ಮೈಲಾರ ಕ್ಷೇತ್ರಗಳಲ್ಲಿ ಪ್ರಮುಖ ಸುಕ್ಷೇತ್ರವಾದ ದೇವರಗುಡ್ಡದ ಕಿರು ಪರಿಚಯ.......!!!
ಹಾವೇರಿ ಜಿಲ್ಲೆಯ ರಾಣೇಬೆನ್ನೂರ ತಾಲೂಕಿನಿಂದ ಸುಮಾರು 10 ಕಿ.ಮೀ ದೂರದಲ್ಲಿರುವ ಸುಕ್ಷೇತ್ರ ದೇವರಗುಡ್ಡ. ಈ ಕ್ಷೇತ್ರವನ್ನು 'ಗುಡ್ಡ ಗುಡ್ಡಾಪುರವೆಂದು' ಸಹ ಕರೆಯುವರು.
ಉತ್ತರ ಕರ್ನಾಟಕದ ಮೈಲಾರ ಕ್ಷೇತ್ರಗಳಲ್ಲಿ ಅತ್ಯಂತ ಪ್ರಮುಖವಾದ ಸುಕ್ಷೇತ್ರ ದೇವರಗುಡ್ಡ. ಹಿರೇಮೈಲಾರಕ್ಕೆ ಹೋಗುವುದಕ್ಕಿಂತ ಪೂರ್ವದಲ್ಲಿ ಈ ಕ್ಷೇತ್ರಕ್ಕೆ ಭೇಟಿ ಕೊಡಬೇಕೆನ್ನುವುದು ಸಂಪ್ರದಾಯ.
ಉತ್ತರ ಕರ್ನಾಟಕದ ಅತ್ಯಂತ ಪ್ರಸಿದ್ಧ ಜನಪದ ದೇವತೆಯಾಗಿರುವ 'ಮ್ಹಾಲತೀಶ' ನ ಸನ್ನದಿ ಸುಕ್ಷೇತ್ರ ದೇವರಗುಡ್ಡ. ಮಾಲತೇಶ(ಮ್ಹಾಲತೀಶ)ನನ್ನು ಮಲ್ಲಯ್ಯ, ಮೈಲಾರ, ಮಾರ್ತಾಂಡ, ಗುಡದಯ್ಯ, ಖಂಡೋಬಾ, ಖಂಡೇರಾಯ, ಗುಡ್ಡದ ಒಡೆಯ ಎಂದೆಲ್ಲಾ ಕರೆಯುತ್ತಾರೆ.
ಜನಪದ ದೇವತೆಯ ಉಗಮದ ಪುಟಗಳನ್ನು ಗಮನಿಸಿದಾಗ, ಮನುಷ್ಯನ ವಿಕಾಸಕ್ರಮದಲ್ಲಿ ಪ್ರಥಮ ಹಂತದ್ದು ಬೇಟೆಯ ಸಂಸ್ಕೃತಿ (ಇದರ ದೈವತ ಭೈರವ), ದ್ವಿತೀಯ ಹಂತದ್ದು ಪಶುಪಾಲನ ಸಂಸ್ಕೃತಿ (ಇದರ ದೈವತ ಮೈಲಾರ) ಮತ್ತು ತೃತೀಯ ಹಂತದ್ದು ಕೃಷಿ ಸಂಸ್ಕೃತಿ (ಇದರ ದೈವತ ಮಲ್ಲಿಕಾರ್ಜುನ). ಈ ಎಲ್ಲಾ ಹಂತಗಳನ್ನು ಗಮನಿಸಿದಾಗ ಮೊದಲೆರಡು ಸಂಸ್ಕೃತಿಯಲ್ಲಿ ದೇವರ ಸಹಾಯಕ್ಕೆ ನಿಂತ ಶ್ವಾನ ಲಾಂಛನವಾಗಿ ಉಳಿದುಕೊಂಡಿತು ಮುಂದೆ ಕೃಷಿ ಸಂಸ್ಕೃತಿಯಲ್ಲಿ ನಂದಿ ಲಾಂಛನವಾಯಿತು. ಈ ಮೂರು ಸಂಸ್ಕೃತಿಗಳಿಗೆ ಸಂಬಂಧಿಸಿದಂತೆ ವಿಗ್ರಹಗಳು ಕರ್ನಾಟಕದ ತುಂಬಾ ಹಬ್ಬಿ ಹರಡಿದವು.
