ಹಾವೇರಿ ಜಿಲ್ಲೆಯ ಸ್ಮಾರಕ ಶಿಲ್ಪಗಳು - ವೈ. ಮದ್ದಾನಸ್ವಾಮಿ.

(ನಿಲಸುಗಲ್ಲು - ಹಳ್ಳೂರು)
ಈಗಾಗಲೇ ಒಪ್ಪಿತವಾದ ಚರಿತ್ರೆಯು ಸಾಮ್ರಾಟರ, ಮಾಂಡಳಿಕರ, ಸಾಮಂತರ ಇತಿಹಾಸವನ್ನು ಹಾಡಿಹೊಗಳುತ್ತ ಬಂದಿದ್ದು, ಕೇವಲ ಅವರು ಮಾಡಿದ ಕಾಳಗಗಳ ದಾಖಲೆಯಾಗಿದೆ. ಇದರಿಂದಾಗಿ ಉದಾಸೀನಕ್ಕೊಳಗಾದ ತಳ ಸಮುದಾಯಗಳ ಐತಿಹಾಸಿಕ ಸಂಗತಿಗಳು ನಿರ್ಲಕ್ಷಕ್ಕೆ ಒಳಗಾಗಿ ಗೌಣವಾದವು. ಹಾಗಾಗಿ ಸಮಾಜದಲ್ಲಿ ಬದುಕಿ ಬಾಳಿದ ಸಾಮಾನ್ಯನೊಬ್ಬನ ಜೀವನ ಮಟ್ಟ, ಸಾಮಾಜಿಕ ವ್ಯವಸ್ಥೆ, ಆರ್ಥಿಕ ಸ್ಥಿತಿಗತಿ, ಧಾರ್ಮಿಕ ಪರಿಕಲ್ಪನೆಗಳು ಮತ್ತು ಸಾಧಿಸಿದ ಸಾಂಸ್ಕøತಿಕ ಕೊಡುಗೆಗಳು ದಾಖಲಾಗದೆ ಹೋದವು. ಕಳೆದ ಕೆಲವಾರು ದಶಕಗಳಿಂದ ಇತಿಹಾಸವನ್ನು ನೋಡುವ ದೃಷ್ಟಿಕೋನ ಗಮನಾರ್ಹವಾದ ರೀತಿಯಲ್ಲಿ ಬದಲಾವಣೆಯನ್ನು ಪಡೆಯುತ್ತಿದೆ. ವಿಭಿನ್ನ ರಂಗದಲ್ಲಿ ಪ್ರಾವೀಣ್ಯತೆ ಪಡೆದ ವಿದ್ವಾಂಸರು ಇತಿಹಾಸ ಕ್ಷೇತ್ರದಲ್ಲಿ ಕಾರ್ಯನಿರತರಾಗಿದ್ದರಿಂದ ನಮಗೆ ಪರಿಚಯವೇ ಇಲ್ಲದ ನಮ್ಮ ನಾಡಿನ ಪ್ರಾಚೀನ ಜನಜೀವನದ ಅಧ್ಯಯನಕ್ಕೆ ಅವಶ್ಯಕವೆನಿಸಿದ ಆಕರಗಳ ಅಮೂಲ್ಯ ಭಂಡಾರವನ್ನೇ ತೆರದಂತಾಗಿದೆ. ಇತಿಹಾಸ ಅಧ್ಯಯನಗಳು ವಿಶಾಲ ವ್ಯಾಪ್ತಿಯಿಂದ ಕಿರುವ್ಯಾಪ್ತಿಯತ್ತ ಸರಿಯುತ್ತಿವೆ. ಒಂದರ್ಥದಲ್ಲಿ ಇದು ಮೂಲದತ್ತ ಸರಿಯುವ ಪ್ರಯತ್ನವಾಗಿದ್ದು, ಸಾಮಾಜಿಕ ಮತ್ತು ಸಾಂಸ್ಕøತಿಕ ನೆಲೆಗಟ್ಟಿನಲ್ಲಿ ಜನಸಾಮಾನ್ಯರ ಜೀವನದ ವಿಶ್ಲೇಷಣೆಯನ್ನು ಮಾಡುವತ್ತ ಸಾಗಿ, ತನ್ನ ನಿಜವಾದ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ನಾಡಿನ ಇತಿಹಾಸವನ್ನು ಪುನರ್ ರಚಿಸುವಲ್ಲಿ ಪ್ರತಿ ಜಿಲ್ಲೆ, ತಾಲೂಕು ಮತ್ತು ಹಳ್ಳಿಗಳ ಪಾತ್ರ ಅಮೂಲ್ಯವಾದದ್ದು. ಈ ಹಿನ್ನೆಲೆಯಲ್ಲಿ ಕನ್ನಡ ನಾಡಿನ ಸಾಂಸ್ಕøತಿಕ ಇತಿಹಾಸವನ್ನು ಸೃಜಿಸುವಲ್ಲಿ ಹಾವೇರಿ ಜಿಲ್ಲೆಯ ಪಾತ್ರವನ್ನು ನಿರೂಪಿಸುವ ಘನ ಉದ್ದೇಶವನ್ನು ಪ್ರಸ್ತುತ ಅಧ್ಯಯನವು ಹೊಂದಿದೆ.
    ಭಾರತದ ಇತಿಹಾಸವನ್ನು ಪುನರ್ ರಚಿಸುವಲ್ಲಿ ಶಾಸನಗಳೇ ಪ್ರಮುಖ ಆಧಾರಗಳಾಗಿವೆ. ಪ್ರಾಯಶ: ನಮ್ಮ ನಾಡಿನ ಜನಜೀವನ ಶಾಸನಗಳಲ್ಲಿ ಅಭಿವ್ಯಕ್ತಗೊಂಡಿರುವಂತೆ ಮತ್ತೆಲ್ಲೂ ವ್ಯಕ್ತವಾಗಿಲ್ಲ. ಕರ್ನಾಟಕದ ಜನಜೀವನವನ್ನು ವಿವಿಧ ಆಯಾಮಗಳಿಂದ ಅಧ್ಯಯನ ಮಾಡುವ ಪ್ರತಿಯೊಬ್ಬ ಸಂಶೋಧಕನಿಗೂ ಶಾಸನಗಳು ಅಕ್ಷಯಪಾತ್ರೆಗಳಂತಿದ್ದು, ಅಗೆದಷ್ಟು ದೊರೆಯುವ ಮರಳು ರಾಶಿಯಂತೆ ಆಕರ ಸಾಮಗ್ರಿಗಳನ್ನು ಒದಗಿಸುತ್ತಲೇ ಇವೆ. ಕರ್ನಾಟಕದಲ್ಲಿ ದೊರೆಯುವಷ್ಟು ಶಾಸನಗಳು ತಮಿಳುನಾಡನ್ನು ಹೊರತುಪಡಿಸಿದರೆ ಭಾರತದ ಮತ್ತಾವ ರಾಜ್ಯಗಳಲ್ಲೂ ದೊರೆಯುವುದಿಲ್ಲ. ಪ್ರಾಚೀನ ಕನ್ನಡ ಶಾಸನಗಳಲ್ಲಿ ದಾನಶಾಸನಗಳನ್ನು ಬಿಟ್ಟರೆ ಸ್ಮಾರಕ ಶಿಲ್ಪಗಳೇ ಹೆಚ್ಚು. ಈ ರೀತಿ ಹೇರಳವಾಗಿ ದೊರೆಯುವ ಶಾಸನಗಳು ಮತ್ತು ಸ್ಮಾರಕಶಿಲ್ಪಗಳು ನಮ್ಮ ಜನರ ಅನಾದಾರಕ್ಕೆ ಒಳಗಾಗಿರುವುದು ದುರಾದೃಷ್ಟಕರ. ಇವು ಕಾಲಕಳೆಂದಂತೆ ನಾಮಾವಶೇಷವಾಗುವ ಹಾದಿಯಲ್ಲಿವೆ. ಹಾವೇರಿ ಜಿಲ್ಲೆಯ ಶಿಗ್ಗಾಂವಿ, ಸವಣೂರು, ರಾಣೇಬೆನ್ನೂರು ಮತ್ತು ಹಾವೇರಿ ತಾಲೂಕುಗಳಲ್ಲಿಯ ಅನೇಕ ಸ್ಮಾರಕ ಶಿಲ್ಪಗಳು ಒಡೆದು ಎಲ್ಲಂದರಲ್ಲಿ ಬಿದ್ದಿವೆ. ಕೆಲವೆಡೆ ಅವುಗಳ ಕುರಿತು ಐತಿಹಾಸಿಕ ಜ್ಞಾನವಿಲ್ಲದೆ ಅವುಗಳನ್ನು ದೇವಾಲಯಗಳ ಬುನಾದಿಯಲ್ಲಿ ಹಾಕಿ ಕಟ್ಟಡ ಕಟ್ಟಲಾಗಿದೆ. ಇನ್ನೂ ಕೆಲವೆಡೆ ಅವು ದೇವಾಲಯ, ಕೆರೆ, ಹೊಂಡ, ಬಾವಿಗಳ ಮೆಟ್ಟಿಲುಗಳಾಗಿವೆ. ಬಹುಪಾಲು ಸ್ಮಾರಕ ಶಿಲ್ಪಗಳು ಪೂಜಿಸಲ್ಪಟ್ಟುದರ ಪರಿಣಾಮವಾಗಿ ಅರಿಶಿಣ, ಕುಂಕುಮ, ವಿಭೂತಿ, ಹಾಲು, ಮೊಸರು, ಎಣ್ಣೆಗಳ ಅಭಿಷೇಕದಿಂದ ಜಿಡ್ಡುಗಟ್ಟಿವೆ. ಜನಸಮುದಾಯದ ಸಾಮಾಜಿಕ, ಆರ್ಥಿಕ, ಧಾರ್ಮಿಕ ಹಾಗೂ ಸಾಂಸ್ಕøತಿಕ ಜೀವನದ ಕೈಗನ್ನಡಿಗಳಂತಿರುವ ಈ ಸ್ಮಾರಕ ಶಿಲ್ಪಗಳ ಪ್ರತಿಯೊಂದು ಅಂಶಗಳನ್ನು ದಾಖಲಿಸಿ ಅವುಗಳ ಕುರಿತು ಮುಂದಿನ ತೆಲೆಮಾರಿಗೆ ತಿಳಿ ಹೇಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇಂತಹ ಅಮೂಲ್ಯ ಉದ್ದೇಶವನ್ನು ಪ್ರಸ್ತುತ ಅಧ್ಯಯನವು ಹೊಂದಿರುವುದು.

ಭಾರತೀಯ ಮೂಲ ಸಂಸ್ಕ್ರತಿಯ  ನಾಗರೀಕತೆಗಳೊಂದಿಗೆ ನಿರಂತರವಾಗಿ ಸಂಘರ್ಷಿಸುತ್ತಲೇ ಬಂದಿದೆ. ಈ ನಿರಂತರ ಸಂಘರ್ಷದ ನಡುವೆಯೂ ಅದು ತನ್ನ ಅಂತರಂಗದ ಪ್ರಾಚೀನ ಪರಂಪರೆಯ ಸತ್ವವನ್ನು ಇಂದಿಗೂ ಬಿಟ್ಟುಕೊಟ್ಟಿಲ್ಲ. ಇಂತಹ ಪ್ರಾಚೀನ ಭಾರತೀಯ ಸಂಸ್ಕøತಿಯನ್ನು ತಮ್ಮ ಒಡಲಾಳದಲ್ಲಿ ಗರ್ಭೀಕರಿಸಿಕೊಂಡಿರುವ ಪ್ರಮುಖ ಆಕರಗಳೆಂದರೆ ಶಾಸನಗಳು. ಕನ್ನಡ ಶಾಸನ ಪರಂಪರೆಯಲ್ಲಿ ದಾನ ಮತ್ತಿತರ ಪ್ರಕಾರಗಳಂತೆಯೇ ವೀರಗಲ್ಲುಗಳು, ಮಾಸ್ತಿಕಲ್ಲುಗಳು, ನಿಸಿದಿಗಲ್ಲುಗಳು ಮತ್ತು ಆತ್ಮಬಲಿದಾನದ ಸ್ಮಾರಕಶಿಲ್ಪಗಳಿಗೆ ಕೊರೆತೆಯಿಲ್ಲ. ಇದಕ್ಕೆ ಕಾರಣ ಪ್ರಾಚೀನ ಕರ್ನಾಟಕದ ಸಮಾಜವು ದಾನಗುಣ, ವೀರಗುಣ, ಆತ್ಮಬಲಿದಾನ, ವೀರವ್ರತ, ಶರಣಾಗತರ ರಕ್ಷಣೆ, ನುಡಿದಂತೆ ನೆಡೆಯುವುದು ಮುಂತಾದ ಮೌಲ್ಯಗಳಿಗೆ ಮಹತ್ವದ ಸ್ಥಾನವನ್ನು ನೀಡಿ, ಅವು ಜನಜೀವನದ ಅವಿಭಾಜ್ಯ ಅಂಗಗಳೆಂದು ಭಾವಿಸಿರುವುದು. ದುರ್ದೈವದಿಂದ ನಮ್ಮ ನಾಡಿನ ಸ್ಮಾರಕ ಶಿಲ್ಪಗಳ ಪರಿವೀಕ್ಷಣಾ ಕಾರ್ಯ ಸಮರ್ಪಕವಾಗಿ ಪೂರ್ಣ ಪ್ರಮಾಣದಲ್ಲಿ ನಡೆದಿಲ್ಲ. ಈವರೆಗೆ ಪರಿವೀಕ್ಷಿತವಾದ ಸ್ಮಾರಕ ಶಿಲ್ಪಗಳಿಗೆ ಸಂಬಂಧಿಸಿದ ಶಾಸನ ಪಾಠಗಳು ಪ್ರಕಟವಾಗಿವೆಯೇ ಹೊರತು, ಅವುಗಳ ಶಿಲ್ಪಗಳಲ್ಲವೆಂಬುದು ವಿದ್ವಾಂಸರಿಂದ ಒಪ್ಪಿತವಾದ ವಿಚಾರ. ಇದರಿಂದ ಸ್ಮಾರಕಶಿಲ್ಪಗಳ ಒಂದು ಮುಖವನ್ನು ಮಾತ್ರ ಅಧ್ಯಯನ ಮಾಡಿದಂತಾಗಿ, ಶಾಸನ ಪ್ರಕಾರಗಳಲ್ಲಿ ಅಧಿಕ ಸಂಖ್ಯೆಯಲ್ಲಿರುವ ಸ್ಮಾರಕ ಶಿಲ್ಪಗಳ ಅಧ್ಯಯನಕ್ಕೆ ಅನ್ಯಾಯವಾಯಿತು. ಹಾಗಾಗಿ ಇವುಗಳಲ್ಲಿ ಅಡಗಿರುವ ವಿವರಗಳು ಬೆಳಕು ಕಾಣದೆ ಅಧ್ಯಯನದಿಂದ ವಂಚಿತವಾದವು. ಇಂತಹ ಅನೇಕ ಸ್ಮಾರಕ ಶಿಲ್ಪಗಳು ಹಾವೇರಿ ಜಿಲ್ಲೆಯಲ್ಲಿ ಅನಾದಾರಕ್ಕೆ ಒಳಗಾಗಿ ಹಳ್ಳಿಹಳ್ಳಿಗಳಲ್ಲಿ ಅನಾಥವಾಗಿ ಬಿದ್ದಿವೆ. ಈ ನಿಟ್ಟಿನಲ್ಲಿ ಅವುಗಳ ಸಮಗ್ರ ಚಿತ್ರಣವನ್ನು ಅಧ್ಯಯನದ ವ್ಯಾಪ್ತಿಗೆ ಸೀಮಿತಗೊಳಿಸಿಕೊಂಡು ಪರಿಚಯಿಸುವ ಉದ್ದೇಶವನ್ನು ಪ್ರಸ್ತುತ ಅಧ್ಯಯನದಲ್ಲಿ ಹೊಂದಲಾಗಿದೆ. 

ಗತಕಾಲದ ಐತಿಹಾಸಿಕ ವಾಸ್ತವಾಂಶಗಳು ಬದಲಾಗುವುದಿಲ್ಲ, ಅವುಗಳಿಗೆ ಸಂಬಂಧಿಸಿದ ಉಪ ಕಲ್ಪನೆಗಳು ಮಾತ್ರ ಮಾರ್ಪಾಡನ್ನು ಹೊಂದುತ್ತವೆಂಬುದು ಒಪ್ಪಿತವಾದ ವಿಚಾರ. ಸ್ಮಾರಕ ಶಿಲ್ಪಗಳನ್ನು ಭಾಷಿಕವಾಗಿ ಹಾಗೂ ಶಿಲ್ಪವಿನ್ಯಾಸ ದೃಷ್ಟಿಯಿಂದ ದಾಖಲಿಸಿ, ಹಾವೇರಿ ಜಿಲ್ಲೆಯ ಗ್ರಾಮ ಸಮುದಾಯದ ಇತಿಹಾಸವನ್ನು ಕಟ್ಟಿಕೊಡುವ ಮೂಲಕ ಪ್ರಾಚೀನ ಕರ್ನಾಟಕದ ಇತಿಹಾಸದಲ್ಲಿ ಜನಸಾಮಾನ್ಯರ ಪಾಲುದಾರಿಕೆಯನ್ನು ಎತ್ತಿ ತೋರುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಕ್ಷೇತ್ರಕಾರ್ಯದಲ್ಲಿ ಹಾವೇರಿ ಜಿಲ್ಲೆಯ ಸುಮಾರು 748ಕ್ಕೂ ಹೆಚ್ಚು ಹಳ್ಳಿಗಳಿಗೆ ಭೇಟಿಕೊಟ್ಟು, ಆ ಸಮಯದಲ್ಲಿ ಸ್ಮಾರಕ ಶಿಲ್ಪಗಳ ಛಾಯಾಚಿತ್ರಗಳನ್ನು ತೆಗೆದುಕೊಂಡು ಇಲ್ಲಿ ಬಳಸಿಕೊಂಡಿದ್ದೇನೆ. ಈ ದೃಷ್ಟಿಯಿಂದ ನೋಡಿದಾಗ ಕೇವಲ ಶಿಲ್ಪವನ್ನು ಮಾತ್ರ ಹೊಂದಿದ ಸ್ಮಾರಕಶಿಲ್ಪಗಳ ಮಹತ್ವ ಅಪರಿಮಿತವಾಗಿದ್ದು, ಅಂಥ ಹಲವಾರು ಸ್ಮಾರಕಶಿಲ್ಪಗಳ ವಿಶ್ಲೇಷಣೆ ಮೊದಲಬಾರಿಗೆ ಪ್ರಸ್ತುತ ಪ್ರಬಂಧದಲ್ಲಿ ದಾಖಲಾಗುತ್ತಿರುವುದು ಸಂತಸ ತಂದಿದೆ. ಈ ಮೊದಲು ಶಾಸನ ಸಂಪುಟಗಳಲ್ಲಿ ಹಾಗೂ ಇತರೆ ಅಧ್ಯಯನಗಳಲ್ಲಿ ಪ್ರಕಟವಾದ ಸ್ಮಾರಕಶಿಲ್ಪಗಳ ಪಾಠವನ್ನು ಇಲ್ಲಿ ಮನಃಪೂರ್ವಕವಾಗಿ ಬಳಸಿಕೊಳ್ಳಾಲಾಗಿದೆ. ಜಿಲ್ಲೆಯಾದ್ಯಂತ ದೊರೆಯುವ ವೀರಗಲ್ಲುಗಳು, ಮಾಸ್ತಿಗಲ್ಲುಗಳು, ನಿಸಿದಿಗಲ್ಲುಗಳು ಹಾಗೂ ಆತ್ಮಬಲಿದಾನದ ಸ್ಮಾರಕ ಶಿಲ್ಪಗಳನ್ನು ಗುರುತಿಸುವುದರ ಮೂಲಕ ಅವುಗಳ ಶಿಲ್ಪವಿನ್ಯಾಸವನ್ನಾಧರಿಸಿ ವಿಂಗಡಿಸಿಕೊಂಡು ವಿಶ್ಲೇಷಿಸುವ ಗುರಿಯನ್ನು ಹೊಂದಲಾಗಿದೆ. ಸ್ಮಾರಕಶಿಲ್ಪಗಳಿಂದ ತಿಳಿದುಬರುವ ಸಾಂಸ್ಕøತಿಕ ಅಂಶಗಳನ್ನು ಗುರುತಿಸಿ ವಿಶ್ಲೇಷಿಸುವುದು ಈ ಅಧ್ಯಯನದ ಮುಖ್ಯ ಉದ್ದೇಶವಾಗಿದೆ. ಸ್ಮಾರಕಶಿಲ್ಪಗಳ ಅಧ್ಯಯನವು ಆಯಾ ಪ್ರದೇಶದ ಸಂಸ್ಕøತಿ ಮತ್ತು ಪರಂಪರೆಯ ಜೊತೆಗೆ, ಅಲ್ಲಿಯ ಚರಿತ್ರೆ, ಆಡಳಿತ, ಯುದ್ಧಗಳು, ಮತ-ಧರ್ಮಗಳು, ಆಚಾರ-ವಿಚಾರಗಳು, ರೂಢಿ-ಸಂಪ್ರದಾಯಗಳು, ನಂಬಿಕೆಗಳು, ಕುಲ, ಕಸಬು, ಜನಾಂಗ, ಪ್ರಕೃತಿ, ಭಾಷೆ ಮುಂತಾದವುಗಳನ್ನು ದಾಖಲಿಸುವಲ್ಲಿ ಸಹಕಾರಿಯಾಗಿವೆ. ಸ್ಮಾರಕ ಶಿಲ್ಪಗಳಲ್ಲಿಯ ಭಿನ್ನತೆ ಮತ್ತು ಜನಸಾಮಾನ್ಯರು ಅವುಗಳನ್ನು ವಿವಿಧ ನಾಮಗಳಿಂದ ಗುರುತಿಸುವ ಪರಿ, ಆರಾಧಿಸುವ ಬಗೆ ಹಾಗೂ ಅವುಗಳ ಸುತ್ತ ಹೆಣೆದುಕೊಂಡಿರುವ  ಐತಿಹ್ಯಗಳು ಮತ್ತು ಜಾನಪದೀಯ ಸಂಗತಿಗಳನ್ನು ತಿಳಿಯುವ ಉದ್ದೇಶವನ್ನು ಪ್ರಸ್ತುತ ಅಧ್ಯಯನವು ಹೊಂದಿದೆ. ಇಂಥ ವೈವಿಧ್ಯಮಯ ಸ್ಮಾರಕ ಶಿಲ್ಪಗಳ ವಿವರಗಳನ್ನು ಸಂಗ್ರಹಿಸಿ ಆ ಮೂಲಕ ಅವುಗಳನ್ನು ವಿಶ್ಲೇಷಿಸುವ ಉದ್ದೇಶವನ್ನು ಪ್ರಸ್ತುತ ಮಹಾಪ್ರಬಂಧದಲ್ಲಿ ಹೊಂದಲಾಗಿದೆ.
    ಈವರೆಗೆ ಶಾಸನಗಳನ್ನು ಮೂಲ ಸಾಮಗ್ರಿಗಳಾಗಿ ಬಳಸಿಕೊಂಡು ಹೊರಬಂದಿರುವ ಅಧ್ಯಯನಗಳು ಸ್ಮಾರಕ ಶಿಲ್ಪಗಳಲ್ಲಿಯ ಶಾಸನ ಪಾಠವನ್ನು ಯಥೇಚ್ಚವಾಗಿ ಬಳಸಿಕೊಂಡಿರುವುದನ್ನು ಕಾಣುತ್ತೇವೆ. ಸ್ಮಾರಕ ಶಿಲ್ಪಗಳ ಪಾಠವನ್ನು ಪರಿಮಿತವಾಗಿಯೂ, ಅವುಗಳ ಶಿಲ್ಪಗಳನ್ನು ಪ್ರಾಸಂಗಿಕವಾಗಿಯೂ ಬಳಸಿರುವುದುಂಟು. ಇನ್ನೂ ಕೆಲವು ಅಧ್ಯಯನಗಳು ಸ್ಮಾರಕ ಶಿಲ್ಪಗಳ ವಿಷಯ ವಸ್ತುವನ್ನೇ ಪ್ರಧಾನವಾಗಿಟ್ಟುಕೊಂಡು ಸಮಾಜದ ಇನ್ನೊಂದು ಮುಖವನ್ನು ಪರಿಚಯಿಸುವಲ್ಲಿ ಪ್ರಯತ್ನಿಸಿವೆ. ಇಲ್ಲಿ ಸ್ಮಾರಕಶಿಲ್ಪಗಳ ಪಾಠ ಮತ್ತು ಶಿಲ್ಪಗಳೆರಡನ್ನೂ ಬಳಸಿಕೊಳ್ಳಲಾಗಿದೆ. ಈ ರೀತಿ ಪ್ರಾಚೀನ ಸಮಾಜದಲ್ಲಿ ಬದುಕಿಬಾಳಿದ ಜನಸಾಮಾನ್ಯರನ್ನು ದೃಷ್ಟಿಯಲ್ಲಿಟ್ಟುಕೊಂಡು, ಸ್ಮಾರಕ ಶಿಲ್ಪಗಳನ್ನು ಆಧರಿಸಿ ಕರ್ನಾಟಕದಲ್ಲಿ ಈವರೆಗೆ ಕೆಲವಾರು ಅಧ್ಯಯನಗಳು ನಡೆದಿದ್ದು, ಅವುಗಳನ್ನು ಇದೇ ಅಧ್ಯಾಯದ ಅಧ್ಯಯನ ಸಮೀಕ್ಷೆಯಡಿಯಲ್ಲಿ ಹೆಸರಿಸಲಾಗಿದೆ. ಆದರೆ ಆ ಅಧ್ಯಯನಗಳಾವುವೂ ಹಾವೇರಿ ಜಿಲ್ಲೆಯ ಸ್ಮಾರಕ ಶಿಲ್ಪಗಳ ಸಮಗ್ರ ಅಧ್ಯಯನವನ್ನು ಹೊಂದಿರುವುದಿಲ್ಲ. ಈ ಮೊದಲು ಸ್ಮಾರಕ ಶಿಲ್ಪಗಳನ್ನು ಕುರಿತು ಕೈಗೊಂಡ ಅಧ್ಯಯನಗಳು ಪ್ರಸ್ತುತ ಅಧ್ಯಯನಕ್ಕೆ ಪೂರಕವಾಗಿದ್ದರೂ, ಕ್ಷೇತ್ರಕಾರ್ಯವೇ ಅಧ್ಯಯನದ ಜೀವಾಳವಾಗಿದೆ. ಹಾಗಾಗಿ ಪ್ರಸ್ತುತ ಮಹಾಪ್ರಬಂಧದಲ್ಲಿ ಜಿಲ್ಲೆಯಲ್ಲಿ ದೊರೆಯಬಹುದಾದಂತಹ ಎಲ್ಲಾ ಪ್ರಕಾರದ ಸ್ಮಾರಕ ಶಿಲ್ಪಗಳನ್ನು ಅಧ್ಯಯನಕ್ಕೆ ಒಳಪಡಿಸಿ, ಅವುಗಳ ಮಹತ್ವವನ್ನು ವಿಶ್ಲೇಷಣಾತ್ಮಕವಾಗಿ ದಾಖಲಿಸುವುದಲ್ಲದೆ ಅವುಗಳಿಂದ ಹೊರಹೊಮ್ಮುವ ಸಾಂಸ್ಕøತಿಕ ಅಂಶಗಳನ್ನು ಪರಿಪೂರ್ಣವಾಗಿ ನಿರೂಪಿಸಲು ಪ್ರಯತ್ನಿಸಲಾಗಿದೆ. ಸ್ಮಾರಕ ಶಿಲ್ಪಗಳ ಶಿಲ್ಪವಿನ್ಯಾಸವನ್ನು ನಿರೂಪಿಸುವ ಸಂದರ್ಭದಲ್ಲಿ ಕೆಲವು ಕಡೆ ಸ್ವಲ್ಪಮಟ್ಟಿನ ಏಕತಾನತೆ ಕಾಣುತ್ತದೆ ಎನ್ನುವುದು ನಿಜವಾದರೂ, ದೊರೆತ ಪ್ರತಿಯೊಂದು ಸ್ಮಾರಕಶಿಲ್ಪವನ್ನು ಬಿಡದೆ ಒಂದಿಲ್ಲೊಂದು ಕಡೆ ವಿವರಿಸುವ ಪ್ರಯತ್ನವನ್ನು ಇಲ್ಲಿ ಪ್ರಾಮಾಣಿಕವಾಗಿ ಮಾಡಲಾಗಿದೆ. 

ಅಧ್ಯಯನದ ವ್ಯಾಪ್ತಿ
    ಪ್ರಸ್ತುತ ಅಧ್ಯಯನಕ್ಕೆ ಹಾವೇರಿ ಜಿಲ್ಲೆಯ ಭೌಗೋಳಿಕ ಪ್ರದೇಶವೇ ವ್ಯಾಪ್ತಿಯಾಗಿದ್ದರೂ, ಸುತ್ತಮುತ್ತಲಿನ ಜಿಲ್ಲೆಯ ಬೇರೆ ಬೇರೆ ಪ್ರದೇಶಗಳಿಂದ ಮಾಹಿತಿಯನ್ನು ಪಡೆದು ಸಂದರ್ಭೋಚಿತವಾಗಿ ಬಳಸಿಕೊಳ್ಳಲಾಗಿದೆ. ಹಾವೇರಿ ಜಿಲ್ಲೆಯು ಹಾನಗಲ್ಲು, ಬ್ಯಾಡಗಿ, ಹಿರೇಕೆರೂರು, ರಟ್ಟಿಹಳ್ಳಿ, ರಾಣೇಬೆನ್ನೂರು, ಹಾವೇರಿ, ಸವಣೂರು ಮತ್ತು ಶಿಗ್ಗಾಂವಿ ಎಂಬ ಎಂಟು ತಾಲೂಕುಗಳನ್ನು ಒಳಗೊಂಡಿದ್ದು, ಈ ತಾಲೂಕುಗಳಲ್ಲಿ ಬರುವ ಸುಮಾರು 748ಕ್ಕೂ ಹೆಚ್ಚು ಗ್ರಾಮಗಳು ಮತ್ತು ಸ್ಥಳಾಂತರಗೊಂಡ ಜನವಸತಿಗಳಲ್ಲಿನ ಸ್ಮಾರಕ ಶಿಲ್ಪಗಳನ್ನು ಅಧ್ಯಯನದ ವ್ಯಾಪ್ತಿಗೆ ಒಳಪಡಿಸಲಾಗಿದೆ.
    ಹಾವೇರಿ ಜಿಲ್ಲೆಯಲ್ಲ್ಲಿ ಬಾದಾಮಿ ಚಾಲುಕ್ಯರಿಂದ ಮೊದಲ್ಗೊಂಡು ವಿಜಯನಗರೋತ್ತರ ಕಾಲದವರೆಗಿನ ಸ್ಮಾರಕ ಶಿಲ್ಪಗಳು ಕಂಡುಬರುತ್ತವೆ. ರಾಣೆಬೆನ್ನೂರು ತಾಲೂಕಿನ ಕ್ರಿ.ಶ.703-04ರ ಬಾದಾಮಿ ಚಾಲುಕ್ಯರ ವಿಜಯಾದಿತ್ಯನ ಕಾಲಾವಧಿಯ ಬೆನಕನಕೊಂಡ1 ವೀರಗಲ್ಲು ಪ್ರಸ್ತುತ ಅಧ್ಯಯನ ಪ್ರದೇಶದಲ್ಲಿ ದೊರೆಯುವ ಅತ್ಯಂತ ಪ್ರಾಚೀನ ಸ್ಮಾರಕ ಶಿಲ್ಪವಾಗಿದೆ. ಇದನ್ನು ಹೊರತುಪಡಿಸಿದರೆ ಬಾದಾಮಿ ಚಾಲುಕ್ಯರ ಎರಡನೆಯ ವಿಕ್ರಮಾದಿತ್ಯನ ಕಾಲಾವಧಿಯ ಬ್ಯಾಡಗಿ ತಾಲೂಕಿನ ಚಿಕ್ಕನಂದಿಹಳ್ಳಿಯ2 ವೀರಗಲ್ಲು ಮತ್ತು ಸಿಡೇನೂರಿನಲ್ಲಿ3 ದೊರೆತ ಎರಡು ವೀರಗಲ್ಲುಗಳು ಜಿಲ್ಲೆಯ ಪ್ರಾಚೀನ ಸ್ಮಾರಕ ಶಿಲ್ಪಗಳಾಗಿವೆ. ಹಾನಗಲ್ಲು ತಾಲೂಕಿನ ತಿಳವಳ್ಳಿಯ4 ಕ್ರಿ.ಶ.17ನೇ ಶತಮಾನದ ವೀರಗಲ್ಲು ಮತ್ತು ಹಿರೇಕೆರೂರು ತಾಲೂಕಿನ ತೋಟಗಂಟಿಯ5 ಕ್ರಿ.ಶ.1536ರ ಹಾಗೂ ಶಿರಗಂಬಿಯ6  ಕ್ರಿ.ಶ.1528ರ ಮಾಸ್ತಿಕಲ್ಲುಗಳು ಜಿಲ್ಲೆಯ ಇತ್ತೀಚಿನ ಸ್ಮಾರಕ ಶಿಲ್ಪಗಳಾಗಿವೆ. ಅಲ್ಲದೆ ಹದಿನಾರನೆಯ ಶತಮಾನದವುಗಳೆಂದು ಹೇಳಲಾಗುವ ಎರಡು ಬಂದೂಕು ವೀರಗಲ್ಲುಗಳು ಜಿಲ್ಲೆಯ ಗುತ್ತಲ ಮತ್ತು ಕಚವಿ ಗ್ರಾಮಗಳಲ್ಲಿ ಸಿಕ್ಕಿವೆ. ಯುದ್ಧದಲ್ಲಿ ಬಂದೂಕುಗಳು ಮತ್ತು ಸಿಡಿಮದ್ದುಗಳು ಬಳಕೆಯಾಗಿರುವುದು ಹದಿನಾರನೆಯ ಶತಮಾನದ ಕೊನೆಯಲ್ಲಿ ಎಂಬುದು ವಿದ್ವಾಂಸರ ಅಭಿಪ್ರಾಯವಾಗಿದೆ. ಆ ಹಿನ್ನೆಲೆಯಲ್ಲಿ ಪ್ರಸ್ತುತ ಅಧ್ಯಯನದ ಕಾಲಮಿತಿಯನ್ನು ಎಂಟನೆಯ ಶತಮಾನದ ಆರಂಭದಿಂದ ಹದಿನಾರನೆಯ ಶತಮಾನದ ಅಂತ್ಯದವರೆಗೆ ಹಾಕಿಕೊಳ್ಳಲಾಗಿದೆ. ಜಿಲ್ಲೆಯ ರಾಜಕೀಯ ಇತಿಹಾಸ ಮತ್ತಿತರ ವಿಷಯಗಳನ್ನು ಪ್ರಸ್ತಾಪಿಸುವಾಗ ಶಾತವಾಹನರ, ಕದಂಬರ, ಗಂಗರ ಅಲ್ಲದೆ ಅದಕ್ಕೂ ಹಿಂದಿನ ಆಳರಸರ ಕಾಲದ ಘಟನಾವಳಿಗಳನ್ನು ಅಧ್ಯಯನದ ಅವಶ್ಯಕತೆಗನುಗುಣವಾಗಿ ಬಳಸಿಕೊಳ್ಳಲಾಗಿದೆ. ವಿಷಯ ವ್ಯಾಪ್ತಿಯಿಂದ ನೋಡುವುದಾದರೆ ಅಧ್ಯಯನ ಪ್ರದೇಶದ ಎಲ್ಲಾ ಕಾಲಾವಧಿಯ ಪ್ರಕಟಿತ ಹಾಗೂ ಅಪ್ರಕಟಿತ ಸ್ಮಾರಕ ಶಿಲ್ಪಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಪ್ರಮುಖವಾಗಿ ವೀರಗಲ್ಲುಗಳು, ಮಹಾಸತಿ ಕಲ್ಲುಗಳು, ನಿಸಿದಿ ಕಲ್ಲುಗಳು ಹಾಗೂ ಆತ್ಮಬಲಿದಾನದ ಸ್ಮಾರಕ ಶಿಲ್ಪಗಳನ್ನಲ್ಲದೆ, ತಲೆಗೊಟ್ಟು, ಜೋ¿ವಾಳಿ, ವೇ¿ವಾ¿Â, ಲೆಂಕ, ಕೀಳ್ಗುಂಟೆ, ಕೀಳ್ಪೊಗು, ಗರುಡ, ಸಿಡಿತಲೆ, ಶೂಲಬಲಿ, ರುಂಡಸಮರ್ಪಣೆ, ಶಿರಬಲಿ, ಗುಂಡಬ್ರಹ್ಮಯ್ಯಗಳು, ಉರಿಉಯ್ಯಾಲೆ ಮುಂತಾದ ಸ್ಮಾರಕ ಶಿಲ್ಪಗಳನ್ನು ಗುರುತಿಸಿ ಅಧ್ಯಯನದಲ್ಲಿ ಬಳಸಿಕೊಳ್ಳಲಾಗಿದೆ. ಸ್ಮಾರಕ ಶಿಲ್ಪಗಳಿಗೆ ಸಂಬಂಧಿಸಿದಂತೆ ಆಯಾ ಪ್ರದೇಶದಲ್ಲಿ ಆಚರಣೆಯಲ್ಲಿರುವ ರೂಢಿ-ಸಂಪ್ರದಾಯಗಳು, ಆಚಾರ-ವಿಚಾರಗಳು, ನಂಬಿಕೆ-ಆರಾಧನೆಗಳು, ಜಾತ್ರೆ-ಉತ್ಸವಗಳನ್ನು ಸಂದರ್ಭೋಚಿತವಾಗಿ ದಾಖಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮೌಖಿಕ ಐತಿಹ್ಯ, ಜಾನಪದ ಕಥನಗಳು, ವಿದೇಶಿ ಪ್ರವಾಸಿಗರ ದಿನಚರಿಗಳು ಹಾಗೂ ಈ ಹಿಂದೆ ನೆಡೆದ ಇಂತಹ ಅಧ್ಯಯನಗಳಲ್ಲಿ ರೂಪಗೊಂಡ ಸಿದ್ಧಾಂತಗಳು ಮತ್ತು ಅಭಿಪ್ರಾಯಗಳನ್ನು ಪ್ರಸ್ತುತ ಅಧ್ಯಯನದಲ್ಲಿ ಬಳಸಿಕೊಳ್ಳಲಾಗಿದೆ. ವಿಶೇಷವಾಗಿ ಅಧ್ಯಯನ ಪ್ರದೇಶದಲ್ಲಿ ಲಭ್ಯವಿರುವ ಸಮಗ್ರ ಸ್ಮಾರಕ ಶಿಲ್ಪಗಳ ಸಾಂಸ್ಕøತಿಕ ಇತಿಹಾಸವನ್ನು ಪರಿಪೂರ್ಣವಾಗಿ ಹಾಗೂ ವಿಶ್ಲೇಷಣಾತ್ಮಕವಾಗಿ ಈ ಮಹಾಪ್ರಬಂಧದಲ್ಲಿ ಕಟ್ಟಿಕೊಡುವ ಪ್ರಯತ್ನವನ್ನು ಮಾಡಲಾಗಿದೆ.

ವೀರಮರಣದ ಸ್ಮಾರಕ ಶಿಲ್ಪಗಳು
     ವೀರಗಲ್ಲುಗಳನ್ನು ಸೈದ್ಧಾಂತಿಕವಾಗಿ ವಿಶ್ಲೇಷಿಸಬೇಕಾದಲ್ಲಿ ಅವುಗಳ ಉಗಮ, ಸ್ವರೂಪ, ಐತಿಹಾಸಿಕ ಪ್ರಾಮುಖ್ಯತೆ ಹಾಗೂ ಅವುಗಳು ಬೆಳೆದು ಬಂದ ರೀತಿಯ ಬಗ್ಗೆ ಅರಿವಿರಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯ ವೀರಗಲ್ಲುಗಳ ವಿವರಣಾತ್ಮಕ ನಿರೂಪಣೆಯ ಪೂರ್ವದಲ್ಲಿ ಅವುಗಳ ಉಗಮ, ಸ್ವರೂಪ, ಬೆಳವಣಿಗೆ, ಅವುಗಳನ್ನು ನಿಲ್ಲಿಸುತ್ತಿದ್ದವರು, ನಿಲ್ಲಿಸುತ್ತಿದ್ದ ಸ್ಥಳ ಹಾಗೂ ವೀರಗಲ್ಲುಗಳಲ್ಲಿಯ ಸ್ವರ್ಗದ ಕಲ್ಪನೆಯ ಬಗ್ಗೆ ಚರ್ಚಿಸಲಾಗಿದೆ.
ವೀರಗಲ್ಲುಗಳ ಉಗಮ 
     ಸಾವು ಎಂಬುದು ಮನುಷ್ಯನ ಜೀವನದಲ್ಲಿ ಆಕಸ್ಮಿಕವಾಗಿ ಜರುಗುವ ಒಂದು ಘಟನೆ. ಸಾವು ದೇಹಕ್ಕೆ ಹೊರತು ಆತ್ಮಕ್ಕಲ್ಲ ಎಂಬ ಭಾವನೆ ಸತ್ತ ನಂತರವೂ ಅವನ ಅಸ್ಥಿತ್ವವನ್ನು ಉಳಿಸಿಕೊಳ್ಳುವ ಮನೋಭಾವನೆಗೆ ಕಾರಣವಾಯಿತು. ಇಂಥ ಮನೋಭಾವನೆ ಮುಂದಿನ ದಿನಮಾನಗಳಲ್ಲಿ ಸತ್ತ ದೇಹದ ಅಂತ್ಯಸಂಸ್ಕಾರ ವಿಧಿ-ವಿಧಾನಗಳಿಗೆ ದಾರಿ ಮಾಡಿಕೊಟ್ಟಿತು. ಸತ್ತ ವ್ಯಕ್ತಿಯೊಂದಿಗಿನ ಭಾವನಾತ್ಮಕ ಸಂಬಂಧಗಳು ಆತನಲ್ಲಿ ಪ್ರೀತಿಯನ್ನು ಹುಟ್ಟಿಸಿದರೆ, ಅವನ ಕಳೇಬರ ಭೀತಿಯನ್ನು ಹುಟ್ಟಿಸುತ್ತಿತ್ತು. ಈ ಭಯ ಮಿಶ್ರಿತ ಪ್ರೀತಿಯು ಮಾನವನ ಇತಿಹಾಸದಲ್ಲಿ ಶವ ಸಂಸ್ಕಾರ ಪದ್ಧತಿ ಹಾಗೂ ಸತ್ತ ವ್ಯಕ್ತಿಯ ಜ್ಞಾಪಕಾರ್ಥರವಾಗಿ ಸ್ಮಾರಕಗಳನ್ನು ನಿರ್ಮಿಸುವ ಪರಿಪಾಠಕ್ಕೆ ನಾಂದಿಯಾಯಿತು. ಮಾನವ ಸಂಸ್ಕøತಿಯಲ್ಲಿ ಸಾವಿನ ನಂತರದ ಜೀವನದ ಬಗ್ಗೆ ಕೆಲವು ಕಲ್ಪನೆಗಳು ಮತ್ತು ನಂಬಿಕೆಗಳು ಬೆಳೆದು ಬಂದವು. ಸತ್ತ ವ್ಯಕ್ತಿಯು ತನ್ನ ಸಾವಿನ ನಂತರವೂ ಇಹ ಜೀವನದಂತೆ ಕೆಲವು ಅಗತ್ಯತೆಗಳನ್ನು ಹೊಂದಿರುತ್ತಾನೆ. ಅಂತಹ ಅಗತ್ಯತೆಗಳನ್ನು ಪೂರೈಸುವುದು ತಮ್ಮ ಕರ್ತವ್ಯವೆಂದು ಬಗೆಯುವ ಮನೋಧರ್ಮ ಸಮಾಜದಲ್ಲಿ ಬೇರೂರಿತು. ಅಲ್ಲದೆ ಸತ್ತ ವ್ಯಕ್ತಿಯ ಆತ್ಮ ಸಂತೃಪ್ತಿಗೊಳ್ಳದಿದ್ದರೆ ಅದು ತಮಗೆ ಕೆಡುಕನ್ನುಂಟು ಮಾಡಬಹುದೆಂಬ ಭೀತಿ ಶವ ಸಂಸ್ಕಾರ ಪದ್ಧತಿಯ ಹುಟ್ಟಿಗೆ ಕಾರಣವಾಯಿತು. ಸತ್ತ ವ್ಯಕ್ತಿ ದೈವ ಸಮಾನನೆಂದು ಬಗೆದು ಆತನ ನೆನಪಿಗಾಗಿ ಸ್ಮಾರಕ ನಿರ್ಮಿಸುವ ಪರಿಪಾಠ ಬೆಳೆದು ಬಂದಿತು. ಸಾವು ಎಂಬುದು ಸಾರ್ವರ್ತಿಕವಾಗಿರುವುದರಿಂದ ಇಂತಹ ಮನೋಭಾವನೆ ಪ್ರಪಂಚದ ಎಲ್ಲ ಜನಾಂಗಳಲ್ಲಿಯೂ ಸಹಜವಾಗಿ ಕಂಡುಬರುತ್ತದೆ ಎಂದು ಹೇಳಬಹುದು.

