ಕಟ್ಟುತ್ತಾ ಬಂದ “ಕಲ್ಯಾಣಗಳ” ಕೊನೆಯ ಕೊಂಡಿ ಕಳಚಿಬಿತ್ತೇ ? ಕಾಗಿನೆಲೆಯಲ್ಲಿ
ಕಟ್ಟುತ್ತಾ ಬಂದ “ಕಲ್ಯಾಣಗಳ” ಕೊನೆಯ ಕೊಂಡಿ ಕಳಚಿಬಿತ್ತೇ ? ಕಾಗಿನೆಲೆಯಲ್ಲಿ
“ ಕಾಗಿನೆಲೆ ಹನ್ನೆರಡು” ಎಂದೇ ಪ್ರಸಿದ್ದಿಯನ್ನು ಪಡೆದ ಪಟ್ಟಣ, ಪ್ರಾಚೀನ ಕಾಲದಲ್ಲಿ ಅತಿಯಾದ ಪ್ರಾಕೃತಿಕ ಸೌಂದರ್ಯವನ್ನು ಹೊಂದಿತ್ತು ಎಂದು ಶಾಸನ ಕವಿ ಹೀಗೆ ವರ್ಣಿಸುತ್ತಾನೆ. ಸಮುದ್ರದಂತೆ ಹೊಳೆಯುತ್ತಿರುವ ದೊಡ್ಡಕೆರೆ, ಸುಂದರವಾದ ಉದ್ಯಾನವನಗಳು, ಅತಿಯಾದ ನೆರಳನ್ನುಂಟು ಮಾಡುವ ಎಲೆ ಬಳ್ಳಿಗಳು, ಸುತ್ತಮುತ್ತ ಹರಡಿ ಕಣ್ಣಿಗೆ ರಂಜನೆ ಇಯುವ ಸುರಗಿ, ನಾಗ ಕುಸುಮಗಳ ಪುಷ್ಪಲತಾ ಗೃಹಗಳು ಸವಿಸ್ತಾರವಾಗಿ ಹಬ್ಬಿದ್ದು. ಕಾಗಿನೆಲೆಯನ್ನು ಸೌಂದರ್ಯದ ತಾಯಿ ನೆಲೆಯಾಗಿ ರಂಜಿಸುತ್ತಿವೆ ಎಂದು ಅನೇಕ ಕವಿಗಳು ವರ್ಣಿಸಿದ್ದಾರೆ.
ಅಗ್ರಹಾರವಾಗಿದ್ದಂತಹ ಸುಗಂಧ ಬೀರುವ ನಾಡು ಕಾಗಿನೆಲೆ. ಈ ನಾಡು ದೊಡ್ಡಕೆರೆಯಿಂದ, ಭತ್ತ-ಗದ್ದೆಗಳಿಂದ, ಫಲಪುಷ್ಪ ಗಿಡಗಳಿಂದ, ಸುಂದರ ದೇವಾಸ್ಥಾನಗಳಾದಂತಹ ಕಲ್ಲೇಶ್ವರ, ಕಾಳಹಸ್ತೇಶ್ವರ, ಹಾಗೂ ಲಕ್ಷ್ಮೀ ನರಸಿಂಹ ದೇವಾಲಯದಿಂದ ಸುತ್ತ-ಮುತ್ತಲಿನ ಪ್ರದೇಶದಲ್ಲಿಯೇ ಪ್ರಸಿದ್ದಿಯನ್ನು ಪಡೆದಿತ್ತು.
ಇಲ್ಲಿಯ ಸಂತ ಶ್ರೀ ಕನಕದಾಸರ ಗದ್ದುಗೆ ನಾಡಿನ ಎಲ್ಲಾ ಜನರ ಮನಸ್ಸನ್ನು ಕೀರ್ತನೆಯಿಂದ ಬಡಿದ್ದೆಬ್ಬಿಸುತ್ತಾ ಜ್ಞಾನ ಮಾರ್ಗದ ಕಡೆಗೆ ಒಯ್ಯಲು ಸದಾ ಚೈತನ್ಯಶಾಲಿಯಾಗಿ ನಿಂತ ಅದ್ಬುತ ಕೇಂದ್ರ ಬಿಂದುವಾಗಿದೆ. ಇಂತಹ ಕಾಗಿನೆಲೆಗೂ ಹಾಗೂ ವಿಶ್ವಗುರು ಬಸವಣ್ಣನವರ ಕಲ್ಯಾಣಕ್ಕೂ ಅವಿನಾಭಾವ ಸಂಭಂದವಿದೆ ಎಂಬುದೇ ಇಲ್ಲಿ ಪ್ರಾಮುಖ್ಯತೆಯನ್ನು ಪಡೆದಕೊಂಡ ವಿಷಯ.
