ಸಂತ ಕನಕದಾಸರ ನೈಜ ವಿಗ್ರಹಗಳು ಇವಾಗಿರಬಹುದೇ ?


ತಿರಿದುಂಬದಾಸರ ಕೈಯ ಕಪ್ಪವ ಕಟ್ಟಿಸಿಕೊಂಡೆ I ತಿರುಮಲಾಚಾರ್ಯ ಶ್ರೀ ಗುರುವೆ ಬಲ್ಲ I  
ಎಂದು ಕಿರ್ತನೆಯಲ್ಲಿ ಗುರುಗಳಾದ ತಿರುಮಲಾಚಾರ್ಯರನ್ನು ಕನಕದಾಸರು ನೆನೆದ್ದಿದ್ದಾರೆ. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕದಿರಮಂಡಲಗಿಯಲ್ಲಿ ರಚಿತವಾದ 'ಮೋಹನ ತರಂಗಿಣಿ' ಗ್ರಂಥದಲ್ಲಿಯೂ ಸಹ ರಾಮಾನುಜಾಚಾರ್ಯರನ್ನು ನೆನೆಯುವದೊರೊಂದಿಗೆ ಅವರ ಪಂಥೀಯವರಾದ 'ತಾತಾಚಾರ್ಯರನ್ನು' ಸಹ ಕನಕದಾಸರು ಸ್ಮರಿಸಿದ್ದಾರೆ. 

ಕನಕದಾದಾಸರು ತಿರುನಾಮ ಹಾಗೂ ತಿರುಚೂರಣದ ಬಗ್ಗೆ ಹೆಚ್ಚಾಗಿ ಒತ್ತು ಕೊಟ್ಟಿದ್ದಾರೆಂದರೆ ಅವರು ತಿರುಪತಿಯ ತಿಮ್ಮಪ್ಪನ ಮೇಲೆ ಅಗಾಧವಾದ ಭಕ್ತಿಯನ್ನಿಟ್ಟಿದ್ದರು ಎಂದು ತಿಳಿಯಬಹುದು. ಜ್ಞಾನಿ - ವಿಜ್ಞಾನಿಗಳನ್ನು ಮೀರಿಸುವ ಜ್ಞಾನ ಸಂಪತ್ತು ಅವರಲ್ಲಿತ್ತು. ಅವರ 'ಮೋಹನ ತರಂಗಿಣಿ' 'ನಳಚರಿತೆ' ಹಾಗೂ ರಾಮದಾನ್ಯ ಚರಿತೆ ಗ್ರಂಥಗಳನ್ನು ಸಮಗ್ರಹವಾಗಿ ಅಧ್ಯಯನ ಮಾಡಿದಾಗ ಅವರಲ್ಲೊಬ್ಬ ಕಾಲಜ್ಞಾನಿ ಅಡಗಿದ್ದು ನಮಗೆ ಗೋಚರವಾಗದಿರದು.  ಅವರು ಕಾಗಿನೆಲಿಯ ಆದಿಕೇಶವನನ್ನು, ತಿಮ್ಮಪ್ಪನನ್ನು ಹಾಗೂ ಕದಿರಮಂಡಲಗಿಯ ಹನುಮೇಶನನ್ನು ಸಾಕ್ಷತ್ಕರಿಸಿಗೊಂಡಿದ್ದರು ಎಂಬುವುದರಲ್ಲಿ ಯಾವುದೇ ಸಂಶಯವಿಲ್ಲಾ ಎನ್ನುವುದಕ್ಕೆ ಅವರ ಗ್ರಂಥದಲ್ಲಿಯ ಶಬ್ದಗಳೇ ನಮಗೆ ಆಧಾರ. ಭಕ್ತಿ ಹಾಗೂ ಜ್ಞಾನ ಮಾರ್ಗದಿಂದ ಹರಿಯನ್ನು ತನ್ನಡೆ ಸೆಳೆದದ್ದನ್ನು ನೋಡಿದಾಗ ಭಗವಂತನನ್ನು ಸಾಕ್ಷಾತ್ಕಾರಸಿಕೊಳ್ಳಲು ನಿರ್ಮಲಾವಾದ ಭಕ್ತಿಯೊಂದಿದ್ದರೆ ಸಾಕು, ಭಗವಂತನೆ ಭಕ್ತನನ್ನು ಬೆನ್ನತ್ತಿ ಬರುತ್ತಾನೆ ಎಂಬುದಕ್ಕೆ ಕನಕದಾಸರು ಒಳ್ಳೆಯ ಉದಾಹರಣೆ. 