ಆರಂಭದಲ್ಲಿ ಸತ್ತ ವ್ಯಕ್ತಿಯ ಶವ ಸಂಸ್ಕಾರ ಮಾಡಿದ ಸ್ಥಳದಲ್ಲಿ ಮಣ್ಣಿನ ದಿಣ್ಣೆ ಮಾಡುವುದು, ಕಲ್ಲುಗಳನ್ನು ಗುಡ್ಡೆ ಹಾಕುವುದನ್ನು ಮಾಡಲಾಗುತ್ತಿತ್ತು. ಅಲ್ಲದೆ ಸತ್ತವನ ಬೂದಿ ಮತ್ತು ಮೂಳೆಗಳನ್ನು ಸಂಗ್ರಹಿಸಿ ಶವ ಸಂಸ್ಕಾರ ಪದ್ಧತಿಯಂತೆಯೇ ಹೂಳಲಾಗುತ್ತಿತ್ತು. ಹಾಗಾಗಿಯೇ ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ಇಂಥ ಕಲ್ಲು ವೃತ್ತಗಳು ಇಂದಿಗೂ ಕಂಡುಬರುತ್ತವೆ. ಈ ರೀತಿಯ ಸ್ಮಾರಕಗಳಿಗಾಗಿ ಬಳಸಿರುವ ಪ್ರಮುಖ ವಸ್ತುವೆಂದರೆ ಶಿಲೆ. ಬೃಹತ್ ಶಿಲಾಯುಗದ ಮಾನವನು ಸತ್ತ ದೇಹವನ್ನು ಹೂಳಿದ ಸ್ಥಳದಲ್ಲಿ ನಿಲಸಕಲ್ಲುಗಳನ್ನು ನೆಡುವುದು, ವೃತ್ತಾಕಾರದಲ್ಲಿ ಕಲ್ಗುಪ್ಪಿಗಳನ್ನು ನೆಡುವುದು ಮತ್ತು ಬೃಹತ್ ಶಿಲಾಗೋರಿಗಳನ್ನು ನಿರ್ಮಿಸುತ್ತಿದ್ದನು.2 ನಿಲಸಕಲ್ಲುಗಳು ಆದಿ ಕಬ್ಬಿಣಯುಗದ ಬೃಹತ್ ಶಿಲಾ ಸಂಸ್ಕøತಿಯ ಜನಸಮುದಾಯದ ಸಮಾಧಿಯ ಗುರುತೆಂಬುದು ಕರ್ನಾಟಕದ ನೆಲೆಗಳಲ್ಲಿ ನಡೆಸಲಾದ ಉತ್ಖನನಗಳಿಂದ ಖಚಿತಪಟ್ಟಿದೆ. ಶವ ಕುಣಿಯಿಂದ ಅಸ್ಥಿ ಅವಶೇಷಗಳನ್ನು ಸಂಗ್ರಹಿಸಿ ಅವುಗಳನ್ನು ಇನ್ನೊಂದು ಕುಣಿಯಲ್ಲಿ ಪ್ರಾಯಶಃ ಆಹಾರ, ಧಾನ್ಯ, ಪಾನೀಯಗಳು ತುಂಬಿದ ಮಣ್ಪಾತ್ರೆಗಳು, ಕಬ್ಬಿಣದ ಉಪಕರಣಗಳು ಮುಂತಾದ ವಸ್ತುಗಳನ್ನಿಟ್ಟು ಮುಚ್ಚಿ, ಕುಣಿಯ ಮೇಲೆ ಇಂಥ ಕಲ್ಲನ್ನು ನೆಡಲಾಗುತ್ತಿತ್ತು. ಪಶ್ಚಿಮ ಯೂರೋಪಿನ ಕೆಲವು ಪ್ರದೇಶಗಳಲ್ಲಿ ಇಂಥ ನಿಲಸಕಲ್ಲು ನೆಲೆಗಳಿವೆ.3 ಹೀಗೆ ಗತಿಸಿದ ವ್ಯಕ್ತಿಯನ್ನು ಸಮಾಧಿ ಮಾಡಿದ ಸ್ಥಳದಲ್ಲಿ ಮಡಿದವನ ಸ್ಮರಣೆಗಾಗಿ ಅಥವಾ ಆ ಸ್ಥಳದ ಗುರುತಿಗಾಗಿ ಸಂಕೇತಗಳನ್ನು ನೆಡುತ್ತಿದ್ದರು. ಇದು ದೇಶದಿಂದ ದೇಶಕ್ಕೆ, ಕಾಲದಿಂದ ಕಾಲಕ್ಕೆ ಬದಲಾವಣೆಗೊಂಡು ಆಯಾ ಧರ್ಮ, ನಂಬಿಕೆ, ಸಂಪ್ರದಾಯಗಳನ್ನು ಅನುಸರಿಸಿ ಬೆಳೆದಿದೆ. ಹಾಗೆ ನೋಡಿದರೆ ಬೃಹದಾಕಾರದ ಪಿರಾಮಿಡ್ಡುಗಳು ಸಹ ಇದೇ ರೀತಿಯ ಸ್ಮಾರಕಗಳೇ. ಈ ನಿಟ್ಟಿನಲ್ಲಿ ಬೌದ್ಧ ಸ್ತೂಪಗಳನ್ನು ಪರಿಗಣಿಸಬಹುದಾದರೂ, ಇಲ್ಲಿ ನಾವು ಗ್ರಹಿಸಬೇಕಾಗಿರುವ ಸ್ಮಾರಕ ಶಿಲ್ಪಕ್ಕೆ ನಿರ್ದಿಷ್ಟ ಉದ್ದೇಶಗಳಿವೆ ಎಂಬುದನ್ನು ಮನಗಾಣಬೇಕಾಗಿದೆ. 

ವೇದಗಳಲ್ಲಿ ಬರುವ ‘ಪಿತೃ ಮೇಧ’ ಎಂಬ ವಿಧಿಯಲ್ಲಿ ಪ್ರಮುಖವಾಗಿ ನಾಲ್ಕು ಆಚರಣೆಗಳು ಬರುತ್ತಿದ್ದು, ಅದರಲ್ಲಿಯ ನಾಲ್ಕನೆಯ ವಿಧಿಯಲ್ಲಿ ಸತ್ತ ವ್ಯಕ್ತಿಯ ಶವ ಸಂಸ್ಕಾರ ಮಾಡಿದ ಸ್ಥಳದಲ್ಲಿ ಸ್ಮಾರಕವನ್ನು ನಿರ್ಮಿಸುವ ಮಾಹಿತಿ ಇದೆ. ಶತಪಥ ಬ್ರಾಹ್ಮಣದಲ್ಲಿಯೂ ಮಡಿದವರಿಗಾಗಿ ಸ್ಮಾರಕವನ್ನು ನೆಡುವ ಪ್ರಸ್ತಾಪವಿದೆ. ಕಾಮಿಕ, ಕಾರಣ, ಚಿಂತ್ಯಾ, ಕಿರಣ, ಮಕುಟ, ದೀಪ್ತ, ಮಾತಂಗ-ಪರಮೇಶ್ವರ ಮತ್ತು ಯೋಜನ ಮುಂತಾದ ಆಗಮಗಳು ಸ್ಮಾರಕಗಳ ಬಗ್ಗೆ ಮಾಹಿತಿ ನೀಡುತ್ತವೆ. ರೌರವಾಗಮದ ಸಂಪೂರ್ಣ ಒಂದು ಅಧ್ಯಾಯವೇ ಸ್ಮಾರಕಗಳ ವಿವರವನ್ನು ಒಳಗೊಂಡಿದೆ.4 ಆರ್ಯರ ಶವ ಸಂಸ್ಕಾರದ ಬಗ್ಗೆ ಋಗ್ವೇದದಲ್ಲಿ ಬರುವ “sಣhuಟಿಚಿ” (Pಡಿobಚಿbಟಥಿ ಚಿ ತಿooಜeಟಿ ಠಿosಣ) ನೆಡುವುದು ಸ್ಮಾರಕದ ಕುರುಹು ಆಗಿದೆ.5 ಪ್ರಾಚೀನ ಸಂಗಮ್ ಕಾಲದ ತಮಿಳು ಕೃತಿಗಳಲ್ಲಿ ವೀರರಿಗಾಗಿ ಮತ್ತು ಮಹಾಸತಿಯರಿಗಾಗಿ ಸ್ಮಾರಕಗಳನ್ನು ನಿರ್ಮಿಸಿರುವುದನ್ನು ಕಾಣಬಹುದು. ಸಂಗಮ್ ಸಾಹಿತ್ಯದ ತೋಳ್ಕಾಪ್ಪಿಯಂ, ಅಕನಾನೂರು, ಪುರನಾನೂರು, ಮಲೈಪಡುಕದಂ, ಐಗುರುನೂರು, ಪಟ್ಟಿನಪಲೈ ಮುಂತಾದ ಕೃತಿಗಳಲ್ಲಿ ವೀರಗಲ್ಲುಗಳ ಬಗ್ಗೆ ಮಾಹಿತಿ ಇದೆ. ‘ನಾಡುಕಲ್’ಗಳೆಂದು ಕರೆಯಲ್ಪಡುವ  ಇವು ಮೊದಮೊದಲು ಬೃಹತ್ ಗಾತ್ರದಲ್ಲಿದ್ದು, ಕ್ರಮೇಣ ವೀರಗಲ್ಲುಗಳ ಗಾತ್ರಕ್ಕೆ ಇಳಿದುದರ ಮಾಹಿತಿಯನ್ನು ಈ ಗ್ರಂಥಗಳಿಂದ ತಿಳಿದುಕೊಳ್ಳಬಹುದು.6 ಆಂದ್ರಪ್ರದೇಶದ ನಾಗಾರ್ಜುನಕೊಂಡದಲ್ಲಿ ಕಂಡುಬರುವ ಛಾಯಸ್ಥಂಭಗಳು ಸಹ ವೀರಗಲ್ಲುಗಳಾಗಿದ್ದು, ಕ್ರಿ.ಶ. ಎರಡು ಅಥವಾ ಮೂರನೆಯ ಶತಮಾನಕ್ಕೆ ಸೇರಿದವುಗಳಾಗಿವೆ. ಇಕ್ಷ್ವಾಕು ಮನೆತನಕ್ಕೆ ಸೇರಿದ ಇವು ಶಾಸನ ಪಾಠವಲ್ಲದೆ ಯುದ್ಧ ಸನ್ನಿವೇಶದ ಶಿಲ್ಪಗಳನ್ನು ಸಹ ಹೊಂದಿವೆ.

ಅಂತ್ಯಸಂಸ್ಕಾರದ ನಂತರ ಸ್ಮಾರಕ ಕಲ್ಲುಗಳನ್ನು ನೆಡುವ ಪರಿಪಾಠ ಮಧ್ಯ ಭಾರತದ ಮಾರಿಯಾ ಜನಾಂಗದವರಲ್ಲಿ ರೂಡಿಯಲ್ಲಿತ್ತು. ‘ಉರಸ್ ಕಲ್’ ಎಂದು ಕರೆಲ್ಪಡುವ ಇವುಗಳನ್ನು ನೆಡುವ ಪೂರ್ವದ ಕಥೆಯೊಂದು ತುಂಬಾ ವಿಶಿಷ್ಟವಾಗಿದೆ. ಸತ್ತ ವ್ಯಕ್ತಿಯ ಸಹೋದರಿಯ ಮಗ ಈ ಕಾರ್ಯವನ್ನು ಪೂರೈಸುವವನಾಗಿ, ತಮಟೆಗಳೊಂದಿಗೆ ಬಂಡೆಯಿರುವ ಸ್ಥಳಕ್ಕೆ ಹೋಗಿ, ಕಲ್ಲನ್ನು ಕೊಂಡೊಯ್ಯುವಾಗ ಹಗುರವಾಗಲಿ ಎಂದು ಪ್ರಾರ್ಥಿಸಿ, ಆ ಮೂಲಕ ಕಲ್ಲನ್ನು ಅಲ್ಲಿಂದ ತೆಗೆದುಕೊಂಡು, ಶಿಲೆಯನ್ನು ಹೂಳಲು ನಿಗದಿ ಮಾಡಿರುವ ಸ್ಥಳಕ್ಕೆ ಬರುತ್ತಾರೆ. ತದನಂತರ ಸತ್ತವನನ್ನು ಉದ್ದೇಶಿಸಿ “ನೀನು ಸತ್ತು ಹೊಗಿದ್ದೀಯ, ಇನ್ನು ಮುಂದೆ ನೀನು ನಿನ್ನ ಸಂಸಾರವನ್ನು ಮರೆತು ಇಲ್ಲಿಯೇ ಇರಬೇಕು. ನಿನಗೆ ಬೇಕಾದ ಆಹಾರವನ್ನು ನಾವೇ ಕೊಡುತ್ತೇವೆ. ನೀನು ನಮ್ಮನ್ನಾಗಲೀ, ನಮ್ಮ ದನಕರುಗಳನ್ನಾಗಲೀ, ಹಂದಿಗಳಿಗಾಗಲೀ ತೊಂದರೆಗೀಡು ಮಾಡಬೇಡ” ಎಂದು ಹೇಳುತ್ತಾರೆ. ಮುಂದೆ ಹೆಣವನ್ನು ಹುಗಿಯಲು ಅಣಿಗೊಳಿಸಿದ ಕುಣಿಯಲ್ಲಿ ಸಂಬಂಧಿಗಳು ಆಹಾರ, ಹಣ, ಉಂಗುರಗಳನ್ನು ಹಾಕುತ್ತಾರೆ. ತದನಂತರ ಕಲ್ಲನ್ನು ಕುಣಿಯಲ್ಲಿ ನಿಲ್ಲಿಸುತ್ತಾರೆ, ಈ ಸಂಸ್ಕಾರ ವಿಧಿಗಳು ಮುಗಿದ ನಂತರ ಮನೆಗೆ ಬಂದು ಹಸುಗಳನ್ನು ಬಲಿಕೊಟ್ಟು, ಅದರ ಕರುಳನ್ನು ಅನ್ನದೊಂದಿಗೆ ಬೇಯಿಸಿ ಸತ್ತವನಿಗೆ, ಭೂದೇವಿಗೆ ಹಾಗೂ ಈ ಮೊದಲು ಹಾಕಲ್ಪಟ್ಟ ಸ್ಮಾರಕ ಶಿಲೆಗಳ ಮುಂದೆ ಎಡೆಯ ರೂಪದಲ್ಲಿ ಸಮರ್ಪಿಸುತ್ತಾರೆ.

ಇಂತಹ ಅನೇಕ ವಿಧಿಗಳು ಭಾರತದ ಅನೇಕ ಜನಾಂಗಗಳಲ್ಲಿರುವುದು ಕಂಡುಬರುತ್ತದೆ. ಗೊಂಡ ಜನಾಂಗದವರು, ತಮ್ಮ ಜನಾಂಗದ ಮೃತ ಆತ್ಮಗಳು ನೆಲೆಸಲು ಸ್ಮಾರಕ ಶಿಲೆಗಳನ್ನು ನೆಡುತ್ತಾರೆ. ನೀಲಗಿರಿಯ ಕುರುಬ ಜನಾಂಗದವರು ಈ ಉದ್ದೇಶಕ್ಕಾಗಿ ‘ಸಾವು ಮನೆ’ಗಳನ್ನು ನಿರ್ಮಿಸುತ್ತಾರೆ. ಇನ್ನು ಮಣಿಪುರದ ನಾಗಾ ಜನಾಂಗದವರು ಈ ರೀತಿಯ ಕಲ್ಲುಗಳನ್ನು ನೆಟ್ಟರೆ, ಬಿಲ್ಲ ಜನಾಂಗದವರು ತಮ್ಮ ಮುಖ್ಯಸ್ಥನು ಸತ್ತರೆ, ಅವನಿಗಾಗಿ ದೇವಸ್ಥಾನ ನಿರ್ಮಿಸಿ ದೇವಾಲಯದಲ್ಲಿ ಸತ್ತ ವ್ಯಕ್ತಿಯನ್ನು ಕುದುರೆ ಮೇಲೆ ಕುಳಿತಿರುವ ಹಾಗೆ ಕಂಡÀರಿಸಿ ಮೂರ್ತಿ ಸ್ಥಾಪಿಸುತ್ತಾರೆ. ಸಾಲುಸಾಲಾಗಿ, ದುಂಡಾಗಿ, ಲಾಳಾಕಾರವಾಗಿ ನಿರ್ಮಿಸಲಾಗುತ್ತಿದ್ದ ಇಂತಹ ಸ್ಮಾರಕಗಳ ಸ್ಥಾಪನೆಯ ಹಿಂದೆ ಇರುವ ಮನೋಧರ್ಮ ಒಂದೇ ಆಗಿದ್ದು, ಅದೇನೆಂದರೆ ಸತ್ತ ವ್ಯಕ್ತಿ ತನ್ನ ಕುಟುಂಬದವರಿಗೆ ಕಷ್ಟದಲ್ಲಿ ಸಹಾಯ ಮಾಡುತ್ತಾನೆ ಮತ್ತು ಸತ್ತವನಿಂದ ತಮಗೆ ಯಾವುದೇ ತೊಂದರೆ ಉಂಟಾಗದಿರಲೆಂದು. ಸತ್ತವನ ಆತ್ಮ ಶಾಂತಿಗಾಗಿ ಈ ಕಲ್ಲಿನಲ್ಲಿ ರಕ್ಷಣೆ ಪಡೆಯಲಿ ಎನ್ನುವುದಲ್ಲದೆ ತಾನು ಋಣಮುಕ್ತನಾದೆ ಎಂಬ ಮನೋಭಿಲಾಷೆ ಇದರಲ್ಲಿ ಅಡಗಿದೆ.

ತಮ್ಮ ವಂಶದ ಅಥವಾ ಊರಿನ ವ್ಯಕ್ತಿಯೊಬ್ಬ ಗ್ರಾಮದ ದನಗಳನ್ನು ರಕ್ಷಿಸಲು ಅಥವಾ ಇನ್ನಾವುದೇ ಯುದ್ಧದಲ್ಲಿ ಇಲ್ಲವೆ ಸತ್ತ ಗಂಡನೊಂದಿಗೆ ಸಹಗಮನವನ್ನು ಮಾಡಿದವರ ಗೌರವಾರ್ಥ ಕಲ್ಲುಗಳನ್ನು ನೆಟ್ಟಿರುವ ಅನೇಕ ಉದಾಹರಣೆಗಳು ಕಾಥೇವಾಡದಲ್ಲಿ ಕಂಡುಬರುತ್ತವೆ. ಅವುಗಳ ಮೇಲೆ ಶಿಲ್ಪಗಳೊಂದಿಗೆ ಸತ್ತ ವ್ಯಕ್ತಿಯ ಹೆಸರು, ಕಾಲ ಮತ್ತು ಅವನ ಸಾವಿನ ಕಾರಣಗಳನ್ನು ಬರೆಯಲಾಗಿರುತ್ತದೆ. ಪಶ್ಚಿಮ ಭಾರತದಲ್ಲಿ ಪಾಲಿಯಾ, ಖಾಬಿಯಾ, ಚರಾ ಎಂದು ಕರೆಯಲ್ಪಡುವ ಸ್ಮಾರಕಗಳು ಕಂಡುಬರುತ್ತವೆ. ಜಗಳಗಳಲ್ಲಿ ಇಲ್ಲವೆ ಭೂತಪೀಡಿತನಾಗಿ ಮಡಿದರೆ ಅಥವಾ ವಂಶದ ಶ್ರೇಷ್ಠವ್ಯಕ್ತಿ ಸತ್ತರೆ ಇಂಥಹ ಸ್ಮಾರಕಗಳನ್ನು ನೆಡುತ್ತಾರೆ. ಇವುಗಳನ್ನು ಶಿಲೆಯ, ಮರದ ಕಂಬ, ಅಥವಾ ಬೊಂಬೆಯ ರೂಪದಲ್ಲಿ ಹಾಕಿಸುತ್ತಾರೆ. ಇವುಗಳನ್ನು ಅರಳಿಮರ ಅಥವಾ ಅಂಜೂರಮರದ ಕೆಳಗೆ, ಕೆರೆಯ ಬಳಿಯಲ್ಲಿ, ಇಲ್ಲವೆ ಸತ್ತ ಸ್ಥಳದ ಬಳಿಯಲ್ಲಿ ನೆಡಲಾಗುತ್ತದೆ. ಕೆಲವೊಮ್ಮೆ ಇವುಗಳ ಮೇಲೆ ವ್ಯಕ್ತಿಯೊಬ್ಬ ಕತ್ತಿ ಹಿಡಿದು ನಿಂತಹಾಗೆ ಇಲ್ಲವೆ ಒಂಟೆ ಅಥವಾ ಕುದುರೆ ಮೇಲೆ ಕುಳಿತ ಹಾಗೆ ಕಂಡರಿಸಿರುತ್ತಾರೆ. ಇದರ ಇನ್ನೊಂದು ಮುಖದಲ್ಲಿ ಸೂರ್ಯ-ಚಂದ್ರರನ್ನು ಕಂಡರಿಸಿದ್ದು, ಸತ್ತ ವ್ಯಕ್ತಿಯ ಹೆಸರು ಕಾಲ ಮತ್ತು ಸಾವಿಗೆ ಕಾರಣಗಳನ್ನು ನಮೂದಿಸಿರುತ್ತಾರೆ. ಹೀಗೆ ಮಾಡದಿದ್ದರೆ ಸತ್ತ ವ್ಯಕ್ತಿ ತಮಗೆ, ತಮ್ಮ ಕುಟುಂಬಕ್ಕೆ ಮತ್ತು ತಮ್ಮ ದನಕರುಗಳಿಗೆ ತೊಂದರೆ ಕೊಡುತ್ತಾನೆಂಬ ನಂಬಿಕೆ ಆ ಜನಾಂಗಗಳಲ್ಲಿದೆ. ಕೆಲವೊಮ್ಮೆ ಮಣ್ಣು ಮತ್ತು ಮರದಿಂದ ಮಾಡಿದ ಪ್ರತಿಮೆಗಳು ಇಲ್ಲವೆ ಗೊಂಬೆಗಳನ್ನು ಈ ರೀತಿಯ ಸ್ಮಾರಕಗಳಾಗಿ ನಿರ್ಮಿಸಿದ ಉದಾಹರಣೆಗಳು ಸಿಗುತ್ತವೆ.

ಸನ್ನತಿಯ ಸ್ತೂಪದ ಅಲಂಕಾರಕ್ಕೆ ಬಳಸಿದ ಪ್ರಮುಖ ಶಿಲ್ಪಗಳ ಗುಂಪೊಂದನ್ನು ಸ್ಮಾರಕ ಶಿಲ್ಪಗಳೆಂದೇ ಗುರುತಿಸಲಾಗಿದೆ. ಇಲ್ಲಿಯ ಸ್ಮಾರಕಶಿಲ್ಪಗಳಲ್ಲಿಯ ಶಿಲ್ಪಗಳು ದಾನಿಗಳ ಶಿಲ್ಪಗಳಾಗಿದ್ದು, ದಾನಿಗಳ ಮರಣದ ನಂತರ ಅವರ ಸ್ಮರಣೆಗಾಗಿ ನಿರ್ಮಿಸಿದವುಗಳಾಗಿವೆ. ಅವರು ವ್ಯಾಪಾರಸ್ತರಾಗಿದ್ದರೆಂದು ತೋರಿಸಲು ಎತ್ತಿನ ಗಾಡಿ, ಕುದುರೆ ಇತ್ಯಾದಿಗಳನ್ನು ಸಾಂಕೇತಿಕವಾಗಿ ಶಿಲ್ಪದಲ್ಲಿ ಕಂಡರಿಸಲಾಗಿದೆ. ಕರ್ನಾಟಕದಲ್ಲಿ ಇವು ಆರಂಭದ ಸ್ಮಾರಕ ಶಿಲ್ಪಗಳೆಂದರೆ ತಪ್ಪಾಗಲಾರದು.11 ಇದೇ ರೀತಿಯ ಆರಂಭದ ಸ್ಮಾರಕ ಶಿಲ್ಪಗಳನ್ನು ಶಾತವಾಹನರ ಕಾಲದಲ್ಲಿ ಕಾಣಬಹುದು. ಸನ್ನತಿಯ ಬಳಿಯ ಬೆಳ್ವಾಡಗಿ ಎಂಬಲ್ಲಿ ದೊರೆತ ಸ್ಮಾರಕಶಿಲ್ಪದಲ್ಲಿ ಬ್ರಾಹ್ಮೀ ಲಿಪಿಯ ಪ್ರಾಕೃತ ಶಾಸನವಿದ್ದು, ಅದು ಕಲಕನ ‘ಛಾಯಾಪಡೆಮೆ’ಯನ್ನು ಉಲ್ಲೇಖಿಸುತ್ತದೆ. ಅಲ್ಲದೆ ಈ ಶಾಸನದ ಕೆಳಗೆ ಗಾಡಿಯನ್ನು ಎಳೆಯುತ್ತಿರುವ ಎರಡು ಎತ್ತುಗಳ ಶಿಲ್ಪವಿದ್ದು, ಅವುಗಳಲ್ಲಿ ಒಂದನೆಯ ಶಿಲ್ಪದಲ್ಲಿ ಎತ್ತಿನ ಹೆಗಲಮೇಲೆ ನೊಗವಿದೆ ಹಾಗೂ ಇನ್ನೊಂದು ಶಿಲ್ಪದಲ್ಲಿ ಎತ್ತಿನ ಹೆಗಲ ಮೇಲೆ ನೊಗವಿಲ್ಲ. ಈ ಶಿಲ್ಪದ ಕುರಿತು ವಿಶೇಷ ಅಧ್ಯಯನವನ್ನು ಕೈಗೊಂಡ ಕೆ.ವಿ. ರಮೇಶ್ ಅವರು ಲಿಪಿಯನ್ನು ಗಮನಿಸಿ ಇದರ ಕಾಲವನ್ನು ಕ್ರಿ.ಶ.ಮೂರನೆಯ ಶತಮಾನ ಎಂದು ಗುರುತಿಸಿದ್ದಾರೆ. ಅಲ್ಲದೆ ಇದರ ಶಿಲ್ಪವು ಪ್ರವಾಸದ ಮೇಲಿದ್ದ ಕಲಕನು ದಾರಿಯಲ್ಲಿ ಸಾವಿಗೀಡಾದನೆಂಬುದನ್ನು ಸೂಚಿಸುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಸನ್ನತಿಯಲ್ಲಿರುವ ಗೌತಮಿಪುತ್ರ ಶಾತಕರ್ಣಿಯ ಕಥಾನಿರೂಪಕ ಶಿಲ್ಪವೊಂದರ ಪಟ್ಟಕೆಯಲ್ಲಿರುವ ಶಾಸನ ಆತನ ಯುದ್ಧದ ವರ್ಣನೆ ಮತ್ತು ಅವನು ಜಯಿಸಿದ ಪ್ರದೇಶಗಳನ್ನು ಉಲ್ಲೇಖಿಸುತ್ತದೆ.13 ಕ್ರಿ.ಶ. ಎರಡನೆಯ ಶತಮಾನದ ಸಿವಸಿರಿ ಪುಳಮಾವಿಯ ಶಾಸನ, ಕ್ರಿ.ಶ. ಮೂರನೆಯ ಶತಮಾನದ ಬನವಾಸಿಯ ನಾಗಶಿಲಾ ಶಾಸನ ಹಾಗೂ ಬೆಳ್ವಾಡಿಗಿಯ ಕಲಕನ ಶಾಸನಗಳು ಕದಂಬರ ಸ್ಮಾರಕ ಶಿಲ್ಪಗಳಿಗೆ ಪ್ರೇರಣೆ ನೀಡಿವೆ.14 ಶಾತವಾಹನರ ಕಾಲ ಸ್ಮಾರಕಶಿಲ್ಪಗಳ ದೃಷ್ಟಿಯಿಂದ ಅಷ್ಟಾಗಿ ಬೆಳವಣಿಗೆಗೊಂಡ ಕಾಲವಲ್ಲವೆಂದು ಅಭಿಪ್ರಾಯಪಡಲಾಗಿದೆ. ಆದರೆ ಸ್ಮಾರಕ ಶಿಲ್ಪಗಳನ್ನು ಹಾಕಿಸುವ ಆರಂಭಿಕ ಕುರುಹುಗಳು ಈ ಕಾಲಾವಧಿಯಲ್ಲಿ ಕಂಡುಬರುತ್ತವೆ ಎಂಬುದನ್ನು ಒಪ್ಪಬೇಕಾಗುತ್ತದೆ.

ಕರ್ನಾಟಕವನ್ನು ದಕ್ಷಿಣ ಭಾರತದ ವೀರಗಲ್ಲುಗಳ ಹೃದಯಭಾಗ ಎಂದು ಕರೆಯಬಹುದು. ಪ್ರಮುಖವಾಗಿ ಗಮನಿಸಬೇಕಾದಂತಹ ವಿಷಯವೆಂದರೆ ತಮಿಳುನಾಡಿನ ವೀರಗಲ್ಲುಗಳು ಕೇಂದ್ರಿಕೃತವಾಗಿರುವುದು ಕರ್ನಾಟಕದ ದಕ್ಷಿಣಕ್ಕಿರುವ ಪ್ರಾಂತದಲ್ಲಿ. ಅಲ್ಲದೆ ಕೇರಳ ರಾಜ್ಯದ ವೀರಗಲ್ಲುಗಳು ಇಡೀ ರಾಜ್ಯಾದ್ಯಾಂತ ಕಂಡುಬರದೆ, ಹೆಚ್ಚಾಗಿ ವೈನಾಡಿನಲ್ಲಿ ಕಂಡುಬರುತ್ತವೆ. ಸ್ವಾರಸ್ಯದ ವಿಷಯವೆಂದರೆ ಈ ವೈನಾಡು ಪ್ರಾಂತ ಕರ್ನಾಟಕದ ನೆರೆಯ ಪ್ರದೇಶವಾಗಿರುವುದು. ಇದನ್ನು ಗಮನಿಸಿದರೆ ಆರಂಭದಲ್ಲಿ ಅಲ್ಲದಿದ್ದರೂ, ಅನಂತರದ ಕಾಲಾವಧಿಯಲ್ಲಿ ವೀರಗಲ್ಲುಗಳನ್ನು ನೆಡುವ ಸಂಸ್ಕøತಿಯ ಪ್ರಭಾವ ಕರ್ನಾಟಕದಿಂದ ಇತರೆ ರಾಜ್ಯಗಳ ಮೇಲೆ ಆಗಿರುವುದನ್ನು ಮನಗಾಣಬಹುದು.  
ವೀರಗಲ್ಲುಗಳ ಸ್ವರೂಪ
    ವೀರಗಲ್ಲುಗಳು ಭಾರತದ ಶಾಸನ ಪ್ರಕಾರಗಳಲ್ಲಿ ಒಂದು ವಿಶಿಷ್ಟ ಮಾದರಿಯ ಸ್ಮಾರಕ ಶಿಲ್ಪಗಳಾಗಿವೆ. ಶಾಸನ ಪ್ರಕಾರಗಳಲ್ಲಿ ಪ್ರತ್ಯೇಕವಾಗಿ ಗುರುತಿಸಲ್ಪಡುವ ವೀರಗಲ್ಲುಗಳ ಮೇಲಿರುವ ಶಿಲ್ಪವು ಪರಾಕ್ರಮದ ಸಂಕೇತದಂತೆ ತೋರುತ್ತದೆ. ಯುದ್ಧ ನಡೆದು ಅದರಲ್ಲಿ ವೀರಮರಣ ಹೊಂದಿದ ವೀರನನ್ನು ಅಪ್ಸರೆಯರು ಸ್ವರ್ಗಕ್ಕೆ ಕೊಂಡೊಯ್ಯುವ ಮತ್ತು ಸ್ವರ್ಗಸ್ಥ ವೀರನು ತನ್ನ ಇಷ್ಟ ದೇವತೆಯೊಂದಿಗೆ ಸ್ವರ್ಗಲೋಕದಲ್ಲಿರುವ ನಿರೂಪಣೆ ವೀರಗಲ್ಲುಗಳ ಶಿಲ್ಪದಲ್ಲಿರುತ್ತದೆ. ಆರಂಭದ ವೀರಗಲ್ಲುಗಳು ಒಂದು ಹಂತದವುಗಳಾಗಿದ್ದು, ಕಲ್ಲಿನ ಆಕಾರಕ್ಕೆ ಹೊಂದಿಕೊಳ್ಳುವಂತೆ ಶಿಲ್ಪಗಳನ್ನು ಕೆತ್ತಲಾಗಿರುತ್ತದೆ. ವೀರನೊಬ್ಬನನ್ನೇ ಫಲಕದ ತುಂಬೆಲ್ಲ ಕಂಡರಿಸಿರುವ ವೀರಗಲ್ಲುಗಳೂ ಉಂಟು. ಬಾಣರ, ಗಂಗರ ಮತ್ತು ನೊಳಂಬರ ಕಾಲದ ವೀರಗಲ್ಲುಗಳಲ್ಲಿ ಇಂಥ ಲಕ್ಷಣಗಳನ್ನು ಕಾಣಬಹುದು. ಇಲ್ಲಿ ವೀರನೊಂದಿಗೆ ಇತರೆ ಶಿಲ್ಪಗಳಿದ್ದರೂ ಅವು ಅಸ್ತವ್ಯಸ್ತವಾಗಿ ಜೋಡಿಸಿರುವಂತೆ ತೋರುತ್ತವೆ. ಈ ಕಾಲಾವಧಿಯಲ್ಲಿ ಶಿಲ್ಪಿಗಳು ವೀರಗಲ್ಲುಗಳನ್ನು ಒಂದು ರೂಪಕ್ಕೆ ತಿದ್ದುವ ಪ್ರಯತ್ನವನ್ನು ಮಾಡಿಲ್ಲವೆಂದು ತೋರುತ್ತೆದೆ. ವೀರಗಲ್ಲುಗಳನ್ನು ನೆಡುವ ಸಂಪ್ರದಾಯ ಬೆಳವಣಿಗೆಗೊಂಡಂತೆ ಮತ್ತು ನುರಿತ ಶಿಲ್ಪಿಗಳು ವೀರಗಲ್ಲುಗಳನ್ನು ಕೆತ್ತಲು ಪ್ರಾರಂಭಿಸಿದಂತೆ ಅವುಗಳಿಗೆ ಒಂದು ಮೂರ್ಥಸ್ವರೂಪ ಮೈದಳೆಯಿತು. ವೀರಗಲ್ಲುಗಳಿಗೆ ಪೂರ್ಣತೆಯನ್ನು ತಂದುಕೊಡುವಲ್ಲಿ ಪ್ರಥಮ ಪ್ರಯತ್ನ ಮಾಡಿದವರೆಂದರೆ ರಾಷ್ಟ್ರಕೂಟರ ಕಾಲದ ಶಿಲ್ಪಿಗಳು. ಯುದ್ಧದ ಸನ್ನಿವೇಶ, ಸ್ವರ್ಗಾರೋಹಣ ಮತ್ತು ಸ್ವರ್ಗದ ಪರಿಕಲ್ಪನೆಯ ಹಂತಗಳು ತದನಂತರದಲ್ಲಿ ಸಾಮಾನ್ಯವಾದರೂ ವೀರಗಲ್ಲುಗಳ ಮೇಲ್ಭಾಗವನ್ನು ಅತ್ಯಾಕರ್ಷಕವಾಗಿ ರೂಪಿಸುವ ಪ್ರಯತ್ನಗಳು ಮುಂದುವರಿದವು. ವೀರಗಲ್ಲುಗಳ ಮೇಲ್ಭಾಗದಲ್ಲಿ ದೇವಾಲಯದ ಮುಖಮಂಟಪದಂತೆ, ಶಿಖರ ಮಾದರಿಗಳಂತೆ, ಗೋಪುರಗಳಂತೆ ಕಂಢರಿಸುವ ಪರಿಪಾಠ ಬೆಳೆಯಿತು. ಕೆಲವೊಮ್ಮೆ ವೀರಗಲ್ಲುಗಳ ಮೇಲ್ಬಾಗದ ನಡುಮಧ್ಯೆ ಕುಂಭ ಅಥವಾ ಕಳಶವನ್ನು ಅಲಂಕರಣೆಗಳೊಂದಿಗೆ ಕೆತ್ತಲಾಗುತ್ತಿತ್ತು.  ವೀರಗಲ್ಲುಗಳು ಸುಂದರವಾಗಿ ಕಾಣಲು ದೇವಾಲಯಗಳಲ್ಲಿ ಬಳಸಿರುವಂತೆ ಯಾಳಿಗಳನ್ನೂ, ಕೀರ್ತಿಮುಖಗಳನ್ನೂ, ಸಿಂಹಲಲಾಟವನ್ನೂ, ಸುರಳಿಬಳ್ಳಿಗಳನ್ನೂ ಬಳಸಿರುವದುಂಟು. ರಾಷ್ಟ್ರಕೂಟರ ನಂತರ ಈ ಸೂತ್ರವು ವೀರಗಲ್ಲುಗಳಲ್ಲಿ ಒಂದು ಪರಿಪಾಠವಾಗಿ ಮೂಡಿಬಂದಂತೆ ತೋರುತ್ತದೆ. ಕೆಲವು ವೀರಗಲ್ಲುಗಳಲ್ಲಿ ಎರಡೇ ಹಂತಗಳಿದ್ದು, ಹೋರಾಟದ ದೃಶ್ಯ ಮತ್ತು ವೀರನು ದೇವರ ಸನ್ನಿಧಾನದಲ್ಲಿರುವಂತೆ ಮಾತ್ರ ಬಿಂಬಿಸಲಾಗಿರುತ್ತದೆ. ಇನ್ನೂ ಕೆಲವು ವೀರಗಲ್ಲುಗಳಲ್ಲಿಯ ಶಿಲ್ಪಗಳನ್ನು ನಾಲ್ಕರಿಂದ ಏಳೆಂಟು ಹಂತಗಳಲ್ಲಿ ನಿರೂಪಿಸಲಾಗಿದ್ದರೂ, ವೀರಗಲ್ಲುಗಳ ಮೂಲಭೂತ ಸ್ವರೂಪದಲ್ಲಿ ಬದಲಾವಣೆಗಳೇನೂ ಆಗಿರುವುದಿಲ್ಲ. ಇಂಥ ವೀರಗಲ್ಲುಗಳಲ್ಲಿ ಯುಧ್ಧದ ದೃಶ್ಯವನ್ನು ಎರಡು ಅಥವಾ ಮೂರು ಹಂತಗಳಲ್ಲಿ, ಇನ್ನೂ ಕೆಲವು ಕಡೆ ಸ್ವರ್ಗಾರೋಹಣದ ಸನ್ನಿವೇಶವನ್ನು ಎರಡು ಹಂತಗಳಲ್ಲಿ ವಿಸ್ತರಿಸಿರುವುದನ್ನು ಕಾಣುತ್ತೇವೆ.

     ವೀರಗಲ್ಲುಗಳ ಪಾಠವನ್ನು ಗಮನಿಸಿದಾಗ, ಅವುಗಳನ್ನು ಅನೇಕ ಪರ್ಯಾಯ ಪದಗಳಿಂದ ಕರೆದಿರುವುದನ್ನು ಕಾಣಬಹುದು. ದಾನ ಶಾಸನಗಳಲ್ಲಿ ಉಕ್ತವಾಗಿರುವ ‘ಕಲ್ಲು’ ಎಂಬ ಪದವನ್ನು ದಾನಶಾಸನವೆಂದು ಅರ್ಥೈಸುವಂತೆ, ವೀರಗಲ್ಲು ಎಂದು ಸಹ ಸಾಂದರ್ಭಿಕವಾಗಿ ಅರ್ಥೈಸಬೇಕೆನ್ನುವುದು ಶೇಷಶಾಸ್ತ್ರಿಯವರ ಅಭಿಪ್ರಾಯವಾಗಿದೆ. ಇದಕ್ಕೆ ಪೂರಕವಾದ ವಿಶ್ಲೇಷಣೆಯನ್ನು ಹೊಂದಿರುವ ವೀರಗಲ್ಲೊಂದು ದೇವಿಹೊಸೂರಿನಲ್ಲಿ ದೊರಕಿದೆ. ಇದರಲ್ಲಿ “ಸ್ವಸ್ತಿ ಶ್ರೀಮಾರನ್ ನಾಡಾಳೆ ಗೋವಿಂದನ್ ಸಮರ ತುರುಗೊಳೊಳ್ಸತ್ತು ಸ್ವರ್ಗಕ್ಕೆ ಏರಿದೊನ್ ಬಿಂನಪೋಟಿ ನಿರುಸಿದೋಳ್ಕಲ್ಲ” ಎಂಬ ಉಲ್ಲೇಖವಿದ್ದು, ವೀರಗಲ್ಲನ್ನು ‘ಕಲ್ಲು’ ಎಂದು ಉಲ್ಲೇಖಿಸಿರುವ ಸ್ಪಷ್ಟ ಉದಾಹರಣೆ ಇದಾಗಿದೆ. ಇಂಥ ಇನ್ನೊಂದು ಉಲ್ಲೇಖ ಬೊಮ್ಮನಕಟ್ಟಿ ವೀರಗಲ್ಲಿನಲ್ಲಿದೆ.18  ಕಲಕೇರಿಯ ಎರಡು ವೀರಗಲ್ಲುಗಳಲ್ಲಿ “ಚಿಕ ನಗೈಯನ ಕಲು” “ಚಿಕನ ಕಲು” ಎಂಬ ಉಲ್ಲೇಖಗಳಿವೆ.19 ಹಾವೇರಿ ಜಿಲ್ಲೆಯ ಶಾಸನಗಳು ವೀರಗಲ್ಲನ್ನು ‘ಬೀರಗಲ್ಲು’20 ‘ಬೀರಕಲ್ಲು’21 ‘ಬೀರಗಲು’22 ಎಂದು ಉಲ್ಲೇಖಿಸಿರುವುದನ್ನು ಕಾಣಬಹುದು. ಕಲಕೇರಿಯ ಎರಡು ವೀರಗಲ್ಲುಗಳು ‘ವೀರಸಾಸನ’23 ಎಂಬ ಉಲ್ಲೇಖಗಳನ್ನು ಹೊಂದಿವೆ. ಈ ರೀತಿಯ ‘ವೀರಸಾಸನ’ ಪ್ರಯೋಗವು ಅಸಾಮಾನ್ಯವಾಗಿ ಹೋರಾಡಿ ಮಡಿದ ವೀರರ ಅಥವಾ ವಿಶೇಷ ವ್ಯಕ್ತಿಗಳ ಪ್ರರಾಕ್ರಮಗಳನ್ನು ಕೀರ್ತಿಸುವಾಗ ಬಳಸಿರುವುದುಂಟು. ಇವುಗಳನ್ನು ಪ್ರಶಸ್ತಿರೂಪದ ವೀರಗಲ್ಲುಗಳೆನ್ನಬಹುದು.24 ಅಪರೂಪಕ್ಕೆ ವೀರಗಲ್ಲುಗಳನ್ನು ‘ವೀರಕಲ್ಲು ಶಾಸನ’25 ‘ಸಿಲಾಲೇಖಾ’26 ‘ವೀರಸಿಲಾ’27 ಎಂಬುದಾಗಿ ಕರೆದಿರುವುದುಂಟು. ಅಲ್ಲದೆ ಕೆಲವು ಕಡೆಗಳಲ್ಲಿ ವೀರಗಲ್ಲುಗಳನ್ನು ‘ಕಲ್ನಾಟು’, ‘ಕಲ್ನಾಡು’, ವೀರಸ್ತಂಭ, ಛಾಯಾಸ್ತಂಭ, ಛಾಯಾಪಡಿಮೆ, ಬೀರಲಿಂಗ, ಸಾಂಗತ್ಯಕಲ್ಲು, ವೀರಗಂಭ ಮತ್ತು ತೊಲೆಕಲ್ಲು ಎಂಬುದಾಗಿ ಕರೆದಿರುವುದನ್ನು ಕಾಣಬಹುದಾಗಿದೆ.

 ಕರ್ನಾಟಕದ ವೀರಗಲ್ಲುಗಳನ್ನು ಭಾರತದ ಇತರೆ ವೀರಗಲ್ಲು ಶಿಲ್ಪಗಳಿಗೆ ಹೋಲಿಕೆ ಮಾಡಿ ನೋಡಲಾಗಿ ಅವುಗಳ ಪ್ರಬುದ್ಧ ನಿರೂಪಣಾ ಶೈಲಿ ಮತ್ತು ಜೀವಂತ ಭಾವಾಭಿವ್ಯಕ್ತಿಯನ್ನು ವಿಶಿಷ್ಟವಾಗಿ ಗುರುತಿಸಬಹುದಾಗಿದೆ. ವೀರನು ಯಾವ ಜೀವನ ಮೌಲ್ಯಕ್ಕಾಗಿ ತನ್ನ ಪ್ರಾಣವನ್ನು ತ್ಯಾಗಮಾಡಿದನೋ ಅದೇ ಘಟನೆಯ ನೈಜ ನಿರೂಪಣೆ ಕರ್ನಾಟಕದ ವೀರಗಲ್ಲುಗಳಲ್ಲಿರುತ್ತದೆ. ಇಲ್ಲಿ ಎಲ್ಲರ ಮನಸೆಳೆಯುವ ಪ್ರಮುಖ ಅಂಶವೆಂದರೆ ಶಿಲ್ಪಿಯು ವೀರನಿಗೆ ಸಂಬಂಧಿಸಿದ ಘಟನೆಯನ್ನು ಒಂದು ಚೌಕಟ್ಟಿನಲ್ಲಿ ತಂದು ಜೋಡಿಸಿರುವ ಸಂಯೋಜನೆ ಮತ್ತು ಚಲನಶೀಲತೆ ವೀರಗಲ್ಲಿನ ಪ್ರತಿಯೊಂದು ಹಂತದಲ್ಲಿಯೂ ಎದ್ದು ಕಾಣುತ್ತಿರುವುದು. ಶಿಲೆಯಂತಹ ಮಾಧ್ಯಮದಲ್ಲಿ ಮಾನವ ಸಹಜ ಭಾವನೆಗಳನ್ನು ಅಭಿವ್ಯಕ್ತಿಗೊಳಿಸುವುದು ಸುಲಭ ಸಾಧ್ಯವಲ್ಲ. ಶಿಲ್ಪಿಯು ವೀರಗಲ್ಲುಗಳಲ್ಲಿ ವೀರರಸ, ಶೃಂಗಾರರಸ ಮತ್ತು ಶಾಂತರಸಗಳನ್ನು ಸಮ್ಮಿಳಿತಗೊಳಿಸಿ ಕಂಡರಿಸಿರುತ್ತಾನೆ. ವೀರಗಲ್ಲಿನ ಕೆಳಹಂತದಲ್ಲಿ ವೀರ ಮತ್ತು ಪ್ರತಿವೀರನನ್ನು ಚೌಕಟ್ಟಿನಲ್ಲಿ ದೊಡ್ಡದಾಗಿ ಕಂಡÀರಿಸಿ, ಅವರ ಹಿನ್ನೆಲೆಯಲ್ಲಿ ಸೈನಿಕರನ್ನು ಇವರಿಗಿಂತ ಚಿಕ್ಕದಾಗಿ ಮತ್ತು ಪ್ರಮಾಣಬದ್ಧವಾಗಿ ನಿರೂಪಿಸುವ ತಂತ್ರ ಯುದ್ಧದ ಸನ್ನಿವೇಶವನ್ನು ಕಣ್ನುಂದೆ ತರುತ್ತದೆ. ವೀರಗಲ್ಲುಗಳಲ್ಲಿಯ ವೀರನಿಂದ ಹತರಾದವರು, ವೀರನ ಮೇಲೆ ಎರಗುತ್ತಿರುವವರು, ಗಾಯಗೊಂಡಿದ್ದರೂ ಲೆಕ್ಕಿಸದೆ ಹೋರಾಡುತ್ತಿರುವ ವೀರ, ಇವುಗಳು ನಮಗೆ ಒಂದು ವಿಶೇಷವಾದ ಅನುಭವವನ್ನು ನೀಡುತ್ತವೆ. ರುಂಡವು ಮುಂಡದಿಂದ ಬೇರೆಯಾಗಿರುವ, ಶಸ್ತ್ರಾಘಾತದಿಂದ ನೆಲಕ್ಕೆ ಬೀಳುತ್ತಿರುವ, ಹೆಣಗಳ ರಾಶಿಯನ್ನು ಮೆಟ್ಟಿನಿಂತಿರುವ ಮುಂತಾದ ವೀರರಸವನ್ನು ಅಭಿವ್ಯಕ್ತಿಸುವ ಸನ್ನಿವೇಶಗಳನ್ನು ವೀರಗಲ್ಲುಗಳ ಕೆಳಪಟ್ಟಿಕೆಯಲ್ಲಿ ಕಾಣುತ್ತೇವೆ.

