ಹಾವೇರಿ ತಾಲೂಕಿನ ಹಾವನೂರಿನಲ್ಲಿ ತಾಯಿಯನ್ನು ನೆನೆದು ವಿನೋಬಾ ಬಾವೆಯವರು ಬಿಕ್ಕಿ ಬಿಕ್ಕಿ ಅತ್ತರು....!!

ಹಾವೇರಿ ತಾಲೂಕಿನ ಹಾವನೂರಿನಲ್ಲಿ ತಾಯಿಯನ್ನು ನೆನೆದು ವಿನೋಬಾ ಬಾವೆಯವರು ಬಿಕ್ಕಿ ಬಿಕ್ಕಿ ಅತ್ತರು....!!

ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಗಾಗೋಡಿಯಲ್ಲಿಯ ವಿನೋಭಾ ಬಾವೆಯವರು (ವಿನಾಯಕ ನರಹರಿ ಬಾವೆ) ಚಿತ್ಪಾವನ ಬ್ರಾಹ್ಮಣ ಕುಟುಂಬದಲ್ಲಿ 1895ರ ಸೆಪ್ಟೆಂಬರ್ 11 ರಂದು ಜನಿಸಿದರು. ಕಣ್ಬಿಟ್ಟ ಗಳಿಗೆಯಿಂದ ಹಾವೇರಿ ಜಿಲ್ಲೆಯ ಹಾವನೂರು ಪ್ರಕೃತಿಯ ಸವಿಯನ್ನು ಅನುಭವಿಸಿದ್ದರು. ಕಾರಣ ಭಾವೆಯವರ ತಾಯಿ ರುಕ್ಕಿಣಿಬಾಯಿಯ ತವರೂರು(ಅವಳ ಸೋದರತ್ತೆ ಉಮಾತಾಯಿಯ ಊರು).ಉಮಾತಾಯಿಯ ಗಂಡ ಪರಶುರಾಮ ಜೋಗರು ಅಲ್ಲಿಯ ಐದು ಜೋಗ ಮನೆತನಗಳಲ್ಲಿ ಅವರೊಬ್ಬರು. 

ರುಕ್ಕಿಣಿಬಾಯಿ ಹಾಗೂ ನರಹರಿ ಶಂಭುರಾವ್ ಅವರಿಗೆ ನಾಲ್ಕು ಗಂಡು (ವಿನಾಯಕ, ಬಾಲಕೃಷ್ಣ, ಶಿವಾಜಿ ಹಾಗೂ ದತ್ತಾತ್ರೇಯ) ಹಾಗೂ ಒಬ್ಬಳು ಹೆಣ್ಣು ಮಗಳು. ಇವರಲ್ಲಿ ಹಿರಿಯನಾದವನೇ ವಿನೋಬಾ ಭಾವೆ. ರುಕ್ಕಿಣಿಬಾಯಿಯ ತಾಯಿ ಚಿಕ್ಕಂದಿನಲ್ಲಿ ತೀರಿಕೊಂಡಿದ್ದರಿಂದ ಸೋದರತ್ತೆ ಉಮಾತಾಯಿಯೇ ತಾಯಿಯಂತೆ ಅವಳನ್ನು ನೋಡಿಕೊಳ್ಳುತ್ತಿದ್ದಳು.

