ಹಾವೇರಿಯ ಸಾವಿರ ವಷ೯ಗಳ ಹಿಂದಿನ ಇತಿಹಾಸ ಹೇಳುವ ಮೂಕ ಶಾಸನಗಳು

ಶಿವಲಿಂಗ ಪೂಜೆಯಲ್ಲಿ ತಲ್ಲಿನನಾದ ವಿರಳ ವಿಷ್ಣುವಿನ ಪ್ರತಿಮೆ- ಹಾವೇರಿಯ ಪುರಸಿದ್ದೇಶ್ವರ ದೇವಸ್ಥಾನದಲ್ಲಿ

ಹಾವೇರಿ ನಗರದಲ್ಲಿ ಸುಮಾರು 28 ಶಾಸನಗಳು ಪತ್ತೆಯಾಗಿವೆ. ಅವುಗಳು ಸಾವಿರಾರು ವಷ೯ಗಳ ಹಿಂದಿನ ಇಲ್ಲಿಯ ಪರಿಸರವನ್ನು, ರಾಜರ ಆಡಳಿತವನ್ನು, ಸಂಸ್ಕೃತಿಯನ್ನು , ದೇವಾಲಯಗಳನ್ನು ಹಾಗೂ ಜನರ ಸ್ಥಿತಿಗತಿಯನ್ನು ಎಳೆ - ಎಳೆಯಾಗಿ ಬಿಡಿಸಿಡಲು ಸಹಕಾರಿಯಾಗಿವೆ. ಹಾವೇರಿಯನ್ನು ಶಾಸನಗಳಲ್ಲಿ "ಪಾವರಿ, ಹಾವರಿ, ಹಾಹರಿ, ಹಾಗೂ ನಳಪುರಿ" ಎಂದು ಉಲ್ಲೇಖಿಸಲಾಗಿದೆ. ಕಲ್ಲುಮಂಟಪದ ಬಳಿಯಿರುವ ಕ್ರಿ.ಶ 1157 ರ ಶಾಸನದಲ್ಲಿ "ಹರಿಯುವ ನೀರಿಗೆ ಅಡ್ಡಲಾಗಿ ಹಾವೊಂದು ಬಂದಿದ್ದರಿಂದ ಕೃತಾಯುಗದಲ್ಲಿ ನಳಚಕ್ರವತಿ೯ಯು ಕೆರೆಯೊಂದನ್ನು ನಿಮಿ೯ಸಿ" ಊರೊಂದನ್ನು ಕಟ್ಟಿದನು ಎಂದಿದೆ. ಆ ಕೆರೆಯನ್ನು ಶಾಸನಗಳಲ್ಲಿ ನಳಹಲ್ಲಕೆರೆಯೆಂದು ಕರೆಯಲಾಗಿದೆ. ಈ ವಿಷಯನ್ನಾದರಿಸಿ ಒಂದು ಶಾಸನದಲ್ಲಿ ಈ ಊರನ್ನು "ನಳಪುರಿ"ಯೆಂದು ಉಲ್ಲೇಖಿಸಲಾಗಿದೆ. ಶಾಸನ ಕವಿಯೊಬ್ಬ ಹಾವೇರಿಯನ್ನು ನಾಲ್ಕನೂರು ಜನರಿರುವ ಅಗ್ರಹಾರ, ಬ್ರಹ್ಮನ ನಿವಾಸ, ವೇದಗಳ ನೆಲೆ, ಭೂಮಿಗೊಂದು ಅಲಂಕಾರ, ವಿದ್ಯಾಧಿದೇವತೆ ಸರಸ್ವತಿಯ ನೆಲೆವೀಡೆಂದು ಹೊಗಳಿದ್ದಾನೆ. ಹಾವೇರಿಯು ಅಂದು ಬನವಾಸಿ ಪನ್ನಿಚ್ಛಾ೯ಸಿರಕ್ಕೆ (12000 ಗ್ರಾಮಗಳನ್ನೊಳಗೊಂಡ ಪ್ರಾಂತ) ಸೇರಿದ್ದ "ಪುಲಿಗೆರೆ-300" (ಈಗಿನ ಲಕ್ಷ್ಮೇಶ್ವರ) ಜಿಲ್ಲೆಗೆ ಸೇರಿತ್ತು. ಇದೊಂದು ಮುಖ್ಯಸ್ಥಳವಾಗದೆ ಸುಂಕದಧಿಕಾರಿಯೊಬ್ಬನ ಠಾಣೆಯಾಗಿತ್ತೆಂದು ರಾಣೇಬೆನ್ನೂರ ತಾಲೂಕಿನ ಗುಡ್ಡದಾನವೇರಿ ಗ್ರಾಮದ ಶಾಸನ ತಿಳಿಸುತ್ತದೆ. ಕ್ರಿ.ಶ 1133 ರಲ್ಲಿಯ ಶಾಸನದಲ್ಲಿ ಶಾಸನ ಕವಿ"ಕಿರಿಯಮೂಕಣ" ಹಾವೇರಿ ಎಂತಹ ರಮಣೀಯ ಸ್ಥಳದಲ್ಲಿತ್ತೆಂದು ತಿಳಿಸುತ್ತಾನೆ. ನಾಲ್ಕನೂರ ಮಹಾಜನರಿರುವ ಅಗ್ರಹಾರ ಅಂದು ವಿದ್ಯಾಕೇಂದ್ರವಾಗಿತ್ತು. ಇಲ್ಲಿ ವಾಸಿಸುತ್ತಿದ್ದ ಮಹಾಜನರು ಪಂಡಿತರು, ಸವ೯ ಶಾಸ್ತ್ರಗಳಲ್ಲಿ ಬಲ್ಲಿದರೂ, ನಿಷ್ಠಾವಂತ ಧಮಾ೯ಚರಣರೂ ಹಾಗೂ ಯುದ್ಧಗಳ ಸಮಯದಲ್ಲಿ ಕತ್ತಿಯನ್ನು ಸಹ ಝಳಪಿಸುತ್ತಿದ್ದರು. ಹೀಗಾಗಿ ರಾಜರು ಇವರನ್ನು ಹೆಚ್ಚು ಗೌರವಿಸುತ್ತಿದ್ದರು. ಇವರು ತಪ್ಪಿಸ್ಥರನ್ನು ಸುಲಭಾವಾಗಿ ಪತ್ತೆಮಾಡಿ ತಪ್ಪು ಮಾಡಿದವರನ್ನು ಶಿಕ್ಷಗೆ ಒಳಪಡಿಸುತ್ತಿದ್ದರು. ಆದ್ದರಿಂದ ಆ ಪಂಚಾಯಿತಿಯನ್ನು ಜನಸಾಮಾನ್ಯರು " ಹಾವೇರಿ ಪಂಚಾಯಿತಿಯೆಂದು" ಭಯಪಡುತ್ತಿದ್ದರು. ಹಾವೇರಿಯು ಕದಂಬ, ಚಾಳುಕ್ಯ, ಕಲಚುಯ್ಯ೯, ಹೊಯ್ಸಳ, ಯಾದವ, ಆದಿಲ್ ಷಾಹಿ, ಸವಣೂರ ನವಾಬ ಹಾಗೂ ಮರಾಠರ ಆಡಳಿತಕ್ಕೆ ಒಳಪಟ್ಟಿತ್ತು. ಇಲ್ಲಿಯ ಪುರಾತನ ದೇವಸ್ಥಾನವಾದ ಪುರಸಿದ್ಧೇಶ್ವರ ದೇವಸ್ಥಾನವನ್ನು  ' ಸ್ವಯಂಭು ಸಿದ್ಧನಾಥ, ಸಿದ್ಧನಾಥ, ವಿಷಪ್ರಹಾರಿ, ಪಾವರಿ ಗ್ರಾಮಾಧೀಶ ಹಾಗೂ ಪುರಧೀಶ' ಎಂದು ಉಲ್ಲೇಖಿಸಲಾಗಿದೆ. 

