ವಿರಳವಾದ ‘ಸೂರ್ಯ ಬಲಿದಾನ’ ಶಿಲಾ ಫಲಕ ಪತ್ತೆ

ವಿರಳವಾದ ‘ಸೂರ್ಯ ಬಲಿದಾನ’ ಶಿಲಾ ಫಲಕ ಪತ್ತೆ
ಹಾವೇರಿ: ಮಧ್ಯಕಾಲೀನ ಕರ್ನಾಟಕದಲ್ಲಿ ಧಾರ್ಮಿಕ ಮನೋಭಾವನೆಯಿಂದ ನಿರ್ದಿಷ್ಟ ಸಂದರ್ಭಗಳಲ್ಲಿ ತಮ್ಮ ಆತ್ಮವನ್ನು ತಾವೇ ಬಲಿಕೊಟ್ಟುಕೊಳ್ಳುತ್ತಿದ್ದ ಪದ್ಧತಿಗೆ ಸಾಕ್ಷಿಯೆಂಬಂತೆ ಸೂರ್ಯ ಬಲಿದಾನ ಶಿಲಾ ಫಲಕವನ್ನು ಹಾವೇರಿಯ ದೇಸಾಯಿ ಗಲ್ಲಿಯಲ್ಲಿರುವ ಗರಡಿಮನೆಯ ಹತ್ತಿರ ಸ್ಥಳೀಯ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಪ್ರಮೋದ ನಲವಾಗಲ ಪತ್ತೆ ಮಾಡಿದ್ದಾರೆ.

ಧಾರ್ಮಿಕ ಮನೋಭಾವನೆಯಿಂದ ತಮ್ಮ ಆತ್ಮವನ್ನು ತಾವೇ ಬಲಿಕೊಟ್ಟುಕೊಳ್ಳುತ್ತಿದ್ದ ಪದ್ಧತಿ ಹಿಂದೂ ಹಾಗೂ ಜೈನ ಧರ್ಮದಲ್ಲಿ ಇತ್ತು. ಹಿಂದೂಗಳು ವಿಶೇಷವಾಗಿ ಚಿತೆ(ಕಿಚ್ಚ) ಮುಖಾಂತರ ಮರಣವನ್ನು ಹೊಂದುತ್ತಿದ್ದರು. ಇವರ ಸ್ಮರಣಾರ್ಥವಾಗಿ ಒಂದು ಶಿಲಾ ಫಲಕವನ್ನು ಆ ಸ್ಥಳದಲ್ಲಿ ನಿಲ್ಲಿಸುತ್ತಿದ್ದರು.
ಸೂರ್ಯನಿಗೆ ಆ ಕಾಲದಲ್ಲಿ ಬಹುಪ್ರಾಮುಖ್ಯತೆಯನ್ನು ಕೊಡುತ್ತಿದ್ದರು. ರಾಹು ಸೂರ್ಯನನ್ನು ನುಂಗುತ್ತಿರುವುದರಿಂದ ಸೂರ್ಯಗ್ರಹಣವಾಗುತ್ತದೆ ಎಂಬ ನಂಬಿಕೆ ಇತ್ತು. 

ಸೂರ್ಯನಿಗೊದಗಿದ ಈ ಕಷ್ಟ ಸಂದರ್ಭದಲ್ಲಿ ಸಹಾನುಭೂತಿ ತೋರಿಸುವ ರೂಪದಲ್ಲಿ ಚಿತೆ(ಕಿಚ್ಚ) ಪ್ರವೇಶ ಮಾಡಿ ಆತ್ಮ ಸಮರ್ಪಣೆ ಮಾಡಿಕೊಳ್ಳುತ್ತಿದ್ದರು. ಹೀಗೆ ಮಾಡಿಕೊಳ್ಳುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಬಲವಾಗಿತ್ತು. ಅಲ್ಲದೇ ಸೂರ್ಯಗ್ರಹಣ ಸಂದರ್ಭಗಳಲ್ಲಿ ಪವಿತ್ರ ನದಿಗಳಲ್ಲಿ ಸ್ನಾನ ಮಾಡಿ ದೇವಾಲಯಗಳಲ್ಲಿ ಪೂಜೆ ಮಾಡುವುದರೊಂದಿಗೆ ದತ್ತಿದಾನವನ್ನೂ ಸಹ ಕೆಲವರು ಕೊಡುತ್ತಿದ್ದರು ಎಂದು ಸಂಶೋಧಕರಾದ ಡಾ. ಭೋಜರಾಜ ಪಾಟೀಲ ತಿಳಿಸಿದ್ದಾರೆ.

