ಸವ೯ರಿಗೂ ಕಲ್ಪವೃಕ್ಷ ಕದಿರಮಂಡಲಗಿ ಕಾಂತೇಶ

ಕದಿರಮಂಡಲಗಿ ಎಂಬ ಚಿಕ್ಕ ಗ್ರಾಮ ಇತಿಹಾಸಪೂರ್ವಕಾಲದ ನೆಲೆಯಾಗಿದೆ. ಇದಕ್ಕೆ ಸಾಕ್ಷಿ ಎನ್ನಲು ಇಲ್ಲಿಯ ಜನರು "ಅಸ್ತಿ ಸಂಗ್ರಹ ಪದ್ದತಿಯನ್ನು" (ದೇಹ ದಹನ ಮಾಡಿದ ಮೇಲೆ ಬರುವ ಅಸ್ತಿ ಸಂಗ್ರಹ)ಇನ್ನೂ ಜೀವಂತವಾಗಿರಿಸಿಕೊಂಡು ಬಂದಿದ್ದಾರೆ. ಶಾಸನಗಳಲ್ಲಿ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲುಕಿನ ಕದಿರಮಂಡಲಗಿಯನ್ನು ಕದಿರವುಂಡಲಗಿ, ಕದಿಮಿ೯ಡಿ ಎಂದು ಉಲ್ಲೇಖಿಸಲಾಗಿದೆ. 

ಈ ಹಿಂದೆ ಚಂದ್ರಗುತ್ತಿಯ ಒಳಗಣ ರಟ್ಟಿಹಳ್ಳಿ ವೆಂಠೆಗೆ ಸೇರುತ್ತಿದ್ದ ಈ ಚಿಕ್ಕ ಗ್ರಾಮ ತನ್ನದೇ ಆದಂತಹ ಇತಿಹಾಸವನ್ನು ಹೊಂದಿದೆ.  ಗತಕಾಲದ ಇತಿಹಾಸವನ್ನು ಹೇಳುವ ಜೈನ ವಿಗ್ರಹಗಳು ಗ್ರಾಮದಲ್ಲಿ ಕೆಲವು ಕಡೆ ಬಿದ್ದಿರುವುದನ್ನು ಹಾಗೂ ಈ ಹಿಂದೆ ಉತ್ಖನನ ಸಮಯದಲ್ಲಿ ಇಂತಹ ವಿಗ್ರಹಗಳು ಸಿಕ್ಕಿರುವುದನ್ನು ಗಮನಿಸಿದಾಗ ಬಹುಶಃ ಈ ಹಿಂದೆ ಇದು ಜೈನ ಕೇಂದ್ರ ವಾಗಿರಬಹುದು. ಅನೇಕ ಕಂತಿಗಳು (ಜೈನ ಭಿಕ್ಷ ಕಿಯರು) ಇಲ್ಲಿ ವಾಸವಾಗಿರಬಹುದು ಎಂಬ  ಮಾತಿಗೆ ಕಂತಿ ಸ್ವಾಮಿಮಠ ಹಾಗೂ ಕಾಂತೇಶ ಎಂಬ ನಾಮಗಳು ಪುಷ್ಟಿಯನ್ನು ನೀಡುತ್ತವೆ. 