ಈ ದೇವಸ್ಥಾನವು ಕಲ್ಯಾಣ ಚಾಲುಕ್ಯರ ಶೈಲಿಯಲ್ಲಿದ್ದು ನಿಮಾ೯ಣಕತ೯ರ ಹೆಸರು ಎಲ್ಲಿಯೂ ಉಲ್ಲೇಖವಾಗಿಲ್ಲ. ಕ್ರಿ.ಶ 1109 ರಲ್ಲಿ ನಿಂಬರಸ ಏಲೆಯ ತೆರಿಗೆಯನ್ನು ನಾಲ್ಕನೂರು ಜನರ ಉಪಸ್ಥಿತಿಯಲ್ಲಿ ಸಿದ್ದೇಶ್ವರ ದೇವರಿಗೆ ನೀಡಿದನು. 1134 ರಲ್ಲಿ ಕೆರೆಯನ್ನು ದುರಸ್ತಿಗೊಳಿಸಲಾಯಿತು. ಇಲ್ಲಿ ದೊರೆತ 28 ಶಾಸನಗಳಲ್ಲಿ ಸುಮಾರು 17 ಶಾಸನಗಳಲ್ಲಿ ಸಿದ್ದನಾಥದೇವರಿಗೆ ನೀಡಿದ ಧಾನದ ವಿಷಯವನ್ನು ಪ್ರಸ್ತಾಪಿಸುತ್ತವೆ. ಇಲ್ಲಿಯ ಕೆಲವು ಶಾಸನಗಳು ಹೊಸ ವಿಷಯಗಳನ್ನು ತಿಳಿಸುತ್ತವೆ. ಸಿದ್ಧೇಶ್ವರ ದೇವಸ್ಥಾನದಲ್ಲಿ ದೊರೆತ ಕಾಲಘಟ್ಟವನ್ನು ತಿಳಿಸದ ಶಾಸನವು ''ನಂತರದ ಚಾಳುಕ್ಯರ" ಹುಟ್ಟಿನ ಬಗ್ಗೆ ತಿಳಿಸುವ ವಿರಳ ಶಾಸನವಾಗಿದೆ. ಭೂಲೋಕಮಲ್ಲನ ಕಾಲಕ್ಕೆ ಸೇರಿದ ಶಾಸನದಲ್ಲಿ 'ಪಾವರಿ' ಗ್ರಾಮದ ಪೂವ೯-ದಕ್ಷಿಣ ದಿಕ್ಕಿನಲ್ಲಿರುವ ನಾಲ್ಕನೂರು ಮರಗಳನ್ನು ದೇವಸ್ಥಾನಕ್ಕೆ ದಾನವಾಗಿ ನೀಡಿದ್ದನ್ನು ಸೂಚಿಸುತ್ತದೆ. ಆದರೆ ಈಗ ಆ ಭಾಗದಲ್ಲಿ ಆಸ್ಪತ್ರೆ ಹಾಗೂ ಮನೆಗಳು ನಿಮಾ೯ಣವಾಗಿರುವುದನ್ನು ಕಾಣಬಹುದು. ಕ್ರಿ.ಶ 1157 ರಲ್ಲಿ  'ಹೆಗ್ಗಡೆ ರುದ್ರದೇವ' ಸಂಕ್ರಾಂತಿಯಂದು ಹಿರಿಯಕೆರೆಗೆ (ಹೆಗ್ಗೇರಿ) ಸ್ನಾನಕೆಂದು ಬಂದು ಸಿದ್ದೇಶ್ವರ ದೇವರಿಗೂ ಹಾಗೂ ಇಂದ್ರೇಶ್ವರ ದೇವರಿಗೂ ಧಾನ ನೀಡಿದ್ದನ್ನು ಸೂಚಿಸುತ್ತದೆ. ಈ ಶಾಸನದಲ್ಲಿಯ ಬಹುಮುಖ್ಯ ವಿಷಯವೆಂದರೆ ಇಂದ್ರೇಶ್ವರ ದೇವಸ್ಥಾನ. ಈ ದೇವಸ್ಥಾನ ಹಾವೇರಿಯ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿದ್ದಿರಬಹುದು, ಕಾಲಕ್ರಮೇಣ ಅದು ನಶಿಸಿ ಹೋಗಿರಬಹುದಾಗಿದೆ. ಹೀಗಾಗಿ  ಅದರ ಪಳಯುಳಿಕೆಗಳು ಸಹ ಸಂಶೋಧಕರಿಗೆ ದೊರೆಯದಾಗಿದೆ. ಈಗಿನ ಹೆಗ್ಗೇರಿ ಸುಮಾರು ಸಾವಿರ ವಷ೯ಗಳಷ್ಟು ಪುರಾತನವಾಗಿದ್ದು. ದೇಶದಲ್ಲಿಯ ಪುಣ್ಯ ನದಿಗಳಿಗೆ ಈ ಕೆರೆಯನ್ನು ಹೊಲಿಸಿದ್ದು, ಸಂಕ್ರಾಂತಿಯಂದು ಈ ನದಿಯಲ್ಲಿ ಸ್ನಾನಗೈಯುವದರಿಂದ ಪುಣ್ಯ ದೊರೆಯುವುದೆಂಬುದನ್ನು ಶಾಸನದಿಂದ ತಿಳಿಯಬಹುದಾಗಿದೆ. 