ಹೀಗಾಗಿ ರಜೆ ಅಥವಾ ಬಿಡುವಿನ ವೇಳೆಯಲ್ಲಿ ಹಿರಿಯ ಮಗ ವಿನೋಬಾರನ್ನು (ಪ್ರೀತಿಯಿಂದ ತಾಯಿಯು ವಿನ್ಯಾ ಎಂದು ಕರೆಯುತ್ತಿದ್ದಳು) ಕರೆದುಕೊಂಡು ಹಾವನೂರಿಗೆ ಬರುತ್ತಿದ್ದಳು (1905ರ ಆಸುಪಾಸಿನಲ್ಲಿ). ತಾಯಿಗೆ ಓದು ಬರೆಯಲು ಬರದಿದ್ದರೂ ತಂದೆ ಬಾಲಕೃಷ್ಣ ವೈದ್ಯರ (ವಿನೋಭರ ಮಾತಮಹಾ) ಪ್ರೇರಣೆಯಿಂದ ಅನೇಕ ಕೀರ್ತನೆಗಳನ್ನು ಹಾಡುತ್ತಾ ಪೂಜೆ ಪುನಸ್ಕಾರಗಳಲ್ಲಿ ಮಗ್ನರಾಗುತ್ತಿದ್ದರು. ಬಾಲ್ಯದಲ್ಲಿ ಬಾವೆಯವರು ತಾಯಿಯ ಜೊತೆಯಲ್ಲಿ ಹಾವನೂರಿನ ನದಿ ತೀರಕ್ಕೆ ಬಟ್ಟೆ ತೊಳೆಯಲು ಹೋಗುತ್ತಿದ್ದರು. ಒಂದು ದಿನ ಬಾವೆಯವರು ಚಪ್ಪಲಿ ಮೆಟ್ಟುಕೊಂಡು ನದಿಯೊಳಗೆ ಇಳಿದಿದ್ದಕ್ಕಾಗಿ ತಾಯಿಯು ಜೋರಾಗಿ ಬೆನ್ನಿಗೆ ಹೊಡೆದಳು, ಆಗ ಎನು ತಿಳಿಯದ ಆ ಮಗು ಅಳಲಾರಂಭಿಸಿತು. ಆಗ ತಾಯಿ ಮುಗ್ದ ಮಗವನ್ನು ಅಪ್ಪಿಕೊಂಡು ಬಿಕ್ಕಳಿಸಿದ್ದನ್ನು ಬಾವೆಯವರು ನೆನಪಿನಲ್ಲಿಟ್ಟುಕೊಂಡಿದ್ದರು.  

ಬಾವೆಯವರು ಹಾವನೂರಿನ ನದಿ ತೀರದ ಪ್ರದೇಶದಲ್ಲಿ ಬೆಳೆದು ಮುಂದೆ ಮರಾಠಿ ಭಾಷೆಯಲ್ಲಿ ತಾಯಿಗೆ ತಿಳಿಯುವಂತೆ ಭಗವದ್ಗೀತೆಯನ್ನು ಬೋಧಿಸುತ್ತಿದ್ದರು. ಕನ್ನಡವನ್ನು ಅತಿ ಸ್ಪಷ್ಟವಾಗಿ ಮಾತನಾಡುತ್ತಿದ್ದರು.

