ಶಾಸನದಲ್ಲಿಯ ಬಿಂನವೂರು ಮುಂದೆ ರಾಣೇಬೆನ್ನೂರ ಹೇಗಾಯಿತು

ಶಾಸನದಲ್ಲಿಯ"ಬಿಂನವೂರು" ಮುಂದೆ ರಾಣೇಬೆನ್ನೂರ ಹೇಗಾಯಿತು?........................            
ರಾಣೇಬೆನ್ನೂರು ಹಾವೇರಿ ಜಿಲ್ಲೆಯ ಏಂಟು ತಾಲೂಕುಗಳಲ್ಲಿ ಅತಿ ದೊಡ್ಡ ತಾಲೂಕಾ ಕೇಂದ್ರವಾಗಿದೆ. ಎಷ್ಯಾದಲ್ಲಿಯೇ ಬೀಜೋತ್ಪಾದನೆಯಲ್ಲಿ ಎರಡನೇಯ ಸ್ಥಾನವನ್ನು ಪಡೆದ ಹೆಗ್ಗಳಿಕೆ ಈ ತಾಲೂಕಿಗೆ ಸಲ್ಲುತ್ತದೆ. ಇಲ್ಲಿಯೇ ಸಮೀಪದಲ್ಲಿ ವಾಸಿಸುತ್ತಿರುವ ದಿ ಗ್ರೇಟ್ ಇಂಡಿಯನ ಬಸ್ಟಡ್೯ ಪಕ್ಷಿ ಹಾಗೂ ಕೃಷ್ಣಮೃಗಗಳಿಂದಾಗಿ ಇದರ ಹಿರಿಮೆ ಇಮ್ಮಡಿಯಾಗಿದೆ. ಕೋಟೆಯಲ್ಲಿರುವ ವಿದ್ಯಾದೀಶ ತಿಥ೯ರ ವಿಗ್ರಹ ಭಾರತದಲ್ಲಿಯೇ ಎಕೈಕ. ಇಂತಹ ಹತ್ತು ಹಲವು ಸಂಗತಿಗಳನ್ನು ತನ್ನಲ್ಲಿ ಬಚ್ಚಿಟ್ಟುಕೊಂಡ ರಾಣೇಬೆನ್ನೂರ, ತನ್ನ ಹೆಸರಿನ ಹಿಂದೆ ಇರುವ ಇತಿಹಾಸವನ್ನು ಅದು ಹೇಳಲು ಮಂದಾದರು ಅದನ್ನು ಅಥೈ೯ಸಿಕೊಳ್ಳಲು ನಮಗೆ ಆಗುತ್ತಿಲ್ಲವೇನ್ನುವುದು ವಿಷಾದದ ಸಂಗತಿ. ಹೀಗಾಗಿಯೇ ನಾನು ನನ್ನ ವ್ಯಾಪ್ತಿಯಲ್ಲಿ ಸಾಕ್ಷ್ಯಾಧಾರಗಳ ಮುಖಾಂತರ ನನ್ನ ಅಭಿಪ್ರಾಯವನ್ನು ತಮ್ಮ ಮುಂದೆ ಬಿಚ್ಚಿಡುತ್ತಿದ್ದೇನೆ. ನಾವು ಸಹಜವಾಗಿ ಯಾರಿಗಾದರು "ರಾಣೇಬೆನ್ನೂರ" ಎಂಬ ಹೆಸರು ಹೇಗೆ ಬಂದಿತು ? ಎಂದು ಪ್ರಶ್ನಿಸಿದಾಗ,ಅವರ ಉತ್ತರದಲ್ಲಿ "ಬಿದನೂರಿನ ರಾಣಿ" ಕಂಗೂಳಿಸುತ್ತಾಳೆ. ಆದರೆ ಆ ರಾಣಿಗೂ ಹಾಗೂ ನಮ್ಮ ರಾಣೇಬೆನ್ನೂರಿನ ಹೆಸರಿಗೂ ಯಾವುದೇ ಸಂಭಂದವಿಲ್ಲ ಎನ್ನುವುದು ನನ್ನ ಅನಿಸಿಕೆ.