ಧಾರ್ಮಿಕ ಆತ್ಮಬಲಿದಾನ ಸ್ಮಾರಕಶಿಲ್ಪಗಳಲ್ಲಿಯ ಸಂಕೇತಗಳ ವಿಶ್ಲೇಷಣೆ” - ವೈ ಮದ್ದಾನಸ್ವಾಮಿ


“ಧಾರ್ಮಿಕ ಆತ್ಮಬಲಿದಾನ ಸ್ಮಾರಕಶಿಲ್ಪಗಳಲ್ಲಿಯ ಸಂಕೇತಗಳ ವಿಶ್ಲೇಷಣೆ” (ಹಾವೇರಿ ಜಿಲ್ಲೆಯನ್ನು ಅನುಲಕ್ಷಿಸಿ)
                           
ಮೊದಲು ಧಾರವಾಡ ಜಿಲ್ಲೆಯ ಅವಿಭಾಜ್ಯ ಅಂಗವಾಗಿದ್ದ ಹಾವೇರಿ ಜಿಲ್ಲೆಯು, ಧಾರವಾಡ ಜಿಲ್ಲೆಯಿಂದ ಬೇರ್ಪಟ್ಟು ದಿನಾಂಕ 24-08-1997 ರಂದು ಹೊಸ ಜಿಲ್ಲೆಯಾಗಿ ರೂಪಗೊಂಡಿತು. ಸದ್ಯದಲ್ಲಿ ಹಾವೇರಿಯು  ಬ್ಯಾಡಗಿ, ರಾಣೇಬೆನ್ನೂರು, ಶಿಗ್ಗಾಂವಿ, ಹಾನಗಲ್ಲು, ಸವಣೂರು, ಹಿರೇಕೆರೂರು, ರಟ್ಟಿಹಳ್ಳಿ ಮತ್ತು ಹಾವೇರಿ ಎಂಬ ಎಂಟು ತಾಲೂಕುಗಳನ್ನು ಒಳಗೊಂಡ ವಿಶಾಲ ಜಿಲ್ಲೆಯಾಗಿದೆ. ಹಾವೇರಿ ಜಿಲ್ಲೆಯು 4823 ಚದರ ಕಿ. ಮೀ. ವಿಸ್ಥೀರ್ಣವನ್ನು ಹೊಂದಿದ್ದು, ಇದು ಮಲೆನಾಡು, ಅರೆಮಲೆನಾಡು, ಮತ್ತು ಬಯಲುಸೀಮೆಗಳಿಂದ ಕೂಡಿದೆ. ಹಾವೇರಿ ಜಿಲ್ಲೆಯು ಧಾರವಾಡ, ಗದಗ, ಶಿವಮೊಗ್ಗ, ದಾವಣಗೆರೆ, ಉತ್ತರಕನ್ನಡ ಮತ್ತು ಬಳ್ಳಾರಿ ಜಿಲ್ಲೆಗಳೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ.1 
      ಈವರೆಗೆ ಬಲಿದಾನ ಸ್ಮಾರಕಶಿಲ್ಪಗಳನ್ನು ಕುರಿತು ನಡೆದ ಪ್ರಮುಖ ಅಧ್ಯನಗಳೆಂದರೆ ಡಾ. ಜೆ. ಎಂ. ನಾಗಯ್ಯನವರ “ಆತ್ಮಬಲಿದಾನ”, ಡಾ. ಎಂ. ಎಂ, ಕಲಬುರ್ಗಿಯವರ “ಸಮಾಧಿ-ಬಲಿದಾನ-ವೀರಮರಣ ಸ್ಮಾರಕಗಳು”, ಡಾ.ಎಂ. ಚಿದಾನಂದಮೂರ್ತಿಯವರ “ಕನ್ನಡ ಶಾಸನಗಳ ಸಾಂಸ್ಕøತಿಕ ಅಧ್ಯಯನ”, ಡಾ.ಡಿ.ವಿ. ಪರಮಶಿವಮೂರ್ತಿಯವರ “ಕನ್ನದ ಶಾಸನಶಿಲ್ಪ”, ಡಾ. ಎಂ. ಜಿ. ಮಂಜುನಾಥರವರ “ನಿಸಿದಿ ಶಾಸನಗಳ ಸಾಂಸ್ಕøತಿಕ ಅಧ್ಯಯನ”, ಡಾ. ಆರ್. ಶೇಷಶಾಸ್ತ್ರಿಯವರ “ಕರ್ನಾಟಕದ ವೀರಗಲ್ಲುಗಳು”, ಡಾ. ಬಿ. ಎಸ್. ಶೇಠೆಯವರ “ಕರ್ನಾಟಕದಲ್ಲಿ ಸತಿಪದ್ಧತಿ”, ಡಾ. ಬಸವರಾಜ ಕಲ್ಗುಡಿಯವರ “ಮಹಾಸತಿ ಆಚರಣೆ ಒಂದು ಅಧ್ಯಯನ” ಮುಂತಾದವುಗಳನ್ನು ಹೆಸರಿಸಬಹುದು. ಅಲ್ಲದೆ ಇದರ ಬಗ್ಗೆ ಕರ್ನಾಟಕದ ಕೆಲವು ಜಿಲ್ಲೆ ಮತ್ತು ತಾಲೂಕವಾರು ಬಿಡಿ ಲೇಖನಗಳು ಈವರೆಗೆ ಪ್ರಕಟವಾಗಿವೆ. ಆದರೆ ಇವುಗಳು ಹಾವೇರಿ ಜಿಲ್ಲೆಯ ಸಮಗ್ರ ಬಲಿದಾನ ಸ್ಮಾರಕಶಿಲ್ಪಗಳ ಬಗ್ಗೆ ಮಾಹಿತಿಯನ್ನು ನೀಡುವುದಿಲ್ಲ. ಈ ನಿಟ್ಟಿನಲ್ಲಿ ಹಾವೇರಿ ಜಿಲ್ಲೆಯ ಬಲಿದಾನ ಸ್ಮಾರಕಶಿಲ್ಪಗಳ ವಿವರಣೆಯನ್ನು ಒಳಗೊಂಡ ಈ ಲೇಖನವು ಆ ಕೊರತೆಯನ್ನು ನೀಗಿಸುವ ಒಂದು ಕಿರು ಪ್ರಯತ್ನ ಎಂದು ಹೇಳಬಯಸುತ್ತೇನೆ.
    ನನ್ನ ಸಂಶೋಧನಾ ಕಾರ್ಯನಿಮಿತ್ತ ಹಾವೇರಿ ಜಿಲ್ಲೆಯ ಕ್ಷೇತ್ರಕಾರ್ಯವನ್ನು ಕೈಗೊಂಡ ನಾನು ಅಲ್ಲಿಯ ಪ್ರತಿಯೊಂದು ಗ್ರಾಮಗವÀನ್ನು ಸಂಧರ್ಶಿಸಿ ಧಾರ್ಮಿಕಾ ಆತ್ಮಬಲಿದಾನ ಸ್ಮಾರಕಶಿಲ್ಪಗಳನ್ನು ಪತ್ತೆಹಚ್ಚಿದ್ದೇನೆ. ಜಿಲ್ಲೆಯಾದ್ಯಂತ ಈವರೆಗೆ ಹದಿನಾಲ್ಕು ಧಾರ್ಮಿಕಾ ಆತ್ಮಬಲಿದಾನ  ಸ್ಮಾರಕಶಿಲ್ಪಗಳು ದೊರಕಿದ್ದು, ಅವುಗಳಲ್ಲಿ ಐದು ಶಾಸನಸಹಿತ ಉಳಿದ ಒಂಭತ್ತು ಶಾಸನರಹಿತ ಧಾರ್ಮಿಕಾ ಆತ್ಮಬಲಿದಾನ ಸ್ಮಾರಕಶಿಲ್ಪಗÀಳಾಗಿವೆ. ಇವುಗಳು ಸ್ಮಾರಕಶಿಲ್ಪಗಳಲ್ಲಿಯೇ ವಿಶಿಷ್ಟ ಪ್ರಕಾರದವುಗಳಾಗಿದ್ದು ವೈವಿಧ್ಯೆತೆಯಿಂದ ಕೂಡಿವೆ. ಪ್ರಸ್ತುತ ಸಂಶೋಧನ ಲೇಖನದಲ್ಲಿ ಹಾವೇರಿ ಜಿಲ್ಲೆಯ ಧಾರ್ಮಿಕಾ ಆತ್ಮಬಲಿದಾನ ಸ್ಮಾರಕಶಿಲ್ಪಗಳನ್ನು ಕೇಂದ್ರವಾಗಿಟ್ಟುಕೊಂಡು ವಿಶ್ಲೇಸಿಸಲು ಪ್ರಯತ್ನಿಸಲಾಗಿದೆ. ಮೇಲಿನ ಗ್ರಂಥಗಳನ್ನು ಲೇಖನ ತಯಾರಿಸುವಲ್ಲಿ ಬಳಸಿದ್ದರೂ ಕ್ಷೇತ್ರಕಾರ್ಯವೇ ಪ್ರಬಂಧದ ಜೀವಾಳವಾಗಿದೆ. 

ಆತ್ಮಬಲಿದಾನದ ಅರ್ಥ:
          ಆತ್ಮಬಲಿ ಎಂದರೆ ಆತ್ಮಾಹುತಿ’ ಅಥವಾ ಯಾವುದೇ ಆದರ್ಶಕ್ಕಾಗಿ ಪ್ರಾಣಾರ್ಪಣೆ (ಪ್ರಾಣತ್ಯಾಗ) ಮಾಡುವುದು ಎಂದರ್ಥ. ಕರ್ತವ್ಯದ ದೃಷ್ಟಿಯಿಂದ ಅಥವಾ  ಪರಹಿತಕ್ಕಾಗಿ ಸ್ವ-ಹಿತವನ್ನು ಬಿಟ್ಟುಕೊಡುವುದು ಎಂದರ್ಥ. ಬಲಿ, ಪಶುಬಲಿ, ನರಬಲಿ, ಕಾಣಿಕೆಯಾಗಿ ದೇವರಿಗೆ ಪ್ರಾಣಿಯನ್ನು ಬಲಿಕೊಡುವುದು ಅಥವಾ ವ್ಯಕ್ತಿ ತನ್ನ ಪ್ರಾಣವನ್ನು ದೇವರಿಗೆ ತ್ಯಾಗ ಮಾಡುವುದು ಎಂಬರ್ಥದಲ್ಲಿ ಹೇಳಬಹುದು. ಅಲ್ಲದೆ ಮಹಾತ್ಯಾಗ ಅಥವಾ ಯುದ್ಧದಲ್ಲಿ ಸ್ವದೇಶಕ್ಕಾಗಿ ಪ್ರಾಣತ್ಯಾಗ ಎಂಬ ಅರ್ಥಗಳೂ ಉಂಟು.  ಅಂದರೆ ಒಬ್ಬ ವ್ಯಕ್ತಿ ಸ್ವ-ಇಚ್ಛೆಯಿಂದ ಧಾರ್ಮಿಕ ಕಾರಣಕ್ಕೋ, ಸಾಮಾಜಿಕ ಕಾರಣಕ್ಕೋ ಅಥವಾ ಒಂದು ನಿರ್ದಿಷ್ಟ ಮೌಲ್ಯಕ್ಕೋ ತನ್ನನ್ನು ತಾನು ಬಲಿಕೊಟ್ಟುಕೊಳ್ಳುವುದು ಆತ್ಮಬಲಿದಾನವೆನಿಸಿಕೊಳ್ಳುತ್ತದೆ. ಆತ್ಮಬಲಿದಾನಗೈಯವುವವರು ಬದುಕುವ ಆಸೆಯನ್ನು ತೊರೆದು ತಾವು ಆದರ್ಶವೆಂದು ಭಾವಿಸಿದ ಒಂದು ಭಾವನೆಗಾಗಿ ತಮ್ಮನ್ನು ತಾವು ಕೊಂದುಕೊಂಡದ್ದನ್ನು ನೆನಪಿಗೆ ತಂದುಕೊಂಡರೆ ಅವರ ವಿಷಯದಲ್ಲಿ ಆಗಾಧವಾದ ಗೌರವವೂ, ಭಕ್ತಿಯೂ, ಹೆಮ್ಮೆಯೂ ಮೂಡುತ್ತದೆ. ಆದರೆ ಆಧುನಿಕ ಯುಗದ ನಮಗೆ ಈ ಪದ್ದತಿಗಳು ಬಹು ವಿಚಿತ್ರವಾಗಿಯೂ, ಅನಾಗರಿಕವಾಗಿಯೂ ತೋರುತ್ತª.É 
 
ಸ್ಮಾರಕಶಿಲ್ಪಗಳಲ್ಲಿ ಸಂಕೇತಗಳು :
‘ಸಂಕೇತ’ ಎಂಬ ಶಬ್ಧವು ಬೇರೆ ಬೇರೆ ಅರ್ಥಗಳನ್ನು ಹೊಂದಿದೆ.  ಏನನ್ನಾದರೂ ತೋರಿಸುವ ಚಿಹ್ನೆ, ಸನ್ನೆ, ಸೂಚನೆ, ಅಪ್ರತ್ಯಕ್ಷ ಸೂಚನೆ ಅಥವ ಒಂದು ಗುರುತನ್ನು ಸಂಕೇತ ಎಂದು ಹೇಳಬಹುದು. 