ಅತಿಯಾಗಿ ಪ್ರೀತಿಸುತ್ತಿದ್ದ ತಾಯಿಯು ತನ್ನನ್ನು ಏಕಾಂಗಿಯಾಗಿ ಬಿಟ್ಟು ಹೋಗಿದ್ದರಿಂದ ವಿನೋಭಾ ಭಾವೆಯವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ತಾಯಿಯ ನೆನಪುಗಳು ಅವರ ಅಂತರಾಳದಲ್ಲಿ  ಗಟ್ಟಿಯಾಗಿ ಬೇರೂರಿದ್ದವು. ತಾಯಿಯ ಸಾವಿನ ನಂತರ ಆಸೆಯುಕ್ತ ಜೀವನ ಅವರಿಗೆ ಕ್ಷಣಿಕವೆನಿಸಿತು. ಮುಂದೆ ಬ್ರಹ್ಮಚರ್ಯವನ್ನು ಸ್ವೀಕರಿಸಿದರು. ಹೆಣ್ಣಿನ ಶಕ್ತಿಯ
ಅರಿವು, ತಾಯಿಯ ಮಮತೆ, ಪ್ರೀತಿಗೆ ಮನಸೋತಿದ್ದ ಅವರಿಗೆ ತಾಯಿಯೆಂದರೆ ಅಗಾಧವಾದ ಪ್ರೀತಿ ಹಾಗೂ ಗೌರವ. ಆದ್ದರಿಂದಲೇ ಇರಬೇಕು ಆ ಪ್ರೀತಿಯ ನಿದರ್ಶನವು ನಮ್ಮ ಮನದ ಕೋಣೆಯನ್ನು ಆವರಿಸಿರುವುದು. ಬಾಲ್ಯದಿಂದಲೂ ತಾಯಿಯ ತೊಡೆಯ ಮೇಲೆ ಮಲಗುತ್ತಿದ್ದ ಬಾವೆಯವರು, ಆ ನೆನಪು ಚಿರಕಾಲವಿರಲಿ ಎಂಬ ಆಸೆಯಿಂದ ತಾಯಿಯ ಸೀರೆಯನ್ನು ತಮ್ಮ ತೆಲೆದಿಂಬಿಗೆ ಸುತ್ತಿಕೊಂಡು ಮಲಗುತ್ತಿದ್ದರು. ಆಹ್ವಾ..........! ಅದೆಂತಾ ರೂಢಿ, ಸಾಕ್ಷಾತ್ ಹೆತ್ತ ತಾಯಿಯ ಮಡಲಿನ ಸೊಬಗು, ಸದಾ ಆ ಕ್ಷಮತೆಯ ಗುಣದಿಂದ ಅವರ ದಣಿವನ್ನು ದಹಿಸಿ ಸುಖನಿದ್ರೆಯನ್ನು ನೀಡುವಂತಹ ಆ ಮಡಿಲು. ಒಂದು ಕ್ಷಣ ನನ್ನ ಬಾಲ್ಯದ ಆ ನೆನಪು ಮನಸ್ಸಿನಲ್ಲಿ ಹೊರಳಾಡಿ ಕಣ್ಣ ತುದಿಯಲ್ಲಿ ಭಾಷ್ಪದ ಭಾವವನ್ನು ನೀಡಿತೆಂದರೆ, ಸ್ವತಃ ಆ  ರೂಢಿಯಲ್ಲಿದ್ದ ಭಾವೆಯವರ ಆ ಮುಗ್ಧ ಮನಸ್ಸಿಗೆ ಹೇಳುವುದಕ್ಕಿಂತ ಗ್ರಹಿಸಿ ನೋಡಬೇಕೆನ್ನುವುದು ಸಹಜ.