ಕಲ್ಯಾಣ ಎಂಬ ಶಬ್ದಕ್ಕೆ ಪರಿಪೂರ್ಣವಾದ ಅರ್ಥವನ್ನು ಕೊಟ್ಟ ಏಕೈಕ ವ್ಯಕ್ತಿ ಎಂದರೆ ಬಸವಣ್ಣನವರು. ಇಂತಹ ಕಲ್ಯಾಣವನ್ನು ಜನರ ಆತ್ಮ ಕಲ್ಯಾಣಕ್ಕಾಗಿ ಹಾಗೂ ಸಮಾಜ ಕಲ್ಯಾಣಕ್ಕಾಗಿ ಹಂತ-ಹಂತವಾಗಿ ಕಟ್ಟುತ್ತಾ ಬಂದರು. ಈ ಕಾರ್ಯ ಬಸವಣ್ಣನವರಿಂದ ಪ್ರಾರಂಭವಾಗಿ ತದನಂತರ ಬೇರೆಯವರಿಂದ ಮುಂದುವರಿಯುತ್ತಾ ಹೋಯಿತು ಎನ್ನಬಹುದು.
ಕೆಲವು ಅಹಿತಕರವಾದ ಘಟನೆಯಿಂದ ನಿಂತು ಹೋಗಿದ್ದ “ಕಲ್ಯಾಣ” ಕಟ್ಟುವ ಕೆಲಸವನ್ನು ಸಮಯಕಲ್ಯಾಣ, ವಿಜಯಕಲ್ಯಾಣ, ಅಮರಕಲ್ಯಾಣ, ಧರ್ಮಕಲ್ಯಾಣ ಹೆಸರುಗಳಿಂದ ಬೇರೆ ಬೇರೆ ಕಾಲದಲ್ಲಿ ಪೂರ್ಣಗೊಳಿಸಲು ಮಾಡಿದ ನಾಲ್ಕು ಪ್ರಯತ್ನಗಳನ್ನು ಇತಿಹಾಸದಲ್ಲಿ ಕಾಣಬಹುದಾಗಿದೆ. ಬಸವಣ್ಣನವರು ಕಟ್ಟಿದಂತಹ ಕಲ್ಯಾಣವು ಸ್ಥಾವರ ಸಮಾಜವಲ್ಲ, ಮುಕ್ತ ಸಮಾಜವನ್ನು, ಇದೆ ಕಲ್ಯಾಣವನ್ನು “ ಸಮಯಕಲ್ಯಾಣವೆಂದು “ ಕರೆದಿದ್ದು ಸೂಕ್ತವೆನಿಸಿದೆ.
12 ನೇ ಶತಮಾನದಲ್ಲಿ ಪ್ರಾರಂಭವಾದಂತಹ ಈ ಕಾರ್ಯ 63 ಶಿವಶರಣರನ್ನು ಒಳಗೊಂಡು ಅಲ್ಲಮಪ್ರಭುಗಳ ಅಧ್ಯಕ್ಷತೆಯಲ್ಲಿ ಅತ್ಯಂತ ಮುಂಚುಣಿಯಲ್ಲಿ ವರ್ಗ-ಲಿಂಗ-ವರ್ಣರಹಿತ, ಕಾಯಕ, ತತ್ವಾದಾರಿತ ಹಾಗೂ ಪರಸ್ಪರ ಮಾನವೀಯ ಗೌರವ, ಪ್ರೀತಿಪೂರ್ಣ ಸ್ವಾವಲಂಬಿ ಸಮಾಜ. ಇಂತಹ ಸಮಾಜವನ್ನು ಕಟ್ಟಲು ಪ್ರಾರಂಭಿಸಿ ಸರಳ ಭಾಷೆಯಲ್ಲಿರುವ ತಮ್ಮ ವಚನಗಳಿಂದ ಜನಸಾಮಾನ್ಯರಲ್ಲಿ ಆತ್ಮಜ್ಞಾನ ಬೆಳಿಸಿದರು.
