ದ. ರಾ.ಬೇಂದ್ರೆಯವರು ಕೆಲಕಾಲ ರಾಣೇಬೆನ್ನೂರಿನಲ್ಲಿ ವಾಸವಾಗಿದ್ದರು......!!!!!

ದ. ರಾ.ಬೇಂದ್ರೆಯವರು ಕೆಲಕಾಲ ರಾಣೇಬೆನ್ನೂರಿನಲ್ಲಿ ವಾಸವಾಗಿದ್ದರು......!!!!!

ಅಂಬಿಕಾತನಯದತ್ತ ಎಂಬ ಕಾವ್ಯನಾಮದಿಂದ ಪ್ರಸಿದ್ಧಿ ಪಡೆದ ದ.ರಾ.ಬೇಂದ್ರೆಯವರು ಸಾಹಿತ್ಯ ಕ್ಷೇತ್ರದ ಅಗ್ರಗಣ್ಯರು

ದ.ರಾ.ಬೇಂದ್ರೆ ಎಂದರೆ ಬರಿ ಕವಿತೆ ಒಂದೇ ಅಲ್ಲ. ಅವರು ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ಕೃತಿ ರಚಿಸಿದ್ದಾರೆ.
ಕನ್ನಡದಲ್ಲಿ ಅಲ್ಲದೆ ಮರಾಠಿಯಲ್ಲೂ ಅವರಿಗೆ ಹಿಡಿತವಿತ್ತು. (ಅವರ ಮೂಲ ಮಹಾರಾಷ್ಟ್ರ) ಅದರಲ್ಲೂ ಅನೇಕ ಕೃತಿಗಳನ್ನು ರಚಿಸಿದ್ದಾರೆ.

ಬರೀ ಸಾಹಿತ್ಯ ಒಂದೇ ಅವರ ಜೀವನವಾಗಿರಲಿಲ್ಲ.
ಅದರ ಜೊತೆಗೆ ಭೌತ ವಿಜ್ಞಾನ, ಸಂಖ್ಯಾಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಆಕಾಶದ ಬಗ್ಗೆ, ಆಧ್ಯಾತ್ಮದ ಬಗ್ಗೆ. ಹೀಗೆ ಹತ್ತು ಹಲವು ವಿಷಯಗಳು ಅವರಲ್ಲಿ ಹಾಸುಹೊಕ್ಕಾಗಿದ್ದವು.

ಅವರು ಅದ್ಭುತ ಭಾಷಣಕಾರರಾಗಿದ್ದರು. ವಿಷಯಗಳ ಮೇಲೆ ಗಂಟೆಗಟ್ಟಲೆ ಮಾತನಾಡುತ್ತಿದ್ದರು. ಕವಿತೆಯನ್ನು ಮನಮುಟ್ಟುವಾಗೆ ವಾಚನ ಕೂಡ ಮಾಡುತ್ತಿದ್ದರು.

ಇಂತಹ ಮಹಾನಚೈತನ್ಯ ಶಕ್ತಿಗೂ ಹಾವೇರಿ ಜಿಲ್ಲೆಯ ರಾಣೇಬೆನ್ನೂರಿಗೂ ಅವಿನಾಭಾವ ಸಂಬಂಧವಿತ್ತು ಎಂಬುದು ವಿಶೇಷ. 

ದ.ರಾ. ಬೇಂದ್ರೆಯವರು ಕ್ರಿ.ಶ 1919 ರಲ್ಲಿ ಹುಬ್ಬಳ್ಳಿಯ ಲಕ್ಷ್ಮೀಬಾಯಿಯವರನ್ನು ವಿವಾಹವಾದರು. ಕಷ್ಟ ಸಮಯದಲ್ಲಿಯೂ ಸಾಹಿತ್ಯದಲ್ಲಿ ಪತಿಯ ಎಳ್ಗೆಯನ್ನೆ ಬಯಸುತ್ತಿದ್ದಳು ಆ ಮಹಾತಾಯಿ. ಪತ್ನಿಯು ಮಕ್ಕಳ ಸಾವಿನಿಂದ ನೊಂದಿದ್ದ ಬೇಂದ್ರೆಯವರಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದಳು. 

ಲಕ್ಷ್ಮೀಬಾಯಿಯ ತಂದೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ಅಂದಿನ ಲೋಕೋಪಯೋಗಿ ಇಲಾಖೆಯಲ್ಲಿ ಸೂಪರವೈಸರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅಂದು ಈಗಿರುವ ಪಿ.ಬಿ ರೋಡ್ ನಿರ್ಮಾಣವಾಗುತ್ತಿತ್ತು (ಮಾಹಿತಿ: ಶ್ರೀ ಪಿ.ಪಿ.ಕುಲಕರ್ಣಿ). 

