ. ಶಾಸನಗಳ ಪ್ರಕಾರ ದೇವಸ್ಥಾನ ಕ್ರಿ.ಶ 11-12 ನೆ ಶತಮಾನದಲ್ಲಿ ನಿರ್ಮಾಣವಾಗಿದ್ದು. ಮೂಲ ದೇವಸ್ಥಾನ ಗುಡಿಯ ಒಳಗಿದ್ದು, ಶಿವಲಿಂಗದ ಎದುರಿಗೆ ನಂದಿಯನ್ನು ಪ್ರತಿಷ್ಠಾಪಿಸಲಾಗಿದೆ, ಎಡಬಲಕ್ಕೆ ಗಣೇಶ ಮತ್ತು ರೇವಣಸಿದ್ದೇಶ್ವರರು ಇದ್ದಾರೆ. ಗರ್ಭಗುಡಿಯ ಪ್ರದಕ್ಷಿಣೆಯನ್ನು ಮಾಡುವಾಗ ಮೆಲ್ಬಾಗದಲ್ಲಿ ಬಾವುಲಿಗಳನ್ನು ನೋಡಬಹುದು. ಇವುಗಳ ವಿಸರ್ಜನೆಯಿಂದ ಇಲ್ಲಿ ಅಮೋನಿಯಾ ವಾಸನೆಯು ಹೆಚ್ಚಾಗಿರುತ್ತದೆ . ಕಣವಿ ಸಿದ್ದೇಶ್ವರ ದೇವಸ್ಥಾನದ ಅಡುಗೆ ಮನೆ ಮುಖಾಂತರ ಸಾಗಿದರೆ ನಮಗೆ ಅಕ್ಕಮಹಾದೇವಿ ಗುಹೆ ಸಿಗುತ್ತದೆ. ಇದೆ ಸ್ಥಳದಲ್ಲಿ ರಟ್ಟಿಹಳ್ಳಿಯ ಕಬ್ಬಿಣಕಂತಿಮಠದ ಸ್ಥಾಪಕರು ತಪಸ್ಸನ್ನು ಆಚರಿಸಿ ಲಿಂಗೈಕ್ಯರಾದರು. 

ಈ ದೇವಸ್ಥಾನದ ಎದುರಿಗೆ ಇರುವುದೇ ಓಂ ಬೆಟ್ಟ ಇದು ಚಾರಣ ಪ್ರಿಯರಿಗೆ ಒಳ್ಳೆಯ ಬೆಟ್ಟ ಇದರ ಮೇಲಿನಿಂದ ನಾವು ನೋಡಿದರೆ ಕುಮಾರ ಪಟ್ಟಣ ಕಾಣುವುದು.

ಇಲ್ಲಿಂದ 3 ಕಿ.ಮೀ ದೂರದಲ್ಲಿನ ಮತ್ತೊಂದು ಐತಿಹಾಸಿಕ ಪ್ರದೇಶದಲ್ಲಿ ಭಗವತಿ ಘಟ್ಟವಿದೆ. ಹಿಂದೊಮ್ಮೆ ವಿದೇಶಿಯರಿಗೆ ಬಹುಪ್ರಿಯವಾದ ಸ್ಥಳವಿದು. ಇಲ್ಲೊಂದು ಸಣ್ಣನೀರಿನ ಝರಿ ಇದ್ದು ಭಗವತಿ ಕೆರೆ ಎಂದು ಕರೆಯುತ್ತಾರೆ. ಇದು ಯಾವ ಕಾಲಕ್ಕೂ ಬತ್ತುವುದಿಲ್ಲ. ಹೊರಜಗತ್ತಿಗೆ ಅಪರಿಚಿತವಾದ ಕಾರಣ ಭಗವತಿ ನಿರ್ಮಲ ಪ್ರಶಾಂತ ತಾಣವಾಗಿದೆ. ಇಲ್ಲಿನ ಪ್ರಕೃತಿ ಸೌಂದರ್ಯ ಅದ್ಬುತ.

ಮಾಸೂರ-ಮದಗ: ರಟ್ಟಿಹಳ್ಳಿಯಿಂದ 12 ಕಿ.ಮೀ ದೂರದಲ್ಲಿರುವುದೆ ಮಾಸೂರು ಇಲ್ಲಿ ಹಂಚಿನ ಚಾವಣಿಯ ಮನೆಗಳು ಹೆಚ್ಚು ಇರುವುದರಿಂದ ಈ ಊರಿಗೆ ಹೆಸರು ಬಂದಿದೆ ಎಂಬುದು ಪ್ರತೀತಿ. ಇದು ಪ್ರಮುಖ ವ್ಯಾಪಾರಿ ಕೇಂದ್ರ. ನಾವು ಇಲ್ಲಿ ಪ್ರವಾಸವನ್ನು ಮಾಡಬೇಕೆಂದರೆ ರವಿವಾರವೇ ಆಯ್ದುಕೊಳ್ಳಬೇಕು. ಕಾರಣ ಇಲ್ಲಿ ಆ ದಿನ  ಸಂತೆಯ ದಿನ. ಹೀಗಾಗಿ ತಾಜಾ ಕಾಯಿಪಲ್ಲೆಗಳು ಸುತ್ತಮುತ್ತಲಿನ ತೋಟದಿಂದ ಬರುತ್ತವೆ ಮತ್ತು ಮಳೆಗಾಲದಲ್ಲಿ ನಾವು ಪ್ರಯಾಣಿಸಿದರೆ, ಆ ಕೆಸರಿನ ಆನಂದವನ್ನು ಕಾಲಿಗೆ ಅನುಭವಿಸುತ್ತಾ, ಬಾಯಿಗೆ ಅಲ್ಲಿಯೇ ಸಿಗುವ ರುಚಿಯಾದ ಮಂಡಕ್ಕಿಯನ್ನು ಸವಿಸುತ್ತಾ ಪ್ರಯಾಣಿಸಬಹುದು. ಇಲ್ಲಿಯ  ಮತ್ತೊಂದು ವಿಶೇಷತೆಯಂದರೆ ಇಲ್ಲಿಯ "ಕುರಿಯ ಮಾಂಸವು" ಅತ್ಯಂತ ಪ್ರಸಿದ್ಧಿಯನ್ನು ಪಡೆದಿದೆ. 

ಮಾಸೂರಿನಿಂದ 4 ಕಿ.ಮೀ ದೂರದಲ್ಲಿ ಶಿರಾಳಕೊಪ್ಪ ರಸ್ತೆಯ ಬಲಭಾಗಕ್ಕೆ ತಿರುಗಿದರೆ ಕಾಡು, ಮುಂದೆ ಇಕ್ಕಟ್ಟಾದ ಗುಡ್ಡವನ್ನು ಪ್ರವೇಶಿಸಿದರೆ ಸಿಗುವುದೆ ವಿಶಾಲವಾದ ಕೆರೆ ಇದುವೆ ಮದಗದ ಕೆಂಚಮ್ಮನ ಕೆರೆ. ಎಡಕ್ಕೆ ಎತ್ತರವಾದ ಗುಡ್ಡ ಆ ಗುಡ್ಡದ ಮೇಲೊಂದು ಕೋಟೆ, ಇದರ ಮೇಲೆ ಮೋಡ ಕವಿದ ವಾತಾವರಣದಲ್ಲಿ ಏರಿ ನಿಂತಾಗ ಮೋಡಗಳು ನಿಮ್ಮ ಕೈಗೆ ಸಿಗುತ್ತವೇನೊ ಎಂಬ ಭಾವನೆ ನಮಗೆ ಹುಟ್ಟುತ್ತದೆ. ಕೆಳಗೆ ಸಾಗಿದಾಗ ನೀರು ಬೀಳುವ ಶಬ್ದ ಕೇಳಿಸುತ್ತದೆ ಇದುವೆ ಮದಗ- ಫಾಲ್ಸ. ಗುಡ್ಡದ ಮಧ್ಯದಲ್ಲಿ ಹರಿಯುವ ಈ ಪಾಲ್ಸ ಕಣ್ಣಿಗೆ ಮುದವನ್ನು ನೀಡುವುದಲ್ಲದೆ ಅದು ನಮ್ಮನ್ನು ಮೂಕ ಪ್ರೇಕ್ಷಕರನ್ನಾಗಿಸುತ್ತದೆ. ಆದರೆ ಅದರ ಸುತ್ತಲೂ ತಂತಿ ಬೇಲಿಯನ್ನು ಇತ್ತೀಚಿಗೆ ಹಾಕಿದ್ದಾರೆ ಕಾರಣ ಇದು ಅಪಾಯಕಾರಿವಲಯವಾಗಿದೆ. 

ಈ ಫಾಲ್ಸ್ ಬಲಭಾಗದಲ್ಲಿರುವ ಗುಡ್ಡದಿಂದ ಫೋಟವನ್ನು ತೆಗೆದಾಗ ನಿಸರ್ಗದ ರಮಣೀಯ ಚಿತ್ರ ನಮಗೆ ಸಿಗುತ್ತದೆ. ಇಲ್ಲಿ ಕುಮದ್ವತಿಯ ಅರ್ಭಟ ಜೋರಾಗಿರುತ್ತದೆ . ಗುಡ್ಡಗಳಿಂದ ದುಮ್ಮುಕ್ಕುವ ನೀರು ಹಾಳಾಗಬಾರದೆಂದು ರೈತರ ವ್ಯವಸಾಯಕ್ಕೆ ಉಪಯೋಗವಾಗಲೆಂದು ಜನರಿಂದ ಸಂಗ್ರಹಿಸಿದ ಹಣವನ್ನು 1862 ರಲ್ಲಿ ಬ್ರಿಟೀಷ ಸರಕಾರದ ಕ್ಯಾಪ್ಟನ್ ಪ್ಲೇಪ್ಲರ್ ಇಂಜೀನಿಯರ್  ಧಾರವಾರ ಇಂಜಿನಿಯರ್ ಮೂಖಾಂತರ ಗುಡ್ಡವನ್ನು ಕೊರೆದು ಬಾಗಿಲಗಳನ್ನು ನಿರ್ಮಿಸಿದರು. 

ಗುಡ್ಡದ ಮೇಲ್ಬಾಗದಲ್ಲಿ ಹಳೆಯದಾದಂತಹ ಕೋಟೆಯಿದ್ದು ಅದರೊಳಗಡೆಗೆ ದರ್ಗಾವನ್ನು ನೋಡಬಹುದು.

ಮೆದೂರು: ಶಾಸನೋಕ್ತವಾಗಿ “ಮೇದೂರು” ಪುರಾತನವಾದ ಸ್ಥಳವಾಗಿದೆ. ಇಲ್ಲಿರುವ ಪ್ರಮುಖ ದೇವಲಯಗಳೆಂದರೆ ಸರಸ್ವತಿ, ದೊಡ್ಡೇಶ್ವರ, ಸಣ್ಣಬಸವಣ್ಣ ಮುಂತಾದವುಗಳು ಇಲ್ಲಿ ಅನೇಕ ವೀರಗಲ್ಲುಗಳನ್ನು ನೋಡಬಹುದು. ಇಲ್ಲಿಯ ಮತ್ತೊಂದು ವಿಶೇಷವೆಂದರೆ ಹೋಳಿಹುಣ್ಣಿಮೆಯ ದಿವಸ ಮತ್ತು ಹುಬ್ಬಾ ನಕ್ಷತ್ರ ದಿನದಂದು ರಾತ್ರಿಯ ವೇಳೆ (ಸುಮಾರು ರಾತ್ರಿ 11 ಗಂಟೆಗೆ) ಕಾಮಣ್ಣನನ್ನು ಅಗ್ನಿ ಆಹುತಿಗೆ ಕೊಡುತ್ತಾರೆ, ಆ ಸಮಯದಲ್ಲಿ ಎಲ್ಲ ಊರಿನ ಜನರು ಅಲ್ಲಿ ಸೇರಿರುತ್ತಾರೆ.

ಅಬ್ಬಲೂರು: ಪ್ರಾಚೀನ ಕಾಲದಲ್ಲಿ ಬಬಲಾವತಿ ಪಟ್ಟಣ ಹಾಗೂ ಅಬ್ಬಲಗೇರಿ ಎಂಬ ಹೆಸರಿನಿಂದ ಚಿರಪರಿಚಿತವಾಗಿತ್ತು. ಶಾಸನಗಳಲ್ಲಿ "ಅಬಲೂರು" ಎಂದು ಉಲ್ಲೇಖಿಸಲಾಗಿದೆ. ಚಾಳುಕ್ಯರ ವಿಕ್ರಮಾದಿತ್ಯನ ಆಸ್ಥಾನ ಕವಿಗಳಾದಂತಹ ಅಚರಾಜ ಹಾಗೂ ಮಲ್ಲಿದೇವರ ಪ್ರಕಾರ ಅಬಲುರು ತಪಸ್ವಿಗಳ, ಪಂಡಿತರ ಹಾಗೂ ಶಿವಯೋಗಿ ರೇವಣಸಿದ್ದರು ಸಂಚರಿಸಿದ ಭೂಮಿ. ಇದು ಸರ್ವಜ್ಞನ ಜನ್ಮಸ್ಥಳವೆಂದು ಅಭಿಪ್ರಾಯಿಸುತ್ತಾರೆ. ನಾವು ಏಕಾಂತರಾಮಯ್ಯನು ಶಿರಸ್ಸು ಪವಾಡ ಮಾಡಿದ ಸೋಮೇಶ್ವರ ದೇವಸ್ಥಾನವನ್ನು ಇಲ್ಲಿ ನೋಡಬಹುದು. 

ಹಳ್ಳೂರು: ಹಿರೇಕೆರೂರು ತಾಲೂಕಿನ 35 ಕಿ.ಮೀ ದೂರದಲ್ಲಿ ಮತ್ತು ತುಂಗಭದ್ರ ನದಿ ಎಡದಂಡೆಯ ಮೇಲೆ ಈ ಗ್ರಾಮವಿದೆ. ಇದು ಜಿಲ್ಲೆಯಲ್ಲಿಯೇ ಅತಿ ಪ್ರಾಚೀನವಾದ ಗ್ರಾಮವಾಗಿದೆ. ಪ್ರಾಚೀನ ಕಾಲದಲ್ಲಿ ಕಬ್ಬಿಣವನ್ನು ದಕ್ಷಿಣ ಭಾರತದಲ್ಲಿಯೇ ಮೊದಲು ಉಪಯೋಗಿಸಿದಂತಹ ಸ್ಥಳ ಇದಾಗಿದೆ. ಪುರಾತನ ಉದ್ಬವ ಶ್ರೀ ಲಕ್ಷ್ಮೀರಂಗನಾಥಸ್ವಾಮಿಯ ಮೇಲೆ ಸಂಕ್ರಾಂತಿಯ ಕಾಲದಲ್ಲಿ ಸೂರ್ಯಕಿರಣಗಳ ನೇರವಾಗಿ ಬೀಳುವದರಿಂದ ಇದಕ್ಕೆ ವಿಶೇಷ ಸ್ಥಾನವಿದೆ. 

ಇಲ್ಲಿಯ ಪ್ರಾಚೀನ ಸಪ್ತ ಆಂಜನೇಯ ಸ್ವಾಮಿಗಳನ್ನು ಇತ್ತಿಚೆಗೆ ಒಂದೆಡೆಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಆದರೆ ಇವುಗಳು ಪುರಾತನ ಕಾಲದಲ್ಲಿ ಏಳು ದಿಕ್ಕಿಗೆ ಇದ್ದವು ಮತ್ತು ಇವುಗಳ ಬೆವರು ರೋಗ ನಿರೋಧಕ ಶಕ್ತಿಯನ್ನು ಹೊಂದಿತ್ತು ಎಂಬ ಪ್ರತಿತಿಯಿದೆ. ಇಲ್ಲಿಯ ಗುಡ್ಡದ ಮೇಲಿನ ನೋಟ ಮನಸ್ಸನ್ನು ಆನಂದಭರಿತವನ್ನಾಗಿಸುತ್ತದೆ. ಇಲ್ಲಿ ಕನಕರಾಯನ ಕಟ್ಟೆ, ಭೂತನಗುಡಿ, ಸೋಮೇಶ್ವರಗುಡಿ, ನ್ಯಾಯದ ಗಂಟೆ ಮತ್ತು ಚೌಡಯ್ಯನ ಗುಡಿಯನ್ನು ನೋಡಬಹುದು.

ಬಾಳಂಬೀಡ: ಜಿಲ್ಲೆಯಲ್ಲಿ ಈ ಹೆಸರಿನ ಎರಡು ಗ್ರಾಮಗಳಿದ್ದು ಇನ್ನೊಂದು ಹಾನಗಲ್ ತಾಲೂಕಿನಲ್ಲಿದೆ. ಹಿರೇಕೆರೂರನಿಂದ ಕೇವಲ ಎರಡು ಕಿಲೋಮೀಟರ ದೂರದಲ್ಲಿರುವ ಈ ಗ್ರಾವiದಲ್ಲಿ ವಿಶೇಷ ಮತ್ತು ಪ್ರಾಚೀನ ಪ್ರಸಿದ್ದ ಸ್ಥಳವೆಂದರೆ ಕಲ್ಲದೇವರಗುಡಿ. ಶಾಸನಗಳಲ್ಲಿ ಇದನ್ನು “ಪಂಡರಂಗೇಶ್ವರ” ಎಂದು ಉಲ್ಲೇಖಿಸಲಾಗಿದೆ. ಸ್ಥಳೀಯ ಸಂಪ್ರದಾಯದ ಪ್ರಕಾರ ಹಾವು ಕಚ್ಚಿದವರಿಗೆ ಈ ಶಿವಲಿಂಗದ ಅಭಿಷೇಕವನ್ನು ಮಾಡಿದ ತೀರ್ಥವನ್ನು ಕುಡಿಸಿದರೆ ಬದುಕುವರೆಂಬ ಧೃಡವಾದ ನಂಬಿಕೆಯಿದೆ ಆದ್ದುದರಿಂದಲೇ ಈ ದೇವಾಲಯದ ಶಿವಲಿಂಗವನ್ನು ಶಾಸನದಲ್ಲಿ “ವಿಷಪರಿಹಾರೇಶ್ವರ” ಎಂದು ಕರೆಯಲಾಗುತ್ತದೆ.

ಸಾತೇನಹಳ್ಳಿ: ಇದು ಶಾಂತಕವಿಗಳ ಜನ್ಮ ಭೂಮಿ ಮತ್ತು ಇಲ್ಲಿ “ಶಾಂತೇಶ” ದೇವಸ್ಥಾನವನ್ನು ನೋಡಬಹುದು ಅಮವಾಸ್ಯೆಯ ದಿನದಂದು ಕದರಮಂಡಲಗಿ ಕಾಂತೇಶ, ಸಾತೇನಹಳ್ಳಿ ಶಾಂತೇಶ ಹಾಗೂ ಶಿಕಾರೀಪುರದ ಬ್ರಾಂತೇಶನನ್ನು ನೋಡಿದರೆ ಒಳ್ಳೆಯದೆಂಬ ಪ್ರತಿತಿಯಿದೆ. 

ಚಿನ್ನಮುಳಗುಂದ: ಶಾಸನೋಕ್ತವಾಗಿ ಈ ಗ್ರಾಮವನ್ನು “ಮಗದ” ಅಥವಾ “ಮುನಿಗುಂದ” ಎಂದು ಉಲ್ಲೇಖೀತವಾಗಿದೆ. ಈ ಪ್ರದೇಶವನ್ನು 1895ರಲ್ಲಿ ಹಾವನೂರು ಹನುಮಂತರಾಯರಿಗೆ ಬ್ರಿಟೀಷ ಸರಕಾರವು ಉಂಬಳಿಯಾಗಿ ನೀಡಿತ್ತು. ಇಲ್ಲಿ ಚಾಳುಕ್ಯ ಶೈಲಿಯ ಚಿಕ್ಕೇಶ್ವರ ದೇವಾಲಯ, ಕಲ್ಲೇಶ್ವರ ದೇವಾಲಯ, ಹನುಮಂತ, ಈಶ್ವರ,ಮೈಲಾರಲಿಂಗೇಶ್ವರ, ದ್ಯಾಮವ್ವನ ದೇವಸ್ಥಾನಗಳನ್ನು ನೋಡಬಹುದು. ಬಿದ್ದಕೋಟೆಯ ಸ್ಥಳದಲ್ಲಿ ಬಾಬಾಕಲಂದರ್ ದರ್ಗಾ ಹಾಗೂ ಇಲ್ಲಿ ಗವಿಯಿದ್ದು ಅದರಲ್ಲಿ ಸಿದ್ದೇಶ್ವರ ದೇವಸ್ಥಾನವನ್ನು ಪ್ರತಿಷ್ಠಾಪಿಸಲಾಗಿದೆ. ಈ ದೇವಸ್ಥಾನದ ಎಡಭಾಗದಲ್ಲಿ ಕ್ರಮಿಸಿದರೆ ನೆಲಮಾಳಿಗೆ ಇದ್ದು, ಇಳಿಯಲು ಮೆಟ್ಟಿಲುಗಳಿವೆ. ಇದು ಮುನಿಗಳ ತಪಸ್ಸಿನ ಏಕಾಂತ ಸ್ಥಳವಾಗಿರಬಹುದು. ಈ ಗುಡ್ಡದ ಪರಿಸರದಲ್ಲಿ ಚಿನ್ನದ ಗಣಿ ಅನ್ವೇಷಣೆ ಕಾರ್ಯವು ಭರದಿಂದ ಸಾಗಿದ್ದು ಅಲ್ಲಲ್ಲಿ ಇದರಿಂದಾಗಿ ಗುಂಡೆಗಳನ್ನು ನಾವು ನೋಡಬಹುದು ಹೀಗಾಗಿ ಇದನ್ನು “ಚಿನ್ನ” ಮುಳಗುಂದ ಎಂದು ಕರೆಯಲಾಗಿದೆ. ಇಲ್ಲಿ ವಿಶೇಷವಾಗಿ ಹುಲಿಬೇಟೆಯ ವೀರಗಲ್ಲುಗಳನ್ನು ನೋಡಬಹುದು.

ಚಿಕ್ಕೆರೂರು: ಶಾಸನೋಕ್ತಿವಾಗಿ “ ಕೆರೆಯೂರು” ಮತ್ತು “ಚಿಕ್ಕಕೆರೆ ಊರು” ಎಂದು ಉಲ್ಲೇಖಗೊಂಡಿದ್ದು. 12 ಮತ್ತು 13 ನೇ ಶತಮಾನದಲ್ಲಿ ಇದು ಪ್ರಸಿದ್ದವಾದ ಅಗ್ರಹಾರವಾಗಿತ್ತು. ಇಲ್ಲಿ ಬನದವ್ವ, ಬನಸಂಕರಿ,ಕಾಶಿವಿಶ್ವೇಶ್ವರ, ಬಸವಣ್ಣ, ಮುಳ್ಳಬಸವೇಶ್ವರ ದೇವಾಲಯಗಳು ಪ್ರಸಿದ್ದಿಯನ್ನು ಪಡೆದಿವೆ. ಇಲ್ಲಿ ಗೋಗ್ರಹಣದಲ್ಲಿ ವೀರನೊಬ್ಬ ಮರಣವನ್ನಪ್ಪಿದ ಶಾಸನವು ವಿಶೇಷತೆಯನ್ನು ಪಡೆದಿದೆ. 

ಕಚ್ಚವಿ: ಹಿರೇಕೆರೂರಿನಿಂದ 18ಕಿ.ಮೀದೂರದಲ್ಲಿರುವ ಗ್ರಾಮ ಶಾಸನೊಕ್ತವಾಗಿ “ಕಚ್ಚವಿ” “ಕಚ್ಚಪಿ” ಎಂದೆ ಇಲ್ಲೇಖಿತಗೊಂಡಿದೆ. ಈ ಊರಿನ ಹೆಸರು ಕಚ್ಚವಿ ಅಥವಾ ಲಕ್ಷ್ಮೀ ಎಂಬ ಹೆಸರಿನಿಂದ ಉದ್ಬವವಾಗಿದೆ. ಇಲ್ಲಿ ರಾಮಲಿಂಗೇಶ್ವರ ಗುಡಿ, ವೀರಭದ್ರಗುಡಿಯ ಜೊತೆ ಹನುಮಂತ, ದ್ಯಾಮವ್ವ, ಬಸವಣ್ಣ, ಗುತ್ತವ್ವ, ಮಾತಂಗವ್ವ ದೇವತೆಗುಡಿಗಳಿವೆ. ಊರಲ್ಲೊಂದು ಮಸೀದಿ ಮತ್ತು ಎರಡು ದರ್ಗಾಗಳಿವೆ. ಸ್ವಾತಂತ್ರಯೋಧ ಸರದಾರ ವೀರನಗೌಡ ಪಾಟೀಲ ಈ ಊರಿನವರೆ ಎನ್ನುವುದು ವಿಶೇಷ. ಇಲ್ಲಿಯ ವೀರಗಲ್ಲುಗಳು ಯಾದವ ಮತ್ತು ಹೊಯ್ಸಳರ ಮಧ್ಯ ನಡೆದ ಯುದ್ಧದ ಮೂಕಸಾಕ್ಷಿಗಳಾಗಿವೆ.

ಕುಂಚೂರು: ಇದು ಎಂಟನೂರು ವರುಷಗಳಷ್ಟು ಪ್ರಾಚೀನತೆಯನ್ನು ಹೊಂದಿದ ಗ್ರಾಮವಾಗಿದೆ. ಇಲ್ಲಿ ಚಾಳುಕ್ಯ ಶೈಲಿಯ ದೇವಾಲಯ, ಒಂದು ಮೀಟರ್ ಉದ್ದವಿರುವ ಪಾಶ್ರ್ವನಾಥ ತೀರ್ಥಂಕರ ಮೂರ್ತಿಯಿದೆ ಹಾಗೂ ವಿಶೇಷವೆಂದರೆ ಚೈತ್ರ ಪೂರ್ಣಿಮೆಯಂದು ಹನುಮಂತ ದೇವರ ಜಾತ್ರೆ ನಡೆಯುತ್ತದೆ. 

ಹಂಸಬಾವಿ: ಶಾಸನೋಕ್ತವಾಗಿ “ಹಾವಸೆಬಾವಿ” ಎಂದು ಕರೆಯಲ್ಪಡುವ ಗ್ರಾಮ, ಕೋಡಕ್ಕೆ ಸಮೀಪದ ಊರು ಹಾಗೂ ಹಿರೇಕೆರೂರುನಲ್ಲಿಯೇ ಪ್ರಸಿದ್ಧ ವಿದ್ಯಾಕೇಂದ್ರಗಳನ್ನು ಇದು ತನ್ನಲ್ಲಿ ಹೊಂದಿದೆ. ಇಲ್ಲಿಯ ಕೆರೊಡಿ ಡಾಕ್ಟರ್ ಬಾಗಲಕೋಟೆ ಹಾಗೂ ವಿಜಾಪುರ ಜಿಲ್ಲೆಗಳಲ್ಲಿ ಪ್ರಸಿದ್ದ ವೈದ್ಯರೆಂದು ಹೆಸರು ಪಡೆದವರಾಗಿದ್ದಾರೆ.