ಹಾಗಾದರೆ ಅಂತಹ ಭಕ್ತನ ನೈಜ ವಿಗ್ರಹಗಳು ಕರ್ನಾಟಕದ ಯಾವ ಭಾಗದಲ್ಲಿ ನಮಗೆ ಲಭ್ಯವಾಗಬಹುದು? ಎನ್ನುವ ವಿಷಯನ್ನಾದರಿಸಿ ಸಂಶೋಧನೆಗೆ ಚಾಲನೆ ನೀಡಿದಾಗ ಅದಕ್ಕೆ ಉತ್ತರ ಸಿಗಲು ಸುಮಾರು ಎರಡು ವರ್ಷಗಳು ಕಳೆದು ಹೋದವು. ಕನಕದಾಸರ ನೈಜ ವಿಗ್ರಹಗಳನ್ನು ಸಂಶೋಧಿಸಲು ಪೂರಕವಾದ ಸಾಕ್ಷ್ಯಗಳು ದೊರೆತಾಗ ಮಾತ್ರ ಅದು ಕನಕದಾಸರು ವಿಗ್ರಹವೆಂದು ಹೇಳಬಹುದು. ಕನಕದಾಸರು ನಿಂತ ನೀರಲ್ಲ ಅವರು ಹರಿಯುವ ನದಿಯಾಗಿ ದೇಶವನ್ನೆ ಸುತ್ತಿದವರು. ಅವರಿಗೆ ಹೆಚ್ಚು ಒಡನಾಟವಿದ್ದ ಪ್ರದೇಶಗಳನ್ನು ನಾವು ಸೂಕ್ಷ್ಮವಾಗಿ ಅಧ್ಯಯನ ನಡೆಸಿದಾಗ ಮಾತ್ರ ನಮಗೆ ಅವರ ನೈಜ ವಿಗ್ರಹಗಳು ಸಿಗಬಹುದು ಎಂಬುದು ನನ್ನ ಅನಿಸಿಕೆ.  ಹಂಪಿಯ ಪಂಪಾ (ತುಂಗಭದ್ರಾ) ಸರೋವರ ಕ್ಷೇತ್ರ ಅವರಿಗೆ ಅತಿ ಪ್ರಿಯವಾದ ಸ್ಥಳ. ಅಲ್ಲಿಯೇ ಸಮೀಪವಿರುವ ಆನೆಗುಂದಿ ಗ್ರಾಮ ಸಂತರ ಸಾದನೆಗಾಗಿ ಹೇಳಿ ಮಾಡಿಸಿದ ಸ್ಥಳ ಎಂಬ ಮಾತು ಇನ್ನೂ ಜನಸಾಮಾನ್ಯರ ಬಾಯಲ್ಲಿ ಜೀವಂತವಾಗಿದೆ. ಆನೆಗುಂದಿಯ ಶ್ರೀ ರಂಗನಾಥನನ್ನು ಆರಾಧಿಸುತ್ತಿದ್ದ ಹಾಗೂ ವಿಜಯನಗರದ ಅರಸರ ರಾಜಗುರುಗಳಾದ ತಾತಾಚಾರ್ಯರನ್ನು ಹೆಚ್ಚಾಗಿ ಇದೇ ಆನೆಗುಂದಿಯಲ್ಲಿ ಕನಕದಾಸರು ಸಂಧಿಸುತ್ತಿದ್ದರು. 

