ಹಾವೇರಿ ಜಿಲ್ಲೆಯಲ್ಲಿ ಸಂತ ಶ್ರೀ ಕನಕದಾಸರ ಕುರುಹುಗಳು............!


ಕನಕದಾಸರು ಬರೆದ ಮೋಹನತರಂಗೀಣಿಯ ತಾಳೆಗರಿಯ ಪ್ರತಿ ಕದರಮಂಡಲಗಿಯಲ್ಲಿ
ಬಂಕಾಪುರದ ನರಸಿಂಹ ದೇವಸ್ಥಾನ
ಹಾವೇರಿ ಸಮೀಪದ ಭರಡಿ ಗ್ರಾಮದಲ್ಲಿಯ ಕನಕದಾಸರ ಗುಹೆ
ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳಬೇಕಾದರೆ ಉಚ್ಚ ಕುಲದಲ್ಲಿಯೇ ಜನಿಸಬೇಕು, ಜ್ಞಾನವಂತನೆ ಆಗಿರಬೇಕು ಎಂಬುದು ಶುದ್ದ ಸುಳ್ಳು. ನೀಚಕುಲದಲ್ಲಿ ಜನಿಸಿದರೇನು? ಮೂಢಮತಿಯಾದರೇನು? ಪರಿಶುದ್ದವಾದ ಭಕ್ತಿಯೊಂದಿದ್ದರೆ ಸಾಕು ಭಗವಂತನೇ ಭಕ್ತನನ್ನು ಬೆನ್ನತ್ತಿ ಬರುತ್ತಾನೆಂದು ಜಗತ್ತಿಗೆ  ತೋರಿಸಿದ ಎಕೈಕ ದಾಸಶ್ರೇಷ್ಟ ಕನಕದಾಸರು. ಇವರು ರಚಿಸಿದ ಮೋಹನ ತರಂಗಿಣಿ, ನರಸಿಂಹ ಹಸ್ತ, ಹರಿಭಕ್ತಸಾರ, ರಾಘವಧಾನ್ಯ( ರಾಮಧಾನ್ಯ ಚರಿತೆ), ನಳಚರಿತೆ ಹಾಗೂ ಮುಂಡಿಗೆಗಳನ್ನು ನಾವು ಗಮನಿಸಿದಾಗ ಅವರಲ್ಲಿಯ ಜ್ಞಾನದ ಆಳದ ಅರಿವು ನಮಗಾಗುತ್ತದೆ. ಕುಲದ ಮೂಲ ನೆಲೆಯನ್ನು ಪ್ರಶ್ನಿಸಿಸುತ್ತಾ ಸಮಾಜದ ಅಂದಿನ ಅಂಕು- ಡೊಂಕುಗಳನ್ನು ತಮ್ಮ ಸಾಹಿತ್ಯದಲ್ಲಿ ಬಲವಾಗಿ ಖಂಡಿಸಿದ್ದಾರೆ. ಅವರಲ್ಲಿಯ ಕ್ಷಾತ್ರ ಹಾಗೂ ಬ್ರಹ್ಮ ತೇಜಸ್ಸು ಅವರನ್ನು ದಂಡನಾಯಕನಿಂದ ದಾಸತ್ವದ ಕಡೆಗೆ ವಾಲಿಸಿತೆನ್ನಬಹುದು. 

ಹಾವೇರಿ ಜಿಲ್ಲೆಯಲ್ಲಿಯ ಕಾಗಿನೆಲೆ, ಕದಿರಮಂಡಲಗಿ, ಬಂಕಾಪುರ, ಭರಡಿ (ಹಾವೇರಿ ತಾಲೂಕ), ಚಿಕ್ಕಲಿಂಗದಹಳ್ಳಿ, ಹಳ್ಳೂರ (ರಟ್ಟಿಹಳ್ಳಿ ತಾಲೂಕ), ಕನಕಾಪುರ (ಬೇಚರಾಕ. ಇದು ರಾಣೇಬೆನ್ನೂರ ಸಮೀಪದ ಗಂಗಾಪುರದಲ್ಲಿದೆ), ದೇವಗಿರಿ ( ಹಾವೇರಿ ತಾಲೂಕ), ದಾಸನಕೊಪ್ಪ, ಇಂಗಳಗೊಂದಿ ಹಾಗೂ ಕುಮ್ಮೂರ ಗ್ರಾಮಗಳೊಂದಿಗೆ ಇವರು  ಸಂಭಂದವನ್ನು ಹೊಂದಿದ್ದರು ಎನ್ನಲೂ ನಮಗೆ ಅನೇಕ ಕುರುಹುಗಳು ಈಗಲೂ ನೋಡಲು ದೊರೆಯುತ್ತವೆ. 