3. ರಾಣೇಬೆನ್ನೂರು ತಾಲೂಕಾ ದರ್ಶನ
ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದು ಪ್ರಸಿದ್ದಿಯನ್ನು ಪಡೆದ ಈ ಊರು ಶಾಸನೋಕ್ತವಾಗಿ “ಬಿನವೂರು” ಬಿನ್ನವೂರು ಎಂದೆ ಉಲ್ಲೇಖಿತಗೊಂಡರು 17 ಮತ್ತು 18 ನೇಯ ಶತಮಾನದಲ್ಲಿ” ರಾಣೆಬೆನ್ನೂರು” ಎಂದು ಕಂಡು ಬರುತ್ತದೆ. 

ರಾಣೇಬೆನ್ನೂರು ಪ್ರಾಚೀನ ಕಾಲದಲ್ಲಿ ಬಿನ್ನವೂರು-12 ಎಂಬ ಆಡಳಿತ ಕೇಂದ್ರವಾಗಿತ್ತು. ಇಲ್ಲಿಯ ಪ್ರಾಚೀನ ದೇವಾಲಯಗಳೆಂದರೆ ಸಿದ್ದೇಶ್ವರ ದೇವಸ್ಥಾನ ಹಾಗೂ ಕೋಟೇಯ ಕಲ್ಮೇಶ್ವರ ದೇವಸ್ಥಾನ. ಕೋಟೆಯ ಆವರಣದಲ್ಲಿ ಉತ್ತಿಮಠದಲ್ಲಿ ಸತ್ಯಭೀಜ್ಞತೀರ್ಥರ ಮೂಲ ಬೃಂದಾವನವಿದೆ.  ಇದೇ ಮಠದ ಪ್ರಸಿದ್ದಯತಿಗಳಾದ ವಿದ್ಯಾಧೀಶ ತೀರ್ಥರ (1514-83) ಶಿಲಾ ಪ್ರತಿಮೆಯಿದ್ದು. ಇದು ಭಾರತದ ಏಕೈಕ ವಿದ್ಯಾಧೀಶ ತೀರ್ಥರ ಪ್ರತಿಮೆಯಾಗಿದೆ. ಇವರ ಮೂಲ ಬೃಂದಾವನ ಉತ್ತರ ಪ್ರದೇಶದ ಆಯೋಧ್ಯ ಬಳಿಯಿರುವ ಏಕಚಕ್ರಾನಗರದಲ್ಲಿದೆ ಎಂಬ ಪ್ರತೀತಿಯಿದ್ದರೂ ಅದು ಇಲ್ಲಿಯವರೆಗೂ ಲಭ್ಯವಾಗಿಲ್ಲ.

ಈ ನಗರವನ್ನು ಮಹಾಭಾರತದ ಕಾಲಕ್ಕೆ ಹೋಲಿಸುತ್ತಾ ಇಟಗಿ ರಸ್ತೆಯಲ್ಲಿರುವ ಹೊಲದಲ್ಲಿ “ಭೀಮನದೋಣಿ” ಎಂಬ ಸ್ಥಳವು ಪುರಾಣ ಪ್ರಸಿದ್ಧಿಯನ್ನು ಪಡೆದಿದೆ (ಇತ್ತೀಚಿಗೆ ಇಲ್ಲಿಯ ದೋಣಿ ಬಸವೇಶ್ವರ ದೇವಸ್ಥಾನ ಜೀರ್ಣೋದ್ಧಾರವಾಗಿದೆ). ಇಲ್ಲಿ ಶ್ವೇತಾಂಬರ ಸಮಾಜದ ಸುಮತಿನಾಥಪ್ರಭು, ಗುರುಮಂದಿರ ಹಾಗೂ ಸುವಿಧಿನಾಥ ಎಂಬ ಸುಂದರ ಮಂದಿರಗಳು ಆಕರ್ಷಣಿಯವಾಗಿವೆ. ಇಲ್ಲಿಯ ಮಸೀದಿಗಳಲ್ಲಿ ಪುರಾತನವಾದದು ಜುಮ್ಮಾಮಸೀದಿ ಇದು 16 ನೇ ಶತಮಾನದ ಆದಿಲಷಾಹಿ ದಂಡನಾಯಕ ಅಂಕುಶಖಾನ ಕಾಲದ್ದು, ಹಜರತ್ ಜಮಾಲ ಷಾವಲಿ ದರ್ಗಾ ಇದೆ. ಕ್ರಿ.ಶ 1785 ರಂದು ಹಜರತ್ ಜಮಾಲ್ ಷಾವಲಿಯವರು ಅಜ್ಮೀರದಿಂದ ರಾಣೇಬೆನ್ನೂರಿಗೆ ಆಗಮಿಸಿದರು. ಇವರ ಬೈಸಾಕಿಗಳನ್ನು ರಾಣೇಬೆನ್ನೂರಿನ ಚೆನ್ನಾಪುರ ಹಾಗೂ ಹಲಗೇರಿಯಲ್ಲಿ ನೋಡಬಹುದು. ಪ್ರಾಚೀನವಾದ ಹುಲಿವೀರಗಲ್ಲನ್ನು ಮಹಾಸತಿ ಕೆರೆಯ ಹತ್ತಿರ ಹಾಗೂ ಕೋಣನತೆಲೆಯ ಕಲ್ಲನ್ನು ರಂಗನಾಥ ನಗರದ ಬಳಿ ನೋಡಬಹುದಾಗಿದೆ.
ಇಲ್ಲಿಯ ಕೃಷ್ಣಮೃಗ ಅಭಿಯಾರಣ್ಯ ದೇಶದಲ್ಲಿಯೇ ಹೆಸರುವಾಸಿಯಾಗಿದ್ದು 17-ಜೂನ್-1979 ರಂದು ವೈಲ್ಡಲೈಫ್ ಸಂಚೂರಿಯಂದು ಘೋಷಣೆಯಾಗಿ ಕೃಷ್ಣಮೃಗಗಳನ್ನು ಸಂರಕ್ಷಿಸುತ್ತದೆ (2005ರ ಗಣತಿಯ ಪ್ರಕಾರ 6000 ಕೃಷ್ಣಮೃಗಗಳಿವೆ). ಇಲ್ಲಿ ಅಕ್ಟೋಬರ್ ಮತ್ತು ಮಾರ್ಚನಲ್ಲಿ ಕೃಷ್ಣಮೃಗಗಳನ್ನು ಹಾಗೂ ಮೇ ಮತ್ತು ಜೂನ್‍ನಲ್ಲಿ ಪಕ್ಷಿಗಳನ್ನು, ನರಿಗಳನ್ನು, ಲಂಗೂರಗಳನ್ನು, ಪೆಂಗೋಲಿನಾಗಳನ್ನು ಹಾಗೂ ಕಾಡುಹಂದಿಗಳನ್ನು ನೋಡಬಹುದಾಗಿದೆ. ಈ ಅಭಿಯಾರಣ್ಯದಲ್ಲಿರುವ “ಗ್ರೇಟ ಇಂಡಿಯನ್ ಬಸ್ಟರ್ಡ” ಕ್ವಿಜ್ ಪುಸ್ತಕದಲ್ಲಿ ಸೇರಿಕೊಂಡು ಪ್ರವಾಸಿಗರನ್ನು ಕೈಬಿಸಿ ಕರೆಯುತ್ತಿದೆ. 
ನಿಜಶರಣ ಅಂಬಿಗರ ಚೌಡಯ್ಯನವರ ಹಾಗೂ ಹೆಳವನಕಟ್ಟಿ ಗಿರಿಯಮ್ಮಳ ಜನ್ಮ ಸ್ಥಳ ಇದೇ ರಾಣೇಬೆನ್ನೂರೆಂಬುದು ಹೆಮ್ಮೆಯ ವಿಷಯ. ಸಾಹಿತಿಗಳಾದ ಮೇಡ್ಲೇರಿ ಶಿವಲಿಂಗ, ಸು.ರಂ.ಯಕ್ಕಂಡಿ, ಹಾನುಗಲ್ ಕುಮಾರಸ್ವಾಮಿಗಳ ಜನ್ಮಭೂಮಿಯೂ ಇದಾಗಿದೆ. ಇಲ್ಲಿಯ ಮುದೇನೂರು ಶ್ರೀಶೈಲ ಜಗದ್ಗುರುಗಳಾದಂತಹ ವಾಗೀಶ ಪಂಡಿತರಾದ್ಯರು ಜನ್ಮ ಸ್ಥಳವಾಗಿದೆ.

ದ.ರಾ.ಬೇಂದ್ರೆಯವರು ಸಹ ಕೆಲವು ವರ್ಷಗಳವರೆಗೆ ಇಲ್ಲಿಯ ಕೋಟೆ ಭಾಗದಲ್ಲಿ ವಾಸವಾಗಿದ್ದರು ಹಾಗೂ ಅವರು ಇಲ್ಲಿಯೇ ‘ ನೀ ಹಿಂಗ ನೋಡಬೇಡ ನನ್ನ’ ಎಂಬ ಕವಿತೆಯನ್ನು ರಚಿಸಿದರು. ಕರ್ನಾಟಕ ರಾಜ್ಯದಲ್ಲಿಯೇ ಕುಸ್ತಿ ಆಟಕ್ಕೆ ರಾಣೇಬೆನ್ನೂರ ಪ್ರಸಿದ್ಧಿ ಪಡೆದಿದೆ.  ದಿ.ನಂಜಪ್ಪ ಗೂಳಣ್ಣನವರ ಕರ್ನಾಟಕದ ಜಟ್ಟಿಯೆಂದೆ ಖ್ಯಾತರಾಗಿದ್ದಾರೆ. ಕು.ಕಾರ್ತಿಕ್ ಕಾಟಿಯವರು ಸಹ ಕರ್ನಾಟಕ ಜನತೆಯ ಮನೆ ಮಾತಾಗಿದ್ದಾರೆ.

ಈ ನಗರ ಪ್ರದೇಶದಲ್ಲಿ ಉತ್ತಮ ವಿದ್ಯಾಕೇಂದ್ರಗಳಿದ್ದು, ಹತ್ತಿಯ ವ್ಯಾಪಾರ ಕೇಂದ್ರವಾಗಿದೆ. ಇಲ್ಲಿ ವಿದ್ಯುತ್ ಬರುವ ಪೂರ್ವದಲ್ಲಿ ಎಣ್ಣೆ ದೀಪವನ್ನು ಅಂಚೆ ಕಛೇರಿಯ ಮುಂದೆ ಕೋಟೆ ಓಣಿಯಲ್ಲಿ ಮತ್ತು ಕುರಬಗೇರಿಯಲ್ಲಿ ಇಡುತ್ತಿದ್ದರು. ರಾಣೇಬೆನ್ನೂರ ಮುನಸಿಪಾಲಟಿಯು ಕ್ರಿ.ಶ 1858 ರಲ್ಲಿ ಜನ್ಮ ತಾಳಿತು. ಸೌತ ಆಫ್ರಿಕಾದ ಸಂವಿದಾನ ಶಿಲ್ಪಿಗಳಾದ ದಿ.ಎಲ್.ಜಿ ಹಾವನೂರು 1958 ರಂದು ಇದೆ ಮುನಸಿಪಾಲಟಿಯ ಉಪಾಧ್ಯಕ್ಷರಾಗಿದ್ದು ವಿಶೇಷ.

ಪಂಡಿತ್ ಜವಾಹರಲಾಲ್ ನೆಹರು ಪ್ರಚಾರಕ್ಕಾಗಿ ಬಂದಾಗ ಊರ ಹೊರಗಿರುವ ಸಂತೆ ಸ್ಥಳವಾದ ‘ ರಾಣೇಬೆನ್ನೂರ ಮುನಿಪಾಲಟಿ ಮಾರ್ಕೆಟನಲ್ಲಿ” ಉಳಿದು ಭಾಷಣ ಮಾಡಿದ್ದರಿಂದ ಆ ಪ್ರದೇಶವೇ ಮುಂದೆ ‘ನೆಹರು ಮಾರ್ಕೆಟ್’ ಆಗಿ ಪರಿವರ್ತನೆಗೊಂಡಿತು. ಹಲಗೇರಿಯ ಮಾರ್ಗದಲ್ಲಿ ತುಂಗಾ ಮೇಲ್ದಂಡೆಯ ಕಾಲುವೆಯನ್ನು ವಿಶೇಷವಾಗಿ ಕಾಣಬಹುದು. ರಾಣೇಬೆನ್ನೂರಿನಲ್ಲಿ ಪ್ರತಿವರ್ಷ ಜನೇವರಿ ತಿಂಗಳು ನಡೆಯುವ ಚೌಡೇಶ್ವರಿದೇವಿಯ ಜಾತ್ರೆ ಅತ್ಯಂತ ಪ್ರಸಿದ್ದಿಯನ್ನು ಪಡೆದಿದೆ. ಹರಿಬಾಳ ರಾಜವಂಶಸ್ಥರ ನೆಲೆವಿಡು ಸಹ ರಾಣೇಬೆನ್ನೂರಾಗಿದೆ. 
ಕ್ರಿ.ಶ 1650 ರಲ್ಲಿ ರಚಿತವಾದ” ಅಬ್ಬಲೂರು ಚರಿತ್ರೆ” ರಚಿಸಿದ ಶಾಂತನಿರಂಜನ ಕವಿಗಳು ರಾಣೇಬೆನ್ನೂರ ತಾಲೂಕಿನ ಪಕ್ಕದ ಅಂತರವಳ್ಳಿ ಗ್ರಾಮದವರು. ಏಕಾಂತದ ರಾಮಯ್ಯನ ಸಮಕಾಲೀನ ವೀರಶೈವಯತಿ ಮೂರು ಜಾವಿದೇವರು ಈ ಗ್ರಾಮದವರಾಗಿದ್ದು ಅವರ ಮಠವನ್ನು ಊರ ಹೊರಗೆ ನೋಡಬಹುದು. ರಾಜ್ಯ ಪ್ರಶಸ್ತಿ ಪುರಸ್ಕøತ ಹಾಗೂ ಸೂತ್ರದ ಗೊಂಬೆಯಾಟದಿಂದ ವಿದೇಶಗಳಲ್ಲಿ ಹೆಸರು ಗಳಿಸಿದ ಶ್ರೀ ರಾಮನಗೌಡ ಜೀವನಗೌಡ್ರ ಇಲ್ಲಿಯವರು ಎಂಬುದು ವಿಶೇಷ.

ಪಕ್ಕದ ಇಟಗಿ ಗ್ರಾಮ ಅತಿ ಪ್ರಾಚೀನ ಗ್ರಾಮ. ಈ ಊರು ಶಾತವಾಹನರಷ್ಟು ಹಳೆಯದು. 30 ಹಳ್ಳಿಗಳ ಆಡಳಿತ ಕೇಂದ್ರವಾಗಿದ್ದು, ಇಟ್ಟಿಗೆ-30 ಎಂದೇ ಪ್ರಸಿದ್ದಿಯನ್ನು ಪಡೆದಿದೆ. ಇಲ್ಲಿಯ ರಾಮೇಶ್ವರ ದೇವಾಲಯ ಅನೇಕ ಕಂಬಗಳನ್ನು ಹೊಂದಿದ್ದು ಇದರ ಬಲಬಾಗದಲ್ಲಿ ವೀರಭದ್ರೇಶ್ವರ ಮೂರ್ತಿಯನ್ನು ನೋಡಬಹುದು ಕ್ರಿ.ಶ 10-11 ನೇಯ ಶತಮಾನದಲ್ಲಿ ನಿರ್ಮಾಣವಾಗಿರುವ ವಿರೂಪಾಕ್ಷ ದೇವಾಲಯ, ಬಸವಣ್ಣನಗುಡಿ, ಕರಿಯಮ್ಮನಗುಡಿ ಮತ್ತು ಹನುಮಂತ ಗುಡಿಗಳನ್ನು ಇಲ್ಲಿ ನೋಡಬಹುದು. ಹಾಲೇಶ್ವರ ಮಠದಲ್ಲಿ ರುಂಡವಿಲ್ಲದೆ ನಿಂತಿರುವ ಜೀನ ತೀರ್ಥಂಕರನ ಶಿಲ್ಪ ಎಲ್ಲರ ಗಮನವನ್ನು ಸೆಳೆಯುತ್ತದೆ. ಊರಿನ ಸುತ್ತಲು ನಶಿಸಿ ಹೋದ ಕೋಟೆಯಿದ್ದು, ಕೋಟೆ ಆಂಜನೇಯನ ಗುಡಿಯ ಎದುರಿಗೆ ಇಟಗಿ ಗ್ರಾಮನಾಮದ ಪ್ರಾಚೀನ ಫಲಕವನ್ನು ಹಾಗೂ ಅದರ ಮುಂಭಾಗದಲ್ಲಿ ಐದು ತಲೆಯುಳ್ಳ ವಿಶೇಷವಾದಂತಹ ಬ್ರಹ್ಮನ ಮೂರ್ತಿಯನ್ನು ನೋಡಬಹುದು. ಇತಿಹಾಸಕಾರರು ಈ ಪ್ರದೇಶದ ಮೇಲೆ ಇನ್ನು ಹೆಚ್ಚಿನ ಅಧ್ಯಯನವನ್ನು ನಡೆಸಿದರೆ ಇದರ ಪರಿಪೂರ್ಣ ಇತಿಹಾಸವನ್ನು ತಿಳಿಯಬಹುದಾಗಿದೆ.

ಐರಣಿ ಗ್ರಾಮದ ತುಂಗಭದ್ರಾ ನದಿಗೆ ಅಂದು ಆನೆಗಳು ನೀರನ್ನು ಕುಡಿಯಲು ಗುಂಪಾಗಿ ಬರುತ್ತಿದ್ದರಿಂದ ಈ ಕ್ಷೇತ್ರಕ್ಕೆ ಐರಾವತ ಕ್ಷೇತ್ರವೆಂದು ಕರೆಯುವದುಂಟು. ಇದು ರಾಣಿಬೆನ್ನೂರಿನಿಂದ 22 ಕಿ.ಮೀ ದೂರದಲ್ಲಿದ್ದು, ಹತ್ತಿ ಮತ್ತು ಉಣ್ಣೆಯಿಂದ ತಯಾರಿಸಲ್ಪಡುವ ಬಟ್ಟೆಗಳಿಗೆ ಪ್ರಸಿದ್ದಿಯನ್ನು ಹೊಂದಿದೆ. ತುಂಗಭದ್ರ ನದಿಯ ತೀರದಲ್ಲಿ ವಿಶಾಲವಾದ ಕೋಟೆಗಳ ಅವಶೇಷವನ್ನು ನೋಡಬಹುದು. ಈ ಕೋಟೆ ಬ್ರಿಟಿಷರ ವಿರುದ್ದ ಹೋರಾಟ ಮಾಡಿ ಮಡಿದ ವೀರ ಸೇನಾನಿಯಾದ ದೊಂಡೀಯಾ ವಾಘನ ಕಥೆಯನ್ನು ಜೀವಂತವಾಗಿಟ್ಟುಕೊಂಡಿದೆ. ನದಿಯ ತೀರದ ಬಲಭಾಗದಲ್ಲಿ ವೀರಶೈವಯೋಗಿ ಮುಪ್ಪಿನಾರ್ಯರ ಮಠವಿದೆ, ಇದು ಈ ಊರಿನ ಆಕರ್ಷಣೆಯ ಕೇಂದ್ರ, ಈ ಮಠದಲ್ಲಿ ಪ್ರತಿವರ್ಷ ಜಾತ್ರೆ ನಡೆಯುತ್ತದೆ. ಈ ಜಾತ್ರೆಗೆ ಕರ್ನಾಟಕದ ವಿವಿಧ ಮೂಲೆಯಿಂದ ಸಾದು ಸತ್ಪುರುಷರು ಬರುತ್ತಾರೆ. ಇವರು ಸಿದ್ಧಾರೂಢÀ ಸ್ವಾಮಿಯವರ ಶಿಷ್ಯರು ಮತ್ತು ಇಲ್ಲಿ ಪ್ರತಿದಿನ ಭಕ್ತರಿಗೆ ಪ್ರಸಾದವಿರುತ್ತದೆ. ಇಲ್ಲಿಯ ಗುಡ್ಡದಲ್ಲಿ ನಾಯಿಜಾತಿಗೆ ಸೇರಿದ ಕತ್ತೆಕಿರುಬಗಳನ್ನು ನೋಡಬಹುದು. 
ಇಂತಹ ರಾಣೇಬೆನ್ನೂರ ಸ್ಥಳನಾಮದ ಕುರಿತಾದ ಅಧ್ಯಯನ ನಡೆಸಿದಾಗ, ಹೆಸರಿನ ಹಿಂದೆ ಇರುವ ಇತಿಹಾಸ ವಿಶೇಷ ಹಾಗೂ ವಿಸ್ಮಯಕರವಾಗಿದೆ. ನಾವು ಸಹಜವಾಗಿ ಯಾರಿಗಾದರು "ರಾಣೇಬೆನ್ನೂರ" ಎಂಬ ಹೆಸರು ಹೇಗೆ ಬಂದಿತು ? ಎಂದು ಪ್ರಶ್ನಿಸಿದಾಗ, ಅವರ ಉತ್ತರದಲ್ಲಿ "ಬಿದನೂರಿನ ರಾಣಿ" ಕಂಗೂಳಿಸುತ್ತಾಳೆ. ಆದರೆ ಆ ರಾಣಿಗೂ ಹಾಗೂ ನಮ್ಮ ರಾಣೇಬೆನ್ನೂರಿನ ಹೆಸರಿಗೂ ಯಾವುದೇ ಸಂಭಂದವಿಲ್ಲ ಎನ್ನುವುದು ನನ್ನ ಅನಿಸಿಕೆ. ಕಾರಣ ಶಾಸನಗಳನ್ನು ಅವಲೋಕಿಸಿದಾಗ ನನ್ನ ಅನಿಸಿಕೆ ಸರಿ ಎನಿಸುತ್ತದೆ. 
ರಾಣೇಬೆನ್ನೂರ ಹಾಗು ಸುತ್ತಮುತ್ತಲಿನ ಗ್ರಾಮಗಳಲ್ಲಿಯ ಶಾಸನಗಳ ಮೊರೆ ಹೋದಾಗ. ಅದರಲ್ಲಿ ಪ್ರಥಮವಾಗಿ  ರಾಣೇಬೆನ್ನೂರಿನ ಹಳೆಯ ವೆಂಕಟೇಶ್ವರ ಬ್ಯಾಂಕ ಮುಂದೆ  ದೊರೆತ ಕ್ರಿ.ಶ 859 ರ ಶಾಸನದಲ್ಲಿ "ನಾಗಲು ಬಸದಿ" ಯನ್ನು ಕೆರೆಯ ಪಕ್ಕದಲ್ಲಿ "ನಾಗಲೂರ ಪೆÇಲ್ಲಬ್ಬೆ" ನಿರ್ಮಿಸಿದಳು. ಇದಕ್ಕೆ ಅತ್ತಿಗೇರಿಯಲ್ಲಿ ಸಾಕ್ಷಿ ಇದೆಯೆಂದು ತಿಳಿಸುತ್ತದೆಯಾದರು, ಇದರಲ್ಲಿ ರಾಣೇಬೆನ್ನೂರ ಹೆಸರಿನ ಉಲ್ಲೇಖವಿಲ್ಲ. 

ಕ್ರಿ.ಶ 1115 ರ ಗುತ್ತಲದ ಜೋಮನ ಶಾಸನದಲ್ಲಿ ರಾಣೇಬೆನ್ನೂರನ್ನು "ಬಿಂನವೂರು ಹಂನೆರಡು" ಎಂದು ಉಲ್ಲೇಖಿಸಲಾಗಿದೆ. ಕ್ರಿ.ಶ 1182 ರ "ಹುಲಿಹಳ್ಳಿಯ" ಶಾಸನದಲ್ಲಿ 'ವುಲಿಹಳ್ಳಿಯು ಬಿಂನವೂರು ಹಂನೆರಡರ ಶಿಖಾಮಣಿಯಿದ್ದಂತೆ ಎಂದು ಉಲ್ಲೇಖಿಸುತ್ತಾ, ಅಲ್ಲಿಯ ರಾಮೇಶ್ವರ ದೇವರಿಗೆ ಇಲ್ಲಿಯ ಕೆಲವು ಭಾಗಗಳನ್ನು ದಾನವಾಗಿ ಕೊಡಲಾಗಿತ್ತು ಎಂಬುದನ್ನು ತಿಳಿಸುತ್ತದೆ.
 
ಸಿದ್ದೇಶ್ವರ ದೇವಸ್ಥಾನದಲ್ಲಿರುವ ಕ್ರಿ.ಶ 1551ರ ಶಾಸನವು ವಿಜಯನಗರದ ಸದಾಶಿವರಾಯರು ಗಡ್ಢದ ಕೆಲಸಿಗಳಿಗೆ ಸುಂಕ ವಿನಾಯಿತಿ ನೀಡಿದ ಬಗ್ಗೆ ತಿಳಿಸುತ್ತದೆ. ಕದಿರಮಂಡಲಗಿಯ ಕ್ರಿ.ಶ 1581ರ ಶಾಸನ ಕೆಂಗಪ್ಪನಾಯಕನು ಹನುಮಂತ ದೇವರಿಗೆ ನೀಡಿದ ದಾನವನ್ನು ತಿಳಿಸುತ್ತಾ ವಿಶೇಷವಾಗಿ "ಬೆಂನೂರು"ಎಂಬ ಹೆಸರನ್ನು ಅಲ್ಲಿ ಉಲ್ಲೇಖಿಸಲಾಗಿದೆ. ಹಾವೇರಿ ತಾಲೂಕಿನ ಮಲ್ಲೂರಿನಲ್ಲಿ ಹೊಂಬರಡಿಯ ಚನ್ನಪ್ಪಗೌಡ ಕ್ರಿ.ಶ.1636 ರಲ್ಲಿ ಜಮೀನ ಖರೀದಿ  ಮಾಡಿದಾಗ ಅದಕ್ಕೆ ‘ಬೆನೂರ ಸೀಮೆಯ ಗೌಡ ಹನುಮಂತಗೌಡ ಸಾಕ್ಷಿಯಾಗುತ್ತಾನೆ. ಗುತ್ತಲದ ದೇಸಾಯಿ ಲಿಂಗನಗೌಡ "ರಾಣೇದಬೆಂನೂರ ಸೀಮೆಯ ಬೆಳಕೇರಿಯಲ್ಲಿಯ ಭೂಮಿಯನ್ನು ನರಹರಿ ಭಟ್ಟರಿಗೆ ಕ್ರಿ.ಶ 1682 ರಲ್ಲಿ ಭೂದಾನ ಮಾಡಿದ ಬಗ್ಗೆ ತಿಳಿಸುತ್ತದೆ. ಚೆನ್ನಾಪುರದ ಕ್ರಿ.ಶ 1786 ರ ಟಿಪೂವಿನ ಕನ್ನಡ ಶಾಸನದಲ್ಲಿ "ರಾಣೆಬೆಂನೂರ" ಎಂದು ಖಂಡರಿಸಲಾಗಿದೆ. ಹಲಗೇರಿಯ ಶಾಸನದಲ್ಲಿ ಹಾಳಬೆಂನೂರ ಸೀಮೆ ಎಂದು ಹಾಗೂ ಬ್ರಿಟಿಷರ ದಾಖಲೆಗಳಲ್ಲಿ 'ರಾಣೀಬಿನ್ನೂರ' ಎಂದು ಬರೆಯಲಾಗಿದೆ. ಹೀಗಾಗಿ ಒಟ್ಟಾರೆಯಾಗಿ ಹೇಳಬಹುದಾದರೆ 'ಬಿಂನವೂರು' ಎಂಬ ಮೂಲ ಹೆಸರು ಬೆಂನೂರು ,ಬೆನೂರ, ರಾಣೇದಬೆಂನೂರ, ರಾಣೆಬೆಂನೂರ ಮುಂದೆ ರಾಣೀಬಿನ್ನೂರ ಎಂದು ಕ್ರಮೇಣವಾಗಿ ಬದಲಾಯಿತೆನ್ನಬಹುದು. ಕ್ರಿ.ಶ 1115 ರಲ್ಲಿ ರಾಣೇಬೆನ್ನೂರ ಗುತ್ತಲದ ಅರಸರ ಆಳ್ವಿಕೆಗೆ ಒಳಪಟ್ಟಾಗ 'ಬಿಂನವೂರು ಹಂನೆರಡು" ಎಂದು ಕರೆಸಿಕೊಳ್ಳುತ್ತಿದ್ದ, 12 ಗ್ರಾಮಗಳನ್ನೊಳಗೊಂಡ ಆಡಳಿತ ಕೇಂದ್ರವಾಗಿತ್ತು. 

ಅಂದರೆ ಆವತ್ತಿನ ವೇಳೆಯಲ್ಲಿ ತುಂಗಭದ್ರಾ ಹಾಗೂ ಕೃಷ್ಣಾ ನದಿಯ ಮಧ್ಯದಲ್ಲಿರುವ ಈ ಕ್ಷೇತ್ರಕ್ಕೆ ಪ್ರಯಾಣಿಕರು ಅತ್ತಿಂದಿತ್ತ ಹೋಗುವುದು ಸಹಜವಾಗಿತ್ತು. ಬಹುಶಃ ಈ ಪ್ರಯಾಣಿಕರಿಗೆ ವಿಶೇಷವಾಗಿ ಅನ್ನದ (ಪ್ರಸಾದ/ಬಿನ್ನ) ವ್ಯವಸ್ಥೆಯನ್ನು ಇಲ್ಲಿಯ ಹಲವು ಮಠಗಳು ಮಾಡುತ್ತಿದ್ದಿರಬಹುದು ಹೀಗಾಗಿಯೇ ಸಹಜವಾಗಿ ಜನರ ಬಾಯಲ್ಲಿ "ಬಿಂನವೂರು" ಎಂದು ಕರೆಸಿಕೊಂಡಿರಬಹುದಾಗಿದೆ ಎನ್ನುವುದು ನನ್ನ ಅಭಿಪ್ರಾಯ. ಈ ಮಾತನ್ನು ಪುಷ್ಟಿಕರಿಸಲು ಇಲ್ಲಿನ ಆನೆಮಠದ ಕ್ರಿ.ಶ 1765 ರ ಕೈಫಿಯತ್ ಸಹಕರಿಸುತ್ತದೆ. ಸುಲ್ತಾನನು ಪ್ರಯಾಣಿಕರ ಹಾಗೂ ಜಂಗಮರ ಪ್ರಸಾದದ ವ್ಯವಸ್ಥೆಗೆ  27.5 ಎಕರೆ ಭೂಮಿಯನ್ನು ದಾನವಾಗಿ ಕ್ರಿ.ಶ 1765 ರಲ್ಲಿ" ಆನೆವಾಲಿ ಮಠಕ್ಕೆ" ನೀಡುತ್ತಾನೆ ಎಂಬ ವಿಷಯ ಅದರಲ್ಲಿ ಅಡಕವಾಗಿದೆ. 

ಹಾವನೂರಿನ ಹನುಮಂತಗೌಡನು ಸಹ ಉದಗಟ್ಟಿಯಲ್ಲಿಯ ಮಠಕ್ಕೆ ಸಾವಿರಾರು ಎಕರೆ ಭೂಮಿಯನ್ನು ದಾನವಾಗಿ ನೀಡಿರುತ್ತಾನೆ. ರಾಣೇಬೆನ್ನೂರಿನ ಸುತ್ತಮುತ್ತಲು ಈ ಹಿಂದೆ  ಸುಮಾರು 220 ಮಠಗಳಿದ್ದವಾದರು, ಅವುಗಳಲ್ಲಿ ನಾವು 40 ಮಠಗಳನ್ನು ಮಾತ್ರ ಈಗ  ಗುರುತಿಸಬಹುದಾಗಿದೆ. ಹೀಗಾಗಿ ನನ್ನ ಉಹೆ ಸರಿಯಾಗಿರಬಹುದೇನಿಸುತ್ತದೆ. 'ಬಿಂನವೂರ' ಎಂಬ ಹೆಸರಿಗೆ "ರಾಣೆ" ಎಂಬ ಪದ ಹೇಗೆ ಸೇರಿರಬೇಕು ಎಂಬುದರ ಬಗ್ಗೆ ನಾವು ಗಮನಿಸಿಬೇಕಾಗುತ್ತದೆ. ಸುಮಾರು 17 ನೇ ಶತಮಾನದಲ್ಲಿ “ ರಾಣೇದ” ಎಂಬ ಮರಾಠರ ಅಧಿಕಾರಿಯೋಬ್ಬ ಇಲ್ಲಿ ವಾಸವಾಗಿದ್ದರಿಂದ “ ಬಿಂನವೂರ “ ಎಂಬ ಹೆಸರಿನ ಮುಂದೆ “ರಾಣೇದ” ಎಂಬ ವ್ಯಕ್ತಿ ಸೂಚಕ ಹೆಸರು ಸೇರಿ ರಾಣೇಬೆನ್ನೂರ ಎಂಬ ಹೆಸರು ಬಂದಿರಬಹುದು. ಮರಾಠ ಸೇನಾಧಿಪತಿಯೊಬ್ಬನ ಅಪರೂಪದ ವಿಗ್ರಹವು ಮೌನೇಶ್ವರ ದೇವಾಲಯದಲ್ಲಿದೆ. ಬಹುಶ: ಇದೇ ವಿಗ್ರಹ ರಾಣೇದನ ವಿಗ್ರಹವಾಗಿರಬಹುದು. ಇವುಗಳನ್ನೆಲ್ಲಾ ಗಮನಿಸಿದಾಗ ರಾಣೇಬೆನ್ನೂರು ಸಾಹಿತ್ಯ ಮತ್ತು ಸಂಸ್ಕøತಿಯ ನೆಲವೀಡು ಎನ್ನಬಹುದು.  

ಅಂತರವಳ್ಳಿ: ರಾಣೆಬೆನ್ನೂರಿನಿಂದ 13 ಕಿ.ಮೀ ದೂರದಲ್ಲಿರುವ ಈ ಗ್ರಾಮ ಶಾಸನೋಕ್ತವಾಗಿ “ಅನ್ತರವಳ್ಳಿ” ಅಂತರವಳ್ಳಿ” ಎಂದೇ ಉಲ್ಲೇಖಿತಗೊಂಡ ಈ ಗ್ರಾಮ ಹಿಂದೆ ರಟ್ಟಿಹಳ್ಳಿ ನೂರುಂಬಾಡಕ್ಕೆ ಸೇರಿದ ಗ್ರಾಮವಾಗಿತ್ತು. ಕ್ರಿ.ಶ 17 ನೆಯ ಶತಮಾನದಲ್ಲಿ ಇದಕ್ಕೆ ಗೌತಮಪುರ ಎಂಬ ಪರ್ಯಾಯ ಹೆಸರಿತ್ತೆಂಬ ಅಂಶ “ಅಬಲೂರು ಚರಿತ್ರೆಯಿಂದ” ಗೊತ್ತಾಗುತ್ತದೆ. ಇಲ್ಲಿ ಈಶ್ವರಗುಡಿ. ಕ್ರಿ.ಶ 10 ನೇಯ ಶತಮಾನದಲ್ಲಿ ರಚನೆಯಾಗಿದ್ದ ವೆಂಕಟೇಶ್ವರ ಗುಡಿ ವೀರಭದ್ರ, ಹನುಮಂತ, ಮಾಸ್ತವ್ವನ ಗುಡಿಗಳೆ (ಮಹಸತಿಯು ದೇವಿಯಾದಳು ಎಂಬುದಕ್ಕೆ ಉದಾಹರಣೆ)ವಿಶೇಷವಾದವು. ಕ್ರಿ.ಶ 1650 ರಲ್ಲಿ ರಚಿತವಾದ” ಅಬ್ಬಲೂರು ಚರಿತ್ರೆ” ರಚಿಸಿದ ಶಾಂತನಿರಂಜನ ಕವಿಗಳು ಈ ಗ್ರಾಮದೇವರೆ. ಏಕಾಂತದ ರಾಮಯ್ಯನ ಸಮಕಾಲೀನ ವೀರಶೈವಯತಿ ಮೂರು ಜಾವಿದೇವರು ಈ ಗ್ರಾಮದವರಾಗಿದ್ದು ಅವರ ಮಠವನ್ನು ಊರ ಹೊರಗೆ ನೋಡಬಹುದು. ರಾಜ್ಯ ಪ್ರಶಸ್ತಿ ಪುರಸ್ಕøತ ಹಾಗೂ ಸೂತ್ರದ ಗೊಂಬೆಯಾಟದಿಂದ ವಿದೇಶಗಳಲ್ಲಿ ಹೆಸರು ಗಳಿಸಿದ ಶ್ರೀ ರಾಮನಗೌಡ ಜೀವನಗೌಡ್ರ ಇಲ್ಲಿಯವರೆ ಎಂಬುದು ವಿಶೇಷ. 

ಇಟಗಿ: ಅತಿ ಪ್ರಾಚೀನ ಗ್ರಾಮವಾದಂತಹ ಈ ಊರು ಶಾತವಾಹನರಷ್ಟು ಹಳೆಯದು. 30 ಹಳ್ಳಿಗಳ ಆಡಳಿತ ಕೇಂದ್ರವಾಗಿದ್ದು, ಇಟ್ಟಿಗೆ-30 ಎಂದೇ ಪ್ರಸಿದ್ದಿಯನ್ನು ಪಡೆದಿದೆ. ಇಲ್ಲಿಯ ರಾಮೇಶ್ವರ ದೇವಾಲಯ ಅನೇಕ ಕಂಬಗಳನ್ನು ಹೊಂದಿದ್ದು ಇದರ ಬಲಬಾಗದಲ್ಲಿ ವೀರಭದ್ರೇಶ್ವರ ಮೂರ್ತಿಯನ್ನು ನೋಡಬಹುದು ಕ್ರಿ.ಶ 10-11 ನೇಯ ಶತಮಾನದಲ್ಲಿ ನಿರ್ಮಾಣವಾಗಿರುವ ವಿರೂಪಾಕ್ಷ ದೇವಾಲಯ, ಬಸವಣ್ಣನಗುಡಿ, ಕರಿಯಮ್ಮನಗುಡಿ ಮತ್ತು ಹನುಮಂತ ಗುಡಿಗಳನ್ನು ಇಲ್ಲಿ ನೋಡಬಹುದು. ಹಾಲೇಶ್ವರ ಮಠದಲ್ಲಿ ರುಂಡವಿಲ್ಲದೆ ನಿಂತಿರುವ ಜೀನ ತೀರ್ಥಂಕರನ ಶಿಲ್ಪ ಎಲ್ಲರ ಗಮನವನ್ನು ಸೆಳೆಯುತ್ತದೆ. ಊರಿನ ಸುತ್ತಲು ನಶಿಸಿ ಹೋದ ಕೋಟೆಯಿದ್ದು, ಕೋಟೆ ಆಂಜನೇಯನ ಗುಡಿಯ ಎದುರಿಗೆ ಇಟಗಿ ಗ್ರಾಮನಾಮದ ಪ್ರಾಚೀನ ಫಲಕವನ್ನು ಹಾಗೂ ಅದರ ಮುಂಭಾಗದಲ್ಲಿ ಐದು ತಲೆಯುಳ್ಳ ವಿಶೇಷವಾದಂತಹ ಬ್ರಹ್ಮನ ಮೂರ್ತಿಯನ್ನು ನೋಡಬಹುದು. ಇತಿಹಾಸಕಾರರು ಈ ಪ್ರದೇಶದ ಮೇಲೆ ಇನ್ನು ಹೆಚ್ಚಿನ ಅಧ್ಯಯನವನ್ನು ನಡೆಸಿದರೆ ಇದರ ಪರಿಪೂರ್ಣ ಇತಿಹಾಸವನ್ನು ತಿಳಿಯಬಹುದಾಗಿದೆ.

ಐರಣಿ: ಆನೆಗಳು ಅಂದಿನ ಕಾಲದಲ್ಲಿ ನೀರನ್ನು ಕುಡಿಯಲು ಇಲ್ಲಿಯ ತುಂಗಭದ್ರಾ ನದಿಯ ದಡಕ್ಕೆ ಗುಂಪಾಗಿ ಬರುತ್ತಿದ್ದರಿಂದ ಈ ಕ್ಷೇತ್ರಕ್ಕೆ ಐರಾವತ ಕ್ಷೇತ್ರವೆಂದು ಕರೆಯುವದುಂಟು. ಇದು ರಾಣಿಬೆನ್ನೂರಿನಿಂದ 22 ಕಿ.ಮೀ ದೂರದಲ್ಲಿದ್ದು, ಹತ್ತಿ ಮತ್ತು ಉಣ್ಣೆಯಿಂದ ತಯಾರಿಸಲ್ಪಡುವ ಬಟ್ಟೆಗಳಿಗೆ ಪ್ರಸಿದ್ದಿಯನ್ನು ಹೊಂದಿದೆ. ತುಂಗಭದ್ರ ನದಿಯ ತೀರದಲ್ಲಿ ವಿಶಾಲವಾದ ಕೋಟೆಗಳ ಅವಶೇಷವನ್ನು ನೋಡಬಹುದು. ಇದೇ ತೀರದಲ್ಲಿ ವೀರಶೈವಯೋಗಿ ಮುಪ್ಪಿನಾರ್ಯರ ಮಠವಿದೆ, ಇದು ಈ ಊರಿನ ಆಕರ್ಷಣೆಯ ಕೇಂದ್ರ, ಈ ಮಠದಲ್ಲಿ ಪ್ರತಿವರ್ಷ ಜಾತ್ರೆ ನಡೆಯುತ್ತದೆ. ಈ ಜಾತ್ರೆಗೆ ಕರ್ನಾಟಕದ ವಿವಿಧ ಮೂಲೆಯಿಂದ ಸಾದು ಸತ್ಪುರುಷರು ಬರುತ್ತಾರೆ. ಇವರು ಸಿದ್ಧಾರೂಢÀ ಸ್ವಾಮಿಯವರ ಶಿಷ್ಯರು ಮತ್ತು ಇಲ್ಲಿ ಪ್ರತಿದಿನ ಭಕ್ತರಿಗೆ ಪ್ರಸಾದವಿರುತ್ತದೆ. ಇಲ್ಲಿಯ ಗುಡ್ಡದಲ್ಲಿ ನಾಯಿಜಾತಿಗೆ ಸೇರಿದ ಕತ್ತೆಕಿರುಬಗಳನ್ನು ನೋಡಬಹುದು.

ಮೆಡ್ಲೇರಿ: ಶಾಸನದಲ್ಲಿ " ಮೆಡಲೆರಿ" ಎಂದು ಕರೆಯಲ್ಪಡುವ ಪ್ರಾಚೀನ ಗ್ರಾಮವಾಗಿದ್ದು ಇಲ್ಲಿಯ ವಿಶೇಷವೆನೆಂದರೆ ಪ್ರತಿ ಸೋಮುವಾರ ಮುಂಜಾನೆ ಏಳು ಗಂಟೆಯಿಂದ ಹತ್ತು ಗಂಟೆಯವರೆಗೆ ನಡೆಯುವ ಕಂಬಳಿ ಸಂತೆ. ಈ ಸಂತೆಯಲ್ಲಿ 800 ರೂಪಾಯಿಗಳಿಂದ 2500 ರೂಪಾಯಿಗಳವರೆಗೂ ಕಂಬಳಿಗಳು ಮಾರಾಟವಾಗುತ್ತವೆ. ಇಲ್ಲಿ ಪ್ರತಿಯೊಬ್ಬರ ಮನೆಯಲ್ಲಿಯು ಉಣ್ಣೆ ತೆಗೆಯಲು ಚರಕಗಳಿದ್ದು ಅವುಗಳು ಪ್ರತಿನಿತ್ಯ ಕಾರ್ಯನಿರತವಾಗಿರುತ್ತವೆ. ಕಂಬಳಿ ಸಂತೆಯಲ್ಲಿ ರಾಜ್ಯದ ವಿವಿಧಡೆಯಿಂದ ಬಂದಂತಹ ಜನರು ಸೇರುತ್ತಾರೆ. ಪಕ್ಕದ ರಾಹುತನಕಟ್ಟಿ ಗ್ರಾಮದಲ್ಲಿಯು ಕಂಬಳಿಯನ್ನು ತಯಾರಿಸುತ್ತಿದ್ದು ಈಗ ಇವುಗಳ ಪ್ರಮಾಣ ಕಡಿಮೆ ಯಾಗಿದೆ.

ಗುಡ್ಡಗುಡ್ಡಾಪುರ(ದೇವರ ಗುಡ್ಡ): ರಾಣಿಬೆನ್ನೂರು ತಾಲೂಕಾದಿಂದ 10 ಕಿ.ಮೀ ದೂರದಲ್ಲಿ ಗುಡ್ಡಗಳ ನಡುವೆ ಇರುವುದರಿಂದ ಗುಡ್ಡಗುಡ್ಡಾಪುರ ಎಂದು ಪ್ರಸಿದ್ಧಿಯನ್ನು ಪಡೆದಿದೆ. ಇಲ್ಲಿಯ ಮಾಲತೇಶ ಗುಡಿಯು ಗುಡ್ಡದ ಮೇಲಿದ್ದು, ಇದನ್ನು ಮಲ್ಲಯ್ಯ, ಮಲ್ಲಾರಿ,ಮಾರ್ತಾಂಡ, ಖಂಡೋಬ, ಖಂಡೇರಾಯ, ಮಾಲತೇಶ ಎಂದೆಲ್ಲಾ ಕರೆಯಲ್ಪಟ್ಟು, ಉತ್ತರ ಕರ್ನಾಟಕದ ಅತ್ಯಂತ ಜನಪ್ರಿಯ ಜನಪದ ದೇವತೆಯಾಗಿದ್ದು, ಮೈಲಾರನ ಒಕ್ಕಲಿನವರು ಉತ್ತರ ಕರ್ನಾಟಕದಲ್ಲಿ ಹೇರಳವಾಗಿ ನೆಲೆಸಿದ್ದಾರೆ (ಇದಕ್ಕೆ ಉದಾಹರಣೆ ಎಂಬಂತೆ ರಾಣಿಬೆನ್ನೂರಿನಲ್ಲಿರುವ ಬಾಗಲಕೋಟ, ಬಿಜಾಪುರ ಜಿಲ್ಲೆಯಿಂದ ಗುಳೆ ಹೊದಂತಹ ಕೆಲವು ಜನರು ಈ ದೇವರ ಆರಾಧÀಕರು ಮತ್ತು ಇಲ್ಲಿಯೇ ನೆಲೆಗೊಂಡು ಗುಳೇದರ ಓಣಿ ಎಂದು ಮಾಡಿಕೊಂಡಿದ್ದಾರೆ).ಇಲ್ಲಿ ಮಾಲತೇಶಗುಡಿ, ಮಾರಿಕಾಂಬಗುಡಿ ತುಪ್ಪದ ಮಾರಮ್ಮ, ಉಪ್ಪಿನ ಮಾಳವ್ವ ಹಾಗೂ ಕೆಂಚಪ್ಪನ ಗುಡಿಗಳಿವೆ. ಸಭಾಮಂಟಪದಲ್ಲಿ ಪಲ್ಲಕ್ಕಿ ಕಟ್ಟೆ ಹಾಗೂ ಕುದರೆಪ್ಪನ ಕಟ್ಟೆಗಳಿವೆ. ಕಾರಣಿಕೋತ್ಸವದಲ್ಲಿ ಕಾರಣ ಕೇಳುವ ಸಮಯದಲ್ಲಿ ಬಳಸುವ ಬಿಲ್ಲಿರುವುದು ಇಲ್ಲಿಯೇ. ಬಿಲ್ಲೇಶ್ವರಗುಡಿಯಲ್ಲಿ 25 ಅಡಿ ಉದ್ದವಿರುವ ತಾವರಿಕೆ ಬೇರಿನಿಂದ ಮಾಡಿದ ಬಿಲ್ಲು ಇರುವ ಸ್ಥಳವಾಗಿದ್ದು, ಜನ ಇದಕ್ಕೂ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಭರತ ಹುಣ್ಣಿಮೆಯೆಂದು ಗುಡಿಯ ಆವರಣದಲ್ಲಿರುವ ದ್ಯಾಮವ್ವನ ಕಟ್ಟೆ ಬಳಿ ಮೂರು ಆಳೆತ್ತರದ ಬಿಲ್ಲಿನ ಮೇಲೆ ನಿಂತು ಕಾರಣ ಹೇಳುವ ವಗ್ಗಯ್ಯನ ಸಂದೇಶವನ್ನು ಕೇಳಲು ನಾಡಿನ ಮೂಲೆ ಮೂಲೆಯಿಂದ ಜನ ಸೇರುತ್ತಾರೆ. ಈ ಸಮಯದಲ್ಲಿ ವಗ್ಗಯ್ಯಗಳು “ಸರಪಣಿ ಹರಿಯುವುದು” “ಹಿಮ್ಮಡಿಗೆ ಕಬ್ಬಿಣದ ಸಲಾಕಿ ಚುಚ್ಚಿಕೊಳ್ಳುವುದು” ವಿಶೇಷ ಪವಾಡಗಳಾಗಿರುತ್ತದೆ. ಈ ದೇವಾಲಯಕ್ಕೆ ಹೈದರಾಬಾದ್ ನಿಜಾಮ, ಹಾವನೂರು ಹನುಮಂತಗೌಡ ಬಹದ್ದೂರ ದೇಸಾಯಿಗಳು ದೊಡ್ಡ ಪ್ರಮಾಣದಲ್ಲಿ ಹಳ್ಳಿಗಳನ್ನೇ ದಾನ ನೀಡಿದ್ದಾರೆ. ಕ್ರಿ.ಶ 1864 ರಲ್ಲಿ 635 ಎಕರೆ ಭೂಮಿ ಈ ದೇವಾಲಯಕ್ಕೆ ಇತ್ತು ಎಂಬುದೆ ಹೆಮ್ಮೆಯ ವಿಷಯ.

ಚೌಡದಾನಪುರ: ರಾಣೆಬೆನ್ನೂರಿನಿಂದ 22 ಕಿ.ಮೀ ದೂರದಲ್ಲಿರುವ ತುಂಗಭದ್ರಾ ನದಿಯ ದಕ್ಷಿಣ ತೀರದಲ್ಲಿರುವ ಭವ್ಯ ಧಾರ್ಮಿಕ ಕೇಂದ್ರವಾಗಿದೆ. ಈ ಕ್ಷೇತ್ರಕ್ಕೆ “ಕೊರ್ತಗಿ ಶಿವಪುರ” “ಶಿವಗಿರಿ” ಮುಕ್ತಿಕ್ಷೇತ್ರವೆಂಬ ವಿವಿಧ ಹೆಸರುಗಳಿವೆ. ಈ ಕ್ಷೇತ್ರ  ವೀರಶೈವರಿಗೆ ಪುಣ್ಯಕ್ಷೇತ್ರವಾಗಿದೆ. ಕಾರಣ ಲಿಂಗೈಕ್ಯರಾದ ಶಿವಶರಣ ಅಂಬಿಗರ ಚೌಡಯ್ಯರ ಗದ್ದುಗೆಯನ್ನು ತುಂಗಭದ್ರಾ ನದಿಯ ದಡದಲ್ಲಿ ಕಾಣಬಹುದು, ಈ ಊರಿನಲ್ಲಿ ಈಗಲೂ ಪ್ರತಿವರ್ಷ ಸಂಕ್ರಮಣದಲ್ಲಿ ಚೌಡಯ್ಯನವರ ತೆಪ್ಪೊತ್ಸವವು ನೆಡೆಯುತ್ತದೆ. ಮುಕ್ತೇಶ್ವರ ದೇವಾಲಯವು ಅತ್ಯಂತ ಸುಂದರವಾಗಿದ್ದು ಕ್ರಿ.ಶ 1115-1120 ರಲ್ಲಿ ಜಟಾಚೋಳವಂಶದ ಗುತ್ತರಸರ ಮಾಂಡಳಿಕನಾಗಿದ್ದ ಮಲ್ಲ(ಮಲ್ಲುಗಿ) ಕಟ್ಟಿಸಿದನು. ಅನಂತರ ಕಾಳಮುಖ ಸಂಪ್ರದಾಯದ ಗುರುಗಳು ಗುತ್ತರಸರ ರಾಜಗುರುವಾಗಿದ್ದ “ಶಿವದೇವರು ಈ ದೇವಾಲಯವನ್ನು ಜಿರ್ಣೊದ್ದಾರ ಮಾಡಿದರು. ದೇವಾಲಯದ ಹೊರಗಡೆ ಶಿವದೇವರ ಗದ್ದುಗೆ ಇದೆ. ವೀರಭದ್ರನ ದೇವಾಲಯದಲ್ಲಿ ಕ್ರಿ.ಶ 13-14 ನೇ ಶತಮಾನದ ಸುಂದರ ಮೂರ್ತಿಯಿದೆ. ಕಾಳಿಯ ಗುಡಿಯಲ್ಲಿ ಸುಂದರ ಅಷ್ಠಬಾಹುಗಳುಳ್ಳ ಕಾಳಿಯ ವಿಗ್ರಹವಿದೆ. ಊರಿನಲ್ಲಿ ಶಿವದೇವ ಮಠವಿದೆ (ಅಂಬಿಗರ ಗುರುಗಳು) ಇಲ್ಲಿ ಹೋಳಿಹುಣ್ಣಿಮೆಯಂದು ಜಾತ್ರೆ ನೆಡೆಯುತ್ತದೆ. ಶಿಕ್ಷಣ ತಜ್ಞ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ಮಾಜಿ ಕುಲಪತಿಗಳಾದಂತಹ ಶ್ರೀ ಎಸ್.ಎಸ್.ಒಡೆಯರ ಇಲಿಯೇ ಹತ್ತಿರದ ಚಂದಾಪುರದವರು.