ಸೂರ್ಯಬಲಿದಾನ ಶಿಲಾಫಲಕದ ಸ್ವರೂಪ:
ಕರ್ನಾಟಕದಲ್ಲಿ ಸೂರ್ಯಬಲಿ ಶಿಲಾ ಫಲಕಗಳು ವಿರಳವಾಗಿದ್ದು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬಾಳೂರು, ಹಾಗೂ ತಿಳವಳ್ಳಿಯಲ್ಲಿ (ಈ ಶಿಲಾಫಲಕವನ್ನು ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಇಡಲಾಗಿದೆ.) ಈ ಹಿಂದೆ ದೊರಕಿದ್ದವು. ಸೂರ್ಯ ಬಲಿದಾನದ ಶಿಲಾ ಫಲಕದ ಕೆಳಭಾಗದಲ್ಲಿ ಆತ್ಮ ಬಲಿದಾನ ಮಾಡಿಕೊಳ್ಳುವ ವ್ಯಕ್ತಿಯು ಕೈಮುಗಿದುಕೊಂಡು ನಿಂತಿರುವ ಚಿತ್ರವಿರುತ್ತದೆ. ಮಧ್ಯಭಾಗದಲ್ಲಿ ಅಪ್ಸರೆಯರು ಆತ್ಮಬಲಿದಾನ ಮಾಡಿಕೊಂಡ ವ್ಯಕ್ತಿಯನ್ನು ಸೂರ್ಯಲೋಕಕ್ಕೆ ಕರೆದುಕೊಂಡು ಹೋಗುವ ಚಿತ್ರವಿದ್ದು ಹಾಗೂ ಮೇಲ್ಭಾಗದಲ್ಲಿ ಸೂರ್ಯ ಹಾಗೂ ಚಂದ್ರನ ಚಿತ್ರವಿದ್ದು, ರಾಹು(ಸರ್ಪ) ಸೂರ್ಯನನ್ನು ನುಂಗುತ್ತಿರುವ ಚಿತ್ರವನ್ನು ಕಂಡರಿಸಿ ಆ ಘಟನೆಯ ಕುರಿತು ವಿವರಣೆಯ ಲಿಪಿ ಇರುವುದು ಸಾಮಾನ್ಯ.

ಈಗ ದೊರೆತಿರುವ ಶಿಲಾ ಫಲಕದ ಮೇಲೆ ಲಿಪಿಗಳಿರದೇ ಚಂದ್ರ ಹಾಗೂ ಸೂರ್ಯನ ಚಿತ್ರವಿದ್ದು, ರಾಹು(ಸರ್ಪ) ಸೂರ್ಯನನ್ನು ನುಂಗುವ ಚಿತ್ರ ಮೇಲ್ಭಾಗದಲ್ಲಿರುತ್ತದೆ. ಕೆಳಭಾಗದಲ್ಲಿ ಆತ್ಮ ಬಲಿದಾನವನ್ನು ಮಾಡಿಕೊಂಡ ವೀರನನ್ನು ಸೂರ್ಯಲೋಕಕ್ಕೆ ಅಪ್ಸರೆಯರು ಕರೆದುಕೊಂಡು ಹೋಗುತ್ತಿರುವ ದೃಶ್ಯವನ್ನು ಕಂಡರಿಸಲಾಗಿದೆ. ಈ ಶಿಲಾ ಫಲಕವು ಗರಡಿಮನೆಯ ಮುಂಭಾಗದಲ್ಲಿ ಪತ್ತೆಯಾಗಿದ್ದರಿಂದ ಬಹುಶಃ ಆತ್ಮಬಲಿದಾನ ಹೊಂದಿದಂತವನು ಯೋಧನೇ ಆಗಿರಬಹುದು. ಇಂತಹ ವಿರಳವಾದ ಸೂರ್ಯಬಲಿದಾನ ಶಿಲಾ ಫಲಕವನ್ನು ಸಂರಕ್ಷಿಸಲೇಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.

Comments

Popular posts from this blog

ಹೊಯ್ಸಳರ ಲಾಂಛನದಲ್ಲಿಯ ಪ್ರಾಣಿ ಹುಲಿಯಲ್ಲ ಸಿಂಹ...!

ಹಾವೇರಿ ಜಿಲ್ಲೆಯಲ್ಲಿಯ ಶಾಸನಗಳಲ್ಲಿ ಬಸವಣ್ಣನವರು

ಹಾವೇರಿ ಜಿಲ್ಲೆಯ ಎಂಟು ತಾಲೂಕುಗಳ ಕಿರು ಪರಿಚಯ....!!!!