ಸ್ವಾತಂತ್ರ್ಯಪೂರ್ವ ಕಾಲದಲ್ಲಿ ಹಾವೇರಿಯಿಂದ ಮುದ್ರಣವಾಗುತ್ತಿದ್ದ ಬಸವರಾಜ ವಾರಪತ್ರಿಕೆ ಈಗ ನೆನಪು ಮಾತ್ರ.!!!!!!!!!!
ಸ್ವಾತಂತ್ರ್ಯಪೂರ್ವ ಕಾಲದಲ್ಲಿ ಹಾವೇರಿಯಿಂದ ಮುದ್ರಣವಾಗುತ್ತಿದ್ದ ಬಸವರಾಜ ವಾರಪತ್ರಿಕೆ ಈಗ ನೆನಪು ಮಾತ್ರ.!!!!!!!!!!
ಸ್ವಾತಂತ್ರ್ಯಪೂರ್ವ ಕಾಲದಲ್ಲಿ ಪತ್ರಿಕೆಯನ್ನು ಮುದ್ರಿಸುವ ಕಾರ್ಯ ಅಷ್ಟೊಂದು ಸುಲಭವಾಗಿರಲಿಲ್ಲ. ಕಾರಣ ಆವತ್ತಿನ ಕಾಲದಲ್ಲಿ ತಾಂತ್ರಿಕತೆ ಅಷ್ಟೊಂದಾಗಿ ಮುಂದುವರೆದಿರಲಿಲ್ಲ. ಮುದ್ರಣ ಕಾರ್ಯವು ಶ್ರಮದಾಯಕವಾಗಿತ್ತು.
ಇಂತಹ ಕಠಿಣ ಸಮಯದಲ್ಲಿ ಜನರನ್ನು ಜಾಗೃತಗೊಳಿಸಬೇಕು ಹಾಗೂ ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆ ನೀಡಬೇಕು ಎಂಬ ಉದ್ದೇಶದಿಂದ ದಿ.ಚನ್ನಬವಪ್ಪ. ಮುರಿಗೇಂದ್ರಪ್ಪ ಹಾಲಪ್ಪನವರ "ಬಸವರಾಜ" ವಾರಪತ್ರಿಕೆಯನ್ನು 30-ಮೇ-1924 ರಂದು ದಿ.ಹರ್ಡೇಕರ ಮಂಜಪ್ಪನವರ ಪ್ರೇರಣೆಯಿಂದ ಬಸವಣ್ಣನ ದಿನವಾದ ಸೋಮವಾರದಂದು ಪತ್ರಿಕಾ ಪ್ರೇಮಿಗಳಿಗೆ ತಲುಪುವಂತೆ ಪ್ರಾರಂಭಿಸಿದರು.
ಅಂದಿನ ಕಾಲದಲ್ಲಿ ಹಾವೇರಿಯಿಂದಲೇ ಪತ್ರಿಕೆ ಮುದ್ರಿಸುವುದು ಸುಲಭದ ಕೆಲಸವಾಗಿರಲಿಲ್ಲ. ಮುದ್ರಣಕ್ಕೆ ಬೇಕಾಗುವ ಮುದ್ರಣ ಯಂತ್ರಗಳು ಹಾಗೂ ಇತರ ಸಾಮಗ್ರಿಗಳು ಹಾಲಪ್ಪನವರವರ ಬೇಡಿಕೆಯಿಂದಾಗಿ ಜರ್ಮನದಿಂದ ಮುಂಬೈಯ ಮಾರ್ಗವಾಗಿ ಕಾರವಾರಕ್ಕೆ ಬಂದಳಿದವು. ಅಲ್ಲಿಂದ ಅವುಗಳನ್ನು ಹಾವೇರಿಗೆ ಎತ್ತಿನ ಬಂಡೆಯಲ್ಲಿ ತರಲಾಯಿತು.
ಬೃಹತ್ ಗಾತ್ರದ ಯಂತ್ರಗಳನ್ನು ಪತ್ರಿಕೆಯ ಸಂಪಾದಕರು ಹಾಗೂ ಪ್ರಕಾಶಕರಾದ ದಿ.ಚನ್ನಬಸವಪ್ಪನವರು ಹಾವೇರಿಯ ಸಿದ್ದದೇವಪುರದಲ್ಲಿರುವ ತಮ್ಮ ಸ್ವಗೃಹದಲ್ಲಿ ಇರಿಸಿದರು.