ಕದಿರಮಂಡಲಗಿ ಎಂಬ ಪುಣ್ಯಕ್ಷೇತ್ರವನ್ನು ಹಾಗೂ ಇಲ್ಲಿಯ ಕಾಂತೇಶ ದೇವರನ್ನು ದಕ್ಷಿಣ ಭಾರತದಲ್ಲಿಯೇ ಪ್ರಸಿದ್ಧಿಗೊಳಿಸಿದ ಶ್ರೇಯಸ್ಸು ಸಂತ ಕನಕದಾಸರಿಗೆ ಸಲ್ಲುತ್ತದೆ. ಕದರಮಂಡಲಗಿಯಲ್ಲಿರುವ ಪ್ರಾಣ ದೇವರಾದ ಕಾಂತೇಶ ದೇವರನ್ನು ಪ್ರತಿಷ್ಠಾಪಿಸಿದ್ದು "ಜನಮೇಜಯ" ಎಂಬ ಐತಿಹ್ಯ ಇದೆ. ಆದರೆ ಈ ವಿಗ್ರಹವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದು 15-16ನೇ ಶತಮಾನದಲ್ಲಿ ಪ್ರತಿಷ್ಠಾಪಿಸಿರಬಹುದಾಗಿದೆ ಎನ್ನಬಹುದು. ಹೀಗಾಗಿ ಬಹುಶಃ ಈ ವಿಗ್ರಹವನ್ನು ಸಂತೇಬೆನ್ನೂರಿನ ಚಿಕ್ಕಹನುಮ ನಾಯಕನ ಮಗ ಕೆಂಗಪ್ಪ ನಾಯಕ ಸಂಕ್ರಾಂತಿ ಪುಣ್ಯ ಕಾಲದಲ್ಲಿ ಸ್ಥಾಪಿಸಿ ಇದಕ್ಕೆ ದೇವಾಲಯವನ್ನು ನಿರ್ಮಿಸಿ  ಕ್ರಿ.ಶ 1581ರಲ್ಲಿ ಈ ಗ್ರಾಮವನ್ನು ಧಾರಾಪೂರ್ವಕವಾಗಿ ನೀಡಿರಬಹುದಾಗಿದೆ. ಪ್ರಾರಂಭದಲ್ಲಿ ತನ್ನ ಚರ್ಮ ರೋಗ ನಿವಾರಣೆಯಾಗಲು ಕೆಂಗಪ್ಪ ನಾಯಕರೇ ಈ ದೇವರನ್ನು ಪೂಜಿಸುತ್ತಿದ್ದರು ಎಂಬ ಐತಿಹ್ಯವು ಇದೆ. ತದನಂತರ ದೇವಾಲಯಕ್ಕೆ ಅರ್ಚಕರನ್ನು ನೇಮಿಸಲಾಯಿತು. ವಿಶೇಷವೆಂದರೆ ರಾಮಾನುಜಾಚಾಯ೯ ಹಾಗೂ ತಿರುನಾಮ ತಾತಾಚಾರ್ಯರನ್ನು ಸ್ಮರಿಸುವ ಸಂತ ಕನಕದಾಸರು, ಯುದ್ಧದಲ್ಲಿ ಆದಂತಹ ಗಾಯವನ್ನು ಹೋಗಲಾಡಿಸುವ "ಮದ್ದು ಇದೇ ಕಾಂತೇಶ! ದೇವರೆಂದು ತಿಳಿದಿದ್ದರು. ಹಾಗೆಯೇ ಆ ಪ್ರಾಣ ದೇವರನ್ನು ಆರಾಧಿಸುತ್ತಾ " ಕುಲವಿಲ್ಲದ ಕುನ್ನಿದಾಸ" "ನಾರಸಿಂಹ ಕಾಯೋ ಎನ್ನ ಕುಲದೈವ" ಎಂದು ಹಾಡಿ ಕುಣಿಯುತ್ತಾ ದಣಿವಾಗಿ ಪಕ್ಕದಲ್ಲಿರುವ ಲಕ್ಷ್ಮೀ ನರಸಿಂಹ ದೇವಾಲಯದಲ್ಲಿ  ವಿಶ್ರಾಂತಿಸುತಿದ್ದರು.

 "ಮೋಹನ ತರಂಗಿಣಿ "ಎಂಬ ಸಾಂಗತ್ಯ ಕಾವ್ಯವನ್ನು ಇದೆ ಸ್ಥಳದಲ್ಲಿಯೇ ರಚಿಸಿ ಒಂದು ಪ್ರತಿಯನ್ನು ಭಕ್ತಿಪೂವ೯ಕವಾಗಿ ಕಾಂತೇಶನಿಗೆ ಅಪಿ೯ಸಿದರು. ಆ ಪ್ರತಿಯನ್ನು ಈಗಲೂ ಸಹ ದೇವಾಲಯದಲ್ಲಿ ನೋಡಬಹುದು. 