ಆನೆಗುಂದಿಯ ಶ್ರೀರಂಗನಾಥ ದೇವಸ್ಥಾನದಲ್ಲಿ ತಿರುಮಲ ತಾತಾಚಾರ್ಯರ ವಿಗ್ರಹವೊಂದು ಯಾರಿಗೂ ಗೊತ್ತಾಗದ ರೀತಿಯಲ್ಲಿ ಕುಳಿತಿರುವುದು ಆಶ್ಚರ್ಯ. ಗುರು-ಶಿಷ್ಯರು ಭೇಟಿಯಾಗುತ್ತಿದ್ದ ಆ ಪವಿತ್ರವಾದ ಸ್ಥಳದಲ್ಲಿ ಈಗ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಠ ತಲೆ ಎತ್ತಿ ನಿಂತಿದೆ. ಈ ಸ್ಥಳವನ್ನು ಹೊರತುಪಡಿಸಿದರೆ ಗುರುಶಿಷ್ಯರಿರ್ವರು ಮೇಲುಕೋಟೆಯಲ್ಲಿ, ತಿರುಪತಿಯಲ್ಲಿ, ಅಹೋಬಲದಲ್ಲಿ ಹಾಗೂ ಕದಿರಮಂಡಲಗಿಯ ಚಪ್ಪರದ ಮಠದಲ್ಲಿ(ಸಮೇರಾಯರ ಮಠ-ಸ್ವಾಮಿರಾಯರ ಮಠ)ಭೇಟಿಯಾಗುವುದು ಸಾಮಾನ್ಯವಾಗಿತ್ತು. ಸಂತ ಕನಕದಾಸರ ನೈಜ ವಿಗ್ರಹಗಳೆಂದು ಕರೆಯಲ್ಪಡುವ ಮೂರ್ತಿಗಳನ್ನು ನಾವು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕದಿರಮಂಡಲಗಿ ಹಾಗೂ ಕಾಗಿನೆಲೆಯಲ್ಲಿ ಮಾತ್ರ ನಾವು ನೋಡಬಹುದಾಗಿದೆ. ಕನಕದಾಸರ ನೈಜ ವಿಗ್ರಹವೆಂದು ಕರೆಯಲ್ಪಡುವ ಕಲ್ಲಿನ ಉಬ್ಬು ಶಿಲ್ಪವು ಬ್ಯಾಡಗಿ ತಾಲೂಕಿನ ಕದಿರಮಂಡಲಗಿಯ ಕಾಂತೇಶ ದೇವಸ್ಥಾನದಲ್ಲಿ ಇನ್ನೂ ಜೀವಂತವಾಗಿದೆ ಎಂಬುದು ದಾಖಲೆಯಾಧಾರಿತ. ಶ್ರೀ ಕಾಂತೇಶ ದೇವಸ್ಥಾನ ಪ್ರವೇಶ ದ್ವಾರದ ಬಲಭಾಗದಲ್ಲಿರುವ ತಿರುನಾಮದಾರಿ ವಿಗ್ರಹವೇ ಕನಕದಾಸರದ್ದು ಎಂದು ಹಿರಿಯರು ಹೇಳುತ್ತಿದ್ದರು ಎಂದು ಸ್ಥಳೀಯರು ಹಾಗೂ ಉಪನ್ಯಾಸಕರಾದ ಶ್ರೀ ಎಂ.ಕೆ ಕಲ್ಲಜ್ಜನವರ ನೆನೆಯುತ್ತಾರೆ. ನಮ್ಮ ಗ್ರಾಮದ ಜಮೀನ್ದಾರ ಹಾಗೂ ಕಲಾಪೋಷಕರಾಗಿದ್ದ ದಿ.ಚಿಕ್ಕೋ ಗುರುರಾವ ಕುಲಕರ್ಣಿಯವರು ನಾವು ಸಣ್ಣವರಿದ್ದಾಗ ಈ ವಿಗ್ರಹವನ್ನು 'ಕನಕಪ್ಪನ ವಿಗ್ರಹ ' ಎಂದು ತೋರಿಸುತ್ತಿದ್ದರು. ಆದರೆ ಸಾಮಾನ್ಯ ಜನರು ಇತ್ತೀಚಿಗೆ ಇದನ್ನು ದ್ವಾರಪಾಲಕನ ವಿಗ್ರಹ ಎನ್ನುತ್ತಾರೆ ಎಂಬುದು ಅವರ ಮನದಾಳದ ಮಾತು. ಆ ವಿಗ್ರಹವು 16 ನೇ ಶತಮಾನಕ್ಕೆ ಸೇರಿದ್ದಾಗಿದ್ದು, ಸ್ಥಳೀಯವಾಗಿ ಸಿಗುವ ಕಲ್ಲಿನಲ್ಲಿ ಕೆತ್ತಲಾಗಿದೆ. ಬಹುಶಃ ಕನಕದಾಸರು ಕಾಲವಾದ ನಂತರ ಈ ವಿಗ್ರಹವನ್ನು ಖಂಡರಿಸಲಾಗಿದೆ ಎಂಬುದು ಡಾ. ರಮೇಶ ತೆವರಿಯವರ ಅಭಿಪ್ರಾಯ. ಈ ವಿಗ್ರಹ ಕನಕದಾಸರದ್ದು ಎಂಬ ಅನಿಸಿಕೆ ವ್ಯಕ್ತಪಡಿಸಲು ಸಿಗುವ ಸುಳಿವುಗಳೆಂದರೆ ' ಕನಕದಾಸರು ತಾವೇ ಲಿಪಿಕಾರರಾಗಿ ಬರೆದ "ಮೋಹನ ತರಂಗಿಣಿಯ" ತಾಳೆಗರಿ ಮೂಲ ಪ್ರತಿ ಈ ದೇವಸ್ಥಾನದಲ್ಲಿ ಇನ್ನೂ ಜೀವಂತವಾಗಿದೆ. ಈ ಗ್ರಂಥವನ್ನು ಕಾರ್ತಿಕ ಮಾಸದ  ಒಂದು ತಿಂಗಳವರೆಗೆ ಇಲ್ಲಿಯ ಹನುಮಂತ ದೇವರ ಗುಡಿಯಲ್ಲಿಯೇ ಓದಲ್ಪಡುತ್ತಾರೆ ಎಂಬುದನ್ನು ಸಮೀಪದ ಶಿಡೇನೂರ ಗ್ರಾಮದ ಲೇಖಕರಾಗಿದ್ದ "ದಿ.ಭೀಮಾಚಾರ್ಯ ವಡವಿ 1926 ರಲ್ಲಿ ಪ್ರಕಟವಾದ ತಮ್ಮ "ಶ್ರೀ ಕನಕಮಹಿಮಾದರ್ಶ" ಗ್ರಂಥದಲ್ಲಿ ನಮೂದಿಸಿದ್ದಾರೆ. ಸಂತೆಬೆನ್ನೂರಿನ "ಕೆಂಗಪ್ಪ ನಾಯಕನ" ಕಾಲದಲ್ಲಿ ಕನಕದಾಸರ ವಾಸ್ತವ್ಯ ಇದೇ ದೇವಸ್ಥಾನದ ಪಕ್ಕದಲ್ಲಿತ್ತು. ಅವರು ಕಾಲಿಗೆ ಗೆಜ್ಜೆಯನ್ನು, ಜಡೆಗೆ ಹೂವನ್ನು, ಕೈಯಲ್ಲಿ ತಂಬೂರಿ-ಶಂಖವನ್ನು ಹಣೆಗೆ ತಿರುನಾಮವನು ಹಚ್ಚಿ ಹರಿನಾಮವನ್ನು ಜಪಿಸುತ್ತಾ ಕುಣಿಯುತ್ತಾ ತಮಗರಿಯದೆ ಸಾಧನೆಯ "ಸಮಾಧಿ ಸ್ಥಿತಿ" ತಲುಪುತ್ತಿದ್ದರೆಂದರೆ ಆ ಮುಕ್ತಿಯ ಮಾರ್ಗದ ಆಳ ಕನಕದಾಸರಿಗೆ ಮಾತ್ರ ಗೊತ್ತಿತ್ತು ಎನ್ನಬಹುದು. ಈ ಅನುಭವದ ಸಾಲುಗಳು ನಾನು ಬರೆಯುತ್ತಿದ್ದೇನೆ ಅಂದರೆ ಅದಕ್ಕೆ ಅವರ ಕೀರ್ತನೆಗಳ ಸಾಲುಗಳೇ ನನಗೆ ಸ್ಪೂರ್ತಿ. ಶ್ರೀ ಕಾಂತೇಶನನ್ನು ಕದಿರುಂಡಲಗೀಶ, ಹನುಮೇಶ ಎಂದು ಕನಕದಾಸರು ಹಾಡಿ ಹೋಗಳಿದ್ದಾರೆ. 

