ಹಾವೇರಿ ಜಿಲ್ಲೆಯಲ್ಲಿ ಮಹಾತ್ಮ ಗಾಂಧೀಜಿಯವರ ನೆನಪು......!!!!
30/01/1948 ರ ಸಾಯಂಕಾಲ 5.07 ಕ್ಕೆ ವಿಶ್ವಸಂಸ್ಥೆಯ ಕಛೇರಿಯ ಮೇಲಿರುವ ವಿಶ್ವಸಂಸ್ಥೆಯ ಸದಸ್ಯತ್ವ ಹೊಂದಿರುವ ಎಲ್ಲಾ ದೇಶಗಳ ಧ್ವಜಗಳು ಅರ್ಧಕ್ಕೆ ಇಳಿಸಲ್ಫಟ್ಟಿದ್ದವು. ಕಾರಣ ಅದೂ ಯಾವುದೋ ರಾಜಕೀಯ ಪಕ್ಷದ ನಾಯಕನ, ರಾಜನ ಸಾವಿಗೆ ಸಂಭಂದಿಸಿದ ವಿಷಯಕ್ಕಲ್ಲ. ಬರಿಮೈಯಲ್ಲಿ ಪಂಚೆಯನ್ನುಟ್ಟು, ಕೋಲನ್ನು ಕೈಯಲ್ಲಿ ಹಿಡಿದು, ದೇಶಿಗರೆಲ್ಲಾ ಖಾದಿ ಬಟ್ಟೆಗಳನ್ನು ತೊಡಬೇಕೆಂದು ತಿಳಿಸುತ್ತಾ ಅಹಿಂಸೆ ಹಾಗೂ ಸತ್ಯ ಎಂಬ ತತ್ವಗಳಿಂದ ಜಗತ್ತನ್ನೇ ಗೆದ್ದು, ಜೀವನೂದ್ದಕ್ಕೂ ಗುಲಾಮಗಿರಿಯನ್ನು ಖಂಡಿಸುತ್ತಾ ಬಂದು ಜೀವನದ ಕೊನೆ ಗಳಿಗೆಯಲ್ಲಿ ಗುಂಡಿಗೆ ಬಲಿಯಾಗಿದ್ದ ಮಹಾತ್ಮ ಗಾಂಧಿಯವರ ಬಗ್ಗೆ ವಿಶ್ವಸಂಸ್ಥೆ ಹಾಗೂ ಅನ್ಯ ದೇಶಗಳು ಇಟ್ಟ ಗೌರವ ಸೂಚಕದ ಪ್ರತಿಬಿಂಬ ಇದಾಗಿತ್ತು. ಜಗತ್ತಿನಲ್ಲಿಯ ಗಾಂಧೀಜಿಯವರ ಅನುಯಾ ಯಿಗಳು ಅಂದು ಶೋಕತಪ್ತರಾಗಿದ್ದರು. ಮನುಷ್ಯತ್ವ ಸತ್ತು ಹೋಯಿತಲ್ಲಾ ಎಂದು ಗೊಳಾಡಿದರು. ಮದುರೈನ ಮ್ಯೂಸಿಯಂನಲ್ಲಿ ಅಂದು ಅವರು ಗುಂಡೇಟು ತಿಂದಾಗ ಹಾಕಿಕೊಂಡಿದ್ದ ಶಾಲು ಹಾಗೂ ದೋತಿಯು ಆ ಕ್ಷಣದಲ್ಲಿಯ ಭೀಕರತೆಯನ್ನು ಇನ್ನೂ ತನ್ನಲ್ಲಿ ಜೀವಂತವಾಗಿರಿಸಿಕೊಂಡಿದೆ.1893 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಘಟನೆ ಮಹಾತ್ಮ ಗಾಂಧೀಜಿಯವರ ಜೀವನದ ದಿಕ್ಕನ್ನು ಬದಲಾಯಿಸಿತು ಎನ್ನಬಹುದು. ಕ್ರಿ.ಶ 1920 ರಿಂದ 1947 ರ ವರೆಗಿನ ವರ್ಷವನ್ನು ಗಾಂಧಿ ಯುಗವೆಂದು ಕರೆಯುತ್ತಾರೆ ಕಾರಣ ಅವರು ಭಾರತೀಯರನ್ನು ಬ್ರಿಟಿಷರ ವಿರುದ್ದ ಅಹಿಂಸಾ ಮಾರ್ಗದಲ್ಲಿ ಹೋರಾಡುವಂತೆ ಪ್ರೇರೇಪಿಸಿದರು.