ದಿ. ಚನ್ನಬಸವಪ್ಪ ಹಾಲಪ್ಪನವರ ಇವರು ಹರ್ಡಿಕರ ಮಂಜಪ್ಪನವರೊಂದಿಗೆ ಹೆಚ್ಚು ಆತ್ಮೀಯತೆಯನ್ನು ಹೊಂದಿದ್ದರು. ಅವರ ಸಂಪಾದಕತ್ವದಲ್ಲಿ ಬರುತ್ತಿದ್ದ " ಶರಣು ಸಂದೇಶ" ಸಂಚಿಕೆ 'ಬಸವರಾಜ' ಪತ್ರಿಕೆಗೆ ಭದ್ರಬುನಾದಿಯನ್ನು ಹಾಕಿತು.
ಪತ್ರಿಕೋದ್ಯಮ ಲಾಭದಾಯಕ ಉದ್ಯಮವಲ್ಲ ಎಂದು ಅರಿತಿದ್ದ ಚನ್ನಬಸವಪ್ಪನವರು, ಈ ಕಾಯಕ ಸಾಮಾಜದ ಅಂಕುಡೊಂಕುಗಳನ್ನು ತಿದ್ದುವ, ರಾಜಕಾರಣಿಗಳನ್ನು ಬಡಿದೆಬ್ಬಿಸುವ ಹಾಗೂ ಜನಸಾಮಾನ್ಯರನ್ನು ಜಾಗೃತಗೊಳಿಸುವ ಪವಿತ್ರವಾದ ಕಾಯಕವೆಂದು ತಿಳಿದಿದ್ದರು. ಜಗದ್ಗುರು ಬಸವಣ್ಣನವರ ಅನುಯಾಯಿಗಳಾದ ಚನ್ನಬಸವಪ್ಪನವರು " ಕಾಯಕವೇ ಕೈಲಾಸ" ಎಂಬ ತತ್ವವನ್ನು ಜೀವನೂದ್ದಕ್ಕು ಪಾಲಿಸಿಕೊಂಡು ಬಂದರು.
ಜೀವನದ ಬಂಡಿಯಲ್ಲಿ ಹೊಟ್ಟೆ ಬಟ್ಟೆಗೆ ಕಡಿಮೆಯಾದರೂ ತಮ್ಮ ಸಂಪಾದಕತ್ವದಲ್ಲಿ ಮುದ್ರಣವಾಗುತ್ತಿದ್ದ ಬಸವರಾಜ ಪತ್ರಿಕೆಯಲ್ಲಿಯ ವಿಷಯಕ್ಕೆ ಹಾಗೂ ಅಕ್ಷರಗಳ ಅಲಂಕಾರಕ್ಕೆ ಬಡತನವಿರಲಿಲ್ಲ.
ವಾಹನ ಸೌಕರ್ಯವಿಲ್ಲದ ಆ ದಿನಗಳಲ್ಲಿ ಕಾರ್ಯಕ್ರಮಗಳು ನಡೆಯುವ ಸ್ಥಳಕ್ಕೆ ನಡೆದುಕೊಂಡು ಹೋಗಿಯೇ ವಿಷಯ ಸಂಗ್ರಹಿಸುತ್ತಿದ್ದರು. ಕಾಗದಗಳನ್ನು ಸರಿಯಾದ ಅಳತೆಯಲ್ಲಿ ಕಟ್ಟು ಮಾಡಲು, ಅಚ್ಚುಗಳನ್ನು ತಯಾರಿ ಮಾಡಲು ಹಾಗೂ ಪತ್ರಿಕೆಗಳನ್ನು ಹಂಚಲು ಕೆಲವೇ ಕೆಲವು ನೌಕರರನ್ನು ತಮ್ಮ ಬಳಿ ಇಟ್ಟುಕೊಂಡಿದ್ದರು. ಅಂದಿನ ರಾಣೇಬೆನ್ನೂರ, ಕೋಡ,ಬಂಕಾಪುರ, ಹಾನುಗಲ್ ಮತ್ತು ಕರ್ಜಗಿ ತಾಲೂಕುಗಳ ವಿಷಯಗಳನ್ನು ಪತ್ರಗಳ ಮುಂಖಾಂತರ ಪಡೆಯುತ್ತಿದ್ದರು. ಹೊರರಾಜ್ಯದ ಹಾಗೂ ವಿದೇಶಿ ಸುದ್ದಿಗಳನ್ನು ಹರ್ಡಿಕರ ಮಂಜಪ್ಪನವರ "ಶರಣ ಸಂದೇಶ" ಪತ್ರಿಕೆಯಿಂದ ಗ್ರಹಿಸುತ್ತಿದ್ದರು. ಓದುಗರನ್ನು ಆಕರ್ಷಿಸುವಂತಹ ಹೊಸ ಲೇಖನಗಳನ್ನು ಪ್ರಕಟಿಸುತ್ತಿದ್ದರು.