ಜಾನಪದ ಸಾಹಿತ್ಯದಲ್ಲಿ ಭೈರವ ಹಾಗೂ ಮೈಲಾರನನ್ನೂ ಉದ್ದನೆಯ ಮೂಗಿನವನೆಂದು(ಚುಂಚಪ್ಪ, ಜುಂಜಪ್ಪ) ಕರೆಯಲಾಗಿದೆ. ಹೀಗಾಗಿ ಭೈರವ ಮತ್ತು ಮೈಲಾರ ಒಬ್ಬನ ಬೆಳವಣಿಗೆ ಇನ್ನೊಬ್ಬನೆಂದು ಹೇಳಬೇಕಾಗುತ್ತದೆ. ಇಬ್ಬರಿಗೂ ಶ್ವಾನವೆ ಲಾಂಛನವಾಗಿರುವುದು ಈ ಹೇಳಿಕೆಯನ್ನು ಬೆಂಬಲಿಸುತ್ತದೆ.
"ಗುಡ್ಡ ಸುತ್ತಿ ಮೈಲಾರಕ್ಕೆ ಹೋಗು", ಕೊಂಕಣ ಸುತ್ತಿ ಮೈಲಾರಕ್ಕೆ ಹೋಗು " ಎಂಬ ಗಾದೆ ಮಾತುಗಳಲ್ಲಿ ಮೈಲಾರ ಗುಡ್ಡದ ತುದಿಯ ದೇವರು ಎಂಬುದನ್ನು ತಿಳಿಸುತ್ತದೆ. ಕೊಂಕಣ ಪ್ರದೇಶದ ಗುಡ್ಡ ನೀಲಗಿರಿಯಾಗಿದೆ ಹೀಗಾಗಿ ಮೈಲಾರನ ಜನಪದ ಹಾಡುಗಳಲ್ಲಿ ಗುಡ್ಡದ ಹೆಸರು ಬಿಂಬಿಸಲು ನೀಲಣ್ಣ ಹಾಗೂ ನಿಂಬಣ್ಣ ಎಂಬ ಹೆಸರುಗಳು ಮೂಡಿಬಂದವು.
ಕನ್ನಡ ಕಾವ್ಯಗಳಾದ ನಯಸೇನನ 'ಧರ್ಮಾಮೃತ'(ಕ್ರಿ.ಶ 1112), ಬ್ರಹ್ಮಶಿವನ ಸಮಯ ಪರೀಕ್ಷೆ(ಕ್ರಿ.ಶ 1150), ಹರಿಹರನ ಶಂಕರದಾಸಿಮಯ್ಯನ ರಗಳೆ (13 ನೇ ಶತಮಾನ), ಕುಮಾರವ್ಯಾಸನ ಕುಮಾರವ್ಯಾಸನ ಕರ್ಣಾಟಕ ಭಾರತ ಕಥಾಮಂಜರಿ (15 ನೇ ಶತಮಾನ), ಅಂಜನಾ ಚರಿತೆ, ರಾಮನಾಥ ಚರಿತೆ, ಶಾಂತಲಿಂಗ ದೇಶಿಕನ ಭೈರವೇಶ್ವರ ಕಾವ್ಯದ ಕಥಾಮಣಿಸೂತ್ರ ರತ್ನಾಕರ, ಆನಂದ ಗಿರಿಕವಿಯ ಶಂಕರ ವಿಜಯ (14 ನೇ ಶತಮಾನ), ನಾರಸಿಂಹ ಕವಿಯ ಅನುಭವ ಶಿಖಾಮಣಿ (ಕ್ರಿ.ಶ 1785) ಹಾಗೂ ಇನ್ನೂ ಮುಂತಾದ ಕಾವ್ಯಗಳಲ್ಲಿ ಮೈಲಾರಲಿಂಗನ ಪ್ರಸ್ತಾಪವಿರುವುದು ವಿಶೇಷ.