ಭಾರತದಿಂದಲೇ ಅನಿಷ್ಟ ಪದ್ದತಿಯಾದ ಅಶ್ಪುಶೃತೆಯನ್ನು ಹೋಗಲಾಡಿಸಲು ಟೊಂಕ ಕಟ್ಟಿ ನಿಂತರು. ಭಾರತವನ್ನು ಹಗಲಿರುಳೆನ್ನದೆ ಸಂಪೂರ್ಣವಾಗಿ ಸುತ್ತಿ ಜನರನ್ನು ಸಂಘಟಿಸಲು ಪ್ರಾರಂಭಿಸಿದರು. ಭಾರತದ ಪಿತಾಮಹಾರಾದ ಗಾಂಧಿಜೀಯವರು 01/03/1934 ರಂದು ಈಗಿನ ಹಾವೇರಿ ಜಿಲ್ಲೆಯ ಪ್ರವಾಸ ಕೈಗೊಂಡರು. ಅಸ್ಪೃಶ್ಯರ ಮಕ್ಕಳಿಗೆ ಶಾಲೆಯಲ್ಲಿ ಮುಕ್ತ ಅವಕಾಶವನ್ನು ನೀಡಬೇಕು ಹಾಗೂ ಹರಿಜನರಿಗೂ ದೇವಸ್ಥಾನಗಳಿಗೆ ಅವಕಾಶವನ್ನು ನೀಡಬೇಕೆನ್ನುವ ಮಹಾದಾಸೆಯಿಂದ ಪ್ರವಾಸಕೈಗೊಂಡರು.
ಅಕ್ಕಿಆಲೂರ ಭೇಟಿ:
ತಾ, 01/03/1934 ನೆಯ ದಿವಸ ಗಾಂಧೀಜಿಯವರು ಕಾರವಾರ ಜಿಲ್ಲೆಯ ಕಾರ್ಯ ಪೂರೈಸಿಕೊಂಡು ಧಾರವಾಡ (ಈಗಿನ ಹಾವೇರಿ ಜಿಲ್ಲೆ) ಜಿಲ್ಲೆಯನ್ನು ಪ್ರವೇಶಿಸಿದರು. ಮೊದಲು ಆಲೂರು ಮಹಾಜನರು ಗಾಂಧೀಜಿಯವರನ್ನು ಬಹು ಉತ್ಸಾಹದಿಂದ ಬರಮಾಡಿಕೊಂಡು ಆದಿಜನ ನಿಧಿಗೆ ಹಣವನ್ನು ಸಮರ್ಪಿಸಿದರು. ಅನಂತರ ದೇವಿಹೊಸೂರು ಮಾರ್ಗದಲ್ಲಿ ರಾ| ಬ| ಶೆಟ್ಟರ ಮೊದಲಾದ ಮಹಾಜನರು ಗಾಂಧೀಜಿಯವರನ್ನು ಬಹು ಸಂಭ್ರಮದಿಂದ ಬರಮಾಡಿಕೊಂಡು ಆದಿಜನ ನಿಧಿಗೆ ಹಣವನ್ನು ಒಪ್ಪಿಸಿದರು.