  ‘ವಿಶಾಲಾರ್ಥವನ್ನು ತಿಳಿಸುವ ನಿರ್ದಿಷ್ಟ ಚಿಹ್ನೆಗಳೇ ಸಂಕೇತ’ ಎಂಬ ವ್ಯಾಖ್ಯಾನವಿದೆ.  ವಸ್ತುವಿನ ಗುಣವನ್ನು ವಿಶೇಷ ಅರ್ಥದೊಂದಿಗೆ ತಿಳಿಸುವ, ಅಂತರಾರ್ಥವನ್ನು ಹೊಂದಿರುವ, ನೋಡಿದ ತಕ್ಷಣ ಮನದಲ್ಲಿ ಒಂದು ವಿಶಿಷ್ಟ ಮನೋಭಾವ ಮೂಡುವ ಸಂಕ್ಷೇಪ ಗುರುತುಗಳನ್ನು ಸಂಕೇತಗಳು ಎಂದು ವಿವರಿಸಬಹುದು.  ಹಾಗೆ ನೋಡಿದರೆ ಭಾಷೆ ಮತ್ತು ಲಿಪಿಯ ಮೂಲವು ಸಂಕ್ಷೇಪಗಳಿಂದಲೇ ಪ್ರಾರಂಭವಾಯಿತು. ಸಂಕೇತಗಳು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ, ಒಂದು ಜನಾಂಗದಿಂದ ಇನ್ನೊಂದು ಜನಾಂಗಕ್ಕೆ, ಒಂದು ಕಾಲದಿಂದ ಇನ್ನೊಂದು ಕಾಲಕ್ಕೆ ಬದಲಾವಣೆಗೊಳ್ಳುತ್ತವೆ. ಇವು ಆಯಾ ಧರ್ಮ, ಸಮಾಜ ಮತ್ತು ಸಾಂಸ್ಕøತಿಕ ಹಿನ್ನೆಲೆಯಲ್ಲಿ ರೂಪಗೊಂಡಿರುತ್ತವೆ. ಶಾಸನಗಳು ಆಯಾ ಸಮಕಾಲೀನ ಸಮಾಜದ, ಧರ್ಮದ ಸಂಸ್ಕøತಿಯನ್ನು ಪ್ರತಿಫಲಿಸುವುದರಿಂದ ಅವುಗಳ ಅಧ್ಯಯನ ಪ್ರಾಮುಖ್ಯತೆಯನ್ನು ಪಡೆದುಕೊಂಡಿತು.

 ಶಾಸನಪಾಠದಿಂದ ಹೇಳಲಾಗದ ಹಲವಾರು ವಿಷಯಗಳನ್ನು ಶಿಲ್ಪಮಾಧ್ಯಮದಿಂದ ಹೇಳಲು ಪ್ರಾರಂಭಿಸಲಾಯಿತು. ಕಾಲಾಂತರದಲ್ಲಿ ಇದು ಸ್ಮಾರಕಶಿಲ್ಪಗಳ ಉಗಮಕ್ಕೆ ಕಾರಣವಾಯಿತು.  ಇಲ್ಲಿ ಶಿಲ್ಪಗಳಿಗೆ ನಿಜವಾಗಿಯೂ ಸವಾಲಾಗಿದ್ದು ಸ್ಮಾರಕ ಶಿಲೆಗಳಲ್ಲಿ ನಿರೂಪಿಸಬೇಕಾದ ವೀರನ ಶೌರ್ಯ, ತ್ಯಾಗ, ಬಲಿದಾನ, ಮಹಾಸತಿಯರ ಆದರ್ಶಗುಣ, ಭಕ್ತರ ಪಾರಮಾರ್ಥಿಕ ಭಾವನೆಗಳನ್ನು ಎಲ್ಲರಿಗೂ ಅರಿವಾಗುವಂತೆ ಶಿಲ್ಪಗಳಲ್ಲಿ ದೃರ್ಶೀರಿಸಬೇಕಾದದ್ದು. ಶಿಲ್ಪಮಾಧ್ಯಮದಲ್ಲಿ ಹಲವಾರು ಮಿತಿಗಳಿರುವುದರಿಂದ ಹೇಳಬೇಕಾದ ವಿಷಯವನ್ನು ಜನರ ಮನಮುಟ್ಟುವಂತೆ ತಿಳಿಸಲು ಕೆಲವು ಸಂಕೇತಗಳನ್ನು ಬಳಸಲಾಯಿತು.  ಇಂಥ ಸಂಕೇತಗಳನ್ನು ಹೊಂದಿರುವ ಅನೇಕ ಸ್ಮಾರಕಶಿಲ್ಪಗಳು ಪ್ರಸ್ತುತ ಅಧ್ಯಯನ ಪ್ರದೇಶದಲ್ಲಿ ಕಂಡುಬರುತ್ತವೆ. ಅವುಗಳನ್ನು ಧಾರ್ಮಿಕ ಆತ್ಮಬಲಿದಾನಶಿಲ್ಪಗಳಲ್ಲಿಯ ಸಂಕೇತಗಳು, ವೀರಗಲ್ಲುಗಳಲ್ಲಿಯ ಸಂಕೇತಗಳು, ಮತ್ತು ಮಾಸ್ತಿಕಲ್ಲುಗಳಲ್ಲಿಯ ಸಂಕೇತಗಳು ಎಂದು ವಿಭಾಗಿಸಬಹುದು.

1. ಧಾರ್ಮಿಕ ಆತ್ಮಬಲಿದಾನ ಸ್ಮಾರಕಶಿಲ್ಪಗಳಲ್ಲಿ ಸಂಕೇತಗಳು :
ಆತ್ಮಬಲಿದಾನ ಸ್ಮಾರಕಶಿಲ್ಪಗಳನ್ನು ಲೌಕಿಕ ಮತ್ತು ಧಾರ್ಮಿಕ ಎಂದು ಎರಡು ಬಗೆಯಲ್ಲಿ ವಿಂಗಡಿಸಬಹುದು. ಲೌಕಿಕ ಆತ್ಮಬಲಿದಾನದ ಸ್ಮಾರಕಶಿಲ್ಪಗಳೆಂದರೆ ಮಹಾಸತಿ ಕಲ್ಲುಗಳು. ಪ್ರಸ್ತುತ ಲೇಖನದಲ್ಲಿ ಧಾರ್ಮಿಕ ಆತ್ಮಬಲಿದಾನದ ಶಿಲ್ಪಗಳಲ್ಲಿರುವ ಸಂಕೇತಗಳ ಬಗ್ಗೆ ಮಾತ್ರ ವಿಶ್ಲೇಷಿಸಲಾಗಿದೆ.
ಅಗ್ನಿಕುಂಡ :  ಚಿತಾಪ್ರವೇಶ ಮಾಡಿ, ಆತ್ಮಬಲಿದಾನಗೈಯುತ್ತಿದ್ದ ಕೆಲವು ಶಿಲ್ಪಗಳನ್ನು ಕಾಣಬಹುದು. ನಾಗವಂದ ಗ್ರಾಮದಲ್ಲಿರುವ ಆತ್ಮಬಲಿದಾನ ಶಿಲ್ಪದ ಕೆಳಪಟ್ಟಿಕೆಯಲ್ಲಿ ವ್ಯಕ್ತಿಯೊಬ್ಬ (ಬೀಚಿಗ) ಅಗ್ನಿಕುಂಡದ ಮುಂದೆ ಕೈಮುಗಿದು ನಿಂತಿರುವ ಶಿಲ್ಪವಿದೆ. ಬಾಳೂರು ಗ್ರಾಮದ ಆತ್ಮಬಲಿಶಿಲ್ಪವೊಂದರಲ್ಲಿ ಅಗ್ನಿಕುಂಡದ ಕೆನ್ನಾಲಿಗೆಗಳು ಮೇಲ್ಚಾಚಿದಂತೆ ಖಂಡರಿಸಲಾಗಿದ್ದು, ಇದರ ಪಕ್ಕದಲ್ಲಿರುವ ಕಂಬದ ಮೇಲೆ ನಿಂತಿರುವ ವ್ಯಕ್ತಿಯೊಬ್ಬ (ಚಂಡ) ಕುಂಡದಲ್ಲಿ ಪೂಜಾವಸ್ತುಗಳನ್ನು ಸುರಿಯುತ್ತಿದ್ದಾನೆ. ಸದ್ಯ ಕರ್ನಾಟಕ ವಿಶ್ವವಿದ್ಯಾಲಯದ ಕೆ.ಆರ್.ಐ.ನಲ್ಲಿರುವ ತಿಳವಳ್ಳಿಯ ಆತ್ಮಬಲಿಶಿಲ್ಪವೊಂದರ ಕೆಳಪಟ್ಟಿಕೆಯಲ್ಲಿ ಉರಿಯುತ್ತಿರುವ ಅಗ್ನಿಕುಂಡದ ಮುಂದೆ, ಎರಡು ಕಂಬಗಳ ಮಧ್ಯೆ ವ್ಯಕ್ತಿಯೊಬ್ಬ ಕೈಮುಗಿದು ನಿಂತಿರುವ ಶಿಲ್ಪವಿದೆ. ಕಲಕೇರಿಯ ಸೋಮೇಶ್ವರ ಮತ್ತು ಸೂರ್ಯನಾರಾಯಣ ದೇವಾಲಯಗಳ ಸಮುಚ್ಛಯದಲ್ಲಿ ಒಂದು ಶಾಸನರಹಿತ ಚಿತಾಪ್ರವೇಶದ ಶಾಸನಶಿಲ್ಪವಿದೆ. ಇದು ಕುಮ್ಮಾರನಾಗ ಎಂಬುವವನು ಸೂರ್ಯಗ್ರಹಣದ ಸಂದರ್ಭದಲ್ಲಿ ಚಿತಾಪ್ರವೇಶದ ಮೂಲಕ ಸೂರ್ಯಲೋಕ (ಸೂರ್ಯಬಲಿಯಾದ) ಪ್ರಾಪ್ತನಾದ ಬಗ್ಗೆ ತಿಳಿಸುತ್ತದೆ. ಮೂರು ಹಂತಗಳನ್ನು ಹೊಂದಿದ ಇದರ ಒಂದನೆಯ ಹಂತದ ಕೆಳಭಾಗದಲ್ಲಿ ಎತ್ತರವಾದ ಅಗ್ನಿಕುಂಡದ ಮೇಲೆ ಅರಳಿದ ಕಮಲದ ರೂಪದಲ್ಲಿ ಅಗ್ನಿಯ ಕೆನ್ನಾಲಿಗೆಗಳು ಮೇಲ್ಚಾಚಿದಂತೆ ಗೋಚರಿಸುತ್ತವೆ. ಇದರ ಮೇಲ್ಭಾಗದಲ್ಲಿ ವೇದಿಕೆಯ ಮೇಲೆ ಕಮ್ಮಾರನಾಗನು ಭಕ್ತಿಯಿಂದ ಕೈಮುಗಿದು ಅಗ್ನಿಗೆ ಆಹುತಿಯಾಗಲು ತಯಾರಾಗಿ ನಿಂತಿದ್ದಾನೆ. ಇವರ ಪಕ್ಕದಲ್ಲಿ ಸ್ತ್ರೀಯೊಬ್ಬಳು ಚವರಿ ಮತ್ತು ಪೂಜಾ ಸಾಮಗ್ರಿಗಳನ್ನು ಹಿಡಿದು ನಿಂತಿದ್ದಾಳೆ. ಎರಡನೆಯ ಹಂತದಲ್ಲಿ ಕಮ್ಮಾರನಾಗನು ಅಪ್ಸರೆಯರ ಸೊಂಟವನ್ನು ಬಳಸಿದ್ದರೆ ಅಪ್ಸರೆಯರು ತಮ್ಮ ತೋಳುಗಳಿಂದ ಅವನ ಭುಜವನ್ನು ಬಳಸಿ ಸ್ವರ್ಗಕ್ಕೆ ಒಯ್ಯುವ ದೃಶ್ಯವಿದೆ. ಇಲ್ಲಿಯ ಮೂರನೆಯ ಹಂತ ತುಂಬಾ ಸುಂದರವಾಗಿದ್ದು, ಆಯುಧದಾರಿಯಾಗಿ ನಿಂತಿರುವ ಸೂರ್ಯದೇವನ ಬಳಿಯಲ್ಲಿ ಕೈಮುಗಿದು ಕುಳಿತಿರುವ ಬಲಿದಾನಗೈದ ವೀರನ ಶಿಲ್ಪವಿದೆ. ಇದರ ಮೇಲ್ಭಾಗದಲ್ಲಿ ಸೂರ್ಯ-ಚಂದ್ರರ ಶಿಲ್ಪಗಳಿದ್ದು, ರಾಹು (ಸರ್ಪ) ಸೂರ್ಯನನ್ನು ನುಂಗುತ್ತಿರುವಂತೆ ಖಂಡರಿಸಲಾಗಿದೆ. ಇಲ್ಲಿಯ ಕೆಳಹಂತದಲ್ಲಿ ಕಮ್ಮಾರನಾಗನೊಂದಿಗೆ ಚವರಿ ಮತ್ತು ಪೂಜಾ ಸಾಮಗ್ರಿಗಳನ್ನು ಹಿಡಿದು ತಳಕುಕಾಲಿನಲ್ಲಿ ನಿಂತಿರುವ ಸ್ತ್ರೀಯು ಕಮ್ಮಾರನಾಗನ ಹೆಂಡತಿಯಾಗಿದ್ದು, ಸತಿ-ಪತಿಗಳಿಬ್ಬರೂ ಚಿತಾಪ್ರವೇಶ ಮಾಡಿದ್ದಾರೆ ಎಂದು ಜೆ. ಎಂ. ನಾಗಯ್ಯನವರು ತಮ್ಮ ‘ಆತ್ಮಬಲಿದಾನ’ ಗ್ರಂಥದಲ್ಲಿ ತಿಳಿಸುತ್ತಾರೆ. ವಿದ್ವಾಂಸರ ಗ್ರಹಿಕೆ ತಪ್ಪಾಗಿರಬೇಕೆಂಬುದು ನಮ್ಮ ಅಭಿಪ್ರಾಯ. ಏಕೆಂದರೆ ಮೊದಲನೆಯದಾಗಿ ಕಮ್ಮಾರರನಾಗನೊಂದಿಗೆ ಅವನ ಹೆಂಡತಿ (ಸ್ತ್ರೀ) ಆತ್ಮಬಲಿದಾನಗೈದ ಬಗ್ಗೆ ಶಾಸನದಲ್ಲಿ ಮಾಹಿತಿ ಇಲ್ಲ. ಎರಡನೆಯದಾಗಿ ಶಾಸನಶಿಲ್ಪದ ಎರಡನೆಯ ಹಂತದಲ್ಲಿ ಆತ್ಮಬಲಿದಾನಗೈದ ವೀರನನ್ನು ಮಾತ್ರ ಸ್ವರ್ಗಕ್ಕೆ ಒಯ್ಯುವ ಸನ್ನಿವೇಶವಿದೆ. ಅಲ್ಲದೆ ಮೂರನೆಯ ಹಂತದಲ್ಲಿ ಕಮ್ಮಾರನಾಗ ಮತ್ತು ಸೂರ್ಯದೇವನನ್ನು ಹೊರತುಪಡಿಸಿ ಮತ್ತಾವ ಸ್ತ್ರೀ ಶಿಲ್ಪಗಳು ಇಲ್ಲದಿರುವುದನ್ನು ಗ್ರಹಿಸಬಹುದಾಗಿದೆ.  