ಅದು ಇಂದಿಗೂ ಸಹ ಪ್ರಸ್ತುತ. 1227 ಹಾಗೂ 1228 ರ ಶಾಸನದಲ್ಲಿ 'ರಾಜಗುರು ಜ್ಞಾನರಾಶಿದೇವರ' ಹೆಸರು ಉಲ್ಲೇಖವಾಗಿದೆ. ಅವರು 'ಕಾಳಮುಖ ಪಂಥದ' ಅನುಯಾಯಿಗಳಾಗಿದ್ದು, ಅವರ ಉಪಸ್ಥಿತಿಯಲ್ಲಿ ಅನೇಕ ಧಾನ-ದತ್ತಿಗಳನ್ನು ಸಿದ್ಧನಾಥನಿಗೆ ನೀಡಲಾಗಿದ್ದನ್ನು ಶಾಸನಗಳು ಸೂಚಿಸುತ್ತವೆ.  ಸಿದ್ದೇಶ್ವರ ದೇವಸ್ಥಾನದ ಗಭ೯ಗೃಹದಲ್ಲಿ ಜಡೆ, ಗಡ್ಡಗಳನ್ನುಳ್ಳ ಹಾಗೂ ಎಡಗೈಯಲ್ಲಿ ಲಿಂಗವನ್ನು ಹಿಡಿದ ಅನುಷ್ಟಾನಗೈಯುತ್ತಿರುವ ವಿಗ್ರಹವನ್ನೆ ಅನೇಕ ಸಂಶೋಧಕರು ಜ್ಞಾನರಾಶಿ ಮುನಿಗಳದ್ದು ಎಂದು ಅಭಿಪ್ರಾಯಿಸಿದ್ದಾರೆ. ಕಲ್ಲುಮಂಟಪದಲ್ಲಿ ದೊರೆತಿರುವ 1254 ರ ಶಾಸನದಲ್ಲಿ ವಿಜಯಾಪುರದ ಕರಿಯ ನಾಗಿಸೆಟ್ಟಿಯ ಮಗ ಮಲ್ಲಸೆಟ್ಟಿಯು
" ಗೋಪಾಲದೇವರಿಗೆ " ಪುಷ್ಪವನ್ನು ದೇವರಿಗೆ ಸಲ್ಲಿಸಲು ಹೂದೋಟ ನಿಮಾ೯ಣಕ್ಕೆ ದಾನವನ್ನು ನೀಡಿದ್ದನ್ನು ತಿಳಿಸುತ್ತದೆ. ಆದರೆ ಹಾವೇರಿಯಲ್ಲಿ ಗೋಪಲದೇವರ ದೇವಸ್ಥಾನವಿಲ್ಲ. ಬಹುಶಃ ಈಗಿನ ಕಲ್ಮೇಶ್ವರ ದೇವಸ್ಥಾನವೇ ಗೋಪಲದೇವರ ದೇವಸ್ಥಾನವಾಗಿರಬಹುದೇ?  ಎಂದು ಉಹಿಸಬಹುದಾಗಿದೆ. 