ವೀರಗಲ್ಲುಗಳ ಎರಡನೆಯ ಹಂತದಲ್ಲಿ ಶಿಲ್ಪಿಗಳು ತಮ್ಮ ಪರಿಮಿತಿಯಲ್ಲಿ ಔಚಿತ್ಯವನ್ನರಿತು ಶೃಂಗಾರ ರಸವನ್ನು ನಿರೂಪಿಸಿರುವ ವಿಧಾನವನ್ನು ಮೆಚ್ಚಲೇಬೇಕು. ಇಲ್ಲಿ ವೀರನು ಅಪ್ಸರೆಯರ ಭುಜದ ಮೇಲೆ ತನ್ನ ಕೈಗಳನ್ನು ಹಾಕಿಕೊಂಡಂತೆ, ವಿಮಾನದಲ್ಲಿ ಕುಳಿತ ವೀರನನ್ನು ಅಪ್ಸರೆಯರು ಸ್ವರ್ಗಕ್ಕೆ ಕೊಂಡೂಯ್ಯುತ್ತಿರುವಂತೆ ಕೆತ್ತಿರುತ್ತಾರೆ. ಇದಕ್ಕೆ ಮೆರಗು ನೀಡುವಂತೆ ಕೆಲವೊಮ್ಮೆ ಸಂಗೀತಗಾರರ ಮತ್ತು ನೃತ್ಯಗಾರರ ಸಮೇತ ಸ್ವರ್ಗಕ್ಕೆ ಹೋಗುತ್ತಿರುವಂತೆ ಕಂಡರಿಸಲಾಗಿರುತ್ತದೆ. ವೀರತ್ವಕ್ಕೆ ಧರ್ಮದ ಮೆರಗು ಕೂಟ್ಟು ಸ್ವರ್ಗ ಪ್ರಾಪ್ತಿಗೆ ವೀರಮರಣವು ಸಹ ಅರ್ಹ ಎಂದು ಬಿಂಬಿಸಲಾಯಿತು. ಇದರ ಪ್ರಭಾವ ವೀರಗಲ್ಲುಗಳ ಪಾಠ ಮತ್ತು ಶಿಲ್ಪದಲ್ಲಿಯೂ ಅಭಿವ್ಯಕ್ತವಾಯಿತು. ಹಾಗಾಗಿ ವೀರಗಲ್ಲುಗಳಲ್ಲಿ ಶಾಂತ ರಸ ಮೂಡಿಬಂತು. ಇದನ್ನು ವೀರಗಲ್ಲುಗಳ ಮೇಲಿನ ಹಂತದಲ್ಲಿ ಕಾಣಬಹುದು. ಇಲ್ಲಿ ವೀರನು ತನ್ನ ಇಷ್ಟ ದೇವರೊಂದಿಗೆ ಸ್ವರ್ಗದಲ್ಲಿಯೋ, ವೈಕುಂಠದಲ್ಲಿಯೋ, ಸಿದ್ಧಲೋಕದಲ್ಲಿಯೋ (ಜೈನರಾಗಿದ್ದರೆ) ನೆಲೆಸಿರುವಂತೆ ನಿರೂಪಿಸಲಾಗಿರುತ್ತದೆ.

ವೀರಗಲ್ಲುಗಳಲ್ಲಿಯ ಶಾಸನಪಾಠ ನೇರ ನಿರೂಪಣೆಯಲ್ಲಿರುವುದೇ ಹೆಚ್ಚು. ಇಲ್ಲಿ ಚಕ್ರವರ್ತಿ ಅಥವಾ ಮಾಂಡಳಿಕ ರಾಜನ ನಾಮನಿರ್ದೇಶನ ಮತ್ತು ಕಾಲ ಮೊದಲು ಬರುತ್ತದೆ. ಆನಂತರ ವೀರನು ಎದುರಿಸಬೇಕಾಗಿ ಬಂದ ಹೋರಾಟದ ಸ್ವರೂಪ ಹಾಗೂ ಅವನು ಅದನ್ನು ಎದುರಿಸಿ ಸುರಲೋಕ ಪ್ರಾಪ್ತನಾದ ಬಗ್ಗೆ ವಿವರಣೆ ಇರುತ್ತದೆ. ವೀರಗಲ್ಲುಗಳು ಪ್ರಮುಖವಾಗಿ ವೀರರ ಪರಾಕ್ರಮಗಳನ್ನು ವೈಭವೀಕರಿಸುವ ಸ್ಮಾರಕಶಿಲೆಗಳು. ಆದ್ದರಿಂದ ಶಾಸನ ಪಾಠದ ಬಹುಭಾಗ ಮಡಿದ ವೀರನ ಹೊಗಳಿಕೆಗಾಗಿ ಮೀಸಲಾಗಿದ್ದು, ಅದರೊಂದಿಗೆ ಅರಸನ ಬಗ್ಗೆ ಮತ್ತು ವೀರನ ಕುಟುಂಬಕ್ಕೆ ನೀಡಿದ ದತ್ತಿಯ ಪ್ರಸ್ತಾಪ ಬರುತ್ತದೆ. ಇಲ್ಲಿ ಗತಿಸಿದ ವೀರನ ಕೀರ್ತಿ, ಪ್ರತಾಪಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿರುವುದರಿಂದ, ವೀರಗಲ್ಲುಗಳ ಶಾಸನಪಾಠವನ್ನು ದಾನ ಮತ್ತಿತರ ಶಾಸನಗಳಿಂದ ಸುಲಭವಾಗಿ ಪ್ರತ್ಯೇಕಿಸಿ ನೋಡಬಹುದು. ವೀರಗಲ್ಲುಗಳ ಶಾಸನಪಾಠದಲ್ಲಿ ದೇಶ, ಅರಸ, ವಂಶ ಮತ್ತು ಅಲ್ಲಲ್ಲಿ ಪ್ರಾರ್ಥನಾ ಶ್ಲೋಕ, ಶಾಪಾಶಯ, ಶಾಸನಕಾರ, ಶಿಲ್ಪಿ, ರೂವಾರಿಗಳ ವಿವರಣೆ ಇದ್ದರೂ, ವೀರನ ಹೋರಾಟ, ಅದಕ್ಕೆ ಕಾರಣ, ಅದರ ಸ್ವರೂಪ ಹಾಗೂ ಹೋರಾಟದಲ್ಲಿ ವೀರನ ಪಾತ್ರಗಳಿಗೇ ಹೆಚ್ಚಿನ ಪ್ರಾಧಾನ್ಯತೆ ಇರುತ್ತದೆ. ಇತರೆ ಶಾಸನಗಳಿಗೆ ಹೋಲಿಸಿದರೆ ವೀರಗಲ್ಲುಗಳ ಶಾಸನ ಪಾಠ ಕಿರಿದಾಗಿರುತ್ತದೆ. ವೀರಗಲ್ಲುಗಳ ಮೇಲಿರುವ ಶಿಲ್ಪಗಳ ನಡುವಿನ ಪಟ್ಟಕೆಗಳಲ್ಲಿ ಶಾಸನ ಪಾಠವನ್ನು ಕೆತ್ತಲಾಗುತ್ತಿತ್ತು. ಇಲ್ಲಿಯ ಸ್ಥಳಾವಕಾಶಕ್ಕೆ ತಕ್ಕಂತೆ ಶಾಸನ ಪಾಠವನ್ನು ತಯಾರಿಸಬೇಕಾಗುತ್ತಿತ್ತು. ಹಾಗಾಗಿಯೇ ವೀರಗಲ್ಲುಗಳ ಪಾಠ ಇತರೆ ಶಾಸನ ಪಾಠಗಳಿಗಿಂತ ಕಿರಿದಾಗಿರುವಂತೆ ತೋರುತ್ತದೆ. ಇಲ್ಲಿ ಶಾಸನಕಾರ ಶಾಸನ ಪಾಠವನ್ನು ಎರಡು ಭಾಗಗಳಲ್ಲಿ ವಿಂಗಡಿಸಿಕೊಂಡು ನಿರೂಪಿಸಿದಂತೆ ಭಾಸವಾಗುತ್ತದೆ. ಮೊದಲ ಭಾಗದಲ್ಲಿ ವೀರನು ಯಾರ ಕಾಲದಲ್ಲಿ, ಯಾರ ಪರವಾಗಿ, ಯಾವ ಯುದ್ಧದಲ್ಲಿ, ಏಕೆ, ಹೇಗೆ ಯುದ್ಧಮಾಡಿದ ಎಂಬುದು ಮತ್ತು ಪರಾಕ್ರಮದಿಂದ ಹೋರಾಟಮಾಡಿ ಮಡಿದ ವೀರನನ್ನು ಅಪ್ಸರೆಯರು ಹೇಗೆ ಸ್ವರ್ಗಕ್ಕೆ ಕೊಂಡೊಯ್ದರೆಂಬ ವಿವರಣೆ ಇರುತ್ತದೆ. ಎರಡನೆಯ ಭಾಗದಲ್ಲಿ ವೀರನಿಗೆ ಬಿಟ್ಟ ದತ್ತಿ, ವೀರಗಲ್ಲನ್ನು ನಿಲ್ಲಿಸಿದ ಪ್ರಸ್ತಾಪ ಬರುತ್ತದೆ. ವೀರಗಲ್ಲು ಶಿಲ್ಪ ತನ್ನ ಸಮಕಾಲೀನ  ಶಿಲ್ಪದೊಡನೆ ಬೆಳೆದು, ಉನ್ನತ ಸ್ಥಿತಿಯನ್ನು ತಲುಪಿ, ತದನಂತರದಲ್ಲಿ ಕೇವಲ ಪಡಿಯಚ್ಚಾಗಿ, ಕಾಲಾಂತರದಲ್ಲಿ ಅವನತಿ ಹೊಂದಿದಂತೆಯೇ, ವೀರಗಲ್ಲುಗಳ ಪಾಠವೂ ಸಹ ತನ್ನ ಸಮಕಾಲೀನ ಸಾಹಿತ್ಯದ ಪ್ರಭಾವವನ್ನು ಪಡೆದು ಬೆಳೆದಿದೆ. ಸಾಹಿತ್ಯಿಕವಾಗಿ ಗಮನಿಸಬಹುದಾದಂತಹ ಉತ್ತಮ ಪ್ರತಿಭಾ ಕೌಶಲ್ಯವನ್ನು ಹೊಂದಿದ ವೀರಗಲ್ಲುಗಳೂ ಕಂಡುಬರುತ್ತವೆ. ಕೆಲವು ಕಡೆ ಅವು ಒಂದರ ಪಡಿಯಚ್ಛು ಮತ್ತೊಂದು ಎಂಬಂತೆ ತೋರುತ್ತಿದ್ದು, ಏಕತಾನತೆಯ ದೋಷದಿಂದ ನರಳುತ್ತವೆ.

ವೀರಗಲ್ಲುಗಳೆಂದರೆ, ಅಷ್ಟೇ ಏಕೆ ಸ್ಮಾರಕಶಿಲ್ಪಗಳೆಂದರೆ ಉಬ್ಬುಶಿಲ್ಪದ ಒಂದು ಪ್ರಕಾರ. ಭಾರತೀಯ ಶಿಲ್ಪಶಾಸ್ತ್ರದಲ್ಲಿ ಇದೇನು ಹೊಸ ಪ್ರಕಾರವಲ್ಲ. ನಮ್ಮ ಪ್ರಾಚೀನ ದೇವಾಲಯಗಳ ಹೊರಗೋಡೆಯ ಭಿತ್ತಿಯಲ್ಲಿ, ಕಂಬಗಳ ಮೇಲೆ, ಕಕ್ಷಾಸನದ ಹೊರ ಭಾಗದಲ್ಲಿ, ಶಿಖರದ ಭಾಗಗಳಲ್ಲಿ, ಅದಿಷ್ಠಾನ, ಮಾಳಿಗೆ, ಭುವನೇಶ್ವರಿ, ಬಾಗಿಲುವಾಡ, ಜಾಲಂದ್ರಗಳಲ್ಲಿ ಇಂಥ ಅನೇಕ ಉಬ್ಬುಶಿಲ್ಪಗಳನ್ನು ಕಾಣಬಹುದು. ಆದರೆ ನಮ್ಮ ಪ್ರಾಚೀನ ಶಿಲ್ಪಶಾಸ್ತ್ರ ಗ್ರಂಥಗಳು ಈ ಉಬ್ಬುಶಿಲ್ಪಗಳ ಬಗ್ಗೆ ಮೌನ ವಹಿಸಿರುವುದರ ಕಾರಣ ತಿಳಿದುಬರುವುದಿಲ್ಲ. ಬಹುಶ: ಆಗ ಉಬ್ಬುಶಿಲ್ಪವನ್ನು ದುಂಡು ಶಿಲ್ಪದಿಂದ ಬೇರ್ಪಡಿಸಿ ನೋಡಲಿಲ್ಲವೆಂದು ಕಾಣುತ್ತದೆ. ಆದರೆ ಕಾಲ ಬದಲಾದಂತೆ ಉಬ್ಬುಶಿಲ್ಪದ ತಂತ್ರಗಾರಿಕೆಗೆ ಮಹತ್ವ ಬಂದಿತು. ಇದರಿಂದಾಗಿ ಉಬ್ಬುಶಿಲ್ಪದ ಲಕ್ಷಣ ಮತ್ತು ಪ್ರಯೋಜನಗಳನ್ನು ಹಿಂದಿಗಿಂತಲೂ ಇಂದು ವಿವೇಚಿಸುವ ಅವಶ್ಯಕತೆ ಇದೆ. ಕನ್ನಡದಲ್ಲಿ ಉಬ್ಬುಶಿಲ್ಪದ ಬಗೆಗೆ ಮೊದಲು ಚರ್ಚಿಸಿದವರು ಡಾ.ಕೆ. ಶಿವರಾಮ ಕಾರಂತರು. ಅವರು ತಮ್ಮ ‘ಚಿತ್ರ ಶಿಲ್ಪ ವಾಸ್ತುಕಲೆಗಳು’, ‘ಭಾರತೀಯ ಶಿಲ್ಪ’ ಮತ್ತು ‘ಶಿಲ್ಪಕಲಾ ಪ್ರಪಂಚ’ ಎಂಬ ಗ್ರಂಥಗಳಲ್ಲಿ ಉಬ್ಬುಶಿಲ್ಪಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇಲ್ಲಿ ಉಬ್ಬುಕೆತ್ತನೆ ಎಂದರೇನು? ಮತ್ತು ಅದರ ಇತಿಮಿತಿಗಳನ್ನು ಸಂಕ್ಷಿಪ್ತವಾಗಿ ವಿವರಿಸಿದ್ದಾರೆ. ಇದಕ್ಕೂ ಮೊದಲು ‘ಜ್ಞಾನಗಂಗೋತ್ರಿ’ ಸಂಪುಟ-5(ಕಲೆ-ಸಾಹಿತ್ಯ) ದಲ್ಲಿ ಉಬ್ಬುಶಿಲ್ಪದ ಬಗ್ಗೆ ಕೆಲವಷ್ಟು ಮಾಹಿತಿ ಇದೆ. ಇವನ್ನು ಹೊರತುಪಡಿಸಿದರೆ 1985ರಲ್ಲಿ ಪ್ರಕಟಗೊಂಡ ‘ಕಲಾಕೋಶ’ ಎಂಬ ಕೃತಿಯಲ್ಲಿ ಉಬ್ಬುಶಿಲ್ಪದ ಕೊಂಚ ಮಾಹಿತಿ ದೊರೆಯುತ್ತದೆ.

ಚಪ್ಪಟೆಯಾದ ಹಿನ್ನೆಲೆಯಿಂದ ಮುಂದಕ್ಕೆ ಉಬ್ಬಿದಂತೆ ಕಂಡರಿಸಿರುವ ಶಿಲ್ಪವೇ ಉಬ್ಬು ಶಿಲ್ಪವೆನ್ನಿಸಿದೆ. ಇಂಥ ಶಿಲ್ಪವನ್ನು ಎದುರಿನಿಂದ ಮಾತ್ರ ನೋಡಲು ಸಾಧ್ಯ. ಇಲ್ಲಿ ಕೈಗಳನ್ನು, ಆಯುಧಗಳನ್ನು, ಹಿಂಬದಿಯ ಜಡೆ ಮತ್ತಿತರ ಭಾಗಗಳನ್ನು ದುಂಡು ಶಿಲ್ಪದಂತೆ ಪ್ರತ್ಯೇಕವಾಗಿ ಕಂಡರಿಸದೆ, ದೇಹದ ಭಾಗಗಳಿಗೆ ಅಂಟಿಕೊಂಡಂತೆ ಕೆತ್ತಲಾಗಿರುತ್ತದೆ. ಅಲ್ಲದೇ ಈ ದೇಹವು ಹಿನ್ನೆಲೆಗೆ ಅಂಟಿಕೊಂಡು ಅದರಿಂದ ಸ್ವಲ್ಪ ಮುಂಚಾಚಿದಂತೆ ಕಾಣುತ್ತದೆ. ವೀರಗಲ್ಲುಗಳ ಉಬ್ಬುಶಿಲ್ಪದಲ್ಲಿ ಹೋರಾಟದ ಭಂಗಿಯಲ್ಲಿ ನಿಂತಿರುವ ವೀರನನ್ನು, ಎದುರಾಳಿಯನ್ನು ಮತ್ತು ಅವರ ಜೊತೆಯಲ್ಲಿರುವ ಹಿಂಬಾಲಕರನ್ನು ಹೋರಾಟದ ದೃಶ್ಯಗಳೊಂದಿಗೆ ಸಮರ್ಪಕವಾಗಿ ದೃಶ್ಶೀಕರಿಸಲಾಗಿರುತ್ತದೆ. ಇದನ್ನು ಚಿತ್ರಕಲೆಗೆ ಸಮನಾಗಿ ಕಲ್ಪಸಿಕೊಳ್ಳಬಹುದು. ದೇವಾಲಯದ ಗೋಡೆಯ ಹೊರಭಿತ್ತಿಯ ಉಬ್ಬುಶಿಲ್ಪಗಳು ಏಕಕಾಲಕ್ಕೆ ಗೋಡೆಗಳೂ ಹೌದು, ಉಬ್ಬುಶಿಲ್ಪಗಳೂ ಹೌದು. ಈ ತಂತ್ರಗಾರಿಕೆಯಿಂದಾಗಿಯೇ ಅನೇಕ ದೇವಾಲಯಗಳು ಲೋಕ ಪ್ರಸಿದ್ಧಿಯಾಗಿರುವುದು.

ಉಬ್ಬುಶಿಲ್ಪಗಳು ಹಂತಗಳಲ್ಲಿ ಏಕಕಾಲಕ್ಕೆ ಘಟನೆಗೆ ಸಂಬಂಧಿಸಿದ ಪರಿಪೂರ್ಣ ಚಿತ್ರಣವನ್ನು ನೀಡುತ್ತವೆ. ಉಬ್ಬುಶಿಲ್ಪಕ್ಕೆ ಮಾತ್ರ ಈ ಸಾಧ್ಯತೆ ಹೆಚ್ಚಾಗಿರುತ್ತದೆ. ವೀರಗಲ್ಲುಗಳು ಸಹ ಉಬ್ಬುಶಿಲ್ಪಗಳಾಗಿದ್ದು, ಅವು ಜನರ ಬದುಕಿನೊಂದಿಗೆ ಹೆಣೆದುಕೊಂಡಿವೆಯಲ್ಲದೇ ಜನಸಾಮಾನ್ಯರ ಸ್ವತ್ತಾಗಿವೆ. ಹೋರಾಟದ ಅಥವಾ ದಿನನಿತ್ಯದ ಬದುಕಿಗೆ ಸಂಬಂಧಿಸಿದ ಅಂಶಗಳು ವೀರಗಲ್ಲುಗಳಲ್ಲಿ ಪ್ರತಿಬಿಂಬಿತವಾಗಿರುತ್ತವೆ. ಜನಪದ ಆಚರಣೆಗಳು, ಉಡುಗೆ-ತೊಡುಗೆಗಳು ಮತ್ತು ಸಮಕಾಲೀನ ಸಂಪ್ರದಾಯಗಳು ಉಬ್ಬುಶಿಲ್ಪದಲ್ಲಿ ಕಂಡುಬರುತ್ತವೆ. ವೀರಗಲ್ಲುಗಳು ಸಾಮಾಜಿಕ ಕಳಕಳಿಯಿಂದ ಹುಟ್ಟಿದವುಗಳಾಗಿದ್ದು, ಅವುಗಳಲ್ಲಿ ಧಾರ್ಮಿಕ ಅಂಶಗಳಿದ್ದರೂ ಗೌಣವಾಗಿರುತ್ತವೆ. ಇಲ್ಲಿ ಅನೇಕ ಆಚರಣೆ ಮತ್ತು ಸಂಪ್ರದಾಯಗಳು ಕೆಲವು ಸಂಕೇತಗಳ ಮೂಲಕ ವ್ಯಕ್ತವಾಗುತ್ತವೆ. ವೀರಗಲ್ಲುಗಳಲ್ಲಿ ಶಿಲ್ಪಿಗೆ ಯಾವುದೇ ಶಿಷ್ಟಾಚಾರದ ನಿಯಂತ್ರಣವಿರುವುದಿಲ್ಲ. ಒಂದು ವೇಳೆ ನಿಯಂತ್ರಣವಿದ್ದರೆ ಅದು ಸ್ಥಳಾವಕಾಶದ್ದು ಮಾತ್ರ. ವರ್ಣಚಿತ್ರದಲ್ಲಿ ನಿರೂಪಿಸಿದಂತೆ ಇಡೀ ಒಂದು ಕಥಾನಕವನ್ನು ಉಬ್ಬುಶಿಲ್ಪದಲ್ಲಿ ತೋರಿಸಲು ಸಾಧ್ಯವಿದೆ. ವರ್ಣಚಿತ್ರಕಾರ ಉಡುಪು, ಆಭರಣ, ಕೇಶ ಮತ್ತು ಚರ್ಮಕ್ಕೆ ಬೇರೆ ಬೇರೆ ಬಣ್ಣಗಳನ್ನು ಉಪಯೋಗಿಸುತ್ತಾನೆ. ಶಿಲ್ಪಿಯು ಉಬ್ಬುಶಿಲ್ಪದಲ್ಲಿ ಮೈ-ಮುಖಗಳನ್ನು ಒಂದು ಸ್ಥರ(ದಪ್ಪ)ದಲ್ಲಿಯೂ, ಆಭರಣ, ಉಡುಪುಗಳನ್ನು ಇನ್ನೊಂದು ಸ್ಥರ(ದಪ್ಪ)ದಲ್ಲಿಯೂ, ಹಿನ್ನೆಲೆಯ ಶಿಲ್ಪಗಳನ್ನು ಮತ್ತೊಂದು ಸ್ಥರ(ದಪ್ಪ)ದಲ್ಲಿಯೂ ಕೆತ್ತಿರುತ್ತಾನೆ. ಉಬ್ಬುಶಿಲ್ಪಕ್ಕೆ ಮಾಧ್ಯಮವಾಗಿ ಕರ್ನಾಟಕದಲ್ಲಿ ಹೆಚ್ಚು ಬಳಕೆಯಾಗಿರುವುದು ಶಿಲೆ ಮತ್ತು ಮರ. ಇಲ್ಲಿ ಶಿಲ್ಪಿಯು ಯಾವ ವಿಷಯವನ್ನು ಕೆತ್ತಬೇಕೆಂದು  ನಿರ್ಧರಿಸಿರುತ್ತಾನೋ ಅದಕ್ಕೆ ಸಾಕಾಗುವಷ್ಟು ಶಿಲೆಯನ್ನು ಉಳಿಸಿ, ಉಳಿದ ಭಾಗವನ್ನು ಒಂದು ಸಮಾನ ಆಳದಲ್ಲಿ ಕೆತ್ತಿ ತೆಗೆಯುತ್ತಾನೆ. ನಂತರ ಉಳಿಸಿಕೊಂಡ ಸ್ಥಳದಲ್ಲಿ ಶಿಲ್ಪ ನಿರೂಪಣೆ ಮಾಡುತ್ತಾನೆ. ಇದಕ್ಕೆ ಎಷ್ಟು ದಿನಗಳು ಬೇಕಾದರೂ ಹಿಡಿಯಬಹುದು. ಆದರೆ ದುಂಡು ಶಿಲ್ಪಕ್ಕೆ ಹೋಲಿಸಿ ನೋಡಿದರೆ ಉಬ್ಬುಶಿಲ್ಪದ ಕೆತ್ತನೆಯು ಶಿಲ್ಪಿಯ ಶ್ರಮ ಮತ್ತು ಸಮಯವನ್ನು ಕಡಿಮೆ ಮಾಡುತ್ತದೆಂದು ಹೇಳಬಹುದು.

ವೀರಗಲ್ಲು ಸ್ಮಾರಕ ಶಿಲ್ಪಗಳು ಮೊದಲು ಸಾಂಸ್ಕøತಿಕ ಆಕರಗಳಾಗಿದ್ದು, ನಂತರ ಕಲಾ ಮಾಧ್ಯಮವಾಗಿವೆ. ಇಲ್ಲಿ ಶಿಲ್ಪಿಗೆ ಘಟನೆಯ ವಿವರದಷ್ಟೇ ಶಿಲಾಫಲಕದಲ್ಲಿ ಸ್ಥಳಾವಕಾಶ ದೊರೆಯಬೇಕು. ಘಟನೆಯ ವಿವರಕ್ಕೆ ಸ್ಥಳಾವಕಾಶ ಕಲ್ಪಸಿಕೊಳ್ಳಲು ಶಿಲ್ಪಯು ಹಂತಗಳಲ್ಲಿ ವೀರಗಲ್ಲುಗಳನ್ನು ಕೆತ್ತಲಾರಂಬಿಸಿದ. ಇದು ಮುಂದೆ ಒಂದರಿಂದ ಏಳು ಹಂತಗಳವರೆಗೆ ವೀರಗಲ್ಲುಗಳು ನಿರ್ಮಾಣವಾಗಲು ಕಾರಣವಾಯಿತು. ಹೀಗೆ ವೀರಗಲ್ಲುಗಳು ಮೂಲತ: ವೀರನ ಗುಣಗಾನದ ದಾಖಲೆಗಳಾಗಿದ್ದರೂ, ಪ್ರಾಚೀನ ಮೌಲ್ಯಗಳನ್ನು ಪ್ರಚುರಗೊಳಿಸುವ ಫಲಕಗಳೂ ಸಹ ಆಗಿವೆ.
ವೀರಗಲ್ಲುಗಳ ಬೆಳವಣಿಗೆ

ವೀರಗಲ್ಲುಗಳ ಮೂರ್ತಸ್ವರೂಪ ಮತ್ತು ಪರಿಕಲ್ಪನೆಯ ಸ್ಪಷ್ಟ ತಿಳುವಳಿಕೆ ಮೂಡಿದ ನಂತರ ಅವುಗಳ ಉಗಮ, ವಿಕಾಸದ ಐತಿಹಾಸಿಕ ಅಂಶಗಳನ್ನು ಪರಿಚಯಿಸಿಕೊಳ್ಳುವ ಪ್ರಯತ್ನವನ್ನು ಅನೇಕ ವಿದ್ವಾಂಸರು ಮಾಡಿದ್ದಾರೆ. ಈ ನಿಟ್ಟನಲ್ಲಿ ಇದೇ ಅಧ್ಯಾಯದ ಮೊದಲ ಭಾಗದಲ್ಲಿ ವೀರಗಲ್ಲುಗಳ ಉಗಮದ ಬಗ್ಗೆ ಚರ್ಚಿಸಲಾಗಿದೆ. ಪ್ರಸ್ತುತ ಭಾಗದಲ್ಲಿ ವೀರಗಲ್ಲುಗಳ ಬೆಳವಣಿಗೆಯ ಹಂತಗಳನ್ನು ಕರ್ನಾಟಕದ ವೀರಗಲ್ಲುಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ವಿವರಿಸಲಾಗಿದೆ. ಕರ್ನಾಟಕದ ಮಟ್ಟಿಗೆ ಹೇಳಬೇಕೆಂದರೆ ಇಲ್ಲಿಯ ವೀರಗಲ್ಲುಗಳಿಗೆ ಸುಮಾರು 1500 ವರ್ಷಗಳ ಇತಿಹಾಸವಿದೆ. ಇಷ್ಟು ಸುಧೀರ್ಘ ಅವಧಿಯಲ್ಲಿ ವೀರಗಲ್ಲುಗಳು ಆಯಾ ಕಾಲದ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕøತಿಕ ಅಂಶಗಳನ್ನು ಮೈಗೂಡಿಸಿಕೊಂಡು ಬೆಳೆದಿವೆ. ವೀರಗಲ್ಲುಗಳು ಶಿಲ್ಪಕಲೆಯ ಒಂದು ಭಾಗವೇ ಆಗಿದ್ದರಿಂದ ಶಿಲೆಯ ಆಯ್ಕೆ ಮತ್ತು ಕಲೆಯ ನಿರೂಪಣೆ ಕಾಲಕ್ಕೆ ತಕ್ಕಂತೆ ಅವುಗಳ ಮೇಲೆ ಆಗಿರುವುದನ್ನು ಗಮನಿಸಬಹುದು. ಅಂದರೆ ಆಯಾ ಅರಸರ ಕಾಲದಲ್ಲಿ ಶಿಲ್ಪಗಳು ಬಳಸಿದ ಶಿಲೆ ಮತ್ತು ಕಲಾತ್ಮಕ ಕಂಡರಣೆಯು ವೀರಗಲ್ಲುಗಳಲ್ಲಿಯೂ ಮೂಡಿಬಂದಿತು. ಬೇರೆ ಬೇರೆ ಅರಸರ ಕಾಲಾವಧಿಯಲ್ಲಿ ಉಂಟಾದ ವಾಸ್ತುಶಿಲ್ಪ ಮತ್ತು ಮೂರ್ತಿಶಿಲ್ಪಗಳ ಸ್ಥಿತ್ಯಂತರಗಳನ್ನು ವೀರಗಲ್ಲುಗಳಲ್ಲಿಯೂ ಕಾಣಬಹುದು. ವಾಸ್ತು ಮತ್ತು ಮೂರ್ತಿಶಿಲ್ಪದ ರಚನೆಯಲ್ಲಿ ತೊಡಗಿರುವ ಶಿಲ್ಪಿಗಳೇ ವೀರಗಲ್ಲುಗಳ ಕೆತ್ತನೆಯನ್ನು ಮಾಡಿರುವುದರಿಂದ, ವಾಸ್ತುಶಿಲ್ಪದಂತೆಯೇ ಇದು ಸಹ ಬೆಳೆದಿದೆ, ಮಾರ್ಪಾಡಾಗಿದೆ ಮತ್ತು ವೈಶಿಷ್ಟ್ಯವನ್ನು ಮೆರೆದಿದೆ. ಅಲ್ಲದೆ ಈ ಎರಡೂ ಪ್ರಕಾರಗಳಿಗೂ ಬಳಕೆಯಾಗಿರುವುದು ‘ಶಿಲಾ’ ಮಾಧ್ಯಮವೇ ಎಂಬುದು ಪ್ರಮುಖ ಅಂಶವಾಗಿದೆ. ಹಾಗಾಗಿ ಶಿಲ್ಪಕಲೆಯ ಒಂದು ಅಂಗವಾಗಿ ವೀರಗಲ್ಲುಗಳ ಶಿಲ್ಪ ಬೆಳೆಯಿತೆಂದರೆ ತಪ್ಪಾಗಲಾರದು. ಹಾಗಾಗಿ ವಿವಿಧ ಅರಸು ಮನೆತನಗಳ ಅವಧಿಯಲ್ಲಿ ನೆಡಲ್ಪಟ್ಟ ಸಾವಿರಾರು ವೀರಗಲ್ಲುಗಳ ಬೆಳವಣಿಗೆಯ ಮಜಲುಗಳನ್ನು ವಿವೇಚಿಸುವುದು ಸೂಕ್ತವೆನಿಸುತ್ತದೆ ವೀರಗಲ್ಲುಗಳು ಸಾಮಾನ್ಯವಾಗಿ ಶಿಲ್ಪದೊಂದಿಗೆ ಶಾಸನ ಪಾಠವನ್ನು ಹೊಂದಿರುವುದನ್ನು ಕಾಣಬಹುದು. ಬರೀ ಶಿಲ್ಪವನ್ನು ಮಾತ್ರ ಹೊಂದಿರುವ ಅಸಂಖ್ಯಾತ ವೀರಗಲ್ಲುಗಳು ಕರ್ನಾಟಕದಲ್ಲಿ ದೊರೆಯುತ್ತವೆ. ಆದರೆ ಶಿಲ್ಪವಿರದ, ಬರೀ ಶಾಸನ ಪಾಠವನ್ನು ಮಾತ್ರ ಹೊಂದಿರುವ ವೀರಗಲ್ಲುಗಳು ವಿರಳವೆಂದೇ ಹೇಳಬೇಕಾಗುತ್ತದೆ. ವೀರಗಲ್ಲುಗಳ ಬೆಳವಣೆಗೆಯ ಇತಿಹಾಸವನ್ನು ಕಟ್ಟಿಕೊಡುವಾಗ ಶಾಸನ ಪಾಠಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡದೆ, ಅವುಗಳ ಶಿಲ್ಪ ಮತ್ತು ನಿರೂಪಣಾ ತಂತ್ರವನ್ನು ಗಮನದಲ್ಲಿಟ್ಟುಕೊಂಡು ಇಲ್ಲಿ ವಿವರಿಸಲಾಗಿದೆ.

ವೀರಗಲ್ಲುಗಳಲ್ಲಿ ಸ್ವರ್ಗದ ಕಲ್ಪನೆ-ವರ್ಣನೆ
     ಯುದ್ಧದಲ್ಲಿ ಸತ್ತ ವೀರನು ಸ್ವರ್ಗಕ್ಕೆ ಹೋಗುತ್ತಾನೆ ಎಂಬುದು ಅಂದಿನ ಜನರಲ್ಲಿದ್ದ ಒಂದು ಸಾಮಾನ್ಯ ನಂಬಿಕೆ. ಆರಂಭದ ವೀರಗಲ್ಲುಗಳಲ್ಲಿ “ಸತ್ತುಸ್ವಗ್ರ್ಗಾಲಯಕ್ಕೇ¾Âದರ್”,90 “ಸ್ಸತ್ತುಸಲಯಕ್ಕೆ ಸನ್ದಂ”,91 “ಜೋಳವಾಳಿಯ ಮೆರೆದನು”,92 “ಸುರಲೋಕಪ್ರಾಪ್ತನಾದ”,93 “ಸತ್ತು ಸ್ವಗ್ರ್ಗಕ್ಕೆ ಪೋದ”,94 ಎಂಬ ಉಲ್ಲೇಖಗಳು ಕಂಡುಬರುತ್ತಿದ್ದು, ವೀರನು ಸ್ವರ್ಗವನ್ನು ಸೇರಿದನು ಎಂಬ ಸಾಮಾನ್ಯ ವರ್ಣನೆಯನ್ನು ಇಲ್ಲಿ ಕಾಣಬಹುದು. ಅಪರೂಪಕ್ಕೆ ಎನ್ನುವಂತೆ ಅನೇಕ ವೀರಗಲ್ಲುಗಳು ಕಾವ್ಯಾತ್ಮಕವಾಗಿ ಮೂಡಿಬಂದಿದ್ದು, ಅಲ್ಲಿ ವೀರನ ಸ್ವರ್ಗಾರೋಹಣವನ್ನು ತುಂಬಾ ಆಕರ್ಷಕವಾಗಿ ವರ್ಣಿಸಿರುವುದನ್ನು ಕಾಣುತ್ತೇವೆ. ಸಾಮಾನ್ಯವಾಗಿ ಇಂತಹ ವರ್ಣನೆ ವೀರಗಲ್ಲು ಪಾಠದ ಕೊನೆಯಲ್ಲಿ ಮೂಡಿಬಂದಿರುತ್ತದೆ. ಇಲ್ಲಿ ವೀರನನ್ನು ಅಪ್ಸರೆಯರು ಹೇಗೆ ವೈಭವದಿಂದ ಸ್ವರ್ಗಕ್ಕೆ ಕೊಂಡೊಯ್ದರೆಂಬ ಮತ್ತು ವೀರನೇ ತನ್ನ ಪರಾಕ್ರಮದಿಂದ ಸ್ವರ್ಗಲೋಕದ ಸುರಕನ್ನಿಕೆಯರನ್ನು ಒಲಿಸಿಕೊಂಡನೆಂಬ ನಿರೂಪಣೆ ಇರುತ್ತದೆ. ಇಂಥ ಕಾವ್ಯಾತ್ಮಕ ವರ್ಣನೆಯುಳ್ಳ ಅನೇಕ ವೀರಗಲ್ಲುಗಳು ಅಧ್ಯಯನ ಪ್ರದೇಶದಲ್ಲಿ ಕಂಡುಬರುತ್ತವೆ.
     ಆರನೆಯ ವಿಕ್ರಮಾದಿತ್ಯನ ಕಾಲದ ಹತ್ತಿಮತ್ತೂರು ಶಾಸನವು “ದೇವಲೋಕದಲರೊಪ್ಪುವ ಬೆಳ್ಸರಿ ನೋಡೆ ಭೋಗ್ರ್ಗರೆದವು ದೇವದುಂದುಬಿ ಗಳಂಬರದೊಳ್ ಸುರರಾಜ ನಗ್ಗದಚ್ಚರಸಯೆರಾಗಳನ್ತಿಳಿದು ದೇವವಿಮಾನಮ. ನೆ¿ಸುತ್ತೆಮಾದರದರುಯ್ದರಾ ಶಿವದಾಸನಾ ಸಿವಲೋಕಕತ್ರ್ತಿಯಿಂ”95 ಎಂದು ಶಿವದಾಸನು ಸತ್ತಾಗ ಆಕಾಶದಲ್ಲಿ ದೇವರಿಂದ ವಾದ್ಯಗಳು ಮೊಳಗಿದವೆಂಬ ವರ್ಣನೆಯಿದೆ. ಕ್ರಿ.ಶ.1236ರ ಸಿಂಘಣನ ಕಾಲದ ಕಳ್ಳಿಹಾಳ ವೀರಗಲ್ಲೊಂದು “ಸುರಗಣಿಕೆಯರುಯ್ಯಲು ಕಡುಗಲಿತನವೊಪ್ಪಿತ್ತು ಲಖ್ಖ ಸ್ವರ್ಗಪ್ರಾಪ್ತಂ”96 ಎಂದು ಉಲ್ಲೇಖಿಸುವಲ್ಲಿ ಯುದ್ಧದಲ್ಲಿ ಮಡಿದ ಲಖ್ಖೋಜನನ್ನು ಅಪ್ಸರೆಯರು ಸ್ವರ್ಗಕ್ಕೆ ಒಯ್ಯುವ, ಆತನ ವೀರತನವನ್ನು ಮೆಚ್ಚಿಕೊಳ್ಳುವ ವರ್ಣನೆಯಿದೆ. ಕ್ರಿ.ಶ. 1282 ರ ಯಾದವ ರಾಮಚಂದ್ರನ ಕಾಲದ ಕಾಗಿನೆಲ್ಲಿ ವೀರಗಲ್ಲು “ಪೂಮಳೆಗ¾õÉಯಲು ದಿವಿಜಂಗನೆಯರುವೊಯ್ದರು ಸಿವನಲಿ ಮುಕುತಿಯನು ಸಿದ್ಧಿವಡೆದಂ ಸಿದ್ಧನು”97 ಎಂದು ಉಲ್ಲೇಖಿಸುವಲ್ಲಿ ಯುದ್ಧದಲ್ಲಿ ಮಡಿದ ವೀರನಿಗೆ ಅಪ್ಸರೆಯರು ಹೂಮಳೆಗೈದು ಕರೆದೊಯ್ದರು ಮತ್ತು ಆತನು ಶಿವನಲ್ಲಿ ಮುಕ್ತಿ ಪಡೆದನು ಎಂಬ ವಿವರವಿದೆ. ಮಾಕನೂರು ವೀರಗಲ್ಲೊಂದು “ಕಲಿದಾಸಿಗಂ ಸುರರ ಲಲನೆಯರೊಳು ಕೂಡಿದಂ ರ್ಭಟರ್ ಪೊಗಳುವಿನೆಗಂ”98 ಎಂದು ಉಲ್ಲೇಖಿಸುವಲ್ಲಿ ವೀರನು ದೇವರನ್ನು, ಅಪ್ಸರೆಯರನ್ನು ಸೇರಿದ ವರ್ಣನೆಯಿದೆ. ಕ್ರಿ.ಶ.1185ರ ವೀರಗಲ್ಲಿನ “ಸುರದುಂದುಭಿಯೆಸೆಯಲುಕೆ ದೇವಕಂನೆಯರೊಯ್ದರ್”99 ಎಂಬಲ್ಲಿ ವೀರನಿಗೆ ಸ್ವರ್ಗದಲ್ಲಿ ನೀಡಿದ ಆಹ್ವಾನದ ವರ್ಣನೆಯಿದೆ. ಕ್ರಿ.ಶ.1183ರ ಕಲಕೇರಿಯ ವೀರಗಲ್ಲಿನಲ್ಲಿರುವ “ಝಸಮನಾಜ್ರ್ಜಿಸಿ ವೀರರಸಂ ತುಳ್ಕಾಡಿ ಕಾದಿದಂ ಕಲಿ ಚಲದಂಕರಾಮ ವಿಭು ಮಾದಣಸೆಟ್ಟಿಯ ಗನ್ಧವಾರಣಂ ಸುರಗಣಿಕಾಮನೋನಯನವಲ್ಲಭ ವೀರರ ವೀರ ಬಮ್ಮುಗ”100 ಎಂಬ ಉಲ್ಲೇಖದಲ್ಲಿ ವೀರಮರಣವನ್ನು ಹೊಂದಿದ ವೀರನು ಸ್ವರ್ಗಲೋಕದಲ್ಲಿ ಅಪ್ಸರೆಯರೊಂದಿಗೆ ಕಾಮಕೇಳಿಯಲ್ಲಿ ತೊಡಗುವ ಅವಕಾಶವನ್ನು 