ಜೋಯಿಸರಹರಳಳ್ಳಿ: ರಾಣಬೆನ್ನೂರಿನಿಂದ ಸುಮಾರು 10 ಕಿ.ಮೀ ದೂರದಲ್ಲಿರುವ ಗ್ರಾಮ ರಾಷ್ಟ್ರಕೂಟರ ಕಾಲದಷ್ಟು ಪ್ರಾಚೀನವಾಗಿದೆ. ಊರ ಹೊಂಡದ ಮೇಲೆ ಕಲ್ಲೇಶ್ವರ ಗುಡಿಯಿದ್ದು ಇದರಲ್ಲಿ ಸೂರ್ಯ ಹಾಗೂ ಮಹಿಷಾಸುರ ಮರ್ದಿನಿಯರ ಸುಂದರ ಶಿಲ್ಪಗಳಿವೆ. ಕೆರೆಯಲ್ಲಿರುವ ಗಜಲಕ್ಷ್ಮಿ ಶಿಲ್ಪವನ್ನು “ಹೊಳೆಗಂಗಮ್ಮ , ಬಾಣಂತಿ ಕಲ್ಲು” ಎಂದು ಪೂಜಿಸುತ್ತಾರೆ. ಈ ಊರಲ್ಲಿ ಬೀರಲಿಂಗೇಶ್ವರ, ಗಾಳೆಮ್ಮ ಮಾಸ್ತಿದೇವಿ ವiತ್ತು ಬಸವಣ್ಣನ ಗುಡಿಗಳನ್ನು ನೋಡಬಹುದು ಹಾನಗಲ್ ಕುಮಾರ ಸ್ವಾಮಿಯವರ ಜನ್ಮ ಭೂಮಿಯಿದು.

ಬಿಲ್ಲಹಳ್ಳಿ: ಈ ಊರು ರಾಷ್ಟ್ರಕೂಟರ ಕಾಲಕ್ಕೆ ಸೇರಿದ್ದು, ಇದಕ್ಕೆ ಪುರಾವೆ ಎನ್ನುವಂತೆ ಗಾಸಾಸ ಕಲ್ಲಿಗಳಿವೆ (ಗೋಸಹಸ್ರಧಾನ) ಸುಮಾರು ಕ್ರಿ.ಶ 11 ನೇ ಶತಮಾನದಲ್ಲಿ ನಿರ್ಮಾಣಗೊಂಡ ಕಲ್ಲೇಶ್ವರ ಮತ್ತು ಬಿಲ್ಲೇಶ್ವರ ಎಂದು ಕರೆಯಲ್ಪಡುವ ದೇವಾಲಯವನ್ನು ನೋಡಬಹುದು ಈ ಗ್ರಾಮವು ಪ್ರಾಚೀನ ಕಾಲದಲ್ಲಿ ಬಿಲ್ಲುಗಾರರು ವಾಸವಾಗಿರುವ ಸ್ಥಳವಾಗಿದ್ದರಿಂದ ಆಥವಾ ವೀರಬಲ್ಲಾಳನಿಂದಾಗಿ ಈ ಗ್ರಾಮಕ್ಕೆ ಬಿಲ್ಲಹಳ್ಳಿ ಎಂದು ಬಂದಿರಬಹುದು. ಈ ಊರಲ್ಲಿ ಕರಿಯಮ್ಮ, ವೀರಭದ್ರ, ಮಾತಂಗಿ ಹನುಮಂತ ಮತ್ತು ಮೈಲಾರಲಿಂಗ ದೇವಸ್ಥಾನಗಳಿವೆ.

ಹೂಲಿಹಳ್ಳಿ: ಶಾಸನೋಕ್ತವಾಗಿ “ಪುಲಿಅಲ್ಲಾ” “ಉಲಿಹಳ್ಳಿ” “ಉಲಿಯಹಳ್ಳಿ” ಎಂದು ಉಲ್ಲೇಖಗೊಂಡಿದೆ. ಯರಗುಪ್ಪಿಯ ಹೊಲದಲ್ಲಿ ರಾಮಲಿಂಗ ಗುಡಿ, ಕಲ್ಲೇಶ್ವರ ಗುಡಿ, ವಿರಕ್ತಮಠ, ಹನುಮಂತ ದೇವಸ್ಥಾನ, ವೀರಭದ್ರ, ದ್ಯಾಮವ್ವನ ದೇವಸ್ಥಾನ ಪ್ರಮುಖವು ಯುಗಾದಿಯಾಗಿ ಒಂಭತ್ತನೆಯ ದಿನಕ್ಕೆ ಹನುಮಂತನ ಜಾತ್ರೆ ಜರುಗುತ್ತದೆ. 

ಹೊನ್ನತ್ತಿ: ರಾಣಿಬೆನ್ನೂರಿನಿಂದ 14 ಕಿ.ಮೀ ದೂರದಲ್ಲಿರುವ ಈ ಗ್ರಾಮ ಶಾಸನೊಕ್ತವಾಗಿ “ಪುನ್ನವತ್ತಿ” ಅಗ್ರಹಾರ ಹೊನ್ನವರ್ತಿ”. ಪೊನ್ನವರ್ತಿ” ಹೋನವತಿ ಎಂದು ಉಲ್ಲೇಖಿತಗೊಂಡಿದೆ. ಇದು 12 ಹಳ್ಳಿಗಳ ಆಡಳಿತ ಕೇಂದ್ರವಾಗಿತ್ತು. ಹೊನ್ನತ್ತಿಯಲ್ಲಿಯ ಹೊನ್ನಮ್ಮ ಗುಡಿಯಲ್ಲಿರುವ ಪ್ರದೇಶವನ್ನು ಗುಡಿ ಹೊನ್ನತ್ತಿಯೆಂದು ಮತ್ತು ಪ್ರಾಚೀನ ಕಾಲದ ಗುಡಿಗಳಿರುವ ಸ್ಥಳವನ್ನು ಹಳೆಹೊನ್ನತ್ತಿಯೆಂದು ಕರೆಯಲ್ಪಡುತ್ತದೆ. ಹೊನ್ನತ್ತಿಯ ಹೊನ್ನಮ್ಮ(ಹೊನ್ನಾಳಿಯ ನಾಗಮ್ಮ ಮತ್ತು ನಾಗಪ್ಪ ಎಂಬ ವೀರಶೈವ ದಂಪತಿಗಳ ಮಗಳು) ಪೂಜಿಸಲ್ಪಡುತ್ತಿರುವ ದೇವತೆಯಾಗಿದ್ದು, ಇದು ಕಲ್ಯಾಣ ಚಾಳುಕ್ಯರ ಶೈಲಿಯನ್ನು ಹೋಲುತ್ತದೆ. ಹೊನ್ನತ್ತಿಯಿಂದ ಗುತ್ತಲ ರಸ್ತೆಗೆ ಹೋದರೆ ಸಿಗುವುದು ಹಳೆಹೊನ್ನತ್ತಿ ಇಲ್ಲಿ ವೀರಭದ್ರ ದೇವಸ್ಥಾನವಿದೆ. ಊರ ಒಳಗೆ ವೀರನಾರಾಯಣ ಗುಡಿಯಿದೆ. ಗರ್ಭಗೃಹದಲ್ಲಿ 4.5 ಅಡಿಯ ಕೇಶವನ ಮೂರ್ತಿ ಗರುಡ ಪೀಠದ ಮೇಲೆ ವಿರಾಜಿಸುತ್ತಿದೆ. ನವರಂಗದಲ್ಲಿ ಅನಂತಪದ್ಮನಾಭ ಶಿಲ್ಪವಿದೆ ಇವುಗಳ ಜೊತೆಯಲ್ಲಿ ಭರಮಪ್ಪ, ಮಾಸ್ತಮ್ಮ ಮತ್ತು ಬಸವಣ್ಣ ಗುಡಿಗಳಿವೆ. ರಾಣೇಬೆನ್ನೂರಿನ ಮಾಜಿ ಶಾಸಕರಾದಂತಹ ಶ್ರೀ ನಾಗಪ್ಪ ಬೆಲ್ಲದರವರ ಊರು ಇದಾಗಿದೆ.
ಹೊಳೆಆನವೇರಿ: ಶಾಸನೋಕ್ತವಾಗಿ “ಆನವರಿ” ಎಂದು ಉಲ್ಲೇಖಗೊಂಡಿರುವ ಗ್ರಾಮವಾಗಿದೆ. ಬಹುಶ: ಶಾಸನದಲ್ಲಿಯ " ಆನೆದೇವರ ಶಿಷ್ಯರಿಂದಾಗಿ" ಈ ಹೆಸರು ಬಂದಿರಬಹುದು. ಕುಮದ್ವತಿ ಮತ್ತು ತುಂಗಭದ್ರ ನದಿಗಳ ಸ್ಥಳ ಸಂಗಮ ಸ್ಥಳ, ಇಲ್ಲಿ ಹೊಳೆಯಂಚಿನಲ್ಲಿರುವ ರಾಮೇಶ್ವರ ದೇವಸ್ಥಾನ ಪ್ರಾಚೀನವಾದದ್ದು, ಊರ ಹೊರಗೆ ಎರಡು ನದಿಗಳ ಸಂಗಮದಲ್ಲಿರುವ ಸಂಗಮೆಶ್ವರ (ಶಾಸನೋಕ್ತವಾಗಿ ವಿಶ್ವರೂಪ ದೇವರು) ದೇವಾಲಯ, ಇಲ್ಲಿ ಸಂಕ್ರಾಂತಿಯಂದು ಸಾವಿರಾರು ಜನ ಜಾತ್ರೆಗೆಂದು ಸೇರುತ್ತಾರೆ ಈ ದಿನವೇ ಇಲ್ಲಿ ವಿಶೇಷ.

ಹನಮನಮಟ್ಟಿ: ಇಲ್ಲಿ 1974 ರಲ್ಲಿ ಕೃಷಿ ಸಂಶೋಧನ ಕೇಂದ್ರ ಸ್ಥಾಪನೆಯಾಗಿ ಉತ್ತಮ ಸುಧಾರಿತ ಎಕದಳ, ದ್ವಿದಳ, ಎಣ್ಣೆಕಾಳುಗಳನ್ನು ಹೆಚ್ಚಿನ ಇಳುವರಿಯನ್ನು ನೀಡುವ ತಳಿಗಳನ್ನು ರೈತರಿಗೆ ಪರಿಚಯಿಸುವದು. ಈವಲಯಕ್ಕೆ ಆರ್ಥಿಕವಾಗಿ ಲಾಭದಾಯಕವಾಗುವಂತಹ ಬೆಳೆಪದ್ದತಿಯ ಸಂಶೋಧನೆಯನ್ನು ನಡೆಸುವದು. ಕೇಂದ್ರದಲ್ಲಿ ಹೈನುಗಾರಿಕೆ ಕೋಳಿಸಾಗಾಣಿಕೆ, ಕುರಿ ಮತ್ತು ಮೇಕೆ ಸಾಕಾಣಿಕೆ ಮೊಲ ಸಾಕಾಣಿಕೆ ಮತ್ತು ಜೇನು ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳ ಬಗ್ಗೆ ರೈತರಿಗೆ ತರಬೇತಿಯನ್ನು ನೀಡಲಾಗುತ್ತದೆ. ಇಲ್ಲಿ ಕೃಷಿ ವಿದ್ಯಾಲಯ ಪ್ರಾರಂಭವಾಗಿ ವಿದ್ಯಾರ್ಥಿಗಳು ಅನೇಕ ಭಾಗಗಳಿಂದ ಇಲ್ಲಿಗೆ ಬಂದು ವಿಧ್ಯಾಭ್ಯಾಸ ನಡೆಸುತ್ತಿದ್ದಾರೆ. 

4. ಹಾನಗಲ್ ತಾಲೂಕಾ ದರ್ಶನ
ಶಾಸನೋಕ್ತವಾಗಿ “ಪಾನುಂಗಲ್” “ಹಾನುಂಗಲ್ 500” ಎಂದು ಉಲ್ಲೇಖಿತಗೊಂಡಿದೆ. ಈ ಸ್ಥಳವು ಕದಂಬರರ ಒಂದು ಶಾಖೆಯ ರಾಜಧಾನಿಯಾಗಿದ್ದು. ಈ ಸ್ಥಳದಲ್ಲಿ ಮಹಾಭಾರತದ ವಿರಾಟನಗರಕ್ಕೆ ಹೋಲಿಕೆಯಾಗುವ ಐತಿಹ್ಯಗಳಿವೆ (ಗರಡಿಮನೆ, ಕುಂತಿದಿಬ್ಬ, ದಡ್ಡಿಕೊಪ್ಪ, ನೆಲ್ಲಿಕೊಪ್ಪ, ಹುಲಕಡ್ಡಿ) ಇಲ್ಲಿಯ ಪ್ರೇಕ್ಷಣೀಯ ಸ್ಥಳಗಳೆಂದರೆ ಕಲ್ಯಾಣದ ಚಾಳುಕ್ಯರ ಶೈಲಿಯ ತಾರಕೇಶ್ವರ ದೇವಾಲಯ, ಈಶ್ವರ, ಬಿಲ್ಲೇಶ್ವರ, ವೀರಭದ್ರ, ಗಣಪತಿ, ನಾರಾಯಣ, ವಿರೂಪಾಕ್ಷ ಮತ್ತು ರಾಮಲಿಂಗ ದೇವಸ್ಥಾನಗಳು. ಇತ್ತೀಚಿನ ದಿನಗಳಲ್ಲಿ ಕೋಟೆಯ ಆವರಣದಲ್ಲಿ ಉತ್ಖನನದ ವೇಳೆ ಅನೇಕ ಜೈನ ತಿರ್ಥಂಕರರ ಮೂರ್ತಿಗಳು ಲಭ್ಯವಾಗಿವೆ. ಆನೇಕೆರೆ, ನಾಗಹೊಳ್ಳಿಕೆರೆ, ಅಚ್ಚಕೆರೆ ಮತ್ತು ಕಂಬಳ ಕೆರೆಯನ್ನು ನೋಡಬಹುದು. ಹೊಯ್ಸಳರ ದೊರೆ ವಿಷ್ಣುವರ್ಧನ ಪದೇ ಪದೇ ದಾಳಿ ಮಾಡುತ್ತಿದ್ದ ಹಾನಗಲ್ ಕೋಟೆಯನ್ನು ನೋಡಬಹುದು. ವಿಜಯನಗರದ ಕೃಷ್ಣದೇವರಾಯನು ಹಾನಗಲ್ ಕೋಟೆಯನ್ನು ವಶಪಡಿಸಿಕೊಂಡಿದ್ದನ್ನು ಇಲ್ಲಿಯ ಶಾಸನದಲ್ಲಿ ನೋಡಬಹುದು. 
ಇಲ್ಲಿಯ ವಿಶೇಷವಾದ ಸಿಹಿಖಾದ್ಯ “ಮಂಡಿಗೆ” ಕರ್ನಾಟಕದಲ್ಲಿ ತುಂಬಾ ಹೆಸರು ಮಾಡಿದೆ. ಇಲ್ಲಿಯ ವಾತಾವರಣ ಹಾವೇರಿ ಜಿಲ್ಲೆಯ ಇನ್ನಿತರ ಭಾಗಗಳಿಗಿಂತ ತಂಪಾಗಿರುತ್ತದೆ. ಕಾರಣ ಇಲ್ಲಿಂದ ಪಶ್ಚಿಮ ಘಟ್ಟಗಳ ವಲಯ ಬಹಳ ಸಮೀಪದಲ್ಲಿದೆ. ಇಲ್ಲಿ ಹತ್ತಿಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ.
ಅಕ್ಕಿಆಲೂರು: ಇದು ಹಾನಗಲ್ ತಾಲೂಕಿನಲ್ಲಿಯೇ ದೊಡ್ಡದಾದಂತಹ ಹೊಬಳಿ ಪ್ರದೇಶ. ಪ್ರಾಚೀನ ಕಾಲದಲ್ಲಿ ಈ ನಗರವು ರೊಮ್ ದೇಶಗಳ ಜೊತೆಗೆ ವ್ಯಾಪಾರ ಸಂಪರ್ಕವನ್ನು ಹೊಂದಿತ್ತು. ಈ ಪ್ರದೇಶ ಅಕ್ಕಿಬೆಳೆಗೆ ಪ್ರಸಿದ್ದಿಯನ್ನು ಪಡೆದಿದ್ದು, ಇಲ್ಲಿ ಲಕ್ಷೀದೇವಿ, ದ್ಯಾಮವ್ವ, ದುರ್ಗವ್ವ, ವೀರಭದ್ರ, ಕಲ್ಲೇಶ್ವರ ಹನುಮಂತದೇವರು, ಉಳವಿ ಬಸವಣ್ಣ ಹಾಗೂ ನಾಲ್ಕು ಮಸಿದಿಗಳನ್ನು ನೋಡಬಹುದು. ಈ ಮಾರ್ಗದಿಂದ ಶಿರಸಿಯು ಕೇವಲ 50ಕಿ.ಮೀ ದೂರದಲ್ಲಿದೆ.

ಕೂಡಲ: ಧರ್ಮಾ ಹಾಗೂ ವರದಾ ನದಿಗಳು ಕೂಡಿದ ಈ ಸ್ಥಳವು ಒಂದು ಪುಣ್ಯಕ್ಷೇತ್ರವಾಗಿದೆ. ಇಲ್ಲಿ ಸಂಗಮೇಶ್ವರ ದೇವಸ್ಥಾನವನ್ನು ಹೊಂದಿದ್ದು, ಜನೇವರಿ 14 ರ ಸಂಕ್ರಮಣದಂದು ಅದ್ದೂರಿಯಾದ ಜಾತ್ರೆ ನಡೆಯುತ್ತದೆ. ಶ್ರೀ ಸಿದ್ದಗಂಗಾ ಮಠದ ಪ್ರಗತಿಯ ಮೂಲ ಪುರುಷ ಶ್ರೀ ಅಡವಿ ಸ್ವಾಮಿಗಳು ಕೂಡಲದಲ್ಲಿದ್ದರು ಎನ್ನುವುದೇ ವಿಶೇಷ. ಈ ಕ್ಷೇತ್ರದಲ್ಲಿ ಶ್ರೀ ಗುರುನಂಜೇಶ್ವರ ಮಠವನ್ನು ನೋಡಬಹುದು.
ಆಡೂರು: ಬಾದಾಮಿ ಕೀರ್ತಿವರ್ಮನ ಕ್ರಿ.ಶ 750 ರ ಶಾಸನವನ್ನು ಹೊಂದಿದ ಊರಾಗಿದ್ದು ಶಾಸನೋಕ್ತವಾಗಿ ಪಾಂಡಿಯೂರು, ಪಾಂಡಿಪುರು ಎಂದು ಉಲ್ಲೇಖಿಸಲಾಗಿದೆ. ಬನಶಂಕರಿ ದೇವಾಲಯ, ಕಲ್ಲೇಶ್ವರ ಗುಡಿ, ಕಾಳೇಶ್ವರ ಗುಡಿ, ಗುಡ್ಡದಲ್ಲಿರುವ ಮೈಲಾರನ ಗುಡಿಗಳು ಇಲ್ಲಿ ಪ್ರೇಕ್ಷಣೀಯ ಸ್ಥಳಗಳಾಗಿವೆ.

ಕಲಕೇರಿ: ಶಾಸನೋಕ್ತವಾಗಿ” ಕುಲಕೇರೆ” “ಕಲ್ಕೆರೆ ಎಂದು ಉಲ್ಲೇಖಿತವಗಿದೆ.  ನಾವು ಇಲ್ಲಿ ಎಲ್ಲಾ ಧರ್ಮಗಳ ದೇವಾಲಯಗಳನ್ನು ನೋಡವುದೆ ವಿಶೇಷ. ಸೋಮೇಶ್ವರ ದೇವಾಲಯ ಬಸವೇಶ್ವರ ದೇವಾಲಯ ಹಾಗೂ ಲಕ್ಷ್ಮೀದೇವಸ್ಥಾನಗಳನ್ನು ನೋಡಬಹುದು ಇಲ್ಲಿ ಅನೇಕ ವೀರಗಲ್ಲುಗಳು, ಹುಲಿವೀರಗಲ್ಲು ಹಾಗೂ ಮಹಾಸತಿಕಲ್ಲುಗಳನ್ನು ನೋಡಬಹುದು.

ತಿಳವಳ್ಳಿ: “ಅನಾದಿ ಅಗ್ರಹಾರ ತಿಳಿವಳ್ಳಿ” ಎಂದೆ ಉಲ್ಲೇಖಿತಗೊಂಡಿರುವ ಪ್ರಾಚೀನ ಊರು ಶಾಸನೋಕ್ತವಾಗಿರುವ ಸಾವಂತೇಶ್ವರ ದೇವಾಲಯದಿಂದ ಪರಿಚತವಾಗಿದೆ. ಇಲ್ಲಿನ ಚುರ್ಚಿಮಠ ಮತ್ತು ಸಿದ್ದೇಶ್ವರ ಗುಡಿಗಳು ಸುಮಾರು ಕ್ರಿ.ಶ 11-12 ನೇ ಶತಮಾನಕ್ಕೆ ಸೇರಿದ್ದಾಗಿದ್ದು, ಪಾಳು ಬಿದ್ದಿವೆ. ಇಲ್ಲಿ ಕ್ರಿ.ಶ 1102 ರ ನೀಷದಿ ಶಾಸನೊಂದಿದೆ.
ನರೇಗಲ್: ಶಾಸನೋಕ್ತವಾಗಿ “ನರೆಯಂಗಲ್ಲ “ನರೇಗಲ್ಲ” ಎಂದೇ ಉಲ್ಲೇಖಿತಗೊಂಡಿರುವ ಊರು ರಾಷ್ಟ್ರಕೂಟರಷ್ಟು ಪ್ರಾಚೀನತೆಯನ್ನು ಹೊಂದಿದೆ. ಇಲ್ಲಿಯ ಪ್ರಾಚೀನ ದೇವಾಲಯವೆಂದರೆ ಸರ್ವೆಸ್ವರ (ಸರಸ್ವತಿ) ಗುಡಿ. ಇಲ್ಲಿನ ವಿಶೇಷ ಸ್ಥಳಗಳೆಂದರೆ ಇಲ್ಲಿಯ ಎರಡು ಕೆರೆಗಳು. ಅದರಲ್ಲಿಯ ದೊಡ್ಡಕೆರೆಗೆ ಚೀನಾ, ಇಂಡೋನೇಶಿಯಾದಿಂದ ಪಕ್ಷಿಗಳು ಇಲ್ಲಿಗೆ ವಲಸೆ ಬರುತ್ತವೆ ಹೀಗಾಗಿ ಇದು ಪಕ್ಷಿದಾಮವಾಗಿದೆ. 
ಬಾಳಂಬೀಡು: ಶಾಸನೊಕ್ತವಾಗಿ “ಬಳ್ಳಾರೆಯ ಬೀಡು” ಎಂದು ಉಲ್ಲೇಖಗೊಂಡಿರುವ ಗ್ರಾಮ ಇಲ್ಲಿಯ ಪ್ರಮುಖ ದೇವಾಲಯಗಳೆಂದರೆ ರಾಮೇಶ್ವರ, ಬೋಳದೇವರು ಮತ್ತು ವಿರಭದ್ರ. ಇಲ್ಲಿಯ “ಬಾಡದ” ಮನೆಯವರು ಹನುಮಂತ ದೇವರ ಹೆಸರಿನಿಂದ ಸಂತಾನ ಭಾಗ್ಯವನ್ನು ಕಲ್ಪಿಸಲು ಬನ್ನಿಹಬ್ಬದಂದು (ದಸರಾ) ಔಷದಿಯನ್ನು ಕೊಡುತ್ತಾರೆ, ಈ ಸಮಯದಲ್ಲಿ ಸುತ್ತಮುತ್ತಲಿನ ಜನರು ಇಲ್ಲಿ ಸೇರಿರುತ್ತಾರೆ.

ಬಾಳೂರು: ಶಾಸನೋಕ್ತವಾಗಿ “ಬಾಳೆಯೂರ” ಎಂದು ಉಲ್ಲೇಖಗೊಂಡಿರುವ ಗ್ರಾಮ. ಗುತ್ತಿಯ ಮಾಂಡಳಿಕ ಬಮ್ಮಗಾವುಂಡನ ಆಡಳಿತ ಕೇದ್ರವಾಗಿತ್ತು. ಊರ ಹೊರಗೆ ಕೋಟೆ ಇದ್ದು ಈಗ ಕೇವಲ ಅದರ ಅವಶೇಶಗಳಿವೆ. ಊರಿನಲ್ಲಿ ಅಡವಿಸ್ವಾಮಿ ಮಠವಿದೆ.
ಮಕರವಳ್ಳಿ: ಹಾನಗಲ್‍ನಿಂದ 14 ಕಿ.ಮೀ ದೂರದಲ್ಲಿರುವ ಹಾಗು ಮಲೆನಾಡು ಮತ್ತು ಬಯಲುಸೀಮೆಯ ಅಂಚಿನಲ್ಲಿರುವ ಊರು ಇಲ್ಲಿ ಪಕ್ಷಿಧಾಮವಿದೆ. ಇಲ್ಲಿಗೆ ಡಿಸೆಂಬರ್ ಮತ್ತು ಜನೇವರಿ ತಿಂಗಳಲ್ಲಿ ಪಕ್ಷಿಗಳು ಸಂತಾನೊತ್ಪತ್ತಿಗೆ ಬರುತ್ತವೆ.
ಯಳವಟ್ಟಿ: ಬನವಾಸಿ-12000 ಮಹಾಘಟಕದಲ್ಲಿದ್ದ ಹಾನಗಲ್-500 ರ ಆಡಳಿತ ವಿಭಾಗದಲ್ಲಿದ್ದ ಪ್ರಸಿದ್ಧ ಸ್ಥಳವಾಗಿದೆ. ಇಲ್ಲಿರುವ ಪ್ರಮುಖ ದೇವಾಲಯಗಳೆಂದರೆ ರಾಮಲಿಂಗೇಶ್ವರ, ಮಹಾಬಲೇಶ್ವರ, ಚಂದ್ರಪ್ರಭ ಬಸದಿ ಹಾಗು ಊರಿನಲ್ಲಿ ಒಟ್ಟು ಐದು ಕೆರೆಗಳಿವೆ.

ಶೇಷಗಿರಿ: ಧರ್ಮಾನದಿಯ ದಂಡೆಯ ಮೇಲಿರುವ ಪ್ರಾಚೀನ ಗ್ರಾಮ ಶಾಸನೋಕ್ತವಾಗಿ ‘ಹತ್ತಿಗುಂದ’ ಎಂದು ಉಲ್ಲೇಖಗೊಂಡಿದೆ. ಇಲ್ಲಿ ಹಾನಗಲ್-500 ರನ್ನು ಆಳುತ್ತಿದ್ದಾಗ ಮಂತಿಸೆಟ್ಟಿ ಹಾಗೂ ಅವನ ಮಡದಿಯರಾದಂತಹ ಮಾಚಿಕಬ್ಬೆ ಹಾಗೂ ಅಸಗಿಕಬ್ಬೆಯರು ಹತ್ತಿಗುಂದದಲ್ಲಿ ರೇವೆಶ್ವರ ಲಿಂಗವನ್ನು ಸ್ಥಾಪಿಸಿ ಗೊಮ್ಮಟಾಚಾರ್ಯರಿಗೆ ಭೂದಾನ ಮಾಡಿದರು. ಅದೇ ದೇವಸ್ಥಾನ ‘ರಾಮಲಿಂಗ’ ದೇವಸ್ಥಾನವೆಂದು ರೂಢಿಯಲ್ಲಿದೆ. ಊರ ಬಳಿಯ ಗುಡ್ಡದ ಮೆಲೆ ಸಿದ್ದಪ್ಪನ ಗುಡಿಯಿದ್ದು ಇಲ್ಲಿ ಮೈಲಾರ ಮತ್ತು ಮಾಳಚಿಯರು ಮೂರ್ತಿಗಳಿವೆ. ಕಲಾವಿದರಿಗೆ ಇಲ್ಲಿ ಹೆಚ್ಚಿನ ಪ್ರೋತ್ಸಾಹವಿದೆ.