1228 ರ ಶಾಸನದಲ್ಲಿ ಹಾವೇರಿಯ ನಖರರು (ವ್ಯಾಪಾರಸ್ಥರು) ಸ್ವಯಂಭುಸಿದ್ದನಾಥನಿಗೂ ಹಾಗೂ ವಿನಾಯಕ ದೇವರ ಉಪಹಾರಕ್ಕೆ ದಾನವನ್ನು ನೀಡಿದರು ಎಂದು ಉಲ್ಲೇಖಿಸುತ್ತದೆ. ವಿನಾಯಕ ದೇವರ ವಿಗ್ರಹಗಳನ್ನು ನಾವು ತೇರು ಬೀದಿ ಹನುಮಂತ ಹಾಗೂ ಸಿದ್ಧೇಶ್ವರ ದೇವಸ್ಥಾನದಲ್ಲಿ ನೋಡಬಹುದಾಗಿದ್ದು, ಅಂದು ಬಹುಶಃ ಪುರಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿಯೇ ವಿನಾಯಕ ದೇವರ ದೇವಸ್ಥಾನವಿತ್ತೆಂದು ಊಹಿಸಬಹುದು. ಸಿದ್ಧೇಶ್ವರ ದೇವಸ್ಥಾನದ ಹೊರಗೊಡೆಯ ಆವರಣದಲ್ಲಿ ವಾದ್ಯಕಾರರ ಹಾಗೂ ನೃತ್ಯಕಾರರ  ಚಿತ್ರಗಳನ್ನು ಗಮನಿಸಿದಾಗ ಹಾಗೂ 1109 ರಲ್ಲಿ ನಿಂಬರಸ ಗೀತವಾದ್ಯನೃತ್ಯಕ್ಕೆ ದಾನ ಕೊಟ್ಟಿದ್ದನ್ನು ಗಮನಿಸಿದಾಗ ಈ ದೇವಸ್ಥಾನದಲ್ಲಿ ಸಂಗೀತ ಕಛೇರಿಗಳು ನಡೆಯುತ್ತಿದ್ದವು ಎಂದು ತಿಳಿಯಬಹುದಾಗಿದೆ. ಹಾವೇರಿಯಲ್ಲಿ ನಡೆಯುತ್ತಿದ್ದ ಪಂಚಾಯತಿಗೆಯ ಸ್ಥಳವು ಇದಾಗಿತ್ತು. ಹೀಗಾಗಿ ಇದು ಅಂದಿನ ಕೊಟ೯ ಎನ್ನಬಹುದು. ವೀರಭದ್ರೇಶ್ವರ ದೇವಸ್ಥಾನದಲ್ಲಿರುವ 13 ನೇ ಶತಮಾನದ  ಶಾಸನದಲ್ಲಿ ಮಾದರಸನು ಜೈನಮಂದಿರದ ಪಾವಟಿಗೆಗಳನ್ನು ನಿಮಿ೯ಸಿದ್ದನ್ನು ತಿಳಿಸುತ್ತದೆ. 