ಹರಳಯ್ಯ – ಮಧುವಯ್ಯಗಳ ಎಳೆಹೂಟೆಯಿಂದಾಗಿ, ಕಲ್ಯಾಣ ಕಟ್ಟುವ ಈ ಕೆಲಸ ಅರ್ಧಕ್ಕೆ ನಿಂತಿತು. ಕಲ್ಯಾಣ ಕ್ರಾಂತಿಯಿಂದಾಗಿ ಶರಣರಿಗೆ ಅಷ್ಟೆ ಅಲ್ಲ, ಅವರ ಸಾಹಿತ್ಯಕ್ಕೂ ದೊಡ್ಡ ವಿಪತ್ತು ಬಂದೊದಗಿತು ಆಗ ಅವರು ಆ ವಚನ ಭಂಡಾರವನ್ನು ಹಂಪೆಯ ಪರಿಸರದಲ್ಲಿ ಹುದಗಿಸಿಟ್ಟರು. ವಿಜಯನಗರದಲ್ಲಿ ಈ ಕಲ್ಯಾಣ ಕಟ್ಟುವ ಕೆಲಸ ಪುನಃ ಪ್ರಾರಂಭವಾಯಿತು ಇದೆ ಮುಂದೆ “ ವಿಜಯ ಕಲ್ಯಾಣ”ವೆನಿಸಿತು. ಮುಂದೆ 16 ನೇ ಶತಮಾನದಲ್ಲಿ ವಿಜಯನಗರದವನೆ ಆದಂತಹ ಕೋಡೆಕಲ್ಲ ಬಸವಣ್ಣ ತೆಲೆಯತ್ತುತ್ತಾನೆ.
17 ನೇ ಶತಮಾನದಲ್ಲಿ ನಾಲ್ಕನೆಯ ಸಲ ಕಲಬುರ್ಗಿಯ ಚಿತ್ತಾಪುರ ತಾಲೂಕಿನ ನಾಗಾವಿಯಲ್ಲಿ ಪ್ರಾರಂಭವಾಗುತ್ತದೆ.
ಸಗರ ನಾಡಾದಂತಹ ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಕೃಷ್ಣಾ ನದಿಯ ತೀರದಲ್ಲಿ, ಗುಡ್ಡ-ಬೆಟ್ಟಗಳ ಮಧ್ಯದಲ್ಲಿ ಕಂಗೊಳಿಸುತ್ತಿರುವುದೆ ಕೊಡೇಕಲ್ಲ. 16 ನೇ ಶತಮಾನದಲ್ಲಿಯ ಕೊಡೇಕಲ್ಲ ಬಸವಣ್ಣನವರು ಕಟ್ಟಿದ ತತ್ವಾದಾರಿತ ಕಲ್ಯಾಣವೇ ಅಮರಕಲ್ಯಾಣ. ಶಿವಶರಣ ಕೊಡೇಕಲ್ಲ ಬಸವಣ್ಣ ಹಾಗೂ ಶಿವಶರಣೆ ನೀಲಾಂಬಿಕೆ ದಂಪತಿಗಳಿಗೆ ಮೂರುಜನ ರತ್ನದಂತಹ ಮಕ್ಕಳಿದ್ದರು. ಹಿರಿಯ ಮಗ ರಾಚ್ಚಪ್ಪಯ್ಯ, ಎರಡನೇ ಮಗ ಗುಹೇಶ್ವರ ಹಾಗೂ ಮೂರನೇ ಮಗ ಸಂಗಯ್ಯ (ಸಂಗಪ್ಪಯ್ಯ ). ಕಾಲಜ್ಞಾನಿಯಾದಂತಹ ಕೊಡೇಕಲ್ಲ ಬಸವಣ್ಣನವರ ಮಕ್ಕಳು ಸಹ ತಂದೆಯ ಮಾರ್ಗದರ್ಶನದಲ್ಲಿಯೇ ಬೆಳೆದರು ಹಾಗೂ ಅವರು ಕಟ್ಟುತ್ತಿದ್ದಂತಹ ಕಲ್ಯಾಣಕ್ಕೆ ಬೆನ್ನಲುಬಾಗಿ ನಿಂತರು. ಹಿರಿಯ ಮಗ ರಾಚಪಯ್ಯ ಸಂಚಾರಿ ಜೀವನ ನೆಡೆಸುತ್ತಾ ಮೈಸೂರ ಜಿಲ್ಲೆ ಕೃಷ್ಣರಾಜನಗರ ತಾಲೂಕಿನ ಕಪ್ಪಡಿಯಲ್ಲಿ ಬಂದು ನೆಲೆಸಿದರು. ದ್ವಿತೀಯ ಪುತ್ರ ತಂದೆಯ ಪುಣ್ಯ ಕ್ಷೇತ್ರದಲ್ಲಿಯೇ ನೆಲೆ ನಿಂತನು.
ತೃತೀಯ ಪುತ್ರ ಸಂಗಪ್ಪಯ್ಯ ಹಾವೇರಿ ಜಿಲ್ಲೆಯ ಕಾಗಿನೆಲೆಯಲ್ಲಿ ಬಂದು ನೆಲೆಸಿ ಐಕ್ಯವಾಗಿದ್ದು ವಿಶೇಷ.