ಕಾರಣ ಶಾಸನಗಳನ್ನು ಅವಲೋಕಿಸಿದಾಗ ನನ್ನ ಅನಿಸಿಕೆ ಸರಿ ಎನಿಸುತ್ತದೆ. ಒಬ್ಬ ವ್ಯಕ್ತಿ 1 ವಷ೯ದ ಹಿಂದೆ ನನಗೆ ಇಲ್ಲ ಸರ್ ಆ ರಾಣಿಯ ಸಮಾದಿಯನ್ನು ನಾವು ಹಿರೇಬಿದರಿಯಲ್ಲಿ ನೋಡಬಹುದು ಎಂದು ತಿಳಿಸಿದ್ದನು. ಆಗ ನನಗೆ ಎಲ್ಲಿಲ್ಲದ ಸಂತೋಷ. ಆದರೆ ಅಲ್ಲಿಯ ಸಮಾಧಿಗೆ ಹೋಗಿ ನೋಡಿದಾಗ ಇತ್ತೀಚಿನ ಅಕ್ಷರಗಳಲ್ಲಿ " ಬಿಜಾಪುರ ರಾಜಕುಮಾರಿ ಮಲಿಕಾ ರಾಣಿ" ಎಂಬ ತಲೆ ಬರಹವಿತ್ತು. ಅದರ ಬಗ್ಗೆ ಅಧ್ಯಯನ ನಡೆಸಿದಾಗ ಅದು ನಾನು ಹೇಳಲು ಹೊರಟಿರುವ ವಿಷಯಕ್ಕೆ ಪೂರಕವಾಗಲಾರದು ಎನಿಸಿತು. ಹೀಗಾಗಿಯೇ ನಾನು ರಾಣೇಬೆನ್ನೂರ ಹಾಗು ಸುತ್ತಮುತ್ತಲಿನ ಗ್ರಾಮಗಳಲ್ಲಿಯ ಶಾಸನಗಳ ಮೊರೆ ಹೋಗಬೇಕಾಯಿತು. ಅದರಲ್ಲಿ ಪ್ರಥಮವಾಗಿ  ರಾಣೇಬೆನ್ನೂರಿನ ಹಳೆಯ ವೆಂಕಟೇಶ್ವರ ಬ್ಯಾಂಕ ಮುಂದೆ  ದೊರೆತ ಕ್ರಿ.ಶ 859 ರ ಶಾಸನದಲ್ಲಿ "ನಾಗಲು ಬಸದಿ" ಯನ್ನು ಕೆರೆಯ ಪಕ್ಕದಲ್ಲಿ "ನಾಗಲೂರ ಪೊಲ್ಲಬ್ಬೆ" ನಿಮಿ೯ಸಿದಳು. ಇದಕ್ಕೆ ಅತ್ತಿಗೇರಿಯಲ್ಲಿ ಸಾಕ್ಷಿ ಇದೆಯೆಂದು ತಿಳಿಸುತ್ತದೆಯಾದರು, ಇದರಲ್ಲಿ ರಾಣೇಬೆನ್ನೂರ ಹೆಸರಿನ ಉಲ್ಲೇಖವಿಲ್ಲ. ಕ್ರಿ.ಶ 1115 ರ ಗುತ್ತಲದ ಜೋಮನ ಶಾಸನದಲ್ಲಿ ರಾಣೇಬೆನ್ನೂರನ್ನು " ಬಿಂನವೂರು ಹಂನೆರಡು" ಎಂದು ಉಲ್ಲೇಖಿಸಲಾಗಿದೆ. ಕ್ರಿ.ಶ 1182 ರ "ಹುಲಿಹಳ್ಳಿಯ" ಶಾಸನದಲ್ಲಿ 'ವುಲಿಹಳ್ಳಿಯು ಬಿಂನವೂರು ಹಂನೆರಡರ ಶಿಖಾಮಣಿಯಿದ್ದಂತೆ ಎಂದು ಉಲ್ಲೇಖಿಸುತ್ತಾ,ಅಲ್ಲಿಯ ರಾಮೇಶ್ವರ ದೇವರಿಗೆ ಇಲ್ಲಿಯ ಕೆಲವು ಭಾಗಗಳನ್ನು ದಾನವಾಗಿ ಕೊಡಲಾಗಿತ್ತು ಎಂಬುದನ್ನು ತಿಳಿಸುತ್ತದೆ. ಸಿದ್ದೇಶ್ವರ ದೇವಸ್ಥಾನದಲ್ಲಿರುವ ಕ್ರಿ.ಶ 1551ರ ಶಾಸನವು ವಿಜಯನಗರದ ಸದಾಶಿವರಾಯರು ಗಡ್ಢದ ಕೆಲಸಿಗಳಿಗೆ ಸುಂಕ ವಿನಾಯಿತಿ ನೀಡಿದ ಬಗ್ಗೆ ತಿಳಿಸುತ್ತದೆ. ಕದಿರಮಂಡಲಗಿಯ ಕ್ರಿ.