ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸುವ ಹಾವೇರಿಯ ದ್ಯಾಮವ್ವನ ಕಟ್ಟೆ.......!!!!
ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸುವ ಹಾವೇರಿಯ ದ್ಯಾಮವ್ವನ ಕಟ್ಟೆ.......!!!!
ಹಾವೇರಿ ನಗರದ ದ್ಯಾಮವ್ವನ ಕಟ್ಟೆ ಸುಮಾರು 150 ವರ್ಷಗಳಷ್ಟು ಹಳೆಯಾದದ ಸ್ವಾತಂತ್ರ ಹೋರಾಟಗಾರರ ನೆನಪನ್ನು ತನ್ನ ಹೃದಯಾಂತರದಲ್ಲಿ ಬಚ್ಚಿಟ್ಟುಕೊಂಡಿದೆ. ಅಂದು ಸಾವಿರಾರು ಹೋರಾಟಗಾರರಿಗೆ ಸ್ಪೂರ್ತಿಯ ಕೇಂದ್ರ ಇದಾಗಿತ್ತು.
ಮಹಾತ್ಮಾ ಗಾಂಧೀಜಿಯವರು, ಸುಭಾಷಚಂದ್ರ ಭೋಸರು, ಡಾ.ರಾಜೇಂದ್ರ ಪ್ರಸಾದ, ವಿನೋಬಾ ಭಾವೆ, ಹರ್ಡೇಕರ ಮಂಜಪ್ಪನವರು, ಉಮಾದೇವಿ ಕುಂದಾಪುರ, ಕೆ.ಎಫ್ ಪಾಟೀಲ, ಮೈಲಾರ ಮಹದೇವಪ್ಪ, ಮುದವೀಡ ಕೃಷ್ಣರಾಯರು, ಹೊಸಮನಿ ಸಿದ್ದಪ್ಪನವರು, ಗುದ್ಲೇಪ್ಪ ಹಳ್ಳಿಕೇರಿಯವರು ಹಾಗೂ ಅನೇಕರ ಪಾದ ಸ್ಫರ್ಶದಿಂದ ಈ ಭೂಮಿ ಪುಣ್ಯ ಭೂಮಿಯನೆಸಿದೆ.
ಸ್ವಾತಂತ್ರ ಪೂರ್ವ ಕಾಲದಲ್ಲಿ ದ್ಯಾಮವ್ವನ ಕಟ್ಟೆಯ ಮುಂಭಾಗದಲ್ಲಿ ಮೈದಾನವಿತ್ತು. ಪೇಟೆಯ ಮಧ್ಯಭಾಗದ ಸ್ಥಳವಾಗಿದ್ದರಿಂದ ಜನರನ್ನು ಬಹಳ ಸರಳವಾಗಿ ಕೂಡಿಸಬಹುದಾಗಿತ್ತು. ಮೇಲಾಗಿ ಗ್ರಾಮ ದೇವತೆ ಕಟ್ಟೆಯಾಗಿದ್ದರಿಂದ ಇಲ್ಲಿಯ ಹೋರಾಟಗಳಿಗೆ ಬಹಳ ಪಾವಿತ್ರತೆಯೂ ಇತ್ತು.
ಇಲ್ಲಿಯ ಮುನಸಿಪಾಲಟಿಯವರು ಸಾಂಕ್ರಾಮಿಕ ರೋಗಗಳ ಬಗ್ಗೆ ಜನರಿಗೆ ಜಾಗೃತಿಯನ್ನು ಮೂಡಿಸುವ ಸ್ಥಳವು ಇದಾಗಿತ್ತು.