ಆತ್ಮಬಲಿದಾನ ಸ್ಮಾರಕ ಶಿಲ್ಪಗಳು : ಲೌಕಿಕ
ಮಹಾಸತಿ(ಮಾಸ್ತಿ) ಪದ್ಧತಿಯ ಅರ್ಥ
ಜಗತ್ತಿನ ಬೇರೆ ಬೇರೆ ಭಾಗಗಳಂತೆ ಭಾರತದಲ್ಲಿ, ಹಾಗೆಯೇ ಕರ್ನಾಟಕದಲ್ಲಿ ರೂಢಿಯಲ್ಲಿರುವ ಅನೇಕ ಪದ್ಧತಿಗಳಂತೆ ಮಹಾಸತಿ ಪದ್ಧತಿಯೂ ಒಂದಾಗಿದೆ. ದೇವರ ಹೆಸರಿನಲ್ಲಿ ಪ್ರಾಣೋತ್ಕ್ರಮಣ ಮಾಡಿಕೊಳ್ಳುವ ಧಾರ್ಮಿಕ ಬಲಿದಾನ ಕಾಲಾಂತರದಲ್ಲಿ ಪ್ರಿಯವ್ಯಕ್ತಿಯ ಹೆಸರಿನಲ್ಲಿ ಪ್ರಾಣೋತ್ಕ್ರಮಣ ಮಾಡಿಕೊಳ್ಳುವ ಲೌಕಿಕ ಬಲಿದಾನಕ್ಕೆ ದಾರಿಮಾಡಿಕೊಟ್ಟಂತೆ ತೋರುತ್ತದೆ. ಈ ಲೌಕಿಕ ಬಲಿದಾದಲ್ಲಿ ಪತಿಗಾಗಿ ಪ್ರಿಯಸತಿಯ ಪ್ರಾಣೋತ್ಕ್ರಮಣ ಮತ್ತು ಒಡೆಯನಿಗಾಗಿ ಪ್ರಿಯವ್ಯಕ್ತಿಯ(ಸೇವಕನ) ಪ್ರಾಣೋತ್ಕ್ರಮಣ ಎಂದು ಎರಡು ವಿಧಗಳಿದ್ದು, ಅವುಗಳಿಗೆ ಕ್ರಮವಾಗಿ ಸಹಗಮನ(ಮಹಾಸತಿ) ಮತ್ತು ವೇಳವಾಳಿ(ಲೆಂಕವಾಳಿ) ಮರಣ ಎಂಬ ಹೆಸರುಗಳಿವೆ. ಧಾರ್ಮಿಕ ಬಲಿದಾನ ಪುರೋಹಿತ ವರ್ಗ ಯೋಚಿಸಿದ ಶೋಷಣೆಯಾದರೆ, ವೇಳವಾಳಿಯು ಪ್ರಭುವರ್ಗ ಯೋಚಿಸಿದ ಶೋಷಣೆ. ಹಾಗೆಯೇ ಇಲ್ಲಿ ಹೇಳಿದ ಸಹಗಮನವು ಪುರುಷವರ್ಗ ಯೋಚಿಸಿದ ಶೋಷಣೆ ಎಂದು ಹೇಳಬಹುದು. ಸತ್ತ ವ್ಯಕ್ತಿಯೊಂದಿಗೆ ಅವನ ಪ್ರಿಯವಸ್ತುಗಳನ್ನು ಹೂಳಬೇಕು, ಇಲ್ಲವೆ ಸುಡಬೇಕು ಎಂಬ ಭಾವನೆ ಈ ಸಂಪ್ರದಾಯಕ್ಕೆ ದಾರಿಮಾಡಿಕೊಟ್ಟಿರಬಹುದು. ಕರ್ನಾಟಕದಲ್ಲಿ ಈ ಪರಂಪರೆಯನ್ನು ಅರಿಯಲು ನಮಗೆ ಶಾಸನ ಸಾಹಿತ್ಯ, ಗ್ರಂಥ ಸಾಹಿತ್ಯ, ದಿನಚರಿ ಸಾಹಿತ್ಯ, ಜನಪದ ಸಾಹಿತ್ಯ, ಶಿಲ್ಪಗಳು, ಅವಶೇಷಗಳು ಮತ್ತು ವದಂತಿಗಳು ನೆರವಾಗುತ್ತವೆ. ಇವುಗಳಲ್ಲಿ ಸತಿ ಘಟನೆಯನ್ನು ತಿಳಿದುಕೊಳ್ಳಲು ತುಂಬ ವಿಶ್ವಾಸನೀಯ ಆಧಾರಗಳೆಂದರೆ ಮಹಾಸತಿ ಕಲ್ಲುಗಳು.1
‘ಸತಿ’ ಶಬ್ದ ಪರಿಮಿತ ಅರ್ಥದಲ್ಲಿ ಗಂಡನ ಮರಣದ ನಂತರ ಪತ್ನಿಯು ಸ್ವ-ಇಚ್ಛೆಯಿಂದ ಮರಣ ಹೊಂದುವುದನ್ನು ಸೂಚಿಸುತ್ತದೆ. ಅತ್ಯಂತ ಕ್ರೂರವೆನಿಸುವುದರ ಜೊತೆಗೆ ಸೋಜಿಗವೂ, ಪೂಜ್ಯನೀಯವೂ, ವೈಭವೋಪೂರ್ಣವೂ ಎನಿಸಿರುವ ಇದು ಒಂದು ಪದ್ಧತಿಯಾಗಿ ರೂಪಗೊಂಡುÀ ಸಮಾಜದ ಬಹುಮುಖ್ಯ ಭಾಗವಾಗಿ ಪರಿಣಮಿಸಿತ್ತು. ಶಾಸನಗಳಲ್ಲಿ ಸಾಮಾನ್ಯವಾಗಿ ಈ ಪದ್ಧತಿಯನ್ನು ತಿಳಿಸುವ ಅಂಶಗಳಿದ್ದರೆ ಅವುಗಳನ್ನು ‘ಮಾಸ್ತಿಕಲ್ಲು’ಗಳು ಎಂದು ಕರೆಯಲಾಗಿದೆ. ಕೆಲವು ಶಾಸನಗಳು ಮಾಸ್ತಿಕಲ್ಲನ್ನು ‘ಮದವಳಿಗೆ ಕಲ್ಲು’, ‘ಶಿಲಾಶಾಸನ’, ‘ಮಾಸ್ತಿಕಲ್ಲು’, ‘ಶಿಲಾಸ್ತಂಭಶಾಸನ’, ‘ಕಂಬ’ ಎಂದು ಉಲ್ಲೇಖಿಸಿವೆ. ಕೆಲವು ಶಾಸನಗಳಲ್ಲಿ ಸತಿಹೋದ ಘಟನೆಯ ವಿವರವಿದ್ದರೂ, ವೀರನಸ್ಥಾನ ಅಥವಾ ಸಮಾಧಿ ಮರಣಗೊಂಡವನಸ್ಥಾನ ಮುಖ್ಯವಾಗಿರುವುದರಿಂದ ಅವುಗಳನ್ನು ‘ವೀರಗಲ್ಲು’ಗಳೆಂದು ಹಾಗೂ ನಿಸಿದಿಗಲ್ಲುಗಳೆಂದು ಕರೆದಿರುವುದುಂಟು.2  ಹಾನಗಲ್ಲು ತಾಲೂಕಿನ ಬಾಳೂರು ನಿಸಿದಿಕಲ್ಲೊಂದರಲ್ಲಿ ಸಮಾಧಿ ಮರಣಗೊಂಡವನು ಮುದ್ದುಗೌಡನೆಂದು, ಮಾಸ್ತಿಯಾದವಳು ಅವನ ಪತ್ನಿ ಎಂದೂ ಹೇಳಲಾಗಿರುವುದನ್ನು ಇಲ್ಲಿ ಸ್ಮರಿಸಬಹುದು.3 ‘ಸತಿ’ ಎಂಬ ಶಬ್ದ ಈಗ ‘ಹೆಂಡತಿ’ ಎಂಬ ಅರ್ಥದಲ್ಲಿ ಬಳಕೆಯಾಗುತ್ತಿದೆ. ಮೊದಲು ಸತಿ ಶಬ್ದವನ್ನು ಈ ಅರ್ಥದಲ್ಲಿ ಉಪಯೋಗಿಸುತ್ತಿರಲಿಲ್ಲ. ಅದು ಸಹಗಮನ ಮಾಡಿದ ಸ್ತ್ರೀಯನ್ನು ಸೂಚಿಸುವ ಪದವಾಗಿತ್ತು. ‘ಮಹಾಸತಿ’, ‘ಮಾಸ್ತಿ’, ‘ಮಹಾಸತಿಕಲ್ಲು’ ಇವುಗಳೆಲ್ಲ ಅದೇ ಅರ್ಥವನ್ನು ಒಳಗೊಂಡಿವೆ. ಪ್ರಸ್ತುತ ಅಧ್ಯಾಯದಲ್ಲಿ ‘ಸತಿ’ ಎನ್ನುವ ಶಬ್ದ ಮಹಾಸತಿ ಪದ್ಧತಿಯನ್ನು ಸೂಚಿಸುವ ಸಲುವಾಗಿ ಬಳಸಲಾಗಿದೆ. ಇಂಗ್ಲೀಷ್‍ನ Sಚಿಣi, Suಣಣee ಶಬ್ದಗಳೂ ಈ ಅರ್ಥವನ್ನೇ ಇಟ್ಟುಕೊಂಡು ಬಳಕೆಯಾಗುತ್ತಿವೆ.4
‘ಮಾಸ್ತಿ’ ಎಂಬುದು ಸಂಸ್ಕøತದ ‘ಮಹಾಸತಿ’ ಎಂಬುದರ ಸಂಕ್ಷಿಪ್ತ ರೂಪವಾಗಿದೆ. ಗಂಡ ಸತ್ತ ಮೇಲೆ ಅವನ ಜೊತೆ ಪ್ರಾಣತ್ಯಾಗ ಮಾಡುವ ಸ್ತ್ರೀಯನ್ನು ಮಹಾಸತಿ ಅಥವಾ ಮಾಸ್ತಿ ಎಂದು ಕರೆಯುತ್ತಿದ್ದರು.5 ದೇವರಿಗಾಗಿ ಕೈಕೊಳ್ಳುವ ಆತ್ಮಬಲಿದಾನ, ಪ್ರಿಯ ವ್ಯಕ್ತಿಗಳಿಗೆ ಸಂಬಂಧಪಟ್ಟಂತೆ ಪತಿಯ ಸಲುವಾಗಿ ಸತಿ ಕೈಕೊಂಡರೆ ‘ಸಹಗಮನ ಮರಣ’. ಪತಿಯ ಯಾವುದೇ ರೀತಿಯ ಮರಣಾನಂತರ ಮಡದಿ ಪ್ರಮುಖವಾಗಿ ಅಗ್ನಿಪ್ರವೇಶದ ಮೂಲಕ, ಗೌಣವಾಗಿ ಇತರ ವಿಧಾನಗಳ ಮೂಲಕ ತನ್ನ ಪ್ರಾಣವನ್ನು ಬಲಿ ಕೊಡುತ್ತಿದ್ದಳು. ಹೀಗೆ ಪ್ರಾಣವನ್ನು ಅರ್ಪಿಸುವವಳೇ ಮಹಾಸತಿ. ಮಾಸ್ತಿ ಎಂಬುದು ಇದರ ತದ್ಭವ ರೂಪ.6 ಪ್ರಾಚೀನ ಕಾಲದಲ್ಲಿ ಗಂಡ ಸತ್ತ ನಂತರ ಅನೇಕ ಸ್ತ್ರೀಯರು ಪತಿಯ ಚಿತೆಯಲ್ಲಿ ಹಾರಿ ಅಥವಾ ಆತನ ಸಮಾಧಿಯಲ್ಲಿ ತಮ್ಮನ್ನು ಜೀವಂತವಾಗಿ ಹುಗಿಸಿಕೊಳ್ಳುವ ಮೂಲಕ ಪ್ರಾಣಾರ್ಪಣೆ ಗೈಯುವುದನ್ನು ಒಂದು ‘ಮೌಲ್ಯ’ ಎಂದು ಭಾವಿಸಿದ್ದರು. ಇಂಥ ಮೌಲ್ಯ ಮೆರೆದ ಸ್ತ್ರೀಯರನ್ನು ಮಹಾಸತಿಯರೆಂದು ಕರೆದು, ಅವರ ಸ್ಮರಣಾರ್ಥವಾಗಿ ಸ್ಥಾಪಿಸಿದ ಸ್ಮಾರಕಗಳನ್ನು ‘ಮಾಸ್ತಿಕಲ್ಲು’ ಎಂದು ಕರೆಯುತ್ತಾರೆ.
  ಪುರಾಣಗಳಲ್ಲಿ, ದಂತಕಥೆಗಳಲ್ಲಿ ಅತಿಯಾಗಿ ವೈಭವಿಕರಿಸಲಾಗಿರುವ ಪಾತಿವ್ರತ್ಯದ ವೈಭವೀಕರಣದ ಪರ್ಯಾಯ ರಕ್ಷಣೆಯೇ ಈ ಸತಿಪದ್ಧತಿ. ಸತಿ-ಪತಿಯರ ಸಂಬಂಧವನ್ನು ಭಾವನಾತ್ಮಕವಾಗಿ ಹೆಣೆದು ಪ್ರತ್ಯಕ್ಷವಾಗಿ ಅವರಿಬ್ಬರಲ್ಲಿ ಯಾವುದೇ ಅಂತರವಿಲ್ಲವೆಂಬುದನ್ನು ಸಾಕ್ಷಿಕರಿಸಲು ತಂದಂತಹ ಮಾರ್ಗವನ್ನು ಸತಿಪದ್ಧತಿ ಎಂದು ಕರೆದಿದ್ದಾರೆ. ಇದನ್ನು ನಿರಂತರವಾಗಿ ಗಂಡನ ಸೇವೆ ಮಾಡುವ ಇನ್ನೊಂದು ಮಾರ್ಗ ಎಂದಿದ್ದಾರೆ. ಮಧ್ಯಯುಗದಲ್ಲಿ ಉಂಟಾದ ರಾಜಕೀಯ ವೈರುದ್ಯಗಳು ಮತ್ತು ಸಾಮಾಜಿಕ ಕಟ್ಟುಪಾಡುಗಳಲ್ಲಿ ಆದ ಬದಲಾವಣೆಗಳಿಂದಾಗಿ ಈ ಪದ್ಧತಿ ತನ್ನ ಅರ್ಥ ಮತ್ತು ಹೊಸ ಜೀವಂತಿಕೆಯನ್ನು ಪಡೆದುಕೊಂಡಿತು. ಮುಸ್ಲಿಂ ಆಕ್ರಮಣಕಾರರಿಂದ ಹಿಂದೂ ಸ್ತ್ರೀಯರು ತಮ್ಮ ಶೀಲವನ್ನು ಕಾಪಾಡಿಕೊಳ್ಳಲು ತಮಗೆ ತಾವೇ ರೂಪಿಸಿಕೊಂಡ ಒಂದು ಪದ್ಧತಿ ಅಥವಾ ಮುಸ್ಲಿಂ ಆಕ್ರಮಣಕಾರರಿಗೆ ಸೋತು ಶರಣಾಗಿ ಲೈಂಗಿಕ ಅತ್ಯಾಚಾರಕ್ಕೆ ಒಳಗಾಗುವ ಮುಂಚೆಯೇ ಪತಿವ್ರತೆಯರಾಗಿ ಸಾಯುವುದು ಮೇಲೆಂದು ದೊಡ್ಡ ಚಿತೆಯನ್ನು ನಿರ್ಮಿಸಿ ಸಾಮೂಹಿಕವಾಗಿ ಚಿತೆಯೇರುವ ಮೂಲಕ ತಮ್ಮನ್ನು ತಾವು ಬಲಿದಾನ ಮಾಡಿಕೊಳ್ಳುವ ಪದ್ಧತಿಯೇ ಈ ಸತಿಪದ್ಧತಿಯಾಗಿದೆ. ಇದಕ್ಕೆ ಇನ್ನೊಂದು ಮಾದರಿ ಎಂದರೆ ‘ಜೋಹಾರ್,’ ಇದು ಕೂಡ ಅಂದು ಉತ್ತರ ಭಾರತದಲ್ಲಿ ಜಾರಿಯಲ್ಲಿತ್ತು ಎಂದು ಹೇಳಲಾಗುತ್ತದೆ.7
ಶಾಸನಗಳಲ್ಲಿ ಈ ಬಗೆಯ ಬಲಿದಾನಕ್ಕೆ ಸತಿ, ಮಹಾಸತಿ, ಮಾಸ್ತಿ, ಸಹಗಮನ, ಅನುಗಮನ, ಸಹಮರಣ, ಅನುಮರಣ, ತೋಳುಗೆಯ್ ಕೊಡು, ಪುರುಷವ್ರತ, ಸಹಾನುಭೂತಿ ಹೊಂದು, ಸಹಸಂಗತಿವಿಡು, ಅಗ್ನಿಪ್ರವೇಶ ಮಾಡು ಮತ್ತು ಮದುವಳಿಗೆ ಕಲ್ಲು ಎಂಬ ಪದಗಳನ್ನು ಬಳಸಲಾಗಿದೆ. ಶಾಸನವೊಂದು ಇದನ್ನು ಮಾಸ್ತಿಕಲ್ಲು ಎಂಬುದಕ್ಕೆ ಬದಲಾಗಿ ವೀರಗಲ್ಲು ಎಂದು ಕರೆದಿದೆ. ಅಲ್ಲದೆ ಶಾಸನವೊಂದರಲ್ಲಿ ‘ವೀರಮಾಸ್ತಿ’ ಎಂದು ಉಲ್ಲೇಖವಿದೆ.8 ಶಾಸನಗಳಲ್ಲಿ ಕಂಡುಬರುವ ‘ಕೈಕೊಟ್ಟಳ್’ ಮತ್ತು ‘ತೋಳು ಕೈಕೊಟ್ಟಳ್’ ಎಂಬ ಉಲ್ಲೇಖಗಳು ಮಾಸ್ತಿ ಆಚರಣೆಯ ಹಿಂದಿರುವ ಮನೋಭಾವವನ್ನು ಸೂಕ್ಷ್ಮವಾಗಿ ತಿಳಿಸುವಂತಿವೆ.9 ಇವುಗಳಲ್ಲದೆ ಮಸತಿ, ಸತಿಗಮನವಂ ಮಾಡಿದ, ತೋಳು ಕಯೆಗೊಟ್ಟು ಎಂಬ ಶಬ್ದಗಳೂ ಸಹ ಶಾಸನಗಳಲ್ಲಿ ಬಳಕೆಯಾಗಿದ್ದು, ಅವುಗಳೆಲ್ಲ ಪತಿಯ ಮರಣದ ನಂತರ ಪತ್ನಿಯು ಪ್ರಾಣತ್ಯಾಗ ಮಾಡಿದ್ದನ್ನು ಬೇರೆಬೇರೆ ಶಬ್ದಗಳಿಂದ ಹೇಳುತ್ತವೆ.10
ಒಟ್ಟಿನಲ್ಲಿ ತನ್ನ ಪತಿಯ ಮರಣದ ನಂತರ ಸತಿಯು ಅವನೊಡನೆ ‘ಪ್ರಾಣತ್ಯಾಗ’ ಮಾಡುತ್ತಿದ್ದ ಪದ್ಧತಿಯನ್ನು ‘ಸತಿ’(ಮಹಾಸತಿ) ಆಚರಣೆ ಎಂದು ಕರೆಯುತ್ತಿದ್ದರು. ಹೀಗೆ ಪ್ರಾಣಾರ್ಪಣೆ ಮಾಡಿಕೊಳ್ಳುತ್ತಿದ್ದ ಸ್ತ್ರೀ ತನ್ನ ಸ್ವ-ಇಚ್ಛೆಯಿಂದ, ಪಾತಿವ್ರತ್ಯವನ್ನು(ಶೀಲವನ್ನು) ಕಾಪಾಡಿಕೊಳ್ಳಲು, ಸಾಮಾಜಿಕ ಮೌಲ್ಯಕ್ಕೊಸ್ಕರ, ಸ್ವರ್ಗದಲ್ಲಿ ಪತಿಯನ್ನು ಸೇರುವ ಭಾವನೆಯಿಂದ, ಕೆಲವೊಮ್ಮೆ ಬಲಾತ್ಕಾರದಿಂದಲೂ ಪ್ರಾಣೋತ್ಕ್ರಮಣ ಮಾಡಿಕೊಳ್ಳುತ್ತಿದ್ದಳು. ಇಂಥವರನ್ನು ‘ಮಹಾಸತಿ’ಯರೆಂದು ಕರೆದು ಅವರ ಸ್ಮರಣೆಗಾಗಿ ಮಾಸ್ತಿಕಲ್ಲುಗಳನ್ನು ನೆಡುತ್ತಿದ್ದರು. ಮಹಾಸತಿಯ ಸಂಕ್ಷಿಪ್ತರೂಪವೇ ಮಾಸ್ತಿಯಾಗಿದೆ. ಇಲ್ಲಿ ‘ಸತಿ’ ಎಂಬ ಪದದ ಅಕ್ಷರಶಃ ಅರ್ಥವು ಸ್ಪಷ್ಟವಾಗಿ ‘ಸ್ತ್ರೀ’ ಎಂಬುದನ್ನು ಸೂಚಿಸಿದರೂ, ಸ್ತ್ರೀಯೊಬ್ಬಳು ತನ್ನ ಪತಿಯ ನಿಧನಾನಂತರ ಅವನೊಂದಿಗೆ ಮರಣ ಹೊಂದುವ ಸಾಮಾಜಿಕ ವಿಧಿಯ ಸಂಕೇತವಾಗಿದೆ.
ಸತಿ ಪದ್ಧತಿಯ ಉಗಮ ಮತ್ತು ಬೆಳವಣಿಗೆ 
ಮಾನವಿಕ ಸಂಸ್ಕøತಿಯಲ್ಲಿ ಹುಟ್ಟಿ ಬೆಳೆದುಬಂದಿರುವ ಅನೇಕ ವಿಶಿಷ್ಟ ಆಚರಣೆಗಳಲ್ಲಿ ಈ ಸತಿ ಪದ್ಧತಿಯೂ ಒಂದಾಗಿದೆ. ಭಾರತವನ್ನೊಳಗೊಂಡಂತೆ ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಪ್ರಚಲಿತದಲ್ಲಿದ್ದ ಸತಿ ಪದ್ಧತಿಯು ಎಲ್ಲಿ? ಹೇಗೆ? ಏಕೆ? ಹುಟ್ಟಿತು ಎಂಬ ಬಗ್ಗೆ ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಅದು ಸಾಗಿ ಬಂದ ದಾರಿಯನ್ನು ಲಭ್ಯವಿರುವ ಐತಿಹಾಸಿಕ ದಾಖಲೆಗಳಿಂದ, ಕೈಗೊಳ್ಳಲಾದ ಸಂಶೋಧನೆಗಳಿಂದ ಮತ್ತು ಇತಿಹಾಸಕಾರರು ನೀಡಿದ ವಿವಿಧ ಅಭಿಪ್ರಾಯಗಳಿಂದ ವಿಶ್ಲೇಷಿಸಬಹುದು. ವಿಶ್ವದ ಬೇರೆ ಬೇರೆ ದೇಶಗಳಲ್ಲಿ ತನ್ನದೇ ಆದ ಶೈಲಿಯಲ್ಲಿ ರೂಢಿಯಲ್ಲಿದ್ದ ಈ ಪದ್ಧತಿಯ ಮೂಲದ ಬಗ್ಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ. ಜಗತ್ತಿನ ವಿವಿಧ ಭಾಗಗಳಲ್ಲಿ ವಿವಿಧ ಜನಾಂಗಗಳ ಧಾರ್ಮಿಕ, ಸಾಮಾಜಿಕ ಮತ್ತು ಆರ್ಥಿಕ ಸ್ತಿತ್ಯಂತರಗಳನ್ನು ಬೇರ ಬೇರೆ ನೆಲೆಗಟ್ಟಿನಲ್ಲಿ ಗುರುತಿಸುವುದು ಇದಕ್ಕೆ ಕಾರಣವಿರಬಹುದು.
ಪ್ರಾಚೀನ ಜನಾಂಗಗಳಲ್ಲಿ ಸತ್ತವರು ಪರಲೋಕದಲ್ಲೂ ಇಹಲೋಕದ ಅವಶ್ಯಕತೆಗಳನ್ನು ಹೊಂದಿರುತ್ತಾರೆ ಎಂಬ ಧಾರ್ಮಿಕ ನಂಬಿಕೆ ಪ್ರಚಲಿತದಲ್ಲಿತ್ತು. ಆದ್ದರಿಂದ ಅವನ ಬಂಧುವರ್ಗದವರು ಅವನು ಬದುಕಿದ್ದಾಗ ಉಪಯೋಗಿಸುತ್ತಿದ್ದ ವಸ್ತುಗಳನ್ನು ಪರಲೋಕದಲ್ಲೂ ಪೂರೈಕೆ ಮಾಡುವ ಕರ್ತವ್ಯಕ್ಕೆ ಬದ್ಧರಾಗಿದ್ದರು. ಅದರಲ್ಲೂ ರಾಜನಾದವನು ಸತ್ತಾಗ, ಅವನೊಂದಿಗೆ ಕುದುರೆಗಳು, ಸೇವಕರು, ಪತ್ನಿಯರು ಮತ್ತು ಅವನು ಉಪಯೋಗಿಸುತ್ತಿದ್ದ ವಸ್ತುಗಳನ್ನು ಆತನೊಂದಿಗೆ ಸುಡುವ ಅಥವಾ ಹೂಳಿಡುವ ಸಂಪ್ರದಾಯ ಚಾಲನೆಯಲ್ಲಿತು.್ತ11 ಸತ್ತ ವ್ಯಕ್ತಿಯೊಂದಿಗೆ ಅವನ ಪ್ರಿಯವಸ್ತುಗಳನ್ನು ಹೂಳಬೇಕೆಂಬ ಇಲ್ಲವೆ ಸುಡಬೇಕೆಂಬ ಭಾವನೆ ಈ ಸಂಪ್ರದಾಯಕ್ಕೆ ದಾರಿ ಮಾಡಿಕೊಟ್ಟಿರಬಹುದು.12 ಅನೇಕ ವರ್ಷಗಳಿಂದ ಮಾನವ ಸಮಾಜದೊಂದಿಗೆ ಬೆರೆತು ಬಂದ ಈ ಪದ್ಧತಿ ಒಮ್ಮಿಂದೊಮ್ಮೆಲೆ ವಿಶ್ವದ ಬೇರೆ ಬೇರೆ ರಾಷ್ಟ್ರಗಳಲ್ಲಿ ಹುಟ್ಟಿ, ಏಕಕಾಲದಲ್ಲಿ ಪ್ರಸಾರಗೊಂಡಿಲ್ಲ. ಸ್ವರ್ಗ-ನರಕಗಳ ಪರಿಕಲ್ಪನೆ, ಪುನರ್ಜನ್ಮದಲ್ಲಿಯ ನಂಬಿಕೆ, ಪತಿ-ಪತ್ನಿಯರ ಭಾವನಾತ್ಮಕ ಸಂಬಂಧ, ಧಾರ್ಮಿಕ ನಂಬಿಕೆಗಳು, ಸಾಮಾಜಿಕವಾಗಿ ವಿಧವೆಯ ಸ್ಥಾನಮಾನ, ಗೌರವದ ಪ್ರಶ್ನೆ ಮತ್ತು ಪಾತಿವ್ರತ್ಯ ಪರಿಪಾಲನೆ ಮುಂತಾದ ಕಾರಣಗಳಿಂದಾಗಿ ನಿಧಾನವಾಗಿ ಸ್ವ-ಇಚ್ಛೆಯಿಂದ ಅನಿರೀಕ್ಷಿತವಾಗಿ ಪ್ರಾರಂಭವಾದ ಇದು ಕಾಲಾಂತರದಲ್ಲಿ ಒಂದು ಸಂಪ್ರದಾಯವಾಗಿ ಬೆಳವಣಿಗೆಗೊಂಡಿರುವುದು ಈ ಪರಂಪರೆಗೆ ಮೂಲವೆಂದು ತೋರುತ್ತದೆ. ಈ ನೆಲೆಗಟ್ಟಿನಲ್ಲಿ ಯೋಚಿಸಿದ ಹಲವು ವಿದ್ವಾಂಸರು ಸತಿಪದ್ಧತಿಯ ಮೂಲವನ್ನು ಮತ್ತು ಪ್ರಾಚೀನತೆಯನ್ನು ಗುರುತಿಸಲು ಪ್ರಯತ್ನಿಸುತ್ತಿದ್ದಾರೆ. 
   ಸುಮೇರಿಯನ್ನರ ‘ಉರ’ ನಗರದಲ್ಲಿ ಕೈಗೊಂಡ ಭೂಶೋಧನೆಯಲ್ಲಿ ಕ್ರಿ.ಶ.ಪೂ. 4000 ವರ್ಷಗಳ ಹಿಂದಿನ ಸಮಾಧಿಗಳು ಸಿಕ್ಕಿದ್ದು, ಅವು ಸತಿ ಪದ್ಧತಿಯ ಕುರುಹುಗಳನ್ನು ಹೊಂದಿವೆ. ಇಲ್ಲಿ ರಾಜನ ಸಮಾಧಿಯ ಸಮೀಪದಲ್ಲಿ 59 ಸಂಖ್ಯೆಗಳಗೂ ಹೆಚ್ಚು ಮೃತದೇಹಗಳ ಅವಶೇಷಗಳು ದೊರೆತಿದ್ದು, ಅವುಗಳಲ್ಲಿ ಆರು ಜನ ಸೈನಿಕರು, ಒಂಬತ್ತು ಜನ ಆಭರಣಗಳಿಂದ ಅಲಂಕೃತಗೊಂಡ ರಾಣಿಯರ ಶವಗಳಾಗಿರುವುದು ವಿಶೇಷವಾಗಿದೆ.13 ಅರಿಗ್ನೇಸಿಯನ್ ಆಳ್ವಿಕೆಯ ಕಾಲದ ಕ್ರಿ.ಪೂ.ಸು. 3100ನೆಯ ವರ್ಷದ್ದೆಂದು ಹೇಳಲಾದ ಈಜಿಪ್ಟಿನ ಅರಸು ಮನೆತನದ ಚಕ್ರವರ್ತಿ ಉವಾದ್ಜಿಯ ಗೋರಿಯಲ್ಲಿ ಯುವಕರ ಆಸ್ಥಿಪಂಜರದ ಜೊತೆಗೆ ಯುವತಿಯರ ಆಸ್ಥಿಪಂಜರಗಳೂ ಕಂಡುಬಂದಿದ್ದು, ಸ್ತ್ರೀ-ಪುರುಷರನ್ನು ಜೊತೆಯಲ್ಲಿ ಹೂಳಲಾಗುತ್ತಿತ್ತು ಎಂಬುದರ ಜೊತೆಗೆ ಸತಿ ಆಚರಣೆಯ ಕುರುಹನ್ನು ಕಾಣಬಹುದು.14 ಕ್ರಿ.ಶ.ಪೂ.3000 ವರ್ಷಕ್ಕೆ ಸೇರಿದ ಪ್ರಾಚೀನ ಚಿಯೊಪ್ಸ್ (ಛಿheoಠಿs) ಪಿರಾಮಿಡ್ಡೊಂದು ರಾಣಿಯರಿಗಾಗಿ ಬೇರೆ ಕೋಣೆಯನ್ನು ಹೊಂದಿದೆ.15 ಈಜಿಪ್ತಿನ ‘ಝೆರ್’ನ ಸಮಾಧಿಗೆ ಹೊಂದಿದಂತೆ ಇರುವ ಸಮಾಧಿಯಲ್ಲಿ 275 ರಾಣಿಯರೂ, 43 ಜನ ರಾಜಮನೆತನಕ್ಕೆ ಸೇರಿದವರೂ ಹಾಗೂ ಒಂದು ಮೈಲು ಅಂತರದಲ್ಲಿ 269 ಜನರೂ ಹುಗಿಯಲ್ಪಟ್ಟಿದ್ದಾರೆ.16 ಇವುಗಳೆಲ್ಲ ಸತಿ ಆಚರಣೆಯ ಪ್ರಾಚೀನ ಕುರುಹುಗಳಾಗಿವೆ.
ಗ್ರೀಕ್ ಅರಸರ ಆಳ್ವಿಕೆಯಲ್ಲೂ ಸತಿ ಘಟನೆಗಳು ನಡೆದಿರಬಹುದು ಎನ್ನುವುದಕ್ಕೆ ಅಲ್ಲಿಯ ಪ್ರಾಚೀನ ಐತಿಹ್ಯವೊಂದು ಎವೊಡ್ನೆ(ಇvoಜಟಿe) ಎನ್ನುವ ರಾಣಿ ತನ್ನ ಗಂಡನ ಚಿತೆಯಲ್ಲಿ ಹಾರಿ ಪ್ರಾಣಬಿಡುವ ಸನ್ನಿವೇಶವೇ ಸಾಕ್ಷಿಯಾಗಿದೆ.17 ಕ್ರಿ.ಶ.ಪೂ. ಮೊದಲನೆಯ ಶತಮಾನದಲ್ಲಿ ಈ ಪದ್ಧತಿ ಗೋಲ್ಸ್‍ರಲ್ಲಿ ಇದ್ದುದನ್ನು ಜೂಲಿಯಸ್ ಸೀಜರ್ ಗುರುತಿಸಿದ್ದಾನೆ.18  ಚೀನಾದಲ್ಲಿ ವಿಧವೆಯಾದವಳು ತನ್ನ ಸತ್ತ ಗಂಡನ ಹಿಂದೆ ಸ್ವರ್ಗಕ್ಕೆ ಹೋಗಲು ತನ್ನನ್ನು ತಾನೇ ಕೊಂದುಕೊಂಡರೆ ಅವಳ ಶವವನ್ನು ದೊಡ್ಡ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತಿತ್ತಂತೆ. ಜೊತೆಯಲ್ಲಿ ವಿಧವೆಯಾದವಳು, ತನ್ನ ಪಾತಿವ್ರತ್ಯ ಕಾಪಾಡಿಕೊಂಡು ಬಂದರೆ ಅವಳ ಗೌರವಾರ್ಥ ಕಮಾನನ್ನು ಮಾಡಿಸಿ ದೇವಾಲಯದಲ್ಲಿ ಪೂಜಿಸಲಾಗುತ್ತಿತ್ತು.19 ಇಂಡೋ-ಯೂರೋಪಿಯನ್ ಜನಾಂಗಗಳಾದ ಗೋಲರು, ನಾರ್ವೇಜಿಯನ್ನರು, ಗೋಧರು, ಕೆಲ್ಟರು, ಸ್ಲಾವ್ಹರು ಮತ್ತು ಥ್ರೇಶಿಯನ್ನರಲ್ಲಿ ಈ ಪದ್ಧತಿಯು ಆಚರಣೆಯಲ್ಲಿ ಇದ್ದುದರಿಂದ ಸತಿ ಆಚರಣೆ ಇಂಡೋ-ಯೂರೋಪಿಯನ್ನರಲ್ಲಿ ಅಸ್ತಿತ್ವದಲ್ಲಿತ್ತೆಂದು ಎ.ಎಸ್.  ಅಲ್ತೇಕರ್‍ರು ಅಭಿಪ್ರಾಯ ಪಡುತ್ತಾರೆ.20 ಸ್ಲಾವೊನಿಕ್ ಪ್ರದೇಶದ ವಿಧವೆಯರು ಸತ್ತ ಗಂಡನೊಡನೆ ಮರಣ ಹೊಂದಲು ಇಷ್ಟಪಡುವುದನ್ನು ರಾಲ್ಟನ್‍ರವರು ಗುರುತಿಸುತ್ತಾರೆ. ಸತ್ತ ಗಂಡನೊಡನೆ ವಿಧವೆಯನ್ನು ದಹನ ಮಾಡುವ ಆಚರಣೆ ಇಂಡೋ-ಜರ್ಮನ್ನರಲ್ಲಿತ್ತೆಂದು ಪೆಂಜೇರ್ ಹೇಳುತ್ತಾನೆ. ಥಾಮ್ಸನ್ ಎಂಬುವವನು ಟೊಂಗಾ, ಫಿಜಿಯನ್, ಮೌರಿಸ್ ಮುಂತಾದ ಆಫ್ರಿಕಾದ ಗುಂಪುಗಳಲ್ಲಿ ಮತ್ತು ಅಮೇರಿಕಾದ ಇಂಡಿಯನ್ ಬಣಗಳಲ್ಲಿ ಸಹಗಮನದ ಕುರುಹುಗಳಿರುವುದನ್ನು ಗುರುತಿಸಿದ್ದಾನೆ. ರಾವಿ ನದಿಯ ದಡದಲ್ಲಿ ನೆಲೆಸಿದ್ದ ಕಥೈಓ(ಏಚಿಣhಚಿio) ಜನಾಂಗದವರಲ್ಲಿಯೂ ಸತಿಯ ಆಚರಣೆ ಇತ್ತೆಂದು ತಿಳಿಯುತ್ತದೆ.21 ವೊಲ್ಗಾದ ಬಲ್ಗೇರಿಯನ್ ಜನಾಂಗದ ರಾಜನ ಹೆಂಡತಿಯೊಬ್ಬಳು ಸಹಗಮನ ಮಾಡಿದ್ದನ್ನು Ibಚಿಟಿ ಈಚಿಜhಟಚಿಟಿ ಎಂಬ ಅರಬ್ ಯಾತ್ರಿಕ ತಿಳಿಸುತ್ತಾನೆ.22 ಮೇಲಿನ ಅಭಿಪ್ರಾಯಗಳನ್ನು ಅವಲೋಕಿಸಲಾಗಿ ಸತಿ ಪದ್ಧತಿಯು ಪ್ರಪಂಚದ ಪ್ರಾಚೀನ ಸಂಸ್ಕøತಿಗಳಾದ ಸಿಂಧ್, ಸುಮೇರಿಯನ್, ಈಜಿಪ್ಟ ಮುಂತಾದವುಗಳಲ್ಲಿ ಅಸ್ತಿತ್ವದಲ್ಲಿತ್ತು ಎಂಬುದು ತಿಳಿದುಬರುತ್ತದೆ. ಈ ಪದ್ಧತಿಯು ಬೇರೆ ಬೇರೆ ದೇಶಗಳಲ್ಲಿ ಒಮ್ಮೆಲೆ ಅಸ್ತಿತ್ವಕ್ಕೆ ಬಂದಿದ್ದಲ್ಲವೆಂದು ಮತ್ತು ಒಂದು ನಿರ್ದಿಷ್ಟ ಕಾಲಕ್ಕೆ ಸೀಮಿತಿವಾಗಿಲ್ಲವೆಂಬುದು ಸ್ಪಷ್ಟವಾಗುತ್ತದೆ.
ಭಾರತದಲ್ಲಿ ಸತಿಪದ್ಧತಿಯ ಉಗಮ ಮತ್ತು ಪ್ರಾಚೀನತೆಯ ಬಗ್ಗೆ ವಿದ್ವಾಂಸರು ತಮ್ಮದೇ ಆದ ವಾದಗಳನ್ನು ಮುಂದಿಡುತ್ತಾರೆ. ಅವುಗಳೆಂದರೆ ಇದು ಮೂಲತಃ ಭಾರತದಲ್ಲಿ ಇರಲಿಲ್ಲ, ವಿದೇಶದಿಂದ ಭಾರತಕ್ಕೆ ಬಂದಿತೆಂಬುದು ಒಂದು ವಾದವಾದರೆ. ಇನ್ನೊಂದು ವಾದದ ಪ್ರಕಾರ ಸತಿ ಆಚರಣೆ ಮೂಲತಃ ಭಾರತದ್ದೇ ಎಂಬುದಾಗಿದೆ. ವಿ.ಎ. ಸ್ಮಿತ್ ಅವರು ಸತಿಪದ್ಧತಿ ಮೂಲತಃ ಸಿಥಿಯನ್ನರದ್ದಾಗಿದ್ದು, ಮಧ್ಯ ಏಷ್ಯಾದಿಂದ ಬಂದಿರಬಹುದಾದ ಆಚರಣೆ ಎಂದು ಅಭಿಪ್ರಾಯಪಡುತ್ತಾರೆ. ಕ್ರಿಸ್ತಶಕದ ಪ್ರಾರಂಭದಲ್ಲಿ ಸಿಥಿಯನ್ ರಾಜರು ಸತಿಪದ್ಧತಿಯನ್ನು ಅನುಸರಿಸುತ್ತಿದ್ದರು. ಅಲೆಕ್ಸಾಂಡರ್ ಮತ್ತಿತರರ ಪ್ರಭಾವದಿಂದ ಇದು ಭಾರತದ ಪಂಜಾಬ್, ತಕ್ಷಶಿಲೆ ಹಾಗೂ ರಾವಿನದಿ ದಂಡೆಯ ಕಥೈ ಜನರಲ್ಲಿ ಆಚರಣೆಗೆ ಬಂದಿತೆಂದು ಸಮರ್ಥಿಸುತ್ತಾರೆ. ಭಾರತ ಮತ್ತು ಸಿಥಿಯನ್ನರ ಸತಿ ಆಚರಣೆಯ ಲಕ್ಷಣಗಳು ಒಂದೇ ರೀತಿಯಲ್ಲಿರುದರಿಂದ ಇದು ಸಿಥಿಯನ್ನರಿಂದ ಭಾರತಕ್ಕೆ ಬಂದದ್ದೆಂಬ ವಾದವನ್ನು ಮುಂದಿಡುತ್ತಾ, ಸಿಥಿಯನ್ ಮತ್ತು ಥ್ರೇಸಿಯನ್‍ರ ಸತಿಪದ್ಧತಿಯಲ್ಲಿ ಸಾಮ್ಯವಿದೆ ಎಂದು ಹೇಳುತ್ತಾರೆ.23 ಎ.ಎಲ್. ಭಾಷ್ಯಂ ಅವರು ಈ ಪದ್ಧತಿ ಮಧ್ಯ ಏಷ್ಯಾದ ಅಲೆಮಾರಿಗಳಲ್ಲಿ ಆಚರಿಸಲ್ಪಡುತ್ತಿತ್ತು, ಭಾರತದ ಮೇಲೆ ಅವರ ಆಕ್ರಮಣಗಳಿಂದ ಇಲ್ಲಿ ಪ್ರಚಾರಕ್ಕೆ ಬಂದಿತು ಎಂದು ಹೇಳುತ್ತಾರೆ.24 ಎಡ್ವರ್ಡ್ ಥಾಮ್ಸನ್ ಅವರು ಸತಿ ಪದ್ಧತಿಯ ಉಗಮವನ್ನು ಭಾರತದ ಬುಡಕಟ್ಟು ಜನಾಂಗಗಳಲ್ಲಿ ಕಂಡುಕೊಳ್ಳಲು ಪ್ರಯತ್ನಿಸಿದ್ದಾರೆ. ಸತಿ ಆಚರಣೆ ಮೊದಲು ಭಾರತದ ಪ್ರಾಚೀನ ಬುಡಕಟ್ಟುಗಳಲ್ಲಿ ಪ್ರಚಲಿತದಲ್ಲಿತ್ತು. ಈ ಬುಡಕಟ್ಟು ಬಣಗಳು ಹಿಂದೂ ಧರ್ಮದಲ್ಲಿ ಕೂಡಿಕೊಂಡಾಗ ಅವರಲ್ಲಿಯೂ ಆಚರಣೆಗೆ ಬಂದಿತು ಎಂಬ ದೇಶೀ ಮೂಲವನ್ನು ತಿಳಿಸುತ್ತಾರೆ. ಹಾಗೆಯೇ ದುಬೈ ಅವರು ಸತಿ ಆಚರಣೆ ಹೊರಗಿನಿಂದ ಬಂದಿರದೆ, ಭಾರತ ಮೂಲದ್ದೇ ಎಂದು ಹೇಳುತ್ತಾರೆ. ಒಂದು ವೇಳೆ ಅದು ಹೊರಗಿನಿಂದ ಬಂದದ್ದಾಗಿದ್ದರೆ ಅದಕ್ಕೆ ಬ್ರಾಹ್ಮಣರು ಒಪ್ಪಿಗೆಯನ್ನು ಕೊಡಬೇಕಾಗಿತ್ತು. ಅಲ್ಲದೆ ಅವರಲ್ಲಿಯೂ ಸತಿಪದ್ಧತಿ ಆಚರಣೆಯಲ್ಲಿರಬೇಕಾಗಿತ್ತು. ಆದರೆ ಬ್ರಾಹ್ಮಣರು ಹತ್ಯಾವಿಧಿಗಳ ಪೌರೋಹಿತ್ಯವಹಿಸಿ ದಕ್ಷಿಣೆ ಪಡೆಯುತ್ತಿದ್ದರೆ ಹೊರತು ಸತಿ ಆಚರಣೆ ಅವರಲ್ಲಿರಲಿಲ್ಲ ಎಂದು ಹೇಳುತ್ತಾರೆ25. ವಿದ್ವಾಂಸರ ಈ ಅಭಿಪ್ರಾಯಗಳನ್ನು ಅವಲೋಕಿಸಲಾಗಿ ಭಾರತದಲ್ಲಿ ಸತಿಪದ್ಧತಿಯ ಮೂಲದ ಬಗ್ಗೆ ನಿಖರವಾದ ನಿರ್ಣಯಕ್ಕೆ ಬರಲು ಈವರೆಗೂ ಸಾಧ್ಯವಾಗಿಲ್ಲ.
ಕ್ರಿ.ಶ.1978ರಲ್ಲಿ ಉತ್ತರಪ್ರದೇಶದ ಪ್ರತಾಪಗರ್À ಜಿಲ್ಲೆಯ ಮಹಾದಹ ಎಂಬ ಹಳ್ಳಿಯಲ್ಲಿ ಕೈಗೊಂಡ ಭೂ ಉತ್ಖನನದಲ್ಲಿ ಎರಡು ಗೋರಿಗಳಲ್ಲಿ ಗಂಡು-ಹೆಣ್ಣಿನ ಎರಡು ಜೊತೆ ಅಸ್ಥಿಪಂಜರಗಳು ದೊರಕಿವೆ. ಈ ಸಂಶೋಧನೆಯಿಂದ ಸತಿಪದ್ಧತಿಯು ಕ್ರಿ.ಶ.ಪೂ.10,000 ಅಂದರೆ ‘ಮೆಸೊಲಿಥಿಕ್ ಯುಗ’ದಲ್ಲಿ ಇತ್ತೆಂದು ಹೇಳಬಹುದಾಗಿದೆ. ಸ್ಮಿತ್ ಹೇಳುವ ಸಿಥಿಯನ್ನರ ಮೂಲದ ವಾದವನ್ನು ಮೇಲಿನ ಸಂಶೋಧನೆಯ ಅಂಶಕ್ಕೆ ಹೋಲಿಸಿ ನೋಡಲಾಗಿ ಆ ಮೊದಲೇ ಭಾರತದಲ್ಲಿದ್ದ ಸತಿ ಆಚರಣೆಯು ಸಿಥಿಯನ್ನರ ಪ್ರಭಾವದಿಂದ ಮತ್ತಷ್ಟು ಬಲಿಷ್ಟಗೊಂಡಿತೆಂದು ಹೇಳಲು ಸಾಧ್ಯವಿದೆ.26 ಲೋಥಾಲ್ ಭೂ ಉತ್ಖನನದ ಸಂದರ್ಭದಲ್ಲಿ ಒಂದೇ ಗೋರಿಯಲ್ಲಿ ಗಂಡು-ಹೆಣ್ಣಿನ ಜೋಡಿ ಆಸ್ಥಿಪಂಜರಗಳು ಪತ್ತೆಯಾಗಿವೆ. ಇವುಗಳ ಕುರಿತು ಶಾಸ್ತ್ರೀಯ ಅಧ್ಯಯನವನ್ನು ಕೈಗೊಂಡ ಎಸ್.ಆರ್. ರಾವ್ ಅವರು ಭಾರತದಲ್ಲಿ ಆರ್ಯಪೂರ್ವ ಜನಾಂಗದವರಲ್ಲಿ ಸತಿ ಆಚರಣೆ ಜಾರಿಯಲ್ಲಿತ್ತು ಎಂದು ಹೇಳಿದ್ದಾರೆ.27 ವೇದಗಳಲ್ಲಿ ಅತ್ಯಂತ ಪ್ರಾಚೀನ ಗ್ರಂಥವಾದ ಋಗ್ವೇದದಲ್ಲಿ ಅಂತ್ಯೇಷ್ಣಿ ಸಂಸ್ಕಾರಕ್ಕೆ ಸಂಬಂಧಿಸಿದ ಎರಡು ಋಕ್ಕುಗಳಲ್ಲಿ ಸತಿ ಬಗ್ಗೆ ಹೀಗೆ ಬರುತ್ತದೆ. ‘ಉದೀಷ್ರ್ವನಾರಿ’ ಎಂಬ ಋಕ್ಕಿನಲ್ಲಿರುವ ‘ಉದಿಷ್ರ್ವ’ ‘ಏಹಿ’ ಈ ಪದಗಳು ಸಹಗಮನ ಮಾಡಲು ದ್ಯುಕ್ತಳಾದ ಪತ್ನಿಯನ್ನು ಹಾಗೆ ಮಾಡದಂತೆ ಆಗ್ರಹಿಸುವುದನ್ನು ಸೂಚಿಸುತ್ತದೆ28. ವಿಧವೆ ಸಹಗಮನ ಹೊಂದಲು ಇಚ್ಛಿಸಿ ಮಡಿದ ಪತಿಯೊಂದಿಗೆ ಚಿತೆಯ ಮೇಲೆ ಮಲಗಿದಂತೆಯೂ ಅವಳಿಗೆ ಮರಣ ಹೊಂದಲು ಆಸ್ಪದ ಕೊಡದೆ ‘ಚಿತೆ ಬಿಟ್ಟು ಕೆಳಗಿಳಿದು ಬಂದು ನಿನ್ನ ಮಕ್ಕಳು, ಸಂಪತ್ತಿನೊಂದಿಗೆ ಸುಖವಾಗಿ ಬಾಳು’ ಎಂದು ಉಳಿದವರು ಪ್ರಾರ್ಥನೆ ಮಾಡಿದಂತೆಯೂ ಅಥರ್ವಣವೇದದಲ್ಲಿ ಉಲ್ಲೇಖವಿದೆ29. ಹಾಗಾಗಿ ವೇದಗಳು ಈ ಪದ್ಧತಿಯನ್ನು ಅಷ್ಟೇನು ಪುರಸ್ಕರಿಸಿದಂತೆ ತೋರುವುದಿಲ್ಲ.
ಬೌದ್ಧ ಸಾಹಿತ್ಯಗಳು ಸಹಗಮನ ವಿಷಯದಲ್ಲಿ ಮೌನ ತಾಳಿವೆ. ಜೈನ ಧರ್ಮದಲ್ಲಿ ಸತಿ ಆಚರಣೆಗೆ ಅವಕಾಶ ಇರಲಿಲ್ಲವಾದರೂ ಹಿಂದೂ ಧರ್ಮದ ಪ್ರಭಾವದಿಂದ ಅದನ್ನು ಆಚರಿಸಿದ ಬಗ್ಗೆ ಅಲ್ಲಲ್ಲಿ ಮಾಹಿತಿಗಳು ದೊರೆಯುತ್ತವೆ. ಕೌಟಿಲ್ಯ ಇದನ್ನು ಉಲ್ಲೇಖಿಸಿಲ್ಲ ಹಾಗೂ ಸ್ಮøತಿಕಾರರಾದ ಮನು ಮತ್ತು ಯಾಜ್ಞವಲ್ಕ್ಯರೂ ಇದನ್ನು ಹೆಸರಿಸಿಲ್ಲ. ಮಾದ್ರಿಯ(ಪಾಂಡುರಾಜನ ಮಡದಿ) ಸಹಗಮನವನ್ನು ಬಿಟ್ಟರೆ ಮಹಾಭಾರತದಲ್ಲಿಯೂ ಈ ಪದ್ಧತಿಗೆ ಬೆಂಬಲವಿದ್ದಂತೆ ತೋರುವುದಿಲ್ಲ.30 ಪುರಾಣಗಳ ಕಾಲಕ್ಕೆ ಬಂದರೆ ಕೆಲವು ಸತಿ ಪ್ರಸಂಗಗಳು ದೊರೆಯುತ್ತವೆ. ಮಡಿದ ಗಂಡನ ಜೊತೆಯಲ್ಲಿ ಅಗ್ನಿಪ್ರವೇಶ ಮಾಡಿದ ವಿಧವೆ ಪತಿಸಹಿತ ಸ್ವರ್ಗಕ್ಕೆ ಹೋಗುತ್ತಾಳೆ ಎಂದು ಅಗ್ನಿಪುರಾಣದಲ್ಲಿದೆ. ಪದ್ಮಪುರಾಣದಲ್ಲಿ ಬ್ರಾಹ್ಮಣ ವಿಧವೆಯ ಸಹಗಮನಕ್ಕೆ ಸಹಾಯ ಮಾಡಿದವನು ಬ್ರಾಹ್ಮಣರ ಹತ್ಯೆ ಪಾಪಕ್ಕೆ ಗುರಿಯಾಗುತ್ತಾನೆ ಎಂದು ಹೇಳಿದೆ. ಕ್ರಿ.ಶ. ನಾಲ್ಕನೆಯ ಶತಮಾನದಲ್ಲಿ ಸಹಗಮನ ಪದ್ಧತಿ ಹೆಚ್ಚು ಪ್ರಚಾರಕ್ಕೆ ಬಂದಿತು. ವಾತ್ಸಾಯನನ ಕಾಮಸೂತ್ರ, ಕಾಳಿದಾಸನ ಕುಮಾರಸಂಭವ, ಭಾಸನ ಊರುಭಂಗ ಮತ್ತು ದೂತಘಟೋತ್ಗಜಗಳಲ್ಲಿ ಸಹಗಮನದ ಪ್ರಸಂಗಗಳು ಕಂಡುಬರುತ್ತವೆ. ಬೃಹಸ್ಪತಿ ಈ ಆಚರಣೆಯನ್ನು ಬೆಂಬಲಿಸಿದ್ದಾನೆ. ಗಾರುಡಿಗನು ಹುತ್ತದಲ್ಲಿ ಸೇರುತ್ತಿದ್ದ ಹಾವನ್ನು ಹೊರತೆಗೆಯುವಂತೆ ಸತಿ ಹೋಗುವ ಸ್ತ್ರೀ ನರಕದಲ್ಲಿ ಬಿದ್ದ ಪತಿಯನ್ನು ಹೊರತೆಗೆದು ಸ್ವರ್ಗಕ್ಕೆ ಕರೆದೊಯ್ದು ಅಲ್ಲಿ ಅವನೊಂದಿಗೆ ಮೂರುವರೆ ಕೋಟಿ ವರ್ಷ ಸುಖವಾಗಿರುವಳೆಂದು ಪರಾಶರಸ್ಮøತಿ ತಿಳಿಸುತ್ತದೆ31. ಹಾರಿತ ಇದನ್ನೇ ಅನುಮೋದಿಸುತ್ತಾನೆ. ಇದನ್ನು ಗಮನಿಸಿದರೆ ಕ್ರಿಸ್ತಶಕದ ಆರಂಭಕ್ಕೆ ಭಾರತದಲ್ಲಿ ಪುರಾಣ, ಶಾಸ್ತ್ರಗಳು, ಸ್ಮøತಿಕಾರರು ಸತಿಪದ್ಧತಿಗೆ ಸಮ್ಮತಿಯನ್ನು ಸೂಚಿಸಿದಂತೆ ತೋರುತ್ತದೆ. ಅಲ್ಲದೆ ಅಲ್ಲಲ್ಲಿ ವಿರೋಧಿಸಿದ್ದನ್ನೂ ಕಾಣಬಹುದು.
ಕಲ್ಹಣನು ತನ್ನ ರಾಜತರಂಗಿಣಿಯಲ್ಲಿ ಕಲಶ, ಉತ್ಕರ್ಷ ರಾಜರು ಮೃತರಾದಾಗ ಅವರÀ ಪತ್ನಿಯರು, ಉಪಪತ್ನಿಯರು ಹಾಗೂ ತಾಯಿ, ಸಹೋದರಿ, ಮಂತ್ರಿ, ಸೇವಕ ಮೊದಲಾದವರು ಚಿತೆಯೇರಿದ್ದನ್ನು ಚಿತ್ರಿಸಿದ್ದಾನೆ. ಉಚ್ಛಲ ರಾಜ ಮಡಿಯಲು ಅವನ ರಾಣಿಯರಾದ ದಿಡ್ಡೆ ಮತ್ತು ಜಯಮತಿಯರು ಸಹಗಮನಗೊಳ್ಳುವ ಸಂದರ್ಭದಲ್ಲಿ ತಮ್ಮನ್ನ ರಹಸ್ಯವಾಗಿ ರಕ್ಷಿಸುವಂತೆ ಮಂತ್ರಿಗಳಿಗೆ ಲಂಚ ಕೊಟ್ಟ ವಿಚಾರವನ್ನು ಕಲ್ಹಣ ತಿಳಿಸುತ್ತಾನೆ. ಕ್ರಿ.ಶ.ಸು. 1100ರಲ್ಲಿ ರಚಿತವಾದ ಕಥಾಸರಿತ್ಸಾಗರವು ದೇವಶರ್ಮನ ಪತ್ನಿ, ಅಗ್ನಿದತ್ತನೆಂಬ ಬ್ರಾಹ್ಮಣನ ಪತ್ನಿ ಹಾಗೂ ಮಾತೃದತೆ, ಚಂದ್ರಶ್ರೀಯರ ಸಹಗಮನ ಕಥನಗಳನ್ನು ಒಳಗೊಂಡಿದೆ. ಕ್ರಿ.ಶ. ಹತ್ತನೆಯ ಶತಮಾನದ ನಂತರ ಉತ್ತರಭಾರತದಲ್ಲಿ ಸತಿಪದ್ಧತಿ ಹೆಚ್ಚು ಪ್ರಚಾರಕ್ಕೆ ಬಂದಿತು. ಮೊದಮೊದಲು ಉನ್ನತ ಮನೆತನಗಳಲ್ಲಿ, ಅದರಲ್ಲಿಯೂ ಕ್ಷತ್ರಿಯರಲ್ಲಿ ಹೆಚ್ಚು ಆಚರಣೆಯಲ್ಲಿದ್ದ ಸತಿ ಪದ್ಧತಿಯನ್ನು ತದನಂತರದಲ್ಲಿ ಬ್ರಾಹ್ಮಣರೂ ಅಳವಡಿಸಿಕೊಂಡಂತೆ ತೋರುತ್ತದೆ.32 ಕಾಲಕ್ರಮೇಣ ಇವರೊಂದಿಗೆ ಸಾಮಾನ್ಯ ವರ್ಗಗಳಾದ ವೈಶ್ಯ, ಶೂದ್ರ ಮಹಿಳೆಯರೂ ಪಾಲ್ಗೊಳ್ಳತೊಡಗಿದರು. ಹೀಗೆ ವ್ಯಾಪಕವಾಗಿ ಬೆಳೆದುಬಂದ ಸತಿಪದ್ಧತಿ ಕ್ರಮೇಣ ದಕ್ಷಿಣದತ್ತ ಪ್ರಸಾರವಾಗತೊಡಗಿತು. ತಮಿಳಿನ ಶಿಲಪ್ಪದಿಕಾರಂನಲ್ಲಿಯ ಕನ್ನಗಿಯ ಸಹಗಮನ, ತೆಲುಗುರಾಜ್ಯದ ಪೆರಂತಲಮ್ಮಳ ಸಹಗಮನಗಳನ್ನು ಇಲ್ಲಿ ಹೆಸರಿಸಬಹುದು.33 ಎ.ಎಸ್. ಅಲ್ತೆಕರರು ಪಲ್ಲವ, ಚೋಳ, ಪಾಂಡ್ಯ ರಾಜರ ಕಾಲದಲ್ಲಿ, ಸುಮಾರು ಕ್ರಿ.ಶ.900ರವರೆಗೆ ಸತಿ ಉಲ್ಲೇಖ ಶಾಸನಗಳಲ್ಲಿ ಕಂಡುಬರುವುದಿಲ್ಲ. ಅಲ್ಲದೆ 13ನೇ ಶತಮಾನದವರೆಗೆ ರಜಪೂತರಲ್ಲಿಯೂ ಬಹುಸಂಖ್ಯೆಯಲ್ಲಿ ಸತಿಘಟನೆಗಳು ಆಗಿಲ್ಲವೆಂದು ಅಭಿಪ್ರಾಯಪಡುತ್ತಾರೆ.34 ಕ್ರಿ.ಶ.1206ರ ನಂತರ ಭಾರತದಲ್ಲಿ ಮುಸ್ಲಿಂ ಆಳ್ವಿಕೆ ಪ್ರಾರಂಭವಾಗುತ್ತದೆ. ದೆಹಲಿ ಸುಲ್ತಾನರು, ಮೊಘಲರು ಭಾರತದ ಬಹುಭಾಗವನ್ನು ತಮ್ಮ ಆಳ್ವಿಕೆಗೆ ಒಳಪಡಿಸುತ್ತಾರೆ. ಈ ಕಾಲದಲ್ಲಿ ಹಿಂದೂಗಳಲ್ಲಿ ಅದರಲ್ಲಿಯೂ ವಿಶೇಷವಾಗಿ ರಜಪೂತರಲ್ಲಿ ಸತಿ ಘಟನೆಗಳು ಬಿರುಸಾಗಿ ನಡೆದವು. ಮುಸ್ಲಿಂ ಅರಸರು ಇದನ್ನು ನಿಯಂತ್ರಿಸಲು ಪ್ರಯತ್ನಿಸಿದರಾದರೂ ಸತಿ ಆಚರಣೆ ಅವ್ಯಾಹತವಾಗಿ ಮುಂದುವರಿಯಿತು. ಜೋದ್‍ಪುರ್ ಅರಸ ಅಜಿತಸಿಂಗ್ 1724ರಲ್ಲಿ ಮರಣ ಹೊಂದಿದಾಗ ಅವನೊಂದಿಗೆ ಆತನ 64 ಜನ ರಾಣಿಯರು ಚಿತೆಯೇರಿದರೆಂದು ತಿಳಿದುಬರುತ್ತದೆ. ಬುಂದಿಯ ದೊರೆ ಬುದಸಿಂಗ್‍ನೊಂದಿಗೆ ಅವನ 84 ಜನ ರಾಣಿಯರು ಸಹಗಮನ ಮಾಡಿದ ದಾಖಲೆಯಿದೆ. ಸಿಖ್ಖರ ಗುರು ಅಮರದಾಸ ಇದಕ್ಕೆ ನಿರ್ಭಂಧ ವಿಧಿಸಿದ್ದರೂ ರಣಜಿತ್‍ಸಿಂಗ್‍ನೊಂದಿಗೆ ಹನ್ನೊಂದು ಜನ ರಾಣಿಯರು, ಖರಗ್‍ಸಿಂಗ್ ಜೊತೆ ಮೂರು ಜನ ರಾಣಿಯರು, ಬಸಂತ್‍ಸಿಂಗ್‍ನೊಂದಿಗೆ ಐದು ಜನ, ಕಿಶೋರಿಸಿಂಗ್ ಜೊತೆ ಹನ್ನೊಂದು ಜನ, ಹೀರಾಸಿಂಗ್‍ನೊಂದಿಗೆ ಇಪ್ಪತ್ನಾಲ್ಕು ರಾಣಿಯರು ಮತ್ತು ಸುಚೇತ್‍ಸಿಂಗ್ ಸತ್ತಾಗ 310 ಜನ ರಾಣಿಯರು ಸಹಗಮನ ಆಚರಿಸಿದ ದಾಖಲೆಗಳಿವೆ.35 ಉತ್ತರ ಭಾರತದಲ್ಲಿ ಮತ್ತು ದಕ್ಷಿಣ ಭಾರತದ ಕೆಲವು ರಾಜ್ಯಗಳಲ್ಲಿ 13ನೆಯ ಶತಮಾನದಿಂದ 16ನೆಯ ಶತಮಾನದವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸತಿ ಘಟನೆಗಳು ನಡೆದ ಬಗ್ಗೆ ಮಾಹಿತಿ ದೊರೆಯುತ್ತದೆ.
ಹದಿನಾರನೆಯ ಶತಮಾನದಲ್ಲಿ ಯೂರೋಪಿಯನ್ನರು ಭಾರತಕ್ಕೆ ಬರಲಾರಂಭಿಸಿ, ಇಲ್ಲಿ ತಮ್ಮ ಆಳ್ವಿಕೆಯನ್ನು ಸ್ಥಾಪಿಸಿದ ನಂತರ ಸತಿ ಆಚರಣೆ ತೀವ್ರವಾದ ಸ್ಥಿತಿಯನ್ನು ಮುಟ್ಟಿತು. ಬ್ರಾಹ್ಮಣ ಸ್ತ್ರೀಯರನ್ನು ಒಳಗೊಂಡಂತೆ ಪ್ರತಿಯೊಂದು ಸಂಪ್ರದಾಯಸ್ಥ ಕುಟುಂಬದಲ್ಲಿ ಇದು ಕಡ್ಡಾಯ ಆಚರಣೆಯಾಗಿ ರೂಪಗೊಳ್ಳಲು ಪ್ರಾರಂಭಿಸಿತು. ಕ್ರಿ.ಶ.1510ರಲ್ಲಿ ಪೋರ್ಚುಗೀಸ್ ಗವರ್ನರ್ ಅಲ್ಬುಕರ್ಕ್ ಗೋವಾ ಗಡಿಗಳಲ್ಲಿ ಸತಿ ಆಚರಣೆಯನ್ನು ನಿಷೇಧಿಸಿದ. ಚಿನ್‍ಸುರಾದಲ್ಲಿ ಡಚ್ಚರು ಇದನ್ನು ನಿಷೇಧಿಸಿದಂತೆ ಥಾಮ್ಸನ್ ಹೇಳುತ್ತಾನೆ. ಫ್ರೆಂಚರೂ ಕೂಡಾ ಇದಕ್ಕೆ ವಿರೊಧ ವ್ಯಕ್ತಪಡಿಸಿದರು. ಹಿಂದೂ ಧರ್ಮದ ಆಂತರಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡಲಿಚ್ಛಿಸದ ಬ್ರಿಟಿಷರು ಇದನ್ನು ಕಟ್ಟುನಿಟ್ಟಾಗಿ ತಡೆಯಲು ಪ್ರಯತ್ನಿಸದಿದ್ದ ಕಾರಣ ಸತಿ ಘಟನೆಗಳು ಮತ್ತಷ್ಟು ಹೆಚ್ಚಾದವೆಂದು ಥಾಮ್ಸನ್ ಹೇಳುತ್ತಾನೆ. ಪಾಶ್ಚಾತ್ಯ ಶಿಕ್ಷಣದ ಪ್ರಭಾವ ಮತ್ತು ಭಾರತದಲ್ಲಿ ಪ್ರಾರಂಭವಾದ ಸಮಾಜೋ-ಧಾರ್ಮಿಕ ಸುಧಾರಣಾ ಚಳುವಳಿಯ ಪರಿಣಾಮದಿಂದ ಮೊದಲ ಬಾರಿಗೆ ಕ್ರಿ.ಶ.1817ರಲ್ಲಿ ಬ್ರಿಟೀಷ್ ಸರ್ಕಾರ ಬ್ರಾಹ್ಮಣ ಸ್ತ್ರೀಯರಿಗೆ ಸಹಗಮನವನ್ನು ನಿಷೇಧಿಸುತ್ತದೆ. 1818ರಲ್ಲಿ ರಾಜಾರಾಮ್ ಮೋಹನ್‍ರಾಯ್ ಕರಪತ್ರಗಳನ್ನು ಹಂಚುವ ಮೂಲಕ ಇದರ ವಿರುದ್ಧ ಜಾಗ್ರತೆ ಮೂಡಿಸುತ್ತಾರೆ. ಕ್ರಿ.ಶ.1829 ಡಿಸೆಂಬರ್ 5 ರಂದು ವಿಲಿಯಂ ಬೆಂಟಿಂಕ್ ಬ್ರಿಟಿಷ್ ಅಧಿಪತ್ಯದ ಎಲ್ಲಾ ಪ್ರದೇಶಗಳಲ್ಲಿ ಸತಿಪದ್ಧತಿಯನ್ನು ನಿಷೇಧಿಸುವ ಕಾನೂನನ್ನು ಜಾರಿಗೆ ತಂದು ಅದನ್ನು ನಿಯಂತ್ರಿಸಲು ಪ್ರಯತ್ನಿಸುತ್ತಾನೆ. ಬ್ರಿಟಿಷರು ಅನೇಕ ದೇಶೀಯ ಸಂಸ್ಥಾನಗಳಲ್ಲಿಯೂ ಒತ್ತಾಯಪೂರ್ವಕವಾಗಿ ಸತಿ ಆಚರಣೆಯನ್ನು ಹತ್ತಿಕ್ಕಲು ಪ್ರಯತ್ನಿಸಿದ ಬಗ್ಗೆ ಥಾಂಮ್ಸನ್ ವಿವರಿಸುತ್ತಾನೆ.36 ಹೀಗಿದ್ದರೂ ಕೂಡಾ ಬ್ರಿಟೀಷ್ ಸರ್ಕಾರದ ಪರವಾನಿಗೆಯನ್ನು ಪಡೆದು ಹಾಗೂ ಕೆಲವೊಂದು ಬಾರಿ ಸರ್ಕಾರಕ್ಕೆ ಗೊತ್ತಾಗದಂತೆ ಸತಿ ಘಟನೆಗಳು ನಡೆದಿರುವುದನ್ನು ಗಮನಿಸದರೆ ಭಾರತೀಯ ಸಮಾಜದಲ್ಲಿ ಸತಿ ಪದ್ಧತಿ ಆಳವಾಗಿ ಬೇರುಬಿಟ್ಟಿರುವ ಅಂಶವನ್ನು ಮನಗಾಣಬಹುದು.
ಸತಿ ಪದ್ಧತಿಯ ಬಗ್ಗೆ ಅತಿಶಯೋಕ್ತಿಗಳಿದ್ದರೂ ನಂಬಲರ್ಹ ಮತ್ತೊಂದು ಸಾಹಿತ್ಯಿಕ ಆಧಾರವೆಂದರೆ ವಿದೇಶಿ ಬರಹಗಾರರ ವರದಿಗಳು ಮತ್ತು ದಿನಚರಿಗಳು. ಪ್ರಮುಖವಾಗಿ 13ನೇ ಶತಮಾನದಿಂದ 16ನೇ ಶತಮಾನದವರೆಗೆ ಭಾರತಕ್ಕೆ ಭೇಟಿನೀಡಿದ ಮಾರ್ಕೊಪೋಲೋ, ಫ್ರೈಯರ್ ಓಡೊರಿಕ್, ಸರ್ ಜಾನ್‍ಮಾಂಡವಿಲ್ಲೆ, ಇಬ್ನ್ ಬತುತಾ, ನಿಕೊಲೊ ದೆ ಕೊಂತಿ, ದು ಆರ್ತೆ ಬಾರ್ಬೊಸಾ, ಫೆರ್ನಾಂವ್ ನೂನಿಜ್, ಸೀಜರ್ ಫ್ರೆಡರಿಕ್, ಜಾನನ್ ಹ್ಯೂಘೆÉನ್ ಘನಲಿನ್ ಘಾಟಿನ್, ಫ್ರೆಆರ್ ಜೋರ್ಡಾಸನ್, ಫಾದರ್ ಅಂತೋನಿ ಮಾನ್ಸೆರೆಟ್, ಗಾಸ್ಟಾರೋ ಬಾಲ್ಟಿ, ರಾಲ್ವ್‍ಪಿಚ್ ಮುಂತಾದವರ ಅಮೂಲ್ಯ ಮಾಹಿತಿಗಳು ಸತಿ ಪದ್ಧತಿಯ ಬಗ್ಗೆ ತಿಳಿಸುತ್ತವೆ. ಅಲ್ಲದೆ 17 ಮತ್ತು 18ನೆಯ ಶತಮಾನದಲ್ಲಿ ಈ ಪದ್ಧತಿಯ ಬಗ್ಗೆ ಬರೆದ ವಿಲಿಯಂ ಹಾಕಿನ್ಸ್, ಸರ್ ಥಾಮಸ್‍ರೋ, ಎಡ್ವರ್ಡ್ ಟೆರ್ರಿ, ಫ್ರಾನ್ಸುವಾ ಪಿರಾರ್ದ್ ಲವಲ್, ಪೀಟರ್ ಪ್ಲೋರೀಸ್, ಅಂತೋ ನಿಷೋರರ್, ವಿಲಿಯಂ ಮೆಥ್ವೋಲ್ಡ್, ಫ್ರಾನ್ಸಿಸ್ಕೋ ಪೆಲ್ಸಾರ್ಟ್, ಮನುಮೆ ಬರ್ರಾಡಾಸ್, ಪೀಟರ್ ಮಂಡಿ, ಪಿಯತ್ರೊ ಡೆಲ್ಲಾವಲ್ಲಿ, ಮಂಡೆಲ್ ಸ್ಲೊ, ಥಾಮಸ್ ಹೆರ್ಬರ್ಟ್, ನಿಕೊಲೊಮನುಚಿ ಮುಂತಾದವರ ಬರವಣಿಗೆಗಳನ್ನು ಇಲ್ಲಿ ಸ್ಮರಿಸಬಹುದು.37
ಕರ್ನಾಟಕದ ಮಟ್ಟಿಗೆ ಹೇಳಬೇಕೆಂದರೆ ಕ್ರಿ.ಶ. 450ರ ಕಾಲಾವಧಿಯ ಸೊರಬ ತಾಲೂಕಿನ ಕವಡಿ ಶಾಸನೋಕ್ತ ಕದಂಬ ರವಿವರ್ಮನ ರಾಣಿ ತನ್ನ ಪತಿಯೊಂದಿಗೆ ಮುಕ್ತಳಾದಳೆಂದು ಹೇಳುವ ಘಟನೆಯು ಸಹಗಮನದ ಪ್ರಥಮ ಉಲ್ಲೇಖವಾಗಿದೆ.38 ಮುಂದೆ ಸುಮಾರು ನಾಲ್ಕು ಶತಮಾನಗಳ ಕಾಲ ಕರ್ನಾಟಕದಲ್ಲಿ ಎಲ್ಲಿಯೂ ಸಹಗಮನದ ಘಟನೆಗಳು ನಡೆದ ಬಗ್ಗೆ ದಾಖಲೆಗಳು ದೊರೆಯುವುದಿಲ್ಲ. ಕರ್ನಾಟಕದ ಎಲ್ಲಾ ಮಾಸ್ತಿಕಲ್ಲುಗಳ ಶಾಸನಪಾಠಗಳು ಪ್ರಕಟವಾದಲ್ಲಿ ಮಾತ್ರ ಈ ಕಾಲಾವಧಿಯ ಸತಿ ಆಚರಣೆಯ ಬಗ್ಗೆ ನಿರ್ದಿಷ್ಟವಾಗಿ ಹೇಳಲು ಸಾಧ್ಯವಾಗಬಹುದು. ಕದಂಬರ ನಂತರ ಕಂಡುಬರುವ ಸತಿ ಉಲ್ಲೇಖವೆಂದರೆ ಕ್ರಿ.ಶ.908ರ ಹೆಗ್ಗಡೆ ತೊಮ್ಮನ ಹೆಂಡತಿ ಬಳಕ್ಕಳ ಸಹಗಮನ ಘಟನೆ.39 ಕರ್ನಾಟಕದಲ್ಲಿ ಸಹಗಮನದ ಸ್ಪಷ್ಟ ಐತಿಹಾಸಿಕ ನಿದರ್ಶನ ಕ್ರಿ.ಶ.972ರ ಸೊರಬ ತಾಲೂಕು ಬೆನ್ನೂರು ಶಾಸನದಲ್ಲಿ ದೊರೆಯುತ್ತದೆ. ಬದಿಯಣ್ಣ ಮರಣಿಸಿದಾಗ ಅವನ ಮಡದಿ ಜಕ್ಕರ್ಬೆ ಸಹಗಮನ ಆಚರಿಸಲು, ಅವಳ ತಂಗಿ ಜಾಬೆಯು ಮಾಸ್ತಿಕಲ್ಲನ್ನು ನಿಲ್ಲಿಸಿದಳೆಂದು ಈ ಶಾಸನದಿಂದ ತಿಳಿದುಬರುತ್ತದೆ.40 ಕ್ರಿ.ಶ.1051ರ ಶಾಸನವೊಂದರಲ್ಲಿ ಬೋಗಾರ ಕರಡಿಯ ಸೆಟ್ಟಿ ಮಡಿದಾಗ ಅವನ ‘ಮದುವಳಿಗೆ’ ನಾಗಮ್ಮ ಸಹಗಮನ ಮಾಡಿದ ವಿಷಯವಿದ್ದು, ಅವಳಿಗಾಗಿ ನಿಲ್ಲಿಸಿದ ‘ಮಾಸಿಕಳು’(ಮಾಸ್ತಿಕಲ್ಲು)ವಿನ ವಿಷಯವಿದೆ. ಹೆಗ್ಗಡೆದೇವನಕೋಟೆಯ ಬೆಳತೂರು ಶಾಸನವು ‘ಅನುಗಮನ’ ಮರಣವನ್ನು ಉಲ್ಲೇಖಿಸುತ್ತದೆ. ದೇಕಬ್ಬೆಯ ಮಾಸ್ತಿ ಮರಣವನ್ನು ವರ್ಣಿಸುವ ಈ ಶಾಸನದಷ್ಟು ವಿಸ್ತಾರವಾದ ಶಾಸನ ಕನ್ನಡದಲ್ಲಿ ಮತ್ತೊಂದಿಲ್ಲ. ಕ್ರಿ.ಶ.ಸು1088ರ ಶಾಸನವೊಂದು ನವಲಾಷಿರಾಜ ಸತ್ತಾಗ ಅವನ ಎಳೆಯ ಹೆಂಡತಿಯೊಬ್ಬಳು ಬೆಂಕಿಯಲ್ಲಿ ಹಾರಿ ಪ್ರಾಣಬಿಟ್ಟ ವಿಷಯವಿದೆ. ಆರನೇ ಶತಮಾನದಿಂದ 12ನೆಯ ಶತಮಾನದ ಮಧ್ಯಭಾಗದವರೆಗೆ ಸಹಗಮನದ ಕೆಲವೇ ಕೆಲವು (ಕೇವಲ ಹತ್ತು) ನಿದರ್ಶನಗಳು ದೊರಕುತ್ತವೆ. ಮುಂದೆ ಇವುಗಳ ಸಂಖ್ಯೆಯು ಹೆಚ್ಚುತ್ತಾ ಹೋಗುತ್ತದೆ. ಕರ್ನಾಟಕದಲ್ಲಿ ವೀರ ಯುಗದೊಡನೆ ಪ್ರಬಲಗೊಂಡ ಸತಿ ಪದ್ಧತಿಯು ಹೊಯ್ಸಳ ಮತ್ತು ವಿಜಯನಗರ ಸಾಮ್ರಾಜ್ಯಗಳ ಕಾಲದಲ್ಲಿ ತನ್ನ ಪರಾಕಾಷ್ಠತೆಯನ್ನು ಮುಟ್ಟಿತು.41 ಇದಕ್ಕೆ ಕಾರಣ ಈ ಕಾಲಾವಧಿಯಲ್ಲಿ ಘಟಿಸಿದ ಹೆಚ್ಚು ಯುದ್ಧಗಳು ಮತ್ತು ಕರ್ನಾಟಕದ ಮೇಲೆ ಖಿಲ್ಜಿ, ತುಘಲಕ್ ಮತ್ತು ಶಾಹಿ ಸುಲ್ತಾನರು ಕೈಗೊಂಡ ದಾಳಿಗಳು ಕಾರಣವೆಂದು ಹೇಳಬಹುದು.
ಬ್ರಿಟೀಷರ ಕಾಲಾವಧಿಯ ಕರ್ನಾಟಕದ ಸತಿ ಪದ್ಧತಿಯ ಬಗ್ಗೆ ಬಾರ್ಬೋಸಾ(1500) ನೂನಿಝ್ ಮತ್ತು ಸೀಜರ್ ಫ್ರೆಡರಿಕ್(1563) ಹಾಗೂ ಪಿಯೆಟ್ರಡಲ್ಲೆವಲ್ಲೆ(1623) ಮುಂತಾದವರ ದಿನಚರಿಗಳು ಮತ್ತು ಮಿಷನರಿಯ ವರದಿಗಳು ತಿಳಿಸುತ್ತವೆ.42 ಜನಪದ ಸಾಹಿತ್ಯದಲ್ಲಿಯೂ ಸತಿ ಪ್ರಸಂಗಗಳು ಕಂಡುಬಂದಿವೆ. ಈರೋಬಿ ವಡ್ಡಗೆರೆ ನಾಗಮ್ಮ, ನಾಗವ್ವ ಮೊದಲಾದ ಕಥೆಗಳಲ್ಲಿ.43, ಶ್ರೀನಿವಾಸರ ಮಾಸತಿ ಎಂಬ ನಾಟಕದಲ್ಲಿ44 ಸಹಗಮನದ ಸನ್ನಿವೇಶಗಳಿವೆ. ಪ್ರಾದೇಶಿಕ ದೃಷ್ಟಿಯಿಂದ ಗಮನಿಸಿದರೆ ಕರ್ನಾಟಕದ ದಕ್ಷಿಣ ಭಾಗ ಮತ್ತು ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚು ಮಹಾಸತಿ ಘಟನೆಗಳು ಸಂಭವಿಸಿರುವುದು ಕಂಡುಬರುತ್ತದೆ. ಉತ್ತರ ಕರ್ನಾಟಕದ ಭಾಗದಲ್ಲಿ ಇದು ವಿರಳವೆಂದೇ ಹೇಳಬೇಕಾಗುತ್ತದೆ. ಇದಕ್ಕೆ ಕಾರಣ 12ನೇ ಶತಮಾನದಲ್ಲಿ ಈ ಭಾಗದಲ್ಲಿ ಆರಂಭವಾದ ಶರಣರ ಸಾಮಾಜಿಕ ಚಳುವಳಿಯ ಪ್ರಭಾವ ಎಂಬುದು ವಿದ್ವಾಂಸರ ಅಭಿಪ್ರಾಯವಾಗಿದೆ.45 ಪ್ರಸ್ತುತ ನಮ್ಮ ಅಧ್ಯಯನದ ಪ್ರದೇಶವು ಉತ್ತರ ಮತ್ತು ದಕ್ಷಿಣ ಕರ್ನಾಟಕಗಳ ಮಧ್ಯಬಿಂದುವಾಗಿದ್ದು, ಮಲೆನಾಡನ್ನು ಒಳಗೊಂಡಿದೆ. ಇಲ್ಲಿಯ ಮಲೆನಾಡು ಪ್ರದೇಶವು ಹಾನಗಲ್ಲು, ಹಿರೇಕೆರೂರು, ರಟ್ಟಿಹಳ್ಳಿ ತಾಲೂಕುಗಳನ್ನು ಒಳಗೊಂಡಿದ್ದು, ಇಲ್ಲಿ ಹೆಚ್ಚು ಮಹಾಸತಿ ಶಾಸನ ಶಿಲ್ಪಗಳು ಕಂಡುಬಂದಿವೆ. ಅರೆಮಲೆನಾಡಾದ ರಾಣೆಬೆನ್ನೂರು, ಹಾವೇರಿ ತಾಲೂಕುಗಳ ಕೆಲವು ಭಾಗಗಳÀಲ್ಲಿ ಹೆಚ್ಚು ಮಾಸ್ತಿಕಲ್ಲುಗಳು ಕಂಡುಬಂದರೆ, ಮೇಲಿನ ಎರಡು ತಾಲೂಕುಗಳ ಉಳಿದ ಭಾಗ ಹಾಗೂ ಶಿಗ್ಗಾಂವ, ಸವಣೂರು ತಾಲೂಕುಗಳಲ್ಲಿ ವಿರಳವಾಗಿ ಸಹಗಮನದ ಘಟನೆಗಳು ನಡೆದ ಬಗ್ಗೆ ಅಲ್ಲಿ ಕಂಡುಬಂದ ಸತಿಕಲ್ಲುಗಳೇ ಸಾಕ್ಷೀಕರಿಸುತ್ತವೆ.

