ಮರೆಯಾಗುತ್ತಿರುವ "ಪ್ರಸನ್ನ ವನದುರ್ಗಾದೇವಿಯ ಪ್ರತೀಕವಾದ "ಕೋಣನ ತೆಲೆಯ" ಕಲ್ಲು ರಾಣೇಬೆನ್ನೂರಿನಲ್ಲಿ.............................!!

ದೇಶದಲ್ಲಿಯೇ ಕರ್ನಾಟಕ ರಾಜ್ಯದಲ್ಲಿ ದಸರಾ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಾ ಬಂದಿರುವುದಕ್ಕೆ ವಿಜಯ ನಗರದ ಅರಸರು ಹಾಗೂ ಮೈಸೂರ ಒಡೆಯರು ಮೂಲ ಕಾರಣಿಭೂತರು. ಈ ಹಬ್ಬವನ್ನು ನವರಾತ್ರಿ ಹಾಗೂ ವಿಜಯದಶಮಿ ಎಂಬ ಹೆಸರುಗಳಿಂದಲೂ ಸಹ ಕರೆಯಲಾಗುವುದು.

ನವರಾತ್ರಿಯ ಕುರಿತು ಪುರಾಣಗಳಲ್ಲಿ ಹಲವು ಉಲ್ಲೇಖಗಳಿವೆ. ಹಲವು ಕಥೆಗಳಿವೆ, ಅವುಗಳೆಂದರೆ. ದುರ್ಗದೇವಿಯು ಮಹಿಷಾಸುರ ಮರ್ಧಿನಿಯಾಗಿ "ಮಹಿಷಾಸುರ"  ಎಂಬ ರಾಕ್ಷಸನನ್ನು ಸಂಹಾರ ಮಾಡಿದಳು. ನವರಾತ್ರಿಯೆಂದರೆ ಒಂಬತ್ತು ದಿನಗಳಿಗೆ ಸೀಮಿತ ವಾಗಿದ್ದರೂ ಹತ್ತನೇ ದಿನ ವಿಜಯದಶಮಿ. ಮಹಾದುರ್ಗೆ ರಾಕ್ಷಸರನ್ನು ಸಂಹರಿಸಿ ವಿಜಯವನ್ನು ಸಾಧಿಸಿದ ದಿನ. ತ್ರೇತಾಯುಗದಲ್ಲಿ ಶ್ರೀರಾಮನು ರಾವಣನನ್ನು ಸಂಹಾರ ಮಾಡಿದ, ದ್ವಾಪರಾಯುಗದಲ್ಲಿ ಪಾಂಡವರು ಒಂದು ವರ್ಷ ಅಜ್ಞಾತವಾಸ ಮಾಡುವಾಗ ತಮ್ಮ ಆಯುಧಗಳನ್ನು ಬನ್ನಿ ಮರದಲ್ಲಿ ಮುಚ್ಚಿಟ್ಟಿದ್ದರ, ದಶಮಿಯ ದಿನಕ್ಕೆ ಅಜ್ಞಾತವಾಸ ಮುಗಿದು, ಅವರು ಬನ್ನಿ ಮರದಿಂದ ತಮ್ಮ ಆಯುಧಗಳನ್ನು ವಾಪಸ್ಸು ಪಡೆದು ಕುರುಕ್ಷೇತ್ರ ಯುದ್ಧದಲ್ಲಿ ಕೌರವರನ್ನು ಸೋಲಿಸಿ ವಿಜಯಸಾಧಿಸಿದ ದಿನ ಇದಾಗಿದೆ ಹೀಗಾಗಿ ಈ ದಶಮಿಯನ್ನು ವಿಜಯದಶಮಿ ಎಂದೂ ಸಹ ಕರೆಯುತ್ತಾರೆ.