ಮೇಲಿನ ಶಿಲ್ಪಗಳಲ್ಲಿ ಕಂಡರಿಸಲಾದ ಅಗ್ನಿಕುಂಡಗಳು ಮತ್ತು ಅವುಗಳ ಮುಂದೆ ಕೈಮುಗಿದು ನಿಂತ ವ್ಯಕ್ತಿಯ ಕೆತ್ತನೆಗಳು ವ್ಯಕ್ತಿಯೊಬ್ಬ ಧಾರ್ಮಿಕ ಕಾರಣಕ್ಕಾಗಿ ಅಗ್ನಿಪ್ರವೇಶ ಅಥವಾ ಚಿತಾಪ್ರವೇಶ ಮಾಡಿದ ಅಂಶವನ್ನು ಸಂಕೇತಿಸುತ್ತವೆ. ಸಾತೇನಹಳ್ಳಿಯ ತೃಟಿತ ಆತ್ಮಬಲಿದಾನಶಿಲ್ಪವೊಂದರ ಕೆಳಹಂತದಲ್ಲಿ ಎತ್ತರವಾದ ವೇದಿಕೆಯಂತೆ ಕುಂಡವನ್ನು ಕೆತ್ತಲಾಗಿದೆ. ಅದರ ಮೇಲ್ಭಾಗದಲ್ಲಿ ಬೆಂಕಿಯ ಕೆನ್ನಾಲಿಗೆಗಳು ಉರಿಯುತ್ತಿರುವಂತೆ ಕೆತ್ತಲಾಗಿದೆ. ಈ ಅಗ್ನಿಕುಂಡದ ಮಧ್ಯದಲ್ಲಿ ಕೈಮುಗಿದು ಅಗ್ನಿಕುಂಡದಲ್ಲಿ ಹಾರಿರುವ ಸ್ತ್ರೀಯನ್ನು ಕಂಡರಿಸಲಾಗಿದೆ. ಈ ಶಿಲ್ಪದಲ್ಲಿ ಶಿಲ್ಪಿಯ ಕೈಚಳಕವನ್ನು ಮೆಚ್ಚಲೇಬೇಕು. ಇಲ್ಲಿಯ ಸ್ತ್ರೀಯು ಅಗ್ನಿಕುಂಡದಲ್ಲಿ ಸೊಂಟದವರೆಗೆ ಮುಳುಗಿದ್ದು, ಎದೆಯಿಂದ ಮೇಲ್ಭಾಗ ಮಾತ್ರ ಗೋಚರಿಸುವಂತೆ ಶಿಲ್ಪಿ ಕೆತ್ತಿದ್ದಾನೆ. ಸ್ತ್ರೀಯೊಬ್ಬಳು ಧಾರ್ಮಿಕ ಕಾರಣಕ್ಕಾಗಿ ಅಗ್ನಿಪ್ರವೇಶ ಮಾಡಿ ಆತ್ಮಬಲಿದಾನಗೈದ ಅಪರೂಪದ ಶಿಲ್ಪ ಇದಾಗಿದೆ. ಮೇಲಿನ ಪ್ರತಿಯೊಂದು ಶಿಲ್ಪದಲ್ಲಿ ಕೆತ್ತಲಾಗಿರುವ ಉರಿತ್ತಿರುವ ಅಗ್ನಿಕುಂಡವು ಚಿತಾಪ್ರವೇಶ ಮಾಡಿ ಆತ್ಮಬಲಿದಾನ ಮಾಡಿಕೊಂಡ ಅಂಶವನ್ನು ಸಂಕೇತಿಸುತ್ತದೆ.  ಅಬ್ಬಲೂರಿನಲ್ಲಿಯೂ ಅಗ್ನಿಪ್ರವೇಶಕ್ಕೆ ಸಿದ್ಧನಾಗಿ ನಿಂತಂತಿರುವ ವ್ಯಕ್ತಿಯ ಶಿಲ್ಪವನ್ನು ಕಾಣಬಹುದು.

ಸೂರ್ಯನನ್ನು ನುಂಗುತ್ತಿರುವ ಸರ್ಪ : 
ಹಾವೇರಿ ಜಿಲ್ಲೆಯ ಕಲಕೇರಿಯಲ್ಲಿರುವ ಎರಡು ಆತ್ಮಬಲಿದಾನದ ಶಿಲ್ಪಗಳಲ್ಲಿ, ನಾಗವಂದ, ಬಾಳೂರು ಹಾಗೂ ತಿಳವಳ್ಳಿಯ ಆತ್ಮಬಲಿದಾನದ ಶಿಲ್ಪಗಳ ಮೇಲಿನ ಹಂತದಲ್ಲಿ ಸೂರ್ಯ ಮತ್ತು ಸರ್ಪವನ್ನು ಕಂಡರಿಸಲಾಗಿದೆ. ಇದು ಸೂರ್ಯನನ್ನು ಸರ್ಪವು ನುಂಗುತ್ತಿರುವ ಅಂಶವನ್ನು ಸೂಚಿಸುತ್ತದೆ. ನಮ್ಮ ಪ್ರಾಚೀನರಲ್ಲಿ ಸೂರ್ಯ ಮತ್ತು ಚಂದ್ರರನ್ನು, ರಾಹು ಮತ್ತು ಕೇತು ನುಂಗುವುದರಿಂದ ಗ್ರಹಣಗಳು ಉಂಟಾಗುತ್ತವೆ ಎಂಬ ಬಲವಾದ ನಂಬಿಕೆಯಿತ್ತು. ಅಲ್ಲದೆ ಇದು ಸೂರ್ಯನಿಗೆ ಒದಗಿಬಂದ ಸಂಕಷ್ಟವೆಂದು ಬಗೆಯಲಾಗುತ್ತಿತ್ತು.  ಇಂಥ ಸಂದರ್ಭದಲ್ಲಿ ಸೂರ್ಯನಿಗೆ ಒದಗಿಬಂದ ಕಷ್ಟದಲ್ಲಿ ತಾವೂ ಭಾಗಿಯಾಗುವ ಹಿನ್ನೆಲೆಯಲ್ಲಿ ಸೂರ್ಯ ಬಲಿಯಾಗುವ ಅಥವಾ ಅಗ್ನಿಪ್ರವೇಶ ಮಾಡಿ ಆತ್ಮಬಲಿದಾನಗೈಯುವ ಪರಿಪಾಠ ರೂಢಿಯಲ್ಲಿತ್ತು. ಇಂಥ ಸೂರ್ಯಗ್ರಹಣದ ಸನ್ನಿವೇಶವನ್ನು ಶಿಲ್ಪಿಯು ಸೂರ್ಯನನ್ನು ನುಂಗುತ್ತಿರುವ ಸರ್ಪವನ್ನು (ಹಾವು) ಶಿಲೆಯಲ್ಲಿ ಸಾಂಕೇತಿಕವಾಗಿ ಕೆತ್ತುವ ಮೂಲಕ ಅಭಿವ್ಯಕ್ತಗೊಳಿಸಿದ್ದಾನೆ.  ಇದು ಸೂರ್ಯಗ್ರಹಣದ ಸಂಕೇತವಾಗಿದೆ. 