ಗುಡ್ಡಗಳ ಮಧ್ಯವಿರುವುದರಿಂದ 'ಗುಡ್ಡ ಗುಡ್ಡಾಪುರ'ವೆಂದು ಮತ್ತು ಶ್ರೀ ಮಾಲತೇಶನ ಗುಡಿ ಗುಡ್ಡದ ಮೇಲಿರುವದರಿಂದ ದೇವರಗುಡ್ಡವೆಂದು ಈ ಸುಕ್ಷೇತ್ರವನ್ನು ಕರೆಯಲಾಗುತ್ತದೆ.
ಮಲ್ಲಾಸೂರ ಹಾಗೂ ಮಣಿಕಾಸೂರ ರಾಕ್ಷಸರು ಬ್ರಹ್ಮನಿಂದ ವರಪಡೆದು ರಾಕ್ಷಸ ಪ್ರವೃತ್ತಿ ಮೆರೆದಿರುತ್ತಾರೆ. ಮಣಿಸೂರ ಪರ್ವತದಲ್ಲಿ ಋಷಿ ಮುನಿಗಳನ್ನು ಕಾಡುತ್ತಿರುವಾಗ ಅವರು ಶಿವನನ್ನು ಬೇಡಿಕೊಂಡಾಗ ಶಿವನು ಕಂಬಳಿ, ಮುಂಡಾಸ, ಹುಲಿ ಚರ್ಮ, ಢಮರು, ತ್ರಿಶೂಲ ಹಾಗೂ ಮುಂಡಾಸವನ್ನು ಹೊದ್ದು ಮಾಲತೇಶನ ರೂಪವನ್ನು ತಾಳುತ್ತಾನೆ. ಪಾರ್ವತಿಯು ಮಲ್ಲಾಸದೇವಿಯ ರೂಪವನ್ನು ತಾಳುತ್ತಾಳೆ.
ಏಳು ಕೋಟಿ ಸೈನಿಕರೊಡನೆ (ಗೊರವಯ್ಯಗಳಡೊನೆ) ಕುದರೆ ಏರಿ ಬಂದು ಮಣಿಕಾಸೂರನನ್ನು ಮೈಲಾರದಲ್ಲಿಯು ಹಾಗೂ ಮಲ್ಲಾಸೂರನನ್ನು ದೇವರಗುಡ್ಡದಲ್ಲಿ ಸಂಹಾರ ಮಾಡುತ್ತಾನೆ. ಅವರ ಬೇಡಿಕೆಯಂತೆ ಮಣಿಕಾಸೂರನ ಶಿರವನ್ನು ತನ್ನ ಪಾದದಡಿ ಇಟ್ಟುಕೊಳ್ಳುತ್ತಾನೆ ಮತ್ತು ಮಲ್ಲಾಸೂರನ ಹೆಸರನ್ನು ತನ್ನ ಹೆಸರಿನ ಪೂರ್ವದಲ್ಲಿಟ್ಟುಕೊಂಡು ಮೈಲಾರನಾಗುತ್ತಾನೆ. ಬೇಟೆಯಾಡುವಾಗ ಬೇಟೆಗಾರರ ಗುಂಪಿನೊಂದಿಗೆ ಹೋಗುತ್ತಿದ್ದನು ಎಂಬುದು ವಿಶೇಷ.