 ಆದ್ದರಿಂದ ಇವರೆಲ್ಲರ ವಿಜಯದ ಸಂಕೇತವಾಗಿ ಈ ದಿನವನ್ನು ವಿಜಯದಶಮಿ ಎಂದು ಆಚರಿಸುವುದು ಸಂಪ್ರದಾಯ. ಪುರಾತನ ಕಾಲದಲ್ಲಿ ವೈದಿಕ ಸಂಸ್ಕೃತಿಯ ದೇವತೆಗಳು ಬಹು ಮಟ್ಟಿಗೆ ಪುರುಷರು. ಆರ್ಯರದ್ದು ಪುರುಷ ಪ್ರಧಾನ ಸಮಾಜ. ಆದರೆ ಇದಕ್ಕೂ ಪೂರ್ವದಲ್ಲಿದ್ದ "ಸೈಂದವ" ಸಂಸ್ಕೃತಿಯಲ್ಲಿಯ ಜನರು ಮಾತೃದೇವತೆಯರಿಗೆ ಪ್ರಾಧಾನ್ಯ ನೀಡುತ್ತಿದ್ದರು (ಡಾ. ಭೋಜರಾಜ ಪಾಟೀಲ - ನಾಗರಖಂಡ 70). ಈ ಸಂಸ್ಕೃತಿಯಿಂದ ಭಾರತದಲ್ಲಿ ಶಕ್ತಿಯಾರಧನೆ ಪ್ರಾರಂಭಗೊಂಡು ಗ್ರಾಮದೇವತೆಯರು ಹಾಗೂ ಶಿಷ್ಟದೇವತೆಯರು ಸೃಷ್ಠಿಯಾದರು. ದುಷ್ಟಸಂಹಾರ ಶಿಷ್ಟ ಸಂರಕ್ಷಣೆ ದೇವಿಯ ಹೊಣೆಯಾಯಿತು. ದೇವಿಯನ್ನು ಆದಿಶಕ್ತಿ, ಕಾಳಿ, ಮಹಾಕಾಳಿ, ದುರ್ಗೆ, ಚಂಡಿ, ಚಾಮುಂಡಿ, ರುದ್ರೆ ಹಾಗೂ ಇನ್ನೂ ಹಲವು ನಾಮಗಳಿಂದ ಕರೆಯಲ್ಪಟ್ಟರು. ಆದರೆ ಕರ್ನಾಟಕದಲ್ಲಿ ದುರ್ಗಾದೇವತೆ ಹಾಗೂ ಚಾಮುಂಡಿ ದೇವತೆಯನ್ನು ವಿಶೇಷವಾಗಿ ಪೂಜಿಸಲ್ಪಡುತ್ತಾರೆ. ದೇವಿಯು ಅವತಾರದಲ್ಲಿ ಕೋಣನ ರೂಪದಲ್ಲಿದ್ದ ಮಹಿಷಾಸುರನೆಂಬ ರಾಕ್ಷಸನನ್ನು ಸಂಹರಿಸಿದಳು. ಹೀಗಾಗಿಯೇ ಈ ದೇವಿಯನ್ನು 'ಮಹಿಷಾಸುರ ಮರ್ದಿನಿಯೆಂದು' ಕರೆಯಲ್ಪಟ್ಟರು. 

