ಶರೀಫ ಶಿವಯೋಗಿಗಳ ಹುಟ್ಟುರು ಶಿಶುನಾಳ....!!

                   ಗ್ರಾಮ:ಶಿಶುನಾಳ
ಶಿಶುನಾಳ ಗ್ರಾಮವು ಕರ್ನಾಟಕದಲ್ಲಿಯೇ ಶರೀಫ ಸಾಹೇಬರಿಂದ ಪ್ರಸಿದ್ದಿಯನ್ನು ಪಡೆದ ಗ್ರಾಮವಾಗಿದೆ. ಶಿಗ್ಗಾಂವಿಯಿಂದ ಕೇವಲ 15 ಕಿ.ಮೀ ದೂರದಲ್ಲಿದೆ. "ಶಿಶುನಾಳಧೀಶ" ಈ ಗ್ರಾಮದ ಅಧಿದೇವತೆಯಾಗಿದ್ದರಿಂದ ಈ ಗ್ರಾಮದ ಹೆಸರು ಶಿಶುನಾಳ ಎಂದು ಜನಸಾಮಾನ್ಯರಲ್ಲಿ ಪ್ರಚಲಿತವಾಗಿದೆ. 

ವಿಶಾಲವಾದ ದೇವಸ್ಥಾನದ ಮಧ್ಯದಲ್ಲಿ ಸ್ತಂಭದ ಮೇಲಿರುವ ನಂದಿಯೇ ಶಿಶುನಾಳಧೀಶ(ಬಯಲು ಬಸವಣ್ಣ). ಇದರ ಸ್ತಂಭದ ಮೇಲೆ 12-13 ನೇ ಶತಮಾನಕ್ಕೆ ಸೇರಿದ ಶಾಸನದಲ್ಲಿ, ಇಲ್ಲಿಯ ಭೋಗನಾಥ ಹಾಗೂ ಮಲ್ಲಿನಾಥದೇವರಿಗೆ ಬಿಟ್ಟ ಭೂದಾನದ ಬಗ್ಗೆ ತಿಳಿಸುತ್ತದೆ. ಸಮೀಪದಲ್ಲಿ ಹುಲಗೂರ ಹಾಗೂ ವೀರಭದ್ರೇಶ್ವರ ದೇವರಿಂದ ಪ್ರಸಿದ್ಧಿಯನ್ನು ಪಡೆದ ಕಾರಡಗಿ ಗ್ರಾಮಗಳನ್ನು ನೋಡಬಹುದು. ಹುಲಗೂರನ್ನು ಶಾಸನಗಳಲ್ಲಿ "ಪುಲ್ಲಂಗೂರು" ಎಂದು ಕರೆಯಲಾಗಿದೆ. ಇಲ್ಲಿಯ " ಪುಲಂಗೂರಬ್ಬೆ" ಗ್ರಾಮದೇವತೆಯಿಂದಾಗಿ ಈ ಹೆಸರು ಈ ಗ್ರಾಮಕ್ಕೆ ಬಂದಿದೆ ಎನ್ನಲು ಕ್ರಿ.ಶ 970 ರ ರಾಷ್ಟ್ರಕೂಟರ ಶಾಸನ ಮೂಖ ಸಾಕ್ಷಿಯಾಗಿದೆ. ಕ್ರಿ.ಶ 1245 ರ ಶಾಸನದಲ್ಲಿ ಕದಂಬ ಮಲ್ಲಿದೇವನ ರಾಣಿ ಪದ್ಮಲದೇವಿ ಹುಲಗೂರಲ್ಲಿ ಪ್ರಸನ್ನಕೇಶವ, ಮಾಧವ ಹಾಗೂ ನಾರಾಯಣ ದೇವರ ಮೂರ್ತಿ ಪ್ರತಿಷ್ಠಾಪನೆ ಮಾಡಿ “ಪ್ರಸನ್ನಪುರಿ” ಎಂಬ ಬ್ರಹ್ಮಪುರಿಯನ್ನು ಸ್ಥಾಪಿಸಿದ ವಿಷಯ ತಿಳಿಸುತ್ತದೆ. ಒಟ್ಟು 13 ಶಾಸನಗಳು ಇಲ್ಲಿಯವರೆಗೂ ಹುಲಗೂರಿನಲ್ಲಿ ದೊರೆತಿವೆ. 