ಸುಕ್ಷೇತ್ರ ದೇವರಗುಡ್ಡದಲ್ಲಿರುವ ಮಾಲತೇಶ ದೇವಸ್ಥಾನವು ವಿಜಯನಗರೊತ್ತರ ಕಾಲದಲ್ಲಿ ಜನ್ಮ ತೆಳದಿದೆ. ದೇವಸ್ಥಾನದಲ್ಲಿಯ ಮೇಲ್ಛಾವಣಿಯು ಇಪ್ಪತ್ತು ಕಂಬಗಳಿಂದ ಆಸರೆ ಪಡೆದಿದೆ. ಅದರಲ್ಲಿಯ ನಾಲ್ಕು ಕಂಬಗಳು (ನವರಂಗದಲ್ಲಿರುವ) ಮಾತ್ರ ದುಂಡಾಗಿವೆ. ಅವುಗಳನ್ನು "ಆಲೂರು ಹನುಮಪ್ಪನ" ಗುಡಿಯಿಂದ ತರಲಾಗಿದೆ ಎಂಬುದನ್ನು ಹಿರಿಯರು ತಿಳಿಸುತ್ತಾರೆ. ಆಲೂರು ಈಗ ಹಾಳು ಬಿದ್ದಿರುವ ಗ್ರಾಮ. ದ್ವಾರಗಳ ಅಲಂಕರಣ ಕಲ್ಯಾಣ ಚಾಲುಕ್ಯರ ಶೈಲಿಯದ್ದಾಗಿದೆ. ನವರಂಗದಲ್ಲಿ ಎರಡು ದೇವಕೋಷ್ಠಗಳಿದ್ದು ಅವುಗಳಲ್ಲಿ ಕಾರ್ತಿಕೇಯ (ಚಿಕ್ಕಯ್ಯ) ಹಾಗೂ ಗಣಪತಿ (ದೊಡ್ಡಯ್ಯ)ಗಳ ಶಿಲ್ಪಗಳಿವೆ. ಸಭಾ ಮಂಟಪದಲ್ಲಿ ಕುದರೆಪ್ಪನ ಕಟ್ಟೆ ಮತ್ತು ಪಲ್ಲಕ್ಕಿ ಕಟ್ಟೆಗಳಿವೆ. ನವರಂಗಕ್ಕೆ ದಕ್ಷಿಣ, ಉತ್ತರ ಹಾಗೂ ಪೂರ್ವ ದಿಕ್ಕುಗಳಿಂದ ಪ್ರವೇಶವಿದೆ.
ಈ ಗುಡಿಯ ಗರ್ಭಗೃಹದಲ್ಲಿ ಸ್ವಯಂಭೂಲಿಂಗವಿದ್ದು ಇದನ್ನೇ ಮಾಲತೇಶನೆಂದು ಭಕ್ತಿಯಿಂದ ಆರಾಧಿಸುತ್ತಾರೆ. ಇದರ ಸುತ್ತಲು ವಿಶೇಷ ದಿನಗಳಂದು ಉಪ್ಪನ್ನು ಸುರಿಯಲಾಗುತ್ತದೆ.
ದೇವಸ್ಥಾನದ ಆವರಣದಲ್ಲಿ ಮಾಲ್ಹಸಾದೇವಿ (ಗಂಗಿಮಾಳವ್ವ), ಬಿಲ್ಲೇಶ್ವರ, ನಾಗಪ್ಪ, ತುಪ್ಪದ ಮಾಳಮ್ಮ, ಉಪ್ಪಿನ ಮಾಳಪ್ಪ, ಮಾರಿಕಾಂಬ ಹಾಗೂ ಕೆಂಚಪ್ಪ(ದುರ್ಗಾಶಿಲ್ಪ) ದೇವರಗಳನ್ನು ಕಾಣಬಹುದು. ಬಿಲ್ಲೇಶ್ವರ ದೇವಸ್ಥಾನದಲ್ಲಿ 15 ಅಡಿ ಉದ್ದವಿರುವ ತಾವರಿಕೆ ಬೇರಿನಿಂದ ಮಾಡಿದ ಬಿಲ್ಲನ್ನು ನೋಡಬಹುದು. ಮಾಲತೇಶ ಹಾಗೂ ಮಾಲ್ಹಸಾದೇವಿಯ ಪಾದರಕ್ಷೆಗಳು ವಿಶೇಷವಾಗಿ ಪೂಜಿಸಲ್ಪಡುತ್ತವೆ.
ದೇವಸ್ಥಾನದ ಹೊರ ಭಾಗದಲ್ಲಿ ಹೆಗ್ಗಪ್ಪ, ಕುರಬತ್ತೆವ್ವ ಹಾಗೂ ಬೀರಪ್ಪನ ಗುಡಿಗಳನ್ನು ನೋಡಬಹುದು.
ಮಾಲತೇಶನಿಗೆ ಎಲ್ಲಾ ಜಾತಿಯ ಭಕ್ತರಿದ್ದಾರೆ. ವಿಶೇಷವಾಗಿ ಬೇಡರು, ಕುರುಬರು ಹಾಗೂ ವೀರಶೈವ ಲಿಂಗಾಯತರು ಭಕ್ತರು ಹೆಚ್ಚು.