ಸಾವಿಕೇರೆ: ಶಾಸನೋಕ್ತವಾಗಿ “ಸಮಕರಿಗೆ” ಹಾಗೂ “ಸಾವಿಕೆರೆ” ಎಂದು ಉಲ್ಲೇಖಿತಗೊಂಡಿರುವ ಪ್ರಾಚೀನ ಗ್ರಾಮ. ಇಲ್ಲಿಯ ವಿಶೇಷವೆಂದರೆ ಕೆರೆ ದಂಡೆ ಮೇಲಿರುವ ಗುಡಿ ಹೊಂಡದ ಬಳಿ ಮೈಲಾರ- ಮಾಳಚಿ ಶಿಲ್ಪವಿದ್ದು, ಇದರ ಬಳಿಯಲ್ಲಿಯೇ ಏಳು ಮಂದಿ ಬಿಲ್ಲುಗಾರರು ಮತ್ತು ನಾಯಿಯ ಕೆತ್ತನೆಯಿರುವ ಶಿಲ್ಪವಿದೆ (ಮೈಲಾರನ “ಏಳ್ಕೊಟೆ” ಭಕ್ತರನ್ನು ಇಲ್ಲಿ ಪ್ರಾತಿನಿಧಿಕವಾಗಿ ಬಿಲ್ಲಾಳಗಳನ್ನು ಕೆತ್ತುವುದರೊಂದಿಗೆ ಸೂಚಿಸಿದೆ).

ಬ್ಯಾಗಾದಿ: ಕಲಕೇರಿಯಿಂದ ಹತ್ತಿರದ ಸ್ಥಳವಾಗಿದ್ದು ಇಲ್ಲಿ “ಪಾಂಡವರ ವಲೆ”ಎಂಬ ಪ್ರಸಿದ್ದಿ ಪಡೆದ ಸ್ಥಳವಿದೆ. ಇಲ್ಲಿಯ ಜನರ ಪ್ರಕಾರ ಪಾಂಡವರು ವಲೆಯ ಮೇಲೆ ಆಹಾರವನ್ನು ತಯಾರಿಸುತ್ತಿದ್ದರು ಎಂದು ನಾಲ್ಕು ಬೃಹತ್ ನಿಲುಸು ಕಲ್ಲುಗಳನ್ನು ತೋರಿಸುತ್ತಾರೆ. ಇವುಗಳು ಬಹುಶಃ ಶಿಲಾಯುಗ ಕಾಲದ ಸಮಾದಿ ಕಲ್ಲ್ಲುಗಳಾಗಿರಬಹುದು. 

5. ಹಾವೇರಿ ತಾಲೂಕಾ ದರ್ಶನ
ನಾಲ್ಕನೂರು ಮಹಾಜನರಿರುವ ಅಗ್ರಹಾರ, “ಭೂಮಿಗೆ ಅದೊಂದು ಅಲಂಕಾರ”, “ಬ್ರಹ್ಮನ ನಿವಾಸ”, ವೇದಗಳ ನೆಲೆ ಹಾಗೂ ವಿದ್ಯಾಧಿದೇವತೆ ಸರಸ್ವತಿಯ ನೆಲೆಬೀಡು ಎಂದು ಶಾಸನ ಕವಿ ವರ್ಣಿಸಿದ ಹಾಗೂ ಕರ್ನಾಟಕ ರಾಜ್ಯದ ಮಧ್ಯ ಭಾಗದಲ್ಲಿರುವ ಪ್ರದೇಶ ಹಾವೇರಿ. ಈ ಕ್ಷೇತ್ರವನ್ನು “ನಳಪುರಿ”ಎಂದು ಕರೆಯಲ್ಪಟ್ಟಿದ್ದು ಈ ಕ್ಷೇತ್ರಕ್ಕೂ ಮತ್ತು ನಳನಿಗೂ ಇರುವ ಸಂಬಂದವನ್ನು ಕ್ರಿ.ಶ 1157 ರ ಕಾಲಮಾನದ ಕಲ್ಲುಮಂಟಪದ ಬಳಿ ದೊರೆತ ಶಾಸನದಲ್ಲಿ ಈ ಕೆಳಗಿನ ಪ್ರಕಾರ ಉಲ್ಲೆಖಿಸಲಾಗಿದೆ.

"ಹರಿವಹನೀರ್ಗೇಯಡಂಬರಲುರಗಂಕಂಡುನಳನದಂ
ಕಟ್ಟಸೆ ಹಾವೇರಿಯಂದು ಪರಮಾತ್ರ್ಥನಾಮ ಮಾದುದಾ ಕೃತಯುಗದೊಳ್”

ಹರಿಯುವ ನೀರಿಗೆ ಹಾವೊಂದು ಅಡ್ಡಲಾಗಿ ಬಂದಿದ್ದರಿಂದ ಈ ಪವಿತ್ರವಾದ ಕ್ಷೇತ್ರದಲ್ಲಿ ನಳಚಕ್ರವರ್ತಿಯು ಒಂದು ಕೆರೆಯನ್ನು ಕಟ್ಟಿಸಿ ಕೃತಾಯುಗದಲ್ಲಿ ಹಾವೇರಿಯೆಂದು ನಾಮಾಂಕಿತವನ್ನು ಕೊಟ್ಟನು. ಕ್ರಿ.ಶ 1134 ರ ಶಾಸನವು ಹೆಗ್ಗೆರಿಯನ್ನು ನಲ್ಲಹಳಕೆರೆ ಎಂದು ಕರೆಯಲಾಗಿದೆ. ಹಾವೇರಿಯು ಈ ಹಿಂದೆ ಪುಲಿಗೆರೆ ಮುನ್ನೂರು(300) ಅಂದರೆ ಈಗಿನ ಲಕ್ಷ್ಮೆಶ್ವರಕ್ಕೆ ಸೇರುತ್ತಿತ್ತು. ಅದಕ್ಕಿಂತ ಮೊದಲು ಬಾಸವೂರು-140ಕ್ಕೆ ಸೇರಿತ್ತು. ಹಾವೇರಿಯು ಶಾಸನೋಕ್ತವಾಗಿ ಹಾವರಿ, ಪಾವರಿ, ನಳಪುರಿ, ಹಾಹರಿ, ಸಿದ್ದನಾಥಕ್ಷೇತ್ರ ಹಾಗೂ ಹಾವೇರಿ ಎಂದು ಉಲ್ಲೇಖಿತಗೊಂಡಿದ್ದು, 400 ಮಹಾಜನರನ್ನು ಒಳಗೊಂಡಿದ್ದ ಅಗ್ರಹಾರವಾಗಿತ್ತು. 

ಸುಮಾರು 35 ಶಾಸನಗಳು ಹಾವೇರಿಯಲ್ಲಿ ದೊರೆತಿವೆ. ಶಾಸನದಲ್ಲಿ ಬರುವ ವಿನಾಯಕ ದೇವಾಸ್ಥಾನ ಬಹುಶ: ಹಾಳಾಗಿರಬಹುದಾಗಿದೆ. ಆದರೆ ಆ ದೇವಸ್ಥಾನದಲ್ಲಿಯ ವಿಗ್ರಹವನ್ನು ನಾವು ಈಗ ಪುರಸಿದ್ದೇಶ್ವರ ದೇವಾಸ್ಥಾನದಲ್ಲಿ ನೋಡಬಹುದು.

ಇಲ್ಲಿಯ ಪ್ರಸಿದ್ಧ ಹಾಗೂ ಪ್ರಾಚೀನ ದೇವಾಲಯ ಪುರಸಿದ್ದೇಶ್ವರ ದೇವಸ್ಥಾನ (ಸಿದ್ಧನಾಥ ದೇವಸ್ಥಾನ). ಇದರ ಗರ್ಭಗುಡಿಯಲ್ಲಿ ದೊಡ್ಡದಾದ ಕುಳಿತ ಮೂರ್ತಿಯೊಂದು ಕಾಣಸಿಗುತ್ತದೆ. ಜಟೆ  ಹಾಗೂ ಗುಡ್ಡಗಳುಳ್ಳ ಈ ಮೂರ್ತಿ ಕಾಳಮುಖ ಶೈವ ಪಂಥಕ್ಕೆ ಸೇರಿದ “ಜ್ಞಾನರಾಶಿ” ಎಂಬ ಯತಿಯದ್ದು. 

ಈ ದೇವಸ್ಥಾನದಲ್ಲಿಯ ನಾಲ್ಕು ಕಂಬಗಳನ್ನು ಕರುವಸಿಂಗೆಸೆಟ್ಟಿ, ಮೂಕಿಸೆಟ್ಟಿ, ಗಳತಿಗೆಯ ಮಲ್ಲಸೆಟ್ಟಿ ಹಾಗೂ ಮಹಾದೇವಸೆಟ್ಟಿಗಳು ದಾನವಾಗಿ ನೀಡಿದರು. ಕ್ರಿ.ಶ 1229 ರಲ್ಲಿ ವಿನಾಯಕ ದೇವರಿಗೆ ಹಾವೇರಿಯ ವರ್ತಕರು ಹಣದಾನ ಮಾಡಿದರು. ವೆಂಕಟೇಶ್ವರ ದೇವಸ್ಥಾನದಲ್ಲಿಯ ಕ್ರಿ.ಶ 1785 ರ ಶಾಸನದಲ್ಲಿ ಶ್ರೀನಿವಾಸದೇವರ ಅಗ್ರಹಾರದಲ್ಲಿಯ ಬ್ರಾಹ್ಮಣರ ವೃತ್ತಿಗಳನ್ನು ಉಲ್ಲೇಖಿಸಲಾಗಿದೆ. ವೀರಭದ್ರೇಶ್ವರ ದೇವಸ್ಥಾನದಲ್ಲಿಯ ಶಾಸನವೊಂದು ಜಿನಾಲಯನ್ನು ಸ್ಮರಿಸುತ್ತದೆ. ಕ್ರಿ.ಶ 1759 ರ ಶಾಸನ ಹುಚ್ಚ ಬಸವಲಿಂಗಸ್ವಾಮಿಗಳ ಹಾಗೂ ಚರಮೂರ್ತಿ ಹುಚ್ಚಚನ್ನವೀರಪ್ಪನವರ ಮಠ ಸ್ಥಾಪನೆಯಾಯಿತೆಂದು ತಿಳಿಸುತ್ತದೆ. 

ಸಿದ್ದೇಶ್ವರ ದೇವಸ್ಥಾನದ ಕಟ್ಟೆಯ ಮೇಲೆ ಕುಳಿತುಕೊಂಡು ಪಂಚಾಯತಿಗಳು ಪ್ರಾಚೀನ ಕಾಲದಲ್ಲಿ ನಡೆಯುತ್ತಿದ್ದವು. ಇಂತಹ ಪವಿತ್ರವಾದ ಪಂಚಾಯಿತಿಯನ್ನು ಸುತ್ತಮುತ್ತಲಿನ ಜನ “ಹಾವೇರಿ ಪಂಚಾಯಿತಿ” ಎಂದು ಕರೆಯುತ್ತಿದ್ದರು. ಸಿದ್ದೇಶ್ವರ ಗುಡಿಯ ಎಡಭಾಗಕ್ಕೆ ಉಗ್ರನರಸಿಂಹ ದೇವಸ್ಥಾನವಿದೆ. ಶಾಸನದಲ್ಲಿಯ ಇಂದ್ರೇಶ್ವರ ಗುಡಿ ಇದೆ ಆಗಿರಬಹುದು ಎಂಬುದು ಅನೇಕ ವಿದ್ವಾಂಸರ ಅಭಿಪ್ರಾಯವಾಗಿದೆ. ಇಲ್ಲಿಯ ನೆಲದ ಮೇಲಿನ ಕಲ್ಲುಗಳಲ್ಲಿರುವ ಗುಳಿಗಳು ಕುತೂಹಲವನ್ನು ಕೆರಳಿಸುತ್ತವೆ. ಈ ದೇವಸ್ಥಾನದಲ್ಲಿ ಬಿಡಿಯಾಗಿ ಇಟ್ಟಿರುವ ಶಿಲಾಮೂರ್ತಿಗಳು ಸೂರ್ಯ, ವಿಷ್ಣು ಮತ್ತು ಮಹಾಲಕ್ಷ್ಮೀ ಮೂರ್ತಿಗಳು ಹಾಗೂ ಇವುಗಳಲ್ಲಿ ಶಿವಲಿಂಗಧಾರಿ ವಿಷ್ಣು ಮೂರ್ತಿಯು ವಿಶೇಷತೆಯನ್ನು ಪಡೆದಿವೆ. ಅಕ್ಕಮಹಾದೇವಿ ಹೊಂಡವು ಬಹಳ ಪುರಾತನವಾದದು. ಇದರ ಪಕ್ಕದಲ್ಲಿ ದ್ಯಾಮವ್ವನ ಓಣಿಯಲ್ಲಿ ಕಲ್ಲೇಶ್ವರ ಗುಡಿಯಿದೆ. ಈ ಗುಡಿಯ ಸಭಾಮಂಟಪದ ಕಂಬದಲ್ಲಿಯ ಕ್ರಿ.ಶ 1254 ರ ಶಾಸನವು ಯಾದವರ ಕನ್ನರನು ಗೋಪಾಲ ದೇವರ ಆರಾಧನೆಗೆ ಬಿಟ್ಟ ದಾನವನ್ನು ತಿಳಿಸುತ್ತದೆ. ಹಾವೇರಿಯಲ್ಲಿಯ ಪ್ರಸಿದ್ಧ ಮಠಗಳೆಂದರೇ ಮುರಘಸ್ವಾಮಿಮಠ, ಹೊಂಡದಮಠ, ಹೊಸಕೇರಿಮಠ, ಹುಕ್ಕೇರಿಮಠ, ಹೊಸಮಠ, ಬಣ್ಣದಮಠ ಹಾಗೂ ರಾಘವೇಂದ್ರಸ್ವಾಮಿಗಳ ಮಠಗಳು. ಹೊಸಕೇರಿಮಠವು ಹಿಂದೆ ಛಾತ್ರಧಿನಿಲಯವಾಗಿತ್ತು ಎನ್ನಲು ಇಲ್ಲಿಯ ಶಾಸನ ಸಹಕಾರಿಯಾಗುತ್ತದೆ. 

ಇಲ್ಲಿಯ ಹೊಂಡದಮಠದಲ್ಲಿ ಬೆಂಗಳೂರ ಮುರಗಿದೇವರು ಶಿವಾವಲ್ಲಭ ಶತಕವನ್ನು ರಚಿಸಿದರು. ಇದರ ತಾಳೆಗರಿ ಪ್ರತಿಯನ್ನು ನಾವು ಹಂಪಿ ವಿಶ್ವವಿದ್ಯಾಲಯದಲ್ಲಿ ನೋಡಬಹುದು. ಪೇಶ್ವೆಯವರ ಯತ್ನದಿಂದ ಕ್ರಿ.ಶ 18 ನೇಯ ಶತಮಾನದಲ್ಲಿ ವ್ಯಾಪಾರ ಕೇಂದ್ರವಾಯಿತು. ಇವರ ಕಾಲಕ್ಕೆ ಸೇರಿದ ಅಪ್ರಕಟಿತ ಶಾಸನವೊಂದನ್ನು ಬಸವೇಶ್ವರ ನಗರದಲ್ಲಿರುವ ಸರ್.ಎಂ. ವಿಶ್ವೇಶ್ವರಯ್ಯ ಶಾಲೆಯ ಹತ್ತಿರ ನೋಡಬಹುದಾಗಿದೆ. ಇದರಲ್ಲಿ ಮಾನ್ಯದ ಹೋಲದ ವಿಷಯ ಅಡಕವಾಗಿದೆ. ಸಿದ್ದೇಶ್ವರ ದೇವಸ್ಥಾನದ ಪಕ್ಕದಲ್ಲಿಯ ಬಾವಿಯೊಂದರ ನೀರಿನಿಂದ ಯಾಲಕ್ಕಿಯನ್ನು ತೊಳೆಯುತ್ತಿದ್ದರು. ಆಗ ಅವುಗಳು ಉಬ್ಬಿಕೊಂಡು ಬಿಳಿಯಾಗುತ್ತಿತ್ತು ಹೀಗಾಗಿ ಈ ಯಾಲಕ್ಕಿಗಳಿಗೆ ಮೈಸೂರ, ದುಂಡಶಿ ಹಾಗೂ ಹುಬ್ಬಳ್ಳಿಯ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಮಾರಾಟವಾಗುತ್ತಿದ್ದವು. ತೇರುಮಂಟಪದ ಬಳಿಯಿರುವ ದೇವಸ್ಥಾನದ ಆಂಜನೇಯನ ಪಾದದಲ್ಲಿ ಅಪ್ರಕಟಿತ ಶಾಸನವೊಂದಿದೆ. ಕಿತ್ತೂರಿನ ಸಾಮ್ರಾಜ್ಯ ನಾಶವಾಗಿ ಬ್ರಿಟಿಷರ ಕೈಗೆ ಸೇರಿದಾಗ ಅವರು ಹಾವೇರಿಯ ವೆಂಕಟರಾವ್‍ರಿಗೆ ಕಿತ್ತೂರಿನ ಆಡಳಿತವನ್ನು ವಹಿಸಿದರು.

ಇಂತಹ ಧಾರ್ಮಿಕ ಹಾಗೂ ಐತಿಹಾಸಿಕ ಕ್ಷೇತ್ರವನ್ನು ಆಡಳಿತ್ಮಾಕವಾಗಿ 24-08-1997 ರಂದು ಜಿಲ್ಲೆಯನ್ನಾಗಿ ಘೋಷಣೆ ಮಾಡಿ ಧಾರವಾಡ ಜಿಲ್ಲೆಯಿಂದ ವಿಭಜಿಸಿ ಪುನರ್ವಿಂಗಡಣೆ ಮಾಡಿ ಹಾವೇರಿ, ಹಾನಗಲ್, ಹಿರೇಕೆರೂರು, ರಾಣೇಬೆನ್ನೂರು, ಬ್ಯಾಡಗಿ, ಶಿಗ್ಗಾಂವ, ರಟ್ಟಿಹಳ್ಳಿ ಮತ್ತು ಸವಣೂರು ತಾಲೂಕುಗಳನ್ನು ಇದಕ್ಕೆ ಸೇರಿಸಿ ಇದರ ಸೌಂದರ್ಯವನ್ನು ಹೆಚ್ಚಿಸಿದರು. ಈ ಪ್ರದೇಶದಲ್ಲಿಯ ಪುಣ್ಯಕ್ಷೇತ್ರಗಳಿಂದಾಗಿ ಹಾಗೂ ಪುಣ್ಯಪುರುಷರ ನಡೆಯಿಂದ ಎರಡನೆ ಕಾಶಿಯೆಂದು ಪ್ರಚಲಿತದಲ್ಲಿದೆ. ಇಂತಹ ಮತ್ತೊಂದು ಹಾವೇರಿಯೆಂಬ ನಾಮಾಂಕಿತ ಪ್ರದೇಶ ಸಂಯುಕ್ತ ರಾಷ್ಟ್ರಗಳಲ್ಲಿರುವ, ಜಗತ್ತಿನಲ್ಲಿಯೇ ಶಾಂತಿಯುತ ಹಾಗೂ ಉತ್ತಮ ಶಿಕ್ಷಣ ಪದ್ದತಿಯನ್ನು ಹೊಂದಿದ ಫಿನ್‍ಲ್ಯಾಂಡನಲ್ಲಿರುವುದೇ ವಿಶೇಷ.

ಇಲ್ಲಿನ ಪುರಸಭೆ 1879 ರಷ್ಟು ಪ್ರಾಚೀನವಾದದು. 1881 ರ ಜನಗಣಿತಿಯ ಪ್ರಕಾರ ಹಾವೇರಿಯ ಜನಸಂಖ್ಯೆ 5652ಇತ್ತು. ಮುನಸಿಪಾಲಟಿಯ ವಾರ್ಷಿಕ ಉತ್ಪನ್ನ 1882-83 ರಲ್ಲಿ 1460 ರೂಪಾಯಿಗಳು ಮಾತ್ರವಿತ್ತು ಜನೇವರಿ ತಿಂಗಳಲ್ಲಿ ಹುಕ್ಕೇರಿಮಠ ಜಾತ್ರೆ, ದಸರಾದಲ್ಲಿ ಸಿದ್ದೇಶ್ವರ ಜಾತ್ರೆ, ಯುಗಾದಿಯಲ್ಲಿ ವೀರಭದ್ರೇಶ್ವರ ಜಾತ್ರೆ ಜರುಗುತ್ತದೆ. ಹಾವೇರಿಯಿಂದ 5 ಕಿಮಿ ದೂರದಲ್ಲಿರುವ ಜಂಗಮನಕೊಪ್ಪದಲ್ಲಿ ಶ್ರೀ ರಮಾನಂದ ಮನ್ನಂಗಿಯವರ ಆಶ್ರಮವನ್ನು ನೋಡಬಹುದು. ಬ್ರಿಟಿಷರ ಕಾಲದಲ್ಲಿ ಹಾವೇರಿ ದವಾಖಾನೆ ಧಾರವಾಡ ಜಿಲ್ಲೆಯಲ್ಲಿಯೇ ಪ್ರಸಿದ್ಧಿಯನ್ನು ಪಡೆದಿತ್ತು. ಮಹಾತ್ಮಾ ಗಾಂಧೀಜಿಯವರು 1/03/1934 ರಂದು ಹಾವೇರಿಗೆ ಭೇಟಿ ನೀಡಿ ರೇಲ್ವೆ ನಿಲ್ದಾಣದ ಬಳಿಯಿರುವ ಆಶ್ರಮಕ್ಕೆ ಅಡಿಗಲ್ಲನ್ನಿಟ್ಟರು. ಗಾಂಧಿಜೀ ಮುನ್ಸಿಪಲ್ ಹೈಸ್ಕೂಲ್ ಹಿಂಭಾಗದಲ್ಲಿ ರವೀಂದ್ರನಾಥ ಟ್ಯಾಗೂರವರ ತೈಲಚಿತ್ರವನ್ನು (ಇದು ಚವಟಿ ವೆಂಕಣ್ಣರ ಕೊಡುಗೆಯಗಿತ್ತು) ಅನಾವರಣಗೊಳಿಸಿ ಮೈದಾನದಲ್ಲಿ ಸೇರಿದ್ದ ಸುಮಾರು ಮೂವತ್ತು ಸಾವಿರ ಜನರನ್ನು ಉದ್ದೇಶಿಸಿ ಮಾತನಾಡಿದರು. ಅವರು ಅನಾವರಣಗೊಳಿಸಿದ ತೈಲಚಿತ್ರವು ಈಗಲೂ ಸಹ ನಾವು ಮುನ್ಸಿಪಲ್ ಹೈಸ್ಕೂಲನಲ್ಲಿದೆ. ನಂತರ ಹೊಂಡದಮಠ ಆವರಣದಲ್ಲಿ ಕೆಲ ಸಮಯ ಕಾಲ ಕಳೆದು ಶ್ರೀ ಜಯದೇವ ಮುರಘರಾಜೇಂದ್ರ ಜಗದ್ಗುರುಗಳೊಂದಿಗೆ ವ್ಯಾಯಮ ಶಾಲೆಯನ್ನು ಹಾಗೂ ಆನಂದಭವನವನ್ನು ಉದ್ಘಾಟಿಸಿದರು. ಈ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದ ಶಾಸನಗಳನ್ನು ಹೊಸಮಠ ಆವರಣದಲ್ಲಿ ನೋಡಬಹುದು. 

ಕ್ರಿ.ಶ 1939 ರಂದು ಸುಭಾಷಚಂದ್ರ ಬೋಸರು ಹಾವೇರಿಯ ಶಿವಾನಂದ ಥೇಯಟರ್‍ಗೆ ಬಂದು ಚುಣಾವಣೆಯ ಕುರಿತು ಭಾಷಣವನ್ನು ಮಾಡಿದ್ದರು. ಆ ಸನ್ನಿವೇಶವನ್ನು ನೆನಪಿಸುವ ಪೋಟೊವನ್ನು ಮಾಗವಿಯವರ ಮನೆಯಲ್ಲಿ ನೋಡಬಹುದು. ಪಂಡಿತ ಜವಾಹರಲಾಲ ನೆಹರೂ, ವಿನೋಭಾ ಭಾವೆ ಹಾಗೂ ಬ್ರಿಟಿಷ ಅಧಿಕಾರಿಯಾದ ಥ್ಯಾಕರೆಯ ಪ್ರೀತಿಯ ಊರು ಇದಾಗಿತ್ತು. ಶಿ.ಶಿ ಬಸವನಾಳ ಹಾಗೂ ಸತ್ಯಸಂದರ ಜನ್ಮ ಭೂಮಿ ಹಾವೇರಿಯಾಗಿದೆ. ಸಕ್ಕರಿ ಬಾಳಾಚಾರ್ಯ, ಗಳಗನಾಥರ ಜೀವನದ ಕೊನೆಯ ಘಟ್ಟವನ್ನು ನೋಡಿದ ಪುಣ್ಯಭೂಮಿ ಇದು. ಡಾ.ರಾಜೇಂದ್ರ ಪ್ರಸಾದರವರು ಬಂದು ಹೋದ ನಗರವೇ ಈಗ ರಾಜೇಂದ್ರ ನಗರವಾಗಿರುವುದು ಸಂತೋಷದ ವಿಷಯ. ಹಾವೇರಿಯು ಹಿಂದೆ ಕರ್ಜಗಿ ತಾಲೂಕಿಗೆ ಸೇರುತ್ತಿತ್ತು ಆದರೆ 1905 ರಲ್ಲಿ ಹಾವೇರಿಯನ್ನು ತಾಲೂಕು ಕೇಂದ್ರವನ್ನಾಗಿ ಮಾಡಲಾಯಿತು.

ಕರ್ಜಗಿ: ಶಾಸನೋಕ್ತವಾಗಿಕರಂಜ ಪತ್ರ” ಎಂದು ಉಲ್ಲೇಖಿತವಾಗಿದೆ. ವರದಾ ನದಿ ದಂಡೆಯ ಮೇಲಿರುವ ಈ ಊರಲ್ಲಿಯ ವಿಶೇಷವೆಂದರೆ ಎರಡು ದುಂಡು ಕಲ್ಲುಗಳನ್ನು ಬ್ರಹ್ಮನೆಂದು ಆರಾಧಿಸುತ್ತಾರೆ. ಇಲ್ಲಿ ಜೂನ್ ತಿಂಗಳ ಕಾರಹುಣ್ಣಿಮೆಯಲ್ಲಿ ಮೂರು ದಿನ ಜಾತ್ರೆ ನಡೆಯುತ್ತದೆ, ಆ ಸಮಯದಲ್ಲಿ ವೀರಗಾರರು ವೇಷಹಾಕುವುದು, ಕುಣಿಯುವುದು, ಬಂಡೆ ಓಡಿಸುವುದು ವಿಶೇಷವಾಗಿರುತ್ತದೆ. ಈ ಊರಿನ ಸುತ್ತಲೂ ಕೋಟೆಯ ಪಳಿಯುಳಿಕೆ ಇದ್ದು, ಸಂಕ್ರಮಣದಂದು ಸುತ್ತಲಿನ ಜನ ಸೇರುತ್ತಾರೆ.
ಕಿತ್ತೂರು: ಶಾಸನೋಕ್ತವಾಗಿ “ಕೊಣ್ಣೂg”À ಎಂದು ಉಲ್ಲೇಖಿತಗೊಂಡು ವರದಾ ನದಿಯ ದಂಡೆಯ ಮೇಲೆ ಇದೆ. 13 ನೆಯ ಶತಮಾನದಲ್ಲಿ ಇದೊಂದು ಮಹಾ ಅಗ್ರಹಾರವಾಗಿತ್ತೆಂದು ಊಹಿಸಬಹುದು. ಶಾಸನದಲ್ಲಿರುವ ಜಕ್ಕೇಶ್ವರ ದೇವಾಲಯವನ್ನು ಈಗಿನ ಕಲ್ಲಿನಾಥ ದೇವರೆಂದು ಗುರುತಿಸಬೇಕಾಗುತ್ತದೆ. ಇಲ್ಲಿಯ ಪ್ರಾಚೀನ ಜನರು ಹುಲಿಯೊಂದಿಗೆ ಬೇಟೆಯಾಡಿ ನಿಧನ ಹೊಂದಿದ್ದಕಾಗಿ ಹುಲಿಬೇಟೆ ವೀರಗಲ್ಲನ್ನು ಇಲ್ಲಿ ಕಾಣಬಹುದು.