ಹಾವೇರಿಯ ಪ್ರಚಂಡ ಸಭೆ:
ಗಾಂಧೀಜಿಯವರು ತಾ. 1ನೆಯ ಸಾಯಂಕಾಲ 4.00 ಗಂಟೆಗೆ ಹಾವೇರಿಗೆ ಆಗಮಿಸಿದರು. ಮೊದಲು ಶ್ರೀ ಮ.ನಿ.ಪ್ರ ಜಗದ್ಗುರು ಜಯದೇವ ಮುರುಘರಾಜೇಂದ್ರ
ಮಹಾಸ್ವಾಮಿಗಳವರಲ್ಲಿ ಸಂಭಾಷಿಸಲು ಗಾಂಧೀಜಿಯವರು
ಮಹಾಸ್ವಾಮಿಗಳ ಮಠಕ್ಕೆ ದಯಮಾಡಿಸಿದರು. ಅಲ್ಲಿ 15 ನಿಮಿಷಗಳವರೆಗೆ ಮಹಾಸ್ವಾಮಿಗಳವರಿಗೂ ಗಾಂಧೀಜಿಯವರಿಗೂ ಸಂಭಾಷಣೆಗಳಾದ ನಂತರ ಗಾಂಧೀಜಿಯವರು ತಮ್ಮ ಸಾಯಂಕಾಲದ ಊಟೋಪಚಾರಗಳಿಗಾಗಿ ತೆರಳಿದರು. ಗಾಂಧೀಜಿಯವರ ದರ್ಶನಕ್ಕೆ ಸಾಧಾರಣ ಮೂವತ್ತೈದು ಸಾವಿರದವರೆಗೆ ಜನರು ಸೇರಿದ್ದರು. ಇಂಥ ಪ್ರಚಂಡ ಜನ ಸಮೂಹವು ಹಾವೇರಿಯಲ್ಲಿ ಎಂದೂ ಕೂಡಿರಲಿಲ್ಲ. ಆದಿಜನರ ರಾತ್ರಿಯ ಶಾಲೆ ಮತ್ತು ಎಲ್ಲ ಜನರ ಉಪಯೋಗಕ್ಕಾಗಿ ಒಂದು ಧರ್ಮಶಾಲೆಗಳ ಸಂಬಂಧವಾದ ಕಾರ್ಯಗಳು ಇಲ್ಲಿ ಗಾಂಧೀಜಿಯವರಿಂದ ಜರುಗಿದವು. ಗಾಂಧೀಜಿಯವರ ಭಾಷಣ. ಈ ಪ್ರಚಂಡ ಸಭೆಯಲ್ಲಿ ಗಾಂಧೀಜಿಯವರು ಲೌಡ್ ಸ್ಪೀಕರರ್ ಯಂತ್ರದ ಮೂಲಕ ಹಿಂದಿಯಲ್ಲಿ ಭಾಷಣ ಮಾಡಿದರು. ಅದರ ಭಾಷಾಂತರವನ್ನು ಆ ಯಂತ್ರದ ಮೂಲಕವೇ ಶ್ರೀ ಹರ್ಡೆಕರ ಮಂಜಪ್ಪನವರು ಕನ್ನಡದಲ್ಲಿ ಹೇಳಿದರು. ಲಿಂಗಾಯಿತ ಗುರುಪೀಠಾಧಿಪತಿಗಳ ಸಂದರ್ಶನ ಸಂಭಾಷಣಗಳು ನನಗೆ ಬಹು ಸಂತೋಷವನ್ನುಂಟುಮಾಡಿದವು. ಲಿಂಗಾಯಿತ ಧರ್ಮದಲ್ಲಿ ಅಸ್ಪೃಶ್ಯತೆಗೆ ಅವಕಾಶವಿಲ್ಲವೆಂಬುದನ್ನು ತಿಳಿದು ನನಗೆ ಆನಂದವಾಯಿತು. ಸ್ವಾಮಿಗಳು ಸೂಚಿಸಿದಂತೆ ನಾನು ಹರಿಜನರಿಗೆ ಮದ್ಯಪಾನ, ಸತ್ತ ಪ್ರಾಣಿಗಳ ಮಾಂಸ ಮತ್ತು ಗೋಮಾಂಸ, ಭಕ್ಷಣ ನಿಷೇಧ, ಶುಚಿ ಮೊದಲಾದ ವಿಷಯಗಳನ್ನು ತಿಳಿಸುತ್ತಲೇ ಇದ್ದೇನೆ. ಹರಿಹರರಲ್ಲಿ ನನಗೆ ಭೇದ ತೋರುವುದಿಲ್ಲ. ಆದರೆ ಅವರನ್ನು ಹರಿಜನರೆಂದು ಹೇಳಿರಿ, ಹರ ಜನರೆಂದು ಹೇಳಿರಿ, ಶಿವ ಜನರೆಂದು ಹೇಳಿರಿ, ಯಾವ ಶಬ್ದವನ್ನು ಪ್ರಯೋಗಿಸಿದರೂ ಒಬ್ಬ ಪರಮಾತ್ಮನಿಗೇನೇ ಸಂಬಂಧಿಸುತ್ತವೆ. ಗದ್ದಲ ವಿಶೇಷವಾದುದರಿಂದ ಗಾಂಧೀಜಿಯವರು ತಮ್ಮ ಭಾಷಣವನ್ನು ನಿಲ್ಲಿಸಿಬಿಟ್ಟರು. ಗಾಂಧೀಜಿಯವರು ತಂಗಲು ದೊಡ್ಡ ಬೀಡಾರಗಳನ್ನು ಮೈದಾನದಲ್ಲಿ ಹಾಕಲಾಗಿತ್ತು. ಆದಿಜನರ ನಿಧಿಗೆ ಒಂದು ಸಾವಿರ ರೂಪಾಯಿಗಳನ್ನು ಅರ್ಪಿಸಿದರು.ಹಾವೇರಿಯ ವರ್ತಕರಾಗಿದ್ದ 'ಮಕನಲಾಲ್ ಗುಪ್ತಾರಿಗೆ' ರಸ್ತೆ ಪಕ್ಕ ವಿಶ್ರಾಂತಿ ಕಲ್ಲುಗಳನ್ನು ನಿರ್ಮಿಸಲು ಸೂಚಿಸಿ, ಭವನವನ್ನು ಕಟ್ಟಲು ಜಮೀನನ್ನು ಧಾನವಾಗಿ ನೀಡಲು ಸೂಚಿಸಿದರು. ಅದರ ಪರಿಣಾಮವೆಂಬಂತೆ ಮುಂದೆ 1936 ರಂದು ಗುಪ್ತಾರವರು ಈಗಿನ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ (ಈಗಿನ ಹಿರೇಗೌಡರ ಮೋಟಾರ್ಸ್ ಮುಂಭಾಗ) ವಿಶ್ರಾಂತಿ ಕಲ್ಲುಗಳನ್ನು ನಿಲ್ಲಿಸಿದರು ಹಾಗೂ ಭವನಕ್ಕೆ 12 ಎಕರೆ ಜಮೀನನ್ನು ಧಾನವಾಗಿ ನೀಡಿದರು.
ಗಾಂಧೀಜಿಯವರು ಮೋಟೆಬೆನ್ನೂರು ಭೇಟಿ:
ಸೌ|| ಸಿದ್ಧಮತಿ ದೇವಿಯವರ ಅಪೇಕ್ಷೆಯ ಮೇರೆಗೆ ಮೋಟೆಬೆನ್ನೂರಿಗೆ ತೆರಳಿದರು. ಅಲ್ಲಿ ಶ್ರೀಯುತ ಪಾಟೀಲ ವೀರನಗೌಡರ ಧರ್ಮಪತ್ನಿ ಯವರಾದ ಸೌ| ಸಿದ್ಧಮತಿ ದೇವಿಯವರೂ ಹೆಣ್ಣು ಮಕ್ಕಳಲ್ಲಿ ಮಾಡಿದ ಜಾಗೃತಿಯನ್ನು ನೋಡಿ ಅವರು ಅರ್ಪಿಸಿದ ಹಣವನ್ನು ಸ್ವೀಕರಿಸಿ ಬ್ಯಾಡಗಿಗೆ ದಯಮಾಡಿಸಿದರು.