       ಆಯ್ನೂರ್ವರ ಪುತ್ರನೂ, ಕೋಣವತ್ತಿಯ ಕೇತವೆಯ ಮಗನೂ, ದೇವಿಸೆಟ್ಟಿಯ ತಮ್ಮನೂ ಆಗಿರುವ ಬೊಪ್ಪನು ತಳಿರವಮಾವಾಸ್ಯೆ ಸೋಮವಾರ ಸೂರ್ಯಗ್ರಹಣದ ಸಂದರ್ಭದಲ್ಲಿ ಚಿತಾಪ್ರವೇಶ ಮಾಡಿ ಸೂರ್ಯಲೋಕ ಪ್ರಾಪ್ತವಾದನೆಂದು ತಿಳವಳ್ಳಿಯ  ಕ್ರಿ.ಶ.  1141 ರ ಕಾಲಾವಧಿಯ ಶಾಸನವೊಂದು ತಿಳಿಸುತ್ತದೆ. ಬೊಪ್ಪನ ಸ್ಮರಣೆಗಾಗಿ ತಿಳವಳ್ಳಿಯ ಶೇಷಮಹಾಜನಂಗಳು ಸ್ಮಾರಕ ಶಿಲೆಯನ್ನು ಮಾಡಿಸಿಕೊಟ್ಟರು. ಅದನ್ನು ಬಂಟ ಸಾಸಿರ್ವರು ಬಂಟೇಶ್ವರ ದೇವಾಲಯದ ಆವರಣದಲ್ಲಿ ನಿಲ್ಲಿಸಿದರು ಎಂಬ ವಿವರವಿದೆ. ಈ ಶಾಸನವು ವೀರರ ಒಂದು ಪ್ರಬೇಧವನ್ನು ಸೂಚಿಸುತ್ತದೆ ಮತ್ತು ‘ಬಂಟ ಸಾಸಿರ್ವರು’ ಎಂಬುದು ಅವರು ಸ್ಥಾಪಿಸಿದ ಆಯುಧ ಜೀವಿಗಳ ಸಂಘವನ್ನು ಸೂಚಿಸುತ್ತದೆ. ಲೆಂಕರು ಲಂಕೇಶ್ವರ ದೇವಾಲಯವನ್ನು ನಿರ್ಮಿಸಿದಂತೆ ಬಂಟಸಾಸಿರ್ವರು ‘ಬಟೇಶ್ವರ’ ದೇವಾಲಯವನ್ನು ನಿರ್ಮಿಸಿದ ಬಗ್ಗೆ ಇಲ್ಲಿ ಮಾಹಿತಿ ದೊರೆಯುತತ್ತದೆ. ಈ ಶಾಸನದಲ್ಲಿ

 ‘ಸ್ವಸ್ತಿ’ ಯಮನಿಯಮ ಸ್ವಾಧ್ಯಾಯಧ್ಯಾನಧಾರಣಮ್(ನಾ)ನುಷ್ಟಾಣ ಜಪಸಮಾಧಿಶೀಲಗುಣಸಂಪನ್ನರಪ್ಪ ಶ್ರೀಮದನಾದಿಯಗ್ರಹಾರಂ ತಿಳಿವಳ್ಳಿಯಶೇಷಮಹಾಜನಂಗಳು ಕಲ್ಲಂ ಕೊಟ್ಟರು ಆಯಿನೂವ್ರ್ವರು ಪುತ್ರಂ ಕೋಣವತ್ತಿಯ ಕೇತವೆಯ ಮಗ ದೇವಿಸೆಟ್ಟಿಯ ತಮ್ಮ ಬೊಪ್ಪ ರೌದ್ರ ಸಂವತ್ಸರದ ತಳಿರಮವಾಸೆ ಸೋಮವಾರ ಸೂರ್ಯಗ್ರಹಣ ನಿಮಿತ್ತವಾಗಿ ಪ್ರಾಣಮಂ ತ್ಯಾಗಮಾಡಿ ಸೂರ್ಯಲೋಕ ಪ್ರಾಪ್ತನಾದ “ಇಂತೀಕಲ್ಲಂ ಬಂಟ್ಟಸಾಸಿವ್ರ್ವರ ಧರ್ಮವೂ ಶ್ರೀ ಬಂಟೇಶ್ವರ ದೇವರಲ್ಲಿ ನಿಲ್ಲಿಸಿ (ಪ್ರಾ...ರು) ದ್ವಾವಿವತ್ ಪುರುಶೋ ಲೋಕೆ ಸೂರ್ಯಮಂಡಲಭೇದಿನಃ...ಯೋಗಯುಕ್ತೇಶ| ರಣೇಚಾಭಿಮುಖೇ ಹತಾ||” 

ಎಂದು ಬರುತ್ತದೆ. ಸದ್ಯದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಕೆ.ಆರ್.ಐ ನಲ್ಲಿರುವ ಈ ಸೂರ್ಯಬಲಿ ಶಾಸನಶಿಲ್ಪದ ಕೆಳಪಟ್ಟಿಕೆಯಲ್ಲಿ ತನ್ನ ಕೆನ್ನಾಲಿಗೆಯನ್ನು ಚಾಚಿ ಉರಿಯುತ್ತಿರುವ ಅಗ್ನಿಕುಂಡವಿದೆ. ಅದರ ಬದಿಯಲ್ಲಿ ಬೊಪ್ಪನು ಎರಡು ಕಂಬಗಳ ಮಧ್ಯದಲ್ಲಿ ಅಗ್ನಿಕುಂಡಕ್ಕೆ ಅಭಿಮುಖವಾಗಿ ಕೈಮುಗಿದು ನಿಂತಿದ್ದು, ಅದರಲ್ಲಿ ಬೀಳಲು ಸಿದ್ಧನಾಗಿದ್ದಾನೆ. ಬೊಪ್ಪನ ಎಡಬದಿಯಲ್ಲಿ ಕಮಂಡಲವಿದ್ದು, ಬಲಬದಿಯ ಒಂದು ಕಂಬದ ಮೇಲೆ ಗ್ರಹಣವನ್ನು ವೀಕ್ಷಿಸಲು ದುಂಡನೆಯ ಕನ್ನಡಿಯನ್ನು ಇಡಲಾಗಿದೆ. ಎರಡನೆಯ ಹಂತದಲ್ಲಿ ಬೊಪ್ಪನನ್ನು ಅಪ್ಸರೆಯರು ಸ್ವರ್ಗಕ್ಕೆ ಕೊಂಡೊಯ್ಯುವ ದೃಶ್ಯವಿದೆ. ಮೂರನೆಯ ಹಂತದಲ್ಲಿ ಸೂರ್ಯಲೋಕದಲ್ಲಿ ಕೈಮುಗಿದು ಕುಳಿತಿರುವ ಬೊಪ್ಪನ ಶಿಲ್ಪವಿದ್ದು, ಅವನ ಬಲಬದಿಗೆ ಸರ್ಪವು (ರಾಹು) ಸೂರ್ಯನನ್ನು ನುಂಗುತ್ತಿರುವ ದೃಶ್ಯವಿದೆ. ಇದು ಗ್ರಹಣದ ಬಗೆಗೆ ನಮ್ಮ ಪೂರ್ವಿಕರ ಕಲ್ಪನೆಯನ್ನು ಸೂಚಿಸುತ್ತಿದ್ದು, ಸರ್ಪವು (ರಾಹು) ಸೂರ್ಯನನ್ನು ನುಂಗುವುದು ಸೂರ್ಯಗ್ರಹಣವಾಗುತ್ತಿದೆ ಎಂಬುದರ ಸಂಕೇತವಾಗಿದೆ.  

ಸೂರ್ಯಬಲಿ ಶಿಲ್ಪದಲ್ಲಿ ಕಂಬದ ಮೇಲಿರುವ ದುಂಡನೆಯ ವಸ್ತು : ಹಾನಗಲ್ಲು ತಾಲೂಕಿನ ಬಾಳೂರು ಗ್ರಾಮದ ಆತ್ಮಬಲಿದಾನದ ಶಾಸನವೊಂದು ಸಾಹಣಿ ಮಲ್ಲಯ್ಯನ ಮಗ ಚಂಡನು ದೀಪಾವಳಿ ಅಮವಾಸೆ ವಡ್ಡವಾರ (ಶನಿವಾರ) ದಂದು ಸಂಭವಿಸಿದ ಸೂರ್ಯಗ್ರಹಣದ ಪುಣ್ಯಕಾಲದಲ್ಲಿ ಚಿತಾಪ್ರವೇಶ ಮಾಡಿ ಆತ್ಮಬಲಿದಾನಗೈದ ಉಲ್ಲೇಖವಿದೆ. ಆತ್ಮಬಲಿದಾನದ ವಿಷಯ ಶಾಸನಪಾಠದಲ್ಲಿ ಈ ರೀತಿ ಇದೆ. ‘ಶ್ರೀಮತು ಸಖವ (ರ್ಷ) ದ 1053 ನೆಯ ಸಾಧಾರಣ ಸಂವತ್ಸರದ ಆಶ್ವಯುಜ ಬಹುಳ್ ದೀಪಾವಳಿ ಅಮವಾ.....ವಡ್ಡವಾರದನುದಿ ಶ್ರೀಮತು ಬಾಳೆವೂರ ಬಮ್ಮಗವುಡನ ಮಗ ಕಾಳಗವುಡ ಕೊಟ್ಟ ಕಲು ಸಾಹಣಿ ಮೊಲ್ಲೆಯನ್ ಮಗಂ ಚಣ್ಡಿ ಸೂರಿಯಗ್ರಹಣದಲು ಕಿಚ್ಚು ಹಾಯ್ದು ಸ್ವರ್ಗತ್ಸನಾದ’. ಇಲ್ಲಿ ಅಗ್ನಿಪ್ರವೇಶ ಮಾಡಿದವನು ಚಂಡನಾದರೆ, ಶಾಸನ ಹಾಕಿಸಿದವನು ಬಮ್ಮಗವುಡನ ಮಗ ಕಾಳಗವುಡ ಎಂಬುವವನು. ಈ ಆತ್ಮಬಲಿದಾನ ಶಿಲ್ಪದ ಕೆಳಹಂತದಲ್ಲಿ ಒಂದು ಬದಿಗೆ ಅಗ್ನಿಕುಂಡವನ್ನು ಖಂಢರಿಸಲಾಗಿದ್ದು, ಅಗ್ನಿಯ ಕೆನ್ನಾಲಿಗೆಗಳು ಮೇಲ್ಚಾಚಿವೆ. ಅಗ್ನಿಕುಂಡದ ಪಕ್ಕದಲ್ಲಿರುವ ಕಂಬದ ಮೇಲೆ ಚಂಡನು ನಿಂತು ತನ್ನ ಎರಡೂ ಕೈಗಳಿಂದ ಹೂಗಳನ್ನು ಅಥವಾ ಪೂಜಾವಸ್ತುಗಳನ್ನು ಅಗ್ನಿಕುಂಡದೊಳಗೆ ಸುರಿಯುತ್ತಿದ್ದಾನೆ. ಇದು ಚಂಡನ ಚಿತಾಪ್ರವೇಶವನ್ನು ಸಾಂಕೇತಿಸುತ್ತದೆ. ಚಂಡನು ವೀರಗಚ್ಚೆಯನ್ನು ಹಾಕಿದ್ದು, ತಲೆಯ ಮೇಲೆ ತುರುಬು ಕಟ್ಟಿದ್ದಾನೆ. ಇವನ ಹಿಂದೆ ಕಂಬದ ಮೇಲೆ ದುಂಡನೆಯ ವಸ್ತುವನ್ನು ಇಡಲಾಗಿದೆ. ಇದರ ಮೇಲಿನ ಪಟ್ಟಿಕೆಯಲ್ಲಿ ಅಪ್ಸರೆಯರು ಚಂಡನನ್ನು ಸೂರ್ಯಲೋಕಕ್ಕೆ (ಸ್ವರ್ಗಕ್ಕೆ) ಕೊಂಡೊಯ್ಯುತ್ತಿರುವ ದೃಶ್ಯವಿದೆ. ಎಲ್ಲಕ್ಕೂ ಮೇಲಿನ ಪಟ್ಟಿಕೆಯಲ್ಲಿ ಚಂಡನು ಕೈಮುಗಿದು ಕುಳಿತಿದ್ದು, ಅವನ ಎಡಬದಿಯಲ್ಲಿ ಸರ್ಪಾಕಾರದ ರಾಹು ಸೂರ್ಯನನ್ನು ನುಂಗುತ್ತಿರುವ ಶಿಲ್ಪವಿದೆ. ಇಲ್ಲಿ ಆತ್ಮಬಲಿಗೈಯುವವನ ಹಿಂದೆ ಕಂಬದ ಮೇಲಿರುವ ದುಂಡನೆಯ ವಸ್ತುವು ಸೂರ್ಯಗ್ರಹಣವನ್ನು ವೀಕ್ಷಿಸಲು ಇಟ್ಟ ಕನ್ನಡಿ ಎಂದು ಹೇಳಬಹುದು. ಇಂದಿಗೂ ಸೂರ್ಯಗ್ರಹಣವನ್ನು ನೇರವಾಗಿ ನೋಡುವುದು ಅಶುಭ ಎಂಬ ನಂಬಿಕೆ ಇದೆ. ಅಗ್ನಿಪ್ರವೇಶ ಮಾಡುವವನು ಸೂರ್ಯಗ್ರಹಣವನ್ನು ಕನ್ನಡಿಯಲ್ಲಿ ವೀಕ್ಷಿಸಲು ಅನುಕೂಲವಾಗಲಿ ಎಂಬುದಕ್ಕಾಗಿ ಈ ರೀತಿ ಮಾಡಿರಬಹುದು ಎಂಬ ಪರಮಶೀವಮೂರ್ತಿಯವರ ಅಭಿಪ್ರಾಯ ಸಮಂಜಸವೆನಿಸುತ್ತದೆ. ಸದ್ಯ ಈ ಶಿಲ್ಪವು ಕರ್ನಾಟಕ ವಿಶ್ವವಿದ್ಯಾಲಯದ ಕೆ.ಆರ್.ಐ. ವಸ್ತುಸಂಗ್ರಹಾಲಯದಲ್ಲಿದೆ. ಇಲ್ಲಿಯೇ ಇರುವ ತಿಳವಳ್ಳಿಯ ಅತ್ಮಬಲಿದಾನದ ಶಿಲ್ಪವೊಂದರ ಮೊದಲ ಹಂತದಲ್ಲಿ ಎರಡು ಕಂಬಗಳ ಮಧ್ಯೆ ಕೈಮುಗಿದು ನಿಂತಿರುವ ವ್ಯಕ್ತಿಯು ತನ್ನ ಮುಂದಿರುವ ಅಗ್ನಿಕುಂಡದಲ್ಲಿ ಹಾರಲು ಸಿದ್ಧನಾಗಿ ನಿಂತಿದ್ದಾನೆ. ಈತನ ಎಡಬದಿಗೆ ಕಮಂಡಲವನ್ನು ಕೆತ್ತಲಾಗಿದ್ದು, ಬಲಬದಿಯಲ್ಲಿ ಎತ್ತರವಾದ ಕೋಲಿನ ಮೇಲೆ ದುಂಡನೆಯ ವಸ್ತುವನ್ನು ಇಡಲಾಗಿದೆ. ಮೇಲಿನ ಶಿಲ್ಪಗಳಲ್ಲಿ ಕಂಬ ಮತ್ತು ಕೋಲಿನ ಮೇಲಿರುವ ದುಂಡನೆಯ ವಸ್ತುವು ಕಂಚಿನ ಕನ್ನಡಿಯಾಗಿದೆ. ಸೂರ್ಯಬಲಿಯಾಗುವ ವ್ಯಕ್ತಿಯು ಸೂರ್ಯಗ್ರಹಣವನ್ನು ಈ ಕನ್ನಡಿಯಲ್ಲಿ ನೋಡಿಕೊಂಡು, ಗ್ರಹಣದ ಶುಭಗಳಿಗೆಯಲ್ಲಿ ಅಗ್ನಿಪ್ರವೇಶ ಮಾಡುತ್ತಿದ್ದನು. ಪ್ರಾಚೀನ ಕಾಲದಿಂದಲೂ ಸೂರ್ಯಗ್ರಹಣವನ್ನು ನೇರವಾಗಿ ನೋಡಬಾರದೆಂಬ ನಂಬಿಕೆ ಇರುವುದನ್ನು ಇಲ್ಲಿ ಸ್ಮರಿಸಬಹುದು. (ಈಗಲೂ ಸಹ ನೇರವಾಗಿ ಬರಿಗಣ್ಣಿನಿಂದ ನೋಡಬಾರದೆಂದು ಹೇಳುತ್ತಾರೆ) ಅಗ್ನಿಪ್ರವೇಶ ಮಾಡುವವನು ಸೂರ್ಯಗ್ರಹಣವನ್ನು ಕನ್ನಡಿಯಲ್ಲಿ ವೀಕ್ಷಿಸಲು ಅನುಕೂಲವಾಗಲಿ ಎಂದು ಈ ರೀತಿ ಮಾಡಿರಬಹುದೆಂದು ತೋರುತ್ತದೆ. ಮೇಲೆ ಉಲ್ಲೇಖಿಸಲಾದ ದುಂಡನೆಯ ವಸ್ತುವು ಕನ್ನಡಿಯನ್ನು ಸಂಕೇತಿಸುತ್ತಿದ್ದು ಇದು ವಿಶೇಷವಾಗಿ ಸೂರ್ಯಬಲಿ (ಅಗ್ನಿಪ್ರವೇಶ) ಶಿಲ್ಪಗಳಲ್ಲಿ ಕಂಡುಬರುತ್ತದೆ.
ಎತ್ತರವಾದ ಕಂಬದ ಮೇಲೆ ಕುಳಿತ ವ್ಯಕ್ತಿ ಮತ್ತು ನೆಲದಲ್ಲಿ ನೆಟ್ಟ ಶೂಲ (ಖಡ್ಗ) : 
       ಇದು ಶೂಲಬಲಿಯನ್ನು ಸೂಚಿಸುತ್ತದೆ. ದೇವರು ತನ್ನ ಕೋರಿಕೆಯನ್ನು ಈಡೇರಿಸಿದಾಗ ಹರಕೆಯನ್ನು ಒಪ್ಪಿಸುವುದು ಪ್ರಾಚೀನ ಕಾಲದಿಂದಲೂ ನಡೆದು ಬಂದ ಒಂದು ಪದ್ಧತಿಯಾಗಿದೆ. ಅಂಥ ಆತ್ಮಬಲಿದಾನ ಪದ್ಧತಿಗಳಲ್ಲಿ ಶೂಲಬಲಿಯೂ ಒಂದು. ಹಿರೇಕೆರೂರು ತಾಲೂಕಿನ ಆಲದಗೇರಿಯಲ್ಲಿ ಬಹಳ ಅಪರೂಪದ ಒಂದು ಶೂಲಬಲಿಯ ಶಿಲ್ಪವಿದೆ. ನಾಲ್ಕು ಹಂತಗಳನ್ನು ಒಳಗೊಂಡ ಈ ಶಾಸನಶಿಲ್ಪವು ಶೂಲದ ಮೇಲೆ ಬಿದ್ದು ಬಲಿಯಾಗುವ ವಿಶೇಷ ಸನ್ನಿವೇಶವನ್ನು ವಿವರಿಸುತ್ತದೆ. ಇದರ ಮೊದಲ ಹಂತದಲ್ಲಿ ಬಲಿಯಾಗುವವನು ಕೈಯಲ್ಲಿ ಖಡ್ಗವನ್ನು ಹಿಡಿದು ಮೆರವಣಿಗೆಯಲ್ಲಿ ಹೊರಟಿದ್ದಾನೆ. ಅವನ ಹಿಂದೆ ಸೇವಕನೊಬ್ಬ ವಿಶೇಷ ವಿನ್ಯಾಸದ ಸುಂದರವಾದ ಛತ್ರಿಯನ್ನು ಹಿಡಿದಿದ್ದಾನೆ. ಇವನ ಮುಂದೆ ವಾದ್ಯಮೇಳದವರು ಮತ್ತು ನ್ಲತ್ಯಗಾರರು ಅವನನ್ನು ಮೆರವಣಿಗೆಯಲ್ಲಿ ಕರೆತರುತ್ತಿದ್ದಾರೆ. ನಗಾರಿ, ಡೋಲು, ಮೃದಂಗ, ಜಾಗಟೆ ಮತ್ತು ಝಲ್ಲರಿಗಳ ನಾದಕ್ಕೆ ನೃತ್ಯ ಮಾಡುತ್ತಾ ಸಾಗುವ ಈ ದೃಶ್ಯ ತುಂಬಾ ಮನೋಜ್ಞವಾಗಿ ಮೂಡಿಬಂದಿದೆ. ಎರಡನೆಯ ಹಂತದಲ್ಲಿ ದೊಡ್ಡದಾದ ಕಂಬವೊಂದನ್ನು ನೆಡಲಾಗಿದೆ. ಈ ಕಂಬವು ಮೂರನೆಯ ಹಂತದಲ್ಲೂ ಚಾಚಿರುವಂತೆ ಶಿಲ್ಪಿಯು ಖಂಡರಿಸಿದ್ದಾನೆ. ಕಂಬವನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿದ್ದು, ಕಂಬವು ಆಯತಪ್ಪಿ ಬೀಳದಂತೆ ಎರಡೂ ಕಡೆ ಬಲವಾಗಿ ಹಗ್ಗದಿಂದ ಕಟ್ಟಿ ಎಳೆದು ಬಿಗಿಯಲಾಗಿದೆ. ಕಂಬದ ಬಲಬದಿಗೆ ಬಲಿಯಾಗುವವನು ಕುಕ್ಕರಗಾಲಿನಲ್ಲಿ ಕುಳಿತಿದ್ದಾನೆ. ಅವನ ಹಿಂದೆ ಸೇವಕನು ಛತ್ರಿಹಿಡಿದು ನಿಂತಿದ್ದಾನೆ. ಬಲಿಯಾಗುವವನ ಎದುರು ಎರಡು ದೊಡ್ಡ ಖಡ್ಗಗಳನ್ನು ಮೇಲ್ಮುಖವಾಗಿ ನೆಲದಲ್ಲಿ ನೆಡಲಾಗಿದೆ. ಕಂಬದ ಬಲಬದಿಯಲ್ಲಿ ವಾದ್ಯಮೇಳದವರು ಮತ್ತು ನೃತ್ಯಗಾರರು ಇದ್ದಾರೆ. ಮೂರನೆಯ ಹಂತದಲ್ಲಿ ಕಂಬಕ್ಕೆ ಅಡ್ಡಲಾಗಿ ಕಟ್ಟಿರುವ ಮಣೆಯ ಮೇಲೆ ಶೂಲಬದಿಗೆ ಸಿದ್ದವಾಗಿ ಕುಳಿತಿರುವ ವ್ಯಕ್ತಿಯು ಎಡಗೈಯಿಂದ ಕಂಬವನ್ನು ಹಿಡಿದು ತನ್ನ ಬಲಗೈಯಿಂದ ಕೆಳಗೆ ನಿಂತವರನ್ನು ಹರಸುತ್ತಿದ್ದಾನೆ. ಇವನ ಹಿಂದೆ ಶಾಸನದ ಬಲಬದಿಗೆ ಸಿಂಹದೇಹ ಮತ್ತು ಆನೆಯ ಮುಖವನ್ನು ಹೊಂದಿರುವ ಕಾಲ್ಪನಿಕ ಪ್ರಾಣಿಯೊಂದು (ಪುರುಷಾ ಮೃಗ) ತನ್ನ ಸೊಂಡಿಲಲ್ಲಿ ಸತ್ತ ವ್ಯಕ್ತಿಯೊಬ್ಬನನ್ನು ಹಿಡಿದುಕೊಂಡಿದೆ. ಇವನ ಮುಂದೆ ಒಂದು ಕಂಬವಿದ್ದು, ಅದಕ್ಕೆ ದುಂಡನೆಯ ವಸ್ತುವನ್ನು ತೂಗುಹಾಕಲಾಗಿದೆ. ಇದು ಸೂರ್ಯಗ್ರಹಣವನ್ನು ಸಂಕೇತಿಸುವುದಕ್ಕಾಗಿ ನಿಲ್ಲಿಸಿರುವುದೆಂದು ತೋರುತ್ತದೆ. ನಾಲ್ಕನೆಯ ಹಂತದಲ್ಲಿ ಲಿಂಗುವನ್ನು ಪೂಜಿಸುತ್ತಿರುವ ಅರ್ಚಕ, ನಂದಿ ಮತ್ತು ಕೈಮುಗಿದು ಕುಳಿತಿರುವ ಆತ್ಮಬಲಿದಾನಗೈದ ವೀರನ ಶಿಲ್ಪಗಳಿವೆ. ಅದಕ್ಕೂ ಮೇಲೆ ಸೂರ್ಯ-ಚಂದ್ರರನ್ನು ಖಂಡರಿಸಲಾಗಿದೆ. ಕರ್ನಾಟಕದ ಶೂಲಬಲಿ ಶಿಲ್ಪಗಳಲ್ಲಿ ಅಪರೂಪವೆಂದು ತೋರುವ ಈ ಶಿಲ್ಪವು ಆತ್ಮಬಲಿದಾನದ ಮಾಹಿತಿಯನ್ನು ವಿಶಿಷ್ಟವಾಗಿ ನಿರೂಪಿಸುತ್ತ. ಇದು ವ್ಯಕ್ತಿಯೊಬ್ಬನು ವೈಭವಯುತ ಮೆರವಣಿಗೆಯಲ್ಲಿ ತೆರಳಿ, ಅದಾಗಲೇ ಸಿದ್ಧಪಡಿಸಿರುವ ಎತ್ತರವಾದ ಕಂಬವನ್ನೇರಿ ಕೆಳಗೆ ನೆಲದಲ್ಲಿ ನೆಟ್ಟಿರುವ ಕತ್ತಿಗಳ ಮೇಲೆ ಬಿದ್ದು ಬಲಿದಾನಗೈಯುವ ವಿಷಯವನ್ನು ತಿಳಿಸುತ್ತದೆ. ಧಾರ್ಮಿಕ ಆತ್ಮಬಲಿದಾನಗಳಲ್ಲಿ ಈ ಶೂಲಬಲಿಯೂ ಸಹ ಒಂದು.