ವಿನೋಭಾ ಭಾವೆಯವರು. ತಮ್ಮೆಲ್ಲಾ ಶಿಕ್ಷಣದ ಸರ್ಟಿಫಿಕೇಟ್‌ಗಳನ್ನು ಬೆಂಕಿಗೆ ಹಾಕಿ 1916 ಜೂನ್ 7ರಂದು ಕೋಚ್ರಾಬಾ ವಿಶ್ವವಿದ್ಯಾಲಯ ಹೈದರಾಬಾದಿನಲ್ಲಿ ಮಹಾತ್ಮ ಗಾಂಧೀಜಿಯವರನ್ನು ಭೇಟಿ ಮಾಡಿದರು. ಗಾಂಧೀಜಿಯವರ ಅಹಿಂಸಾ ತತ್ವವನ್ನು ಪಾಲಿಸುವುದರೊಂದಿಗೆ ಗಾಂಧೀಜಿಯವರಿಗೆ ಆತ್ಮೀಯರಾದರು. 1921 ಎಪ್ರೀಲ್ 8 ರಂದು ವರ್ದಾದ ಗಾಂಧಿ ಆಶ್ರಮದ ಉಸ್ತುವಾರಿಯನ್ನು ವಹಿಸಿಕೊಂಡರು. ಸಾಬರಮತಿ ಆಶ್ರಮದಲ್ಲಿ ನೂಲು ತೆಗೆಯುವುದರಿಂದ ಹಿಡಿದು ಪ್ರತಿಯೊಂದು ಕಾರ್ಯವನ್ನು ಶ್ರದ್ಧೆಯಿಂದ ಮಾಡುತ್ತಿದ್ದರು. ಬ್ರಿಟಿಷರ ಆಡಳಿತವನ್ನು ಪ್ರಶ್ನಿಸಿ ಅನೇಕ ಬಾರಿ ಸೆರೆವಾಸ ಅನುಭವಿಸಿದರು. ಅಲ್ಲಿಯೂ ಸಹ ಕೈದಿಗಳಿಗೆ ಮರಾಠಿ ಭಾಷೆಯಲ್ಲಿ ಭಗವದ್ಗೀತೆಯನ್ನು ಬೋಧಿಸುತ್ತಾ ಪ್ರೇರೆಪಿಸುತ್ತಿದ್ದರು. ಸರ್ವೋದಯ ಚಳುವಳಿ ಹಾಗೂ ಭೂದಾನ ಚಳುವಳಿಯ ಕರ್ತೃಗಳಾಗಿ ಹೊರಹೊಮ್ಮಿದರಲ್ಲದೇ, ದೇಶದ ಉನ್ನತಿಯನ್ನು ಬಯಸುತ್ತ, ಜಗತ್ತಿನ ಸಕಲ ಜೀವಿಗಳಿಗೂ ಶ್ರೇಯಸ್ಸನ್ನು ಬಯಸಿ “ಜಯ್ ಜಗತ್” ಎಂಬ ಘೋಷಣೆಯನ್ನು
ಕೂಗಿದರು. ಭೂದಾನ ಚಳುವಳಿಯಲ್ಲಿ ದೊಡ್ಡ ಜಮೀನ್ದಾರರ ಮನವೊಲಿಸಿ ಜಮೀನುರಹಿತ ಜನರಿಗೆ ತಮ್ಮ ಸ್ವಲ್ಪ ಭಾಗ ಜಮೀನನ್ನು ಬಿಟ್ಟು ಕೊಡಲು ಪ್ರೇರೇಪಿಸಿದರು. ಜಮೀನು ರಹಿತ ಬಡ ಜನರು ಕನಿಷ್ಠ ಐದು ಎಕರೆಯನ್ನಾದರೂ ಹೊಂದಬೇಕು ಎಂಬುದು ಅವರ ಮಹದಾಸೆಯಾಗಿತ್ತು. 

ಈಗಿನ ತೆಲಂಗಾಣ ರಾಜ್ಯದ ನಾಲಗೊಂಡ ಜಿಲ್ಲೆಯ ಪೊಂಚಪಲ್ಲಿಯಲ್ಲಿ ಸ್ವಾತಂತ್ರದ ನಂತರ ಅಂದರೆ 1951 ಎಪ್ರಿಲ್ 18ರಂದು ಭೂದಾನ ಚಳುವಳಿಯನ್ನು ಪ್ರಾರಂಭಿಸಿದರು. ಭೂಧಾನ ಚಳುವಳಿಯ ಪ್ರಯುಕ್ತ ಧಾರವಾಡ ಜಿಲ್ಲೆಯನ್ನು ಪ್ರವೇಶಿಸಲು ವಿನೋಬಾ ಬಾವೆಯವರು ಆಯ್ಕೆ ಮಾಡಿಕೊಂಡ ಸ್ಥಳ ಹಾವೇರಿಯ ಹಾವನೂರು, ಕಾರಣ 50 ವರ್ಷಗಳ ಹಿಂದೆ ಜೋಗ್ ಮನೆತನದವರು ತೋರಿದ ಪ್ರೀತಿ ವಾತ್ಸಲ್ಯ ಅವರನ್ನು ಕೈಬೀಸಿ ಕರೆಯುತ್ತಿತ್ತು. ಬಳ್ಳಾರಿಯ ಮಾರ್ಗವಾಗಿ ಕಾಲ್ನಡಿಗೆಯಿಂದ 1957 ಡಿ.9ರಂದು ಬರಿಗಾಲಿನಿಂದ ತುಂಗಭದ್ರೆಯನ್ನು ದಾಟುತ್ತಾ ಪಾದರಕ್ಷೆಯನ್ನು ಬಲಗೈಯಲ್ಲಿ ಹಿಡಿದುಕೊಂಡು ಭಾರವಾದ ಮನಸ್ಸಿನಿಂದ (ತಾಯಿಯು ಬಾಲ್ಯದಲ್ಲಿ ಬೈದ ನೆನಪಿನಿಂದಾಗಿ ಆದರೆ ಇಂತಹ ಗಂಗಾಸನ್ನಿಧಾನಕ್ಕೆ ಅಪಮಾನ ಮಾಡುತ್ತಿ ಎಂದು
ಬೆನ್ನಿಗೆ ಪೆಟ್ಟನ್ನು ಹಾಕಿ ಹೇಳಿದ್ದನ್ನು ನೆನೆಯುತ್ತ) ಹೆಜ್ಜೆಯನ್ನು
ಹಾಕುತ್ತಾ ತುಂಗಭದ್ರೆಗೆ ನಮಸ್ಕರಿಸಿ ನದಿಯನ್ನು ದಾಟಿದರು.