ಬ್ಯಾಡಗಿಯ ಸುಂದರ ಸಭೆ:
ಬ್ಯಾಡಗಿಯ ಮಹಾಜನರು ತಮ್ಮ ಊರನ್ನು ತಳಿರು-
ತೋರಣ ರಂಗವಲ್ಲಿಗಳಿ೦ದ ಬಹು ಶೃಂಗಾರಗೊಳಿಸಿದ್ದರು. ಸಭಾಮಂಟಪವೂ ಬಹು ಅಂದವಾಗಿದ್ದಿತು. 10 ರಿಂದ 15 ಸಾವಿರ ಜನರುಸೇರಿದ್ದರು. ಗಾಂಧೀಜಿಯವರ ಹಿಂದಿ ಭಾಷಣವನ್ನು ಶ್ರೀ ದೇಶಪಾಂಡೆ ಗಂಗಾಧರರಾಯರು ಕನ್ನಡದಲ್ಲಿ ಅನುವಾದ ಮಾಡಿದರು. ಲಿಂಗಾಯತರ ಸಂಖ್ಯೆ 40 ಲಕ್ಷ ಇದ್ದು ಕರ್ನಾಟಕದಲ್ಲಿ ಅವರೇ ಬಹು ಸಂಖ್ಯಾತರಿದ್ದು ಇಂಥಹ ಸಮಾಜದ ಗುರುಪೀಠಾಧಿಪತಿಗಳು
ಅಸ್ಪೃಶ್ಯತಾ ನಿವಾರಣೆಗೆ ಅನುಕೂಲವಾಗಿದ್ದ ಸಂಗತಿ ಈ ದಿನದ ಸಂಗತಿಯಿಂದ ನನಗೆ ಗೊತ್ತಾಗಿ ಬಹು ಸಂತೋಷವಾಯಿತು. ಎಂಬಂಶವನ್ನು ಗಾಂಧೀಜಿಯವರು ಮೊದಲು ತಮ್ಮ ಭಾಷಣದಲ್ಲಿ ಸೂಚಿಸಿದರು. ಬ್ಯಾಡಗಿ ಜನರು ಆದಿಜನರ ನಿಧಿಗೆ 551 ರೂಪಾಯಿಗಳನ್ನು ಅರ್ಪಿಸಿದರು. ಲಿಲಾವಿನಲ್ಲಿ ಸಾಮಾನುಗಳನ್ನು ಬಹು ಉತ್ಸಾಹದಿಂದ ಹೆಚ್ಚು ಕ್ರಯಕ್ಕೆ ತೆಗೆದುಕೊಂಡರು.
ರಾಣೆಬೆನ್ನೂರಿನ ಶಾಂತ ಸಭೆ:
02/03/1934 ರಂದು ರಾಣೆಬೆನ್ನೂರು ಸ್ಟೇಶನ್ನಿನ ಹೊಂದಿಕೊಂಡು ಮೂವತ್ತು ನಾಲ್ಕು ಸಾವಿರ ಜನ ಸಭೆಗೆ ಸೇರಿದ್ದಿತು. ಕಾರ್ಯಕ್ರಮ 10 ನಿಮಿಷಗಳ ಕಾಲ ಜರುಗಿತು. ಆ ದೊಡ್ಡ ಸಭೆಯಲ್ಲಿ ಶಾಂತಿಯೇ ತುಂಬಿತ್ತು. ಗಾಂಧೀಜಿಯವರು ಬಹು ಮಹತ್ವದ ಅಭಿಪ್ರಾಯ ವ್ಯಕ್ತಗೊಳಿಸಿದರು ಯಾವ ಜಾತಿಯ ಮನುಷ್ಯರೇ ಆಗಿರಲಿ, ಅವರನ್ನು ಮುಟ್ಟುವದಿಲ್ಲವೆಂಬುದೇ
ಎಂಬ ಸಿದ್ಧಾಂತವನ್ನು ವಿವರಿಸಿದರು. ಇಲ್ಲಿಯ ಜನರು
ಆದಿಜನರ ನಿಧಿಗೆ 600 ರೂಪಾಯಿಗಳನ್ನು ಅರ್ಪಿಸಿದರು, ಆದಿಜನರ "ಜಮಾಲಪ್ಪ" ಎಂಬಾತನು ಗಾಂಧೀಜಿಯವರಿಗೆ ಬಹು ಮಿದುವಾದ ಪಾದರಕ್ಷೆಗಳನ್ನು ಮಾಡಿಕೊಂಡು ಬಂದು ಅವರ ಪಾದಕ್ಕೆ ತೊಡಿಸಿದನು. ರಾಣೇಬೆನ್ನೂರ ಕಾರ್ಯಕ್ರಮವನ್ನು ಮುಗಿಸಿಕೊಂಡು ದಾವಣಗೇರೆಗೆ ಪ್ರಯಾಣ ಬೆಳಿಸಿದರು.