ಕನಕದಾಸರು ತಮ್ಮ ಕೀತ೯ನೆಯಲ್ಲಿ 'ಕಾಗಿನೆಲೆಯ ಕನಕದಾಸ' ಎಂದು ಉಲ್ಲೇಖಿಸಿರುವುದು ಗಮನಾಹ೯. ಇದನ್ನು ಗಮನಿಸಿದಾಗ ಕಾಗಿನೆಲೆಯಲ್ಲಿ ಅವರಿಗೆ ಸಂಭಂದಿಸಿದ ಕುರುಹುಗಳು ಹೆಚ್ಚಾಗಿ ದೊರೆಯಬಹುದು ಎನ್ನಬಹುದು. ವಿಶೇಷವಾಗಿ ಕ್ರಿ.ಶ 1926 ರ ದಾಖಲೆಯಲ್ಲಿ ( ದಿ.ಬಿ.ವಡವಿಯವರ ಗ್ರಂಥದಲ್ಲಿ) ಆದಿಕೇಶವನ ವಿಗ್ರಹದ ಕೆಳಗಿರುವ ಸಣ್ಣ ಮೂತಿ೯ಯನ್ನು ಕನಕದಾಸರದ್ದು ಎನ್ನುತ್ತಾರೆ ಎಂದು ಉಲ್ಲೇಖಿಸಲಾಗಿದೆ. ಆದರೆ ಈಗ ಈ ಮಾತು ಮರೀಚಿಕೆಯಾಗಿದೆ. ಡಾ.ರಮೇಶ ತೆವರಿ ಹಾಗೂ ಡಾ.ದೇವರಗೊಂಡರಡ್ಡಿಯವರನ್ನು ವಿಚಾರಿಸಿದಾಗ. ಅವರು ಈ ಮೂತಿ೯ಯು 17 ನೇ ಶತಮಾನಕ್ಕೆ ಸೇರಿದ್ದಾಗಿದ್ದು ಭಕ್ತನೊಬ್ಬನ ಮೂತಿ೯ ಇದಾಗಿದೆ ಎನ್ನುತ್ತಾರೆ. ಈ ಮೂತಿ೯ಯನ್ನು ಆದಿಕೇಶವನ ಕೆಳಭಾಗದಲ್ಲಿ ಅಂಟಿಸಲಾಗಿದೆ. ಈ ಭಕ್ತ ಭಕ್ತಿಪೂವ೯ಕವಾಗಿ ತನ್ನ ಎರಡು ಕಾಲುಗಳನ್ನು ಜೋಡಿಸಿದ್ದು, ಕಿವಿಯಲ್ಲಿ ಒಲೆಗಳನ್ನು, ತೆಲೆಯ ಮೇಲೆ ಕಿರೀಟವನ್ನು ಹಾಗೂ ಕೊರಳಲ್ಲಿ ತುಳಸಿ ಮಾಲೆಯನ್ನು ಗಮನಿಸಿದಾಗ ಆ ಮೂತಿ೯ ಕನಕದಾಸರದ್ದೇ ಆಗಿರಬಹುದು ಎನ್ನುವುದು ನನ್ನ ಅನಿಸಿಕೆ. ಕಾರಣ ಈ ಹಿಂದೆ ಇದನ್ನು ಕನಕದಾಸರ ಮೂತಿ೯ ಎನ್ನುತ್ತಿದ್ದರು ಎಂಬುದಕ್ಕೆ ಪುಷ್ಟಿ ನೀಡುವಂತೆ ಈ ದೇವಸ್ಥಾನದ ಅಚ೯ಕರಾದ 'ಸಂಗಮೇಶ ಪೂಜಾರ' ನಮ್ಮ ತಂದೆಯವರು ಇದನ್ನು ಕನಕಪ್ಪನದ್ದು ಎಂದು ಕರೆಯುತ್ತಿದ್ದರು. ಆದರೆ ಇತ್ತೀಚಿಗೆ  ಮರೆತಂತಾಗಿದೆ ಎಂದರು. 

ತಮ್ಮ ಕೀತ೯ನೆಗಳಲ್ಲಿ ಆದಿಕೇಶವನನ್ನು ಕೊಂಡಾಡಿದ ಕನಕದಾಸರ ಆರಾಧ್ಯ ದೈವ ಈ ಆದಿಕೇಶವ ಹೀಗಾಗಿ ಆತನನ್ನು ಬಿಟ್ಟರೆ ಆತನ ಕೆಳಭಾಗದಲ್ಲಿ ನಿಂತುಕೊಳ್ಳುವ ಶಕ್ತಿ ಮತ್ತೊಬ್ಬರಿಗಿಲ್ಲ ಎನ್ನುವುದು ನನ್ನ ಮನದಾಳದ ಮಾತಾಗಿದೆ. ಇದನ್ನು ಹೆಚ್ಚಿನ ಅಧ್ಯಯನಕ್ಕೆ ಒಳಪಡಿಸಿದಾಗ ಇನ್ನೂ ಹೆಚ್ಚಿನ ಮಾಹಿತಿ ದೊರೆಯಬಹುದು. ಕಾಗಿನೆಲೆಯ ಶ್ರೀ ಲಕ್ಷ್ಮೀ ನರಸಿಂಹ ದೇವಾಲಯದಲ್ಲಿ ಕನಕದಾಸರು ಬಳಿಸಿದ ಶಂಕ ಹಾಗೂ ಕಟ್ಟಗೆಯ ತಟ್ಟೆಯನ್ನು ನೋಡಬಹುದು. 