ಬ್ರಿಟಿಷ್ ಅಧಿಕಾರಿಯಾದ ಜಾನ್ ಥ್ಯಾಕರೆ ಕ್ರಿ.ಶ 1820 ಕ್ಕೆ ಹಾವೇರಿಯ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಹೂಡಿದಾಗ ನಗರ ಸಂಚಾರದ ಸಮಯದಲ್ಲಿ ದ್ಯಾಮವ್ವನ ಕಟ್ಟೆ, ದೊಡ್ಡಕೆರೆ ಹಾಗೂ ಗಂಧಕದ ರಸ್ತೆಗೆ ಭೇಟಿ ಕೊಟ್ಟಿದ್ದು ವಿಶೇಷ.
11/03/1930 ರಂದು ಸ್ವಾತಂತ್ರ ಹೋರಾಟಗಾರರನ್ನು ಹಿಂಡಲಗಾ ಜೈಲಿನಿಂದ ಬಂಧನಮುಕ್ತಗೊಳಿಸಿದಾಗ ಅವರನ್ನು ಊರಿನ ಜನರು ಅದ್ದೂರಿಯಾಗಿ ಸ್ವಾಗತಿಸಿದರು. ಅವರೆಲ್ಲಾ ಅಂದು ಸಾಯಂಕಾಲ ದ್ಯಾಮವ್ವನ ಕಟ್ಟೆಯಲ್ಲಿ ಸಭೆ ಸೇರಿ ತಮ್ಮ ಹೋರಾಟದ ರೂಪರೇಷಗಳನ್ನು ಜನರಿಗೆ ತಿಳಿಸಿದರು.
13/10/1930 ರ ರವಿವಾರದಂದು ಪಂಜಾಬಿನ ಬಾಂಬ್ ಪ್ರಕರಣದಲ್ಲಿ ಭಗತಸಿಂಗ್, ರಾಜಗುರು ಹಾಗೂ ಸುಖದೇವರಿಗೆ ಕೋರ್ಟ್ನಲ್ಲಿ ಫಾಸಿ ಶಿಕ್ಷೆ ಘೋಷಣೆಯಾದಾಗ ಈ ಬಗ್ಗೆ ನಿಷೇಧ ವ್ಯಕ್ತಪಡಿಸಲು ಜನ ಸಮೂಹ ದ್ಯಾಮವ್ವನ ಕಟ್ಟೆಯ ಮೈದಾನದಲ್ಲಿ ಸೇರಿಕೊಂಡಿತು. ಅಲ್ಲಿ ನೆರದಿದ್ದ ಜನರು ತಮ್ಮ ತೆಲೆಯ ಮೇಲಿನ ವಸ್ತ್ರವನ್ನು (ಮುಂಡಾಸ) ತೆಗೆದು ಅವರುಗಳಿಗೆ ಮಾನ ತೋರಿದರು. ಉಮಾದೇವಿ ಕುಂದಾಪುರ ಸೇರಿದ್ದ ಜನರನ್ನೂದ್ದೇಶಿಸಿ ಮಾತನಾಡಿದರು.
ಹಿಂದೂಸ್ತಾನದ ಎಲ್ಲಾ ದೇವಸ್ಥಾನಗಳಿಗೂ ಆದಿಜನರಿಗೆ ಮುಕ್ತ ಅವಕಾಶ ನೀಡಬೇಕೆಂಬ ಕರೆಗೆ ಸ್ಥಳೀಯವಾಗಿ ಗುರುತಿಸಿಕೊಂಡಿದ್ದ ಹೋರಾಟಗಾರರಾದ ಪರಮಣ್ಣ ಹೊಸಮನಿ, ಸಿದ್ದಪ್ಪ ಹೊಸಮನಿ, ವೀರನಗೌಡ ಪಾಟೀಲ, ಚವಟಿ ವೆಂಕಣ್ಣ ಹಾಗೂ ಅನೇಕರು 1932 ರಂದು ಇದೇ ದ್ಯಾಮವ್ವನ ಕಟ್ಟೆಯ ಸ್ಥಳದಲ್ಲಿ ಸೇರಿ, ಮರುದಿನ ಆದಿಜನರನ್ನು ಕರೆದುಕೊಂಡು ವೀರಭದ್ರ, ಬಸವಣ್ಣದೇವಸ್ಥಾನ ಹಾಗೂ ಸಿದ್ದೇಶ್ವರ ದೇವಸ್ಥಾನಕ್ಕೆ ಅವಕಾಶ ಕಲ್ಪಿಸಿದ್ದು ಹೃದಯಸ್ಪರ್ಶಿ ಕಾಯಕವಾಗಿತ್ತು.