ಗಾಂಧೀಜಿಯವರು ಹಾವೇರಿಯೊಂದಿಗೆ ಅನನ್ಯವಾದ ಸಂಬಂಧವನ್ನಿಟ್ಟುಕೊಂಡಿದ್ದರ ಪ್ರಯುಕ್ತ ಅವರು ಈಗಿನ ಹಾವೇರಿ ಜಿಲ್ಲೆಗೆ ಎರಡು ದಿನದ ಭೇಟಿ ನೀಡಿದ್ದೊಂದು ಐತಿಹಾಸಕ ಘಟನೆ ಎನ್ನಬಹುದು. ಮಹಾತ್ಮ ಗಾಂಧೀಜಿಯವರು ಸಾಬರಮತಿ ಅಶ್ರಮದಲ್ಲಿ ಬೆಳೆದ ಸಾಕುಮಗಳಾದ ವೀರಮ್ಮಳನ್ನು ಹಾವೇರಿ ತಾಲೂಕಿನ ( ಅಂದು ಕರ್ಜಗಿ ತಾಲೂಕಾಗಿತ್ತು) ಸಂಗೂರ ಕರಿಯಪ್ಪನವರಿಗೆ ವಿವಾಹ ಮಾಡಿಕೊಟ್ಟಿದ್ದರು ಈ ವಿವಾಹವು ಜಾತ್ಯತೀತ ನಿಲುವನ್ನು ಬಿಂಬಿಸುವಂತದ್ದು. ತಮ್ಮ ಮಗಳ ಆರೋಗ್ಯವನ್ನು ಕುರಿತು ಆಗಾಗ ಗಾಂಧೀಜಿಯವರು ಪತ್ರವನ್ನು ಬರೆಯುತ್ತಿದ್ದರು. ಆದರೆ ಆ ಪತ್ರಗಳು ಈಗ ನೋಡಲು ದೊರೆಯುತ್ತಿಲ್ಲ. ಗಾಂಧೀಜಿಯವರ ಮರಣಾನಂತರ ಅವರ ಅಸ್ತಿಯನ್ನು ಸಂಗೂರ ಕರಿಯಪ್ಪನವರು ತಗೆದುಕೊಂಡು ಬಂದು ಸಂಗೂರಿನಲ್ಲಿ ಸಮಾಧಿಯನ್ನು ನಿರ್ಮಿಸಿದರು. ಕರ್ಜಗಿಯಲ್ಲಿ ಹೊಸಮನಿ ಸಿದ್ದಪ್ಪನವರ ನೇತೃತ್ವದಲ್ಲಿ ತಂದು ಅಲ್ಲಿ ಗದ್ದುಗೆ ನಿರ್ಮಾಣ ಮಾಡಲಾಯಿತು. ಸ್ವಾತಂತ್ರ ಹೋರಾಟದ ಸಮಯದಲ್ಲಿ ಗಾಂಧಿವಾದಿಗಳು ಜಂಗಮನಕೊಪ್ಪದ ಬಳಿ ಸೇರುತ್ತಿದ್ದರು. ಮುಂದೆ ಆ ಸ್ಥಳ ಗಾಂಧಿಪುರವೆಂಬ ಹೆಸರಿನಿಂದ ಬದಲಾಯಿತು ಎನ್ನುವುದನ್ನಾ ದಿ.