ಕೋಳೂರು: ಕ್ರಿ.ಶ 9 ಮತ್ತು 10 ನೇ ಶತಮಾನದಲ್ಲಿ ಬಾಸವೂರು 140ಕ್ಕೆ ಸೇರಿದ್ದು ವರದಾ ನದಿಯ ದಂಡೆಯ ಮೇಲಿದೆ. ಈ ಊರು “ಕೊಡಗೂಸು”ನಿಂದಾಗಿ ಜನಪ್ರಿಯ ಗೊಂಡಿದೆ. ಹಸುಳೆಯೊಂದರ ಅನನ್ಯ ಭಕ್ತಿಯನ್ನು ಮೆಚ್ಚಿ ಕೃಪೆ ತೋರಿದ ಶಿವನು ಕೂಸನ್ನು ತನ್ನಲ್ಲಿ ಐಕ್ಯಮಾಡಿಕೊಂಡ ಘಟನೆಯಿಂದಾಗಿ ಕೋಳೂರು, ಕೊಡಗೂಸು ಬಸವಣ್ಣನ ಗುಡಿ ಪ್ರಸಿದ್ಧವಾಗಿದೆ. ಇಲ್ಲಿ ಬಸವಣ್ಣ, ದ್ಯಾಮವ್ವ, ಮೈಲಾರಲಿಂಗ ಮತ್ತು ಹುಲ್ಲಪ್ಪನ ಗುಡಿಗಳಿವೆ. ಮೇ ತಿಂಗಳಲ್ಲಿ ಹುಲ್ಲಪ್ಪನ ಜಾತ್ರೆ ನಡೆಯುತ್ತದೆ.

ಗಳಗನಾಥ: ಹಾವೇರಿಯಿಂದ 40 ಕಿ.ಮೀ ದೂರದಲ್ಲಿ ವರದಾ ಹಾಗೂ ತುಂಗಭದ್ರಾ ನದಿಗಳ ಸಂಗಮ ಸ್ಥಳದಲ್ಲಿರುವ ಒಂದು ಪುಣ್ಯಕ್ಷೇತ್ರ ಮತ್ತು ಪ್ರೇಕ್ಷಣೀಯ ಸ್ಥಳ. ಶಾಸನೋಕ್ತವಾಗಿ “ಪುಲ್ಲಿಣಿ” ಎಂದು ಉಲ್ಲೇಖಿತಗೊಂಡಿದೆ. ಇಲ್ಲಿನ ಗಳಗೇಶ್ವರ ದೇವಸ್ಥಾನ ಪ್ರೇಕ್ಷಣೀಯ ಸ್ಥಳವಾಗಿದ್ದು. ಇದರ ಎಡಬಾಗದಲ್ಲಿ ಮಲ್ಲೇಶ್ವರ ದೇವಾಲಯವಿದ್ದು ರಾಷ್ಟ್ರಕೂಟರ ಕಾಲದ ಸುಂದರ ಬಾಗಿಲುವಾಡವನ್ನು ಹೊಂದಿದೆ, ಇದೇ ದೇವಾಲಯದ ಹಿಂಬದಿಯಲ್ಲಿ ಹೊನ್ನೇಶ್ವರ ದೇವಾಲಯವಿದೆ. ಗಳಗೇಶ್ವರ ಎಂದು ಹೆಸರು ಬರಲು ಇಲ್ಲಿ ಹಿರಿಯರಾದಂತಹ ಇನಾಮದಾರ್‍ರವರು ಹೇಳುವುದು. ಇಲ್ಲಿಯ ಲಿಂಗವು ಬಂಗಾರದಿಂದ ಕೂಡಿದ್ದು ಅದನ್ನು ಮುಟ್ಟಿದರೆ ಯಾವ ಲೋಹವು ಬಂಗಾರವಾಗುತ್ತಿತ್ತು ಹೀಗಾಗಿ ಅದರ ಮೇಲೆ ಗಳಿಗೆಯನ್ನು ಹಾಕಿದರು ಈ ಕಾರಣದಿಂದ ಗಳಿಗೇಶ್ವರ ಎಂದು ರೂಡಿಗೆ ಬಂತು ಎನ್ನುವ ಮುಖಾಂತರ ಮೇಲೆ ಮತ್ತು ಕೆಳೆಗೆ ಎರಡು ಕಡೆಯ ಪಾಣಿಯ ನೀರು ಹೊರಗೆ ಬರುವುದನ್ನು ತೋರಿಸುತ್ತಾರೆ. ಮಕರ ಸಂಕ್ರಮಣದ ಕಾಲಕ್ಕೆ ಗಳಗೇಶ್ವರ ಹಾಗೂ ಪಂಚಲಿಂಗೇಶ್ವರ ದೇವಾಲಯಗಳ ಜಾತ್ರೆಗಳು ಒಟ್ಟಿಗೆ ವಿಜೃಂಬಣೆಯಿಂದ ಆಗುತ್ತದೆ.
ದೇವಗಿರಿ: ಶಾಸನೋಕ್ತವಾಗಿ ದೇವಿಂಗೆರೆ, ದೇವಗೆರೆ, ತ್ರಿಪರ್ವತ ಎಂದು ಉಲ್ಲೇಖಿತಗೊಂಡಿದೆ, ಇಲ್ಲಿ ಮೂರು ತಾಮ್ರಪಟಗಳು ದೊರೆತಿದ್ದು ಇವು ಜಿನ ಶಾಸನಗಳಾಗಿವೆ. ಬಸವಣ್ಣಗುಡಿ ಹಾಗೂ ಬನಶಂಕರಿ ಗುಡಿಗಳಿವೆ. ಈ ಗುಡಿಗಳಿಗೆ ಬೆಳ್ಳಿಯ ಆಭರಣಗಳನ್ನು ಪೇಶ್ವೆಯವರು ಕೊಟ್ಟಿದ್ದಾರೆ. ಎಂಟಡಿ ಎತ್ತರದ ಪ್ರಾಣದೇವರ (ಹನುಮಂತ) ಶಿಲ್ಪ ಬಹಳ ಆಕರ್ಷಣೆಯಿಂದ ಕೂಡಿದ್ದು. ಈ ದೇವಾಲಯದ ಸಭಾಮಂಟಪದ ಮರದ ಸ್ತಂಭಗಳು ಚಿತ್ತಾಕರ್ಷಕವಾಗಿವೆ. ಇದನ್ನು ಸವಣೂರ ನವಾಬರ ಆಸ್ಥಾನದಲ್ಲಿದ್ದ ಬ್ರಾಹ್ಮಣ ದಿವಾನ ಕಟ್ಟಿಸಿದನು, ಇಲ್ಲಿಯ ಮತ್ತೊಂದು ವಿಶೇಷವೆಂದರೆ ಇಲ್ಲಿ ಎಲ್ಲಾ ಧರ್ಮದವರನ್ನು ನಾವು ಕಾಣಬಹುದು. ಬನದ ಹುಣ್ಣಿಮೆಯಂದು ದುರ್ಗವ್ವ, ಬನಶಂಕರಿ ಹಾಗೂ ಭರತ ಹುಣ್ಣಿಮೆಯಂದು ಗಿರಿಮಲ್ಲೇಶ ಹಾಗೂ ಬಸವಜಯಂತಿಯಂದು ಬಸವಣ್ಣನ ಜಾತ್ರೆಗಳು ನೆಡೆಯುತ್ತವೆ. ನಮ್ಮ ಜಿಲ್ಲೆಯ ಅತ್ಯಾಕರ್ಷಣೆಯ ಕಟ್ಟಡ ಜಿಲ್ಲಾಧಿಕಾರಿ ಕೇಂದ್ರವಾಗಿದ್ದು ಅದು ಇಲ್ಲಿಯೆ ಇದೆ. ಇಲ್ಲಿಯ ಸರಕಾರಿ ಇಂಜೀನಿಯರಿಂಗ ಕಾಲೇಜಿನಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ವಿದ್ಯಾರ್ಥಿಗಳು ಬಂದು ವಿದ್ಯಾಬ್ಯಾಸ ಮಾಡುತ್ತಿದ್ದು ಊರಿನ ಆಕರ್ಷಣೆಯನ್ನು ಹೆಚ್ಚುಮಾಡಿದೆ. ಜೂನಿಯರ ರಾಜಕುಮಾರ ಎಂದೇ ಹೆಸರುವಾಸಿಯಾದ ಅಶೋಕ ಬಸ್ತಿಯವರ ಊರು ಇದೇ ಆಗಿದೆ.

ದೇವಿಹೊಸೂರು: “ದೆಯ್ವದ ಪೊಸವೂರು” “ದೇವಿಯ ಹೊಸವೂರು” ಎಂದು ಶಾಸನೊಕ್ತವಾಗಿ ಉಲ್ಲೇಖಿತಗೊಂಡಿದ್ದು. ಊರ ಹೊರಗೆ ದುರಸ್ತಿಗೊಂಡಿರುವ ಬನಶಂಕರಿ ಗುಡಿ (ಶಾಸನದಲ್ಲಿಯ ಮಾಳಚಿದೇವಿಯ ಗುಡಿ) ಕ್ರಿ.ಶ ಒಂಬತ್ತನೆಯ ಶತಮಾನದಲ್ಲಿ ನಿರ್ಮಿತವಾದÀ ಗುಡಿಯಾಗಿದೆ. ಮಲ್ಲಾರಿ ಮಾರ್ತಾಂಡನ ದೇವಿ ಗುಡಿ ಇದಾಗಿದೆ. ಊರ ನಡುವಿರುವ ಬಾಗೇಶ್ವರ ಗುಡಿಯೇ ಶಾಸನೋಕ್ತವಾಗಿ ಮೂಲಸ್ಥಾನದ ಭೋಗೇಶ್ವರ ಗುಡಿಯಾಗಿದೆ(ತೆಲ್ಲಿಗಾರರು ಮಾಡಿಕೊಂಡ ಸಂಘ ತೆಲ್ಲಿಗರೈವತ್ತೊಕ್ಕಲು ಕ್ರಿ.ಶ 1161 ರಲ್ಲಿ ಎಣ್ಣೆಯನ್ನು ದಾನ ಮಾಡಿದರು).ಇಲ್ಲಿಯ ಮತ್ತೊಂದು ವಿಶೇಷವೆಂದರೆ ಕೃಷಿ ಪಾಠಶಾಲೆ. ಈ ಶಾಲೆಯನ್ನು ಆಧುನಿಕ ಕೃಷಿ ಪದ್ದತಿಯನ್ನು ಜನರಿಗೆ ತಲುಪಿಸುವ ಮತ್ತು ಅವರಿಗೆ ತರಬೇತಿ ನೀಡುವ ಉದ್ದೇಶದಿಂದ ಕ್ರಿ.ಶ 1914 ರಲ್ಲಿ ಶಿರಸಂಗಿಯ ಎ.ಜೆ.ದೇಸಾಯಿಯವರು ಕೊಡುಗೆಯಾಗಿ ನೀಡಿದ ಭೂಮಿಯಲ್ಲಿ “ಶಿರಸಂಗಿಕರ್ ಮೆಮೊರಿಯಲ್ ಅಗ್ರಿಕಲ್ಚರಲ್ ಸ್ಕೂಲ್” ಎಂಬ ಹೆಸರಿನಿಂದ ಆರಂಭವಾಗಿ ಪ್ರತಿವರ್ಷ 40 ಯುವ ತರುಣರಿಗೆ ಒಂದು ವರ್ಷ ಮತ್ತು ಅಲ್ಪಾವಧಿಯ ಮೂರು ತಿಂಗಳ ತರಬೇತಿಯನ್ನು ಕೊಡುತ್ತಿತ್ತು. 

ಸಂಗೂರು: ಶಾಸನೋಕ್ತವಾಗಿ “ಸಂಗವೂರು”, “ಚಂಗೂರು” ಹಾಗೂ “ಚಂಗಾಪುರ" ಎಂದೆಲ್ಲಾ ಉಲ್ಲೆಖಿತಗೊಂಡಿದೆ. 12 ನೇ ಶತಮಾನದಲ್ಲಿ ಸಂಗೂರ ಗೋವೆಯ ರಾಜ್ಯಕ್ಕೆ ಸೇರುತ್ತಿತ್ತು.  ಇಲ್ಲಿಯ ರಾಮಲಿಂಗ ಗುಡಿಯ ಮುಂದಿರುದ “ಸಿಂಹಬೇಟೆ ವೀರಗಲ್ಲು” ಆಕರ್ಷಣೆಯ ಮತ್ತು ಇಲ್ಲಿ ಪ್ರತಿದಿನ 2000 ಕ್ವಿಂಟಲ್ ಸಕ್ಕರೆ ಯನ್ನು ಉತ್ಪಾದಿಸುವಂತಹ ಸಕ್ಕರೆ ಕಾರ್ಖಾನೆಯಿದೆ.

ಹರಳಹಳ್ಳಿ: ಶಾಸನೋಕ್ತವಾಗಿ “ವಿಕ್ರಮಪುರ” ಎಂದು ಉಲ್ಲೇಖಿತವಾಗಿರುವ ಸ್ಥಳ ತುಂಗಭದ್ರ ನದಿಯ ದಂಡೆಯಲ್ಲಿದೆ. ಈ ಗ್ರಾಮವನ್ನು ಕ್ರಿ.ಶ 1181 ರಲ್ಲಿ ವಿಕ್ರಮಪುರ ಎಂಬ ನಾಮಕರಣದೊಂದಿಗೆ ಕಲ್ಯಾಣಶಕ್ತಿ ಮುನಿಯ ವಿನಂತಿ ಮೇರೆಗೆ ಜೋಯೀದೇವರಸನು ನಿರ್ಮಿಸಿದನು. ಇಲ್ಲಿಯ ತ್ರಿಕೂಟಾಚಲವಿರುವ ಈಶ್ವರ ದೇವಾಲಯ ಮನಸೂರೆಗೊಳಿಸುತ್ತದೆ.
ಹಾವನೂರ: ಈ ಕ್ಷೇತ್ರದ ಹೆಸರು ಹೇಳಿದ ತಕ್ಷಣ ನೆನಪಿಗೆ ಬರುವುದು ದ್ಯಾಮವ್ವನಗುಡಿ (ತುಂಗಭದ್ರದಲ್ಲಿ ತೇಲಿ ಬಂದಪೆಟ್ಟಿಗೆಯ ದೇವರುನ್ನು ಕನಸಿನಲ್ಲಿಯ ದೇವರ ವಾಣಿಯ ಪ್ರಕಾರ ಹಿಡಿದು ಅಲ್ಲಿಯೆ ಪ್ರತಿಷ್ಟಾಪಿಸಿ ಪೂಜಿಸುತ್ತಿದ್ದಾರೆ). ಈ ಊರಿನ ಪಾಳೆಗಾರನಾದ ಹನುಮಂತಗೌಡನ ಕಾಲದಲ್ಲಿ ನಿರ್ಮಾಣವಾದ ಕೋಟೆಯು ನಶಿಸಿ ಹೋಗಿದೆ. ಕೋಟೆಯ ಪ್ರದೇಶದಲ್ಲಿ ತ್ರಿಪುರಾಂತೇಶ್ವರ, ಗಣಪತಿ ಮಂಟಪ, ಹನುಮಂತ ದೇವರಗುಡಿ ಹಾಗು ಭಾರತ ದೇಶದಲ್ಲಿಯೆ ಅಪರೂಪವಾದ ವಾದಿರಾಜ ತೀರ್ಥರ ಮೃತ್ತಿಕಾ ಬೃಂದಾವನವಿದೆ.

ಹೊಸರಿತ್ತಿ: ವರದಾ ನದಿಯ ದಂಡೆಯಲ್ಲಿರುವ ಈ ಕ್ಷೇತ್ರ ಮದ್ವ ಮತದ ಅನುಯಾಯಿಗಳ ಪವಿತ್ರಕ್ಷೇತ್ರವಾಗಿದ್ದು. ಇಲ್ಲಿ ವಿಭುದೇಂದ್ರ ಮಠದ ಮೂಲ ಪರಂಪರೆಯ ಯತಿಗಳಾದ ಧೀರೇಂದ್ರ ತೀರ್ಥ(ಕ್ರಿ.ಶ 1785) ಮತ್ತು ಸುಶೀಲೆಂದ್ರತಿರ್ಥರ ಬೃಂದಾವನಳಿವೆ ಹಾಗು ಗುದ್ದಲಿ ಸ್ವಾಮಿಗಳ ಮಠವಿದೆ. ಗುದ್ಲೇಶ್ವರ ಮಠದಲ್ಲಿ ವಿಶೇಷವಾದಂತಹ ಹಾವುಗಳು ಕಡಿದಾಗ ವಿಷ ಹೀರುವ ಮೂರು ಕಲ್ಲುಗಳಿವೆ (ಈಗ ಒಂದು ಮಾತ್ರ ಉಳಿದಿದೆ). ಮಹಾತ್ಮ ಗಾಂಧೀಜಿಯವರ ಚಿತಾಬಸ್ಮ ಕರ್ನಾಟಕದಲ್ಲಿ ಆರು ಕಡೆ ಇದ್ದು ಅದು ಹೊಸರಿತ್ತಿಯಲ್ಲಿರುವಿದೇ ವಿಶೇಷ (ಬೆಳಗಾವಿ, ಮುಗಟಖಾನ ಹುಬ್ಬಳ್ಳಿ, ಸುರೆಬಾನ, ಅಂಕೋಲ, ಹುಬ್ಬಳ್ಳಿಯ ಬೆಂಗೇರಿ). ಗಾಂಧೀಜಿಯವರ ಕನಸ್ಸನ್ನು ನನಸು ಮಾಡಲು ಗುದ್ಲೆಪ್ಪ ಹಳ್ಳಿಕೇರಿಯವರು ಗಾಂಧಿ ಗ್ರಾಮೀಣ ಗುರುಕುಲವನ್ನು ಸಾರ್ವಜನಿಕರಿಂದ ಸಂಗ್ರಹಣೆಯಾದ ಹಣದಲ್ಲಿ 30 ಎಕರೆ ಜಮೀನನ್ನು ಖರೀದಿಸಿ 1984 ರ ಅಕ್ಟೋಬರ್ 2 ರಂದು ಶಿಕ್ಷಣ ಸಚಿವರಾಗಿದ್ದಂತಹ ಶ್ರೀ ಎಸ್.ಆರ್.ಕಂಠಿಯವರ ಸಮಗ್ರ ಯೋಜನೆಯೊಂದಿಗೆ ಹಾಗೂ ಶಿಕ್ಷಣ ತಜ್ಞ ಶೀ ಮ.ಗು.ಹಂದ್ರಾಳರ ಜವಾಬ್ದಾರಿಯಲ್ಲಿ ಪ್ರಾರಂಭವಾಯಿತು. ಪ್ರತಿವರ್ಷ 40 ವಿದ್ಯಾರ್ಥಿಗಳು ಸಂದರ್ಶನದ ಮುಖಾಂತರ ಆಯ್ಕೆಗೊಂಡು ಗಾಂಧೀಜಿಯವರ ಕನಸಿನಂತೆ ಸ್ವಾವಲಂಬಿ ಜೀವನದ ಪಾಠವನ್ನು ಕಲಿಯುತ್ತಿದ್ದಾರೆ.

5. ಬ್ಯಾಡಗಿ ತಾಲೂಕಾ ದರ್ಶನ
ಬ್ಯಾಡಗಿ ಎಂದಾಕ್ಷಣ ಮೂಗಿಗೆ ಮೆಣಸಿನಕಾಯಿಯ ಘಾಟ ಹೆಚ್ಚಾಗಿ, ಕಣ್ಣಿನಲ್ಲಿ ನೀರು ಸುರಿಯುತ್ತಾ, ಸೀನಬೇಕಾಗುತ್ತದೆ ಕಾರಣ ಈ ಅನುಭವ ನಮಗೆ ಇಲ್ಲಿಯ ಮೆಣಸಿನ ಕಾಯಿ ಮಾರುಕಟ್ಟೆಯಲ್ಲಾಗುತ್ತದೆ. ಶಾಸನೋಕ್ತವಾಗಿ ಬೇಡಗೆಯ್, ಬೇಡಗೆ, ಬ್ಯಾಡಗೆ ಎಂದು ಉಲ್ಲೇಖಿತವಾಗಿದೆ. ಈ ಸ್ಥಳವು ಬೇಡರ ವಾಸಸ್ಥಳವಾಗಿರಬಹುದು ಹೀಗಾಗಿ ಇದನ್ನು ಬೇಡರೆಗೆ, ಬೇಡಗೆ ಮುಂದೆ ಬ್ಯಾಡಗಿ ಎಂದಾಗಿರಬಹುದು. ಕಾರಣ ಈ ಕ್ಷೆತ್ರದ ಸುತ್ತಮುತ್ತಲಲ್ಲಿ ಈ ಜನಾಂಗದವರನ್ನು ನೋಡಬಹುದು ಮತ್ತು ಇಲ್ಲಿ ಗುಡ್ಡ-ಗಾಡು ಪ್ರದೇಶಗಳು ಹೆಚ್ಚಾಗಿದ್ದು ಇದಕ್ಕೆ ಪುಷ್ಠೀಕರಿಸುತ್ತದೆ (ಕದರಮಂಡಲಗಿಯ ದೇವಸ್ಥಾನಕ್ಕೆ ದಾನವನ್ನು ಬಿಟ್ಟಿದ್ದು ನಾಯಕ ಜನಾಂಗದವನಾಗಿದ್ದಾನೆ). ಈ ತಾಲೂಕು ನಮ್ಮ ಜಿಲ್ಲೆಯಲ್ಲಿಯೆ ಚಿಕ್ಕದಾಂತಹ ತಾಲೂಕಾ. ಇಲ್ಲಿ ನಾವು ಸಿದ್ದೇಶ್ವರ ಗುಡಿ ಬಸವಣ್ಣ, ಗ್ರಾಮದೇವತೆ, ಹನುಮಂತ, ದುರ್ಗಾದೇವಾಲಯಗಳಿದ್ದು. ದರ್ಗಾಗಳು ಮತ್ತು ಮಸೀದಿಗಳಿವೆ. ಇಲ್ಲಿಯ ಮತ್ತೊಂದು ವಿಶೇಷವೆಂದರೆ ಶ್ರೀ ಉಮೇಶ ಕಮ್ಮಾರ (ರಾಜಶ್ರೀ ಫೊಟೊ ಸ್ಟುಡಿಯೊ) ರವರ ಮನೆಯಲ್ಲಿ ಕಾಳಪ್ಪ ಬಡಿಗೇರ ಹಾಗೂ ಅವರ ಮಗ ಬಸವಣ್ಣಪ್ಪ ಬಡಿಗೇರ ಶ್ರೀ ಸೀದ್ದಾರೊಡರ ಭಕ್ತರಾಗಿ ಅಲ್ಲಿಯ ತೇರುಗಳನ್ನು ಮತ್ತು ಮೂರ್ತಿಗಳನ್ನು ಮಾಡಿದ್ದರ ಫಲವಾಗಿ ಹುಬ್ಬಳ್ಳಿಯ ಶ್ರೀ ಸಿದ್ದಾರೊಡರು ತಮ್ಮ ಹಲ್ಲನ್ನು ಲಿಂಗುರೂಪದಲ್ಲಿ ಕೊಟ್ಟಾಗ ಅದನ್ನು ಅವರು ಇಲ್ಲಿ ತಂದು ಪೂಜಿಸುತಿದ್ದಾರೆ.

ಕದರಮಂಡಲಗಿ: ಇದುವೇ ಕಾಶಿ! ರಾಮೇಶ್ವರ! ಇದೇ ತಿರುಪತಿ! ಇದೇ ಗೋಕುಲ ವೃಂದಾವನ ಗಳ ಕದರಮಂಡಲಗಿಯಲ್ಲಿ ಗಂಗಾಧಿ ಸಕಲತೀರ್ಥ ಸನ್ನಿಧಿಯಲ್ಲಿ ನೆಲೆಸಿರುವುದು. ಇದುವೇ ಶಾಸನೋಕ್ತವಾಗಿ “ಕದರವುಂಡಲಿಗೆ” ಎಂದು ಉಲ್ಲೇಖಿತವಾಗಿದ್ದು. ಜಿಲ್ಲೆಯ ಕೆಲವೆ ಪ್ರಸಿದ್ದ ಹನುಮಾನ್ ಕ್ಷೇತ್ರಗಳಲ್ಲಿ ಇದು ಒಂದು. ಇಲ್ಲಿ ಕಾಂತೇಶ, ರಾಮಲಿಂಗ, ಮಾಲತೇಶ, ಕಲ್ಮೇಶ್ವರ, ಗವಿಸಿದ್ದೇಶ್ವರ, ಮುಕ್ಕಣ್ಣಪ್ಪ, ನೀಲಕಂಠೇಶ್ವರ, ತಿಮ್ಮಪ್ಪ, ದ್ಯಾವಮ್ಮ, ದುರ್ಗಮ್ಮ, ಬೀರಪ್ಪ ದೇವಾಸ್ಥಾನದ ಮುಂಬಾಗದಲ್ಲಿರುವ ಗರುಡ ಕಂಬದ ಮೇಲೆ ಕ್ರಿ.ಶ 1582 ರಲ್ಲಿ ಸಂತೆಯಬೆನ್ನೂರಿನ ಕೆಂಗಪ್ಪನಾಯಕನು ಹನುಮಂತ ದೇವರಿಗೆ ಕದರವುಂಡಲಿಗಿ ಗ್ರಾಮವನ್ನು ದಾನ ಬಿಟ್ಟ ಬಗೆಗೆ ಉಲ್ಲೇಖಿಸಲಾಗಿದೆ. ಇಲ್ಲಿಯ ತೋಟದ ತಿಮ್ಮಪ್ಪನ ಸನ್ನಿದಿಯಲ್ಲಿ ಕನಕದಾಸರು “ಮೋಹನ ತರಂಗಿಣಿಯನ್ನು” ರಚಿಸಿದನು. ಇದರ ಪ್ರತಿಯು ದೇವಾಸ್ಥಾನದಲ್ಲಿದ್ದು ಅದನ್ನು ಕಟ್ಟಿದರಟ್ಟಿನ ಮೇಲೆ ಒಂದು ಸುಂದರ ವರ್ಣಚಿತ್ರವಿದೆ. ಈ ದೇವಸ್ಥಾನದ ಜಿರ್ಣೊದ್ದಾರ ಮಾಡಿದ ಶ್ರೇಯಸ್ಸು “ದಿ.ಶ್ರೀ.ಹನುಮಂತಪ್ಪ ಕೆಂಚರಡ್ಡಿಯವರಿಗೆ ಸಲ್ಲುತ್ತದೆ.

