ಬಂಕಾಪುರದಲ್ಲಿ ಮಗಳದುರ್ಮರಣದ ಕಥೆ ಹೇಳುವ ಜಮಾಸಬಾವಿಯೇ ದೇಮರಸಿಯಬಾವಿ.....!!
ಬಂಕಾಪುರದಲ್ಲಿ ಮಗಳದುರ್ಮರಣದ ಕಥೆ ಹೇಳುವ ಜಮಾಸಬಾವಿಯೇ ದೇಮರಸಿಯಬಾವಿ.....!!
ಹಾವೇರಿ ಜಿಲ್ಲೆಯ ಬಂಕಾಪುರ ಐತಿಹಾಸಿಕ ಕ್ಷೇತ್ರ. ವಂಕಪುರ, ವಂಕಾಪುರ, ವೆಂಕಪುರ, ವೆಂಗಾಪುರ , ಬಂಕಪುರ, ಬಂಕಾಪುರ ಹಾಗೂ ಬಂಕಾಹುರ ಎಂದು ಶಾಸಗಳಲ್ಲಿ ಈ ಗ್ರಾಮದ ಹೆಸರನ್ನು ಸೂಚಿಸಲಾಗಿದೆ. ರಾಷ್ಟ್ರಕೋಟರು, ಚಲ್ಲಕೇತನರು, ಕಲ್ಯಾಣದ ಚಾಲುಕ್ಯರು, ಗೋವೆಯ ಕದಂಬರರು, ಬನವಾಸಿ ಕದಂಬರರು, ಹೊಯ್ಸಳರು, ವಿಜಯನಗರದ ಅರಸರು, ಬಹುಮನಿ ಅರಸರು, ಕೆಳದಿ ಅರಸರು, ಬಿಜಾಪುರದ ಆದಿಲ್ ಶಾಹಿಗಳು, ಹೈದರಾಲಿ ಮತ್ತು ಟಿಪ್ಪೂಸುಲ್ತಾನ ಹಾಗೂ ಹಂಡೆ ಪಾಳೆಯಗಾರರು ಇದರ ಆಳ್ವಿಕೆಯನ್ನು ಕ್ರಮೇಣವಾಗಿ ನಡೆಸಿದ್ದಾರೆ. ತಮ್ಮ-ತಮ್ಮ ಆಳ್ವಿಕೆಯಲ್ಲಿ ಅವರು ಬಂಕಾಪುರಕ್ಕೆ ವಿಶೇಷವಾದ ಕೊಡುಗೆಯನ್ನು ನೀಡಿದ್ದಾರೆ.
ಅವುಗಳಲ್ಲಿ ಕೆಲವುಗಳು ಮಾತ್ರ ಇನ್ನೂ ಜೀವಂತವಾಗಿವೆ. ಪ್ರಸಿದ್ದ ವ್ಯಾಪಾರಿ ಕೇಂದ್ರವಾಗಿದ್ದ ಬಂಕಾಪುರ ಗೋವೆ ರಾಜ್ಯವನ್ನು ವಿಜಯನಗರಕ್ಕೆ ಜೋಡಿಸುವ ಕೊಂಡಿಯಾಗಿತ್ತು. ಇಂತಹ ಬೃಹತ್ ವ್ಯಾಪಾರಿ ಕೇಂದ್ರಕ್ಕೆ ನೀರಿನ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಅಂದು ಮಾಡಲಾಗಿತ್ತು. ಅವುಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದವೆಂದರೆ ಪುರಾತನ ಬಾವಿಗಳು. ಅಂತಹ ಬಾವಿಗಳಲ್ಲಿ ಕೆಲವುಗಳು ಮಾತ್ರ ಜೀವವನ್ನು ಬಿಗಿಯಾಗಿ ಹಿಡಿದುಕೊಂಡು ಇನ್ನೂ ಜೀವವನ್ನು ಉಳಿಸಿಕೊಂಡಿವೆ. ಪಂಚಮಲಕಪ್ಪನ ಬಾವಿ, ಕಳ್ಳರ ಬಾವಿ, ನಾಗರಬಾವಿ, ಗುನ್ನಪ್ಪನ ಬಾವಿ, ವಿಟ್ಟಪ್ಪನ ಬಾವಿ ಹಾಗೂ ಜಮಾಸಬಾವಿಯೇ ಇಲ್ಲಿಯ ಪ್ರಮುಖ ಬಾವಿಗಳು. ಬಂಕಾಪುರದ ಪ್ರತಿಯೊಂದು ಬಾವಿ ತನ್ನದೆ ಆದ ವಿಶೇಷತೆಯನ್ನು ಹೊಂದಿವೆ. ಅದರಲ್ಲಿ ಅಂಕದ ಕಣದಲ್ಲಿಯ "ದೇಮರಸಿ ಬಾವಿ" ಕರಳಾ ಕಥೆಯೊಂದನ್ನು ತನ್ನಲ್ಲಡಿಗಿಸಿಕೊಂಡಿದೆ.
