ಮೆಡ್ಲೇರಿಯಲ್ಲಿ ಶಿಲಾಶಾಸನ ಪತ್ತೆ
ಮೆಡ್ಲೇರಿಯಲ್ಲಿ ಶಿಲಾಶಾಸನ ಪತ್ತೆ
ರಾಣೇಬೆನ್ನೂರು ತಾಲೂಕಿನ ಐತಿಹಾಸಿಕ ಹಾಗೂ ಧಾರ್ಮಿಕ ಪರಂಪರೆಯನ್ನು ಹೊಂದಿದ ಮೆಡ್ಲೇರಿ ಗ್ರಾಮದಲ್ಲಿ 16ನೇ ಶತಮಾನಕ್ಕೆ ಸೇರಿದ ‘ವಿಜಯನಗರೋತ್ತರ’ ಕಾಲದ ಶಿಲಾಶಾಸನವನ್ನು ಸಂಶೋಧಕರಾದ ಶ್ರೀ ಪ್ರಮೋದ ನಲವಾಗಲ ಮತ್ತು ಡಾ. ರಮೇಶ ಎನ್. ತೆವರಿ ಪತ್ತೆ ಹಚ್ಚಿದ್ದಾರೆ. ಈ ಶಾಸನವು ಮೆಡ್ಲೇರಿ ಗ್ರಾಮದಲ್ಲಿ ಕಂಡುಬರುವ ಅಪ್ರಕಟಿತ ಶಾಸನವಾಗಿದೆ. ಈ ಶಾಸನ ಪುರಾತನ ಸ್ಥಳವಾದ ಕೋಟೆ ಭಾಗದಲ್ಲಿರುವ ‘ಚಂದ್ರಗುತ್ತೆಮ್ಮ’ ದೇವಸ್ಥಾನದ ಪಕ್ಕದಲ್ಲಿ ಕಂಡುಬಂದಿದೆ. ಈ ಶಿಲಾಶಾಸನವು ಚಂದ್ರಗುತ್ತೆಮ್ಮ ದೇವಸ್ಥಾನವನ್ನು ಇತ್ತೀಚೆಗೆ ಜೀರ್ಣೋದ್ಧಾರ ಮಾಡುವ ಸಂದರ್ಭದಲ್ಲಿ ಪತ್ತೆಯಾಗಿದೆ ಎಂದು ಸ್ಥಳೀಯ ಸಾಹಿತಿ ಶ್ರೀ ಮಾರುತಿ ತಳವಾರ ತಿಳಿಸಿದ್ದಾರೆ.
ಶಾಸನದಲ್ಲಿಯ ವಿಷಯ:
|| ಮೆಡಿಲೇರಿಯ ತಾಳವಾ
ರಿಕೆ ಜೋನಿನಾಯಕಗೆ
ಯರಡು ಪಾಲು ಕರಿಯ
ಅಂಣನ ಮಗ ತಿರಿ
ಕಿ ನಾಯಕನ ವಾ ರಿಗೆ
ವೊಂದು ಪಾಲೂ ||
ಎಂಬ ವಿಷಯವು ಈ ಶಾಸನದಲ್ಲಿ ಕಂಡುಬರುತ್ತದೆ. ಈ ಶಿಲಾಶಾಸನದಲ್ಲಿ ಅಕ್ಷರಗಳನ್ನು ಆರು ಸಾಲುಗಳಿಂದ ಖಂಡರಿಸಲಾಗಿದೆ.
ಶಾಸನದ ವಿಶ್ಲೇಷಣೆ:
• ಈ ಶಿಲಾಶಾಸನದಲ್ಲಿರುವ ವಿಷಯವನ್ನು ವಿಶ್ಲೇಷಿಸಿದಾಗ ಈಗ ಕರೆಯಲ್ಪಡುವ ‘ಮೆಡ್ಲೇರಿ’ ಗ್ರಾಮ ಈ ಹಿಂದೆ ‘ಮೆಡಿಲೇರಿ’ ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು ಎಂಬ ಮಾಹಿತಿ ಸ್ಪಷ್ಟವಾಗುತ್ತೆ. ‘ಮೆಡಿಲೇರಿ’ ಕಾಲಾಂತರದಲ್ಲಿ ಮೆಡ್ಲೇರಿ ಆಗಿದೆ.
• ಈ ಗ್ರಾಮದಲ್ಲಿ ‘ತಳವಾರಿಕೆ’ ಪರಂಪರೆ ಇತ್ತು ಎಂಬುದಕ್ಕೆ ಶಾಸನದಲ್ಲಿ ಕಂಡುಬರುವ ‘ತಾಳವಾರಿಕೆ’ ಪದವೇ ನಿದರ್ಶನ.