ಮಹಾಸತಿ ಆಚರಣೆಯ ಕಾರಣಗಳು
   ಜಗತ್ತಿನಲ್ಲಿ ಕಾರಣಾಂತರಗಳಿಂದ ಹುಟ್ಟಿ ಸುದೀರ್ಘ ಕಾಲಾವಧಿಯವರೆಗೆ ಅಸ್ತಿತ್ವದಲ್ಲಿದ್ದ, ಸತಿಪದ್ಧತಿಯು ಇಂದು ಕಣ್ಮರೆಯಾಗಿದೆ. ಸತಿಪದ್ಧತಿಯ ಹುಟ್ಟು-ಬೆಳವಣಿಗೆ-ವಿನಾಶ ಇವುಗಳನ್ನು ಆಧಾರವಾಗಿಟ್ಟುಕೊಂಡು ಇದರ ಕಾರಣಗಳನ್ನು ಗುರುತಿಸುವುದಾದರೆ ಅದು ಕಾಲದಿಂದ-ಕಾಲಕ್ಕೆ, ಪ್ರದೇಶದಿಂದ-ಪ್ರದೇಶಕ್ಕೆ ಮತ್ತು ಒಂದು ಸಮಾಜದಿಂದ ಇನ್ನೊಂದು ಸಮಾಜಕ್ಕೆ ವಿಭಿನ್ನವಾಗಿದ್ದರೂ, ಅವುಗಳನ್ನು ಸ್ಥೂಲವಾಗಿ ಕ್ರೂಢೀಕರಿಸಿ ಹೇಳಬಹುದಾಗಿದೆ. ಈ ನಿಟ್ಟಿನಲ್ಲಿ ಐದನೆಯ ಶತಮಾನದಿಂದ ಬ್ರಿಟೀಷರ ಕಾಲಾವಧಿಯವರೆಗೂ ಕರ್ನಾಟಕದಲ್ಲಿ ಅಸ್ತಿತ್ವದಲ್ಲಿದ್ದ ಸತಿ ಆಚರಣೆಗೆ ಹಲವಾರು ಕಾರಣಗಳನ್ನು ಗುರುತಿಸಬಹುದು. ಇವುಗಳನ್ನು ವೈಯಕ್ತಿಕ ಕಾರಣಗಳು, ಸಾಮಾಜಿಕ ಕಾರಣಗಳು ಮತ್ತು ಧಾರ್ಮಿಕ ಕಾರಣಗಳು ಎಂದು ವಿಭಾಗಿಸಿ ಹೇಳವುದು ಸೂಕ್ತವೆನಿಸುತ್ತದೆ.
ಪತಿಯ ಮೇಲಿನ ಉತ್ಕಟ ಪ್ರೀತಿಯಿಂದ ಆತನ ಪತ್ನಿಯು ಸಹಗಮನವನ್ನು ಆಚರಿಸಿದ ಅನೇಕ ಘಟನೆಗಳನ್ನು ಕಾಣಬಹುದು. ಮಾನವ ಸಮಾಜದಲ್ಲಿ ಗಂಡು-ಹೆಣ್ಣಿನ ನಡುವೆ ಪತಿ-ಪತ್ನಿಯೆಂಬ ಸಂಬಂಧ ಯಾವಾಗ ಉದಯಿಸಿತೋ, ಅಂದಿನಿಂದಲೇ ಅವೆರಡು ಜೀವಗಳು ಬದುಕಿದರೂ ಜೊತೆಯಲ್ಲೆ, ಸತ್ತರೂ ಜೊತೆಯಲ್ಲೆ ಎಂಬ ಹಂತವನ್ನು ತಲುಪಿದಂತೆ ತೋರುತ್ತದೆ. ಈ ಭಾವನಾತ್ಮಕ ವೈಯಕ್ತಿಕ ಪ್ರಿತಿಯೇ ಸತಿಪದ್ಧತಿಯ ಉಗಮಕ್ಕೆ ಕಾರಣವಾಗಿರಬೇಕು. ಪತಿ ವಿಯೋಗದ ಶೋಕದಿಂದ ಅವನೊಟ್ಟಿಗೆ ಸಹಗಮನ ಮಾಡಿದ ಸಂದರ್ಭಗಳನ್ನು ತಿಳಿಸುವ ಕನ್ನಡ ಕಾವ್ಯಗಳು ಮತ್ತು ಜನಪದ ಸಾಹಿತ್ಯದಲ್ಲಿ ಹಲವು ಕಥನಗಳು ಉಂಟು. “ಗಂಡಂದಿರು ತೀರಿಹೋದರೆ ಹೆಂಡತಿಯರು ಗಂಡಂದಿರ ಚಿತೆಯಲ್ಲಿ ಬಿದ್ದು ಸಾಯುವುದು ಇಲ್ಲಿಯ ಪದ್ಧತಿ. ಗಂಡನಿಗೆ ಅತ್ಯಂತ ಪ್ರೀತಿಪಾತ್ರಳಾದ ಹೆಂಡತಿಯು ಸತ್ತ ಗಂಡನನ್ನು ಆಲಂಗಿಸಿಕೊಂಡು ಚಿತೆಯಲ್ಲಿ ಭಸ್ಮವಾಗುತ್ತಾಳೆ. ಉಳಿದ ಹೆಂಡತಿಯರು ಅನಂತರ ಚಿತೆಯಲ್ಲಿ ಬೀಳುತ್ತಾರೆ” ಎಂಬ ಇಬ್-ನೆ-ಬತುತಾನ ಹೇಳಿಕೆಯನ್ನು ನೋಡಿದರೆ ಅವರಲ್ಲಿಯ ಅನ್ಯೋನ್ಯತೆ ತಿಳಿಯುತ್ತದೆ.46 ಎಚ್. ತಿಪ್ಪೇಸ್ವಾಮಿಯವರು ‘ಪತಿಯೇ ಪರದೈವವೆಂಬ ಭಾವನೆಯಲ್ಲಿ ಬೆಳೆದ ಹೆಣ್ಣು, ಪತಿಯ ಮರಣವನ್ನು ಸಹಿಸಲಾರದೆ, ಏಕೈಕ ನಿಷ್ಠೆಯಿಂದ ಆತನನ್ನು ಹಿಂಬಾಲಿಸಿದ ಸ್ವ-ಸಂತೋಷದ ನಿರ್ಧಾರವೇ ಈ ಸಹಗಮನ ಪದ್ಧತಿಯ ಪ್ರಾರಂಭಕ್ಕೆ ಮೂಲವಾಗಿರಬೇಕು’ ಎಂದು ಅಭಿಪ್ರಾಯಪಟ್ಟಿದ್ದಾರೆ. ರಾಣೇಬೆನ್ನೂರು ತಾಲೂಕಿನ ಹೆಡಿಯಾಲ47 ಗ್ರಾಮದ ಮಾಸ್ತಿಕಲ್ಲೊಂದರ “ಆತನ ಅದ್ರ್ಧಾಂಗಿ ಮಲಿದೇವಿ ನಡಸಮಾಧಿಯನು ಹೊಕ್ಕು ದೇವರೊ . . . ಗಾ . . ಗಿ” ಎಂಬ ಉಲ್ಲೇಖವನ್ನು ಅವಲೋಕಿಸಿದಾಗ ಪತಿ-ಪತ್ನಿಯರು ಅಬೇದವೆಂದೂ, ಸಹಗಮನದಲ್ಲಿಯೂ ಅವರು ಅಭೇದರೆ ಎಂದೂ ಈ ಹಿನ್ನಲೆಯಲ್ಲಿ ಅವರ ಪ್ರೇಮ ಅಮರವಾದುದೆಂದೂ ಶಾಸನ ಕವಿ ಹೇಳಲು ಇಚ್ಚಿಸಿರುವುದನ್ನು ಮನಗಾಣಬಹುದು. ಅಲ್ಲದೆ ಹಾವೇರಿ ಜಿಲ್ಲೆಯ ಕಡಕೋಳ, ಗೊಡಚಿಕೊಂಡಗಳಲ್ಲಿ ದೊರಕಿರುವ ಮಾಸ್ತಿಕಲ್ಲುಗಳಲ್ಲಿ ಪತಿಯು-ಪತ್ನಿಯ ಭುಜವನ್ನು ತನ್ನ ತೋಳಿನಿಂದ ಬಳಸಿ ನಿಂತಿರುವುದನ್ನು ಮತ್ತು ಚಳಗೇರಿಯ ಮಾಸ್ತಿಕಲ್ಲೊಂದರಲ್ಲಿ ಪತಿ-ಪತ್ನಿಯರಿಬ್ಬರೂ ತಮ್ಮ ತೊಳುಗಳಿಂದ ಪರಸ್ಪರರ ಭುಜಗಳನ್ನು ಬಳಸಿ ನಿಂತಿರುವುದನ್ನು ನೋಡಿದರೆ ಸಾವಿನಲ್ಲೂ ಅವರ ಅನ್ಯೋನ್ಯತೆಯನ್ನು ಕಾಣಬಹುದು.
ಪಾತಿವ್ರತ್ಯದ ವೈಭವೀಕರಣವು ಸಹ ಸತಿಪದ್ಧತಿಗೆ ಒಂದು ಕಾರಣವೆನ್ನಬಹುದು. ಸಮಾಜದಲ್ಲಿ ಪುರುಷ ಪ್ರಾಧಾನ್ಯತೆ ಹೆಚ್ಚಾದಂತೆ ಸತಿ ಅವನ ಸ್ವತ್ತು ಎಂದು ಭಾವಿಸಲಾಯಿತು. ಸ್ತ್ರೀಯ ಒಳ್ಳೆಯ ನಡತೆ, ಶೀಲ, ಸೇವೆ, ಭಕ್ತಿಯನ್ನು ಪುರುಷ ಅಪೇಕ್ಷಿಸಲು ಪ್ರಾರಂಭಿಸಿದನು. ಈ ಹಿನ್ನೆಲೆಯಲ್ಲಿ ‘ಪಾತಿವ್ರತ್ಯ’, ‘ಮುತ್ತೈದೆ’ ಎಂಬ ಕಲ್ಪನೆ ಬೆಳೆಯಿತು. ‘ದೀರ್ಘಸುಮಂಗಲೀಭವ’, ‘ಅಖಂಡಸೌಭಾಗ್ಯವತೀಭವ’ ಎಂಬ ಮಾತುಗಳು ಪಾತಿವ್ರತ್ಯದ ಸೂಚಕಗಳಾಗಿವೆ. ಇವು ಹೆಣ್ಣು ಗಂಡನಿಗಿಂತ ಮುಂಚೆಯೇ ಸಾಯುವ ಆದರ್ಶವನ್ನು ಬಿಂಬಿಸುತ್ತವೆ. ಸತಿಪದ್ದತಿಯು ಪಾತಿವ್ರತ್ಯದ ಅಂತಿಮ ಹಾಗೂ ಶ್ಲಾಘನೀಯ ಕಾರ್ಯ ಎನಿಸಿತು. ವಿದೇಶಿ ಪ್ರವಾಸಿಗರಾದ ದು-ಅರ್ತೆ ಬಾರ್ಬೊಸಾ ಚಿತೆ ಏರುವುದನ್ನು ‘ಪತಿಭಕ್ತಿ’ ಎಂದು ತಿಳಿಸಿದರೆ, ನಿಕೊಲೊಮನೂಚಿ ಸತಿಹೋದವರನ್ನು ಮಹಾ ಸಾಧ್ವಿಯರೆಂದು ಕರೆಯುತ್ತಾನೆ ಹಾಗೂ ಡಿಯೊಡೇರಸ್ ಸಿಕ್ಯೂಲಸ್ ಸತಿಯಾದವರನ್ನು ‘ಶೀಲದ ಉತ್ತಮೋತ್ತಮ ಗುಣದವರು’ ಎಂದು ಕರೆದಿರುವುದನ್ನು ಇಲ್ಲಿ ಸ್ಮರಿಸಬಹುದು.48 ಶಾಸನವೊಂದು ‘ಗಣೇಶ್ವರನು ಆತನ ಪ್ರಾಣೇಶ್ವರಿ ಜೊಂಮಾಯಿ ಕೂಡಿ ಪತಿವ್ರತಾಗುಣದಿಂ ಅಗ್ನಿಪ್ರವೇಶಂ ಮಾಡಿ ಸಂಗ್ರಾಮ ರಂಗದೊಳು ಸ್ವರ್ಗ ಪ್ರಾಪ್ತರಾದರು’49 ಎಂದು ಉಲ್ಲೇಖಿಸುವಲ್ಲಿ ಪಾತಿವ್ರತ್ಯಕ್ಕಾಗಿ ಸತಿಯಾದ ನೇರ ನಿದರ್ಶನವನ್ನು ಕಾಣಬಹುದು. ಎಂ.ಎಂ. ಕಲಬುರ್ಗಿ ಅವರು ‘ಪತಿಯ ಮರಣದ ತರುವಾಯ ತನ್ನ ಬದುಕುವಿಕೆ ಮತ್ತು ಪಾವಿತ್ರ್ಯಗಳ ಅನಿಶ್ಚಿತತೆ ಕಾರಣವಾಗಿ ಸ್ತ್ರೀವರ್ಗವೇ ಇದನ್ನು ರೂಪಿಸಿಕೊಂಡಿರಬಹುದು’ ಎಂದು ಹೇಳಿದ್ದಾರೆ50.
ವೈಯಕ್ತಿಕ ಪ್ರತಿಷ್ಠೆಗಾಗಿ ಸತಿ ಆಚರಿಸಿದ ಘಟನೆಗಳನ್ನು ಕಾಣಬಹುದಾಗಿದೆ. ಕ್ರಿ.ಶ. 1445ರ ಕುಪ್ಪೇಗ್ರಾಮದ ಶಾಸನವೊಂದು ‘ಬೊಂಮರಸಗೌಡನೈದಿದ ದೇವಪದಮಂ ಆತನದ್ರ್ದಾಂಗಿ ಬಲುಚಕ್ಕ ಭೂತಳದೊಳಗುಳ್ಳ ಯುವತಿಯರ ಸಿರೋಮಣಿ ಸಹಗಮನಾತುರಮಂ ಮಾಡಿ ಕೂಡಿದರು ಶಿವಪದಮಂ’51 ಎಂದು ಹೊಗಳಿದೆ. ಇಂಥ ಹೊಗಳಿಕೆಗಳು ಸತಿಯಾದವಳಿಗೆ ಸಮಾಜದಲ್ಲಿ ಪ್ರತಿಷ್ಠೆಯನ್ನು ತಂದುಕೊಡುತ್ತಿದ್ದು, ಅದನ್ನು ಅವಳು ಬಯಸಿದ್ದಳು. ವಿದೇಶಿ ಪ್ರವಾಸಿ ಪಿಯತ್ರೊಡೆಲ್ಲಾವಲ್ಲೆ ಸತಿ ಪ್ರಸಂಗವೊಂದನ್ನು ವಿವರಿಸುತ್ತಾ ‘ತನ್ನ ಕೀರ್ತಿ ದೂರದೇಶಕ್ಕೂ ಮುಟ್ಟುವುದೆಂದು ಕೇಳಿ ಸತಿಯಾಗುವವಳು ಹಿಗ್ಗಿದಳು’ ಎಂದು ಬರೆಯುತ್ತಾನೆ.52 ಮಾಸ್ತಿ ಕಲ್ಲುಗಳನ್ನು ನೆಟ್ಟ ಉದ್ದೇಶವೂ ಸತಿಯ ಹೆಸರನ್ನು ಚಿರಾಸ್ಥಾಯಿಗೊಳಿಸುವುದೇ ಆಗಿದೆ ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದ್ದು, ಮಾಸ್ತಿಕಲ್ಲುಗಳನ್ನು ಸಾಮಾನ್ಯವಾಗಿ ಹೆಚ್ಚು ಜನರು ವೀಕ್ಷಿಸಬಹುದಾದ ಪ್ರದೇಶಗಳಲ್ಲಿ ನೆಡುತ್ತಿದ್ದರು. ಇಂಥವುಗಳ ಪ್ರೇರಣೆ ಸತಿಯಾಗಲು ಪ್ರೋತ್ಸಾಹಿಸಿದಂತೆ ತೋರುತ್ತದೆ.
ಮಾನರಕ್ಷಣೆಗಾಗಿ ಸಹಗಮನ ಆಚರಿಸಿದ ಪ್ರಸಂಗಗಳನ್ನು ಅದರಲ್ಲಿಯೂ ಮುಸ್ಲಿಂ ಆಳ್ವಿಕೆಯ ಕಾಲಾವಧಿಯಲ್ಲಿ ಹೆಚ್ಚಾಗಿ ಕಾಣಬಹುದು. ಪತಿಯ ಮರಣದ ನಂತರ ತನ್ನ ಶೀಲವನ್ನು ಕಾಪಾಡಿಕೊಳ್ಳಲು ತಾನು ಸಸಕ್ತಳಾಗದೆ ಮಾನ ಕಳೆದುಕೊಳ್ಳಬಹುದೆಂಬ ಸಂದೇಹ ಮತ್ತು ಪರಪುರುಷರಿಂದ ತನ್ನ ಮೇಲೆ ಆಕ್ರಮಣವಾಗಿ ಮಾನಹರಣ ಆಗಬಹುದೆಂಬ ಭಯದ ಕಾರಣವಾಗಿ ಸ್ತ್ರೀ ತಾನಾಗೇ ಸತಿ ಹೋಗಲು ಬಯಸಿರಬೇಕು. ಬಿ.ಎ. ಸಾಲೆತೊರೆ ಅವರು ‘ಸಂಘಟಿತ ಕಾರ್ಯಾಚರಣೆ ಯಶಸ್ಸು ಹೊಂದದೇ ಇದ್ದಾಗ, ರಾಣಿಯರು ಮತ್ತು ಸಾಮಾನ್ಯ ಸ್ತ್ರೀಯರು ಮಹಮ್ಮದಿಯರ ಕೈಯಲ್ಲಿ ಅಪಮಾನ ಪಡುವುದನ್ನು ತಪ್ಪಿಸಿಕೊಳ್ಳಲಿಕ್ಕೆ ಸಹಗಮನವನ್ನು ಆಚರಿಸಲೇಬೇಕಾಗಿತ್ತು’ ಎಂದಿದ್ದಾರೆ.53 ವಿಧವೆಯ ನಿಕೃಷ್ಟ ಜೀವನವೂ ಸಹ ಸತಿಪದ್ಧತಿಗೆ ಕಾರಣವೆಂದು ಹೇಳಬಹುದು. ಪತಿಯೊಂದಿಗೆ ಪತ್ನಿಯನ್ನು ‘ಸೌಭಾಗ್ಯವತಿ’ ಎಂದು ಗೌರವಿಸಲಾಯಿತು. ಇಂಥವಳಿಗೆ ತಾಳಿ, ಮೂಗುತಿ, ಓಲೆ, ಕಾಲುಂಗರ, ಬಳೆ, ಕುಂಕುಮ ಮತ್ತು ಅರಿಶಿಣ ಮುಂತಾದವು ಸೌಭಾಗ್ಯದ ಸಂಕೇತಗಳಾದವು. ಗಂಡ ಮರಣಿಸಿದರೆ ಇವಾವುಗಳು ಅವಳಿಗಿರಲಿಲ್ಲ. ತದನಂತರ ಅವಳಿಗೆ ಕೇಶ ಮುಂಡನ ಪ್ರಾರಂಭವಾಯಿತು. ಮಂಗಳ ಕಾರ್ಯಗಳಲ್ಲಿ ವಿಧವೆಗೆ ಪ್ರವೇಶವಿರಲಿಲ್ಲ. ಅಲ್ಬೆರೂನಿಯು ಹೆಂಗಸರು “ವಿಧವೆಯಾಗಿರುವುದಕ್ಕಿಂತ ಚಿತೆಯನ್ನೇರುವುದೇ ಉತ್ತಮವೆಂದು ಭಾವಿಸುತ್ತಾರೆ” ಎಂದು ಹೇಳುತ್ತಾನೆ.54 ಇವುಗಳೆಲ್ಲ ಸ್ತ್ರೀಯರು ವೈಯಕ್ತಿಕ ಕಾರಣಗಳಿಗಾಗಿ ಸತಿ ಆಚರಿಸಿದ ಕೆಲವು ಘಟನೆಗಳಾಗಿವೆ.
ವೈಯಕ್ತಿಕ ಕಾರಣಗಳಂತೆ ಕೆಲವು ಸಾಮಾಜಿಕ ಕಾರಣಗಳನ್ನೂ ಸಹ ಸತಿ ಪದ್ಧತಿಗೆ ಕೊಡಬಹುದು. ಪತ್ನಿ ತನ್ನನ್ನು ಅಗಲಬಾರದೆಂಬ ಪುರುಷನ ಸ್ವಾರ್ಥವೂ ಇದಕ್ಕೆ ಕಾರಣ ಇರಬಹುದು. ಪುರುಷನು ಪತ್ನಿಯನ್ನು ತನ್ನ ಆಸ್ತಿ ಎಂದು ಗಣಿಸಿ ತಾನು ಸತ್ತಾಗ ತನ್ನ ಪತ್ನಿ ತನ್ನೊಡನೆ ಬರಬೇಕು ಎಂಬ ಸ್ವಾರ್ಥ ಮನೋಭಾವ ಬೆಳೆಸಿಕೊಂಡು ಈ ಪದ್ಧತಿಯನ್ನು ಯೋಜಿಸಿರಲು ಸಾಧ್ಯವಿದೆ. ರಾಣೇಬೆನ್ನೂರು ತಾಲೂಕಿನ ಬೆನಕನಕೊಂಡದ ಮಾಸ್ತಿಕಲ್ಲೊಂದು ಚಟಯನಾಯಕನು ಬೊವಿದೇವ ಜಂಗುಳಿಮಂನೆಯರಗಂಡಗೆ ಕೊಟ್ಟ ಭಾಷೆಗೆ ತಲೆಕೊಡುವಾಗ ”ತಂನ್ನ ಹೆಂಡತಿಸಹಿತ ಯಿಬರುಂ ವೊಡೆಯರಿಗೆ ಕೊಟ್ಟಭಾಸೆಗೆ ತಲೆಗೊಟ್ಟರು” ಎಂಬಲ್ಲಿ ಪತಿಯು ತನ್ನ ಪತ್ನಿಯೊಂದಿಗೆ ಒಡೆಯನಿಗೆ ನೀಡಿದ ವಾಗ್ದಾನವನ್ನು ಪೂರ್ಣಗೊಳಿಸಲು ಇಚ್ಛಿಸಿರುವುದು ಸ್ಪಷ್ಟವಾಗುತ್ತದೆ. ಇದು ಸಾವಿನಲ್ಲೂ ತನ್ನ ಪತ್ನಿ ತನ್ನೊಂದಿಗಿರಲಿ ಎಂಬ ಪುರುಷನ ಸ್ವಾರ್ಥ ಭಾವನೆಯಲ್ಲದೆ ಮತ್ತೇನು ಎಂಬುದನ್ನು ಸೂಚಿಸುತ್ತದೆ. ತನ್ನ ಪತ್ನಿ ಇನ್ನೊಬ್ಬರ ವಶವಾಗಬಹುದೆಂಬ ಪುರುಷನ ಇಚ್ಛೆಯೂ ಸತಿಪದ್ಧತಿಗೆ ಕಾರಣವಿರಬಹುದು. ಇದರಲ್ಲಿ ಮೊದಲನೆಯದು ಪತಿಯ ಮರಣದ ನಂತರ ವಿಧವೆಯಾದವಳು ಪರಪುರುಷನ ಆಕ್ರಮಣಕ್ಕೀಡಾಗಿ ಅವನ ವಶವಾಗುವುದು ಅಥವಾ ತನ್ನ ಕಾಮನೆಗಳ ತೃಪ್ತಿಗಾಗಿ ಪರಪುರುಷರ ವಶವಾಗುವುದು, ಎರಡನೆಯದಾಗಿ ಯುದ್ಧದಲ್ಲಿ ಗೆದ್ದ ಪಕ್ಷದವರು ಸೋತವರ ಸ್ತ್ರೀಯರನ್ನು ಸೆರೆಹಿಡಿಯುತ್ತಿದ್ದರು. ಹೀಗೆ ಪರಪುರುಷ ಮತ್ತು ವೈರಿಗಳಿಗೆ ತಮ್ಮ ಪತ್ನಿಯರು ವಶವಾಗಬಾರದೆಂಬ ಕಾರಣಕ್ಕಾಗಿ ಹೋರಾಟ ವರ್ಗವು ಸತಿ ಆಚರಣೆಯಂಥ ಮಾರ್ಗವನ್ನು ಸ್ತ್ರೀಯರಿಗಾಗಿ ರೂಪಿಸಿತೆಂದು ಹೇಳಬಹುದು. ‘ತಾನು ಸತ್ತ ಮೇಲೆ ತನ್ನ ಪ್ರೇಯಸಿಯು ಇನ್ನೊಬ್ಬರ ವಶಳಾಗುವ ಸಾಧ್ಯತೆಯನ್ನು ಕಲ್ಪಿಸಿಕೊಂಡ ಪುರುಷನ ಅಸೂಯೆಯೂ ಸತಿ ಪದ್ಧತಿಗೆ ಕಾರಣವಿರಬಹುದು’ ಎಂದು ಎಂ. ಚಿದಾನಂದಮೂರ್ತಿಯವರು ಅಭಿಪ್ರಾಯಪಟ್ಟಿದ್ದಾರೆ.56
ಪತ್ನಿ ತನ್ನನ್ನು ಸಾಯಿಸಬಾರದೆಂಬ ಪುರುಷನ ಪೂರ್ವಾಲೋಚನೆ ಸಹ ಸತಿಪದ್ಧತಿಗೆ ಕಾರಣವೆಂದು ವಿದೇಶಿ ಪ್ರವಾಸಿಗರು ತಿಳಿಸುತ್ತಾರೆ. ಪ್ರಾಚೀನ ಭಾರತದಲ್ಲಿ ಪತ್ನಿಯರು ತಮ್ಮ ಗಂಡಂದಿರನ್ನು ಕೊಲ್ಲುತ್ತಿದ್ದ ವಿಷಯವನ್ನು ಪ್ರಸ್ತಾಪಿಸುತ್ತಾ, ಇದು ಸತಿಪದ್ಧತಿಯ ಉಗಮಕ್ಕೆ ಕಾರಣವಾಯಿತೆಂದು ತಿಳಿಸುತ್ತಾರೆ.57 ಸತಿಯಾದವಳ ಸಂಪತ್ತನ್ನು ಪಡೆಯುನ ಸಂಚು ಸಹ ಇದಕ್ಕೆ ಕಾರಣವಿರಬಹುದು ಎಂದು ಹೇಳುತ್ತಾ ಎಂ.ಎಂ. ಕಲಬುರ್ಗಿ ಅವರು ‘ಪತಿಯ ಮರಣದ ತರುವಾಯ ಸತಿಯನ್ನು ಮರಣ ಕೂಪಕ್ಕೆ ತಳ್ಳಿ ಅವಳ ಆಸ್ತಿಯನ್ನು ಸೆಳೆಯಲು ಪ್ರಭುವರ್ಗ ಇಲ್ಲವೆ ಪುರೋಹಿತ ಈ ಯೋಜನೆಯನ್ನು ರೂಪಿಸಿರಬಹುದು’ ಎಂದಿರುವರು.58 ಸತಿಯಾಗುವವಳು ಆಭರಣಗಳಿಂದ ಅಲಂಕೃತಳಾಗಿ ವಧುವಿನಂತೆ ಸಿಂಗರಿಸಿಕೊಂಡು ಮೆರವಣಿಗೆಯಲ್ಲಿ ಚಿತೆಯೆಡೆಗೆ ಸಾಗುವಾಗ ತನ್ನ ಆಭರಣಗಳನ್ನು ಸುತ್ತಲಿನ ಬಳಗದವರಿಗೆ ಹಂಚುವ ವಿಷಯವು ಜನಪದ ಸಾಹಿತ್ಯದಲ್ಲಿ ಉಲ್ಲೇಖಿತವಾಗಿರುವುದನ್ನು ಇಲ್ಲಿ ಸ್ಮರಿಸಬಹುದು. ಮನೆತನದ ಹಾಗೂ ಸಮಾಜದ ಪ್ರತಿಷ್ಠೆ ಸಹ ಈ ಪದ್ಧತಿಗೆ ಕಾರಣವಾಗಿದೆ ಎಂದು ಹೇಳಬಹುದು. ಕಾಲಕಳೆದಂತೆ ಸತಿ ಹೋಗುವುದು ಒಂದು ಜೀವನಮೌಲ್ಯವಾಗಿ ಪರಿಣಮಿಸಿತು. ಇಲ್ಲಿ ಕುಟುಂಬದ ಸಮಾಜದ ಒತ್ತಾಸೆಗಳು ಮತ್ತು ಪ್ರತಿಷ್ಠೆಗಳನ್ನು ಹೆಚ್ಚಿಸುವಲ್ಲಿ ಈ ಪದ್ಧತಿ ಮಹತ್ವದ ಪಾತ್ರವಹಿಸಿತು. ಹಾವೇರಿ ಜಿಲ್ಲೆಯ ಕ್ರಿ.ಶ.1382ರ ಮುತ್ತೂರು(ತಾ:ಬ್ಯಾಡಗಿ) ಮಾಸ್ತಿಕಲ್ಲು ಹನುಬರ ನನ್ನಿಯನ ಮಗ ಬೊಮ್ಮಯ ಮರಣಿಸಿದಾಗ ಆತನ ಹೆಂಡತಿ ಕಾಮಾಯಿ ಕೊಂಡದಲ್ಲಿ ಹಾರಿ ಸತಿಯಾಗುತ್ತಾಳೆ. ಇವರ ನೆನಪಿಗಾಗಿ ಕಿಟಗೊಂಡ ಎಂಬುವವನು ಕಲ್ಲು ನಿಲ್ಲಿಸಿದ ಉಲ್ಲೇಖವಿದೆ.59 ಹೆಡಿಯಾಲದ60 ಮಾಸ್ತಿಕಲ್ಲೊಂದು ಮಲಿದೇವಿ ಸಹಗಮನ ಆಚರಿಸಲು ಅವಳ ಮಗ ಮಾದೆನಾಯಕನು ಅವಳ ಪ್ರತುಮೆ ಪ್ರಥಿಷ್ಟೆ ಮಾಡಿಸಿದ ಬಗ್ಗೆ ತಿಳಿಸುತ್ತದೆ. ಬೆನಕನಕೊಂಡ61 ಮಾಸ್ತಿಕಲ್ಲಲ್ಲಿ ಚಟಯನಾಯಕನು ತನ್ನ ಹೆಂಡತಿಯೊಂದಿಗೆ ಒಡೆಯನಿಗೆ ನೀಡಿದ ಭಾಷೆಯಂತೆ ತಲೆಗೊಟ್ಟ ವಿಷಯವಿದೆ. ಇದನ್ನು ಮೆಚ್ಚಿ ಅವರ ಮಕ್ಕಳಿಗೆ ಭೂದಾನ ಮಾಡಿದ್ದನ್ನು ಅದು ಉಲ್ಲೇಖಿಸುತ್ತದೆ. ಮೇಲೆ ಉಲ್ಲೇಖಿಸಲಾದ ಸತಿಹೋದವಳ ಮನೆತನದವರು, ಸಮಾಜದವರು ಮಾಸ್ತಿಕಲ್ಲುಗಳನ್ನು ನಿಲ್ಲಿಸುವ ವಿಚಾರವಾಗಲೀ, ಅವಳು ತಮ್ಮ ಮಗಳೆಂದು ಕರೆದುಕೊಳ್ಳುವುದಾಗಲಿ ಮತ್ತು ಮಾಸ್ತಿಯಾದವಳ ಕುಟುಂಬಕ್ಕೆ ಉಂಬಳಿ-ದತ್ತಿ ಕೊಡುವುದಾಗಲೀ ಆ ಸಮಾಜದ, ಹಾಗೂ ಸತಿ ಮನೆತನಗಳ ಪ್ರತಿಷ್ಠೆ, ಗೌರವ, ಮೆರಗು ಕೊಡುವಂಥವು ಎಂಬುದನ್ನು ಸೂಚಿಸುತ್ತವೆ.
ಸತಿ ಆಚರಣೆಗೆ ಕೆಲವು ವಿದ್ವಾಂಸರು ಅಲೌಕಿಕ ಕಾರಣಗಳನ್ನು ಕೊಡುವುದುಂಟು. ಎ.ಎಸ್. ಅಲ್ತೇಕರ್ ಅವರು ‘ಮರಣ ಹೊಂದಿದ ರಾಜ ಅಥವಾ ಯೋಧ ಪರಲೋಕದಲ್ಲಿ ತನ್ನ ಹೆಂಡಂದಿರು, ಕುದುರೆಗಳು ಹಾಗೂ ಸೇವಕರನ್ನು ಬಯಸುತ್ತಿದ್ದ ಕಾರಣ ಇವನ್ನೆಲ್ಲ ಕೊಲ್ಲುವುದು ಅವಶ್ಯ ಹಾಗೂ ಅಪೇಕ್ಷಣೀಯವಾಗಿತ್ತು. ಆದುದರಿಂದ ಅವುಗಳನ್ನು ಅವನೊಡನೆ ಸುಡುತ್ತಿದ್ದರು ಅಥವಾ ಹೂಳುತ್ತಿದ್ದರು’ ಎಂದಿರುವರು.62 ಇದು ಪರಲೋಕದ ಪರಿಕಲ್ಪನೆಯು ಜನರಲ್ಲಿರುವುದನ್ನು, ಸತ್ತನಂತರ ಆ ಲೋಕದಲ್ಲಿ ಇಲ್ಲಿಯಂತೆ ಅವಶ್ಯಕ ವಸ್ತುಗಳನ್ನು ಉಪಯೋಗಿಸುತ್ತಾನೆಂಬ ನಂಬಿಕೆಯನ್ನೂ ತಿಳಿಸುತ್ತದೆ. ಹಾಗಾಗಿ ಸತ್ತ ವ್ಯಕ್ತಿಯ ಜೊತೆಯಲ್ಲಿ ಅವನಿಗೆ ಪ್ರಿಯವಾದ ವಸ್ತುಗಳನ್ನು ಕಳಿಸಿಕೊಡುವ ಪರಿಕಲ್ಪನೆ ಸತಿಪದ್ಧತಿಗೆ ಕಾರಣವಾಯಿತೆಂದು ಹೇಳಬಹುದು. ಸತಿ-ಪತಿಗಳಿಬ್ಬರೂ ಸ್ವರ್ಗ ಪಡೆಯುವ ನಂಬಿಕೆ ಸತಿಪದ್ಧತಿಗೆ ಕಾರಣವಾಯಿತೆಂದು ಹೇಳಲಾಗುತ್ತದೆ. ಡಾ. ಚೆನ್ನಕ್ಕ ಎಲಿಗಾರ ಅವರು ‘ಹೀಗೆ ಸಾಯುವುದರಿಂದ ಗಂಡನಿಗೆ ಸ್ವರ್ಗ ಪ್ರಾಪ್ತಿಯಾಗುವುದಲ್ಲದೆ, ತಾವು ಸ್ವರ್ಗ ಪಡೆದು ಮುಂದಿನ ಜನ್ಮದಲ್ಲಿ ಮತ್ತೆ ಪತಿಪತ್ನಿಯರಾಗಿ ಹುಟ್ಟುವೆವೆಂಬ ಕಲ್ಪನೆ’ ಎಂದು ಸತಿಪದ್ಧತಿಯ ಕಾರಣವನ್ನು ತಿಳಿಸಿದ್ದಾರೆ.63 ಅಲ್ಲದೆ ಬಸವರಾಜ ಕಲ್ಗುಡಿಯವರು ‘ಧರ್ಮ ನೀತಿಗಳ ಪ್ರಭಾವ, ಸ್ತ್ರೀಯರಲ್ಲಿ ಕಂಡರಿಯದ ಅಲೌಕಿಕ ಶಕ್ತಿಯ ಕುರಿತಾದ ಭಯ ಮತ್ತು ಒಂಟಿಯಾಗಿ ಎದುರಿಸಬೇಕಾದ ಆರ್ಥಿಕ-ಸಾಮಾಜಿಕ ಪರಿಸ್ಥಿತಿಗಳ ಒತ್ತಡ’ ಇವುಗಳ ಕಾರಣದಿಂದಾಗಿ ಸತಿ ಆಚರಣೆ ರೂಢಿಗತವಾಗಿರಬೇಕೆಂದು ಹೇಳುತ್ತಾರೆ.64 ಒಟ್ಟಿನಲ್ಲಿ ಸ್ತ್ರೀಯರ ಒತ್ತಾಸೆಗಳಿಂದ ಇದು ಬಂದಿದ್ದರೂ, ಯಾವ ಸ್ತ್ರೀಯೂ ಸತಿ ಹೋಗುವುದಕ್ಕೆ ಬಹಿರಂಗವಾಗಿ ವಿರೋಧಿಸದಿದ್ದರೂ, ಅವರ ಸಮ್ಮತಿಯ ಹಿಂದೆ ಸಮಾಜದ ಒತ್ತಡವಿತ್ತು ಎಂಬುದನ್ನು ಗ್ರಹಿಸಬಹುದು.
ಸತಿ ಆಚರಣೆಯ ವಿಧಿ ವಿಧಾನಗಳು 
ಪ್ರತಿಯೊಂದು ಸಮಾಜದಲ್ಲಿ ಆಚರಿಸಲ್ಪಡುವ ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ಹೀಗೆಯೇ ಆಚರಿಸಬೇಕು ಎಂಬ ನಿಯಮಗಳಿರುತ್ತವೆ. ಹಾಗೆಯೇ ಕರ್ನಾಟಕದಲ್ಲಿ ಬಹು ಪ್ರಾಚೀನ ಕಾಲದಿಂದಲೂ ರೂಢಿಯಲ್ಲಿರುವ ಸತಿ ಆಚರಣೆಯಲ್ಲಿ ಕೆಲವು ಶಾಸ್ತ್ರೋಕ್ತ ನಿಯಮಗಳನ್ನು ಪಾಲಿಸುತ್ತಾ ಬಂದಿರುವುದನ್ನು ಗಮನಿಸಬಹುದು. ಪ್ರಮುಖವಾಗಿ ಮಾಸ್ತಿಕಲ್ಲುಗಳನ್ನು ಆಧರಿಸಿ ಸತಿ ಮರಣದವರೆಗೆ ಆಚರಿಸಲ್ಪಡುವ ಮತ್ತು ಸತಿ ಮರಣಾನಂತರದಲ್ಲಿ ಆಚರಿಸಲ್ಪಡುವ ಕೆಲವು ವಿಧಿ ವಿಧಾನಗಳನ್ನು ಇಲ್ಲಿ ವಿವೇಚಿಸಲಾಗಿದೆ.
ಸತಿಯಾಗುವವಳ ಅಲಂಕರಣೆ 
     ಸತಿ ಹೋಗುವವಳು ತನ್ನ ಮೃತ ಗಂಡನನ್ನು ಸೇರಲು ಹೊರಟಿರುವುದರಿಂದ ಅವಳು ಮುತ್ತೈದೆಯಾಗಿ ಅಂದರೆ ತಾಳಿ, ಮೂಗುತಿ, ಕುಂಕುಮ, ಓಲೆ, ಬಳೆ, ಕಾಲುಂಗರ ಮತ್ತು ಅರಿಶಿಣ ಧರಿಸಿ ಸೌಭಾಗ್ಯವತಿಯಾಗಿ ಹೋಗಬೇಕು ಎಂಬುದು ಅಂದಿನ ಸಮಾಜದಲ್ಲಿದ್ದ ನಂಬಿಕೆಯಾಗಿತ್ತು. ಸತಿ ಆಚರಣೆ ಒಂದು ವಿವಾಹದ ರೀತಿಯಲ್ಲಿ ನಡೆಯುತ್ತಿದ್ದು, ಅವಳು ಮದುಮಗಳಂತೆ ಅಲಂಕಾರಗೊಳ್ಳುವುದು ಇದನ್ನೇ ಧ್ವನಿಸುತ್ತದೆ. ರಾಣೇಬೆನ್ನೂರು ತಾಲೂಕಿನ ಇಟಗಿ65 ಗ್ರಾಮದ ಮಾಸ್ತಿಕಲ್ಲೊಂದು ‘ಹರಿಕಾರ(ಹೆಸರು ತ್ರುಟಿತಗೊಂಡಿದೆ) ಸ್ವರ್ಗಸ್ತನಾದ ಆತನ ಮದವಳಿಗೆ ವೀರಮಾಸತಿ ಚಿಂಮಾಯಿ ಸಹಗಮನ ಮಾಡಿ ಸ್ವರ್ಗಪ್ರಾಪ್ತಿ ಆದಳು’ ಎಂದು ಉಲ್ಲೇಖಿಸುತ್ತದೆ. ಇಲ್ಲಿ ‘ಮದವಳಿಗೆ’ ಎಂದರೆ ಮದುವೆಯ ಹೆಣ್ಣನ್ನು ಸೂಚಿಸುತ್ತಿದ್ದು, ಸತಿ ಹೋಗುವವಳು ಮದುಮಗಳಂತೆ ಅಲಂಕಾರ ಮಾಡಿಕೊಳ್ಳುತ್ತಿದ್ದುದರ ನಿದರ್ಶನವಾಗಿದೆ. ಹಾವೇರಿ ಜಿಲ್ಲೆಯ ಬಹುತೇಕ ಮಾಸ್ತಿ ಶಿಲ್ಪಗಳಲ್ಲಿ ಮಾಸ್ತಿಯು ಸೌಭಾಗ್ಯ ಮತ್ತು ಮುತ್ತೈದೆಯ ಸಂಕೇತಗಳಾದ ಬಳೆ, ಕಂಕಣ, ಓಲೆ, ಕಡಗ, ತಾಳಿ, ಮುತ್ತಿನಸರ, ನಡುಪಟ್ಟಿ, ಹೂವಿನ ದಂಡೆ, ಅಂದುಗೆ ಮುಂತಾದವುಗಳಿಂದ ಅಲಂಕೃತಳಾಗಿರುವುದನ್ನು ಕಾಣಬಹುದಾಗಿದೆ. ಹಾನಗಲ್ಲು ತಾಲೂಕಿನ ಕೋಣನಕೊಪ್ಪ ಗ್ರಾಮದಲ್ಲಿ ಮಾಸ್ತಿ ಗುಡಿಯಲ್ಲಿ ಕಟ್ಟಿಗೆಯಿಂದ(ಮರದಿಂದ) ಮಾಡಿದ ಮಾಸ್ತಿಬೊಂಬೆಯಿದ್ದು, ಬೊಂಬೆಯ ಮೇಲೆ ಹಸಿರು ಮತ್ತು ಕೆಂಪು ವಸ್ತ್ರಗಳನ್ನು ಹಾಕಲಾಗಿದೆ. ಬೊಂಬೆಯ ಕೊರಳಿಗೆ ಬೆಳ್ಳಿಯ ಲಿಂಗು, ತಾಳಿ, ಬಳೆ, ಹಂಗನೂಲು(ದಾರದ ಎಳೆ) ಮತ್ತು ಮುಂದೆ ಉಡಿ ಅಕ್ಕಿಯನ್ನು ಇಡಲಾಗಿದೆ. ಇವುಗಳೆಲ್ಲ ಮುತ್ತೈದೆಯ ಸಂಕೇತಗಳು ಎಂಬುದನ್ನು ಸ್ಮರಿಸಬಹುದು. ವಿದೇಶಿ ಪ್ರವಾಸಿಗರಾದ ಸೀಜರ್‍ಫ್ರೆಡರಿಕ್ ಮತ್ತು ಪಿಯೆತ್ರೊಡೆಲ್ಲಾವಲ್ಲೆ ಇವರು ಸತಿ ಮದುಮಗಳಂತೆ ಅಲಂಕಾರಗೊಳ್ಳುವುದರ ಬಗ್ಗೆ ಹೇಳುತ್ತಾರೆ. ಜನಪದದಲ್ಲಿಯೂ ಇದರ ಬಗ್ಗೆ ಮಾಹಿತಿ ದೊರೆಯುತ್ತದೆ.
ಸತಿ ಮೆರವಣಿಗೆ 
     ಮೃತ ವ್ಯಕ್ತಿಯ ಹೆಂಡತಿಯು ಸತಿಯಾಗಲು ನಿರ್ಧರಿಸಿದ ಮೇಲೆ ಅವಳು ಚಿತೆಯೇರುವವರೆಗೂ ಹಬ್ಬದ ವಾತಾವರಣವೇ ನಿರ್ಮಾಣಗೊಳ್ಳುತ್ತಿತ್ತು. ಜನಪದ ಕಾವ್ಯವೊಂದರಲ್ಲಿ ಬರುವ “ಬಣ್ಣ ಇಟುಕೊಂಡು ಬಂಗಾರ ತೊಟುಗೊಂಡು, ಲಿಂಬೆಹಣ್ಣು, ಬಾಳೆಹಣ್ಣುಗಳನ್ನು ಆಕಾಶಕ್ಕೆ ಈಡಾಡುತ್ತ, ತೋಳುಗಳನ್ನು ತಿರುವುತ್ತ ಬೀದೀಲಿ ಹೊರಟವಳೆ ಈರೋಬಿ” ಎಂಬ ಪ್ರಸ್ತಾಪ ಸೊಗಸಾಗಿದೆ.66 ಸತಿಯಾಗುವವಳು ಚಿತೆಯೇರುವ ಸ್ಥಳಕ್ಕೆ ಕಾಲ್ನಡಿಗೆಯಿಂದಲೋ, ಕುದುರೆ ಮೇಲೆ ಕುಳಿತುಕೊಂಡೋ ಅಥವಾ ಪಲ್ಲಕ್ಕಿಯಲ್ಲಿ ಕುಳಿತುಕೊಂಡೋ ಮೆರವಣಿಗೆಯಲ್ಲಿ ಹೋಗುತ್ತಿದ್ದುದರ ವಿವರಗಳನ್ನು ಮಾಸ್ತಿ ಶಿಲ್ಪಗಳಲ್ಲಿ ಕಾಣಬಹುದು. ಆದರೆ ಇವುಗಳ ಪಾಠದಲ್ಲಿ ಇಂಥ ವಿವರಣೆ ಕಾಣಸಿಗುವುದಿಲ್ಲ. ಹಾನಗಲ್ಲು ತಾಲೂಕಿನ ಕಲಕೇರಿಯ ನಾಲ್ಕು ಹಂತಗಳ ವೀರಮಾಸ್ತಿಕಲ್ಲೊಂದರ ಮೊದಲ ಹಂತದಲ್ಲಿ ಯುದ್ಧದ ಸನ್ನಿವೇಶವಿದ್ದರೆ, ಇದರ ಎರಡನೆಯ ಹಂತದಲ್ಲಿ ಮೃದಂಗ, ಜಾಗಟೆ, ತುತ್ತೂರಿ ಹಿಡಿದ ವಾದ್ಯ ಮೇಳದವರು ಕುದುರೆ ಮೇಲೆ ಕುಳಿತ ಸತಿಯನ್ನು ಮೆರವಣಿಗೆಯಲ್ಲಿ ಕರೆದೊಯ್ಯುತ್ತಿರುವ ದೃಶ್ಯವಿದೆ. ಇದೇ ಹಂತದ ಬಲಬದಿಯಲ್ಲಿ ಸ್ತ್ರೀ ಅಗ್ನಿಕೂಂಡಕ್ಕೆ ಹಾರಿರುವ ಚಿತ್ರವಿದೆ. ಕುದುರೆ ಮೇಲೆ ಮೆರವಣಿಗೆಯಲ್ಲಿ ಬಂದು ಅಗ್ನಿಕುಂಡಕ್ಕೆ ಹಾರಿರುವ ಇನ್ನೊಂದು ಶಾಸನ ಶಿಲ್ಪ ಇದರ ಪಕ್ಕದಲ್ಲಿ ಇದೆ. ಬ್ಯಾಡಗಿ ತಾಲೂಕಿನ ತಿಮಕಾಪುರ ಗ್ರಾಮದ ವೀರಮಾಸ್ತಿ ಕಲ್ಲೊಂದರ ಮೊದಲ ಹಂತದಲ್ಲಿ ಯುದ್ಧದ ಸನ್ನಿವೇಶವಿದ್ದು, ವೀರನ ಹಿಂದೆ ಬಲಗೈ ಮೇಲಕ್ಕೆತ್ತಿ ಅಭಯಹಸ್ತದಲ್ಲಿರುವ ಸತಿ ಶಿಲ್ಪವಿದೆ. ಎರಡನೆಯ ಹಂತದಲ್ಲಿಯೂ ಯುದ್ಧದ ಸನ್ನಿವೇಶವಿದೆ. ಮೂರನೆಯ ಹಂತದಲ್ಲಿ ದಂಪತಿಗಳನ್ನು ಪಲ್ಲಕ್ಕಿಯಲ್ಲಿ ಹೊತ್ತು ಸಾಗುವ ದೃಶ್ಯವಿದೆ. ಪಲ್ಲಕ್ಕಿಯ ಹಿಂದೆ ಛತ್ರಿ ಹಿಡಿದ ಸೇವಕರಿದ್ದಾರೆ. ಅದರ ಮುಂದೆ ಪ್ರಮುಖರೆಲ್ಲ ಹೊರಟಿರುವಂತೆ(ಹೆಣಕ್ಕೆ ಹೊರಟವರಂತೆ) ಕಂಡರಿಸಲಾಗಿದೆ. ಮೇಲಿನ ದೃಶ್ಯಗಳು ಸತಿ ಮೆರವಣಿಗೆಯ ಅಪರೂಪದ ಶಿಲ್ಪಗಳೆಂದು ಹೇಳಬಹುದು.
ಸತಿಯ ದಾನಕಾರ್ಯ  
     ಸತಿಯಾಗುವವಳು ಮೆರವಣಿಗೆಯಲ್ಲಿ ಹೋಗುತ್ತಿರುವಾಗ ಮತ್ತು ಚಿತೆ ಏರುವ ಪೂರ್ವದಲ್ಲಿ ತನ್ನ ಸಂಬಂಧಿಗಳಿಗೆ, ಪುರೋಹಿತರಿಗೆ, ತನ್ನ ಸುತ್ತಮುತ್ತಲಿನ ಜನರಿಗೆ ತನ್ನ ಶಕ್ತ್ಯಾನುಸಾರ ದಾನಕೊಡುತ್ತಿದ್ದುದು ಸಾಮಾನ್ಯವಾಗಿತ್ತು. ದಾನವು ಹಣ, ಭೂಮಿ, ವಸ್ತುಗಳ ರೂಪದಲ್ಲಿರಬಹುದಾಗಿತ್ತಲ್ಲದೆ ಸತಿಯು ತಾನು ಹಿಡಿದ ಕಳಸ, ಕನ್ನಡಿ, ಲಿಂಬೆಹಣ್ಣು ಮೊದಲ್ಗೊಂಡು, ತಾನು ಧರಿಸಿದ ಆಭರಣಗಳನ್ನೆಲ್ಲಾ ಹಂಚುತ್ತಿದ್ದಳು. ಬಳ್ಳಿಗಾವೆಯ ವೀರಮಾಸ್ತಿಕಲ್ಲೊಂದರಲ್ಲಿ ಸತಿಯಾಗುವವಳು ತನ್ನ ಸಖಿಯರಿಗೆ ಬಾಗೀನ ಕೊಟ್ಟ ಅಪರೂಪದ ಶಿಲ್ಪವಿದೆ67 ದೇಕಬ್ಬೆ ಸತಿಹೋಗುವ ಪೂರ್ವದಲ್ಲಿ ದೇವರ ನಂದಾದೀವಿಗೆಗೆ, ನೈವೇದ್ಯಕ್ಕೆ ಭೂಮಿ, ಗದ್ದೆಗಳನ್ನು ದಾನ ನೀಡಿದ ಬಗ್ಗೆ ಬೆಳತೂರು ಶಾಸನವು ಉಲ್ಲೇಖಿಸುವುದನ್ನು ಇಲ್ಲಿ ಸ್ಮರಿಸಬಹುದು.68 ವಿದೇಶಿ ಪ್ರವಾಸಿಯಾದ ಇಬ್ನ ಬತೂತ ಯುದ್ಧದಲ್ಲಿ ಮಡಿದವನೊಬ್ಬನ ಮೂವರು ಪತ್ನಿಯರು ಸಹಗಮನ ಕಾಲಕ್ಕೆ ತಮ್ಮ ಮೈಮೇಲೆ ಇದ್ದ ಬಟ್ಟೆಬರೆಗಳನ್ನು, ಒಡವೆಗಳನ್ನು ಹಂಚಿದ ವಿಷಯವನ್ನು ತಿಳಿಸುತ್ತಾನೆ.69 ಮೇಲಿನ ಪ್ರಮುಖ ವಿಧಿಗಳೊಂದಿಗೆ ಇತರೆ ಕೆಲವು ಸಂಪ್ರದಾಯಗಳಿದ್ದವು. ಸತಿಯಾಗುವವಳು ಚಿತೆ ಏರುವ ಪೂರ್ವದಲ್ಲಿ ಮಾನಸಿಕವಾಗಿ ದೃಢ ಮನಸ್ಕಳಾಗಿರುವುದು ಮುಖ್ಯವಾಗುತ್ತಿತ್ತು. ಸತಿ ಹೋಗುವವಳು ಆ ನಿರ್ಧಾರ ತೆಗೆದುಕೊಂಡ ನಂತರ ಅವಳ ಮಾತುಕತೆ, ಅವಳು ತನ್ನ ಬಂಧುಗಳೊಂದಿಗೆ ವ್ಯವಹರಿಸುವ ರೀತಿ ವಿಶಿಷ್ಟವಾಗಿರುತ್ತಿತ್ತು. ಒಮ್ಮೆ ತೆಗೆದುಕೊಂಡ ಈ ನಿರ್ಧಾರದಿಂದ ಹಿಂದೆ ಸರಿಯುವುದು ಕೇಡೆಂದು ಬಗೆಯಲಾಗುತ್ತಿತ್ತು. ಹಾಗಾಗಿ ಪುರೋಹಿತರು, ಬಂಧುಗಳು ಹಾಗೂ ಹಿರಿಯರು ಅವಳಿಗೆ ಮಾನಸಿಕ ಧೈರ್ಯ ತುಂಬುತ್ತಿದ್ದರು. ಈ ಎಲ್ಲಾ ಅಂಶಗಳು ನಿರ್ಧಾರವಾದ ಮೇಲೆ ಅವಳ ತವರು ಮನೆಯವರಿಗೆ ಸತಿ ಹೋಗುವ ಸುದ್ಧಿಯನ್ನು ಮುಟ್ಟಿಸಲಾಗುತ್ತಿತ್ತು. ನಂತರ ಕೊಂಡದ ಸಿದ್ಧತೆ ನಡೆಯುತ್ತಿತು.್ತ70 ಈ ವಿಷಯ ಕಾಡ್ಗಿಚ್ಚಿನಂತೆ ಊರಿನಲ್ಲಿ ಮತ್ತು ಪಕ್ಕದ ಊರಿನಲ್ಲಿ ಹಬ್ಬುತ್ತಿತ್ತು. ಅನೇಕ ಭಾಗಗಳಿಂದ ಬಂದ ಜನರ ಸಮ್ಮುಖದಲ್ಲಿ ಸತಿ ಘಟನೆಯು ಸಂಭ್ರಮದಿಂದ ನಡೆಯುತ್ತಿತ್ತು.
ಸತಿ ಮರಣ ನಂತರದ ವಿಧಿಗಳು 
     ಸತಿ ಚಿತೆಯೇರಿದ ನಂತರ ಅವಳ ಬಂಧುವರ್ಗದವರು ಅವಳ ಸ್ಮರಣೆಗಾಗಿ ಸತಿಕಲ್ಲನ್ನು ನೆಡುತ್ತಿದ್ದರು. ಸತಿಕಲ್ಲುಗಳ ಪೂಜೆಗಾಗಿ ದಾನ-ದತ್ತಿಗಳನ್ನು ಬಿಡುತ್ತಿದ್ದರು. ಕೆಲವು ಗ್ರಾಮಗಳಲ್ಲಿ ಇಂಥ ಸತಿಕಲ್ಲುಗಳಿಗಾಗಿ ದೇವಾಲಯ ನಿರ್ಮಿಸಿದ ಉದಾಹರಣೆಗಳಿವೆ. ಇನ್ನು ಕೆಲವು ಗ್ರಾಮಗಳಲ್ಲಿ ಸತಿಗಾಗಿ ಉತ್ಸವ-ಜಾತ್ರೆಗಳು ನಡೆಯುತ್ತಿರುವುದುಂಟು. ಸತಿಯು ಕುಲದೇವತೆಯಾಗಿ, ಗ್ರಾಮದೇವತೆಯಾಗಿ, ಮನೆದೇವತೆಯಾಗಿರುವುದನ್ನು ಕಾಣಬಹುದು. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಅಗಸನಹಳ್ಳಿಯಲ್ಲಿರುವ ಅಗಸರು ‘ಮಾಸ್ತಮ್ಮಳನ್ನು ತಮ್ಮ ಕುಲದೇವತೆ ಎಂದು ಪೂಜಿಸುತ್ತಾರೆ. ಇಲ್ಲಿ ಸುಮಾರು ಎಂಬತ್ತು ಅಗಸರ ಮನೆಗಳಿದ್ದು ಅವರೆಲ್ಲರಿಗೂ ಮಾಸ್ತ್ಯೆಮ್ಮ ಕುಲದೇವತೆಯಾಗಿದ್ದಾಳೆ. ಅಲ್ಲದೆ ಇದೇ ತಾಲೂಕಿನ ಅಣೂರಿನ ಹರಿಜನರಿಗೆ ಮಾಸ್ತ್ಯೆಮ್ಮ ಕುಲದೇವತೆಯಾಗಿರುವುದು ಕಂಡುಬರುತ್ತದೆ. ರಾಣೇಬೆನ್ನೂರು ತಾಲೂಕಿನ ಚಳಗೇರಿಯ ಕಾಳೇಗೌಡರ ಕಣದಲ್ಲಿ ಒಂದು ಚಿಕ್ಕ ಮಾಸ್ತಿಗುಡಿ ಇದೆ. ಇದು ಸದರಿ ಗ್ರಾಮದ ಲಕ್ಕನಗೌಡ್ರ ಮನೆತನದವರ ಕುಲದೇವತೆಯಾಗಿದ್ದು, ಅವರು ಅದಕ್ಕೆ ವಿಶೇಷವಾಗಿ ನಡೆದುಕೊಳ್ಳುತ್ತಾರೆ. ಬ್ಯಾಡಗಿ ತಾಲೂಕಿನ ಅಗಸನಹಳ್ಳಿಯ ಮಲ್ಲನಗೌಡರು ಮಾಸ್ತ್ಯೆಮ್ಮ ತಮ್ಮ ವಂಶಸ್ಥಳೆಂದು ಮತ್ತು ಅವಳೇ ತಮ್ಮ ಮನೆದೇವತೆ ಎಂದು ಹೇಳುತ್ತಾರೆ.