15 ನೇ ಶತಮಾನದಲ್ಲಿ ಕನಕರೊಡನೆ ಸುರಪುರದ ಕೊಡೆಕಲ್ ಬಸವಣ್ಣನವರ ಕಿರಿಯ ಮಗನಾದ ಸಂಗಮನಾಥ ಮುಂಡಿಗೆಯ ವಿಚಾರವಾಗಿ ಇಲ್ಲಿಗೆ ಬಂದನು. ಅವನ ಗದ್ದುಗೆಯನ್ನು ಇಲ್ಲಿಯೇ ನೋಡಬಹುದಾಗಿದೆ. ಕನಕದಾಸರು ಸಂಚಾರದಲ್ಲಿದ್ದಾಗ ಅವರು ಜೊತೆಗೆ ಪೆಟ್ಟಿಗೆಯ ಆದಿಕೇಶವನನ್ನು ಒಯ್ಯುತ್ತಿದ್ದರಂತೆ ಅದನ್ನು ಪೂಜಿಸದೇ ನೀರು ಸಹ ಕುಡಿಯುತ್ತಿರಲಿಲ್ಲವಂತೆ. ಅದನ್ನು ಕದಿರಮಂಡಲಗಿಯಲ್ಲಿ ನಾನು ನೋಡಿದ್ದೆ ಎಂದು "ಜಗನ್ನಾಥ ಭಾವಾ" ತಿಳಿಸುತ್ತಾರೆ. ಕಾಗಿನೆಲೆಯ ಪಕ್ಕದ ಕುಮ್ಮೂರಿನಲ್ಲಿ ಅವರು ಆರಾಧಿಸುತ್ತಿದ್ದ ಪಂಚಲೋಹದ ತಿಮ್ಮಕೇಶವನ ವಿಗ್ರಹವನ್ನು, ಗೋಪಾಳ ಬುಟ್ಟಿ, ಶಂಖ ಹಾಗೂ ಜಾಗಟೆಗಳನ್ನು ಅಲ್ಲಿಯ "ತಿರಕಪ್ಪ ದಾಸರ" ( ಬಾಸೂರ) ಅವರ ಮನೆಯಲ್ಲಿ ಈಗಲೂ ಸಹ ನೋಡಬಹುದಾಗಿದೆ. ಇದೇ ಕುಮ್ಮೂರಿನ ರಾಮಲಿಂಗ ದೇವಸ್ಥಾನದಲ್ಲಿ ಕನಕದಾಸರು ಉಪಯೋಗಿಸಿದ ಡೊಳ್ಳೊಂದು ಇತ್ತು ಎಂಬ ಬಗ್ಗೆ ಮಾಹಿತಿ ಇದೆ. ಆದರೆ ಅದು ಬಹುಶಃ ಹಾಳಗಿ ಹೋಗಿರಬಹುದು ಮತ್ತು ಅದರಲ್ಲಿಯ ಚಮ೯ ಹಾಗೂ ಕಟ್ಟಿಗೆಯ ಚೌಕಟ್ಟು ಇತರ ಬಳೆಕೆಗೆ ಬಳಿಸಿರಬಹುದಾಗಿದೆ. ಹೀಗಾಗಿ ನಮಗೆ ಅದರ ದಶ೯ನವಾಗಿಲ್ಲವೆನ್ನಬಹುದು. 