04/05/1930 ರಂದು ಹಾವೇರಿಯ ಮುನಸಿಪಾಲಟಿ ಕಛೇರಿಯ ಮೇಲೆ ರಾಷ್ಟ್ರ ನಿಶಾನೆಯನ್ನು ಹಾರಿಸಬೇಕೆಂಬ ನಿರ್ಣಯ ಕೈಗೊಂಡು ಹಿಂದಿನ ದಿವಸ ದ್ಯಾಮವ್ವನ ಕಟ್ಟೆಯ ಮುಂದೆಯೇ ಡಂಗುರ ಸಾರಲಾಯಿತು.
01/03/1934 ರಂದು ಮಹಾತ್ಮ ಗಾಂಧೀಜಿಯವರು ಹಾವೇರಿಯಿಂದ ಬ್ಯಾಡಗಿಗೆ ಹೋಗುವಾಗ ಮೋಟಾರ ಗಾಡಿಯಲ್ಲಿ ಇದೇ ಕಟ್ಟೆಯ ಮುಂಭಾಗದಿಂದ ಪ್ರಯಾಣ ಬೆಳಸಿದರು.
1939 ಕ್ಕೆ ಸುಭಾಸಚಂದ್ರ ಬೋಸರು ಬ್ಯಾಡಗಿಗೆ ಹೋಗುವವಾಗ ಇದೆ ಮಾರ್ಗದ ಮುಖಾಂತರ ಪ್ರಯಾಣ ಬೆಳಸಿದರು.
ಸ್ವಾತಂತ್ರ ಹೋರಾಟದಲ್ಲಿ ವೀರ ಮರಣವನ್ನಪ್ಪಿದ ಅನೇಕ ಹೋರಾಟಗಾರರ ಸಂತಾಪ ಕಾರ್ಯಕ್ರಮಗಳನ್ನು, ಶೇಂದಿ ಗಿಡಗಳ ಹಾಗೂ ವಿದೇಶಿ ಬಟ್ಟೆಗಳ ಪಿಕಟಿಂಗ್ ಕಾರ್ಯಗಳ ಚಾಲನೆಗೆ ಈ ಕಟ್ಟೆ ಸಾಕ್ಷಿಯಾಗಿದೆ ಎನ್ನಬಹುದು.
ಸವಣೂರ ನವಾಬರ ಹಾಗೂ ಪೇಶ್ವೆಗಳ ಕಾಲದಲ್ಲಿಯೂ ಈ ಸ್ಥಳದಲ್ಲಿ ಅನೇಕ ಪ್ರಮುಖ ಘಟನೆಗಳು ನಡೆದಿರಬಹುದು ಅದರೆ ಅವುಗಳಿಗೆ ಪುಷ್ಟಿ ನೀಡುವ ದಾಖಲೆಗಳು ನನಗೆ ಲಭ್ಯವಿರುವುದಿಲ್ಲಾ.
ಒಟ್ಟಾರೆಯಾಗಿ ಹಾವೇರಿ ಮಾರುಕಟ್ಟೆಯ ಮಧ್ಯಭಾಗದಲ್ಲಿಯ ದ್ಯಾಮವ್ವನ ಕಟ್ಟೆ ವಿಶೇಷವಾದ ಶಕ್ತಿ ಕೇಂದ್ರವೆನ್ನಬಹುದು.
# ಪ್ರಮೋದ ನಲವಾಗಲ #
9686168202
Comments
Post a Comment