ಬಾಗಿದ ಗಳದಲ್ಲಿ ನೇತಾಡುತ್ತಿರುವ ರುಂಡಗಳು
       ಇದನ್ನು ಸಿಡಿತಲೆ ಎಂದು ಕರೆಯಲಾಗುತ್ತದೆ. ಆತ್ಮಬಲಿದಾನ ಪದ್ಧತಿಯಲ್ಲಿ ಇದು ಸಹ ಒಂದು.  ಒಂದು ಬೊಂಬನ್ನು (ಗಳ) ನೆಲದಲ್ಲಿ ಹೂಳಿ, ಮೇಲಿನ ತುದಿಯನ್ನು ಬಾಗಿಸಿ, ಆತ್ಮಬಲಿಯಾಗುವವನ ತಲೆ(ಕೂದಲಿ)ಗೆ ಕಟ್ಟಲಾಗುತ್ತದೆ. ಬೇರೆ ವ್ಯಕ್ತಿಯೊಬ್ಬ ಖಡ್ಗದಿಂದ ರುಂಡವನ್ನು ಕತ್ತಿರಿಸಿದರೆ, ರುಂಡವು ಬೊಂಬಿನೊಂದಿಗೆ ಚಂಗನೆ ಮೇಲಕ್ಕೆ ಚಿಮ್ಮುತ್ತದೆ. ಹರಕೆಹೊತ್ತ ವ್ಯಕ್ತಿಯು ಈ ರೀತಿಯ ಸಿಡಿತಲೆಯನ್ನು ಕೊಡುವ ಪಧ್ದತಿ ಪ್ರಾಚೀನ ಕಾಲದಿಂದಲೂ ನಡೆದುಬಂದಿದೆ. ಇಂಥ ವಿಶಿಷ್ಡ ಪ್ರಸಂಗವನ್ನು ಹೋದಿರುವ ಆತ್ಮಬಲಿದಾನದ ಶಿಲ್ಪವೊಂದು ಹಿರೇಕೆರೂರು ತಾಲೂಕು ಅಬ್ಬಲೂರಿನ  ಸರಸ್ವತಿ ದೇವಾಲಯದ ಹಿಂದೆ ಇದೆ. ಮೂರು ಹಂತಗಳನ್ನು ಒಳಗೊಂಡ ಇದರ ಮೊದಲನೆಯ ಹಂತದ ಬಹುಭಾಗ ನೆಲದಲ್ಲಿ ಹೂತಿದೆ. ಇದರ ಒಂದನೆಯ ಹಂತದಲ್ಲಿ ಶಿಖರವಿರುವ ಮಂಟಪದಲ್ಲಿ ಕುಳಿತ (ತಲೆ ಮಾತ್ರ ಕಾಣುತ್ತದೆ) ವ್ಯಕ್ತಿಯ ಶಿಲ್ಪವಿದೆ. ಎರಡನೆಯ ಹಂತದಲ್ಲಿ ಒಬ್ಬ ಪುರುಷ ಹಾಗೂ ಇಬ್ಬರು ಸ್ತ್ರೀಯರು ಮಂಡಿಯೂರಿ (ವೀರಮಂಡಿಯಲ್ಲಿ) ಕೈಮುಗಿದು ಕುಳಿತಿದ್ದಾರೆ. ಈ ಮೂರು ಜನರ ತಲೆ ದೇಹದಿಂದ ಬೇರ್ಪಟ್ಟಿದೆ. ಈ ಮೂವರ ಮುಂದೆ ಒಂದು ಬೊಂಬನ್ನು ಹುಗಿದು ಅವರ ಮೇಲ್ಭಾಗದಲ್ಲಿ ಅದನ್ನು ಬಾಗಿಸಲಾಗಿದೆ. ಗಳವನ್ನು (ಬೊಂಬು) ಅಲಂಕರಿಸಲಾಗಿದ್ದು, ಅದರ ತುದಿಯಲ್ಲಿ ಒಂದು ರುಂಡವು ನೇತಾಡುತ್ತಿದೆ. ಇನ್ನುಳಿದ ಇಬ್ಬರು ಸ್ತ್ರೀಯರ ರುಂಡಗಳು ಅವರ ಮುಂಡಗಳಿಂದ ಸ್ವಲ್ಪ ಮೇಲ್ಭಾಗದಲ್ಲಿ ನೇತಾಡುತತ್ತಿವೆ. ಈ ಮೂರು ರುಂಡಗಳ ಹಿಂದೆ ದುಂಡನೆಯ ಕನ್ನಡಿಯಾಕಾರದ ವಸ್ತುವಿದ್ದು, ಅದು ಸೂರ್ಯಗ್ರಹಣದ ಸಂಕೇತವನ್ನು ನೀಡುತ್ತದೆ. ಮೂರನೆಯ ಹಂತದಲ್ಲಿ ಲಿಂಗುವನ್ನು ಪೂಜಿಸುತ್ತಿರುವ ಅರ್ಚಕನಿದ್ದು, ಲಿಂಗದ ಆಚೆ ಈಚೆ ಕೈಮುಗಿದು ಕುಳಿತ ನಾಲ್ಕು ಶಿಲ್ಪಗಳಿವೆ. ಅವರ ಮೇಲ್ಭಾಗದಲ್ಲಿ ಚಾಮರ ಬೀಸುತ್ತಿರುವ ಇಬ್ಬರು ಮತ್ತು ಆರತಿಯನ್ನು ಹಿಡಿದಿರುವ ಇಬ್ಬರು ಸ್ತ್ರೀಯರು ನಿಂತಿದ್ದಾರೆ. ಅದಕ್ಕೂ ಮೇಲೆ ಶಂಖ, ಕಹಳೆ, ಜಾಗಟೆ ಮತ್ತು ಮೃದಂಗವನ್ನು ನುಡಿಸುತ್ತಿರುವ ನಾಲ್ಕು ಜನ ವಾದ್ಯಮೇಳದವರಿದ್ದಾರೆ. ಒಂದೇ ಬಾರಿ ಮೂರು ಜನ ಸಿಡಿತಲೆಗೊಟ್ಟ ವಿಷಯವನ್ನು ತಿಳಿಸುವ ಇದೊಂದು ಅಪರೂಪದ ಆತ್ಮಬಲಿದಾನ ಶಿಲ್ಪವಾಗಿದೆ. ಪುರುಷನೊಬ್ಬ ತನ್ನ ಇಬ್ಬರು ಹೆಂಡಂದಿರೊಂದಿಗೆ ಸಿಡಿತಲೆಗೊಟ್ಟ ವಿಷಯ ಇದರಿಂದ ತಿಳಿಯುತ್ತದೆ.  