ಪಕ್ಕದ "ದಾಸನಕೊಪ್ಪ"ದಲ್ಲಿ ದಾನವಾಗಿ ಬಂದ ಜಮೀನನ್ನು ಕನಕದಾಸರು ಸಾಮಾನ್ಯ ಜನರಿಗೆ ದಾನವಾಗಿ ನೀಡಿದ್ದಾರೆ ಎಂಬುದು ಇನ್ನೂ ಜನರ ಬಾಯಲ್ಲಿ ಜೀವಂತವಾಗಿದೆ.   ಇಂಗಳಗೊಂದಿಯಲ್ಲಿ ಚೆನ್ನಕೇಶವ ವಿಗ್ರಹ ಇವರ ಮತ್ತೊಂದು ಕುರುಹು ಆಗಿದೆ. "ಕಾಯೋ ಎನ್ನ ಬಂಕಾಪುರದ ನಾರಸಿಂಹ" ಎಂದು ತಮ್ಮ ಕೀತ೯ನೆಯಲ್ಲಿ ಕನಕದಾಸರು ಬಳಿಸಿದ್ದಾರೆ. ಆ ದೇವಸ್ಥಾನವನು ಈಗಲೂ ಸಹ ಬಂಕಾಪುರದಲ್ಲಿ ನೋಡಬಹುದಾಗಿದೆ. ಕ್ರಿ.ಶ 1893 ರ ಬ್ರಿಟಿಷ್ ದಾಖಲೆಯಲ್ಲಿ ಕನಕದಾಸರು ಆದಿಕೇಶವನ ವಿಗ್ರಹವನ್ನು ಬಾಡದಿಂದ ತಂದಿದ್ದಾರೆ ಎಂದು ಸ್ಥಳೀಯರ ಅಭಿಪ್ರಾಯವಾಗಿದೆ ಎಂದು ಉಲ್ಲೇಖಿಸಲಾಗಿದೆ. ತದನಂತರ ಕ್ರಿ.ಶ 1965 ರಲ್ಲಿ ಬಾಡದ (12 ನೇ ಶತಮಾನದಲ್ಲಿ ಈ ಗ್ರಾಮವನ್ನು "ಬಾಡಯರಡು ಮೂವತ್ತಾರು" ಎಂದು ಕರೆಯಲಾಗಿದೆ) ಸಮೀಪ ಅನೇಕ ಸಂಶೋಧನೆಗಳನ್ನು ನಡೆಸಲಾಯಿತು ಹಾಗೂ ಕನಕದಾಸರ ಅರಮನೆಯನ್ನು ಗುರುತಿಸಲಾಯಿತು. ತದನಂತರ ಕಾಗಿನೆಲೆ ಪ್ರಾಧಿಕಾರವು ಅದಕ್ಕೆ ಹೊಸ ಮೆರಗನ್ನು ನೀಡಿತು. ಕನಕದಾಸರು ತಮ್ಮ ಕೀತ೯ನೆಗಳಲ್ಲಿ ತಾವು ನೀಳವಾದ ಕೂದಲಗಳನ್ನು ಬಿಟ್ಟಿದ್ದನ್ನು ಹೇಳುತ್ತಾ, ತಿರುನಾಮದ ಬಗ್ಗೆಯೂ ಹೇಳುತ್ತಾರೆ. 

ದಾಸನಾಗಿ ಹಾಡುವೆ, ಕುಣಿಯುವೇ, ಕುಣಿದು ದಣಿದಾಗ ಪ್ರಸಾದ ಸಿಕ್ಕರೆ ಸೇವಿಸುವೇ ಇಲ್ಲವಾದರೆ ನಿನ್ನ ನಾಮವೊಂದಿದ್ದರೆ ಸಾಕು ಎಂದು ಹೇಳುತ್ತಾರೆಂದರೆ ಅವರು ಆದಿಕೇಶವನ ಮೇಲಿಟ್ಟ ಭಕ್ತಿಗೆ ನಾವು ತೆಲೆತೂಗಲೇಬೇಕು. ಕದಿರಮಂಡಲಗಿಯಲ್ಲಿಯ ಶ್ರೀ ಕಾಂತೇಶ ದೇವರ ಪಕ್ಕದಲ್ಲಿಯ ಲಕ್ಷ್ಮೀನರಸಿಂಹ ದೇವಾಲಯದಲ್ಲಿ ಮೋಹನತರಂಗೀಣಿ ರಚಿಸಿದರು. ಆ ಗ್ರಂಥದ ಪ್ರಾರಂಭದಲ್ಲಿ ರಾಮಾನುಜಾಚಾರ್ಯರರನ್ನು ಹಾಗೂ ಅವರ ಪರಂಪರೆಯ ತಾತಾಚ್ಯಾರ್ಯರರನ್ನು ನೆನೆಯುತ್ತಾರೆ. ತಾತಾಚಾರ್ಯರ ರಿಗೆ ಸಂಬಂಧಿಸಿದ ಚಪ್ಪರದ ಮಠವನ್ನು ( ಶ್ರೀ ಮುದ್ರಿ ಆಂಜನೇಯ ದೇವಸ್ಥಾನ) ಇಲ್ಲಿ ನೋಡಬಹುದು.