ಕದಿರಮಂಡಲಗಿ ಸಮೀಪದ ಕಾಕೋಳದ ಗುಡ್ಡದಲ್ಲಿರುವ ತಿಮ್ಮಪ್ಪನ ಗುಡ್ಡಕ್ಕೆ ಕನಕದಾಸರು ವಿಜಯದಶಮಿ ದಿನದಂದು ಹೋಗಿ ಬರುತ್ತಿದ್ದರು ಎಂಬ ಅನಿಸಿಕೆ ಅಲ್ಲಿಯ ಸ್ಥಳೀಕರಲ್ಲಿದೆ. ಈ ಹಿಂದೆ ಪ್ರತಿವರ್ಷ ಎಪ್ರಿಲ್ 15 ರಂದು ಕನಕದಾಸರ ಜಯಂತಿಯನ್ನು ಕದಿರಮಂಡಲಗಿಯಲ್ಲಿ ನಡೆಸುತ್ತಿದ್ದರು. ಕೃಷ್ಣಶರ್ಮ ಬೇಟಗೇರಿ ಹಾಗೂ ಹುಚ್ಚುರಾವ ಬೆಂಗೇರಿಯವರು ರಚಿಸಿದ ಗ್ರಂಥದಲ್ಲಿಯೂ ಸಹ ಕನಕದಾಸರ ವಿಗ್ರಹ ಕದಿರಮಂಡಲಗಿಯಲ್ಲಿದೆ ಎಂಬುದನ್ನು ನಮೂದಿಸಿದ್ದಾರೆ. ತಾತಾಚಾರ್ಯರು ಶ್ರೀವೈಷ್ಣವರು ಅವರ ಸಂಪರ್ಕದಲ್ಲಿದ್ದ "ಸಮೇರಾಯರ ಮಠ" ಕದಿರಮಂಡಲಗಿಯಲ್ಲಿ ಇನ್ನೂ ಜೀವಂತವಿದೆ.  ಒಟ್ಟಾರೆಯಾಗಿ ಈ ಎಲ್ಲಾ ಕುರುಹುಗಳನ್ನು ಗಮನಿಸಿ ಹೇಳುವುದಾದರೆ ಕದಿರಮಂಡಲಗಿ ಶ್ರೀ ಕಾಂತೇಶ ದೇವಸ್ಥಾನದ ಮುಂಭಾಗದಲ್ಲಿ ರಾಜಪೋಷಾಕಿನಲ್ಲಿರುವ ಉಬ್ಬು ಶಿಲ್ಪವೇ ಕನಕದಾಸರದ್ದು ಎಂಬ ಅಭಿಪ್ರಾಯ ನನ್ನದಾಗಿದೆ. ಆದರೆ ಇತಿಹಾಸ ತಜ್ಞರಾದ ಡಾ. ದೇವರಗೊಂಡರಡ್ಡಿಯವರು ಈ ವಿಗ್ರಹವು ಬಹುಶಃ  ಕೆಂಗಪ್ಪ ನಾಯಕನದ್ಯಾಕೆ ಆಗಿರಬಾರದು, ಕಾರಣ ಅವನು ಈ ದೇವಸ್ಥಾನಕ್ಕೆ ಗ್ರಾಮವನ್ನು ದಾನವಾಗಿ ನೀಡಿದ್ದಾನೆ. ಅವನು ಸಹ ಶ್ರೀವೈಷ್ಣವ ಪಂಥದವನು ಮೇಲಾಗಿ ತಿರುನಾಮದಾರಿ ಎಂಬ ಅಭಿಪ್ರಾಯ ಅವರು ವ್ಯಕ್ತಪಡಿಸಿದ್ದಾರೆ. ಆದರೆ ಈ ವಿಷಯವಾಗಿ ಸಂಶೋಧಕರು ಇನ್ನೂ ಹೆಚ್ಚಿನ ಅಧ್ಯಯನ ನಡೆಸುವುದು ಸೂಕ್ತ. 