ಶ 1581ರ ಶಾಸನ ಕೆಂಗಪ್ಪನಾಯಕನು ಹನುಮಂತ ದೇವರಿಗೆ ನೀಡಿದ ದಾನವನ್ನು ತಿಳಿಸುತ್ತಾ ವಿಶೇಷವಾಗಿ "ಬೆಂನೂರು"ಎಂಬ ಹೆಸರನ್ನು ಅಲ್ಲಿ ಉಲ್ಲೇಖಿಸಲಾಗಿದೆ. ಹಾವೇರಿ ತಾಲೂಕಿನ ಮಲ್ಲೂರಿನಲ್ಲಿ ಹೊಂಬರಡಿಯ ಚನ್ನಪ್ಪಗೌಡ ಕ್ರಿ.ಶ.1636 ರಲ್ಲಿ ಜಮೀನ ಖರೀದಿ  ಮಾಡಿದಾಗ ಅದಕ್ಕೆ'ಬೆನೂರ ಸೀಮೆಯ ಗೌಡ ಹನುಮಂತಗೌಡ ಸಾಕ್ಷಿಯಾಗುತ್ತಾನೆ. ಗುತ್ತಲದ ದೇಸಾಯಿ ಲಿಂಗನಗೌಡ "ರಾಣೇದಬೆಂನೂರ ಸೀಮೆಯ ಬೆಳಕೇರಿಯಲ್ಲಿಯ ಭೂಮಿಯನ್ನು ನರಹರಿ ಭಟ್ಟರಿಗೆ ಕ್ರಿ.ಶ 1682 ರಲ್ಲಿ ಭೂದಾನ ಮಾಡಿದ ಬಗ್ಗೆ ತಿಳಿಸುತ್ತದೆ. ಚೆನ್ನಾಪುರದ ಕ್ರಿ.ಶ 1786 ರ ಟಿಪೂವಿನ ಕನ್ನಡ ಶಾಸನದಲ್ಲಿ "ರಾಣೆಬೆಂನೂರ" ಎಂದು ಖಂಡರಿಸಲಾಗಿದೆ. ಹಲಗೇರಿಯ ಶಾಸನದಲ್ಲಿ ಹಾಳಬೆಂನೂರ ಸೀಮೆ ಎಂದು ಹಾಗೂ ಬ್ರಿಟಿಷರ ದಾಖಲೆಗಳಲ್ಲಿ 'ರಾಣೀಬಿನ್ನೂರ' ಎಂದು ಬರೆಯಲಾಗಿದೆ. ಹಾಗಾದರೆ ಒಟ್ಟಾರೆಯಾಗಿ ಹೇಳಬಹುದಾದರೆ 'ಬಿಂನವೂರು' ಎಂಬ ಮೂಲ ಹೆಸರು ಬೆಂನೂರು,ಬೆನೂರ,ರಾಣೇದಬೆಂನೂರ,ರಾಣೆಬೆಂನೂರ ಮುಂದೆ ರಾಣೀಬಿನ್ನೂರ ಎಂದು ಕ್ರಮೇಣವಾಗಿ ಬದಲಾಯಿತೆನ್ನಬಹುದು. ಕ್ರಿ.ಶ 1115 ರಲ್ಲಿ ರಾಣೇಬೆನ್ನೂರ ಗುತ್ತಲದ ಅರಸರ ಆಳ್ವಿಕೆಗೆ ಒಳಪಟ್ಟಾಗ 'ಬಿಂನವೂರು ಹಂನೆರಡು" ಎಂದು ಕರೆಸಿಕೊಳ್ಳುತ್ತಿದ್ದ, 12 ಗ್ರಾಮಗಳನ್ನೊಳಗೊಂಡ ಆಡಳಿತ ಕೇಂದ್ರವಾಗಿತ್ತು. ಅಂದರೆ ಆವತ್ತಿನ ವೇಳೆಯಲ್ಲಿ ತುಂಗಭದ್ರಾ ಹಾಗೂ ಕೃಷ್ಣಾ ನದಿಯ ಮಧ್ಯದಲ್ಲಿರುವ ಈ ಕ್ಷೇತ್ರಕ್ಕೆ ಪ್ರಯಾಣಿಕರು ಅತ್ತಿಂದಿತ್ತ ಹೋಗುವುದು ಸಹಜವಾಗಿತ್ತು. ಬಹುಶಃ ಈ ಪ್ರಯಾಣಿಕರಿಗೆ ವಿಶೇಷವಾಗಿ  ಅನ್ನದ(ಪ್ರಸಾದ/ಬಿನ್ನಹ) ವ್ಯವಸ್ಥೆಯನ್ನು ಇಲ್ಲಿಯ ಹಲವು ಮಠಗಳು ಮಾಡುತ್ತಿದ್ದಿರಬಹುದು ಹೀಗಾಗಿಯೇ ಸಹಜವಾಗಿ ಜನರ ಬಾಯಲ್ಲಿ "ಬಿಂನವೂರು" ಎಂದು ಕರೆಸಿಕೊಂಡಿರಬಹುದಾಗಿದೆ ಎನ್ನುವುದು ನನ್ನ ಅಭಿಪ್ರಾಯ. ಈ ಮಾತನ್ನು ಪುಷ್ಟಿಕರಿಸಲು ಇಲ್ಲಿನ ಆನೆಮಠದ ಕ್ರಿ.