ಹಾವನೂರಿನ ದಡದಲ್ಲಿ ಸುವಾಸಿನಿಯರು
ಅವರಿಗೆ  ಆರತಿಯನ್ನು ಬೆಳಗಿದರು. ರಾಜ್ಯದ ಮುಖ್ಯಮಂತ್ರಿಗಳಾದಂತಹ ಎಸ್.ನಿಜಲಿಂಗಪ್ಪನವರು ಮತ್ತು ಮಹಾದೇವಿ ತಾಯಿ (ರಾಮಕೃಷ್ಣ ಹೆಗಡೆಯವರ ಅಕ್ಕ) ಸ್ವಯಂ ಹಾಜರಿದ್ದು ಜಿಲ್ಲೆಗೆ ಬರಮಾಡಿಕೊಂಡರು. ಊರು ಮಧ್ಯದ ಈಶ್ವರ ಗುಡಿಯ ಪ್ರಾಂಗಣದಲ್ಲಿ ವಿಶ್ರಮಿಸುತ್ತಿದ್ದಾಗ, ಅವರು ಅಲ್ಲಿ ತಮ್ಮ ಬಾಲ್ಯದ ದಿನಗಳನ್ನು ಪ್ರಸ್ತಾಪಿಸಿದರು. ಅವರು ಕುಳಿತಿದ್ದ ಗುಡಿಯೆದುರಿಗೆ ನದಿ ಕಡೆಗೆ ಹೋಗುವ ದಾರಿಯಲ್ಲಿ ಆಲದಮರದ ಸಾಲುಗಳಿವೆ. ಅವುಗಳ ಬಿಳಲನ್ನು ಹಿಡಿದು ತಾವು ಜೀಕುತ್ತಿದ್ದೆವು ಎಂದು ನೆನೆದರು. ಅಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿ ಭೂದಾನ ಚಳುವಳಿಯ ಬಗ್ಗೆ ಅರಿವನ್ನು ಮೂಡಿಸಿದರು. ಜೋಗ ಪರಿವಾರವನ್ನು ಉದ್ದೇಶಿಸಿ ನಿಮ್ಮ ಮನೆಗಳ ಕಡೆಗೆ ನನ್ನನ್ನು ಕರೆದುಕೊಂಡು ನಡೆಯಿರಿ, ನಾನೆ ನಿಮ್ಮ ಮನೆಯನ್ನು ಗುರುತು ಹಿಡಿಯುವೆ ಎಂದು ಎಲ್ಲರ ಜೊತೆಗೂಡಿ ಹೊರಟರು. ಆ ದಾರಿಯಲ್ಲಿ ಸಾಗಿದಾಗ ಒಂದು ಹಳೆ ಬಾವಿ ಕಂಡಿತು. “ಹಾಂ ಇದೇ ! ಆ ಮನೆ ಎನ್ನುತ್ತಾ ಮನೆ ಒಳಕ್ಕೆ ಓಡಿದರು (ಪರಶುರಾಮ ಜೋಗ್‌ರವರ ಮನೆ), ದೇವರ ಮನೆಯ ಕಂಬಕ್ಕೆ ಒರಗಿ ತಮ್ಮ ತಾಯಿ ಭಜನೆ ಮಾಡುತ್ತಿದ್ದನ್ನು ತೋರಿಸಿ ಸಾಷ್ಟಾಂಗ ನಮಸ್ಕಾರ ಮಾಡಿ ಅರ್ಧ ತಾಸು ತಾಯಿಯ ನೆನಹುಗಳನ್ನು ಅವರ ಮನದಲ್ಲಿ ಮೂಡಿಸಿಕೊಳ್ಳುತ್ತಾ ಬಿಕ್ಕಿ-ಬಿಕ್ಕಿ ಅಳುತ್ತಿದ್ದನ್ನು ಕಂಡು ಉಳಿದ ಸದಸ್ಯರೆಲ್ಲರೂ ಮೂಕ ಪ್ರೇಕ್ಷಕರಾಗಿ ನಿಂತು ಬಿಟ್ಟರು. ತಾಯಿ ಕುಳಿತುಕೊಳ್ಳುತ್ತಿದ್ದ ಪವಿತ್ರ ಸ್ಥಾನವನ್ನು ನಿದಾನವಾಗಿ ಮತ್ತೊಮ್ಮೆ ನಮಸ್ಕರಿಸಿ ಹೊರನಡೆದರು. ಹೊರಗೆ ಕಾಯುತ್ತಿದ್ದ ಜೋಗ ಕುಟುಂಬದವರೊಡನೆ ಫೋಟೊ ತೆಗೆಸಿಕೊಂಡು ಮುಂದೆ ಸಾಗಿದರು.