ದ.ರಾ ಬೇಂದ್ರೆಯವರು 1965 ರಲ್ಲಿ ನಡೆದ ಕನಕದಾಸರ 400 ನೇ ಜಯಂತೋತ್ಸವದ ಸಮಯದಲ್ಲಿ ಮೈಸೂರ ಅರಮನೆಯಲ್ಲಿ ಕುಳಿತ ಭಂಗಿಯಲ್ಲಿರುವ ತೈಲಚಿತ್ರ ಕನಕದಾಸರದ್ದು ಎಂದು ಗುರುತಿಸಿದ್ದರು ಎಂಬುದು ಇಲ್ಲಿ ಸ್ಮರಣಿಯ. "ಕಾಗಿನಲೆಯ ಕನಕನಿಗೆ"  ಎಂದು ಹೆಮ್ಮೆಯಿಂದ ತಮ್ಮನ್ನು ಕೀರ್ತನೆಯಲ್ಲಿ ಕರೆದುಗೊಂಡಿದ್ದನ್ನು ಗಮನಿಸಿದಾಗ ತಮ್ಮ ಜೀವಿತಾವಧಿಯ ಹೆಚ್ಚು ಭಾಗವನ್ನು ಕನಕದಾಸರು ಕಾಗಿನೆಲೆಯಲ್ಲಿ ಕಳೆದಿದ್ದಾರೆ. ಕಾಗಿನೆಲೆ ಆದಿಕೇಶವನ ಹೆಸರನ್ನೇ ಅಂಕಿತ ನಾಮವನ್ನಾಗಿಟ್ಟುಕೊಂಡು ಅನೇಕ ಕೀರ್ತನೆಗಳನ್ನು ರಚಿಸಿದ್ದಾರೆ. ಆದಿಕೇಶವನ ಕೆಳಭಾಗದಲ್ಲಿ ಸೂಕ್ಷ್ಮವಾಗಿ ಗಮನಿಸಿದಾಗ ಕೈ ಮುಗಿದುಕೊಂಡು ನಿಂತಿರುವ ಸಣ್ಣ ವಿಗ್ರಹ ನಮಗೆ ಗೋಚರಿಸುತ್ತದೆ. ಆ ವಿಗ್ರಹ ಕನಕದಾಸರದ್ದು ಎಂಬ ಮಾತು ಈ ಹಿಂದೆ ಪ್ರಚಲಿತದಲ್ಲಿತ್ತು ಎಂಬ ವಿಷಯವನ್ನು 1926 ರಲ್ಲಿ ರಚಿತವಾದ ಶ್ರೀ ಕನಕಮಹಿಮಾ ದರ್ಶನ ಗ್ರಂಥದಲ್ಲಿ ಕಾಣಬಹುದಾಗಿದೆ.  