ದೇವರಗುಡ್ಡದ ಮಾಲತೇಶನ ಪವಾಡ ಸಂಬಂಧವು ಪಕ್ಕದಲ್ಲಿಯ ಕರಿಯಾಲ ಹಾಗೂ ಸಿಡಗನಾಳ ಗ್ರಾಮಗಳೊಂದಿಗೆ ಹೊಂದಿದೆ.
ಚಂಪಾಷಷ್ಟಿಯಲ್ಲಿ ಲಿಂಗಾವತಾರವನ್ನು ತಾಳಿದಕ್ಕಾಗಿ ಭಕ್ತರು ಭಂಡಾರವನ್ನು ಮಾಲತೇಶನ ಮೇಲೆ ಹಾಕುತ್ತಾರೆ. ಜೇಷ್ಠ, ಆಷಾಢ ಹಾಗೂ ಶ್ರಾವಣದ ಸೂರ್ಯಾಸ್ತ ಸಮಯದ ನಂತರ ಆಕಾಶದಲ್ಲಿ ಶ್ರೀ ಮಾಲತೇಶ ಜೋತಿರ್ಲಿಂಗ ರೂಪದಲ್ಲಿ ಕಾಣುತ್ತಾನೆಂಬುದು ಗಮನಾರ್ಹ.
ಮಾಲತೇಶನಿಗೆ ಸಹಕರಿಸಿದ ಶ್ವಾನಗಳು ಮನುಷ್ಯನ ರೂಪ ತಾಳಿ ಮುಂದೆ ಮಂತ್ರಿಗಳಾದರು ಇವರನ್ನು ವಗ್ಗಯ್ಯ ಅಥವಾ ಗೋರವಯ್ಯಗಳೆಂದು ಕರೆಯುವರು. ಇವರಿಗೆ ಸಂಬಂಧಿಸಿದ ಅರವತ್ತು ಕುಟುಂಬಗಳು ಗುಡ್ಡದ ಮೇಲೆಯೇ ವಾಸವಾಗಿದ್ದಾರೆ.
ವಗ್ಗಯ್ಯರು (ಗೊರವರು) ಕೊಳ್ಳಿಗೆ ಕವಡಿಯನ್ನು, ಮೈಮೇಲೆ ಕಂಬಳಿಯನ್ನು, ತೆಲೆಗೆ ಮುಂಡಾಸವನ್ನು, ಸೊಂಟಕ್ಕೆ ಕರಡಿ ಅಥವಾ ಹುಲಿಯ ಚರ್ಮವನ್ನು ಹಾಗೂ ಕಟ್ಟಿಗೆಯ ಬಟ್ಟಲನ್ನು ಹೊಂದಿರುತ್ತಾರೆ. ಜಾತ್ರೆಯೆಂದು ವಿಶೇಷವಾಗಿ ಕೂಗಿ ಗುಡದಯ್ಯನಿಗೆ ತಮ್ಮ ಸೇವೆಯನ್ನು ಸಲ್ಲಿಸುತ್ತಾರೆ.
ಚಾಟಿ ಸೇವೆ, ದೀವಟಗಿ ಸೇವೆ, ಕಂಬಳಿ ಸೇವೆ, ನೃತ್ಯ ಸೇವೆ, ಡಮರುಗ ಸೇವೆ, ದೋಣಿ ಸೇವೆ, ಚೌರಿ ಸೇವೆ ದೇವರ ಸಾನಿದ್ಯದಲ್ಲಿ ನೆಡೆಯುತ್ತವೆ. ಇದರೊಂದಿಗೆ ಸರಪಣಿ ಹರಿಯುವುದು ಹಾಗೂ ಹಿಮ್ಮಡಿಗೆ ಕಬ್ಬಿಣ ಸಲಾಕಿ ಚುಚ್ಚಿಕೊಳ್ಳುವ ಪವಾಡಗಳು ಸಹ ಜರಗುತ್ತವೆ.