ಸಂತರಾದ "ಹಜರತ್ ಷಾಹ್ ಖಾದರಿರವರು" ಸುಮಾರು 1800 ರಲ್ಲಿ ಸವಣೂರಿನ ನವಾಬನಾದ ಖೈರಖಾನನ ರಾಜ್ಯದಲ್ಲಿ ವಾಸವಾಗಿದ್ದರು. ಆದರೆ ನವಾಬ ಭಕ್ತರ ಮೇಲೆ ಮಾಡಿದ ತಪ್ಪನ್ನು ಕ್ಷಮಿಸದೆ ಅವನಿಗೆ ಶಾಪವನಿತ್ತು ಐತಿಹಾಸಿಕ ಸ್ಥಳವಾದ ಹುಲಗೂರಿಗೆ ಬಂದು ವಾಸಿಸಲಾರಂಭಿಸಿದರು. ಇಲ್ಲಿಯೇ ಅವರು ಕೊನೆಯ ದಿನಗಳನ್ನು ಕಳೆದರು. ಅವರ ಗದ್ದುಗೆಯನ್ನು ಪಾಣಿಗಟ್ಟಿಗೆ ಹೋಗುವ ಮಾರ್ಗದಲ್ಲಿ ನೊಡಬಹುದು. 

ಅವರ ಹಾಗೂ ಅವರ ಸಬಂಧಿಕರ ಸಮಾಧಿಗಳನ್ನು ನಾವು ಇಂದಿಗೂ ಇಲ್ಲಿ ನೋಡಬಹುದಾಗಿದೆ. ಗುರುಗಳಾದ ಹಜರತಷಾಹಾರ ಜಾತ್ರೆಯು ಪ್ರತಿ ವರ್ಷ ಮಾಘ ಪೂರ್ಣಿಮೆಯಲ್ಲಾಗುತ್ತದೆ. ಸವಣೂರಿನ ಅಂದಿನ ನವಾಬನಾಗಿದ್ದ ನವಾಬ ಅಬ್ದುಲ್ ದಲೀಲ್‍ಖಾನ ಗುರುಗಳ ಮಹಾಭಕ್ತನಾಗಿದ್ದನು. ವಾರಗಟ್ಟಲೇ ನಡೆಯುವ ಹಜರತ್‍ಷಹಾರ ಜಾತ್ರೆಯಲ್ಲಿ ತಪ್ಪದೆ ಹಾಜರಾಗುತ್ತಿದ್ದನು. ಹೀಗಾಗಿ  ಧಾರವಾಡ ಜಿಲ್ಲೆಯ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರ ದಂಡು ಹುಲಗೂರಿಗೆ ಹರಿದು ಬರುತ್ತಿತ್ತು. ಈ ಸಂತನ ದರ್ಗಾಕ್ಕೆ ಬ್ರಿಟಿಷ್ ಸರಕಾರದಲ್ಲಿ 500 ರೂಪಾಯಿಗಳ ಭೂಮಿ ನಡೆಯುತ್ತಿತ್ತು ಹಾಗೂ ವಾರ್ಷಿಕ 150 ರೂಪಾಯಿ ನಗದು ದೊರೆಯತ್ತಿತ್ತು. 

ಇಂತಹ ಮಹಾನ ಸಂತನಿಗೆ ಇಮಾಮ್ ಸಾಹೇಬ ಮತ್ತು ಹಜ್ಜೂಮಾ ದಂಪತಿಗಳು ನಡೆದುಕೊಳ್ಳುತ್ತಿದ್ದರು. ಅವರಿಗೆ ಮಕ್ಕಳಿಲ್ಲ ಎಂಬುವ ಕೊರಗಿತ್ತು. ಈ ದಂಪತಿಗಳಿಗೆ ಸಂತರ ಆಶಿರ್ವಾದದಿಂದ  1819 ರ ಮಾರ್ಚ 07ರ ಅಮವಾಸ್ಯೆಯೆಂದು ಮುದ್ದಾದ ಗಂಡು ಮಗುವೊಂದು  ಜನಿಸಿತು. ಅದುವೇ ಮಹಮದ್ ಶರೀಫ (ಶಿಶಿನಾಳ ಶರೀಫ ಸಾಹೇಬ). ಈ ಚೈತನ್ಯಶಾಲಿಯಾದ ಮಗುವಿನ ಜನನವನ್ನು ಶಿಶುನಾಳ ಸಮೀಪದ ಕಳಸದಲ್ಲಿ ಹಿರಿಯ ಜೀವಿಯೊಂದು ಕಾಯುತ್ತಿತ್ತು. ಕಳಸವು ಕುಂದಗೊಳ ತಾಲೂಕಿನ ಒಂದು ಚಿಕ್ಕಗ್ರಾಮ. ಇದನ್ನು ಶಾಸನಗಳಲ್ಲಿ " "ಕಾಡಿಯುರು" ಎಂದು ಉಲ್ಲೇಖಿಸಲಾಗಿದೆ. ಇದೊಂದು ಮಹಾಜನರಿರುವ ಅಗ್ರಹಾರಗಿತ್ತು. ಇಲ್ಲಿಯ ಬ್ರಾಹ್ಮಣ ಗುರುಗಳಾದ ಗುರುಗೋವಿಂದ ಭಟ್ಟರು ತನ್ನ ಪರಮಾಪ್ತ ಶಿಷ್ಯನನ್ನಾಗಿ ಮಾಡಿಕೊಂಡಿದ್ದು ಮುಸಲ್ಮಾನ ಜಾತಿಯ ಹುಡುಗನಾದ ಇದೇ ಶರೀಫರನ್ನು. ಇದು ಜಾತಿ-ಧರ್ಮವನ್ನು ಮೀರಿದ ಗುರು-ಶಿಷ್ಯರ ಸಂಬಂಧವೆನ್ನಬಹುದು. 