ಕಾಗಿನೆಲೆ: ಹಾವೇರಿಯಿಂದ 14 ಕಿ.ಮೀ ದೂರದಲ್ಲಿರುವು ಕನಕದಾಸರ ಮುಕ್ತಿಕ್ಷೇತ್ರ. ಅವರ ಇಷ್ಟ ದೈವ ಅದಿಕೇಶವನ ಗ್ರಾಮ. ಇಲ್ಲಿ ಸಂಗಮೇಶ್ವರ, ಕಾಳಹಸ್ತೀಶ್ವರ, ವೀರಭದ್ರ, ಲಕ್ಷ್ಮಿನರಸಿಂಹ, ಆದಿಕೇಶವ ಮತ್ತು ಕಲ್ಮೇಶ್ವರ ದೇವಾಲಯಗಳನ್ನು ನೋಡಬಹುದು. ಕನಕದಾಸರ ಬೃಂದಾವನ ಮತ್ತು ಕನಕಗುರುಪೀಠ ಇಲ್ಲಿದೆ.  ವಿಶೇಷವಾದ ಹಾಗೂ ಹಿಂದೂ-ಮುಸ್ಲಿಂರ ಬಾವೈಕ್ಯದ ಕ್ಷೇತ್ರ ಸಂಗಮೇಶ್ವರ ದೇವಾಲಯ (ಆದಂಷಿಫಿ ದರ್ಗಾ) ಇಲ್ಲಿ ಹಿಂದೂಗಳು ಸುರಪುರ, ಕೊಡೆಕಲ್, ಯಾದಗಿರಿ, ಬಾಗೇವಾಡಿಯಿಂದ ಬಂದು ಶಿವರಾತ್ರಿಯ ದಿನ ಜಾತ್ರೆ ನಡೆಸಿದರೆ ಅಂದು ಮಧ್ಯಾಹ್ನ ಸಕ್ಕರೆಯನ್ನು ಮುಸ್ಲಿಂರು ಹಂಚಿ ಭಾವೈಕ್ಯತೆಯನ್ನು ಮೆರೆಯುತ್ತಾರೆ.
ಕೆಂಗೊಂಡ: ಈ ಪ್ರದೇಶದಲ್ಲಿ ಕೋಟೆಯಿದ್ದು, ಅದು ಸಂಪೂರ್ಣವಾಗಿ ನಶಿಸಿ. ಹೋಗಿದೆ. ಕೆಂಗೊಂಡವು ಹಲವು ಯುದ್ಧಗಳು ನಡೆದ ಪ್ರಾಚೀನ ಗ್ರಾಮವಾಗಿದೆ. ಇಲ್ಲಿ ಕಲ್ಲೇಶ್ವರ (ಶಾಸನೋಕ್ತವಾಗಿ ಮಲ್ಲಿಕಾರ್ಜುನ ಗುಡಿ), ದುರ್ಗಮ್ಮ, ಬಸವಣ್ಣ, ಹನುಮಂತ, ದ್ಯಾಮವ್ವ, ಚೌಡವ್ವ, ಉಡಚವ್ವ, ದಂಡಿನ ದುರ್ಗವ್ವ, ಮಾಯವ್ವ ದೇವಾಲಯಗಳಿವೆ. ಬನದ ಹುಣ್ಣಿಮೆಯೆಂದು ದುರ್ಗವ್ವನ ಜಾತ್ರೆ ಸುಮಾರು ಒಂಬತ್ತು ದಿನಗಳ ಕಾಲ ನಡೆಯುವುದೇ ವಿಶೇಷ.

ಕುಮ್ಮೂರ: ಕ್ರಿ.ಶ 1195 ರಲ್ಲಿ “ಕುಮೂರು” ಗ್ರಾಮವೆಂದೇ ಉಲ್ಲೇಖಗೊಂಡ ಪ್ರಾಚೀನ ಗ್ರಾಮವಾಗಿದೆ. ಕಲ್ಯಾಣದ ಚಾಳುಕ್ಯರ ಕಾಲದ ರಾಮಲಿಂಗೇಶ್ವರ ದೇವಸ್ಥಾನ ಪುರಾತನವಾದದು. ಇಲ್ಲಿಯ ಮತ್ತೊಂದು ವಿಶೇಷವೆಂದರೆ ಕನಕದಾಸರು ಇಳಿವಯಸ್ಸಿನಲ್ಲಿ ದೈಹಿಕ ಶಕ್ತಿಗುಂದಿ ತಮ್ಮ ತಿರುಗಾಟವನ್ನು ನಿಲ್ಲಿಸಿ ತಮ್ಮ ಇಷ್ಟವಾದ ದೇವರಾದ ತಿರುಪತಿ ತಿಮ್ಮಪ್ಪನ್ನು ಕುಮ್ಮೂರ ಗುಡ್ಡದ ಮೇಲೆ ಸ್ಥಾಪಿಸಿದರು. ದೇವಸ್ಥಾನದಲ್ಲಿ ಯಾವುದೇ ರೀತಿಯ ಕೆತ್ತನೆಯ ಮೂರ್ತಿ ಇಲ್ಲ. ಅಲ್ಲಿರುವುದು ಉದ್ಭವ ಮೂರ್ತಿ ಕನಕದಾಸರು ಅದನ್ನು ಪೂಜಿಸಿ, ಉತ್ಸವಕ್ಕಾಗಿ ಒಂದು ಪಂಚಲೋಹದ ಮೂರ್ತಿಯನ್ನು ಮಾಡಿದರು. ಈಗಲೂ ಇದನ್ನು ಕುಮ್ಮೂರ ದಾಸರ (ಬಾಸೂರ) ಮನೆತನದಲ್ಲಿ ನೋಡಬಹುದಾಗಿದೆ.
ಮೋಟೆಬೆನ್ನೂರು: ಶಾಸನೋಕ್ತವಾಗಿ “ಬೆಣ್ಣೆವೂರು” ಎಂದು ಉಲ್ಲೇಖಗೊಂಡಿರುವ ಪ್ರಾಚೀನ ಸ್ಥಾನವಗಿದೆ. ಹಿಂದೆ ಸುತ್ತಳತೆಗೆ-70 ಕ್ಕೆ ಸೇರಿದ ಬೆಣ್ಣೆವೂರು-12 ಕಂಪಣದ ಆಡಳಿತ ಕೇಂದ್ರವಾಗಿತ್ತು .ಪ್ರಾಚೀನ ಕಾಲದಲ್ಲಿ ವ್ಯಾಪಾರ ಕೇಂದ್ರವಾಗಿದ್ದ ಈ ಪ್ರದೇಶ ಸ್ವಾತಂತ್ರ ಹೋರಾಟಗಾರ ಮೈಲಾರ ಮಹಾದೇವಪ್ಪ ಹಾಗೂ ಸಾಹೀತಿ ಮಹಾದೇವ ಬಣಕಾರರ ಜನ್ಮಭೂಮಿ. ಇಲ್ಲಿಯ ಪ್ರಮುಖ ಸ್ಥಳಗಳೆಂದರೆ ಅಜ್ಜಯನ ಮಠ “ಕ್ಯಾತೋಲಿಕ ಚರ್ಚ್” (1913), ಗುಬ್ಬಿನಂಜುಂಡೇಶ್ವರ ಗದ್ದುಗೆ, ನಾಲ್ಕು ಕೆರೆಗಳು ಹಾಗೂ ದೇವಾಲಯಗಳೆಂದರೆ, ದ್ಯಾಮವ್ವ, ದುರ್ಗವ್ವ, ಮೆಲಾರಲಿಂಗಪ್ಪ, ಕತ್ತಲಮಲ್ಲಪ್ಪ ಮುಂತಾದವುಗಳು.

ಶಿಡೇನೂರು: ಶಾಸನೋಕ್ತವಾಗಿ “ಸಿಡಯನೂರು” ಎಂದೆ ಉಲ್ಲೇಖಿತವಾಗಿರುವ ಪ್ರಾಚೀನ ಗ್ರಾಮ ಕ್ರಿ.ಶ 1015 ರ ಶಾಸನದಲ್ಲಿ ತಿಳಿಸಿದ ಹಾಗೆ ಊರ ಹಲವಾರು ಗೌಡರು ಕಲಿದೇವರ (ಈಗೀನ ಕಲ್ಲೇಶ್ವರ) ಗುಡಿ ನಿರ್ಮಿಸಲು ಭೂದಾನ ಮಾಡಿದರು. ಕೊಣನ ತೆಲೆ ಶಿಲ್ಪವಿದೆ ಹಾಗೂ ಬಸವಣ್ಣ, ಹನುಮಂತ, ದ್ಯಾಮವ್ವ ಹಾಗೂ ದುರ್ಗವ್ವ ದೇವಸ್ಥಾನಗಳಿವೆ.

ಸೂಡಂಬಿ: ಶಾಸನೋಕ್ತವಾಗಿ “ಸೂಡಂಗಿ” ಎಂದು ಉಲ್ಲೇಖಿತವಾಗಿರುವ ಪ್ರಾಚೀನ ಗ್ರಾಮವನ್ನು 12 ನೆ ಶತಮಾನದಲ್ಲಿ ರುದ್ರಶಕ್ತಿ ದೇವನಿಗೆ ಗ್ರಾಮವನ್ನು ದಾನವಾಗಿ ರಾಷ್ಟ್ರಕೂಟರು ನೀಡಿದರು. ತಿಳುವಳ್ಳಿಯ ಸಾವಂತೇಶ್ವರ (ಶಾಂತೇಶ್ವರ) ದೇವಾಲಯದ ಸೇವೆಗೆಂದು ಈ ಊರನ್ನೇ ದೇಣಿಗೆಯಾಗಿ (1239 ರ ಶಾಸನ) ನೀಡಿದರು. ಇಲ್ಲಿ ಕೆರೆಯ ಬಳಿಗೋಸಾಸ ಕಲ್ಲುಗಳನ್ನು, ಈಶ್ವರ, ಬಸವಣ್ಣ, ದ್ಯಾಮವ್ವ. ದುರ್ಗವ್ವ ಹಾಗೂ ಮಸೀದಿ, ದರ್ಗಾಗಳನ್ನು ನೋಡಬಹುದು.
ಹಿರೇಹಳ್ಳಿ: ಶಾಸನೋಕ್ತವಾಗಿ “ಗೊಟ್ಟೆಗಡಿ” ಎಂದು ಉಲ್ಲೇಖವಾಗಿದ್ದು, ಇಲ್ಲಿಯ ಕೋಟೇಶ್ವರ ಹಾಗೂ ಗಜೇಶ್ವರ (ಶಾಸನೋಕ್ತವಾಗಿ ಅಂಗಜೇಶ್ವರ) ದೇವಾಲಯದಿಂದಾಗಿ ಪ್ರಸಿದ್ಧಿಯನ್ನು ಪಡೆದಿದೆ. ಕ್ರಿ.ಶ 1121 ರಲ್ಲಿಯ ಶಾಸನ ಕಲ್ಯಾಣದ ಚಾಳುಕ್ಯರ ಕಾಲಕ್ಕೆ ಸೇರಿದ್ದಾಗಿ ಶೋಭನಶೆಟ್ಟಿ ಹಾಗೂ ಅವನ ಮಡದಿ ಸೋವಿಯಕ್ಕ “ಗೊಟ್ಟಗಡಿಯಲ್ಲಿಯ ಅಂಗಜೇಶ್ವರ ದೇವಾಲಯವನ್ನು ಅಂಗ ಮತ್ತು ರಂಗ ಭೋಗಕ್ಕೆಂದು ದಾನ ಬಿಟ್ಟ ವಿಷಯವನ್ನು ತಿಳಿಸುತ್ತದೆ. ಡಾ. ಎಂ.ಎಂ .ಕಲಬುರ್ಗಿಯವರು ಶರಣಮಸಣಯ್ಯನು ಹಿರೇಹಳ್ಳಿಯವನಾಗಿದ್ದು, ಅಲ್ಲಿನ ಅಂಗಜೇಶ್ವರನ ಭಕ್ತನಿರಬೇಕೆಂದು ಅನುಮಾನಿಸುತ್ತಾರೆ.
ಗುಡ್ಡದ ಮಲ್ಲಾಪುರ: ಶ್ರೀಶೈಲಗಿರಿಯ ಸನ್ನಿಧಾನದ ಅಪ್ಪಣೆಯಂತೆ ಶ್ರೀಶೈಲಗಿರಿವಾಸ ಶ್ರೀಮಲ್ಲಿಕಾರ್ಜುನ ಸ್ವಾಮಿಯ ಮಹಾಲಿಂಗವನ್ನು ಸ್ಥಾಪಿಸಿದ್ದರಿಂದ ಕೆಲವು ಭಕ್ತರು ಇಲ್ಲಿಯೇ ವಾಸಿಸುತ್ತಾ “ಮಲ್ಲಿಕಾರ್ಜುನಪುರ” ಎಂದು ನಮಾಂಕಿತವಾಗಿ ಮುಂದೆ ಬೆಟ್ಟವಿದ್ದ ಕಾರಣ ಗುಡ್ಡದ ಮಲ್ಲಾಪುರವೆಂದಾಯಿತು. ಇಂತಹ ಕ್ಷೇತ್ರ ಗುರು ಹುಚ್ಚೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಸ್ಥಾಪಿಸಿದ ಶ್ರೀ ಸಂಸ್ಥಾನ ದಾಸೋಹ ಮಠದ ನಿಮಿತ್ತವಾಗಿ ಸುಕ್ಷೇತ್ರವಾಗಿ ಹೊರಹೊಮ್ಮಿ ಕೋಟಿ ಭಕ್ತರನ್ನು ತನ್ನಲ್ಲಿ ಆಕರ್ಷಿಸುತ್ತಿದೆ. ಇವರ ಉತ್ತರಾಧಿಕಾರಿಗಳಾಗಿ ಬ್ರಹ್ಮೋಪದೇಶ ಹಾಗೂ ಧರ್ಮದಂಡವನ್ನು ಸ್ವೀಕರಿಸಿ ವೃಷಭ ರೂಪಿಗಳಾದ ಷ, ಬ್ರ. ಶ್ರೀ.ಶ್ರೀ.ಶ್ರೀ ಮೂಕಪ್ಪಮಹಾಸ್ವಾಮಿಗಳು ಗೋಚಾರಶಕ್ತಿಯಾಗಿ ಅನೇಕ ಪವಾಡಗಳನ್ನು ಲೋಕಕಲ್ಯಾಣಕ್ಕಾಗಿ ಮೆರೆಯುತ್ತ ಭಕ್ತರನ್ನು ಉದ್ಧರಿಸುತ್ತಿದ್ದಾರೆ.

6. ಸವಣೂರು ತಾಲೂಕಾ ದರ್ಶನ.
ಕ್ರಿ,ಶ 1087 ರ ಶಾಸನದಲ್ಲಿ ಸವಣೂರು ಅಗ್ರಹಾರವೆಂದು ಉಲ್ಲೇಖಿತವಾಗಿರುವ ಪ್ರಾಚೀನ ಸ್ಥಳವಾಗಿದೆ. ಈ ಸ್ಥಳಕ್ಕೂ ಮತ್ತು ಸೆಊಣರಿಗೆ (ಯಾದವರಿಗೆ) ಸಂಭಂಧವಿರುವುದರಿಂದ ಇದರ ನಾಮಾಂಕಿತ ಹೀಗೆ ಬಂದಿರಬಹುದು ಎಂದು ಉಹಿಸಬಹುದು. ಸವಣೂರ ಸಂಸ್ಥಾನದ ಮೂಲ ಪುರುಷ ನವಾಬ ಅಬ್ದುಲ್‍ರವೂಫಖಾನ ದಿಲೇರಜಂಗ ದಲೇರ ಬಹುದ್ದೂರನು. ನವಾಬನ ಬಂಗ್ಲೆ ರಷಿದ್ ಮಹಲ್‍ನ್ನು ಊರಿನ ಹೊರಬಾಗದಲ್ಲಿ ನೋಡಬಹುದು (ಈಗಿನ ಬಿ.ಡಿ.ಓ ಕಛೇರಿ). ಇಲ್ಲಿಯೆ ರಸ್ತೆಯ ಆಚೆ ಹಾಳಾದ ಸ್ಥಿತಿಯಲ್ಲಿ ಇನ್ನೊಂದು ಬಂಗ್ಲೆ ಇದೆ. ಊರ ಸುತ್ತಲು ಒಂಬತ್ತು ಕೊತ್ತಲಗಳುಳ್ಳ ಕೋಟೆ ಇದೆ. ಹಳೆಯ ಕೊರ್ಟನ್ನು ನೋಡಿದಾಗ ನಮಗೆ ಅವರ ದರ್ಬಾರಿನ ಗತ್ತು ತಿಳಿಯುತ್ತದೆ. ಖಾದರ ಬಾಗದಲ್ಲಿ ಮಂಟಗಣಿಯ ದುರ್ಘಟನೆಯಲ್ಲಿ ಸಾವನ್ನಪ್ಪಿದವರ ಗೋರಿಗಳನ್ನು ಖಾದರಭಾಗದಲ್ಲಿ ನೋಡಬಹುದು ಹಾಗು ಇಲ್ಲಿಯೆ ಆಸರ್ ಮಹಲ್‍ನಲ್ಲಿ ಮೊಹಮದ್ ಪೈಗಂಬರವರ ಕೇಶವನ್ನು ನಿಗದಿತ ದಿನದಂದು ನೋಡಬಹುದು. ಸತ್ಯಭೋಧರಾಯರು ಮದ್ವಾಚಾರ್ಯರ ಮೂಲತತ್ವಗಳನ್ನು ಪ್ರಚಾರ ಮಾಡಿದಲ್ಲದೆ ಸ್ವತಃ ತಾವೇ ಹಲವಾರು ಶಾಶ್ತ್ರಗ್ರಂಥಗಳನ್ನು ರಚಿಸಿರುವರು. ಇವರ ಬೃಂದಾವನ ಈ ಮಠದ ಆವರಣದಲ್ಲೇ ಇದೆ. ಇದಲ್ಲದೇ ಸತ್ಯಸಂದರ ಹಾಗೂ ಸತ್ಯಧರ್ಮರ ಮೃತಿಕಾ ಬೃಂದಾವನಗಳೂ ಇಲ್ಲಿವೆ. ಶ್ರೀಗಳಿಗೆ ಸಾಕ್ಷತ್ ಗಂಗಾ ಪ್ರತ್ಯಕ್ಷÀಳಾದ ಶ್ರೀ ವಿಷ್ಣು ಪುಷ್ಕರಣಿ, ಅಹೋಬಲ ಲಕ್ಷ್ಮಿನರಸಿಂಹ ದೇವರ ಸನ್ನಿದಿಯೂ ಇಲ್ಲಿ ಇದ್ದು ವೈಷ್ಣವ ಪರಂಪರೆಯ ಶ್ರದ್ದಾ ಕೇಂದ್ರವಾಗಿದೆ. ಸವಣೂರ ತಾಲೂಕಿನ ಸಿದ್ದಾಪುರ ಗ್ರಾಮ ವಿಷ್ಣುತಿರ್ಥರ ಜನ್ಮಸ್ಥಳ. ಜಗನ್ನಥದಾಸರು ಮತ್ತು ಶ್ರೀಮದ್‍ಹರಿಮಥದಾಸರು ಹಲವು ಸಂದಿಗಳನ್ನು ಇಲ್ಲಿಯೇ ರಚಿಸಿದರು. ಇಲ್ಲಿಯ ಇನ್ನೊಂದು ವಿಶೇಷವೆಂದರೆ ಬಾಟಲಿಯಾಕಾರದಲ್ಲಿ ಮೂರು “ಬಾಯಾಬಾ” (Boaba) ಗಿಡಗಳು, ಇಂತಹ ಗಿಡಗಳು ಭಾರತದಲ್ಲಿಯೆ ವಿರಳ. ಜಗತ್ತಿನಲ್ಲಿ ಇವುಗಳ ಎಂಟು ಪ್ರಭೇಧಗಳು ಇದ್ದು ಇವಗಳ ಮೂಲಸ್ಥಳ ಆಫ್ರಿಕಾ ಮತ್ತು ಆಸ್ಟ್ರೆಲಿಯಾ ಆಗಿದೆ. ಇವುಗಳ ವೈಜ್ಞಾನಿಕ ಹೆಸರು “ಅಡನಸೊನಿಯಾ ಡಿಜಿಟೆಟಾ” ಆಗಿದೆ. ಗಿಡದ ತೊಗಟೆಯಿಂದ ಬಟ್ಟೆಯನ್ನು ತಯಾರಿಸುತ್ತಾರೆ. ಅಡನಸೊನಿಯಾ ಡಿಜಿಟೆಟಾ (Adansonia digitata) ಮೂರು ತಿಂಗಳು ತನ್ನ ಹಸಿರು ಎಲೆಗಳಿಂದ ಶೃಂಗಾರಗೊಂಡಿರುತ್ತದೆ ಹಾಗು ಉಳಿದ ಒಂಬತ್ತು ತಿಂಗಳು ನಿರಾಭರಣವಾಗಿರುತ್ತದೆ. ಇದರಲ್ಲಿಯ ಹಣ್ಣುಗಳ ತೆಂಗಿನಕಾಯಿಯಷ್ಟು ದೊಡ್ಡದಾಗಿದ್ದು ಅದರ ಮೇಲೆ ಕೂದಲಗಳ ರೂಪದ ಎಲೆಗಳಿರುತ್ತವೆ. ಇಲ್ಲಿಯ ಮೂರು ಗಿಡಗಳ ಕಾಂಡ ಕ್ರಮೇಣವಾಗಿ 18,16,14 ಮೀಟರ್‍ನಷ್ಟು ದಪ್ಪದ್ದಾಗಿವೆ. ಇವುಗಳು 5000 ವರ್ಷಗಳಷ್ಟು ಹಳೆಯದಾಗಿದ್ದು ಶ್ರೀಕೃಷ್ಣ ಪರಮಾತ್ಮನು ಇಲ್ಲಿಯೇ ಇವುಗಳನ್ನು ಬೆಳೆಸಿದನೆಂದು ಪ್ರತೀತಿ ಇದೆ. ಅನೇಕ ಧರ್ಮಗಳಲ್ಲಿ ಇದರ ಬಗ್ಗೆ ಮಾಹಿತಿ ನೀಡಿದ್ದು ಇಲ್ಲಿಯ ಜನರಿಗೆ ಇವುಗಳೆ ಕಲ್ಪವೃಕ್ಷಗಳಾಗಿವೆ. ಇವುಗಳು ದೊಡ್ಡಹುಣಸೆ ಮಠದ ಆವರಣದಲ್ಲಿದ್ದು ಆ ಮಠವು ಎಂಟನೂರು ವರ್ಷಗಳ ಇತಿಹಾಸವನ್ನು ಹೊಂದಿದೆ.
ನವಾಬ ಅಬ್ದುಲ್ ಮಜೀದ್‍ಖಾನ 64000 ರೂಪಾಯಿಗಳನ್ನು ವಿನಿಯೋಗಿಸಿ ಮೊತಿತಲಾಬ ಅನ್ನುವ ವಿಶಾಲ ಕೆರೆಯನ್ನು (ಮುತ್ತಿನಕೆರೆ) ಕಟ್ಟಿಸಿ ದಕ್ಷಿಣಕ್ಕಿರುವ ಕೋಡಿಯ ಕೆಳ ಪ್ರದೇಶದಲ್ಲಿ ಮಸ್ಕತ್‍ನಿಂದ ಮಾವಿನ ಗಿಡಗಳನ್ನು ತಂದು ನವಾಬಬಾಗನ್ನು ನಿರ್ಮಿಸಿದನು. ಇಲ್ಲಿಯ ವಿಳ್ಯಾದ ಎಲೆಯು ಜಗತ್ ಪ್ರಸಿದ್ದಿಯನ್ನು ಹೊಂದಿದ್ದು ಇಲ್ಲಿಂದ ಪಾಕಿಸ್ತಾನದ ಕರಾಚಿಗೆ ಹೋಗುತ್ತೇವೆ ಅಲ್ಲಿಗೆ ಹೋದಾಗ ಇವುಗಳು ಹಳದಿ ಬಣ್ಣಕ್ಕೆ ಬದಲಾವಣೆ ಹೊಂದಿ ಬೇಡಿಕೆಯನ್ನು ಹೆಚ್ಚಿಸುತ್ತವೆ. ಕರಾಚಿಯಲ್ಲಿ ಗುಜರಾತಿನ ರಾಜಕೋಟದ ದಯಾಲಾಲಜಿಬಾಯಿರ (ಶಿವಲಾಲ ಕೊಟಕ) ಸಿಹಿ-ಖಾದ್ಯವನ್ನು ತಿಂದು ಆನಂದಿಸಿದ ನವಾಬ ಮಜೀದಖಾನ ಅವರಿಗೆ ಸವಣೂರಿಗೆ ಆಹ್ವಾನ ಕೊಟ್ಟಾಗ ಅವರು 1932 ರಂದು ಇಲ್ಲಿಗೆ ಬಂದು ನಲೆಸಿದರು. ಇಲ್ಲಿಯ ಸವಣೂರು ಖಾರ ಮತ್ತು ಸಿಹಿ ತಿನಿಸುಗಳು ರಾಜ್ಯದಲ್ಲಿಯೇ ಪ್ರಸಿದ್ದಿಯನ್ನು ಪಡೆದಿದ್ದು ತನ್ನದೆ ಆದ ವಿಶೇಷತೆಯನ್ನು ಪಡೆದಿದೆ. ಈ ತಾಲೂಕು ಚಿಕ್ಕಲಿಂಗದಹಳ್ಳಿ ಎಂಬ ಚಿಕ್ಕ ಗ್ರಾಮ ಮತ್ತು ಹತ್ತಿಮತ್ತೂರು ಎಂಬ ದೊಡ್ಡಗ್ರಾಮವನ್ನು ಹೊಂದಿದೆ.

ಚಿಲ್ಲೂರು: ಇಲ್ಲಿಯ ವಿಶೇಷಗಳೆಂದರೆ ಆತ್ಮಾಹುತಿಯ ಶಿಲ್ಪ ಕೆತ್ತನೆಯುಳ್ಳ ಆತ್ಮ ಬಲಿದಾನದ ಶಿಲ್ಪಗಳು, ನೀಷದಿ ಕಲ್ಲುಗಳು, ಗೋಗ್ರಹಣದಲ್ಲಿ ಮಡಿದ ಮಾಚ ಹಗೂ ಚಟ್ಟರ ಸ್ಮಾರಕಗಳು, ಊರ ಹೊರಗೆ ಭೈರವ ಹಾಗೂ ವಿಷ್ಣುವಿನ ಶಿಲ್ಪಗಳಿವೆ. ಉಡಚವ್ವದೇವಿಯ ಪಕ್ಕದಲ್ಲಿ ಕೊಣ್ಕಂಭದ ಕೆತ್ತನೆಯಿರುವ ಆಕರ್ಷಕವಾದ ರಾಷ್ಟ್ರಕೂಟರ ಸ್ತಂಭವಾಗಿದೆ. ಬಾದುಬ್ಬೆ ಮತ್ತು ಉಡಚವ್ವನ ಮೂರ್ತಿಗಳು ರಾಷ್ಟಕೂಟರದ್ದಾಗಿವೆ.