ತಮ್ಮ ಜೀವನದೂದ್ದಕ್ಕೂಅಹಿಂಸಾ ತತ್ವವನ್ನು ಪಾಲಿಸಿದ ಅವರು ಆಹಾರ ಹಾಗೂ ಔಷಧವನ್ನು ತ್ಯಜಿಸಿ 1982 ನವಂಬರ್ 15ರಂದು ಸಮಾಧಿ ಮರಣವನ್ನು ಹೊಂದಿದರು. 

ಭಾರತ ದೇಶದಲ್ಲಿಯ ಸರ್ವರಿಗೂ ಸಮಪಾಲು ಎಂಬಂತೆ "ಭೂದಾನ ಚಳುವಳಿಯ" ಮುಖಾಂತರ ದೇಶದ ಜನತೆಗೆ ಚಿರಪರಿಚಿತರಾಗಿದ್ದ ಇಂತಹ ಚೈತನ್ಯಮೂರ್ತಿಯು ತಮ್ಮ
ಬಾಲ್ಯವನ್ನು ನಮ್ಮ ಜಿಲ್ಲೆಯಲ್ಲಿ ಕಳೆದಿರುವುದು ಹೆಮ್ಮೆಯ ವಿಷಯ. ಅವರು ತಮ್ಮ ಬಾಲ್ಯವನ್ನು ಕಳೆದ ಹಾವನೂರಿನ ಆ ಪವಿತ್ರವಾದ ಸ್ಥಳದಲ್ಲೊಂದು ಸ್ಮಾರಕವೊಂದಾಗಲಿ ಎನ್ನುವ ನನ್ನ ಮನದಾಸೆಯೊಂದಿಗೆ.....!!

                                
                     #ಪ್ರಮೋದ ನಲವಾಗಲ
                           9686168202

Comments

Popular posts from this blog

ಹೊಯ್ಸಳರ ಲಾಂಛನದಲ್ಲಿಯ ಪ್ರಾಣಿ ಹುಲಿಯಲ್ಲ ಸಿಂಹ...!

ಹಾವೇರಿ ಜಿಲ್ಲೆಯಲ್ಲಿಯ ಶಾಸನಗಳಲ್ಲಿ ಬಸವಣ್ಣನವರು

ಹಾವೇರಿ ಜಿಲ್ಲೆಯ ಎಂಟು ತಾಲೂಕುಗಳ ಕಿರು ಪರಿಚಯ....!!!!