 
20/ಜೂನ್/ 1759 ರ ಬುಧವಾರದಂದು ಶ್ರೀ ಹುಚ್ಚಬಸವಲಿಂಗಪ್ಪ ಸ್ವಾಮಿಗಳ ಚರಮೂತಿ೯ಗಳಾದ  ಹುಚ್ಚಚನ್ನವೀರಪ್ಪನವರಿಂದ ವಿರಕ್ತಮಠವು ಸಿದ್ಧೇಶ್ವರ ದೇವಸ್ಥಾನದ ಸಮೀಪವಾಯಿತೆಂಬುದನ್ನು ಶಾಸನ ತಿಳಿಸುತ್ತದೆ. 19 ನೇ ಶತಮಾನದಲ್ಲಿ ಅಗ್ರಹಾರದಲ್ಲಿಯ ಶ್ರೀನಿವಾಸ ದೇವರ ಪ್ರತಿಷ್ಟಾಪನೆಯ ವಿಷಯವನ್ನು ತೃಟಿತ ಶಾಸನ ತಿಳಿಸುತ್ತದೆ. ಇತ್ತೀಚಿಗೆ ಸರ್ ಎಂ ವಿಶ್ವೇಶ್ವರಯ್ಯ ಶಾಲೆಯ ಸಮೀಪ ದೊರೆತ ಶಾಸನದಲ್ಲಿ 1759 ರಂದು ಹಾವೇರಿಯ ಮಟ್ಟಿಯಲ್ಲಿಯ ಗೋಣಿ ಬಸವಣ್ಣನಿಗೆ ಕೊಟ್ಟ ದಾನವನ್ನು  ತಿಳಿಸುತ್ತದೆ. ಪುರಸಿದ್ಧೇಶ್ವರ ದೇವಸ್ಥಾನ ಪಕ್ಕದಲ್ಲಿರುವ ನರಸಿಂಹ ದೇವಸ್ಥಾನದಲ್ಲಿರುವ ಶಿವಲಿಂಗ ಪೂಜೆಯಲ್ಲಿ ಮಗ್ನಾಗಿರುವ ವಿರಳವಾದ ವಿಷ್ಣುವಿನ ವಿಗ್ರಹವನ್ನು ನೋಡಬಹುದು. ಯಾವ ಶಾಸನಗಳಲ್ಲಿಯು ಸಹ ತೇರಬೀದಿ ಹನುಮಂತ ಹಾಗೂ ನರಸಿಂಹ ದೇವರುಗಳ ವಿಷಯ ಪ್ರಸ್ತಾಪವಾಗಿಲ್ಲ. ಈ ಎಲ್ಲಾ ಶಾಸನಗಳ ವಿಷಯವನ್ನು ಗಮನಿಸಿದಾಗ ವೈಷ್ಣವ, ಜೈನ, ಬೌದ್ದ ಹಾಗೂ ಶೈವ ಧಮ೯ದವರು ಇಲ್ಲಿ ವಾಸವಾಗಿದ್ದರು ಎನ್ನಬಹುದು. ಹೀಗೆ ಒಟ್ಟಾರೆಯಾಗಿ ಹಾವೇರಿಯು ಪ್ರಾಚೀನ ಕಾಲದಲ್ಲಿ ಸಂಸ್ಕ್ರತಿಕ ನೆಲೆಯಂಬ ಹೆಗ್ಗಳಿಕೆಯಿಂದ ಮೆರೆದಿತ್ತು ಎನ್ನಬಹುದು.

                  # ಪ್ರಮೋದ ನಲವಾಗಲ #

Comments

Popular posts from this blog

ಹೊಯ್ಸಳರ ಲಾಂಛನದಲ್ಲಿಯ ಪ್ರಾಣಿ ಹುಲಿಯಲ್ಲ ಸಿಂಹ...!

ಹಾವೇರಿ ಜಿಲ್ಲೆಯಲ್ಲಿಯ ಶಾಸನಗಳಲ್ಲಿ ಬಸವಣ್ಣನವರು

ಹಾವೇರಿ ಜಿಲ್ಲೆಯ ಎಂಟು ತಾಲೂಕುಗಳ ಕಿರು ಪರಿಚಯ....!!!!