ಹತ್ತಿಮತ್ತೂರು: ಶಾಸನೋಕ್ತವಾಗಿ ಪಳ್ತಿಯಮತ್ತುವೂರು, ಪತ್ತಯಮತ್ತೂರು ಎಂದು ಉಲ್ಲೇಖಿತಗೊಂಡಿದ್ದು ಹತ್ತಿ ಬೆಳೆಗೆ ಪ್ರಸಿದ್ದಿಯನ್ನು ಪಡೆದಿದೆ. ಈಊರು 400 ಎಕರೆಯಷ್ಟು ವಿಶಾಲವಾದ ಕೆರೆಯನ್ನು ಹೊಂದಿದೆ. ಇಲ್ಲಿಯ ಶಾಸನಗಳು ರಾಷ್ಟ್ರಕೂಟ, ಕಲ್ಯಾಣದಚಾಳುಕ್ಯ ಹಾಗೂ ಯಾದವರ ಕಾಲಕ್ಕೆ ಸೇರಿದವುಗಳಾಗಿವೆ. ಕ್ರಿ.ಶ 1266 ರ ಶಾಸನ ಜಕ್ಕಯ್ಯನ ಮಡದಿ ಮಾದವೆ ಸಮಾಧಿ ಮರಣ ಹೊಂದಿದ್ದನ್ನು ತಿಳಿಸುತ್ತದೆ. ಈ ಊರು ಹತ್ತಿ, ಎಲೆ, ಬಾಳೆ ಬೇಸಾಯಕ್ಕಾಗಿ ಪ್ರಸಿದ್ದಿಯನ್ನು ಹೊಂದಿದೆ.
ಕಾರಡಗಿ: ಇದೊಂದು ಸವಣೂರು ರಾಜ್ಯದ ಮಹಲ್ ಆಗಿದ್ದು ಇದಕ್ಕೆ ಬ್ರಿಟೀಷರು “ಚಾಪಲಿನ್” ಎಂಬವನನ್ನು ಆಡಳಿತಾಧಿಕಾರಿಯಂದು ನಿಯಮಿಸಿದ್ದರು. ಇಲ್ಲಿಯ ಪ್ರಮುಖ ಪ್ರೇಕ್ಷಣೀಯ ಸ್ಥಳವೆಂದರೆ ಈರಣ್ಣನ ಗುಡಿ ಅಥವಾ ವೀರಭದ್ರೇಶ್ವರ ದೇವಸ್ಥಾನ ಹಿಂದೆ ಇದು ತ್ರಿಕೂಟಚಲವಾಗಿತ್ತು (ಮೂರು ಗರ್ಭಗೃಹಗಳನ್ನು) ಆದರೆ ಇತ್ತೀಚಿನ ದಿನಗಳಲ್ಲಿ ಜಿರ್ಣೋದ್ದಾರಗೊಂಡಿದ್ದು, ದೇಶದ ಮೂಲೆ ಮೂಲೆಯಿಂದ ಭಕ್ತರನ್ನು ತನ್ನ ಕಡೆಗೆ ಸೆಳೆಯುತ್ತಿದೆ. ವೀರಭದ್ರೇಶ್ವರ ದೇವರ ಮಹಾರಥೋತ್ಸವ ದೇವಸ್ಥಾನದ ಮಹಾದ್ವಾರದಿಂದ ಆರಂಭಗೊಂಡು ಭವ್ಯ ತೇರಿನೋತ್ಸವದ ಪಾದಗಟ್ಟಿಯವರೆಗೆ ಜರುಗಿ ಪುನಃ ತೇರನ್ನು ದೇವಸ್ಥಾನಕ್ಕೆ ಕರೆತರಲಾಗುತ್ತದೆ. ಮಹಾರಥೋತ್ಸವದ ಅಂಗವಾಗಿ ಶ್ರೀ ವೀರಭದ್ರೇಶ್ವರ ಉತ್ಸವ ಮೂರ್ತಿಯ ಮೆರವಣಿಗೆ, ಮಹಾರಾಧನೆ, ಗುಗ್ಗಳ ಹಾಗೂ ಸ್ವಾಮೀಯ ಉತ್ಸವದ ಅಂಗವಾಗಿ ಸಾಂಸ್ಕøತಿಕ ಕಾರ್ಯಕ್ರಮಗಳು, ಕಡುಬಿನ ಕಾಳಗ ಮತ್ತು ಪಲ್ಲಕ್ಕಿ ಉತ್ಸವ ವಿಜೃಂಭಣೆಯಾಗಿ ನಡೆಯುತ್ತದೆ.

7. ಶಿಗ್ಗಾಂವಿ ತಾಲೂಕಾ ದರ್ಶನ
ಶಾಸನೋಕ್ತವಾಗಿ “ಶಿಗ್ಗಾಂವಿ” “ಸಿಗ್ಗಾಮಿ” ಎಂದು ಉಲ್ಲೇಖಿತಗೊಂಡಿರುವ ಈ ಸ್ಥಳ ಶಾತವಾಹನರ ಕಾಲದಷ್ಟು ಪ್ರಾಚೀನವಾದದ್ದು, ಊರ ಹಿರೇಕೆರೆ ಬಳಿಯಿರುವ ಈಶ್ವರ ಗುಡಿಯು ಹಾಳಾಗಿದೆ. ಇದರ ಜೊತೆಯಲ್ಲಿ ಊರಿನಲ್ಲಿ ಮಾಲತೇಶ, ಬಸವಣ್ಣ, ಆಂಜನೇಯ, ಈಶ್ವರ, ಮೈಲಾರ, ವೀರಭದ್ರ, ಅಂಬಾಭವಾನಿ ಹಾಗೂ ದ್ಯಾಮವ್ವನ ಗುಡಿಗಳಿದ್ದು. ವಿರಕ್ತಮಠ ಹಾಗೂ ನಗರಬಾವಿ ಮಠಗಳಿವೆ. ಬ್ರೀಟಿಷ ಅಧಿಕಾರಿ ಬಾಂಬೆಯ ಅಸಿಸ್ಟೆಂಟ್ ಇಂಜಿನಿಯರ್ ಆಗಿದ್ದ “ಎಡ್ಮಂಡ್” ಕ್ಷಾಮ ಪರಿಹಾರ ಕಾರ್ಯದಲ್ಲಿ ತೊಡಗಿದ್ದಾಗ 1877 ರ ಎಪ್ರೀಲ 26 ರಂದು ಕಾಲಾರಕ್ಕೆ ಬಲಿಯಾಗಿ ಶಿಗ್ಗಾಂವಿಯಲ್ಲಿ ಮರಣ ಹೊಂದಿದಾಗ ಅವನ ಸಮಾಧಿಯನ್ನು ಇಲ್ಲಿಯೆ ಮಾಡಿದ್ದನ್ನು ಈಗಲೂ ಕಾಲೇಜಿನ ಹಿಂಬದಿಯಲ್ಲಿ ನೋಡಬಹುದು.

ಗಂಗಿಬಾವಿ (ಇದ್ಲಾಬಾದ್): ಈ ಕ್ಷೇತ್ರವು ಹಳಿಯಾಳ ರಸ್ತೆಯಲ್ಲಿ ಶಿಗ್ಗಾಂವಿಯಿಂದ ಪಶ್ಚಿಮಕ್ಕೆ ಆರು ಕಿ.ಮೀ ದೂರದಲ್ಲಿರುವ “ಎಡ್ಲಬಾದ್” ನಲ್ಲಿರುವ ಪವಿತ್ರ ಬಾವಿಯೊಂದನ್ನು “ಗಂಗಿಬಾವಿ” ಎಂದು ಕರೆಯುತ್ತಾರೆ. ಈ ಸುಂದರ ಸುಕ್ಷೇತ್ರ ಗುಡ್ಡಗಳ ಮದ್ಯದಲ್ಲಿ ಎರಡು ದೇವಾಲಯಗಳನ್ನು ಹೊಂದಿದೆ. ರಾಮಲಿಂಗೇಶ್ವರ ಗುಡಿಯು ಪೂರ್ಣ ಜಿರ್ಣೋದ್ದಾರಗೊಂಡಿದ್ದು ರಾಷ್ಟ್ರಕೂಟರ ಮತ್ತು ಕಲ್ಯಾಣದ ಚಾಳುಕ್ಯರ ಕಲೆಯನ್ನು ಪ್ರತಿಬಿಂಬಿಸುತ್ತದೆ.  "ಸ್ವಯಂಭು ಲಿಂಗದ" ಮೇಲೆ ಸಂಕ್ರಮಣದಂದು ಸೂರ್ಯನ ಕಿರಣಗಳು  ನೇರವಾಗಿ ಬೀಳುತ್ತವೆ.

ಬಂಕಾಪುರ (ಷಾಬಜಾರ): ಬಂಕಾಪುರವು 1951 ರ ವರೆಗೆ ತಾಲೂಕು ಕೇಂದ್ರವಾಗಿದ್ದು, ನಂತರ ಕೇಂದ್ರವನ್ನು ಶಿಗ್ಗಾಂವಿಗೆ ವರ್ಗಾಯಿಸಲಾಯಿತು. 1881 ರಲ್ಲಿ ಇಲ್ಲಿ ಸುಮಾರು 6037 ಜನರು ವಾಸವಾಗಿದ್ದರು. ರಾಷ್ಟ್ರಕೂಟ ಚಕ್ರವರ್ತಿ ನೃಪತುಂಗನ ಗಣ್ಯ ಸೇನಾನಿ ಮಾಂಡಲಿಕನಾದ ಬಂಕೆಯರಸನ ಹೆಸರಿನ ಮೇಲೆ ಈ ಊರಿಗೆ ಬಂಕೆಯಪುರ ಅಥವಾ ಬಂಕಾಪುರ ಎಂದು ಹೆಸರು ಬಂದಿತೆಂದು ಗುಣಭದ್ರಾಚಾರ್ಯರ ಉತ್ತರ ಪುರಾಣದಿಂದ ತಿಳಿದು ಬರುತ್ತದೆ. ಬಂಕೆಯ ಅರಸನಿಂದ ಅನೇಕ ದಾನದತ್ತಿಗಳು ಜೈನ ದರ್ಮಕ್ಕೆ ದೊರೆತ್ತಿದ್ದರಿಂದ ಇದು ಆ ಕಾಲದಲ್ಲಿ ಜೈನ ವಿದ್ಯಾಪೀಠವಾಗಿತ್ತು ಅಥವಾ “ಪಂಡಿತಪುರಿ” ಎಂದು ಹೆಸರು ವಾಸಿಯಾಗಿತ್ತು. ಕನ್ನಡದ ಆದಿಕವಿ ಪಂಪನ ಗುರುಗಳಾದಂತಹ “ದೇವೆಂದ್ರಮುನಿಗಳು” ಮತ್ತು ರನ್ನ ಮತ್ತು ಚಾವುಂಡರಾಯನ ಗುರುಗಳಾದಂತಹ “ಅಜೀತಸೇನಾಚಾರ್ಯರ ನೆಲೆವಿಡಾಗಿತ್ತು. ಇದರಿಂದಾಗಿ ಹೆಚ್ಚು ಜನ ಜೈನರು ವಿದ್ಯಾರ್ಜನೆಯಗೊಸ್ಕರ ಇಲ್ಲಿ ಬಂದು ನೆಲೆಗೊಳ್ಳುತ್ತಿದ್ದರು. ಜೈನ ಧರ್ಮದ ಅತ್ಯಮೂಲ್ಯ ಗ್ರಂಥ ಆದಿಪುರಾಣ ರಚನೆಗೊಂಡಿದ್ದು ಬಂಕಾಪುರದಲ್ಲಿಯೆ ಎಂಬುದು ವಿಶೇಷ. ಬಂಕಾಪುರ ಕೋಟೆಯು ಒಟ್ಟು 139.10 ಎಕರೆಯಷ್ಟು ಭೂಮಿಯನ್ನು ಆವರಿಸಿದ್ದು, ಬನವಾಸಿಯ ಕದಂಬರು, ಗಂಗರು, ಚೋಳರು, ರಾಷ್ಟ್ರಕೂಟರು, ಹೊಯ್ಸಳರು, ಚಾಳುಕ್ಯರು. ವಿಜಯನಗರದ ಅರಸರು, ಬಿಜಾಪುರದ ಆದಿಲಷಾಹಿಗಳು, ಸವಣೂರ ನವಬರು ಮತ್ತು ಟಿಪೂಸುಲ್ತಾನ ಕ್ರಮೇಣವಾಗಿ ಇದರ ಮೇಲೆ ಆಳ್ವಿಕೆಯನ್ನು  ನಡೆಸಿದರು. ರಾಷ್ಟ್ರಕೂಟರ ನಾಲ್ಕನೆ ಇಂದ್ರನು ಮುಳಖೇಡವನ್ನು ಕಳೆದುಕೊಂಡ ನಂತರ ಬಂಕಾಪುರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆಯನ್ನು ನಡೆಸಿದನು ಮತ್ತು ಹೊಯ್ಸಳರ ದೊರೆ ಇದನ್ನು ಉಪರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆಯನ್ನು ಮಾಡಿ ಇದೆ ಭೂಮಿಯಲ್ಲಿ ಸಾವನ್ನಪ್ಪಿದ್ದು ವಿಶೇಷ ಕೋಟೆಯ ಒಳಭಾಗದಲ್ಲಿ 60 ಕಂಬಗಳನ್ನು ಒಳಗೊಂಡ ನಗರೇಶ್ವರ ದೇವಸ್ಥಾನ ಚಾಳುಕ್ಯರ ಶೈಲಿಯಿಂದ ಕಂಗೋಳಿಸುತ್ತದೆ. 
ಕೋಟೆಯೊಳಗಿನ ಸರಕಾರಿ ಗೋರಕ್ಷಣಾ ಕೇಂದ್ರ (ಸ್ಥಾಪನೆ 1919 ರಲ್ಲಿ ಪ್ರಥಮಮಹಾಯುದ್ಧ) ಖಿಲಾರಿ ಹಸುಗಳ ವರ್ಧನೆ ಮಾಡುತ್ತಿದ್ದು. ಇಲ್ಲಿ ಮೊಲದ ತಳಿಗಳ ವರ್ಧನೆಯು ನಡೆಯುತ್ತಿದೆ. ಇದರ ಮುಂದೆ ಕೋಟೆಯೊಳಗೆ ಶಾಸನಗಳು ಕತ್ತೆಯ ಚಿತ್ರವನ್ನು ಹೊಂದಿದ್ದು ಕೆಳಗಿನ ದಾನವನ್ನು ನಾಶಪಡಿಸಿದ್ದಲ್ಲಿ ಅವರಿಗೆ ಕತ್ತೆಯ ಅಂಗ ಬಗ್ಗೆ ತಿಳಿಸುತ್ತದೆ. 
2006 ಜೂನ 9 ರಂದು ಭಾರತ ಸರಕಾರ ನವಿಲು ಸಂರಕ್ಷಣೆಯ ಕೇಂದ್ರವೆಂದು ಘೋಷಿಸಿತು. ಪ್ರವಾಸಿಗರನ್ನು ಗಂಡು ನವಿಲುಗಳು ಮೋಹಕ ನೃತ್ಯದಿಂದ ಆಕರ್ಷಿಸಿ ಸಂತೋಷಗೊಳಿಸುತ್ತಿವೆ. ಬಂಕಾಪುರದಲ್ಲಿರುವ ಇನ್ನಿತರ ದೇವಾಲಯಗಳೆಂದರೆ ಮೈಲಾರ ದೇವಾಲಯ, ಯಲ್ಲಮ್ಮ, ವಿಠ್ಠಲ, ವೀರಭದ್ರ, ಬಸವಣ್ಣ, ಹನುಮಂತ, ಬಂಡಿಗಣೇಶ, ದ್ಯಾಮವ್ವ, ಚಾಮುಂಡೇಶ್ವರಿ ಮತ್ತು ಊರಲ್ಲಿರುವ ಪಂಚಮಲಕಪ್ಪನ ಬಾವಿ ದೊಡ್ಡ ಈಜುಕೊಳವನ್ನು ಹೊಂದಿದ್ದು, ಇದರ ವಿನ್ಯಾಸ ವಿಶಿಷ್ಟವಾಗಿದ್ದು, ಇಲ್ಲಿ ನಾಗಬಂಧದ ಅಲಂಕರಣವಿರುವ ಛಾವಣಿ ಗಣಪತಿ ಹಾಗೂ ಲಿಂಗವಿರುವ ಗುಡಿ ಇವೆ. ಅಲಿಆದಿಲ್ ಷಾ ಕಾಲದಲ್ಲಿ ಕಟ್ಟಿಸಿದ ಜುಮ್ಮಾಮಸಿದಿ, ಸಜಾಮಶೀದಿ ಕಾಲಿ ಮಸೀದಿಯನ್ನು ನೋಡಬಹುದು. ಇಲ್ಲಿಯ ಜಗದೀಶ ತೋಂಡುರರವರನ್ನು ವಿಶೇಷವಾಗಿ ಬೇಟಿಯಾಗಬೇಕಾಗುತ್ತದೆ ಕಾರಣ ಇವರು ಬಂಜೆ ಹಸುಗಳನ್ನು ಸಾಕುವದರೋಂದಿಗೆ ಪುರಾಣಗಳನ್ನು ಹೇಳುತ್ತಾ ಏನನ್ನು ಬಯಸದ ಸಮಾಜೋದ್ಧಾರಕರಾಗಿದ್ದಾರೆ.

ಗೋಟಗೋಡಿ: ಇಲ್ಲಿ ಅತ್ಯಂತ ವಿಶಿಷ್ಟವಾದಂತಹ ಹಳ್ಳಿಯ ವಾತಾವರಣವನ್ನು ಕೃತಕವಾಗಿ ಮಣ್ಣಿನಿಂದ ಮಾಡಿದ ಮನುಷ್ಯರ ಹಾಗೂ ಪ್ರಾಣಿಗಳ ಮೂರ್ತಿಗಳನ್ನು ನಿರ್ಮಿಸಿದ್ದಾರೆ. ಇಲ್ಲಿ ನಾವು ದೋಣಿಯ ಮುಖಾಂತರ ಜಲವಿಹಾರವನ್ನು ಅನುಭವಿಸಬಹುದು. ಇಲ್ಲಿಯ ಜಾನಪದ ವಿಶ್ವವಿದ್ಯಾಲಯ ಜಗತ್ತಿನ ಏಕೈಕ ವಿಶ್ವವಿದ್ಯಾಲಯದ ಹೆಮ್ಮೆಗೆ ಪಾತ್ರವಾಗಿದೆ.

ಬನ್ನಿಕೊಪ್ಪ: ಶಾಸನೋಕ್ತವಾಗಿ “ಬನ್ನಿಯೂರು ಎಂದು ಉಲ್ಲೇಖಿತಗೊಂಡಿದ್ದು ಮಹಾಭಾರತದ ಪೌರಾಣಿಕ ಹಿನ್ನೆಲೆಯಿಂದ ನೋಡಿದಾಗ ಇಲ್ಲಿ ಅವುಗಳಿಗೆ ಆದಾರವಾಗಿ ಸಹದೇವೇಶ್ವರ ಮತ್ತು ನಕುಲೇಶ್ವರ ಲಿಂಗಗಳಿವೆ. ಧರ್ಮಶ್ವರದ ಉತ್ತರದ ಹಿಂಭಾಗದಲ್ಲಿ ಹಳ್ಳವಿದ್ದು ಅದರ ಆಚೆಗೆ ಭೀಮೇಶ್ವರ ಸಣ್ಣ ಗುಡಿಯಿದೆ. ಈ ದೇವಾಲಯದಲ್ಲಿ ನಾಗರಪಂಚಮಿ ಹಾಗೂ ಯುಗಾದಿಗೆ ವಿಶೇಷ ಪೂಜೆ ನಡೆಯುತ್ತದೆ ಮತ್ತು ಜಾತ್ರೆಯು ಜರುಗುತ್ತದೆ.

ಬಾಡ: ಬಾಡ ಮತ್ತು ಹಳೆಯಬಾಡ ಜೋಡಿ ಗ್ರಾಮಗಳಾಗಿದ್ದು, ಬಂಕಾಪುರದ ಕದಂಬರ ಆಡಳಿತಕ್ಕೆ ಒಳಪಟ್ಟಿದ್ದು, ಆದಿಲ್‍ಷಾಹಿಗಳು ಇದಕ್ಕೆ ಇಸ್ಲಾಂಪುರ ಎಂದು ಹೆಸರಿಟ್ಟಿದ್ದರು. ಇದು ಕನಕದಾಸರ ಜನ್ಮಭೂಮಿಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಅವರ ಅರಮನೆಯ ತಳಪಾಯವನ್ನು ಹಳೆಬಾಡದಲ್ಲಿ ಪತ್ತೆಹಚ್ಚಿದ್ದಾರೆ. ಇವರ ಸಾಹಿತ್ಯದ ಶ್ರೇಷ್ಟತೆಯನ್ನು ಎತ್ತಿ ಹಿಡಿಯಲು ಸರಕಾರವು ಹೊಸದಾಗಿ ಕನಕದಾಸರ ಕೋಟೆಯನ್ನು ಗುಡ್ಡದ ಮೇಲೆ ನಿರ್ಮಿಸಿ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದಾರೆ. ಇಲ್ಲಿಯೇ ಮಂಟಪದ ಪರಿಸರದಲ್ಲಿ ತೀರ ದೊಡ್ಡದಾದ ಹಳೆಯ ದೇವಾಲಯದ ತಳಪಾಯ ಮಾತ್ರ ಉಳಿದಿದೆ. ಇದರಲ್ಲಿ ಬಸವ ವಿಗ್ರಹ, ಭಗ್ನ ದೇವಿಯ ಮೂರ್ತಿ, ಪಾಣಿಪೀಠವಿದ್ದು, ಅದರಲ್ಲಿಯ ಕೇಶವ ಮೂರ್ತಿಯನ್ನು ಕನಕದಾಸರು ಕಾಗಿನೆಲೆಗೆ ಒಯ್ದರೆಂಬ ಪ್ರತೀತಿಯಿದೆ.

ಶಿಶುನಾಳ: ಈ ಪುರತನ ಗ್ರಾಮ ಇಲ್ಲಿಯ ಶಿಶುವಿನಹಾಲೇಶ್ವರನಿಂದ ಪ್ರಸಿದ್ದಿಯನ್ನು ಪಡೆದಿದ್ದು ಇದರಿಂದಾಗಿಯೆ ಈ ಗ್ರಾಮಕ್ಕೆ ಹೆಸರು ಬಂದಿತು. ಕರ್ನಾಟಕದ ಕಬೀರರೆಂದೇ ಪ್ರಖ್ಯಾತರಾದ ಕವಿ ಷರೀಫ ಸಾಹೇಬರ ಜನ್ಮಸ್ಥಳ ಇದಾಗಿದೆ. ಶರೀಫಸಾಹೇಬರ  ಮನೆಯನ್ನು ಮತ್ತು ಅವರು ನಮಾಜ ಮಾಡುತ್ತಿದ್ದ ಮಸೀದಿಯನ್ನು ಊರಿನಲ್ಲಿ ನೋಡಬಹುದು ಮತ್ತು ಅವರ ಸಮಾಧಿಯನ್ನು ಊರ ಹೊರಗೆ ಅಂದರೆ ಅವರ ಹೊಲದಲ್ಲಿ ನೋಡಬಹುದು. ಅವರ ತಮ್ಮ ಲಾವಣಿ ನೀತಿ ಪದಗಳಲ್ಲಿ ಬಳಸಿರುವ “ಶಿಶುನಾಳಧೀಶ” ಈ ಗ್ರಾಮದ ಅಧಿದೇವತೆಯಾಗಿದ್ದು ಸ್ತಂಭದ ಮೇಲಿರುವ ನಂದಿಯೇ (ಬಯಲು ಬಸವಣ್ಣ) ಆ ದೇವರಾಗಿದ್ದು, ಅದರ ಸ್ತಂಬದ ಮೇಲೆ ಶಾಸನವಾಗಿದ್ದು (12-13 ನೇ ಶತಮಾನದ ಶಾಸನ ಭೋಗನಾಥ ಮತ್ತು ಮಲ್ಲಿನಾಥ ದೇವರಿಗೆ ಬಿಟ್ಟ ದಾನವನ್ನು ಸೂಚಿಸುತ್ತದೆ.) ಹಾಳಾಗಿದೆ.

ಹುಲಗೂರು: ಶಾಸನೋಕ್ತವಾಗಿ “ಪುಲ್ಲುಂಗೂರು”, ಹುಲ್ಲಂಗೂರು, ಹೂಲಗೂರು ಎಂದು ಉಲ್ಲೇಖಿತವಾಗಿರುವ ಪುರಾತನ ಗ್ರಾಮ. ರಾಷ್ಟ್ರಕೂಟರ ಕಲ್ಯಾಣದ ಚಾಳುಕ್ಯರ ಚಾಳುಕ್ಯರ, ಯಾದವರ ಮತ್ತು ಕಲುಚೂರಿ ಅರಸರ ಆಡಳಿತಕ್ಕೆ ಒಳಪಟ್ಟಿತ್ತು. ಕ್ರಿ.ಶ 1245 ರ ಶಾಸನದಲ್ಲಿ ಕದಂಬ ಮಲ್ಲಿದೇವನ ರಾಣಿ ಪದ್ಮಲದೇವಿ ಹುಲಗೂರಲ್ಲಿ ಪ್ರಸನ್ನಕೇಶವ, ಮಾಧವ ಹಾಗೂ ನಾರಾಯಣ ದೇವರ ಮೂರ್ತಿ ಪ್ರತಿಷ್ಠಾಪನೆ ಮಾಡಿ ಪ್ರಸನ್ನಪುರಿ ಎಂಬ ಬ್ರಹ್ಮಪುರಿಯನ್ನು ಸ್ಥಾಪಿಸಿದ ವಿಷಯ ತಿಳಿಸುತ್ತದೆ. ಊರ ಹೊರಗೆ ಪಾಣಿಗಟ್ಟಿಯ ದಾರಿಯಲ್ಲಿ ಕ್ರಿ.ಶ 1800 ರಲ್ಲಿ ಜೀವಿಸಿದ್ದು ಅವರ ಹಜರತ್ ಷಾ ಖಾದ್ರಿಯ ದರ್ಗಾವನ್ನು ನೋಡಬಹುದು.


Comments

Popular posts from this blog

ಹೊಯ್ಸಳರ ಲಾಂಛನದಲ್ಲಿಯ ಪ್ರಾಣಿ ಹುಲಿಯಲ್ಲ ಸಿಂಹ...!

ಹಾವೇರಿ ಜಿಲ್ಲೆಯಲ್ಲಿಯ ಶಾಸನಗಳಲ್ಲಿ ಬಸವಣ್ಣನವರು