ಗುರು ಗೋವಿಂದ ಭಟ್ಟರಲ್ಲಿ ಶರೀಫ ಶಿವಯೋಗಿಗಳು ಅಧ್ಯಾತ್ಮಿಕ ನೆಲೆಯನ್ನು ಕಂಡರು. ಜೀವನದಲ್ಲಿ ಯಾವುದು ಶಾಶ್ವತವಲ್ಲಾ ಎಂದು ಅರಿತ ಜೀವಿಗಳಾಗಿ, ಸಮಾಜದ ಅಂಕು-ಡೊಂಕುಗಳನ್ನು ತಮ್ಮದೆ ರೀತಿಯಲ್ಲಿ ತತ್ತ್ವ ಪದಗಳನ್ನು ಕಟ್ಟುತ್ತಾ-ಹಾಡುತ್ತಾ ಸಂಚಾರಿಗಳಾಗಿ, ಭಕ್ತಿ ಮಾರ್ಗದಿಂದ ಮುಕ್ತಿ ಕಾಣಬಹುದು ಎಂದು ತಿಳಿಸುತ್ತಾ ನಡೆದರು. "ಸೋರುತಿಹುದು ಮನೆಯ ಮಾಳಿಗೆ ಅಜ್ಞಾನದಿಂದ", "ತರವಲ್ಲ ತಗಿ ನಿನ್ನ ತಂಬೂರಿ" ಎಂಬ ಅನೇಕ ತತ್ತ್ವಪದಗಳನ್ನು ಅವರು ಹಾಡಿದರು. ಅವುಗಳನ್ನು ಕೇಳಿ ಮಂತ್ರ ಮುಗ್ದರಾದ ಜನರು ಕೋರಿ ಕಾಗದದ ಮೇಲೆ ಹಾಗೂ ಹಾಳೆಯ ಮೇಲೆ ಬರೆದಿಟ್ಟುಕೊಂಡು ಹಾಡಿ ಕುಣಿದರು. ಜೀವನದಲ್ಲಿ ಅಹಿಂಸೆ, ಜಾತ್ಯಾತೀತತೆ ಹಾಗೂ ಸಕಲ ಜೀವಿಗಳಿಗೂ ಲೇಸು ಬಯಸಿ, ನಿಸ್ವಾರ್ಥಿಗಳಾಗಿ ಈ ಲೌಕಿಕ  ಬದಕನ್ನು ಷರೀಫ್ ಸಾಹೇಬರು  ಬಿಟ್ಟು ನಡೆದಾಗ, ಅವರ ಶವಸಂಸ್ಕಾರವನ್ನು ಮಾಡುವಾಗ ಒಡೆದ ಮನಸ್ಸುಗಳಿಂದಾಗಿ ಸ್ವಲ್ಪ ತಡವಾಯಿತಾದರೂ ಹಂದಿಗನೂರ ದೇಸಾಯಿಗಳಾದ ಬುಳ್ಳಪ್ಪ ದೇಸಾಯಿಯವರು ಆ ಸಂದಿಗ್ದ ಸ್ಥಿತಿಯನ್ನು ನಿಭಾಯಿಸಿದರೂ. ತಂದೆ ತಾಯಿಯ ಮೇಲೆ ಅಪಾರವಾದ ಪ್ರೀತಿಯನ್ನು ಇಟ್ಟವರು, ತಾವೆ ನೆಟ್ಟ ಗಿಡಗಳ ಕೆಳಗೆ ಹೆತ್ತವರ ಜೊತೆಯಲ್ಲಿ ಚಿರನಿದ್ರೆಯಲ್ಲಿ ಮಲಗಿದರೂ ಸಹ ಬೇಡಿ ಬಂದಂಥ ಭಕ್ತರಿಗೆ ಬೇಡಿದಂತಹ  ವರವನ್ನು ಕೊಡುವ ಕಲ್ಪವೃಕ್ಷವಾಗಿದ್ದಾರೆ.  ವಿಪರ್ಯಾಸವೆಂದರೇ ಇಂತಹ ಮಹಾನುಭಾವರ ಅನೇಕ ತತ್ವಪದಗಳು ಹಾಳಾದವು. ಆದರೆ ಅವುಗಳಲ್ಲಿ ಕೆಲವುಗಳನ್ನು ಮಾತ್ರ ಸಂಗ್ರಹಿಸುವಲ್ಲಿ ಡಾ. ಮಲ್ಲಿಕಾರ್ಜುನ ಸಿಂದಗಿ, ವಿ.