ಈ ದೇವಾಲಯಕ್ಕೆ ಹೈದರಾಬಾದ ನಿಜಾಮರು, ಹಾವನೂರು ಹನುಮಂತಗೌಡ ಬಹದ್ದೂರ ದೇಸಾಯಿಗಳು ಅನೇಕ ಹಳ್ಳಿಗಳನ್ನು ದಾನವಾಗಿ ನೀಡಿದ್ದಾರೆ. ಹಾವನೂರ ಬಹದ್ದೂರ ದೇಸಾಯಿಯವರ ಮನೆಯ ದೇವರು ಮೈಲಾರನಾಗಿರುವುದು ವಿಶೇಷ ( ಉದಗಟ್ಟಿ ಶಾಸನ). ಗುಡ್ಡದ ಕೇಳಭಾಗದಲ್ಲಿ (ಪೂರ್ವ ದಿಕ್ಕಿಗೆ) ದೊಡ್ಡದಾದ ಬಾವಿಯೊಂದಿದ್ದು ಅಲ್ಲಿ ಸುಮಾರು 17 ನೇ ಶತಮಾನಕ್ಕೆ ಸೇರಿದ ಮರಾಠರ ಅಧಿಕಾರಿಯೊಬ್ಬ ಮಾಲತೇಶನಿಗೆ ಕುಳಿತ ಸ್ಥಿತಿಯಲ್ಲಿ ಎರಡು ಕೈಗಳನ್ನು ಜೋಡಿಸಿ ಕೈಮುಗಿಯುತ್ತಿರುವ ದೃಶ್ಯ ಮನುಷ್ಯನ ಎಕಗ್ರತೆಯನ್ನು ಜಾಗೃತಗೊಳಸದಿರದು. ಅಲ್ಲಿಯೇ ಇರುವ ಮತ್ತೊಂದು 17 ನೇ ಶತಮಾನಕ್ಕೆ ಸೇರಿದ ಕುದುರೆಯ ಮೇಲೆ ಕುಳುತಿರುವ ವ್ಯಕ್ತಿಯ ವಿಗ್ರಹವನ್ನು ಮೈಲಾರ ದೇವರದ್ದು ಎಂದು ಗುರುತಿಸಬಹುದಾಗಿದೆ.
ಬ್ರಿಟಿಷರ ಆಡಳಿತದಲ್ಲಿ ದಸಾರದಂದು (ಸಪ್ಟೆಂಬರ್-ಅಕ್ಟೋಬರ್ ) ಎರಡು ದಿವಸಗಳವರೆಗೆ ನಡೆಯುತ್ತಿದ್ದ ಜಾತ್ರೆಯಲ್ಲಿ ಸುಮಾರು 5000 ರಿಂದ 10000 ವರೆಗೆ ಜನ ಸೇರುತ್ತಿದ್ದರು. 22/01/1878 ರಂದು ದೇವರಗುಡ್ಡದಲ್ಲಿ ಮುನ್ಸಿಪಾಲಟಿ ತೆಲೆಯತ್ತಿತ್ತು(ಈಗ ಇರುವುದಿಲ್ಲ). ಇದರ ಉತ್ಪನ್ನ ಎರಡು ದಿವಸ ನಡೆಯುತ್ತಿದ್ದ ಜಾತ್ರೆಯಲ್ಲಿಯ ಅಂಗಡಿಗಳಿಗೆ ವಿಧಿಸಲಾಗುತ್ತಿದ್ದ ತೆರೆಗೆಯಾಗಿತ್ತು. 1882-83 ರಂದು 730 ರೂಪಾಯಿಗಳ ಉತ್ಪನ್ನವನ್ನು ಹೊಂದಿತ್ತು. 1882-83 ರಲ್ಲಿ 1710 ರೂಪಾಯಿಗಳನ್ನು ಖರ್ಚು ಮಾಡಿ ರಸ್ತೆ ದುರಸ್ತಿ, ನೀರಿನ ವ್ಯವಸ್ಥೆ ಹಾಗೂ ರಸ್ತೆಯ ಪಕ್ಕದಲ್ಲಿ ಗೀಡಗಳನ್ನು ನೆಡಲಾಯಿತು. 3010 ರೂಪಾಯಿಗಳನ್ನು ಖರ್ಚು ಮಾಡಿ ವಿಶ್ರಾಂತಿ ಗೃಹವನ್ನು ನಿರ್ಮಿಸಲಾಯಿತು. ಇಲ್ಲಿಯ ಕಲ್ಲಿನ ದ್ವಾರಬಾಗಿಲು 1898 ರಂದು ನಿರ್ಮಾಣವಾಯಿತು. ಈ ದೇವಸ್ಥಾನ ಕ್ರಿ.ಶ 1864 ರಲ್ಲಿ 635 ಎಕರೆ ಇನಾಂ ಭೂಮಿಯನ್ನು ಹೊಂದಿತ್ತೆಂದರೆ ಇದರ ವೈಭವದ ಅರಿವು ನಮಗಾಗದಿರದು.