ಇಲ್ಲಿಯ ಬಸವಣ್ಣ ದೇವಾಲಯದ ಮುಂಭಾಗದಲ್ಲಿರುವ ಕ್ರಿ.ಶ 1476 ರ ಕಾಲಮಾನದ ಶಾಸನವೊಂದು ಆ ಕರಾಳ ಕಥೆಯನ್ನು ಎಳೆ-ಎಳೆಯಾಗಿ ಬಿಡಿಸಿಡುತ್ತದೆ. ಆ ಕಥೆಯನ್ನು ಕೇಳಿದ ಎಂತಹ ಕಠೋರ ಮನುಸ್ಸು ಕರಗದೆ ಇರಲಾರದು. ಆ ಕಾಲಘಟ್ಟದಲ್ಲಿ ವಿಜಯನಗರವನ್ನು ವಿರೂಪಾಕ್ಷರಾಯ ಆಡಳಿತ ನಡೆಸುತ್ತಿದ್ದನು. ಪ್ರಜೆಗಳು ಸುಖಕರವಾಗಿದ್ದರು. ಸಿಡಿಯನೂರಿನ (ಸಿಡೇನೂರ ತಾ:ಬ್ಯಾಡಗಿ)ಬುಳಪಯ್ಯನ ಮಗಳು ಸೀತಾ. ಅವಳ ಪ್ರೀತಿಯ ಮಗಳು 'ಬಾಚವನಾಯಕತಿ'. ಸುಂದರವತಿಯಾದ ಇವಳನ್ನು ಶ್ರೀ ವೈಷ್ಣವರ (ರಾಮಾನುಜಚಾರ್ಯರ) ಅನುಯಾಯಿ ಹಾಗೂ ಪಾಳೇಗಾರನಾಗಿದ್ದ ಬಂಕಾಪುರದ "ಇಮ್ಮಡಿ ಸಿಂಗೆನಾಯಕರಿಗೆ" ಮದುವೆ ಮಾಡಿ ಕೊಟ್ಟರು. ಈ ದಂಪತಿಗಳಿಗೆ ಬಹಳ ವರ್ಷಗಳ ಬಳಿಕ ಮಗಳೊಬ್ಬಳ ಜನನವಾಯಿತು ಅವಳಿಗೆ ಸಂಭಂದಿಕರೆಲ್ಲರೂ ಸೇರಿ "ದೇಮರಸಿ"ಯೆಂದು ನಾಮಕರಣ ಮಾಡಿದರು. ತಂದೆ-ತಾಯಿಯ ಪ್ರೀತಿಯ ಮಗಳಾಗಿದ್ದ "ದೇಮರಸಿಯು" ಬೆಳದು ನಿಂತ ಕಾಲಕ್ಕೆ ದುರ್ಮರಣವನ್ನಪ್ಪಿದಳು (unnatural death). ಅವಳು ಈ ಲೋಕದಿಂದ ಬಹುದೂರವಾಗಿದ್ದರು, ಅವಳ ಆ ನೆನಪುಗಳು ತಂದೆ-ತಾಯಿಯ ಮನಸ್ಸಿನಲ್ಲಿ ಆಳವಾಗಿ ಬೇರೂರಿದ್ದವು. ಮಗಳ ಮರಣವಾದರೂ ಅವಳಿಗೆ ಪುಣ್ಯಲೋಕ ಪ್ರಾಪ್ತಿಯಾಗಬೇಕು ಎನ್ನುವುದು ತಂದೆ-ತಾಯಿಯ ಆಸೆಯಾಗಿತ್ತು. ಅದು ಪ್ರತಿ ತಂದೆ-ತಾಯಿಯ ಅಭಿಲಾಷೆಯು ಸಹ ಆಗಿದೆ. ಮಗಳಿಗಾಗಿ ಗೋದಾನ, ಭೂದಾನ, ಕನ್ಯೆದಾನ, ವಸ್ತ್ರದಾನ, ಅನ್ನದಾನ ಹಾಗೂ ಹಿರಣ್ಯದಾನವನ್ನು (ಸ್ವರ್ಣದಾನ) ಮಾಡಿದರು. ಆದರೂ ಆ ದಂಪತಿಗಳಿಗೆ ತಾವು ಮಾಡಿದ ದಾನ ತೃಪ್ತಿಯಾಗಲಿಲ್ಲ. ಮಗಳಿಗೆ ಪುಣ್ಯಲೋಕ ಪ್ರಾಪ್ತಿಯಾಗುತ್ತದೆಯೋ ಇಲ್ಲವೋ ಎಂಬ ಸಂದೇಹ ಅವರಿಗೆ ಕಾಡುತ್ತಿತ್ತು. ಹೀಗಾಗಿ ಜೋಯಿಸರನ್ನು ಮತ್ತೆ ವಿಚಾರಿಸಲಾಗಿ "ಉದಕದಾನ" ಎಲ್ಲಾ ದಾನಕ್ಕಿಂತ ಶ್ರೇಷ್ಠವೆಂದು ತಿಳಿಸಿದರು. ದಂಪತಿಗಳಿರ್ವರು "ಅಂಕದ ಕಣದ" ಪಡುವಣದಲ್ಲಿ (ಪಶ್ಚಿಮಕ್ಕೆ) ಸೋಪಾನದ (ಸೋಗಸಾದ)ಬಾವಿಯನ್ನು ತೋಡಿಸಿ ದೇಮರಸಿಗೆ ಪುಣ್ಯಲೋಕ ಪ್ರಾಪ್ತಿಯಾಗಲಿಯೆಂದು ಬೇಡಿಕೊಂಡರು.
ಈ ಹಿಂದೆ ಪಂಚಮಲಕಪ್ಪನ ಬಾವಿಯನ್ನೇ ದೇಮರಸಿಯ ಬಾವಿಯೆಂದು ಊಹಿಸಿದ್ದರು. ಆದರೆ ಇತ್ತೀಚಿಗೆ ಸ್ಥಳೀಯರಾದ ಶ್ರೀ ಗಂಗಾಧರ ಶೆಟ್ಟರಳನ್ನೊಳಗೊಂಡ ಸ್ನೇಹ ಬಳಗ ಬಸವಣ್ಣ ದೇವಾಲಯದ (ಅಂಕದ ಕಣ) ಪಕ್ಕದಲ್ಲಿರುವ "ಜಮಾಸಬಾವಿಯನ್ನು ಸ್ವಚ್ಚಗೊಳಿಸುತ್ತಿರುವಾಗ ಮೆಟ್ಟಿಲು ಮೇಲು ಏರಡು ಸಾಲುಗಳಿರುವ ಶಿಲಾ ಶಾಸನವೊಂದು ದೊರಕಿತು. "ಮದನಸಿಂಗನಾಯ್ಕನ ರಾಣಿ ಬಾಚವನಾಯಕತಿಯ ಮಗಳು ದೇಮರಸಿಯ ಬಾವಿ ಎಂದು ಆ ಶಿಲಾಶಾಸನದಲ್ಲಿ ಖಂಡರಿಸಲಾಗಿತ್ತು. ಇನ್ನೊಂದು ಐದು ಸಾಲುಗಳನ್ನೊಳಗೊಂಡ ಶಾಸನದಲ್ಲಿ "ಬಾಚೋನಾಯಕತಿಯ ಮಗಳು ದೇಮರಸಿಯ ದಾಮಾ?