ಸತಿ ಹರಕೆ, ನಂಬಿಕೆ ಮತ್ತು ಜಾತ್ರೆ-ಉತ್ಸವಗಳು
     ಸಾಮಾನ್ಯವಾಗಿ ಹಾವೇರಿ ಜಿಲ್ಲೆಯ ಬಹುಪಾಲು ಮಾಸ್ತಿಕಲ್ಲುಗಳು ಪೂಜಿಸಲ್ಪಡುತ್ತಿವೆ. ಅನೇಕ ಗ್ರಾಮಗಳಲ್ಲಿ ದನಗಳು ಕರುವನ್ನು ಹಾಕಿದರೆ ಅದರ ಮೊದಲು ಕರೆದ ಹಾಲನ್ನು ಮಾಸ್ತಿಕಲ್ಲುಗಳ ಮೇಲೆ ಹಾಕುವ ಪರಿಪಾಠವನ್ನು ಕ್ಷೇತ್ರಕಾರ್ಯದಲ್ಲಿ ಕಂಡುಕೊಂಡಿದ್ದೇನೆ. ಬ್ಯಾಡಗಿ ತಾಲೂಕು ತಡಸ, ಮಾಸಣಗಿ ಮತ್ತು ಅಗಸನಹಳ್ಳಿಯ ಮಾಸ್ತ್ಯೆಮ್ಮನಿಗೆ ಪ್ರತಿದಿನ ಪೂಜೆ ನೆರವೇರುತ್ತದೆ. ಶಿಗ್ಗಾಂವ ತಾಲೂಕಿನ ಕುಂದೂರು ಮತ್ತು ಹಾನಗಲ್ಲು ತಾಲೂಕಿನ ಅವಲಗಿರಿಕೊಪ್ಪದ ಮಾಸ್ತ್ಯೆಮ್ಮನಿಗೆ ಹಟ್ಟಿಹಬ್ಬದಂದು(ದೀಪಾವಳಿ) ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಸಾಮಾನ್ಯವಾಗಿ ಮಾಸ್ತ್ಯೆಮ್ಮನಿಗೆ ಹೂವು, ಹಣ್ಣು, ಕಾಯಿ-ಕರ್ಪೂರ, ಕುಂಕುಮ ಅರ್ಪಿಸಿದರೆ, ಅಗಸನಹಳ್ಳಿಯ(ಬ್ಯಾಡಗಿ) ಮಾಸ್ತ್ಯೆಮ್ಮನಿಗೆ ಕುರಿ-ಕೋಳಿ ರಕ್ತಬಲಿ ಅರ್ಪಿಸಲಾಗುವುದು. ಅಲ್ಲದೆ ಬೇಡಿಕೊಂಡವರು ದೀಟನಮಸ್ಕಾರ ಹಾಕುವ ಪರಿಪಾಠವಿದೆ. ಇದೇ ತಾಲೂಕಿನ ಸಿಡೇನೂರು ಗ್ರಾಮದ ಮಾಸ್ತೆಮ್ಮನಿಗೆ ಹರಕೆಯಾಗಿ ಸೀರೆಯನ್ನು ಅರ್ಪಿಸಲಾಗುವುದು. ಹಾನಗಲ್ಲು ತಾಲೂಕಿನ ಅವಲಗಿರಿಕೊಪ್ಪದ ಮಾಸ್ತೆಮ್ಮನಿಗೆ ಹರಕೆ ಕಟ್ಟಿಕೊಳ್ಳುವುದರಿಂದ ಬಂಜೆತನ ನಿವಾರಣೆಯಾಗಿ ಮಕ್ಕಳಾಗುವವೆÉಂದು ಅಲ್ಲಿಯ ಪೂಜಾರಿ ಅಕ್ಕಮ್ಮ ಚಲವಾದಿ ಹೇಳುತ್ತಾರೆ. ರಾಣೇಬೆನ್ನೂರು ತಾಲೂಕಿನ ಹೊಳೆಆನ್ವೇರಿಯಲ್ಲಿ ಒಂದು ಚಿಕ್ಕ ಮಾಸ್ತಿಗುಡಿ ಇದ್ದು, ಮಕ್ಕಳು ತುಂಬಾ ಅಳುತ್ತಿದ್ದರೆ ಈ ಮಾಸ್ತೆಮ್ಮನಿಗೆ ನಡೆದುಕೊಂಡರೆ ಶಾಂತಿಯಾಗುತ್ತದೆ ಎಂಬುದು ಸ್ಥಳೀಯರ ನಂಬಿಕೆಯಾಗಿದೆ. ಇದೇ ತಾಲೂಕಿನ ಮಾಕನೂರಿನಲ್ಲಿ ಮಾಸ್ತಿಗುಡಿಯೊಂದಿದ್ದು, ಈ ಮಾಸ್ತೆಮ್ಮ ಮಕ್ಕಳಿಗೆ ಬರುವ ಕಾಯಿಲೆಗಳಾದ ದಡಾರದಮ್ಮ, ಸಿಡುಮಮ್ಮ, ತಟ್ಟಮ್ಮ, ಗೊಬ್ಬರದಮ್ಮ ಮುಂತಾದವುಗಳಿಂದ ರಕ್ಷಿಸುವಳೆಂಬ ನಂಬಿಕೆ ಇದೆ.
ಹಾನಗಲ್ಲು ತಾಲೂಕಿನ ಹನುಮನಕೊಪ್ಪದಲ್ಲಿ ಒಂದು ಮಾಸ್ತ್ಯೆಮ್ಮನ ಗುಡಿಯಿದ್ದು, ಪ್ರತಿವರ್ಷ ಜನವರಿ ತಿಂಗಳಲ್ಲಿ ನಾಲ್ಕು ದಿನಗಳ ಕಾಲ ಜಾತ್ರೆ ಜರುಗುತ್ತದೆ. ಇದೇ ತಾಲೂಕಿನ ಅವಲಗಿರಿಕೊಪ್ಪದ ಮಾಸ್ತ್ಯೆಮ್ಮನಿಗೆ ಪ್ರತಿವರ್ಷ ಡಿಸೆಂಬರ್ ತಿಂಗಳಲ್ಲಿ ಜಾತ್ರೆ ಜರುಗುತ್ತದೆ. ಇಲ್ಲಿ ರಕ್ತಬಲಿ ಪದ್ಧತಿ ಇರುವುದಿಲ್ಲ. ಬ್ಯಾಡಗಿ ತಾಲೂಕಿನ ಅಗಸನಹಳ್ಳಿಯಲ್ಲಿ ಭಾರತ ಹುಣ್ಣಿಮೆಯಾದ ಒಂಬತ್ತು ದಿನಕ್ಕೆ ಮಾಸ್ತಿ ಜಾತ್ರೆ ಜರುಗುತ್ತದೆ. ತಳಿರು ತೋರಣಗಳಿಂದ ದೇವಾಲಯವನ್ನು ಸಿಂಗರಿಸುತ್ತಾರೆ. ಹಾಡು, ಭಜನೆ, ಡೊಳ್ಳಿನ ಪದಗಳ ಸಡಗರವಿರುತ್ತದೆ. ದೊಡ್ಡ ಪ್ರಮಾಣದಲ್ಲಿ ಕುರಿ ಕೋಳಿಗಳನ್ನು ಬಲಿಕೊಡುತ್ತಾರೆ. ಹರಕೆ ಹೊತ್ತವರು(ಹೆಣ್ಣುಮಕ್ಕಳು) ಬೇವಿನಸೊಪ್ಪನ್ನು ಮೈಗೆಲ್ಲ ಕಟ್ಟಿಕೊಂಡು ಬೆತ್ತಲೆಯಾಗಿ ಮಾಸ್ತಿಗುಡಿಯವರೆಗೆ ಬಂದು ಭಕ್ತಿ ಮೆರೆಯುತ್ತಾರೆ. ಎರಡನೆಯ ದಿನದ ಕೊನೆಯಲ್ಲಿ ಮಾಸ್ತೆಮ್ಮಳನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಊರಲ್ಲೆಲ್ಲಾ ಮೆರವಣಿಗೆ ಮಾಡಿ ಗುಡಿಗೆ ತಂದು ಕೂರಿಸುತ್ತಾರೆ. ಎರಡು ದಿನಗಳ ಜಾತ್ರೆ ಹೀಗೆ ವಿಜೃಂಭಣೆಯಿಂದ ಮುಕ್ತಾಯವಾಗುತ್ತದೆ. ವಿಚಿತ್ರವೆಂದರೆ ಪುರುಷ ವಿಗ್ರಹವನ್ನು ಮಹಾಸತಿ ಎಂದು ಪೂಜಿಸುವ ಸಂಪ್ರದಾಯ ಬ್ಯಾಡಗಿ ತಾಲೂಕಿನ ಲಕಮಾಜಿಕೊಪ್ಪದಲ್ಲಿದೆ. ಹಾಗೆಯೇ ಇದೇ ತಾಲೂಕಿನ ತಡಸ ಗ್ರಾಮದಲ್ಲಿ ಮಾಸ್ತಿಕಲ್ಲನ್ನು ಮೈಲಾರಲಿಂಗಪ್ಪ ಎಂದು ಪೂಜಿಸುವುದನ್ನು ಕಾಣಬಹುದು.
ಮಾಸ್ತಿಕಲ್ಲುಗಳನ್ನು ನಿಲ್ಲಿಸುತ್ತಿದ್ದ ಸ್ಥಳ ಮತ್ತು ಹಾಕಿಸುತ್ತಿದ್ದವರು 
  ಸಾಮಾನ್ಯವಾಗಿ ಮಾಸ್ತಿಕಲ್ಲುಗಳು, ದೇವಾಲಯಗಳ ಆವರಣದಲ್ಲಿ, ರಸ್ತೆಗಳ ಪಕ್ಕದಲ್ಲಿ, ಹೊಂಡಗಳ ಸನಿಹದಲ್ಲಿ, ಕೆರೆ ಏರಿಗಳ ಮೇಲೆ, ಮನೆಯ ಹಿತ್ತಲುಗಳಲ್ಲಿ, ಮಠಮಾನ್ಯಗಳಲ್ಲಿ ಮತ್ತು ಹೊಲಗದ್ದೆಗಳಲ್ಲಿ ಇರುವುದನ್ನು ಕಾಣಬಹುದು. ಇಂದು ಈ ಮಾಸ್ತಿಕಲ್ಲುಗಳಿರುವ ಸ್ಥಾನಗಳೇ ಅಂದು ಅವುಗಳನ್ನು ನೆಟ್ಟ ಸ್ಥಾನಗಳಾಗಿರಬಹುದು, ಇಲ್ಲವೆ ಸ್ಥಳಾಂತರಗೊಂಡಿರುವ ಸಾಧ್ಯತೆಯಿದೆ ಎಂದು ಹೇಳಬಹುದು. ಮಾಸ್ತಿಕಲ್ಲುಗಳನ್ನು ನಿಲ್ಲಿಸಿದ ಸಮಯದ ಬಗ್ಗೆ ಅವುಗಳಲ್ಲಿ ಕೆಲವು ಕಡೆ ಮಾಹಿತಿ ದೊರೆಯುತ್ತದೆ. ಮಾಸ್ತಿಕಲ್ಲುಗಳನ್ನು ಯಾರು ಹಾಕಿಸುತ್ತಿದ್ದರು ಎಂಬ ಬಗ್ಗೆ ಕೆಲವು ಮಾಸ್ತಿ ಶಾಸನಗಳಲ್ಲಿ ಮಾಹಿತಿ ದೊರೆಯುತ್ತದೆ. ಹೆಡಿಯಾಲ71 ಗ್ರಾಮದ ಮಾಸ್ತಿಕಲ್ಲೊಂದು ಮಲಿದೇವಿಯ ಗಂಡ ಲಿಂಗದೊಳಗಾಗಲು ಅವಳು ತನ್ನ ಗಂಡನ ಸಮಾಧಿ ಮೂಲಕ ಸತಿ ಹೋದುದನ್ನು ತಿಳಿಸಿ, ‘ಮಹಾಸತಿಯ ಪ್ರತಿಮೆ (ಪ್ರ)ಥಿಷ್ಟೆ ಮಾಡಿಸಿದ ಮಗ ಮಾದೆಯನಾಯ(ಂ)ಕನು’ ಎಂದು ಉಲ್ಲೇಖಿಸುತ್ತದೆ. ಇಲ್ಲಿ ಈ ಮಾಸ್ತಿಕಲ್ಲಿನಲ್ಲಿ ಮಲಿದೇವಿಯ ಪ್ರತಿರೂಪವನ್ನು ಪ್ರತಿಷ್ಠೆಗೊಳಿಸಲು ಪ್ರಯತ್ನಿಸಿದ್ದನ್ನು ಕಾಣಬಹುದು. ಸಿಡೇನೂರು72 ವೀರಮಾಸ್ತಿಕಲ್ಲಿನಲ್ಲಿ ‘ಮಾಸ್ತಿ ಪ್ರತಿಷ್ಠೆ’ ಮಾಡಿಸಿದ ಬಗ್ಗೆ ವಿವರಣೆ ಇದೆ. ಮುತ್ತೂರು73 ಮಾಸ್ತಿ ಕಲ್ಲೊಂದು ಕಿಟಗೊಂಡ ಹನುಬರ ನನ್ನಿಯನ ಮಗ ಬೊಮ್ಮಯ ಮರಣಿಸದಾಗ ಆತನ ಹೆಂಡತಿಯಾದ ಕಾಮಾಯಿ ಅಗ್ನಿಕುಂಡದಲ್ಲಿ ಹಾರಿ ಸಹಗಮನ ಮಾಡಿದಳು. ಇವರ ನೆನಪಿಗಾಗಿ ಕಿಟಗೊಂಡ ಎಂಬುವವನು ಕಲ್ಲು ನಿಲ್ಲಿಸಿದ ಬಗ್ಗೆ ಮಾಹಿತಿ ಇದೆ. ಸಾತೇನಹಳ್ಳಿಯ74 ಮಾಸ್ತಿಕಲ್ಲೊಂದು ಮುರಾರಿ ಹೊನ್ನಪ್ಪನ ಮಗನಾದ ತಿಪ್ಪಣ್ಣ ಮರಣಹೊಂದಲು ಅವನ ಹೆಂಡತಿ ಖಿಯನರಾಯಿಯು ಸಹಗಮನ ಮಾಡಿದಳು. ಈ ಸತಿಕಲ್ಲನ್ನು ತಯಾರಿಸಿದವನು ಭಾರಂಗಿಯ ಮಲ್ಲೋಜ ಎಂಬ ಮಾಹಿತಿ ಇದೆ. ತಡಸ75 ಗ್ರಾಮದ ಶಾಸನವೊಂದು ಸತಿಕಲ್ಲು ನಿಲ್ಲಿಸಿದ ಉಲ್ಲೇಖವನ್ನು ಹೊಂದಿದೆ.