ಸಾಮಾನ್ಯವಾಗಿ ದಸರಾದಲ್ಲಿ ಕಾರಣಿಕ ಜರಗುತ್ತದೆ. "ಗುಡುಗು ಭೂಮಿಗೆ ಅಪ್ಪಳಿಸಿತಲೇ ಪರಾಕ", ಬೆಕ್ಕು ನಾಯಿ ಜೊತೆ ಜಗಳಾಡತಲೇ ಪರಾಕ ಹಾಗೂ ತೆಲೆ ಕಟ್ಟಾಯಿತಲೇ ಪರಾಕ.... ಎಂಬ ಕಾರಿಣಕಗಳನ್ನು ಸ್ವತಃ ಬ್ರಿಟಿಷರು ಕೇಳಿ ದಂಗಾಗಿದ್ದರು. ಕರ್ನಾಟಕದ ಮೂಲೆ ಮೂಲೆಯಿಂದ ಭಕ್ತರು ಬಂದು ಶ್ರೀ ಮಾಲತೇಶನ ಕೃಪೆಗೆ ಪಾತ್ರರಾಗಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಬೆಳಗಾವಿ, ಧಾರವಾಡ, ವಿಜಯಪುರ, ಹಾಗೂ ಮೈಸೂರ ಭಕ್ತರ ಸಂಖ್ಯೆ ಹೆಚ್ಚು. ಗುರುವಾರ ಹಾಗೂ ರವಿವಾರ ದಿವಸ ಬರುವ ಭಕ್ತರ ಸಂಖ್ಯೆ ಅತಿ ಹೆಚ್ಚು. ಶ್ರೀ ಮಾಲತೇಶ ಹೊಳೆಯಂತೆ ಹರಿದು ಬರುವ ಭಕ್ತರ ಬೇಡಿಕೆಯನ್ನು ಕರುಣಿಸುವ ಕಲ್ಪವೃಕ್ಷನಾಗಿದ್ದಾನೆ. ಭಕ್ತರ ಸಂತೋಷವನ್ನು ಇಮ್ಮಡಿ - ನೂರ್ಮಡಿಗೊಳಿಸುತ್ತಿರುವ ಶ್ರೀ ಮಾಲತೇಶನ ಅಡಿದಾವರೆಗಳಿಗೆ ನನ್ನ ವಿನಯ ಪೂರ್ಣ ಸಮಸ್ಕಾರಗಳು.
ದೇವಸ್ಥಾನದ ಕಮೀಟಿಯು ಸಹ ಭಕ್ತರಿಗೆ ಬೇಕಾಗುವ ಮೂಲಭೂತ ಸೌಕರ್ಯಗಳನ್ನು ಪೂರೈಸುತ್ತಿರುವುದು ಶ್ಲಾಘನೀಯ.
#ನನ್ನ_ಕ್ಷೇತ್ರ_ಅಧ್ಯಯನಕ್ಕೆ_ಸಹಕರಿಸಿದ_ಅಳಿಯನಾದ_ಪ್ರೇಮ_ಬೀದರಗಟ್ಟಿ_ಶ್ರೀ_ಸಂತೋಷ_ಭಟ್_ಗುರುಗಳಿಗೆ_ #ಶ್ರೀ_ಪವನ_ಪೂಜಾರರವರಿಗೂ_ಶ್ರೀ_ರಾಜಕುಮಾರವರಿಗೂ_ಹಾಗೂ_ಹರ್ಷಿತ್_ನಲವಾಗಲ_ಇವರುಗಳಿಗೆ_ಧನ್ಯವಾದಗಳು.
#### ಪ್ರಮೋದ ನಲವಾಗಲ####
9686168202
Comments
Post a Comment