ರುಂಡ, ಮುಂಡ ಬೇರೆಯಾದ ಶಿಲ್ಪ (ರುಂಡ ಕತ್ತರಿಸುತ್ತಿರುವ ಶಿಲ್ಪ) :ಕಲಕೇರಿಯ ಕಾಳಿಕಾದೇವಿ ದೇವಾಲಯದ ಮುಂದಿರುವ ಆತ್ಮಬಲಿದಾನ ಶಿಲ್ಪದ ಕೆಳಪಟ್ಟಿಕೆಯಲ್ಲಿ ಕೈಮುಗಿದು ಕುಳಿತ ವ್ಯಕ್ತಿಯನ್ನು, ಖಡ್ಗದಿಂದ ಕತ್ತರಿಸಲು ಸಿದ್ಧನಾಗಿ ನಿಂತಿರುವಂತೆ ಕಂಡರಿಲಸಾಗಿದೆ. ಚಿಲ್ಲೂರಿನ ಆತ್ಮಬಲಿದಾನ ಶಿಲ್ಪದ ಮೇಲಿನ ಹಂತದಲ್ಲಿ ಕೈಮುಗಿದು ಕುಳಿತ ವ್ಯಕ್ತಿಯ ರುಂಡವು ಹಾರಿ ಪಕ್ಕಕ್ಕೆ ಬೀಳುತ್ತಿದೆ. ಆತನ ಪಕ್ಕದಲ್ಲಿ ರುಂಡವನ್ನು ಕತ್ತರಿಸಿದವನು ಖಡ್ಗ ಹಿಡಿದು ನಿಂತಿದ್ದಾನೆ. ಕೋಳೂರು ಗ್ರಾಮದಲ್ಲಿರುವ ಆತ್ಮಬಲಿದಾನ ಶಿಲ್ಪವೊಂದರಲ್ಲಿ ವ್ಯಕ್ತಿಯೊಬ್ಬ ಕೈಮುಗಿದು ಕುಳಿತಿದ್ದಾನೆ. ಆತನ ಪಕ್ಕದಲ್ಲಿ ನಿಂತ ವ್ಯಕ್ತಿಯು ಬಲಗೈಯಲ್ಲಿರುವ ಮಚ್ಚನ್ನು ಎತ್ತಿ ಹಿಡಿದಿದ್ದಾನೆ. ಇದೇ ರೀತಿಯ ಇನೊಂದು ಶಿಲ್ಪ ಕಾರಡಗಿಯಲ್ಲಿದೆ.  ಮೇಲಿನ ಶಿಲ್ಪಗಳೆಲ್ಲ ರುಂಡವನ್ನು ಕತ್ತರಿಸಿಕೊಂಡು (ಶಿರಬಲಿ) ಆತ್ಮಬಲಿಗೈದ ಅಂಶವನ್ನು ಸಂಕೇತಿಸುತ್ತವೆ. ರಾಣೇಬೆನ್ನೂರು ತಾಲೂಕಿನ ಬೆನಕನಕೊಂಡ ಗ್ರಾಮದಲ್ಲಿರುವ ಒಂದು ಆತ್ಮಬಲಿದಾನ ಸ್ಮಾರಕಶಿಲ್ಪದ ಕೆಳಪಟ್ಟಿಕೆಯಲ್ಲಿ ಕೈಮುಗಿದು ಕುಳಿತ ಶಿಲ್ಪವಿದ್ದು, ಆತನ ಶಿರವನ್ನು ಕತ್ತರಿಸಿರುವಂತೆ ಕಂಡರಿಸಲಾಗಿದೆ. ಅವನ ಮೇಲ್ಭಾಗದಲ್ಲಿ ಕತ್ತರಿಸಿದ ರುಂಡವನ್ನು ಎಡಗೈಯಲ್ಲಿ ಹಿಡಿದು ಬಲಗೈಯಲ್ಲಿರುವ ಕಿರುಗತ್ತಿಯನ್ನು ಎತ್ತಿ ಹಿಡಿದಿರುವ ಇನ್ನೊಬ್ಬ ವ್ಯಕ್ತಿಯ ಶಿಲ್ಪವಿದೆ. ಚಟ್ಟಯ್ಯನಾಯಕ ತನ್ನ ಒಡೆಯನಿಗೆ ಕೊಟ್ಟ ಬಾಷೆಯಂತೆ  ತಲೆಗೊಟ್ಟ ಎಂದು ಅದರ ಶಾಸನದಲ್ಲಿರುವುದರಿಂದ ಇದು ತಲೆಗೊಟ್ಟು ಆತ್ಮಬಲಿಗೈದುದನ್ನು ಸಂಕೇತಿಸುತ್ತದೆ. ಹಾಗಾಗಿ ಇದೊಂದು ಲೌಕಿಕ ಬಲಿದಾನಶಿಲ್ಪವಾಗಿರಬಹುದೆಂದು ಹೇಳಬಹುದು.
ರುಂಡ ಮಾತ್ರ ಇರುವ ಶಿಲ್ಪಗಳು :
ಕರ್ನಾಟಕದ ಅನೇಕ ಭೈರವ ಮತ್ತು ನಾಥ ಕೇಂದ್ರಗಳಲ್ಲಿ ಕತ್ತರಿಸಿದ ರುಂಡದ ಶಿಲ್ಪಗಳು ಸಿಗುತ್ತಿದ್ದು, ಇವು ಉಗ್ರ ವೀರವ್ರತಗೈದ ವೀರಮಹೇಶ್ವರರ ಆತ್ಮಬಲಿಯ ನಿದರ್ಶನಗಳಾಗಿವೆ. ಸಾಮಾನ್ಯವಾಗಿ ವೀರಭದ್ರ ಮತ್ತು ಸೋಮೇಶ್ವರ ದೇವಾಲಯಗಳ ಆವರಣಗಳಲ್ಲಿ ಇಂಥ ಶಿಲ್ಪಗಳು ಕಂಡುಬರುತ್ತವೆ.  ಇವರು ಭೈರವ (ಕಾಪಾಲಿಕ) ಸಂಪ್ರದಾಯದವರಾಗಿದ್ದು, ಉಗ್ರ ಆಚರಣೆಗೆ ಹೆಸರುವಾಸಿಯಾಗಿದ್ದರು. ಇವರು ಸ್ಥಾವರಲಿಂಗಕ್ಕೆ ತಮ್ಮ ಭಕ್ತಿಯನ್ನು ತೋರ್ಪಡಿಸಲು, ಶಿವಭಕ್ತರ ರಕ್ಷಣೆಗಾಗಿ ಅಥವಾ ಶೈವಧರ್ಮದ ರಕ್ಷಣೆಗಾಗಿ ಇಂಥ ವೀರವ್ರತಗಳನ್ನು ಕೈಗೊಳ್ಳುತ್ತಿದ್ದರು.  ಅಧ್ಯಯನ ಪ್ರದೇಶದ ರಟ್ಟಿಹಳ್ಳಿ, ಶಿಡೇನೂರು, ಕೋಳೂರು ಮತ್ತು ಯಲಗಚ್ಚಗಳಲ್ಲಿ ಕತ್ತರಿಸಿದ ರುಂಡಗಳು ಮಾತ್ರ ಇರುವ ಶಿಲ್ಪಗಳು ಕಂಡುಬರುತ್ತವೆ. ಇವುಗಳಲ್ಲಿ ಪ್ರಮುಖವಾದ ರಟ್ಟಿಹಳ್ಳಿಯ ರುಂಡಸಮರ್ಪಣೆಯ ಪ್ರಸಂಗವನ್ನು ಇಲ್ಲಿ ನೆನೆಯಬಹುದು. ರಟ್ಟಿಹಳ್ಳಿಯ ವೀರಭದ್ರ ದೇವಾಲಯದಲ್ಲಿ ಶಿರಸ್ಸುಪವಾಡ ಮೆರೆದ ವ್ಯಕ್ತಿಯ ನೆನಪಿಗಾಗಿ ಶಿಲೆಯಲ್ಲಿ ಮಾಡಿದ ರುಂಡವನ್ನು ಇಡಲಾಗಿದೆ. ಈ ಶಿರಸ್ಸು ಪವಾಡ ಮಾಡಿದವರು ನೆಸ್ವಿ ಗ್ರಾಮದ ವೀರಬೊಮ್ಮಪ್ಪನವರಾಗಿದ್ದು, ಇವರು ಇಷ್ಟಲಿಂಗಧಾರಿಗಳಾದ ವೀರಶೈವರಾಗಿದ್ದಾರೆ. ಈ ಮನೆತನದವರು ಇಂದಿಗೂ  ರಟ್ಟಿಹಳ್ಳಿ ವೀರಭದ್ರನ ಆರಾಧಕರಾಗಿದ್ದಾರೆ. ಶಿರಸ್ಸು ಪವಾಡ ಮೆರೆಯಲು ಬಳಸಿದ ಗಂಡುಗತ್ತರಿ ಅಥವಾ ಚಂದ್ರಾಯುಧವು ಈ ವೀರಭದ್ರ ದೇವಾಲಯದಲ್ಲಿ ಇಂದಿಗೂ ಇದೆ. ಇದನ್ನು ಕಬ್ಬಿಣದಿಂದ ಮಾಡಲಾಗಿದ್ದು, ಕತ್ತರಿಯ ಭಾಗ 8 ಇಂಚು ಅಗಲವಿದೆ. ಇದರ ಎರಡೂ ತುದಿಗಳಲ್ಲಿ 16 ಇಂಚು ಉದ್ದವಿರುವ ಕಬ್ಬಿಣದ ಸರಪಳಿಗಳು ಇದ್ದು, ಅವುಗಳ ತುದಿಯಲ್ಲಿ ರಿಕಾಪುವಿನ (ಕುದುರೆ ಎರುವಾಗ ಮತ್ತು ಓಡಿಸುವಾಗ ಕಾಲನ್ನು ಇಡಲು ಬಳಸುವ ಸಾಧನ) ರೀತಿಯಲ್ಲಿರುವ ಎರಡು ಸಾಧನಗಳಿದ್ದು, ಅವುಗಳ ಅಗಲ ನಾಲ್ಕುಮುಕ್ಕಾಲು ಇಂಚು ಇದೆ. ಇವುಗಳನ್ನು ಕಾಲಲ್ಲಿ ಮೆಟ್ಟಿ ಚಂದ್ರಾಯುಧವನ್ನು ತಲೆಯ ಹಿಂಭಾಗಕ್ಕೆ ಇಟ್ಟು ಮೇಲಕ್ಕೆದ್ದರೆ ಶಿರವು ಹರಿದುಬರುತ್ತದೆ. ಡಾ. ಜೆ. ಎಂ. ನಾಗಯ್ಯನವರು ಇದರ ಬಗ್ಗೆ ತಮ್ಮ ‘ಆತ್ಮಬಲಿದಾನ’ ಗ್ರಂಥದಲ್ಲಿ ವಿವರಿಸಿದ್ದಾರೆ. ಬ್ಯಾಡಗಿ ತಾಲೂಕಿನ ‘ಶಿಡೇನೂರು ಗ್ರಾಮದ ಹೊರವಲಯದಲ್ಲಿರುವ ವೀರಭದ್ರ ದೇವಾಲಯದ ಆವರಣದಲ್ಲಿ ಒಂದು ಕರಿಕಲ್ಲಿನ ರುಂಡ ಮಾತ್ರವಿರುವ ಶಿಲ್ಪವಿದೆ. ಮೀಸೆ, ವಿಶಾಲ ಹುಬ್ಬು ಮತ್ತು ತಲೆಗೆ ಹಗ್ಗದಂತಹ ಅಲಂಕರಣೆ ಇರುವ ಇದು ಶಿರಸ್ಸು ಪವಾಡ ಮೆರೆದ ಶಿಲ್ಪವೆಂಬುವುದರಲ್ಲಿ ಅನುಮಾನವಿಲ್ಲ.
ಶೂಲಗಳ ಮೇಲೆ ಕುಳಿತ ಅಥವಾ ಶೂಲಗಳನ್ನು ಹಿಡಿದು ನಿಂತ ಶಿಲ್ಪಗಳು :
ಕೆಲವು ಶಿಲ್ಪಗಳಲ್ಲಿ ಇಬ್ಬರು ವ್ಯಕ್ತಿಗಳು ಶೂಲಗಳ ಮೇಲೆ ಕುಳಿತಿರುವಂತೆ ಅಥವಾ ಒಂದು ಕೈಯಲ್ಲಿ ಶೂಲವನ್ನು ಹಿಡಿದು ಇನ್ನೊಂದು ಕೈಯಲ್ಲಿ ಲಿಂಗವನ್ನು ಹಿಡಿದಿರುವಂತೆ ಕಂಡರಿಸಿರುತ್ತಾರೆ.  ಕೆಲವೊಮ್ಮೆ ಇವರೀರ್ವರು ಇಷ್ಟಲಿಂಗವನ್ನು ಹಿಡಿದು ಕುಳಿತಿದ್ದು, ಇವರ ಪಕ್ಕದಲ್ಲಿ ಇಲ್ಲವೆ ಕೆಳಗೆ ಸಾಂಕೇತಕವಾಗಿ ಶೂಲಗಳನ್ನು ಕೆತ್ತಿರುತ್ತಾರೆ.  ಸಾಮಾನ್ಯವಾಗಿ ವೀರಭದ್ರ ದೇವಾಲಯಗಳ ಆವರಣದಲ್ಲಿ ಕಂಡು ಬರುವ ಇಂಥ ಶಿಲ್ಪಗಳನ್ನು ಗುಂಡ ಬ್ರಹ್ಮಯ್ಯಗಳ ಶಿಲ್ಪಗಳೆಂದು ಕರೆಯುತ್ತಾರೆ. ಡಾ.ವಿ. ಶಿವಾನಂದ ಅವರು ‘ಗುಂಡ ಬ್ರಹ್ಮಯ್ಯಗಳ ಚರಿತೆ’ ಗ್ರಂಥದಲ್ಲಿ ಇಂಥ ಶಿಲ್ಪಗಳ ಬಗ್ಗೆ ಪ್ರಥಮ ಬಾರಿಗೆ ಪ್ರಸ್ತಾಪಿಸಿದರು.  ಈ ರೀತಿಯ ಶಿಲ್ಪಗಳು ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ, ಕಲ್ಲೇದೇವರು, ಮುತ್ತೂರು, ಹಿರೇಕೆರೂರು ತಾಲೂಕಿನ ಕುಮ್ಮೂರು ಮತ್ತು ಹಾವೇರಿ (ಸಧ್ಯ ಕ.ವಿ.ವಿ.ಯ ಕೆ.ಆರ್.ಐ. ವಸ್ತುಸಂಗ್ರಹಾಲಯದಲ್ಲಿದೆ) ಗ್ರಾಮಗಳಲ್ಲಿ ಕಂಡುಬರುತ್ತವೆ. ಮೂಲತಃ ಹಾವೇರಿಯ ವೀರಭದ್ರ ದೇವಾಲಯದ ಹಿಂಬದಿಯಲ್ಲಿದ್ದ, ಸದ್ಯ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಸಂಶೋಧನಾ ಸಂಸ್ಥೆಯಲ್ಲಿರುವ ಶಿಲ್ಪದಲ್ಲಿ ಗುಂಡ-ಬ್ರಹ್ಮಯ್ಯರು ಶೂಲದ ಮೇಲೆ ಕುಳಿತಿದ್ದಾರೆ. ಎಡಗೈಯಲ್ಲಿ ಇಷ್ಟಲಿಂಗವನ್ನು ಹಿಡಿದು ಬಲಗೈಯಿಂದ ಅದನ್ನು ಮುಚ್ಚಿದ್ದಾರೆ.  ಇವರು ಕೊರಳಿಗೆ, ಮುಂಗೈಗೆ, ರಟ್ಟೆಗಳಿಗೆ ಮತ್ತು ತಲೆಗೆ ರುದ್ರಾಕ್ಷಿ ಸರ ಧರಿಸಿದ್ದಾರೆ. ಕಿವಿಗಳಲ್ಲಿ ಕುಂಡಲಗಳಿವೆ. ಇವುಗಳಲ್ಲಿ ಒಂದಕ್ಕೆ ಮೀಸೆ ಇಲ್ಲ (ಗುಂಡಯ್ಯ) ಇನ್ನೊಂದಕ್ಕೆ (ಬ್ರಹ್ಮಯ್ಯ) ಮೀಸೆ ಮತ್ತು ಗಡ್ಡ ಇದೆ.  ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಎಂಬ ಗ್ರಾಮದಲ್ಲಿ ಗುಂಡ-ಬ್ರಹ್ಮಯ್ಯರ ದೇವಾಲಯವಿದೆ. ಈ ದೇವಾಲಯದಿಂದಲೇ ಗ್ರಾಮಕ್ಕೆ ಗುಂಡೇನಹಳ್ಳಿ ಎಂಬ ಹೆಸರು ಬಂದಿತೆಂದು ಗ್ರಾಮಸ್ಥರು ಹೇಳುತ್ತಾರೆ. ಗರ್ಭಗೃಹದಲ್ಲಿ ಗುಂಡ-ಬ್ರಹ್ಮಯ್ಯರ ಶಿಲ್ಪಗಳಿದ್ದು ಅವರು ಕಾಚಾ ತೊಟ್ಟಿದ್ದಾರೆ. ಶೂಲದ ಮೇಲೆ ಕುಳಿತಿರುವ ಇಬ್ಬರೂ ಕೈಯಲ್ಲಿ ಇಷ್ಟಲಿಂಗಗಳನ್ನು ಹಿಡಿದಿದ್ದಾರೆ. ಮೊದಲ ವಿಗ್ರಹಕ್ಕೆ ಮೀಸೆ ಇಲ್ಲ. ಎರಡನೆಯ ವಿಗ್ರಹಕ್ಕೆ ಮೀಸೆ, ಗಡ್ಡ ಇದೆ. ತಮ್ಮ ಕಾಲುಗಳಲ್ಲಿ ಕಡಗ (ಗಂಡ ಪೆರಡೇರ) ಹಾಕಿರುವ ಇವರು ಕೊರಳಲ್ಲಿ, ಕಿವಿಗಳಲ್ಲಿ, ಮುಂಗೈಗಳಲ್ಲಿ ಮತ್ತು ರಟ್ಟೆಗಳಲ್ಲಿ ರುದ್ರಾಕ್ಷಿ ಸರಗಳನ್ನು ಧರಿಸಿದ್ದಾರೆ. ಬ್ಯಾಡಗಿ ತಾಲೂಕಿನ ಕಲ್ಲೇದೇವರು ಗ್ರಾಮದಲ್ಲಿರುವ ಕಲ್ಮೇಶ್ವರ ದೇವಾಲಯದ ಬಲಗೋಡೆಯಲ್ಲಿ ಗುಂಡ-ಬ್ರಹ್ಮಯ್ಯರ ಶಿಲ್ಪವಿದೆ. ಇದೊಂದು ಅಪರೂಪದ ಶಿಲ್ಪವಾಗಿದ್ದು, ಇಲ್ಲಿಯ ಗುಂಡ-ಬ್ರಹ್ಮಯ್ಯರು ಬಲಗೈಯಲ್ಲಿ ಖಡ್ಗ ಹಿಡಿದಿದ್ದು, ಎಡಗೈಯಲ್ಲಿ ಇಷ್ಟಲಿಂಗವನ್ನು ಹಿಡಿದಿದ್ದಾರೆ. ಗುಂಡ-ಬ್ರಹ್ಮಯ್ಯರ ಪಕ್ಕದಲ್ಲಿ ಅವರ ಹೆಂಡಂದಿರ ಶಿಲ್ಪಗಳಿದ್ದು, ಅವರು ತಮ್ಮ ತಲೆಗಳನ್ನು ಕಡಿದು ಅವನ್ನು ತಟ್ಟೆಯಲ್ಲಿ ಇಟ್ಟುಕೊಂಡು ಹಿಡಿದು ನಿಂತವರಂತೆ ಕೆತ್ತಲಾಗಿದೆ. ಬ್ಯಾಡಗಿ ತಾಲೂಕಿನ ಮುತ್ತೂರು  ಗ್ರಾಮದ ಕಲ್ಮೇಶ್ವರ ದೇವಾಲಯದ ಮುಂಭಾಗದಲ್ಲಿರುವ ಒಂದು ಗುಂಡ-ಬ್ರಹ್ಮಯ್ಯರ ಶಿಲ್ಪ ವಿಶೇಷವಾಗಿದೆ. ಶಿಲ್ಪದ ಮಧ್ಯದಲ್ಲಿ ಎರಡು ಶೂಲಗಳಿವೆ. ಶೂಲಗಳಿಗೆ ಮಧ್ಯದಲ್ಲಿ ಅಡ್ಡಲಾಗಿ ಮಣೆಯ ರೀತಿಯಲ್ಲಿ ಹಾಕಲಾಗಿದೆ. ಶೂಲಗಳ ಆಚೆ-ಈಚೆ ಮಣೆಯ ಮೇಲೆ ಗುಂಡ-ಬ್ರಹ್ಮಯ್ಯಗಳು ನಿಂತಿದ್ದಾರೆ. ಇಬ್ಬರೂ ತಮ್ಮ ಕೈಗಳಲ್ಲಿ ಇಷ್ಟಲಿಂಗಗಳನ್ನು ಹಿಡಿದಿದ್ದಾರೆ. ಈ ಶಿಲ್ಪದ ಪ್ರಮುಖ ಆಕರ್ಷಣೆ ಎಂದರೆ ಗುಂಡ-ಬ್ರಹ್ಮಯ್ಯರು ನಿಂತಿರುವ ಮಣೆಯ ಕೆಳಗೆ ಅವರ ಪತ್ನಿಯರು ತಮ್ಮ ತಲೆಗಳನ್ನು ಕತ್ತರಿಸಿ ಕೈಗಳಲ್ಲಿ ಹಿಡಿದು ನಿಂತಿರುವುದು. ಈ ಶಿಲ್ಪವು ಮೇಲಿನ ಎಲ್ಲ ಶಿಲ್ಪಗಳಿಗಿಂತ ವಿಭಿನ್ನವಾಗಿ ಮೂಡಿಬಂದಿದೆ.    
  