ಆತ್ಮಬಲಿದಾನ ಸ್ಮಾರಕ ಶಿಲ್ಪಗಳು : ಧಾರ್ಮಿಕ

ಆತ್ಮಬಲಿದಾನ ಪರಂಪರೆ
ಇಂಗ್ಲೀಷಿನ ‘Seಟಜಿ-immoಟಚಿಣioಟಿ’ ಮತ್ತು ‘Seಟಜಿ-Sಚಿಛಿಡಿiಜಿiಛಿe’ ಎಂಬ ಪದಗಳಿಗೆ ಸಮಾನಾರ್ಥದಲ್ಲಿ ‘ಆತ್ಮಬಲಿದಾನ’ ಎಂಬ ಪದವನ್ನು ಬಳಸಲಾಗಿದೆ. ‘Seಟಜಿ-immoಟಚಿಣioಟಿ’ ಎಂದರೆ ‘ಆತ್ಮಬಲಿ’, ‘ಆತ್ಮಾಹುತಿ’ ಅಥವಾ ಯಾವುದೇ ಆದರ್ಶಕ್ಕಾಗಿ ಪ್ರಾಣಾರ್ಪಣೆ(ಪ್ರಾಣತ್ಯಾಗ) ಮಾಡುವುದು ಎಂದರ್ಥ. ‘Seಟಜಿ-Sಚಿಛಿಡಿiಜಿiಛಿe’ ಎಂದರೆ ಸ್ವಾರ್ಥತ್ಯಾಗ, ಕರ್ತವ್ಯದ ದೃಷ್ಟಿಯಿಂದ ಅಥವಾ ಪರಹಿತಕ್ಕಾಗಿ ಸ್ವ-ಹಿತವನ್ನು ಬಿಟ್ಟುಕೊಡುವುದು ಎಂದರ್ಥ. ‘Sಚಿಛಿಡಿiಜಿiಛಿe’ ಎಂಬ ಪದವನ್ನು ಬಲಿ, ಪಶುಬಲಿ, ನರಬಲಿ, ಕಾಣಿಕೆಯಾಗಿ ದೇವರಿಗೆ ಪ್ರಾಣಿಯನ್ನು ಬಲಿಕೊಡುವುದು ಅಥವಾ ವ್ಯಕ್ತಿ ತನ್ನ ಪ್ರಾಣವನ್ನು ದೇವರಿಗೆ ತ್ಯಾಗ ಮಾಡುವುದು ಎಂಬರ್ಥದಲ್ಲಿ ಹೇಳಬಹುದು. ಅಲ್ಲದೆ ಮಹಾತ್ಯಾಗ ಅಥವಾ ಯುದ್ಧದಲ್ಲಿ ಸ್ವದೇಶಕ್ಕಾಗಿ ಪ್ರಾಣತ್ಯಾಗ ಎಂಬ ಅರ್ಥಗಳೂ ಉಂಟು.1 ಅಂದರೆ ಒಬ್ಬ ವ್ಯಕ್ತಿ ಸ್ವ-ಇಚ್ಛೆಯಿಂದ ಧಾರ್ಮಿಕ ಕಾರಣಕ್ಕೋ, ಸಾಮಾಜಿಕ ಕಾರಣಕ್ಕೋ ಅಥವಾ ಒಂದು ನಿರ್ದಿಷ್ಟ ಮೌಲ್ಯಕ್ಕೋ ತನ್ನನ್ನು ತಾನು ಬಲಿಕೊಟ್ಟುಕೊಳ್ಳುವುದು ಆತ್ಮಬಲಿದಾನವೆನಿಸಿಕೊಳ್ಳುತ್ತದೆ. ಆತ್ಮಬಲಿದಾನಗೈಯುವವರು ಬದುಕುವ ಆಸೆಯನ್ನು ತೊರೆದು ತಾವು ಆದರ್ಶವೆಂದು ಭಾವಿಸಿದ ಒಂದು ಭಾವನೆಗಾಗಿ ತಮ್ಮನ್ನು ತಾವು ಕೊಂದುಕೊಂಡದ್ದನ್ನು ನೆನಪಿಗೆ ತಂದುಕೊಂಡರೆ ಅವರ ವಿಷಯದಲ್ಲಿ ಅಗಾಧವಾದ ಗೌರವವೂ, ಭಕ್ತಿಯೂ, ಹೆಮ್ಮೆಯೂ ಮೂಡುತ್ತದೆ. ಆದರೆ ಇಂದು ಈ ಪದ್ಧತಿಗಳು ನಮಗೆ ಬಹು ವಿಚಿತ್ರವಾಗಿಯೂ, ಅನಾಗರಿಕವಾಗಿಯೂ ತೋರುತ್ತವೆ. 
ಆತ್ಮಹತ್ಯೆ ಮಹಾಪಾಪ ಎಂಬ ಮನೋಭಾವನೆಯನ್ನು ಹೊಂದಿದ್ದ, ಪ್ರಾಚೀನ ಭಾರತೀಯರು ಅದನ್ನು ನಿಷೇಧಿಸಿದ್ದರು. ಧರ್ಮಶಾಸ್ತ್ರಗಳು ಆತ್ಮಹತ್ಯೆಯನ್ನು ಅಲ್ಲಗಳೆದರೂ ಸ್ಮøತಿ, ಪುರಾಣೇತಿಹಾಸಗಳು ಕೆಲವು ಬಗೆಯ ಆತ್ಮಹತ್ಯೆಗಳನ್ನು ಅಥವಾ ದೇಹತ್ಯಾಗಗಳನ್ನು ಒಪ್ಪಿ ಮನ್ನಿಸಿವೆ. ಅವುಗಳನ್ನು ಡಾ. ಎಂ. ಚಿದಾನಂದಮೂರ್ತಿಯವರು ಈ ರೀತಿ ನಿರೂಪಿಸುತ್ತಾರೆ. “(i) ಬ್ರಾಹ್ಮಣರ ಕೊಲೆ, ಸುರಪಾನ ಮುಂತಾದ ಮಹಾಪಾತಕಗಳನ್ನು ಮಾಡಿದವರು ಪ್ರಾಯಶ್ಚಿತರೂಪವಾಗಿ ಆತ್ಮಹತ್ಯೆಯನ್ನು ಮಾಡಿಕೊಳ್ಳಬಹುದು. (ii) ವಾನಪ್ರಸ್ಥನು ತೀರ್ಥಯಾತ್ರೆಗಾಗಿ ಹೊರಟು ಮಾರ್ಗಮಧ್ಯದಲ್ಲಿ ರೋಗಪೀಡಿತನಾಗಿ ತನ್ನ ನಿತ್ಯಕರ್ಮಗಳನ್ನು ಮಾಡಲು ಅಸಮರ್ಥನಾದರೆ ದೇಹತ್ಯಾಗ ಮಾಡಬಹುದು. (iii)  ವೃದ್ಧನೂ, ರೋಗಿಯೂ ಆಗಿರುವ ವ್ಯಕ್ತಿಯು ತನ್ನ ಕರ್ಮಗಳನ್ನು ತಾನು ಮಾಡಲಾರದಷ್ಟು ದುರ್ಭಲನಾದರೆ, ಎತ್ತರವಾದ ಪ್ರದೇಶದಿಂದ ಬಿದ್ದೋ, ಬೆಂಕಿಯನ್ನು ಪ್ರವೇಶಿಸಿಯೋ, ಉಪವಾಸ ಮಾಡಿಯೋ, ತೀರ್ಥಯಾತ್ರೆಗೆ ಹೊರಟೋ ಅಥವಾ ಪ್ರಯಾಗದಲ್ಲಿ ವಟವೃಕ್ಷದಿಂದ ಧುಮಿಕಿಯೋ ದೇಹತ್ಯಾಗವನ್ನು ಮಾಡಬಹುದು. (iv) ಗೃಹಸ್ಥನು ಆರೋಗ್ಯಶಾಲಿಯಾಗಿದ್ದರೂ ತನ್ನ ಜೀವಿತದ ಕಾರ್ಯಗಳೆಲ್ಲವೂ ಮುಗಿದವು ಎಂಬ ಮನೋಭಾವನೆ ಹೊಂದಿದ್ದರೆ, ಲೌಕಿಕ ಭೋಗಗಳ ಆಸೆಗಳೆಲ್ಲವೂ ಬತ್ತಿಹೋಗಿದ್ದರೆ, ವೇದಾಂತಿಯಾಗಿ ಜೀವನದ ನಶ್ವರತೆಯನ್ನು ಅನುಭವಿಸಿದ್ದರೆ ದೇಹತ್ಯಾಗವನ್ನು ಮಾಡಬಹುದು. (v) ಧಾರ್ಮಿಕ ದೇಹತ್ಯಾಗ(ಖeಟigious suiಛಿiಜe) ಅಂದರೆ  ಮೋಕ್ಷಾಪೇಕ್ಷಿಯಾಗಿ ಆತ್ಮಹತ್ಯೆಯನ್ನು ಮಾಡಿಕೊಳ್ಳಬಹುದು (vi) ಗಂಡ ಸತ್ತ ಮೇಲೆ ಹೆಂಡತಿಯು ದೇಹತ್ಯಾಗ ಮಾಡಬಹುದು.”2
ಆತ್ಮಬಲಿದಾನ ಪ್ರಸಂಗಗಳಲ್ಲಿ ಆತ್ಮಬಲಿದಾನಗೈಯ್ಯುವವನ ಉತ್ಕಟವಾದ ಮೋಕ್ಷಾಪೇಕ್ಷೆಯನ್ನು, ಅಸೀಮವಾದ ಧೈರ್ಯವನ್ನು, ಸ್ವಾಮಿಭಕ್ತಿಯನ್ನು ಮತ್ತು ನಿಷ್ಠೆಯನ್ನು ಕಾಣಬಹುದು. ಇಂಥ ಆತ್ಮಬಲಿಗಳಲ್ಲಿ ಕೆಲವು ಪೂರ್ಣವಾಗಿ ಧಾರ್ಮಿಕವಾದವು, ಇನ್ನು ಕೆಲವು ಉದಾತ್ತವಾದ ಪತಿಪ್ರೇಮವನ್ನು, ಸ್ವಾಮಿಭಕ್ತಿಯನ್ನೂ ಎತ್ತಿ ತೋರಿಸತಕ್ಕವುಗಳಾಗಿವೆ. ಇಂಥ ದೇವತ್ಯಾಗಗಳು ವಾರಣಾಸಿಯಲ್ಲೋ, ಪ್ರಯಾಗದಲ್ಲೋ ನಡೆದರೆ ಅವನಿಗೆ ಶಾಶ್ವತವಾದ ಮುಕ್ತಿ ಲಭಿಸುತ್ತದೆ ಎಂದು ಧರ್ಮಗ್ರಂಥಗಳು ಹೇಳುತ್ತವೆ. ವಾರಣಾಸಿಯಲ್ಲಿ ಆಕಸ್ಮಿಕವಾಗಿ ಸತ್ತರೂ ಮೋಕ್ಷವೆಂದು ಜನರು ನಂಬಿದರು. ಕ್ರಮೇಣವಾಗಿ ಯಾವುದೇ ತೀರ್ಥಕ್ಷೇತ್ರದಲ್ಲಿ ದೇಹತ್ಯಾಗ ಮಾಡಿದರೂ ಮೋಕ್ಷವು ದೊರಕುವುದೆಂಬ ಭಾವನೆ ಬಲಿಯಿತು. ಶುಭ ತಿಥಿಗಳು ದೇಹತ್ಯಾಗ ಮಾಡಲು ಯೋಗ್ಯ ಎಂಬ ನಂಬಿಕೆಯೂ ಬಲಿಯಿತು. ಕೆಲವರ ಪ್ರಕಾರ ಯಾವ ವರ್ಣದವರಾದರೂ ಈ ರೀತಿಯ ದೇಹತ್ಯಾಗವನ್ನು ಮಾಡಬಹುದು ಎಂಬ ಭಾವನೆ ಮೂಡತೊಡಗಿತು.3
ಮೋಕ್ಷ ಸಾಧನೆಗೆ ವೈಯಕ್ತಿಕ ವಿಷಯವಿರಲಿ, ಸಮಾಜದ ಹಿತರಕ್ಷಣೆಯ ಉದ್ದೇಶವಿರಲಿ, ಪ್ರಾಣವನ್ನು ತೃಣಸಮಾನವಾಗಿ ಬಗೆದು ತಮ್ಮ ಪ್ರಾಣವನ್ನು ತಮ್ಮ ಕೈಯಾರೆ ತಾವೇ ತೆಗೆದುಕೊಂಡು ದೇವರಿಗೆ ನೈವೇದ್ಯ ಮಾಡಿಕೊಂಡವರು ಇವರು. ಈ ರೀತಿ ಆತ್ಮಾರ್ಪಣೆ ಮಾಡುವುದರ ಮೂಲಕ ತಮಗೂ, ತಮ್ಮ ಒಡೆಯನಿಗೂ ಮತ್ತು ಹುಟ್ಟಿದ ನಾಡಿಗೂ ಶ್ರೇಯಸ್ಸು ಉಂಟಾಗುತ್ತದೆ ಎಂಬ ನಂಬಿಕೆ ಅವರದಾಗಿತ್ತು. ಈ ನಂಬಿಕೆ ಸಂಪೂರ್ಣವಾಗಿ ಧಾರ್ಮಿಕವಾದುದಾಗಿತ್ತು. ಮುಖ್ಯವಾಗಿ ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಇವರು ಯಾವುದೇ ಹೋರಾಟದಲ್ಲಿ ಮಡಿದವರಲ್ಲದಿದ್ದರೂ ಜನರು ಇವರನ್ನು ಹೋರಾಟದಲ್ಲಿ ಮಡಿದ ವೀರರಿಗಿಂತ ಕಡಿಮೆಯೇನಲ್ಲ ಎಂದು ಭಾವಿಸಿರುವುದು.4 
ಭಾರತದಲ್ಲಿ ಪ್ರಚಲಿತದಲ್ಲಿದ್ದ ಶೈವಧರ್ಮವು ಮಧ್ಯಯುಗದಲ್ಲಿ ವಿಶೇಷವಾಗಿ ದಕ್ಷಿಣಭಾರತದಲ್ಲಿ ಅದರಲ್ಲಿಯೂ ಆಂದ್ರಪ್ರದೇಶದಲ್ಲಿ ವಿಶಿಷ್ಟ ಆಚರಣೆಗಳನ್ನೊಳಗೊಂಡು ವ್ಯಾಪಿಸಿತ್ತು. ಅಷ್ಟದಿಕ್ಕುಗಳಲ್ಲಿರುವ ಅಷ್ಟಭೈರವ ದೇವತೆಗಳಿಗೆ ಅಷ್ಟಾಂಗ ರುಧಿರದಿಂದ ಅರ್ಚನೆ ಮಾಡಿ ರಕ್ತಸಿಕ್ತಕಂಠವನ್ನು ಬಲಿಕೊಡುವುದರ ಮೂಲಕ ಜನರು ತಮ್ಮ ಅಭೀಪ್ಸೆಗಳನ್ನು ಈಡೇರಿಸಿಕೊಳ್ಳಬಹುದು ಎಂದು ಭಾವಿಸಿದ್ದ ಕಾಲ ಅದು. ಭಕ್ತನು ಭಕ್ತಿಯ ಭಾವಾವೇಶದಿಂದ ತನ್ನ ಇಷ್ಟದೇವತೆಗೆ ತನ್ನನ್ನು ತಾನೇ ಬಲಿಕೊಟ್ಟುಕೊಳ್ಳವುದಕ್ಕಿಂತ ಉತ್ತಮೋತ್ತಮವಾದ ಮತ್ತ್ಯಾವ ಸಮರ್ಪಣೆಯೂ ಇಲ್ಲವೆಂಬುದು ಅವರ ದೃಢ ವಿಶ್ವಾಸವಾಗಿತ್ತು. ಈ ವಿಶ್ವಾಸ ಪ್ರಬಲವಾದಂತೆ ಅದರ ಉಗಮಕ್ಕೆ ಕಾರಣವಾದ ಆಚಾರವೂ ಪ್ರಬಲವಾಗುತ್ತಾ ಬಂತು. ಈ ಕಾರಣದಿಂದ ದೇವತೆಗೆ ತಮ್ಮ ತಲೆಗಳನ್ನು ಕೊಟ್ಟವರನ್ನು ‘ವೀರರು’ ಎಂಬುದಾಗಿ ಪರಿಭಾವಿಸಲಾಯಿತು. ಅಷ್ಟೇ ಅಲ್ಲದೆ ಅವರನ್ನು ವೀರಾಧಿ-ವೀರರು ಎಂಬುದಾಗಿ ಪರಿಗಣಿಸಲಾಯಿತು. ತಮ್ಮ ಅಭೀಪ್ಸೆಗಳು ಈಡೇರಿದಾಗ ತಲೆ ಕೊಡುವುದಾಗಿ ಹರಕೆ ಹೊತ್ತುಕೊಳ್ಳುತ್ತಿದ್ದರು. ಅಲ್ಲದೆ ದೇವಿಯ ಅನುಗ್ರಹದಿಂದ ಅನಿಷ್ಟಗಳು, ಅಂಟುಜಾಢ್ಯಗಳು ಬರಬಾರದೆಂಬ ಕಾರಣಗಳಿಗಾಗಿ ಆತ್ಮಬಲಿದಾನವನ್ನು ಮಾಡಿಕೊಳ್ಳುತ್ತಿದ್ದರು. ಇಂಥವರು ಮಹಾಶಿವರಾತ್ರಿಯಂದು ತಮ್ಮ ತಲೆಯನ್ನು ಬಲಿಯಾಗಿ ನೀಡುತ್ತಿದ್ದರು. ಈ ಸಂಧರ್ಭದಲ್ಲಿ ಶೈವ ಅನುಯಾಯಿಗಳೆಲ್ಲರೂ ಜಾತಿ-ಮತ ಬೇಧವಿಲ್ಲದೆ ವ್ರತದೀಕ್ಷೆಗೆ ಬರುತ್ತಿದ್ದರು. ದೀಕ್ಷಾಬದ್ದರು ತಮ್ಮ ಕುಕ್ಷಿ, ಶಿರಸ್ಸು, ಬೀಜಗಳನ್ನು ಕತ್ತರಿಸಿ ದೇವರಿಗೆ ಅರ್ಪಿಸುತ್ತಿದ್ದರು. ಇಂಥವರ ಆತ್ಮಬಲಿದಾನಕ್ಕೆಂದೇ ‘ಚಂಪು ಗುಡಿಲು’ ಅಥವಾ ‘ವೀರಶಿರೋಮಂಡನ’ ಮಂಟಪಗಳು ಇರುತ್ತಿದ್ದವು. ಈ ರೀತಿ ಆತ್ಮಬಲಿಗೈದವರ ನೆನಪಿಗಾಗಿ ಸ್ಮಾರಕಶಿಲ್ಪಗಳನ್ನು ಸ್ಥಾಪಿಸುತ್ತಿದ್ದರು. ಕೆಲವರು ಅವರಿಗಾಗಿ ಗುಡಿಗಳನ್ನು ನಿರ್ಮಿಸಿದರು. ಇವುಗಳನ್ನು ‘ವೀರ ಗುಡ್ಡಮುಲು’ ಎಂಬುದಾಗಿ ಕರೆಯುತ್ತಾರೆ.5
ತಲೆಯನ್ನು ಬಲಿಕೊಡುವ ಪದ್ಧತಿ ಪ್ರಾಚೀನ ತಮಿಳುನಾಡಿನಲ್ಲಿಯೂ ಇತ್ತು. ಇದಕ್ಕೆ ಅವರು ‘ತಲೈ ಬಲಿ’ ಎಂಬುದಾಗಿ ಕರೆಯುತ್ತಿದ್ದರು. ತಮಿಳು ಕಾವ್ಯವಾದ ಶಿಲಪ್ಪದಿಕಾರಂನಲ್ಲಿ ಅರಸನೊಬ್ಬನ ಪಕ್ಷದಲ್ಲಿದ್ದ ವೀರರು ತಮ್ಮ ಅರಸನಿಗೆ ಯುದ್ಧದಲ್ಲಿ ಗೆಲುವಾಗಲೆಂದು ಅಥವಾ ಶತ್ರುಪಕ್ಷದ ರಾಜನಿಗೆ ಸೋಲಾಗಲೆಂದು ಹರಕೆ ಹೊತ್ತುಕೊಂಡು ಗ್ರಾಮದೇವತೆಗಳ ಮುಂದೆ ತಮ್ಮ ತಲೆಗಳನ್ನು ಕಡಿದುಕೊಳ್ಳುತ್ತಿದ್ದ ವಿವರಣೆ ದೊರೆಯುತ್ತದೆ.6 ಈ ರೀತಿಯ ಆಚರಣೆಗಳನ್ನು ನಿರೂಪಿಸುವ ಅನೇಕ ಶಿಲ್ಪಗಳೂ ತಮಿಳುನಾಡಿನಲ್ಲಿ ದೊರೆಯುತ್ತವೆ. 
ಚೀನಾದ ಬೌದ್ಧಪ್ರವಾಸಿ ಹ್ಯುಯೆನ್‍ತ್ಸ್ಯಾಂಗನು ತನ್ನ ಪ್ರವಾಸ ಕಥನದಲ್ಲಿ ಧಾರ್ಮಿಕ ದೇಹ ತ್ಯಾಗಗಳ ವಿಷಯವನ್ನು ಪ್ರಸ್ತಾಪಿಸಿದ್ದಾನೆ. ಮುದುಕರು, ಸಾವು ಸಮೀಪಿಸಿರುವ ರೋಗಿಗಳು ಬಾಳಿನಲ್ಲಿ ಜಿಗುಪ್ಸೆಗೊಂಡು ಸಾಯಲು ಇಷ್ಟಪಟ್ಟರೆ ಅಂಥವರನ್ನು ದೋಣಿಯಲ್ಲಿ ಗಂಗಾನದಿಯ ಮಧ್ಯಕ್ಕೆ ಕಳುಹಿಸಿಕೊಡುವರೆಂದು, ಅಲ್ಲಿ ಅವರು ನದಿಯಲ್ಲಿ ಮುಳುಗಿ ಸಾಯುವರೆಂದು ಹೇಳಿದ್ದಾನೆ. ಹೀಗೆ ಸತ್ತರೆ  ಸ್ವರ್ಗಪ್ರಾಪ್ತಿಯಾಗುವುದೆಂದು ಜನರು ನಂಬಿದ್ದರು. ಈತನು ಪ್ರಯಾಗದ ವಟವೃಕ್ಷವನ್ನೂ, ಅದರಿಂದ ನದಿಗೆ ಧುಮುಕಿ ಮರಣಹೊಂದುವುದನ್ನೂ ಕೂಡ ಒಂದೆಡೆ ಪ್ರಸ್ತಾಪಿಸಿದ್ದಾನೆ.7 ಅಂದರೆ ಜಲಪ್ರವೇಶ ಮಾಡಿ ಆತ್ಮಬಲಿದಾನಗೈದ ಬಗ್ಗೆ ಮಾಹಿತಿ ನೀಡಿದ್ದಾನೆ. ಅಲ್ಬೆರೂನಿ ಕೂಡ ಆತ್ಮಬಲಿದಾನದ ವಿಷಯವನ್ನು ಪ್ರಸ್ತಾಪಿಸಿದ್ದಾನೆ. ಜೀವನದಲ್ಲಿ ಜಿಗುಪ್ಸೆ ಹುಟ್ಟಿದರೆ, ಗುಣಪಡಿಸಲಾರದ ರೋಗಕ್ಕೆ ತುತ್ತಾಗಿದ್ದರೆ, ತಿದ್ದಲಾಗದ ದೈಹಿಕ ದೋಷವಿದ್ದರೆ, ಮುದಿತನ ಪ್ರಾಪ್ತವಾಗಿದ್ದರೆ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಬ್ರಾಹ್ಮಣರೂ, ಕ್ಷತ್ರಿಯರೂ ಈ ರೀತಿಯ ಆತ್ಮಹತ್ಯೆಯನ್ನು ಮಾಡಿಕೊಳ್ಳಕೂಡದು. ವೈಶ್ಯರು, ಶೂದ್ರರು ಬೇಕಾದರೆ ಮಾಡಿಕೊಳ್ಳಬಹುದು. ಬ್ರಾಹ್ಮಣರು, ಕ್ಷತ್ರಿಯರು ಆತ್ಮಹತ್ಯೆ ಮಾಡಿಕೊಳ್ಳಲು ಬಯಸಿದರೆ ಗ್ರಹಣಗಳಂತಹ ಶುಭದಿನಗಳಲ್ಲಿ ದೇಹತ್ಯಾಗ ಮಾಡಿಕೊಳ್ಳುತ್ತಾರೆ. ಕೆಲವರು ಹಣಕೊಟ್ಟು ಬೇರೆಯವರೊಂದಿಗೆ ಗಂಗಾನದಿಯಲ್ಲಿ ತಮ್ಮನ್ನು ಉಸಿರುಕಟ್ಟಿ ಸಾಯುವವರೆಗೂ ಮುಳುಗಿಸಿಕೊಳ್ಳುತ್ತಾರೆ ಎಂದು ಹೇಳಿದ್ದಾನೆ.8 
ತಮ್ಮ ದೇಹವನ್ನು ಕತ್ತರಿಸಿ ದೇವಿಗೆ ಅರ್ಪಿಸಿದ ವೀರಭಕ್ತರ ವಿವರಣೆಯನ್ನು ಭಾರತಕ್ಕೆ ಬಂದ ಇಬ್ಬರು ಪ್ರವಾಸಿಗರು ನೀಡುತ್ತಾರೆ. ಕಾಂಬೈತಾ(ಕ್ಯಾಂಬೆ) ನಗರದಲ್ಲಿ ಪುರೋಹಿತರು ದೇವರ ವಿಗ್ರಹಗಳ ಮುಂದೆ ನಿಂತು ತಮ್ಮ ಧರ್ಮದಲ್ಲಿ ವಿಧಿಸಿರುವ ಕರ್ಮಗಳನ್ನು ಮಾಡಬೇಕೆಂದೂ, ದೇವರುಗಳಿಗೋಸ್ಕರ ಬಲಿದಾನ ಮಾಡಿ ಪ್ರಾಣತ್ಯಾಗ ಮಾಡಿದರೆ ದೇವರುಗಳಿಗೆ ಮೆಚ್ಚುಗೆಯಾಗುವುದೆಂದೂ ಬೋಧನೆ ಮಾಡುತ್ತಾರೆ. ಆಗ ಪ್ರಾಣತ್ಯಾಗ ಮಾಡಲು ಅನೇಕರು ಸಿದ್ಧರಾಗಿ ಮುಂದೆ ಬರುತ್ತಾರೆ ಎಂದು ನಿಕೋಲೋ ಕಾಂಟಿ ತಿಳಿಸುತ್ತಾನೆ.9 ಬಾರ್ಬೊಸಾ ಎಂಬ ಮತ್ತೊಬ್ಬ ಪ್ರವಾಸಿ ತಮಿಳುನಾಡಿನಲ್ಲಿ ತಾನು ಕಂಡ ಒಂದು ಆತ್ಮಹತ್ಯೆಯನ್ನು ಈ ರೀತಿ ವರ್ಣಿಸುತ್ತಾನೆ. ರಥೋತ್ಸವದ ದಿನ ರಾಜನು ಸ್ನಾನ ಮಾಡಿ, ದೇವರ ಪೂಜೆಯನ್ನು ನೆರವೇರಿಸಿ, ಸಾರುವೆ ಕಟ್ಟಿ, ರೇಷ್ಮೆ ಬಟ್ಟೆಗಳಿಂದ ಅಲಂಕರಿಸಿದ ರಥದ ಮೇಲೆ ಬಂದು ನಿಲ್ಲುತ್ತಾನೆ. ನೆರೆದ ಜನರ ಸಮ್ಮುಖದಲ್ಲಿ ಹರಿತವಾದ ಚಾಕುವಿನಿಂದ ತನ್ನ ಕಿವಿ, ಮೂಗು, ತುಟಿ ಇತರೆ ಅಂಗಗಳನ್ನು ಚಕಚಕನೆ ಕೊಯ್ದು ಬಿಸಾಡುತ್ತಾನೆ. ತನ್ನ ಕೈಯಿಂದ ಕೊಯ್ಯುಬಹುದಾದ ಅಂಗಗಳನ್ನು ಕೊಯ್ದುಕೊಳ್ಳುತ್ತಾನೆ. ರಕ್ತಸ್ರಾವದಿಂದ ಪ್ರಜ್ಞೆತಪ್ಪಿ ಬೀಳುವಷ್ಟರಲ್ಲಿ ತನ್ನ ಕುತ್ತಿಗೆಯನ್ನು ಕೊಯ್ದುಕೊಳ್ಳುತ್ತಾನೆ. ಹೀಗೆ ಅವನು ದೇವರಿಗೆ ಬಲಿಯಾಗುತ್ತಾನೆ. ಅವನ ನಂತರ ರಾಜನಾಗುವವನು ಅಲ್ಲಿದ್ದು, ಇದನ್ನೆಲ್ಲಾ ನೋಡಬೇಕು. ಆಗಲೇ ಆತನನ್ನು ಮುಂದಿನ ರಾಜನನ್ನಾಗಿ ಮಾಡುವುದು.10 ಗಂಗಾ ನದಿಯಲ್ಲಿ ಮುಳುಗಿ ಪ್ರಾಣ ಕಳೆದುಕೊಳ್ಳುವ ಪದ್ಧತಿ ಈ ದೇಶದಲ್ಲಿದೆ. ಗಂಗಾನದಿಯನ್ನು ಸ್ವರ್ಗದ ನದಿಯೆಂದು ಭಾವಿಸಿ ಅಲ್ಲಿಗೆ ಯಾತ್ರೆ ಹೋಗುತ್ತಾರೆ ಮತ್ತು ಸತ್ತವರ ಬೂದಿಯನ್ನು ಅದರಲ್ಲಿ ಬಿಡುತ್ತಾರೆ. ನೀರಿನಲ್ಲಿ ಮುಳುಗಿ ಸತ್ತವರನ್ನು ಸಹ ಹೊರಕ್ಕೆ ತೆಗೆದು ದಹನ ಮಾಡಿ ಬೂದಿಯನ್ನು ನದಿಯಲ್ಲಿ ಬಿಡುತ್ತಾರೆ ಎಂದು ಇಬ್ನ-ನೆ-ಬತುತಾ ಹೇಳುತ್ತಾನೆ.11 ಮೇಲಿನ ಪ್ರವಾಸಿಗರ ಅಭಿಪ್ರಾಯಗಳನ್ನು ಗಮನಿಸಿದರೆ ಭಾರತದಲ್ಲಿ ಆಚರಣೆಯಲ್ಲಿದ್ದ ಆತ್ಮಬಲಿದಾನ ಪದ್ಧತಿ ಮತ್ತು ಅದರ ಉಗ್ರತೆಯ ಬಗ್ಗೆ ಒಂದು ಪರಿಕಲ್ಪನೆ ಮೂಡದಿರದು.
ಮರಣ ಪ್ರಕಾರಗಳನ್ನು ಸಹಜ ಮರಣ, ದುರ್ಮರಣ, ಅಪಮರಣ(ಅಪಮೃತ್ಯು) ಮತ್ತು ಮಹಾಮರಣ(ಆತ್ಮಬಲಿದಾನ) ಎಂಬುದಾಗಿ ಗುರುತಿಸಬಹುದು. ಇವುಗಳಲ್ಲಿ ಮೊದಲ ಮೂರು ಪ್ರಕಾರಗಳು ಪ್ರಸಕ್ತ ಅಧ್ಯಯನಕ್ಕೆ ಒಳಪಡತಕ್ಕವುಗಳಲ್ಲ. ನಾಲ್ಕನೆಯ ಮಹಾಮರಣವು ಆತ್ಮಾನುಸಂಧಾನ, ಆದರ್ಶಾನುಸಂಧಾನ, ಮೌಲ್ಯಾನುಸಂಧಾನಗಳ ಮೂಲಕ ಬರುವಂಥದ್ದು. ಆತ್ಮಾನುಸಂಧಾನದ ಮೂಲಕ ಮರಣವನ್ನು ಬರಮಾಡಿಕೊಂಡಿರುವಂಥದು ಧಾರ್ಮಿಕ ಆತ್ಮಬಲಿದಾನ ಅಥವಾ ಧಾರ್ಮಿಕ ಮಹಾಮರಣ ಎಂದೆನಿಸಿಕೊಳ್ಳುತ್ತದೆ. ಮೌಲ್ಯಾನುಸಂಧಾನದ ಮೂಲಕ ಮರಣವನ್ನು ಬರಮಾಡಿಕೊಂಡಿರುವಂಥದ್ದು ಲೌಕಿಕ ಆತ್ಮಬಲಿದಾನ ಅಥವಾ ಲೌಕಿಕ ಮಹಾಮರಣವೆನಿಸುತ್ತದೆ.  ಯಾವುದೋ ಒಂದು ಆದರ್ಶಕ್ಕೆ ಅಥವಾ ಸಮಾಜದ ಒಳಿತಿಗಾಗಿ ಬರಮಾಡಿಕೊಳ್ಳುವ ಮರಣವನ್ನು ಆದರ್ಶ ಮರಣವೆಂದು ಕರೆಯಬಹುದು. ಈ ಮೂರು ಪ್ರಕಾರಗಳಲ್ಲಿ ವ್ಯಕ್ತಿಯು ತನ್ನ ಮರಣವನ್ನು ತನ್ನ ಇಚ್ಛೆಗನುಸಾರವಾಗಿ ತಾನೇ ಆಹ್ವಾನಿಸಿಕೊಳ್ಳುತ್ತಾನೆ.12 
ಆತ್ಮಬಲಿದಾನವನ್ನು(ಮಹಾಮರಣವನ್ನು) ಧಾರ್ಮಿಕ ಆತ್ಮಬಲಿದಾನ ಮತ್ತು ಲೌಕಿಕ ಆತ್ಮಬಲಿದಾನ ಎಂದು ಎರಡು ಪ್ರಮುಖ ವಿಭಾಗಗಳಾಗಿ ವಿಂಗಡಿಸಬಹುದಾಗಿದೆ. ಲೌಕಿಕ ಆತ್ಮಬಲಿದಾನವನ್ನು ಪ್ರತ್ಯೇಕ ಅಧ್ಯಾಯದಲ್ಲಿ ವಿಶ್ಲೇಷಿಸಲಾಗಿದೆ. ಅಧ್ಯಯನದ ಅನುಕೂಲತೆಗಾಗಿ ಪ್ರಸ್ತುತ ಅಧ್ಯಾಯದಲ್ಲಿ ಧಾರ್ಮಿಕ ಆತ್ಮಬಲಿದಾನವನ್ನು ಹಿಂದೂ ಧಾರ್ಮಿಕ ಆತ್ಮಬಲಿದಾನ ಹಾಗೂ ಜೈನಮತದ ಧಾರ್ಮಿಕ ಆತ್ಮಬಲಿದಾನ ಎಂದು ವಿಭಾಗಿಸಿಕೊಂಡು ವಿವರಿಸಲಾಗಿದೆ. ಅಲ್ಲದೆ ಹಿಂದೂ ಧಾರ್ಮಿಕ ಆತ್ಮಬಲಿದಾನವನ್ನು ಚಿತಾಪ್ರವೇಶ, ಶೂಲಬಲಿ, ಸಿಡಿತಲೆ, ಶಿರಬಲಿ, ರುಂಡಸಮರ್ಪಣೆ, ಕೋಲುಸಿಡಿ, ಕರುಳು ಕತ್ತರಿಸಿ ಆತ್ಮಬಲಿ, ಗುಂಡ-ಬ್ರಹ್ಮಯ್ಯರ ಆತ್ಮಬಲಿ, ಸಮಾಧಿಬಲಿದಾನ ಮತ್ತು ಇತರೆ ಆತ್ಮಬಲಿದಾನಗಳೆಂದು ಸ್ಥೂಲವಾಗಿ ವಿಂಗಡಿಸಿಕೊಂಡು ಚರ್ಚಿಸಲಾಗಿದೆ. ಜೈನಮತದ ಆತ್ಮಬಲಿದಾನವನ್ನು ನಿಸಿದಿಗಲ್ಲುಗಳು ಮತ್ತು ಸಮಾಧಿಮರಣ ಎಂಬ ಶಿರೋನಾಮೆಗಳಡಿಯಲ್ಲಿ ವಿವರಿಸಿ ಹೇಳಲಾಗಿದೆ. 