ಹಾವೇರಿಗೆ ಮಹಾತ್ನ ಗಾಂಧೀಜಿಯವರು, ಡಾ.ರಾಜೇಂದ್ರ ಪ್ರಸಾದರವರು ಹಾಗು ಸುಭಾಸಚಂದ್ರ ಬೋಸರವರು ಬಂದಾಗ ತಮ್ಮ ಪತ್ರಿಕೆಯಲ್ಲಿ ಸವಿವರವಾಗಿ ಬರೆದರು.
ಯಾವುದೇ ಒಂದು ಜಾತಿ, ಮತ ಹಾಗೂ ಪಂಥಕ್ಕೆ ಸೀಮಿತವಾಗಿರದ ಈ ಪತ್ರಿಕೆ ಮನುಷ್ಯನ ವಳಿತನ್ನು ಬಯಸುವ ಪತ್ರಿಕೆಯಾಗಿತ್ತು. ಸಮಾಜದ ಕಟ್ಟಕಡೆಯ ವ್ಯಕ್ತಿಯು ಮೆಚ್ಚುವಂತ ಲೇಖನಗಳು ಈ ಪತ್ರಿಕೆಯಲ್ಲಿ ಬರುತ್ತಿದ್ದವು.
ಚಂಬಣ್ಣ ಮಾಗಾವಿ, ಹೊಸಮನಿ ಸಿದ್ದಪ್ಪ, ಗುದ್ಲೇಪ್ಪ ಹಳ್ಳಿಕೇರಿ, ಪರಮಣ್ಣ ಹೊಸಮನಿ, ಮೈಲಾರ ಮಹದೇವಪ್ಪ, ಹೊಂಬಣ್ಣನವರ, ಬ್ಯಾಡಗಿಯ ಕಬ್ಬೂರ, ಶೆಟ್ಟರ ಹಾಗೂ ರಾಣೇಬೆನ್ನೂರಿನ ಬಣಗಾರ ಇವರೊಂದಿಗೆ ಆತ್ಮೀಯತೆನ್ನೂ ಹೊಂದಿದ್ದರು ಸಹ ಅವರಿಂದ ಪ್ರಮಾದವಾದರೆ ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೆ ಅದನ್ನು ಖಂಡಿಸುವ ದಿಟ್ಟತನವನ್ನು ಹೊಂದಿದ್ದರು.
ಹಾವೇರಿಯಲ್ಲಿಯ ದೊಡ್ಡಕೇರೆಯ ಮೇಲೆ ಅಗಾದವಾದ ಪ್ರೀತಿಯನ್ನು ಹೊಂದಿದ್ದರು ಅದಕ್ಕೆ ಕಾರಣ ಅದು ಹಾವೇರಿಯ ಜೀವಜಲವಾಗಿತ್ತು ಹೀಗಾಗಿ ಅದನ್ನು ಮಲಿನಗೊಳಿಸಿತ್ತಿದ್ದ ಜನರನ್ನು ಹಾಗೂ ಮುನಸಿಪಾಲಟಿಯ ಅಧಿಕಾರಿಗಳನ್ನು ತಮ್ಮ ಪತ್ರಿಕೆಯಲ್ಲಿ ಖಂಡಿಸುತ್ತಿದ್ದರು.
ಚನ್ನಬಸವಪ್ಪನವರ ಉಪನ್ಯಾಸಕ್ಕೆ ದೊಡ್ಡ ಅಭಿಮಾನಿ ಬಳಗವೆ ಹಾವೇರಿಯಲ್ಲಿತ್ತು. ಬಸವೇಶ್ವರರ ಜಯಂತಿಗೆ ಹಾವೇರಿಯಲ್ಲಿ ಚಾಲನೆ ನೀಡಿದ ಪ್ರಮುಖರಲ್ಲಿ ಇವರೊಬ್ಬರು. ಪ್ರತಿ ಸೋಮವಾರದಂದು ಪ್ರಕಟವಾಗುತ್ತಿದ್ದ ವಾರಪತ್ರಿಕೆಯಲ್ಲಿ ಲಿಂಗಾಯತ ಧರ್ಮದ ಕುರಿತಾದ ಲೇಖನ ಕಡ್ಡಾಯವಾಗಿರುತ್ತಿತ್ತು. ಶಿವಶರಣರ ಕುರಿತಾದ ಲೇಖನಗಳು ಪತ್ರಿಕೆ ಓದುಗಾರರಿಗೆ ಮುದ ನೀಡತ್ತಿತ್ತು.