ಉಯ್ಯಾಲೆಯ ಶಿಲ್ಪ : ಕೆಲವು ಶಿಲ್ಪಗಳಲ್ಲಿ ಉಯ್ಯಾಲೆಯನ್ನು ಕಂಡರಿಸಿರುತ್ತಾರೆ.  ಇಲ್ಲವೆ ಉಯ್ಯಾಲೆಯಲ್ಲಿ ವ್ಯಕ್ತಿಯೊಬ್ಬ ನಿಂತಿರುವಂತೆ ಕೆತ್ತಲಾಗಿರುತ್ತದೆ. ಈ ಉಯ್ಯಾಲೆಯ ಕೆಳಗೆ ಅಗ್ನಿಕುಂಡವನ್ನು ಚಿತ್ರಿಸಲಾಗಿರುತ್ತದೆ. ಇಂಥ ಶಿಲ್ಪಗಳು ಉರಿಉಯ್ಯಾಲೆ ಆತ್ಮಬಲಿದಾನವನ್ನು ಸಂಕೇತಿಸುತ್ತವೆ.  ಹಿರೇಕೆರೂರು ತಾಲೂಕಿನ ವರಾಹ ಗ್ರಾಮದಲ್ಲಿ ಇಂಥ ಒಂದು ಆತ್ಮಬಲಿದಾನದ ಶಿಲ್ಪ ಕಂಡುಬರುತ್ತದೆ. ಶಸ್ತ್ರಾಸ್ತ್ರಗಳನ್ನು ಹಿಡಿದು ಅಲಂಕೃತನಾಗಿ ನಿಂತಿರುವ ವೀರನ ಪಕ್ಕದಲ್ಲಿ ಬಲಗೈ ಮೇಲಕ್ಕೆತ್ತಿ ಅಭಯ ಹಸ್ತದಲ್ಲಿರುವ ಮಾಸ್ತಿಯ ಶಿಲ್ಪವಿದ್ದು, ಅವಳ ಬಲಗೈ ಕೆಳಭಾಗದಲ್ಲಿರುವ ಕಲ್ಲುಮಂಟಪದಲ್ಲಿ ಉಯ್ಯಾಲೆಯನ್ನು ಕಂಡರಿಸಲಾಗಿದೆ. ಯುದ್ಧದಲ್ಲಿ ಮಡಿದ ವೀರನ ಹೆಂಡತಿ ಉರಿಉಯ್ಯಾಲೆಯ ಮೂಲಕ ಅಗ್ನಿ ಪ್ರವೇಶ ಮಾಡಿ ಆತ್ಮಬಲಿ ಮಾಡಿಕೊಂಡ ಅಂಶವನ್ನು ಇದು ಸಂಕೇತಿಸುತ್ತದೆ. ಇದೊಂದು ಲೌಕಿಕ ಆತ್ಮಬಲಿಶಿಲ್ಪವಾಗಿದೆ. ಎಂ.ಎಂ. ಕಲಬುರ್ಗಿಯವರು ಸ್ತ್ರೀ ದೇವತೆಗೆ ಉರಿಉಯ್ಯಾಲೆ ಮೂಲಕ ಆತ್ಮಬಲಿಯಾಗುತ್ತಿದ್ದ ವಿಚಾರವನ್ನು ತಿಳಿಸಿದ್ದಾರೆ , ಜೆ.ಎಂ. ನಾಗಯ್ಯನವರು ಭೈರವನಿಗೂ ಇಂಥ ಆಚರಣೆಯ ಮೂಲಕ ಆತ್ಮಬಲಿಯಾಗುತ್ತಿದ್ದ ವಿಚಾರವನ್ನು ತಿಳಿಸುತ್ತಾರೆ.  

ಆತ್ಮಬಲಿದಾನ ಶಿಲ್ಪಗಳಲ್ಲಿಯ ಇತರೆ ಸಂಕೇತಗಳು : ಹಿರೇಕೆರೂರು ತಾಲೂಕಿನ ಸಾತನೂರು ಗ್ರಾಮದ ರಾಮಲಿಗೇಶ್ವರ ದೇವಾಲಯದಲ್ಲಿರುವ ಭೈರವಶಿಲ್ಪದ ಪಕ್ಕದಲ್ಲಿ ವ್ಯಕ್ತಿಯೊಬ್ಬ ಮಂಡಿಯೂರಿ ಕುಳಿತುಕೊಂಡು ತನ್ನ ಹೊಟ್ಟೆಯನ್ನು ಸೀಳಿ, ಕರುಳುಗಳನ್ನು ಕತ್ತರಿಸಿಕೊಳ್ಳುವ ದೃಶ್ಯವಿದೆ. ಇದು ಭೈರವನಿಗೆ ಆತ್ಮಬಲಿದಾನ ಮಾಡಿಕೊಳ್ಳುತ್ತಿರುವುದನ್ನು ಸಂಕೇತಿಸುತ್ತದೆ. ಕೆಲವು ಶಿಲ್ಪಗಳಲ್ಲಿ ಕೈಮುಗಿದು ಕುಳಿತ ವ್ಯಕ್ತಿಗಳ ಮಧ್ಯದಲ್ಲಿ ಅಥವಾ ಕೈಮುಗಿದು ಕುಳಿತ ವ್ಯಕ್ತಿಯ ಪಕ್ಕದಲ್ಲಿ ಖಡ್ಗವನ್ನು ಮೇಲ್ಮುಖವಾಗಿ ಕಂಡಿರಿಸಲಾಗಿರುತ್ತದೆ. ಈ ರೀತಿಯ ಖಡ್ಗವು ವ್ಯಕ್ತಿಯೊಬ್ಬ ಧಾರ್ಮಿಕ ಆತ್ಮಬಲಿದಾನಗೈದ ಅಂಶವನ್ನು ಸಂಕೇತಿಸುತ್ತದೆ. ಅಧ್ಯಯನ ಪ್ರದೇಶದ ಹೊಸಳ್ಳಿ, ಕಲ್ಲೇದೇವರು, ದೂದಿಹಳ್ಳಿ, ಚಿಕ್ಕಮಲ್ಲೂರುಗಳಲ್ಲಿ ಇಂಥ ಶಿಲ್ಪಗಳಿವೆ.  ಹಾವೇರಿ ಜಿಲ್ಲೆಯ ಕನವಳ್ಳಿ, ಹೊಂಬರಡಿ, ದೇವಗೆರೆ ಮತ್ತು ಗುಡ್ಡದಬೇವಿನಹಳ್ಳಿಗಳಲ್ಲಿ ಖಡ್ಗವನ್ನು ಕೈಯಲ್ಲಿ ಹಿಡಿದು ನಿಂತಿರುವ ಶಿಲ್ಪಗಳಿದ್ದು, ಇವುಗಳು ಸಹ ಆತ್ಮಬಲಿದಾನವನ್ನು ಸಂಕೇತಿಸುತ್ತವೆ. ಬೆಳಕೇರೆಯ (ಬ್ಯಾಡಗಿ ತಾಲ್ಲೂಕು) ಶಿಲ್ಪವೊಂದರ ಕೆಳಹಂತದಲ್ಲಿ ವ್ಯಕ್ತಿಯೊಬ್ಬ ತಗ್ಗಿ(ಗೂಡಿ)ನಲ್ಲಿ ಕುಳಿತಿರುವಂತೆ ಚಿತ್ರಿಸಲಾಗಿದೆ.  ಇದು ಮಣ್ಣಿನಲ್ಲಿ ಹೂಳಿಸಿಕೊಂಡು ಜೀವಂತ ಸಮಾಧಿಯಾದ ಅಂಶವನ್ನು ಸಂಕೇತಿಸುತ್ತದೆ.
 
ವೈ. ಮದ್ದಾನಸ್ವಾಮಿ. 
   ಸಹಾಯಕ ಪ್ರಾಧ್ಯಾಪಕರು
   ಸರಕಾರಿ ಪ್ರಥಮ ದರ್ಜೆ ಕಾಲೇಜು, ಹಾವೇರಿ.
   ಮೊ: 9620179987 


Comments

Popular posts from this blog

ಹೊಯ್ಸಳರ ಲಾಂಛನದಲ್ಲಿಯ ಪ್ರಾಣಿ ಹುಲಿಯಲ್ಲ ಸಿಂಹ...!

ಹಾವೇರಿ ಜಿಲ್ಲೆಯಲ್ಲಿಯ ಶಾಸನಗಳಲ್ಲಿ ಬಸವಣ್ಣನವರು

ಹಾವೇರಿ ಜಿಲ್ಲೆಯ ಎಂಟು ತಾಲೂಕುಗಳ ಕಿರು ಪರಿಚಯ....!!!!