 "ಕದಿರವುಂಡಲಿಗೇಶ" ಹಾಗೂ "ಕದಿರುಂಡಲಗಿ ಹನುಮೇಶ" ಎಂದು ಕಾಂತೇಶ ದೇವರನ್ನು ಕೊಂಡಾಡಿದ್ದಾರೆ. ಈ ಗ್ರಂಥದಲ್ಲಿಯ ಅನಿರುದ್ಧನ ಜನನದ ಸಮಯವೇ ಕನಕದಾಸರದ್ದಾಗಿರಬಹುದು. ಇಲ್ಲಿ ಕನಕದಾಸರು ಸ್ವತಃ ಲಿಪಿಕಾರರಾಗಿ ಮೋಹನ ತರಂಗಿಣಿ ಗ್ರಂಥವನ್ನು ರಚಿಸಿ ಅದರ ಒಂದು ಪ್ರತಿಯನ್ನು ಶ್ರೀ ಕಾಂತೇಶನ ಪಾದಕ್ಕೆ ಅಪಿ೯ಸಿರಬಹುದು. ಹೀಗಾಗಿಯೇ ಕನಕದಾಸರ ಆ ಕೃತಿಯನ್ನು ದೇವಸ್ಥಾನದ ಕಮೀಟಿಯವರು ವಷ೯ಕ್ಕೊಮ್ಮೆ ಪಠಿಸುವ ಪರಿಪಾಠ ಬಹಳ ವಷ೯ಗಳ ಹಿಂದಿನಿಂದಲೂ ರೂಡಿಯಲ್ಲಿಟ್ಟುಕೊಂಡು ಬಂದಿದ್ದಾರೆ. ಆದರೆ ಆ ಪ್ರತಿಯು ಹಾಳಾಗುತ್ತಿದ್ದನ್ನು ಕಂಡ ರಾಣೇಬೆನ್ನೂರ ತಾಲೂಕಿನ ಮೈದೂರ ಗ್ರಾಮದ "ಸಾಹುಕಾರ ದಾಸಪ್ಪನವರು" ಕ್ರಿ.ಶ 1832 ರಲ್ಲಿ ಎತ್ತಿ ಬರೆದರು. ಇದನ್ನು ಗಮನಿಸಿದಾಗ 18ನೇ ಶತಮಾನದಲ್ಲಿಯೇ ಇವರಿಗೆ ಸಂಭಂದಿಸಿದ ದಾಖಲೆಗಳನ್ನು ಸಂರಕ್ಷಿಸಲು ಪ್ರಾರಂಭಿಸಿದರು ಎನ್ನಬಹುದು. 

ಆ ಮೂಲ ಪ್ರತಿಯನ್ನು ಈಗಲೂ ಸಹ ದೇವಸ್ಥಾನದಲ್ಲಿ ನೋಡಬಹುದು. ಆದರೆ ಆ ಪ್ರತಿಯು ಸಂರಕ್ಷಣೆಯ ಕೊರತೆಯಿಂದಾಗಿ ಹಾಳಾಗುತ್ತಿರುವುದು ನೋವಿನ ಸಂಗತಿ. ಇಲ್ಲಿಯ ಒಂದು ವಿಗ್ರಹವನ್ನು "ಕನಕಪ್ಪನ ವಿಗ್ರಹವೆಂದು" ಸ್ಥಳೀಯರು ಕರೆಯುತ್ತಾರೆಂದು 1965 ರಲ್ಲಿ ಹುಚ್ಚುರಾವ ಬೆಂಗೇರಿ ಹಾಗೂ ಕೃಷ್ಣಶಮ೯ ಬೆಟಗೇರಿಯವರು  ತಮ್ಮ "ಕನಕದಾಸರ ಗೀತೆಗಳು" ಎಂಬ ಗ್ರಂಥದಲ್ಲಿ ನಮೂದಿಸಿದ್ದಾರೆ. ಈ ವಿಗ್ರವನ್ನು  ಕಾಂತೇಶ ದೇವರ ದೇವಸ್ಥಾನದ ಬಲಬದಿಯಲ್ಲಿ ನೋಡಬಹುದು. ಈ ವಿಗ್ರಹವು ಉಬ್ಬು ಶಿಲ್ಪವಾಗಿದ್ದು ರಾಜಪೊಷಾಕಿನಲ್ಲಿದೆ. ತಲೆಗೆ ಕಿರೀಟವನ್ನು ಧರಿಸಿದ್ದು ಹಣೆಯ ಮೇಲೆ ತಿರುನಾಮವಿದೆ. ಈ ಹಿಂದೆ ಸ್ಥಳೀಯರು ಇದೇ ವಿಗ್ರಹವನ್ನು ಕನಕದಾಸರದೆಂದು ಹೇಳುತ್ತಿದ್ದರೆಂದು ಸ್ಥಳೀಯರಾದ ಶ್ರೀ ಎಂ.ಕೆ ಕಲ್ಲಜ್ಜನವರ ತಿಳಿಸುತ್ತಾರೆ.    

ರಾಣೇಬೆನ್ನೂರ ತಾಲೂಕಿನ ಗಂಗಾಪುರ ಹಾಗೂ ಸಮೀಪದ ಕನಕಾಪುರದ ಹನುಮಂತ ದೇವರಲ್ಲಿಗೆ ಕನಕದಾಸರು ಆಗಾಗ ಬರುತ್ತಿದ್ದರು. ಇದಕ್ಕೆ ಕಾರಣ ಅಲ್ಲಿಗೆ ಬರುತ್ತಿದ್ದ ತಾತಾಚಾರ್ಯರ ಶಿಷ್ಯವಗ೯. ಆನೆಗುಂದಿಯಿಂದ ಶಿಷ್ಯವಗ೯ವು ಇಲ್ಲಿಗೆ ಬಂದಾಗ ಅವರನ್ನು ಭೆಟ್ಟಿಯಾಗಿ ಕಾಣಿಕೆಯನ್ನು ಕೊಡುವ ಪರಿಪಾಠವನ್ನಿಟ್ಟು ಕೊಂಡಿದ್ದರಂತೆ ಕನಕದಾಸರು (1965 ರ ದಾಖಲೆ). 