ಹಾವೇರಿಗೆ ಗಾಂಧೀಜಿಯವರು, ಸುಭಾಷಚಂದ್ರ ಬೋಸ್ ಹಾಗೂ ಡಾ.ರಾಜೇಂದ್ರ ಪ್ರಸಾದರವರು ಭೇಟಿ ನೀಡಿದ ವಿಷಯವನ್ನು ವಿವರವಾಗಿ ಬರೆದರು, ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಸಿಂಧಿ ಗಿಡದ ಪಿಕೆಟಿಂಗ್ ವಿಷಯವನ್ನು ಬರೆದು ಸ್ವಾತಂತ್ರ್ಯ ಹೋರಾಟಗಾರರಿಗೆ ಪ್ರೇರೇಪಿಸಿದರು. ದ್ಯಾಮವ್ವನ ಕಟ್ಟೆಯ ಮೇಲೆ ನಡೆದ ಪ್ರತಿಭಟನೆಗಳನ್ನು ಜನಸಾಮನ್ಯರಿಗೆ ಮನಮುಟ್ಟುವಂತೆ ತಿಳಿಸಿದರು. ವ್ಯಾಪರಸ್ಥರ ಮಧ್ಯದಲ್ಲಿ ಉಂಟಾದ ವೈಮನಸ್ಸುಗಳನ್ನು ಪತ್ರಿಕೆಯಲ್ಲಿ ಖಂಡಿಸಿ ಅವರುಗಳನ್ನು ಒಂದು ಮಾಡಿದರು.
ಜನಪ್ರತಿನಿಧಿಗಳು ಹಾವೇರಿಯ ವಳಿತಿಗಾಗಿ ಯಾವ ಕೆಲಸ ಮಾಡಬೇಕೆಂಬುದನ್ನು ಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದರು. ಕರ್ನಾಟಕ ಎಕೀಕರಣದ ಬಗ್ಗೆ ಜನಜಾಗೃತಿ ಮೂಡಿಸುವ ಲೇಖನಗಳನ್ನು ಸಾಲುಸಾಲಾಗಿ ಬರೆದರು. ಪತ್ರಿಕಾ ರಂಗದ ಪಾವಿತ್ರತೆಯನ್ನು ತಮ್ಮ ಜೀವಿತಾ ಅವಧಿಯವರೆಗೂ ಕಾಪಡಿಕೊಂಡು ಬಂದರು. ಬಹುಶಃ ಅವರ ಪತ್ರಿಕೆ 1940 ರವರೆಗೆ ಮುದ್ರಣವಾಗಿ ಮುಂದೆ ಸ್ಥಗಿತಗೊಂಡಿರಬಹುದು. ಜೀವನದುದ್ದಕ್ಕೂ ಹೋರಾಟದ ಬದುಕನ್ನು ಕಟ್ಟಿಕೊಂಡು ಬಂದಿದ್ದ ಇವರ ಜೊತೆಯಿರಲು ಸರಸ್ವತಿ ಮಾತ್ರ ಒಪ್ಪಿದ್ದಳು. ಮುಂದೆ ಮುದ್ರಣಾಲಯವನ್ನು ಅವರ ಸಹೋದರ ಬಸವಣೆಪ್ಪ ನಡೆಸಿಕೊಂಡು ಬಂದನು. ಅವರ ಮೂರನೆ ತೆಲೆಮಾರು ಅವರು ಬಿಟ್ಟು ಹೋದ ಮುದ್ರಣಾಲಯವನ್ನು ಈಗಲೂ ನಡೆಸಿಕೊಂಡು ಹೋಗುತ್ತಿದ್ದಾರೆ. ಅವರ ಮುದ್ರಣಾಲಯದಲ್ಲಿದ್ದ ಒಂದು ಯಂತ್ರವನ್ನು ತಾಯಿ ಆಸೆಯಂತೆ ಧರ್ಮಸ್ಥಳದ ಮಂಜುಶ್ರೀ ಸಂಗ್ರಹಾಲಯಕ್ಕೆ ನೀಡಿದರು. ಇನ್ನೂ ಕೆಲವು ಯಂತ್ರಗಳು ಹರಿದು ಹಾಳಾಗುತ್ತಿರುವ ಅವರ ಪತ್ರಿಕೆಯ ಪ್ರತಿಗಳು ಹಳೆಯ ಹಾವೇರಿಯ ಚಿತ್ರಣವನ್ನು ನಮ್ಮ ಮುಂದೆ ಎಳೆಎಳೆಯಾಗಿ ಬಿಡಿಸಿಡುತ್ತದೆ.
ಅವರ ಹಳೆಯ ಪತ್ರಿಕೆಯ ಪ್ರತಿಗಳನ್ನು ಇನ್ನೂ ಜೀವಂತವಾಗಿಟ್ಟುಕೊಂಡ ಮೂರನೆಯ ತೆಲೆಮಾರಿನ ಹಾಲಪ್ಪನವರ ಸಹೋದರರಿಗೆ ನನ್ನ ಪ್ರಣಾಮಗಳು.
# ಪ್ರಮೋದ ನಲವಾಗಲ#
9686168202
Comments
Post a Comment