ಕರಿಯಪ್ಪ ಹುಚ್ಚಣ್ಣನವರು ಹೇಳುತ್ತಿದ್ದರು. ಹೀಗೆ ಗಾಂಧೀಜಿಯವರು ಜಿಲ್ಲೆಯ ಹೋರಾಟಗಾರರಾದ ಮೈಲಾರ ಮಹಾದೇವಪ್ಪ, ಹೊಸಮನಿ ಸಿದ್ದಪ್ಪ, ಕೆ.ಎಫ್. ಪಾಟೀಲ, ಸಂಗೂರ ಕರಿಯಪ್ಪ, ಕರಿಯಪ್ಫ ಹುಚ್ಚಣ್ಣನವರ, ಮೆಣಸಿನಹಾಳ ತಿಮ್ಮನಗೌಡ್ರ, ಗುದ್ಲೇಪ್ಪ ಹಳ್ಳಿಕೇರಿ ಹಾಗೂ ಇನ್ನೂ ಅನೇಕರೊಂದಿಗೆ ಆತ್ಮೀಯತೆಯನ್ನು ಹೊಂದಿದ್ದರು ಎನ್ನುವುದು ಜಿಲ್ಲೆಯವರಾದ ನಮಗೆ ಹೆಮ್ಮೆಯ ವಿಷಯ. ಹಾವೇರಿಯ ಮುನ್ಸಿಪಲ್ ಹೈಸ್ಕೂಲನಲ್ಲಿರುವ ರವೀಂದ್ರನಾಥ ಟ್ಯಾಗೂರವರ ತೈಲ ಚಿತ್ರ, ಪತ್ರಗಳು, ಅವರ ಭಾಷಣ ಮಾಡಿದ್ದ ಗಾಂಧಿ ಕಟ್ಟೆ (ಮುನ್ಸಿಪಲ್ ಹೈಸ್ಕೂಲ್ ಹಿಂಬಾಗದಲ್ಲಿತ್ತು. ಆದರೆ ಈಗ ಅದು ಕಾಣುತ್ತಿಲ್ಲಾ) ಹಾಗೂ ಕರ್ಜಗಿ ಮತ್ತು ಸಂಗೂರನಲ್ಲಿರುವ ಅವರ ಅಸ್ತಿ ಆ ನೆನಪುಗಳನ್ನು ಇನ್ನೂ ಜೀವಂತವಾಗಿರಿಸಿಕೊಂಡಿರುವುದು ವಿಶೇಷ. ಅಹಿಂಸೆ ಹಾಗೂ ಪ್ರೀತಿಯಿಂದ ಜಗತ್ತನ್ನೆ ಗೆಲ್ಲಬಹುದು ಎಂದು ತೋರಿಸಿಕೊಟ್ಟ ಮಹಾ ದಾರ್ಶನಿಕರು ಗಾಂಧಿಯವರು. ಅವರ ಪಾದವನ್ನು ಸ್ಪರ್ಶಿಸಿದ ನಮ್ಮ ಭೂಮಿಯೇ ಪುಣ್ಯಭೂಮಿ. ಅವರ ತತ್ವ- ಆದರ್ಶಗಳು ಮುಂದಿನ ಪೀಳಿಗೆಯವರಿಗೆ ಆದರ್ಶವಾಗಲಿ ಎನ್ನುವುದು ನನ್ನಯ ಮಹಾದಾಸೆ.
#ಪ್ರಮೋದ_ನಲವಾಗಲ
9686168202
Comments
Post a Comment