ಕಾಕೋಳ ಗ್ರಾಮದ ( ರಾಣೇಬೆನ್ನೂರ ತಾಲೂಕ) ಗುಡ್ಧದ ಮೇಲಿರುವ ತಿಮ್ಮಪ್ಪನಿಗೆ ಕನಕದಾಸರು ನಡೆದುಕೊಳ್ಳುತ್ತಿದ್ದರು ಹೀಗಾಗಿಯೇ ಕದಿರಮಂಡಲಗಿಯ ಶ್ರೀ ಕಾಂತೇಶ ಪಲ್ಲಕ್ಕಿಯು ಬೇಟೆ ತಿಮ್ಮಪ್ಪನ ಕಟ್ಟಿಗೆಯ ಮೂತಿ೯ಯೊಂದಿಗೆ ವಿಜಯದಶಮಿಯಂದು ಹೋಗುತ್ತದೆ. ಅಲ್ಲಿಗೆ ಸುತ್ತಮುತ್ತಲಿನ ಗ್ರಾಮದ ಆಂಜನೇಯ ದೇವರ ಪಲ್ಲಕ್ಕಿಗಳು ಬರುತ್ತವೆ. ಹಾವೇರಿ ತಾಲೂಕಿನ ಭರಡಿ ಗ್ರಾಮದಲ್ಲಿಯ ಗುಹೆಯೊಂದರಲ್ಲಿ ಕನಕದಾಸರು ಕೆಲವು ವಷ೯ಗಳವರೆಗೆ ವಾಸವಾಗಿದ್ದರು. ಅಲ್ಲಿ ಅವರು ಆರಾಧಿಸುತ್ತಿದ್ದ ಅಂಜನೇಯನ ವಿಗ್ರಹವನ್ನು ಈಗಲೂ ನೋಡಬಹುದು. ಅವರು ಕೈಗುರುತುಗಳು ಗುಹೆಯಲ್ಲಿ ನೋಡಬಹುದಾಗಿದೆ ಎನ್ನುತ್ತಾರೆ (1965 ರ ಹಸ್ತ ಪ್ರತಿ). ಆದರೆ ಈಗ ಆ ಗುರುತುಗಳು ನೋಡಲು ಸಿಗದಂತಾಗಿದೆ. ಅದರ ಪಕ್ಕದಲ್ಲಿಯ ಕೆರೆಯನ್ನು "ದಾಸರಕೆರೆಯೆಂದು" ಜನರು ಈಗಲೂ ಕರೆಯುತ್ತಾರೆಂದರೆ ಕನಕದಾಸರು ಜನರ ಮನದಾಳದಲ್ಲಿದ್ದಾರೆ ಎಂಬುದನ್ನು ನಾವು ಅರಿಯಬೇಕಾಗುತ್ತದೆ. ಅಲ್ಲಿಯ 'ಗೌಡ್ರ' ಮನೆಯಲ್ಲಿ ಕನಕದಾಸರು ಬಳಿಸಿದ ಶಂಖವನ್ನು ನೋಡಬಹುದು.

 ದೇವಗಿರಿಯ (ಹಾವೇರಿ ತಾಲೂಕಿನ ) ಗುಡ್ಧದಲ್ಲಿಯ ಗಿರಿಮಲ್ಲೇಶ್ವರ ದೇವಸ್ಥಾನಕ್ಕೆ (ಅದರ ಅಕ್ಕ ಪಕ್ಕದಲ್ಲಿ ಹಳೆಯ ದೇವಸ್ಥಾನಗಳ ಕುರುಹುಗಳನ್ನು ನೋಡಬಹುದು) ಹಾಗೂ ಊರೊಳಗಿನ ನರಸಿಂಹ ದೇವಸ್ಥಾನಕ್ಕೆ ಭೆಟ್ಟಿ ಕೊಟ್ಟಿರಬಹುದು ಕಾರಣ ತಮ್ಮ ಮುಂಡಿಗೆಯಲ್ಲಿ ದೇವಗಿರಿಯ ಹೆಸರನ್ನು ಪ್ರಸ್ತಾಪಿಸಿದ್ದಾರೆ. 'ಕಜ೯ಗಿ' ಗ್ರಾಮದ ಗುಡ್ಧವನ್ನು 'ತಿರುಮಲ ಗುಡ್ಧವೆಂದು' ಕರೆಯುತ್ತಿದ್ದು ಅಲ್ಲಿಯ ತಿಮ್ಮಪನ ದಶ೯ನವನ್ನು ದಾಸರು ಪಡೆದಿದ್ದಾರೆ ಎನ್ನುಬಹುದು. 