ಆದಿಕೇಶವನನ್ನು ಕಾಗಿನೆಲೆಯಲ್ಲಿ ಪ್ರತಿಷ್ಠಾಪಿಸಿ ಆರಾಧಿಸಿದ ಪರಮಭಕ್ತರು ಕನಕದಾಸರು. ಹೀಗಾಗಿ ಆದಿಕೇಶವನ ವಿಗ್ರಹದ ಕೆಳಗಿರುವ ಪರಮಭಕ್ತ ಕನಕರಲ್ಲದೇ  ಬೇರೆ ಯಾರು ನಿಲ್ಲಲು ಸಾದ್ಯ? ಎಂಬುದು ನಮ್ಮ ಪ್ರಶ್ನೆ. ಆದರೆ ಅದು ಯಾವ ಕಾಲದ್ದು ಹಾಗೂ ಯಾರು ನಿರ್ಮಾಣ ಮಾಡಿದರು ಎಂಬುದನ್ನು ಸಂಶೋಧಕರು ಖಚಿತಪಡಿಸಬೇಕು. ಹಾವೇರಿ ತಾಲೂಕಿನ ಭರಡಿ ಗ್ರಾಮದ ಗುಡ್ಡದಲ್ಲಿರುವ ಗುಹೆಯಲ್ಲಿ ಕನಕದಾಸರು ಕೆಲವು ವರ್ಷಗಳವರೆಗೆ ವಾಸ್ತವ್ಯ ಹೂಡಿದ್ದರು. ಅಲ್ಲಿಯ ಹನುಮಂತನ ವಿಗ್ರಹವನ್ನು ಅವರೇ ಆರಾಧಿಸುತ್ತಿದ್ದರು. ಅವರ ಕೈ ಗುರುತುಗಳಿದ್ದವು ಎಂಬುದಕ್ಕೆ ಆಧಾರಗಳಿವೆ. ಆದರೆ ಪರಿಸರದಲ್ಲಾದ ಬದಲಾವಣೆಯಿಂದಾಗಿ ಆ ಕೈ ಗುರುತುಗಳು ಈಗ ಮಾಯವಾಗಿವೆ ಎಂಬುದು ನೋವಿನ ಸಂಗತಿ. ಕನಕದಾಸರ ನೈಜ ವಿಗ್ರಹಗಳು ಹಂಪಿಯಲ್ಲಾಗಲಿ, ಶ್ರೀರಂಗಂನಲ್ಲಾಗಲಿ, ಅಹೋಬಲದಲ್ಲಾಗಲಿ ಇಲ್ಲಾ. ಆದರೆ ಆ ವಿಗ್ರಗಳು ನಮ್ಮ ಹಾವೇರಿ ಜಿಲ್ಲೆಯಲ್ಲಿ ಮಾತ್ರ ಗೋಚರಿಸಲು ಸಾದ್ಯ ಕಾರಣ ಅವರು ಇಲ್ಲಿಯ ಪ್ರಕೃತಿಗೆ ಮನಸೋತಿದ್ದರು,ಇಲ್ಲಿಯ ಪ್ರಾಣಿ ಪಕ್ಷಿಗಳ, ಮುಗ್ದ ಜನರ ಹಾಗೂ ಆದಿಕೇಶವನ ಮೇಲೆ ಅತಿಯಾದ  ಪ್ರೀತಿಯನ್ನಿಟ್ಟಿದ್ದರು. ಹೀಗಾಗಿಯೇ ಅವರ ಜ್ಞಾನದ ಹಾಗೂ ಭಕ್ತಿಯ ಆಳವನ್ನರಿತ ಸಾಮಾನ್ಯ ಜನರು ಈಗ ಲಭ್ಯವಿರುವ ವಿಗ್ರಹಗಳನ್ನು ಕನಕದಾಸರು ಕಾಲವಾದ ನಂತರ ಪ್ರತಿಷ್ಠಾಪಿಸಿರಬಹುದೇ?? ಎಂಬ ಅಭಿಪ್ರಾಯ ನನ್ನದು. ಈ ವಿಷಯ ಮರೆಯಾಗದೆ ಇನ್ನೂ ಹೆಚ್ಚಿನ ಅಧ್ಯಯನಕ್ಕೊಳಪಡಲಿ. ಕನಕದಾಸರು ಸರ್ವರ ಮನದಾಳದಲ್ಲಿ ಶಾಶ್ವತವಾಗಿ ನೆಲಸಲಿ ಎಂಬುದು ಈ ಕನಕದಾಸರ ಭಕ್ತನ ಮನದಾಸೆ.
     ~~~ ಪ್ರಮೋದ ನಲವಾಗಲ ~~ 
                9686168202

Comments

Popular posts from this blog

ಹೊಯ್ಸಳರ ಲಾಂಛನದಲ್ಲಿಯ ಪ್ರಾಣಿ ಹುಲಿಯಲ್ಲ ಸಿಂಹ...!

ಹಾವೇರಿ ಜಿಲ್ಲೆಯಲ್ಲಿಯ ಶಾಸನಗಳಲ್ಲಿ ಬಸವಣ್ಣನವರು

ಹಾವೇರಿ ಜಿಲ್ಲೆಯ ಎಂಟು ತಾಲೂಕುಗಳ ಕಿರು ಪರಿಚಯ....!!!!