ಸಂಗಪ್ಪಯ್ಯನನ್ನು ಕರಿಸಂಗಯ್ಯ ಎಂದು ಸಹ ಸಂಭೋದಿಸಲಾಗುತ್ತದೆ ಕಾರಣ ಈತನ ಬಣ್ಣ ಕಪ್ಪಾಗಿರಬಹುದು. ಕಾಗಿನೆಲೆಗೆ ಸಂಗಪ್ಪಯ್ಯನವರು ಯಾಕೆ ಬಂದರು ? ಹೇಗೆ ಬಂದರು ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದರೆ ನಮಗೆ ಸಿಗುವ ಉತ್ತರವೆನೆಂದರೆ ಸಂತ ಶ್ರೀ ಕನಕದಾಸರು ಹಾಗೂ ಸಂಗಪ್ಪಯ್ಯನವರು ಒಳ್ಳೆಯ ಸ್ನೇಹಿತರಾಗಿದ್ದರು, ಈ ಸ್ನೇಹವೆ ಅವರನ್ನು ಇಲ್ಲಿಯವರೆಗೆ ಬರುವ ಹಾಗೆ ಮಾಡಿತೆನ್ನಬಹುದು.
ದಾಸ ಶ್ರೇಷ್ಟರಾದ ಕನಕದಾಸರು “ ಮುಂಡಿಗೆ ವಿಚಾರವಾಗಿ ಸಂಗಪ್ಪಯ್ಯನವರನ್ನು ಭೇಟಿ ಮಾಡಲು ಕೊಡೇಕಲ್ಲಗೆ ತಮ್ಮ ಕುದರೆಯೊಂದಿಗೆ ಪ್ರಯಾಣ ಬೆಳೆಸಿದರು. ಅಲ್ಲಿ ಅವರ ಮುಂಡಿಗೆ ವಿಚಾರದ ಪ್ರಶ್ನೆಗಳಿಗೆ ಉತ್ತರವನ್ನು ಸಲಿಸಾಗಿ ಕೊಟ್ಟದನ್ನು ಗಮನಿಸಿದ ಕನಕದಾಸರು ತಮ್ಮ ಮನಸ್ಸಿನಲ್ಲಿಯೇ ಜ್ಞಾನಿಗೆ ನೋಟವೆ ಸಾಕು, ಯೋಗಿಗೆ ಹಠವೇ ಬೇಕು, ಅಜ್ಞಾನಿಗೆ ಎನೆನ್ನಬೇಕು ಎಂಬಂತೆ ಸಂಗಪ್ಪಯ್ಯನವರ ಜ್ಞಾನದ ಆಳವನ್ನು ತಮ್ಮ ದಿವ್ಯಶಕ್ತಿಯಿಂದ ಅಳಿಯುತ್ತಾ ತಮ್ಮ ಗಾಢ ಪ್ರಭಾವವನ್ನು ಅವರ ಮೇಲೆ ಬೀರಿದರೆನ್ನಬಹುದು. ಇದರ ಪ್ರತಿಫಲವೆಂಬಂತೆ ಸಂಗಪ್ಪಯ್ಯನವರು ಕಾಗಿನೆಲೆಯಲ್ಲಿ ನೆಲೆಸಿದರು.
ಕಾಗಿನೆಲೆಯಲ್ಲಿ ಸಂತ ಶ್ರೀ ಕನಕದಾಸರ ಮಿತ್ರರಾಗಿ, ಶಿವಶರಣರ ನುಡಿಯಂತೆ ವರ್ಣ-ಲಿಂಗ ಬೇಧವನ್ನು ತೊಡೆದು ಎಲ್ಲರಲ್ಲಿಯು ಒಂದಾಗಿ ಬೆರತು ಜ್ಞಾನದ ಮೂರ್ತಿಯಾಗಿ ಬೆಳೆದು ನಿಂತರು. ಹಿಂದೂಗಳಲ್ಲಿ ಶರಣ ಸಂಗಪ್ಪಯ್ಯನವರಾಗಿ ಮುಸ್ಲಿಂರಲ್ಲಿ ‘ಆದಮ್ಷಫಿಯಾಗಿ’ ಸರ್ವಭಕ್ತರಿಗೂ ಕಲ್ಯಾಣವನ್ನು ಬಯಸುವ ಕಲ್ಯಾಣದ ಕಡೆಯ ದಿವ್ಯ ಚೇತನದ ಶಿವಶರಣ ಮೂರ್ತಿಯಾಗಿ ಐಕ್ಯವಾದರು.
ಪ್ರಮೋದ ನಲವಾಗಲ
9686168202
Comments
Post a Comment