ಈ ದೇವಿಯನ್ನು ಸಿಂಹವಾಹಿನಿಯಾಗಿ ಅಥವಾ ಕೋಣವನ್ನು ಇಲ್ಲವೆ ಕೋಣನಿಂದ ಹೊರಹೊಮ್ಮುತ್ತಿರುವ ಮಹಿಷಾಸುರನನ್ನು ತ್ರಿಶೂಲದಿಂದ  ಸಂಹರಿಸುತ್ತಿರುವ ರೀತಿಯಲ್ಲಿ ಹಲವು ಕಡೆ ವಿಗ್ರಹಗಳನ್ನು ಕೆತ್ತಲಾಯಿತು. ಆದರೆ ಹಾವೇರಿ ಜಿಲ್ಲೆಯ ಕೆಲವು ಕಡೆ ದೇವಿಯ ವಿಗ್ರಹಗಳ ಬದಲಾಗಿ " ಕೋಣನ ತೆಲೆಯ" ಕಲ್ಲುಗಳನ್ನು ನಾವು ನೋಡಬಹುದಾಗಿದೆ ಮತ್ತು ಜಿಲ್ಲೆಯಲ್ಲಿಯ ಹಲವು ಗ್ರಾಮಗಳ ಹೆಸರು ಈ ಕೋಣನ ತೆಲೆಯ ಮೇಲೆ ಇರುವುದು ವಿಶೇಷ ( ಕೋಣನ ತಂಬಗಿ, ಕುಣಿಮಳ್ಳಳ್ಳಿ, ಕೋಣನತೆಲಿ). ಆದರೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರ ನಗರದಲ್ಲಿ ಇಂತಹ ಕಲ್ಲುಗಳಿರುವುದು ನಮ್ಮ ಗಮನಕ್ಕೆ ಬಂದಿರಲಿಲ್ಲ. ಆದರೆ ಸ್ನೇಹಿತನಾದ 'ಬಸವರಾಜ ರಾಜನಹಳ್ಳಿ' ಕೋಣನ ತೆಲೆ ಕಲ್ಲು ರಂಗನಾಥ ನಗರದ ಪಕ್ಕದಲ್ಲಿರುವ ರೈಲ್ವೆ ಹಳಿಯ ಎಡಭಾಗದಲ್ಲಿದೆ ಎಂದು ತಿಳಿಸಿದಾಗ. ನಮ್ಮ ಕುತೂಹಲ ಇಮ್ಮಡಿಯಾಯಿತು. ಆದರೆ ಅದನ್ನು ಹುಡುಕಿ ತೆಗೆಯುವುದು ನಮಗೆ ಸವಾಲಿನ ಕೆಲಸವಾಯಿತು. ಆದರೂ ನಮ್ಮ ಪ್ರಯತ್ನದ ಫಲವಂತೆ ಅದು ನಮಗೆ ಗೀಡ ಮುಳ್ಳಿನ ಮಧ್ಯದಲ್ಲಿ  ಗೋಚರಿಸಿದಾಗ, ಅದರ ಆನಂದದ ಮಿತಿ ನಮ್ಮನ್ನು ಅದರ ಬಗ್ಗೆ ಮತ್ತೆ ಹೆಚ್ಚಿನ  ಅಧ್ಯಯನ ನಡೆಸುವಂತೆ ಪ್ರೇರೆಪಿಸಿತು. ಇತಿಹಾಸ ಸಂಶೋಧಕರಾದ ಅ. ಸುಂದರ ಅವರು ಹೇಳುವ ಪ್ರಕಾರ ಕೋಣನ ತೆಲೆ ಕಲ್ಲು 'ಮಹಿಷ ಮರ್ದಿನಿ ಶಿಲ್ಪಕ್ಕೆ ಸಂಬಂಧಪಟ್ಟಿರಬಹುದು. 