ಲಕ್ಷ್ಮೀಬಾಯಿಯವರ ತಂದೆ ಅಂದು ರಾಣೇಬೆನ್ನೂರಿನ ಕೋಟೆ ಭಾಗದಲ್ಲಿರುವ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದ ಹಿಂಭಾಗದಲ್ಲಿ ವಾಸವಾಗಿದ್ದರು. ದ.ರಾ ಬೇಂದ್ರೆಯವರು ಕೆಲಕಾಲ ಇದೇ ಮನೆಯಲ್ಲಿ ವಾಸವಿದ್ದರೂ ಎನ್ನುವುದು ವಿಶೇಷ. ಲಕ್ಷ್ಮೀಬಾಯಿಯವರ ತಂದೆ ಎಂದಿಗೂ ತಮ್ಮ ಮಗಳ ಹಾಗೂ ಅಳಿಯನ ಶ್ರೇಯಸ್ಸುನ್ನು ಬಯಸಿದ್ದರು. 

ಬೇಂದ್ರೆಯವರ ಮಗ ತೀರಿಕೊಂಡಾಗ ಇದೇ ಕೋಟೆ ಭಾಗದಲ್ಲಿದ್ದ ಅವರ ಮಾವನ ಮನೆಯಲ್ಲಿಯೇ 'ನೀ ಹಿಂಗ್ ನೋಡಬೇಡಾ ನನ್ನ ತೀರಿಗಿ ನಾ ಹೆಂಗ್ ನೋಡಲಿ ನಿನ್ನ" ಎಂಬ ಗೀತೆಯನ್ನು ರಚಿಸಿ, ತನ್ನ ಪ್ರೀತಿಯ ಮಗನಿಗೆ ಶೋಕ ವ್ಯಕ್ತಪಡಿಸಿದರು ಎನ್ನುವ ವಿಷಯ ಇಲ್ಲಿಯ ಹಿರಿಯರ ಮನಸ್ಸಿನಲ್ಲಿ ಇನ್ನೂ ಜೀವಂತವಿದೆ.

ದ.ರಾ. ಬೇಂದ್ರೆಯವರ ಪುತ್ರರಾದ ದಿ.ದತ್ತಾತ್ರೇಯ ವಾಮನ ಬೇಂದ್ರೆಯವರು 28/07/1935 ರಂದು ರಾಣೇಬೆನ್ನೂರಿನಲ್ಲಿ ಜನಿಸಿದರು. 

ದ.ರಾ.ಬೇಂದ್ರೆಯವರು ಕಡು ಬಡತನದ ಸಮಯದಲ್ಲೂ ತಮ್ಮ ಸಾಹಿತ್ಯಕ್ಕೆ ಶ್ರೀಮಂತಿಕೆಯ ಮೃಷ್ಟಾನ್ನ ಭೋಜನ ಉಣಬಡಿಸಿದರು. ಮಗನಾದ ದಿ.ದತ್ತಾತ್ರೇಯ ವಾಮನ ಬೇಂದ್ರೆಯವರೂ ಸಹ ಸಾಹಿತ್ಯ ಕ್ಷೇತ್ರಕ್ಕೆ ತಂದೆಯಂತೆಯೇ ಅಪಾರ ಕೊಡುಗೆ ನೀಡಿದರು.

ದ.ರಾ. ಬೇಂದ್ರೆಯವರ ಮಾವನವರು ಕೋಟೆಯ ಮನೆಯನ್ನು ತೊರೆದ ಮೇಲೆ ಆ ಮನೆಯಲ್ಲಿ ದಿ.ರಾಜಪುರೋಹಿತರು ವಾಸಿಸಲು ಆರಂಭಿಸಿದರು. 

ರಾಣೇಬೆನ್ನೂರಿನ ಕೋಟೆಯ ಭಾಗ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ದ.ರಾ.ಬೇಂದ್ರೆ, ರಾಜಪುರೋಹಿತ, ಸು.ರಂ.ಯಕ್ಕುಂಡಿ ಹಾಗೂ ಹೇಳವನಕಟ್ಟೆ ಗೀರಿಯಮ್ಮಳಿಗೆ ನೆಲೆಯನ್ನು ನೀಡಿತ್ತು ಎಂಬುದು ಹೆಮ್ಮೆಯ ವಿಷಯ.
                    
                   #ಪ್ರಮೋದ_ನಲವಾಗಲ
                         9686168202

Comments

Popular posts from this blog

ಹೊಯ್ಸಳರ ಲಾಂಛನದಲ್ಲಿಯ ಪ್ರಾಣಿ ಹುಲಿಯಲ್ಲ ಸಿಂಹ...!

ಹಾವೇರಿ ಜಿಲ್ಲೆಯಲ್ಲಿಯ ಶಾಸನಗಳಲ್ಲಿ ಬಸವಣ್ಣನವರು

ಹಾವೇರಿ ಜಿಲ್ಲೆಯ ಎಂಟು ತಾಲೂಕುಗಳ ಕಿರು ಪರಿಚಯ....!!!!