ಶ 1765 ರ ಕೈಫಿಯತ್ ಸಹಕರಿಸುತ್ತದೆ. ಸುಲ್ತಾನನು ಪ್ರಯಾಣಿಕರ ಹಾಗೂ ಜಂಗಮರ ಪ್ರಸಾದದ ವ್ಯವಸ್ಥೆಗೆ  27.5 ಎಕರೆ ಭೂಮಿಯನ್ನು ದಾನವಾಗಿ ಕ್ರಿ.ಶ 1765 ರಲ್ಲಿ" ಆನೆವಾಲಿ ಮಠಕ್ಕೆ" ನೀಡುತ್ತಾನೆ ಎಂಬ ವಿಷಯ ಅದರಲ್ಲಿ ಅಡಕವಾಗಿದೆ. ಹಾವನೂರಿನ ಹನುಮಂತಗೌಡನು ಸಹ ಉದಗಟ್ಟಿಯಲ್ಲಿಯ ಮಠಕ್ಕೆ ಸಾವಿರಾರು ಎಕರೆ ಭೂಮಿಯನ್ನು ದಾನವಾಗಿ ನೀಡಿರುತ್ತಾನೆ. ರಾಣೇಬೆನ್ನೂರಿನ ಸುತ್ತಮುತ್ತಲು ಈ ಹಿಂದೆ  ಸುಮಾರು 220 ಮಠಗಳಿದ್ದವಾದರು, ಅವುಗಳಲ್ಲಿ ನಾವು 40 ಮಠಗಳನ್ನು ಮಾತ್ರ ಈಗ  ಗುರುತಿಸಬಹುದಾಗಿದೆ. ಹೀಗಾಗಿ ನನ್ನ ಉಹೆ ಸರಿಯಾಗಿರಬಹುದೇನಿಸುತ್ತದೆ. 'ಬಿಂನವೂರ' ಎಂಬ ಹೆಸರಿಗೆ "ರಾಣೆ" ಎಂಬ ಪದ ಹೇಗೆ ಸೇರಿರಬೇಕು ಎಂಬುದರ ಬಗ್ಗೆ ನಾವು ಗಮನಿಸಿಬೇಕಾಗುತ್ತದೆ.ಸುಮಾರು 17 ನೇ ಶತಮಾನದಲ್ಲಿ ಈ ಭಾಗದಲ್ಲಿಯ "ಮರಾಠರ ಅಧಿಕಾರಿಗಳು" ಇಲ್ಲಿಯ ಕೋಟೆಯ (ಬಿಂನವೂರು) ಹೊರಭಾಗದಲ್ಲಿ  "ಅರಣ್ಯವಾಸಿಗಳು" (ಮರಾಠಿಯಲ್ಲಿ ಇವರಿಗೆ "ರಾಣವಾಸಿ" ಎನ್ನುತ್ತಾರೆ) ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದನ್ನು ಕಂಡು ಮರಾಠಿಯಲ್ಲಿ "ರಾಣವಾಸಿ ಬಿಂನೂರು" ಎಂದು ಕರೆದಿರಬಹುದು. ಬಹುಶಃ ಇದೇ ಮುಂದೆ ರಾಣೇಬೆನ್ನೂರ ಎಂದು ಆಗಿರಬಹುದು. ಇವರ ಆಡಳಿತವನ್ನು ಪುಷ್ಟಿಕರಿಸಲು ಅಪ್ರಕಟಿತ ವಿಷೇಶವಾದ ಮರಾಠ ಸೇನಾಧಿಪತಿಯ ಅಪರೂಪದ ವಿಗ್ರಹವು ಮೌನೇಶ್ವರ ದೇವಾಲಯದಲ್ಲಿದೆ. ಕ್ರಿ.