ಈ ಕೋಣನ ತೆಲೆ ಮಹಿಷಮರ್ದ್ಧಿನಿ ಶಿಲ್ಪದ ಪೂರ್ವಭಾವೀ ಕಲ್ಪನೆಯೇ? ಎಂಬ ಊಹೆಯನ್ನು ವ್ಯಕ್ತಪಡಿಸಿದ್ದಾರೆ. ಡಾ. ದೇವರಗೊಂಡರಡ್ಡಿಯವರು ಇಂತಹ "ಪ್ರಸನ್ನ ವನದುರ್ಗೆಯ" ವಿಗ್ರಹಗಳ ಆರಾಧನೆ ಒಂಬತ್ತನೇ ಶತಮಾನದ ಪೂರ್ವದಲ್ಲಿಯೇ ಪ್ರಾರಂಭವಾಗಿರಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಕೆಲವು ಆಸ್ಯಗಾರ ( ಹಾಸ್ಯಗಾರ) ಪ್ರಕಾರ ಕೋಣನ ತೆಲೆಯ ಕಲ್ಲು ಗ್ರಾಮಗಳ ಪೂರ್ವ ದಿಕ್ಕಿನಲ್ಲಿರುತ್ತದೆ, ಅಲ್ಲಿಯೇ ಈ ಹಿಂದೆ ಬಲಿಯಾದ 'ಕೋಣನ ತೆಲೆಯ'ನ್ನಿಟ್ಟು ಉದಯವಾಗುತ್ತಿರುವ ಸೂರ್ಯನನ್ನು ಪೂಜಿಸಿ ಸಂಪನ್ನಗೊಳಿಸುತ್ತಿದ್ದರು ಎಂದು ಅಭಿಪ್ರಾಯಿಸಿದ್ದಾರೆ. ರಾಣೇಬೆನ್ನೂರಿನಲ್ಲಿ ಈ ತರಹದ ಎರಡು ಕಲ್ಲುಗಳು ಪೂರ್ವ ದಿಕ್ಕಿನಲ್ಲಿದ್ದು ಅವುಗಳು ಜೊತೆಯಾಗಿಯೇ ರಂಗನಾಥ ನಗರದ ಪಕ್ಕದಲ್ಲಿವೆ. ಮಹಿಷಮರ್ದಿನಿ ಕಲ್ಪನೆಯ ಈ ವಿಗ್ರಹಗಳನ್ನು ಒಂಬತ್ತನೆಯ ಶತಮಾನದ ಪೂರ್ವದಲ್ಲಿಯೇ ರಾಣೇಬೆನ್ನೂರಿನಲ್ಲಿ (ಬಿನ್ನವೂರು-12) ಆರಾಧಿಸುತ್ತಾ ಬಂದಿರುವುದು ವಿಶೇಷ. ಈ ಆಚರಣೆಯು ಹಾವೇರಿ ಜಿಲ್ಲೆಯ ಅನೇಕ ಭಾಗಗಳಲ್ಲಿ ಕಾಣಬಹುದು. ಉದಾಹರಣೆಯಾಗಿ ಕೋಣನತಂಬಗಿ, ಗಣಜೂರು, ಕೋಣನತೆಲೆ, ಅರಟಾಳ, ಕುಣೆಮಳ್ಳಹಳ್ಳಿ, ಅರಟಾಳ, ಸಾವಿಕೇರಿ ಹಾಗೂ ಮುಂತಾದವು. ಸಾವಿರಾರು ವರ್ಷಗಳ ಹಿಂದಿನ ಆಚರಣೆಯನ್ನು ತನ್ನಲ್ಲಿ ಜೀವಂತವಾಗಿರಿಸಿಕೊಂಡ ಈ ಕಲ್ಲು, ಆಧುನಿಕತೆಯ ಬರಾಟೆಯಲ್ಲಿ ಅಳುಕಿ ಹೋಗಬಾರದು. ನಮ್ಮಯ ಆಚರಣೆಯನ್ನು ಬಿಂಬಿಸುತ್ತಿರುವ ಈ ಕೋಣನ ತೆಲೆಯ ಕಲ್ಲನ್ನು ಈ ಕೂಡಲೇ ಸಂರಕ್ಷಿಸುವಂತಹ ಕೆಲಸವಾಗಲಿ ಎಂಬುದು ನನ್ನಯ ಆಶಯ.
--------------- ಪ್ರಮೋದ ನಲವಾಗಲ  ---------------
                       9686168202

Comments

Popular posts from this blog

ಹೊಯ್ಸಳರ ಲಾಂಛನದಲ್ಲಿಯ ಪ್ರಾಣಿ ಹುಲಿಯಲ್ಲ ಸಿಂಹ...!

ಹಾವೇರಿ ಜಿಲ್ಲೆಯಲ್ಲಿಯ ಶಾಸನಗಳಲ್ಲಿ ಬಸವಣ್ಣನವರು

ಹಾವೇರಿ ಜಿಲ್ಲೆಯ ಎಂಟು ತಾಲೂಕುಗಳ ಕಿರು ಪರಿಚಯ....!!!!