ಕ್ರಿ.ಶ 1832 ರಲ್ಲಿ ಹಾಳಾಗುತ್ತಿದ್ದ ಈ ತಾಳೆಪ್ರತಿಯನ್ನು ರಾಣೇಬೆನ್ನೂರ ಸಮೀಪದಲ್ಲಿಯ "ಮೇದೂರಿನ ದಾಸಪ್ಪ ಸಾಹುಕಾರ" ಎತ್ತಿ ಬರೆದುದನ್ನು ಇಲ್ಲಿ ಸ್ಮರಿಸಬೇಕಾಗುತ್ತದೆ. ಇಂತಹ ಭಕ್ತನ (ಕನಕದಾಸರ) ಮರಣಾನಂತರ ಆಗ ಸ್ಥಳೀಯರು ಇಲ್ಲಯೇ ಆತನ ವಿಗ್ರಹವನ್ನು ಪ್ರತಿಷ್ಟಾಪಿಸಿದ್ದಾರೆ, ಎನ್ನುತ್ತಾ ಸ್ಥಳೀಯ ಹಿರಿಯರು ದ್ವಾರ ಬಾಗಿಲಿನಲ್ಲಿರುವ ವಿಗ್ರಹವನ್ನು ತೋರಿಸುತ್ತಾ ಅದನ್ನು "ಕನಕಪ್ಪನ"ವಿಗ್ರಹ ಎನ್ನುತ್ತಾರೆ( ಇದನ್ನೂ ದ್ಪಾರಪಾಲಕ ಎಂದೂ ಸಹ ಕರೆಯುವರುಂಟು). ಮೊಗಲ್‌, ಪೇಶ್ವೆ, ಸವಣೂರ ನವಾಬರ, ಹಾವನೂರ ಹನುಮಂತಗೌಡ ಹಾಗೂ  ಹಾನುಗಲ್ ದೇಸಾಯಿಯರ ಆಡಳಿತವನ್ನು ನೋಡಿದವನಾಗಿದ್ದಾನೆ ನಮ್ಮ ಕಾಂತೇಶ.

 ಧೊಂಡೀಯಾ ವಾಘ್ ಟಿಪ್ಪೂವಿನಿ ಮರಣಾ ನಂತರ ಬ್ರಿಟಿಷರ ವಿರುದ್ದ ಯುದ್ದಮಾಡುವಾಗ ದೇವರ ದಶ೯ನವನ್ನು ಪಡೆದು ತನ್ನದೊಂದು ಖಡ್ಗವನ್ನು ಕಾಂತೇಶನಿಗೆ ಸಮಪಿ೯ಸಿದನು ಎಂದರೆ ಆತನ ಶಕ್ತಿಯ ಅರಿವು ನಮಗಾಗದೆ ಇರದು. ಸ್ಥಳೀಯರು ಹಾಗೂ ಸುತ್ತಮುತ್ತಲಿನ ಜನರು ದಾಸರಾಗಬೇಕೆಂದು ಬಯಸಿ ಬಂದಲ್ಲಿ ಅವರಿಗೆ ಮುದ್ರೆಯನ್ನು ಹಾಕಲು ರಾಮಾನುಜರ ಶಿಷ್ಯರ ಮಠವೊಂದಿದೆ ಅದನ್ನು ಸಮೇರಾಯರ ಮಠವೆಂದು (ಓಷ್ಟಮರ ಮಠ)  ಕರೆಯುತ್ತಾರೆ. ಹೀಗೆ ಸುತ್ತಮುತ್ತಲಿನಿಂದ ಬರುವಂತಹ ಭಕ್ತರಿಗೆ ಬೇಡಿದ್ದನ್ನೆಲ್ಲಾ ಕೊಡುವ ಕಲ್ಪವೃಕ್ಷವಾಗಿದ್ದಾನೆ ಈ ಕಾಂತೇಶ. 

                    -ಪ್ರಮೋದ ನಲವಾಗಲ-

               

            

Comments

Popular posts from this blog

ಹೊಯ್ಸಳರ ಲಾಂಛನದಲ್ಲಿಯ ಪ್ರಾಣಿ ಹುಲಿಯಲ್ಲ ಸಿಂಹ...!

ಹಾವೇರಿ ಜಿಲ್ಲೆಯಲ್ಲಿಯ ಶಾಸನಗಳಲ್ಲಿ ಬಸವಣ್ಣನವರು

ಹಾವೇರಿ ಜಿಲ್ಲೆಯ ಎಂಟು ತಾಲೂಕುಗಳ ಕಿರು ಪರಿಚಯ....!!!!