ಶ 1785 ಕ್ಕೆ ಅಜಮಿರದಿಂದ ಹಜರತ್ ಜಮಾಲಶಾರವರು ರಾಣೇಬೆನ್ನೂರಿಗೆ ಬಂದ ನಂತರ ಟಿಪ್ಪೂ ಸುಲ್ತಾನ ಚನ್ನಾಪುರದಲ್ಲಿ ಭೂದಾನವನ್ನು ಮಾಡಿ "ರಾಣೆಬೆಂನೂರ" ಎಂದು ಶಾಸನದಲ್ಲಿ ಉಲ್ಲೇಖಿಸಿದ್ದನ್ನು ಗಮನಿಸಿದಾಗ ನನ್ನ ಅಭಿಪ್ರಾಯ ಸರಿ ಎನಿಸುತ್ತದೆ. ಕ್ರಿ.ಶ 1791 ರಂದು ಕ್ಯಾಪ್ಟನ್ ಮೂರ್ ರಾಣೇಬೆನ್ನೂರಿಗೆ ಬೇಟಿ ನೀಡಿ ಈ ನಗರವು ವಿಸ್ತಾರವಾದ ಹಾಗೂ ವ್ಯಾಪಾರೀ ಮಹತ್ವವುಳ್ಳ ಪಡಮೂಲೆ ಹಾಗೂ ಉತ್ತರ ಪೂರ್ವ ಭಾಗಗಳಲ್ಲಿ ಸಂಪದ್ಭರಿತವಾದ ತೋಟಪಟ್ಟಿಗಳು (ಬಾಗಯತ)ಇದ್ದವು ಎಂದು ತಿಳಿಸುವಾಗ "ರಾಣೆಬೆಂನೂರ" ಎಂದು ಉಲ್ಲೇಖಿಸುತ್ತಾನೆ. ಮುಂದೆ ಬ್ರಿಟಿಷರ ಆಳ್ವಿಕೆಯ ದಪ್ತರನಲ್ಲಿ "ರಾಣೀಬಿನ್ನೂರ" ಎಂದು ಬದಲಾಯಿತಾದರು, ಕೆಲವು ಕಡೆ "ರಾಣೇಬೆನ್ನೂರ" ಎಂದೇ ಬಳಕೆಯಾಗಿದೆ. ಕೆಲವೊಮ್ಮೆ ಈಗಲೂ ಸಹ ಗ್ರಾಮೀಣ ಪ್ರದೇಶಗಳಲ್ಲಿ ಜನರು ಬಸ್ಸನಲ್ಲಿ ಪ್ರಯಾಣ ಬೆಳಸಿವಾಗ "ಬೆಂನೂರಿಗೆ" ಟಿಕೆಟ್ ಕೋಡಿ ಎಂದು ಕೇಳುವುದನ್ನು ನಾವು ಗಮನಿಸಿದ್ದೇವೆ. ಇಂತಹ ಅನೇಕ ಉದಾಹರಣೆಗಳು ನಮ್ಮ ಗ್ರಾಮೀಣ ಜನರ ಬಾಯಲ್ಲಿ ಜೀವಂತವಾಗಿವೆ. ಒಟ್ಟಾರೆಯಾಗಿ ಬಿಂನವೂರು ಮುಂದೆ ರಾಣೇಬೆನ್ನೂರ ಎಂದು ರೂಪಾಂತರಗೊಂಡಿತು ಎನ್ನುವುದಕ್ಕೆ ಈ ಆಧಾರಗಳು ಪೂರಕವಾಗಿವೆ ಎನ್ನುವುದು ನನ್ನ ಅಭಿಪ್ರಾಯ.                                                                  # ನಮ್ಮ ಜಿಲ್ಲೆ ನಮ್ಮ ಹೆಮ್ಮೆ#                             

  ~ ಪ್ರಮೋದ. ಎಸ್ ನಲವಾಗಲ -9686168202~

Comments

Popular posts from this blog

ಹೊಯ್ಸಳರ ಲಾಂಛನದಲ್ಲಿಯ ಪ್ರಾಣಿ ಹುಲಿಯಲ್ಲ ಸಿಂಹ...!

ಹಾವೇರಿ ಜಿಲ್ಲೆಯಲ್ಲಿಯ ಶಾಸನಗಳಲ್ಲಿ ಬಸವಣ್ಣನವರು

ಹಾವೇರಿ ಜಿಲ್ಲೆಯ ಎಂಟು ತಾಲೂಕುಗಳ ಕಿರು ಪರಿಚಯ....!!!!