• ‘ಜೋನಿನಾಯಕ’, ‘ಕರಿಯಅಂಣ’ ಈತನ ಮಗ ‘ತಿರಿಕಿನಾಯಕ’ ಇವರು ತಾಳವಾರಿಕೆ ವೃತ್ತಿಯನ್ನು ಈ ಗ್ರಾಮದಲ್ಲಿ ಕೈಗೊಂಡಿದ್ದ ಉಲ್ಲೇಖವನ್ನು ತಿಳಿಸುತ್ತದೆ.
• ಬಹುಶಃ ಹಿಂದೆ ಈ ಪ್ರದೇಶವನ್ನು ಒಬ್ಬ ರಾಜ ಅಥವಾ ಅಧಿಕಾರಿ ಆಳುತ್ತಿದ್ದು, ತಳವಾರ ಜೋನಿನಾಯಕ, ಕರಿಯ ಅಂಣನ ಮಗ ತಿರಿಕಿ ನಾಯಕ ಇವರುಗಳಿಗೆ ಗ್ರಾಮ ಸಂರಕ್ಷಣೆಯ ಜವಾಬ್ದಾರಿ ನೀಡಿರುವ ಮಾಹಿತಿ ಮೇಲ್ನೋಟಕ್ಕೆ ಕಂಡುಬರುತ್ತದೆಂದು ಸಂಶೋಧಕರು ತಿಳಿಸಿದ್ದಾರೆ.
• ಜೋನಿನಾಯಕ, ತಿರಿಕಿ ನಾಯಕ ಇವರುಗಳು ನಿಷ್ಠೆ, ಪ್ರಾಮಾಣಿಕತೆಯಿಂದ ಗ್ರಾಮ ಸಂರಕ್ಷಣೆ ಮಾಡುತ್ತಿದ್ದ ಪ್ರಯುಕ್ತ ರಾಜ ಅಥವಾ ಅಧಿಕಾರಿ ಇವರುಗಳಿಗೆ ‘ಭೂದಾನ’ ಮಾಡಿರಬಹುದಾಗಿದ್ದು, ಅದನ್ನು ಅವರು ಎರಡು ಪಾಲು, ಒಂದು ಪಾಲಿನಂತೆ ಹಂಚಿಕೊಂಡಿರಬಹುದೆಂದು ಹಾಗೂ ಈ ಶಾಸನವು 16ನೇ ಶತಮಾನಕ್ಕೆ ಸೇರಿದ್ದು ‘ತಾಳವಾರಿಕೆ’ ಪರಂಪರೆಯನ್ನು ತಿಳಿಸುವ ಮಹತ್ವದ ಶಾಸನವಾಗಿದೆ ಎಂದು ಸಂಶೋಧಕರಾದ ಡಾ.ದೇವರಕೊಂಡ ರೆಡ್ಡಿ ವಿಶ್ಲೇಷಿಸಿದ್ದಾರೆ.
• ‘ತಾಳವಾರಿಕೆ’ಗೆ ಪುಷ್ಟಿಕೊಡುವಂತೆ ಇವತ್ತಿಗೆ ಮೆಡ್ಲೇರಿ ಗ್ರಾಮದಲ್ಲಿ ಕಂಡುಬರುವ ‘ತಳವಾರ’ ಹೆಸರಿನ ಮನೆತನಗಳು ಮೇಲಿನ ನಾಯಕರ ವಂಶಸ್ಥರಿಗೆ ಸಂಬಂಧಪಟ್ಟವುಗಳಾಗಿರಬಹುದೆಂದು ಸಂಶೋಧಕರು ತಿಳಿಸಿದ್ದಾರೆ.
ಮಾಸ್ತೆಮ್ಮ (ಮಹಾಸತಿ) ಗುಡಿಯ ಪಕ್ಕದಲ್ಲಿ ತೃಟಿತ ಶಾಸನವಿದ್ದು ಹಾಗೂ ತುಂಗಭದ್ರಾ ನದಿಯ ದಂಡೆಯ ಮೇಲಿರುವ ರಾಮಲಿಂಗೇಶ್ವರ ದೇವಸ್ಥಾನದ ಮುಂದೆ ಶಿವಲಿಂಗ ಹಾಗೂ ನಂದಿಯ ವಿಗ್ರಹಗಳು ಬಿದ್ದಿದ್ದು ಇಂತಹ ಸ್ಥಳದಲ್ಲಿ ಪುರಾತತ್ವ ಇಲಾಖೆಯವರು ಉತ್ಖನನ ಕೈಗೊಂಡಲ್ಲಿ ಕೆಲವು ಮಹತ್ವದ ಐತಿಹಾಸಿಕ ಪುರಾವೆಗಳು ಲಭಿಸಬಹುದೆಂದು ಸ್ಥಳೀಯ ಸಾಹಿತಿ ಮಾರುತಿ ತಳವಾರ ಅಭಿಪ್ರಾಯಪಟ್ಟಿದ್ದಾರೆ.
Comments
Post a Comment