ಕೆ ಗೋಕಾಕ, ಪಂಡಿತ ಸದಾಶಿವ ಶಾಸ್ತ್ರಿಗಳು ಹಾಗೂ ಪೆÇ್ರ. ಎಸ್. ಎಸ್. ಮಾಳವಾಡರು ಶ್ರಮ ವಹಿಸಿದರು. ಪೆÇ್ರ. ಎಸ್. ಎಸ್. ಮಾಳವಾಡರು ಶರೀಫ ಸಾಹೇಬರ ಜೀವನ ವೃತ್ತಾಂತದ ಬಗ್ಗೆ ತಿಳಿಯಲು ಬಯಸಿ ಬರೆದ ಪತ್ರವು ಅತ್ತಿಗೇರೆಯ ಶಂಕರಗೌಡ ಪಾಟೀಲರ ಮನೆಯಲ್ಲಿ ಇನ್ನೂ ಜೀವಂತವಾಗಿವೆ. ಆನೇಕ ಸಾಹಿತಿಗಳ ಪರಿಶ್ರಮದಿಂದ ಹಾಗೂ ದಾನಿಗಳಾದ ಹರಿ ಖೋಡೆಯವರಿಂದ ಕತ್ತಲಲ್ಲಿದ್ದ ಷರೀಫ ಸಾಹೇಬರು ಹಾಗೂ ಅವರ ತತ್ತ್ವಪದಗಳು ಜಗತ್ತಿಗೆ ಚಿರಪರಿಚಿತವಾದವು. ಕರ್ನಾಟಕದ ಕಬೀರನೆಂದು ಜನಮಾನಸದಲ್ಲಿ ಉಳಿಯುವಂತಾದರು ಶರೀಫ ಸಾಹೇಬರು. ಸುಮಾರು 1954 ರಲ್ಲಿ ಚಿಕಾಗೋ(Chicago ) ವಿಶ್ವವಿದ್ಯಾಲಯದ ಪ್ರೊ. ವಿಲಿಯಂ.ಸಿ.ಎಂ ಕಾರಮ್ಯಾಕ್, ಪಂಡಿತ ಸದಾಶಿವ ಶಾಸ್ತ್ರಿಗಳ ಬರೆದ "ಶರೀಫ ಸಾಹೇಬರ ಪುರಾಣವನ್ನು" ಕೇಳಿ ಇದನ್ನು ಇಂಗ್ಲೀಷನಲ್ಲಿ ತರ್ಜುಮೆ ಮಾಡಿ ಅಮೇರಿಕಾದ ಪ್ರತಿಯೊಂದು ಗ್ರಂಥಾಲಯದಲ್ಲಿಡಲು ಸೂಕ್ತವೆಂದು ಶಿಫಾರಸ್ಸು ಮಾಡಿದ ಪತ್ರವನ್ನು ಈಗಲೂ ಸಮೀಪದ ಅತ್ತಿಗೇರೆಯಲ್ಲಿ ನೋಡಬಹುದಾಗಿದೆ.

                _ಪ್ರಮೋದ ನಲವಾಗಲ_
                      9686168202

Comments

Popular posts from this blog

ಹೊಯ್ಸಳರ ಲಾಂಛನದಲ್ಲಿಯ ಪ್ರಾಣಿ ಹುಲಿಯಲ್ಲ ಸಿಂಹ...!

ಹಾವೇರಿ ಜಿಲ್ಲೆಯಲ್ಲಿಯ ಶಾಸನಗಳಲ್ಲಿ ಬಸವಣ್ಣನವರು

ಹಾವೇರಿ ಜಿಲ್ಲೆಯ ಎಂಟು ತಾಲೂಕುಗಳ ಕಿರು ಪರಿಚಯ....!!!!