ವಿಪರ್ಯಾಸವೆಂದರೆ ಅಲ್ಲಿಯ ಗುಡ್ಡ ತನ್ನ ಮೂಲ ಹೆಸರನ್ನು ಕಳೆದುಕೊಂಡಿದೆ ಹಾಗೂ ಅಲ್ಲಿಯ ತಿಮ್ಮಪ್ಪನ ವಿಗ್ರಹ ಹಾಗೂ ದೇವಸ್ಥಾನ ಕಾಣದಂತಾಗಿದೆ. ರಟ್ಟಿಹಳ್ಳಿ ತಾಲೂಕಿನ 'ಹಳ್ಳೂರ' ಗ್ರಾಮದ ರಂಗನಾಥನ ದೇವರ ದಶ೯ನಕ್ಕೆ ಕನಕರು ಆಗಾಗ ಹೋಗುತ್ತಿದ್ದರು. ಅಲ್ಲಿಯ ಒಂದು ಕಟ್ಟೆಯನ್ನು ಈಗಲೂ ಸಹ " ಕನಕರಾಯನ ಕಟ್ಟೆ" ಎಂದೂ ಕರೆಯುತ್ತಾರೆ. ಹಳೆಯ ಈ ದೇವಸ್ಥಾನವನ್ನು "ಟಿಪ್ಪೂ" ಹಾಳುಗೆಡವಿದ್ದನಾದರೂ, ಅದನ್ನು ಹಾವನೂರು ದೇಸಾಯಿಯವರು ಪುನರ್ ನಿಮಾ೯ಣ ಮಾಡಿ "ಕೂಡಲಗಿ (ಶಿವಮೊಗ್ಗ ಜಿಲ್ಲೆ) ಮಠಕ್ಕೆ ನೀಡಿದರು. ಉದ್ಬವ ರಂಗನಾಥನ ಎಡಭಾಗದಲ್ಲಿ ಕನಕದಾಸರು ಸ್ಫಶಿ೯ಸಿದ 'ರಾಮಾನುಜಾಚಾರ್ಯರ' ವಿಗ್ರಹ ಈಗಲೂ ಸ್ತೂಪ್ತ ಸ್ಥಿತಿಯಲ್ಲಿದೆ. ತಿರುಮಲ ಬೆಟ್ಟವನ್ನು ಏರಿ ತಿಮ್ಮಪ್ಪನ ದಶ೯ನ ಪಡೆದಷ್ಟು ಲಾಭವನ್ನು ಇಲ್ಲಿಯ ಬೆಟ್ಟವನ್ನು ಏರಿದಾಗ ದೊರೆಯುತ್ತದೆ ಎನ್ನುವುದು ಅವರಿಗಾದ ಅನುಭವವೆನ್ನಬಹುದು. 

1965 ರಲ್ಲಿ ಕಾಗಿನೆಲೆಯಲ್ಲಿಯ ಸಂತ ಶ್ರೀ ಕನಕದಾಸರ ಗದ್ದುಗೆಯನ್ನು ದಿ. ಗುದ್ಲೆಪ್ಪ ಹಳ್ಳಿಕೇರಿ, ವಿ.ಕೃ ಗೋಕಾಕ, ಕುಂದರಗಿ, ದಿ. ಕರಿಯಪ್ಪ ಹುಚ್ಚಣ್ಣನವರ ನೇತೃತ್ವದಲ್ಲಿ ಗುರುತಿಸಿ ಸ್ವಚ್ಚಗೊಳಿಸಿ 400ನೇ ವಷ೯ದ ಜಯಂತೋತ್ಸವವನ್ನು  ಆಚರಿಸಲಾಯಿತು. ಆ ಕಾಯ೯ಕ್ರಮಕ್ಕೆ ಕೇಂದ್ರ ಹಾಗೂ ರಾಜ್ಯದ ಮಂತ್ರಿಮಂಡಲವು ಹಾಜರಾಗಿತ್ತು. ಇದರ ಪರಿಣಾಮವೆಂಬಂತೆ ಹಾವೇರಿಯಿಂದ ಕನಕಾಪುರ, ಚಿಕ್ಕಲಿಂಗದಹಳ್ಳಿ, ಕುರುಬಗೊಂಡ ಹಾಗೂ ಹೆಡಿಗೊಂಡಕ್ಕೆ ಲೈನ ರೂಟ್ ಗಳಾದವು. ದಿ.ಕರಿಯಪ್ಪ ಹುಚ್ಚಣ್ಣನವರ 'ಕನಕ ಜ್ಯೋತಿಯನ್ನು' ದೆಹಲಿಯವರೆಗೆ ಒಯ್ದವರಲ್ಲಿ ಪ್ರಮುಖರು. ಹೀಗೆ ಕನಕದಾಸರ  ಕುರುಹುಗಳನ್ನು ಹುಡುಕುತ್ತಾ ಹೋದಾಗ ದೊರೆತ ಆನಂದ ಅದ್ಭುತವಾದದ್ದು ಅದನ್ನು ಅಕ್ಷರಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ. ಅದು ಅನುಭವಕ್ಕೆ ಬರುವ ಮಾತಾಗಿದೆ.