ದಬಾವಿಯ ಸೀತಳದೇವ ರಾಉತ್ತನು" ಎಂದಿದೆ. ಈ ಶಾಸನಗಳು ಈಗಿನ "ಜಮಾಸಬಾವಿಯೇ" ದೇಮರಸಿಯ ಬಾವಿಯೆಂಬುದರ ಸುಳಿವನ್ನು ನೀಡುತ್ತವೆ. ಕಾರಣ ಬಸವಣ್ಣ ದೇವಸ್ಥಾನದ ಮುಂಭಾಗದಲ್ಲಿರುವ ಕ್ರಿ.ಶ 1476 ರ ಶಾಸನದಲ್ಲಿ ಸೋಪಾನದ ಬಾವಿಯನ್ನು ದೇಮರಸಿಗೆ ಪುಣ್ಯಲೋಕ ಪ್ರಾಪ್ತಿಯಾಗಲೆಂದು ಅಂಕದ ಕಣದ ಪಡವಣದಲ್ಲಿ(ಪಶ್ಚಿಮಕ್ಕೆ) ತೊಡಿಸಲಾಗಿದೆ ಎಂದು ತಿಳಿಸಲಾಗಿದೆ. ಆದರೆ ಪಂಚಮಲಕಪ್ಪನ ಬಾವಿಯು ಅಂಕದ ಕಣದ ಪೂರ್ವದಿಕ್ಕಿನಲ್ಲಿದೆ. ಆ ಪಂಚಮಲಕಪ್ಪನ ಬಾವಿಯೇ ಸೋಪಾನದ ಬಾವಿ ಅಥವಾ ದೇಮರಸಿಯ ಬಾವಿ ಎಂದು ಹೇಳಿಕೊಳ್ಳಲು ಯಾವುದೇ ಆಧಾರಗಳಿಲ್ಲ. ಈಗಿನ "ಜಮಾಸಬಾವಿ" (ಹಿಂದೆ ಜಮಾರಸ ಬಾವಿಯೆಂದಿದ್ದರಬಹುದು) ಆ ದೇಮರಸಿಯ ಹೆಸರನ್ನು ತನ್ನಲ್ಲಿ ಇನ್ನೂ ಜೀವಂತವಾಗಿರಸಿಕೊಂಡಿದ್ದನ್ನು ನಾವು ಅದರ ಹೆಸರಲ್ಲೇ ಕಾಣಬಹುದು. ಸ್ಥಳೀಯರು ಆ ನೀರನ್ನು ಹಿಂದಿನಿಂದಲೂ ಬಳಿಸುತ್ತಿದ್ದರು. ಕಾಣದ ಆ ದೇಮರಸಿಯನ್ನು ಅಗೋಚರವಾಗಿ ಹರಸುತ್ತಿದ್ದರು. ತಂದೆ-ತಾಯಿಯ ಬಯಕೆಯಂತೆ ಅವಳಿಗೆ ಪುಣ್ಯಲೋಕ ಪ್ರಾಪ್ತಿಯಾಗಿರಬಹುದು. ಆದರೆ ಆ ಕಥೆಯ ಸಾಕ್ಷ್ಯಗಳನ್ನು ಆ ಬಾವಿ ತನ್ನಲ್ಲಿ ಇನ್ನೂ ಜೀವಂತವಾಗಿಟ್ಟುಕೊಂಡಿದ್ದು ವಿಶೇಷ.
-- ಪ್ರಮೋದ ನಲವಾಗಲ --
9686168202
Comments
Post a Comment