 ಕನಕಾ..ಕನಕಾ..ಕನಕಾ..... ಎಂದು ನಾಮವ ಜಪಿಸಿದರೆ ಸಾಕು ಆತ್ಮಕ್ಕೆ ನವಚೈತನ್ಯ ತುಂಬಿದಂತಾಗುವುದು...........!


         ~~ ಪ್ರಮೋದ ನಲವಾಗಲ ~~
                   9686168202

Comments

  1. ಕನಕದಾಸರ ಬಗ್ಗೆ ನಿಮ್ಮ ಐತಿಹಾಸಿಕ ಅಂಶಗಳ ಹುಡುಕಾಟ ನಿಚ್ಚಳವಾಗಿದೆ..ಆದರೆ ನೀವೇಕೋ ಅವರ ಜಾತಿ ಬಗ್ಗೆ ಹೇಳಲು ಹಿಂದೇಟು ಹಾಕಿದಂತೆ ಕಾಣುತ್ತೆ...ಕನಕದಾಸರು ಬೇಡರು ಎಂಬುದು ನಿಚ್ಚಳವಾಗಿದ್ದರೂ ನಾವು ಧಾಖಲಿಸಲು ಹಿಂಜರಿಯ ಬಾರದು..ನಾನು ಸಹ ಕನಕದಾಸರು ಓಡಾಡಿದ ಜಾಗದಲ್ಲೆಲ್ಲ ಸುತ್ತಾಡಿ ವಿಷಯ ಸಂಗ್ರಹಿಸಿದ್ದೆ,ಆಗ ನನ್ನೊಡನೆ ನೀವು, ತೆವರಿ ಹಾಗೂ ಆ ಭಾಗದ ಕೆಲವು ಹಿರಿಯ ಬಂಧುಗಳು ಆ ಪ್ರವಾಸದಲ್ಲಿ ಸಹಕರಿಸಿ ಉಪಯುಕ್ತ ಮಾಹಿತಿಗಳನ್ನು ನೀಡಿದ್ದಿರಿ..ಕುಮ್ಮೂರಿನ ಕನಕದಾಸರ ಬಂಧುಗಳ ಮನೆಗೂ ಹೋಗಿ ಅವರೊಡನೆ ವಿಚಾರ ವಿನಿಮಯ ಮಾಡಲಾಗಿ ಅವರೆಲ್ಲ ದಾಸರೆಂದು ಕರೆದುಕೊಳ್ಳುವ ಬೇಡರು ಎಂದು ತಿಳಿಯಿತು..ಕನಕದಾಸರು ಪಕ್ಕ ಬೇಡ ಜನಾಂಗದವರು ಎಂಬುದರಲ್ಲಿ ಎರಡು ಮಾತಿಲ್ಲ...ಹಾಗೆ ನೀವೂ ಉಲ್ಲೇಖಿಸಬೇಕು..ನಾನು ನಿಮ್ಮೆಲ್ಲರೊಡನೆ ಪ್ರವಾಸ ಮಾಡಿ ಸಂಗ್ರಹಿಸಿದ ಎಲ್ಲಾ ಮಾಹಿತಿಯನ್ನು ಚಿತ್ರಗಳ ಸಹಿತ ನನ್ನ ಫೇಸ್ ಬುಕ್ನಲ್ಲಿ ಹಾಕಿ ಕನಕದಾಸರು ಬೇಡ ಜನಾಂಗದವರೆ ಎಂದು ಉಲ್ಲೇಖಿಸಿದ್ದೇನೆ..ನೀವು ಧಾಖಲಿಸಿ.

    ReplyDelete
  2. Nija sir kanakaru beda janangadavaru

    ReplyDelete

Post a Comment

Popular posts from this blog

ಹೊಯ್ಸಳರ ಲಾಂಛನದಲ್ಲಿಯ ಪ್ರಾಣಿ ಹುಲಿಯಲ್ಲ ಸಿಂಹ...!

ಹಾವೇರಿ ಜಿಲ್ಲೆಯಲ್ಲಿಯ ಶಾಸನಗಳಲ್ಲಿ ಬಸವಣ್ಣನವರು

ಹಾವೇರಿ ಜಿಲ್ಲೆಯ ಎಂಟು ತಾಲೂಕುಗಳ ಕಿರು ಪರಿಚಯ....!!!!