ಜೈನ ಧಾರ್ಮಿಕ ಆತ್ಮಬಲಿದಾನ ಸ್ಮಾರಕ ಶಿಲ್ಪಗಳು
ಭಾರತದ ಪ್ರಮುಖ ಧಾರ್ಮಿಕ ಪಂಥಗಳಲ್ಲಿ ಜೈನಧರ್ಮವೂ ಒಂದು. ಹಿಂದೂಧರ್ಮವು ಸಮಾನ ತತ್ವಗಳ ಆಧಾರದ ಮೇಲೆ ರೂಪಗೊಳ್ಳುತ್ತಿರುವಂತೆ, ಇನ್ನೊಂದು ಕಡೆಯಲ್ಲಿ ಶ್ರೇಷ್ಠವಾದ ತತ್ವಗಳು ಗೌಣವಾಗಿ ಜಡ್ಡುಗಟ್ಟಿದ ಅರ್ಥಹೀನ ಸಂಪ್ರದಾಯಗಳು ಸಮಾಜದಲ್ಲಿ ಪ್ರಬಲವಾದವು. ಇದಕ್ಕೆ ಪ್ರತಿಯಾಗಿ ಸರಳ ಹೊಸ ಮಾರ್ಗಗಳನ್ನು ಹುಡುಕುವ ಪ್ರಯತ್ನಗಳಲ್ಲಿ ಜೈನ ಮತ್ತು ಬೌದ್ಧ ಪಂಥಗಳು ಹುಟ್ಟಿದವು. ಚತುರ್ವರ್ಣಗಳನ್ನು ಅನುಸರಿಸುವವರಲ್ಲಿ ಮೇಲು-ಕೀಳೆಂಬ ಅನಾರೋಗ್ಯಕರ ಭಾವನೆಗಳು ಬೆಳದುಬಂದವು. ಇದನ್ನು ಹೊಗಲಾಡಿಸಿ ಸಮಾಜದಲ್ಲಿ ಎಲ್ಲರಿಗೂ ಸಮಾನ ಸ್ಥಾನವನ್ನು ತಂದುಕೊಡಲು ಜೈನ ತೀರ್ಥಂಕರರು ಮತ್ತು ಬೌದ್ಧ ಮತದ ಗೌತಮ ಬುದ್ಧ ತಮ್ಮ ತಮ್ಮ ಬೋಧನೆ ನಡವಳಿಕೆಗಳ ಮೂಲಕ ಪ್ರಯತ್ನಿಸಿದರು. ಜೈನ ಸಂಪ್ರದಾಯದ ಪ್ರಕಾರ ಜೈನಧರ್ಮದ ಸ್ಥಾಪಕ ಮೊದಲನೆಯ ತೀರ್ಥಂಕರ ಋಷಭದೇವ(ಆದಿನಾಥ). ಇಪ್ಪತ್ಮೂರನೆಯ ತೀರ್ಥಂಕರ ಪಾಶ್ರ್ವನಾಥ ಮತ್ತು ಕೊನೆಯವ ಮಹಾವೀರ. ಅಹಿಂಸೆ, ಸತ್ಯ, ಅಸ್ತೇಯ, ಅಪರಿಗ್ರಹ ಮತ್ತು ಬ್ರಹ್ಮಚರ್ಯ ಎಂಬವು ಈ ಧರ್ಮದ ಮಹಾನ್ ತತ್ವಗಳು. ಜೈನ ಧರ್ಮದಲ್ಲಿ ದಿಗಂಬರ ಮತ್ತು ಶ್ವೇತಾಂಬರ ಎಂಬ ಪಂಥಗಳಿವೆ. ಭಾರತದ ಸಾಂಸ್ಕøತಿಕ ಜೀವನವನ್ನು ರೂಪಿಸುವಲ್ಲಿ ಜೈನಧರ್ಮದ ಪಾತ್ರ ಅಪಾರವೆಂದು ಹೇಳಬಹುದು.45 
ದಕ್ಷಿಣ ಭಾರತದ ಜೈನಧರ್ಮದ ಇತಿಹಾಸವೆಂದರೆ ಕರ್ನಾಟಕದ ಜೈನಧರ್ಮದ ಇತಿಹಾಸವೇ ಆಗಿದೆ ಎಂಬ ಡಾ. ಬಿ.ಎ. ಸಾಲೆತೊರೆ ಅವರ ಅಭಿಪ್ರಾಯ ಅತ್ಯಂತ ಸೂಕ್ತವಾದುದಾಗಿದೆ. ಕರ್ನಾಟಕಕ್ಕೂ ಜೈನಧರ್ಮಕ್ಕೂ ಬಹು ನಿಕಟವಾದ ಸಂಬಂಧವಿದೆ. ಜೈನ ತೀರ್ಥಂಕರರೆಲ್ಲರೂ ಉತ್ತರ ಭಾರತದಲ್ಲಿ ಜನಿಸಿ ಧರ್ಮವನ್ನು ಬೋಧಿಸಿದರು. ಆದರೆ ಪ್ರಸಿದ್ಧ ಜೈನಾಚಾರ್ಯರೆಲ್ಲ ದಕ್ಷಿಣ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಜನಿಸಿ ಜೈನಧರ್ಮವನ್ನು ಅಭಿವೃದ್ಧಿಗೆ ತಂದರು. ಕುಂದಕುಂದಾಚಾರ್ಯ, ಸಮಂತಭದ್ರಾಚಾರ್ಯ, ಪೂಜ್ಯಪಾದ, ಕವಿಪರಮೇಷ್ಠಿ, ಅಕಲಂಕ, ವಿದ್ಯಾನಂದ, ವೀರಸೇನಾಚಾರ್ಯ ಹಾಗೂ ಜಿನಸೇನಾಚಾರ್ಯ ಮುಂತಾದವರು ಕನ್ನಡ ನಾಡಿನಲ್ಲಿ ಜನಿಸಿ, ಜೈನ ಶಾಸ್ತ್ರಗ್ರಂಥಗಳನ್ನು ರಚಿಸಿ, ಜೈನ ಆಚಾರ ವಿಚಾರಗಳನ್ನು ಪ್ರಚಾರಗೊಳಿಸಿದರು.46 ಭದ್ರಬಾಹು ಮುನಿಗಳು ಮತ್ತು ಸಂಪ್ರತಿ ಚಂದ್ರಗುಪ್ತರು ತಮ್ಮ ಹನ್ನೆರಡು ಸಹಸ್ರದಷ್ಟು ಮುನಿ ಸಂಘದೊಡನೆ ಕ್ರಿ.ಪೂ. ಮೂರನೆಯ ಶತಮಾನದಲ್ಲಿ ಉಜ್ಜಯನಿಯನ್ನು ತೊರೆದು ದಕ್ಷಿಣ ಭಾರತಕ್ಕೆ ಆಗಮಿಸಿದರು ಎಂದು ಬಹುಸಂಖ್ಯಾತ ವಿದ್ವಾಂಸರ ಅಭಿಪ್ರಾಯವಾಗಿದೆ. ಹಾಗಾಗಿ ಈ ಕಾಲಾವಧಿಯಲ್ಲಿ ಜೈನಧರ್ಮವು ಕರ್ನಾಟಕಕ್ಕೆ ಆಗಮಿಸಿತೆಂದು ಹೇಳುವುದು ಸೂಕ್ತ. ಜೈನಧರ್ಮದ ಪಂಥಗಳಾದ ದಿಗಂಬರ ಮತ್ತು ಶ್ವೇತಾಂಬರರು ಕರ್ನಾಟಕದಲ್ಲಿ  ಬಹುಸಂಖ್ಯೆಯಲ್ಲಿ ಇದ್ದರಾದರೂ, ಇವೆರಡನ್ನೂ ಮೀರಿಸುವ ರೀತಿಯಲ್ಲಿ ಯಾಪನೀಯ ಪಂಥವು ಕರ್ನಾಟಕದಲ್ಲಿಯೇ ಉಗಮವಾಗಿ ತನ್ನ ಪ್ರಬಲ ಅಸ್ತಿತ್ವವನ್ನು ಇಲ್ಲಿ ಪಡೆದುಕೊಂಡಿತ್ತು.47
ನಿಸಿದಿಗಲ್ಲುಗಳ ಅರ್ಥ ಮತ್ತು ಪ್ರಕಾರಗಳು 
      ವೀರರಿಗೆ ವೀರಗಲ್ಲುಗಳನ್ನು ಸ್ಥಾಪಿಸುತ್ತಿದ್ದಂತೆ, ಸನ್ಯಸನ ವಿಧಿಯಿಂದ ಮಡಿದವರ ನೆನೆಪಿಗಾಗಿ ಜೈನಧರ್ಮೀಯರು ಕೆಲವು ಸ್ಮಾರಕಗಳನ್ನು ನಿಲ್ಲಿಸುತ್ತಿದ್ದರು. ಇವುಗಳನ್ನು ‘ನಿಸಿದಿಗಲ್ಲು’ಗಳೆಂದು ಕರೆಯುತ್ತಾರೆ. ಶಾಸನಗಳಲ್ಲಿ ‘ನಿಸಿಧಿಗೆ’, ‘ನಿಶೀಧಿಗೆ’, ‘ನಿಸಿಧಿ’, ‘ನಿಶೇಧಿಕಾ’ ‘ನಿಸಿಧಿಗೆ’ ‘ನಿಷಿದ್ಯಾಲಯ’, ‘ನಿಸಿದಿಗೆ’ ಎಂದು ಬಳಕೆಯಾಗಿರುವ ಈ ಪದಕ್ಕೆ ಸಂಸ್ಕøತದಲ್ಲಿ ‘ನಿಷೀದಿಕಾ’ ಮತ್ತು ಪ್ರಾಕೃತದಲ್ಲಿ ‘ನಿಸೀಹಿಯಾ’ ಎಂಬ ರೂಪಗಳುಂಟು. ನಿಸಿದಿಗಳಲ್ಲಿ ಸನ್ಯಸನದ ವಿಷಯವನ್ನು ಮಾತ್ರ ಹೇಳಿರಬಹುದು ಅಥವಾ ಅದರ ಜೊತೆಗೆ ಸನ್ಯಾಸವನ್ನು ಸ್ವೀಕರಿಸಿದ ವ್ಯಕ್ತಿಯ ಚಿತ್ರವೂ ಇರಬಹುದು.48 ಸಲ್ಲೇಖನ ಇಲ್ಲವೆ ಸಮಾಧಿ ಮರಣದಿಂದ ಮಡಿದವರ ಸ್ಮಾರಕವಾಗಿ ನಿಲ್ಲಿಸಿದ ಕಲ್ಲುಗಳನ್ನು ಅಥವಾ ಬರೆಸಿದ ಬರಹಗಳನ್ನು ನಿಸಿದಿಗಲ್ಲು ಅಥವಾ ನಿಸಿದಿಗೆ ಎಂದು ಕರೆಯುತ್ತಾರೆ.49
‘ನಿಶಿಹೀಯ’ ಎಂಬ ಪ್ರಾಕೃತ ಪದವನ್ನು ಸಮೀಕರಿಸಿ, ‘ನಿಶದ್ಯ’ ಹಾಗೂ ‘ನಿಶೀದಿಕ’ ಎಂಬ ಸಂಸ್ಕøತಪದಗಳೊಡನೆ ಸಮೀಕರಿಸಿ ‘ನಿಸಿದಿ’ ಎಂಬುದು ಶರೀರದಂಡನೆಗೆ ಆಯ್ಕೆಮಾಡಿಕೊಳ್ಳುವ ಸ್ಥಾನ ಅಥವಾ ಕುಳಿತುಕೊಳ್ಳುವ ಭಂಗಿಗೆ ಸಂಬಂಧಿಸಿರಬಹುದೆಂದು ಆ.ನೇ. ಉಪಾಧ್ಯೆಯವರು ಸೂಚಿಸಿರುವರು.50 ಪಿ.ಕೆ. ಆಚಾರ್ಯರು ನಿಸಿದಿಯನ್ನು ‘ಂ house ಣo ಡಿesಣ, ಚಿ ಣomb ಚಿ moಟಿumeಟಿಣ’ ಎಂದು ಅರ್ಥೈಸಿದ್ದಾರೆ. ಗುರುವಿನ ಹತ್ತಿರ ಕುಳಿತು ಪ್ರಾಣ ತ್ಯಜಿಸಿದ ಸ್ಥಳಕ್ಕೆ, ಆ ಸ್ಥಳವು ಮುಂದಿನವರ ನೆನಪಿನಲ್ಲಿ ಉಳಿಯುವುದಕ್ಕಾಗಿ ಕೆತ್ತಿದ ಬರಹಕ್ಕೆ ‘ನಿಷೀದಿಕಾ’ ಎಂದು ಹೆಸರು. ‘ಸದ್À’ ಎಂಬ ಧಾತುವಿನಿಂದ ಹೊರಟ ನಿಷತ್ತಿ ಎಂಬ ಪದಕ್ಕೆ siಣಣiಟಿg, ಡಿesಣiಟಿg ಎಂದೂ ‘ನಿಷಾದಿನ್’ ಎಂಬ ಶಬ್ದಕ್ಕೆ siಣಣiಟಿg ಜoತಿಟಿ ಅಥವಾ ಟಥಿiಟಿg ಎಂದೂ ಅರ್ಥಗಳಿವೆ. ಬಂಡೆಗಳ ಮೇಲೆ ಇಂತಹ ಬರಹಗಳಿದ್ದರೆ ಆ ಬಂಡೆಯ ತುದಿಯಲ್ಲಿ ಮಳೆ-ಬಿಸಿಲುಗಳನ್ನು ಸಹಿಸಿ ಆ ವ್ಯಕ್ತಿಯು ವ್ರತವನ್ನು ಪೂರೈಸಿದನು ಎಂದು ತಿಳಿಯಬೇಕು ಎಂದು ಚಿದಾನಂದಮೂರ್ತಿಯವರು ಹೇಳುತ್ತಾರೆ.51 ದೇವರಕೊಂಡಾರೆಡ್ಡಿಯವರು ನಿಷದಿ ಎಂದರೆ ಸಮೀಪದಲ್ಲಿರು ಎಂದರ್ಥ ಎಂಬುದಾಗಿ ಹೇಳುತ್ತಾ, ವ್ರತಧಾರಿಯಾದ ವ್ಯಕ್ತಿಯ ಬಳಿ ಆತನಿಗೆ ವ್ರತದೀಕ್ಷೆ ಕೊಟ್ಟ ಗುರುಗಳು ಅಥವಾ ಬೇರೆ ಯಾರಾದರೊಬ್ಬರು ಜೈನ ತತ್ವಗಳನ್ನೋ, ಜೈನ ಪುಣ್ಯಕಥೆಗಳನ್ನೋ ಹೇಳುತ್ತಿದ್ದರು. ಈ ವಿವರಗಳನ್ನು ನಿಷದಿ ಕಲ್ಲುಗಳ ಮೇಲೆ ಇರುವ ಉಬ್ಬು ಕೆತ್ತನೆಗಳಿಂದ ತಿಳಿಯಬಹುದು. ನಿಸಿದಿ ಕಲ್ಲು ಹೀಗೆಯೇ ಇರಬೇಕೆಂಬ ನಿಯಮ ಇದ್ದಂತಿಲ್ಲ ಎಂಬುದಾಗಿ ಅವರು ಅಭಿಪ್ರಾಯಪಟ್ಟಿದ್ದಾರೆ.52
ಶಾಸನಗಳಲ್ಲಿ ನಿಶೀಧಿಕಾ, ನಿಶಿದಿ, ನಿಶಿಧಿ, ನಿಶಿದಿಗೆ, ನಿಶೀಧಿಗೆ, ನಿಷದ್ಯಿಕಾ ಇತ್ಯಾದಿಯಾಗಿ ಸಿಗುವ ಈ ಪದದ ಸರಿಯಾದ ರೂಪ ಮತ್ತು ಸರಿಯಾದ ಅರ್ಥ ಇನ್ನೂ ಚರ್ಚೆಯ ವಲಯದಲ್ಲಿ ನಿಂತಿದೆ. ಸದ್ ಧಾತುವಿನಿಂದ ಉತ್ಪನ್ನವಾಗುವ ನಿಷತ್ತಿ, ನಿಷಾದಿನ್ ಪದಗಳಿಗೆ ಕುಳಿತುಕೊಳ್ಳುವಿಕೆ, ವಿಶ್ರಮಿಸುವಿಕೆ ಎಂದು ಅರ್ಥ. ಇದರಿಂದ ಹೊರಡುವ ನಿಷೀದಿಕಾ ಎಂಬುದೇ ಸರಿಯಾದ ರೂಪವೆಂದು “ವ್ರತಧಾರಿ ಕುಳಿತ ಸ್ಥಳದಲ್ಲಿ ಮಾಡಿದ ಗುರುತು” ಎಂದು ಕೆಲವರು ಹೇಳುತ್ತಾರೆ. “ನಿಷೀಧಿಯಂ ನಿ¾Âಸಿ”, “ನಿಶೀಧಿಯಂ ಮಾಡಿಸಿ” ಇತ್ಯಾದಿಗಳನ್ನಾಧರಿಸಿ ‘ನಿಷಿಧಿ’ ಎಂಬುದಕ್ಕೆ ದಹನ ಸ್ಥಳದಲ್ಲಿ ರಚಿಸಿದ ಸ್ಮಾರಕ ಎಂಬ ಅರ್ಥವನ್ನು ಕೆಲವರು ಹೇಳುತ್ತಾರೆ.53 ಈ ಪದವು ದೇಹದಂಡನಕಾರರು ಆಯ್ದುಕೊಂಡ ಸ್ಥಳ ಮತ್ತು ಭಂಗಿಯನ್ನು ಸೂಚಿಸುವುದು. ಇದು ಮನನಕ್ಕಾಗಿ ಆಯ್ದುಕೋಂಡ ಸ್ವಚ್ಛ ಸ್ಥಳ, ಮನನ ಸ್ಥಳ, ಭಂಗಿ, ಮಾನಸಿಕ ಸ್ಥಿತಿ ಅಥವಾ ಶರೀರವನ್ನು ವಿಸರ್ಜಿಸುವ ಸ್ಥಳಗಳನ್ನು ಸೂಚಿಸುವುದು. ಆದರೆ ಅದನ್ನು ಸಾಮಾನ್ಯವಾಗಿ ವ್ರತಾಚರಣೆಯ ಮೂಲಕ ಸಾವನ್ನಪ್ಪಿದವರ ಗೌರವಾರ್ಥ ನಿರ್ಮಿಸಿದ ಸ್ಮಾರಕಗಳಿಗೆ ಅನ್ವಯಿಸಲಾಗಿರುವುದನ್ನು ಐತಿಹಾಸಿಕ ಪ್ರಮಾಣಗಳು ಸಾಧೃಶ್ಯಪಡಿಸುವವು.54
ಒಟ್ಟಿನಲ್ಲಿ ಉಪವಾಸ ವ್ರತದಿಂದ ಅಥವಾ ಸಲ್ಲೇಖನವನ್ನು ಆಚರಿಸಿ, ಪಂಚ ಪರಮೇಷ್ಠಿಗಳನ್ನು ಸ್ಮರಿಸುತ್ತಾ ಸಮಾಧಿಮರಣ ಹೊಂದಿದವರ ಸ್ಮಾರಕಗಳೇ ನಿಸಿದಿಗಳು. ಇವುಗಳನ್ನು ಸಮಾಧಿಮರಣ ಹೊಂದಿದವರು ಸಲ್ಲೇಖನವ್ರತ ಸ್ವೀಕರಿಸಿದ ಸ್ಥಳದಲ್ಲಾಗಲೀ, ಅವರು ಸಮಾಧಿಮರಣ ಹೊಂದಿದ ಸ್ಥಳದಲ್ಲಾಗಲೀ, ಅಥವಾ ಅವರ ಅಂತ್ಯ ಸಂಸ್ಕಾರ ನಡೆದ ಸ್ಥಳದಲ್ಲಿಯೇ ಆಗಲೀ ಇಲ್ಲವೆ ತೀರ್ಥಸ್ಥಳದÀಲ್ಲಾಗಲೀ ನಿರ್ಮಿಸುತ್ತಿದ್ದರು ಎಂದು ಹೇಳಬಹುದು. ‘ನಿಸಿದಿ’ ಎಂಬ ಪದಕ್ಕೆ ಸಂವಾದಿಯಾಗಿ ನಿಸಿದಿಗೆ, ನಿಸಿಧಿಗೆ, ನಿಶಿದಿ, ನಿಶಿಧಿ, ನಿಷಿಧಿ, ನಿಷಿದ್ಧಿ, ನಿಸಿದ್ಧಿ, ನಿಸದ್ದಿ, ನಿಸಧ್ಧಿ, ನಿಸುದ್ದಿ,  ನಿಸ್ತಿ, ನಿಶೀಧಿಗೆ, ನಿಷಧಿಗೆ, ನಿಷದಿ, ನಿಷಧ, ನಿಷದ್ಯಾ, ನಿಷದ್ಯಕಾ, ನಿಷಧ್ಯಾಂ, ನಿಶೀದೀಕಾ, ನಿಷಿಧ್ಯಾಲಯ, ನಿಷದ್ಯಾಯ, ನಿಸ್ತಿಗೆ ಮುಂತಾದ ಇಪ್ಪತ್ತೆರಡು ವಿಭಿನ್ನ ರೂಪಗಳನ್ನು ನಿಸಿಧಿ ಶಾಸನಗಳಲ್ಲಿ ಬಳಸಲಾಗಿದೆ. ಸಾಮಾನ್ಯವಾಗಿ ‘ನಿಸಿದಿ’ ಎಂಬ ಶಬ್ದರೂಪವನ್ನು ಹೆಚ್ಚಿನ ಶಾಸನಗಳಲ್ಲಿ ಬಳಸಿರುವುದನ್ನು ಕಾಣಬಹುದು.55
ಸಮಾಧಿ ಮರಣ ಹೊಂದಿದವರ ಸ್ಮಾರಕಗಳಾಗಿ ನಿಸಿದಿಗಳನ್ನು ನಿರ್ಮಿಸುವ ಪದ್ದತಿಯು ಸಾವಿರಾರು ವರ್ಷಗಳಿಂದ ಕರ್ನಾಟಕದಲ್ಲಿ ಅಸ್ತಿತ್ವದಲ್ಲಿದೆ. ಇವು ಪಾದಗಳ ರೂಪದಲ್ಲಿ, ಶಾಸನದ ರೂಪದಲ್ಲಿ, ಶಾಸನ ಹಾಗೂ ಶಿಲ್ಪ ಎರಡನ್ನೂ ಹೊಂದಿರಬಹುದು. ಶಿಲ್ಪಗಳಾಗಿದ್ದರೆ ವ್ರತಧಾರಿಯ ಶಿಲ್ಪ, ಸಲ್ಲೇಖನ ಬೋಧಿಸಿದ ಜೈನ ಅಚಾರ್ಯರ ಶಿಲ್ಪ ಹಾಗೂ ಜಿನನ ಶಿಲ್ಪ ಮತ್ತು ವ್ರತಧಾರಿಯ ಸ್ವರ್ಗೋತ್ಕ್ರಮಣ ಶಿಲ್ಪಗಳನ್ನು ಹೊಂದಿರುತ್ತವೆ. ನಿಸಿದಿಗಳ ನಿರ್ಮಾಣ ವೈವಿದ್ಯಮಯವಾಗಿದ್ದು, ಶಾಸನದ ರೂಪದಲ್ಲಿ, ಶಿಲ್ಪ ಮತ್ತು ಶಾಸನ ಎರಡೂ ರೂಪದಲ್ಲಿ, ಪಾದದ ರೂಪದಲ್ಲಿ, ಪಾದ ಮತ್ತು ಶಾಸನ ಎರಡೂ ರೂಪದಲ್ಲಿ, ಬಸದಿಯ ರೂಪದಲ್ಲಿ, ಪಟ್ಟಶಾಲೆ ರೂಪದಲ್ಲಿ, ದಾನಶಾಲೆ ರೂಪದಲ್ಲಿ, ಬಂಡೆಗಲ್ಲು, ಗುಂಡುಕಲ್ಲು, ಮಂಟಪಗಳ ರೂಪದಲ್ಲಿ, ಸ್ತಂಭಕೂಟ ಮತ್ತು ಫಲಕಗಳ ರೂಪದಲ್ಲಿ, ವಿಗ್ರಹ, ಕಟ್ಟಡ, ತೇರು ಇತ್ಯಾದಿ ರೂಪದಲ್ಲಿ, ಒಮ್ಮಾಳಿಗೆ ರೂಪದಲ್ಲಿ ನಿರ್ಮಿಸುವುದಲ್ಲದೆ, ಮುಡುಪಿದ ವ್ಯಕ್ತಿಯ ಪ್ರತಿರೂಪ ನಿರ್ಮಿಸುವುದು, ಪಂಚ ಪರಮೇಷ್ಟಿಗಳ ಶಿಲ್ಪ ನಿರ್ಮಿಸುವುದು, ತಮ್ಮ ಸ್ಮಾರಕವಾಗಿ ತಾವೇ ತೀರ್ಥಂಕರರ ಅಥವಾ ಯಕ್ಷಿಯರ ವಿಗ್ರಹ ನಿರ್ಮಿಸುವುದು, ಶಿಲಾಕೂಟ ನಿರ್ಮಿಸುವುದು ಹೀಗೆ ಹಲವು ತರಹದ ನಿಸಿದಿ ಸ್ಮಾರಕಗಳು ಅಸ್ತಿತ್ವದ್ಲಲಿದ್ದವು.56 ಇವನ್ನು ಸ್ತಂಭ, ಕಂಬ, ಮಾನಸ್ತಂಭ, ಜಯಸ್ತಂಭ, ಚಾಗದಕಂಬ, ಶಿಲಾಸ್ತಂಭ, ಕಲ್ಲದಾನಶಾಲ, ಜಿನಶಾಸನ, ಮುಡಿಜೆ, ಕಲ್ಲು ಭವನ, ಸಮಾಧಿಕಲ್ಲು, ನಿಸಿದಿಗೆಯ ಕಲ್ಲು, ನಿಸದಿಗೆ ಪ್ರತಿಮೆ ಎಂದೂ ಸಹ ಕರೆಯಲಾಗಿದೆ.57
ಸಮಾಧಿ ಮರಣವನ್ನು ಪಡೆದವರು ಸ್ಮಾರಕಗಳ ಗೌರವಕ್ಕೆ ಅರ್ಹರೆನಿಸಿದ ಕಾರಣ ‘ಪರೋಕ್ಷವಿನಯ’ವಾಗಿ ಅದನ್ನು ನೆರವೇರಿಸಲಾಗುತ್ತಿತ್ತು. ಸಾಮಾನ್ಯವಾಗಿ ಹತ್ತಿರದ ಬಂಧುಗಳು ಅಥವಾ ಶಿಷ್ಯರು ಧನ ವಿನಿಯೋಗಿಸಿ ಅದನ್ನು ಪೂರೈಸುತ್ತಿದ್ದರು. ಗಂಡಂದಿರು ಪತ್ನಿಯರ ಸ್ಮಾರಕವನ್ನು, ಸಹೋದರಿಯರು ತಮ್ಮ ಸಹೋದರರ-ಸಹೋದರಿಯರ ಸ್ಮಾರಕವನ್ನು, ಪುತ್ರರು ತಮ್ಮ ತಂದೆ-ತಾಯಿಯರ ಸ್ಮಾರಕವನ್ನು, ಪತ್ನಿಯರು ತಮ್ಮ ಗಂಡನ ಸ್ಮಾರಕವನ್ನು, ಕಂತಿಯರು ಕಂತಿಯರ ಸ್ಮಾರಕಗಳನ್ನು, ಶ್ರಮಣರು, ಮುನಿಗಳ ಸ್ಮಾರಕವನ್ನು, ಶ್ರಾವಕಿಯರು ತಮ್ಮ ಗುರುಗಳ ಸ್ಮಾರಕವನ್ನು ನಿರ್ಮಿಸಿದ ಉದಾಹರಣೆಗಳು ಶಾಸನಗಗಳಲ್ಲಿ ದೊರೆಯುತ್ತವೆ.58
ನಿಸಿದಿ ಶಾಸನಗಳ ಇತಿಹಾಸ, ಭಾಷೆ ಮತ್ತು ಲಿಪಿ
ಆರಂಭದಲ್ಲಿ ಬಂಡೆಗಲ್ಲು ಹಾಗೂ ಗುಂಡುಕಲ್ಲುಗಳ ಮೇಲೆ ನಿಸಿದಿ ಶಾಸನಗಳನ್ನು ಬರೆಸುವ ಪದ್ದತಿ ರೂಢಿಯಲ್ಲಿತ್ತು. ಪ್ರತ್ಯೇಕ ನಿಸಿದಿ ಶಿಲಾಫಲಕಗಳ ನಿರ್ಮಾಣ ಹನ್ನೆರಡನೆಯ ಶತಮಾನದಲ್ಲಿ ಹೆಚ್ಚು ಪ್ರಸಾರಕ್ಕೆ ಬಂದರೂ ಅದರ ಪ್ರಾರಂಭವನ್ನು ಹತ್ತನೆಯ ಶತಮಾನದಲ್ಲೇ ಕಾಣಬಹುದು. ಅತ್ಯಂತ ಪ್ರಾಚೀನ ನಿಸಿದಿ ಶಾಸನ ಎಂದರೆ ಶ್ರವಣಬೆಳಗೋಳದ ಚಿಕ್ಕಬೆಟ್ಟದಲ್ಲಿರುವ ಗುಣಭೂಷಿತ ಮುನಿಯ ನಿಸಿದಿ. ಬಿ.ಎಲ್. ರೈಸ್‍ರವರು ಇದರ ಕಾಲವನ್ನು ಕ್ರಿ.ಶ.700 ಎಂದು ಗುರುತಿಸಿದ್ದಾರೆ. ಈ ಶಾಸನದ ಲಿಪಿಯು ಶಾತವಾಹನರ ಲಿಪಿಯ ಪ್ರಭಾವವನ್ನು ಹೊಂದಿರುವ ಆದಿಗಂಗರ ಲಿಪಿ ಎಂದು ಹೇಳಬಹುದು. ಈ ಶಾಸನದಲ್ಲಿ ಸಂಸ್ಕøತ, ಪ್ರಾಕೃತ ಹಾಗೂ ಪೂರ್ವದ ಹಳಗನ್ನಡ ಈ ಮೂರು ಭಾಷೆಗಳ ಪ್ರಯೋಗವನ್ನು ಗಮನಿಸಬಹುದು. ಈ ಶಾಸನದಲ್ಲಿನ ಭಾಷೆ ಹಾಗೂ ಲಿಪಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಇದು ಕ್ರಿ.ಶ.ಸು.400ರ ಕಾಲಘಟ್ಟಕ್ಕೆ ಸೇರಬಹುದೆಂದು ತೋರುತ್ತದೆ. ಓರಿಸ್ಸಾ ರಾಜ್ಯದ ಭುವನೇಶ್ವರದ ಹತ್ತಿರದಲ್ಲಿರುವ ಹಾತಿಗುಂಫದಲ್ಲಿ ದೊರೆತ ಖಾರವೇಲನ ಕ್ರಿ.ಶ.ಎರಡನೆಯ ಶತಮಾನದ ಪ್ರಾಕೃತ ಶಾಸನದಲ್ಲಿ ‘ನಿಸಿದಿ’ ಎಂಬ ಶಬ್ದದ ಮೊಟ್ಟಮೊದಲ ಉಲ್ಲೇಖ ಕಂಡುಬರುತ್ತದೆ. ಆದರೆ ಕರ್ನಾಟಕದಲ್ಲಿನ ಶಾಸನಗಳಲ್ಲಿ ಕಂಡುಬರುವ ‘ನಿಸದಿ’ ಶಬ್ದದ ಪ್ರಾಚೀನ ಉಲ್ಲೇಖ ಪ್ರಸ್ತುತ ಗುಣಭೂಷಿತನ ಶಾಸನದಲ್ಲಿಯೇ ಎಂಬುದು ಗಮನಾರ್ಹವಾದ ಅಂಶ.59
ಕ್ರಿ.ಶ.ಐದನೆಯ ಶತಮಾನದ ನಿಸಿದಿಯ ನಂತರ ನಮಗೆ ದೊರೆಯುವ ನಿಸಿದಿ ಶಾಸನಗಳೆಂದರೆ ಕ್ರಿ.ಶ.ಆರನೆಯ, ಏಳನೆಯ ಶತಮಾನಗಳ ಶ್ರವಣಬೆಳಗೊಳದ ನಿಸಿದಿಗಳೇ ಆಗಿದ್ದು, ಅವು ಕನ್ನಡ ಲಿಪಿ ಹಾಗೂ  ಸಂಸ್ಕøತ ಭಾಷೆಯ ಗದ್ಯ ಮತ್ತು ಶ್ಲೋಕಗಳಿಂದ ಒಡಗೂಡಿವೆ. ಏಳನೆಯ ಶತಮಾನದ ಬಹುತೇಕ ಎಲ್ಲ ನಿಸಿದಿ ಶಾಸನಗಳೂ ಪೂರ್ವದ ಹಳಗನ್ನಡ ಭಾಷೆಯನ್ನು ಹೊಂದಿದ್ದು, ಸುಂದರವಾದ ಪದ್ಯಗಳಂತಿವೆಯಾದರೂ ಸಂಸ್ಕøತ ಭಾಷೆಯ ಪ್ರಭಾವವನ್ನು ಅಲ್ಲಗಳೆಯುವಂತಿಲ್ಲ. ಎಂಟನೆಯ ಶತಮಾನದ ನಿಸಿದಿ ಶಾಸಲಗಳೆಲ್ಲವೂ ಪೂರ್ವ ಹಳಗನ್ನಡ ಭಾಷೆಯ ಗದ್ಯದಲ್ಲಿ ರಚಿತವಾಗಿವೆ. ಈ ಕಾಲದ ನಿಸಿದಿಗಳಲ್ಲಿ ಅವು ಯಾರ ನಿಸಿದಿ ಶಾಸನಗಳು? ಮತ್ತು ಅವರು ಹೇಗೆ ಮುಡುಪಿದರು? ಎಂಬ ವಿವರಗಳನ್ನು ಮಾತ್ರ ದಾಖಲಿಸಿದ್ದು, ನೇರವಾಗಿ ತಾವು ವಿವರಿಸಬೇಕೆಂದಿರುವುದನ್ನು ಸರಳವಾಗಿ ದಾಖಲಿಸಲಾಗಿದೆ. ಕಾರುಬೆಲೆಯ(ಕೋಲಾರ ಜಿಲ್ಲೆ) ನಿಸಿದಿಯನ್ನು ಹೊರತುಪಡಿಸಿ ಒಂಭತ್ತನೆಯ ಶತಮಾನದಲ್ಲಿ ಶಿಲ್ಪದ ದೃಷ್ಟಿಯಿಂದ ಮಹತ್ವದ ನಿಸಿದಗಳು ಕಂಡುಬರುವುದಿಲ್ಲ. ಈ ಶೈಲಿ ಹತ್ತನೆಯ ಶತಮಾನದವರೆಗೂ ಮುಂದುವರೆಯಿತು. ನಂತರ ಶಿಲ್ಪದ ದೃಷ್ಟಿಯಿಂದಾಗಲೀ ಸಾಹಿತ್ಯದ ದೃಷ್ಟಿಯಿಂದಾಗಲೀ ಅಥವಾ ಇತಿಹಾಸದ ದೃಷ್ಟಿಯಿಂದಾಗಲೀ ಮಹತ್ವದ ನಿಸಿದಿಗಳು ದೊರೆಯುವುದು ಹತ್ತನೆಯ ಶತಮಾನದಲ್ಲಿಯೇ. ಹತ್ತನೆಯ ಶತಮಾನದ ನಿಸಿದಿ ಶಾಸನಗಳೆಲ್ಲಾ ಉತ್ತಮ ಕಾವ್ಯಗುಣಗಳುಳ್ಳ ದೊಡ್ಡ ಶಾಸನಗಳಾಗಿವೆ. ಹತ್ತಾರು ಸಾಲುಗಳಿಂದ ಹಿಡಿದು ನೂರಾರು ಸಾಲುಗಳವರೆಗೂ ಈ ಶಾಸನಗಳು ಇರುವುದನ್ನು ಗಮನಿಸಬಹುದು. ಹನ್ನೆರಡನೆಯ ಶತಮಾನದಲ್ಲಿ ಹೊಯ್ಸಳ ವಾಸ್ತು ಮತ್ತು ಮೂರ್ತಿಶಿಲ್ಪವು ತನ್ನ ಉಚ್ಛ್ರಾಯ ಸ್ಥಿತಿಯನ್ನು ಮುಟ್ಟಿದ ಕಾಲ. ಈ ಕಾಲಘಟ್ಟದಲ್ಲಿ ಸಾಹಿತ್ಯ ಮತ್ತು ಶಿಲ್ಪದ ದೃಷ್ಟಿಯಿಂದ ನಿಸಿದಿ ಶಾಸನಗಳೂ ಸಹ ಅದ್ಭುತ ಕಲೆಯನ್ನು ಸೂಕ್ಷ್ಮ ಕುಸುರಿ ಕೆಲಸವನ್ನು ಮೈಗೂಡಿಸಿಕೊಂಡು ಆಕರ್ಷಕವಾಗಿ ಮೈದಳೆದವೆಂದು ಹೇಳಬಹುದು. ಅದೇ ರೀತಿ ಹದಿಮೂರು ಹಾಗೂ ಹದಿನಾಲ್ಕನೆಯ ಶತಮಾನಗಳ ಕೆಲವು ಶಾಸನಗಳು ಅನೇಕ ಸಾಲುಗಳುಳ್ಳ ಕಾವ್ಯಗಳಂತಿದ್ದು, ಶ್ರೇಷ್ಠ ಕವಿಗಳಿಂದ ರಚಿತವಾದವುಗಳಾಗಿವೆ. ಹದಿನೈದು, ಹದಿನಾರನೆಯ ಶತಮಾನಗಳ ನಿಸಿದಿ ಶಾಸನಗಳು ತೀರಾ ಸಾಧಾರಣ ಭಾಷಾ ಶೈಲಿಯಿಂದೊಡಗೂಡಿದ್ದು, ಅತ್ಯಂತ ಸರಳವಾಗಿರುವುದನ್ನು ಗಮನಿಸಬಹುದು. ಹದಿನೆಂಟು ಮತ್ತು ಹತ್ತೊಂಭತ್ತನೆಯ ಶತಮಾನದ ನಿಸಿದಿಗಳಂತೂ ಮತ್ತಷ್ಟು ಸರಳವಾಗಿದ್ದು, ಅವು ಸಮಾಧಿಮರಣ ಹೊಂದಿದವರು ಯಾರ ಶಿಷ್ಯರು? ಮತ್ತು ಎಲ್ಲಿ ಮುಡುಪಿದರು? ಎಂಬುದನ್ನು ಮಾತ್ರ ನಿರೂಪಿಸುತ್ತವೆ. ಹೆಸರನ್ನು ಮಾತ್ರ ದಾಖಲಿಸುವ ನಿಸಿದಿ ಶಾಶನಗಳೂ ಇವೆ. ಹೀಗೆ ಮೊದಮೊದಲು ಸಂಸ್ಕøತ ಹಾಗೂ ಕನ್ನಡ ಭಾಷೆಯಲ್ಲಿ ರಚಿತವಾದ ನಿಸಿದಿ ಶಾಸನಗಳು ಕಾಲಕ್ರಮೇಣ ಪೂರ್ವಹಳಗನ್ನಡ, ಹಳಗನ್ನಡ, ನಡುಗನ್ನಡ, ಹೊಸಗನ್ನಡಗಳಲ್ಲಿ ರಚಿತವಾಗಿರುವುದನ್ನು ಗುರುತಿಸಬಹುದು. ಆಯಾ ಕಾಲಘಟ್ಟದ ಸಾಹಿತ್ಯ ಕೃತಿಗಳಲ್ಲಿ ಮತ್ತು ಶಾಸನಗಳಲ್ಲಿ ಬಳಕೆಯಾಗಿರುವ ಭಾಷೆ, ಲಿಪಿ ಮತ್ತು ಸಾಹಿತ್ಯ ರೂಪವು ಸಮಕಾಲೀನ ನಿಸಿದಿ ಶಾಸನಗಳಲ್ಲಿಯೂ ಬಳಕೆಯಾಗಿರುವುದನ್ನು ಗಮನಿಸಬಹುದು.60
ನಿಸಿದಿ ಶಾಸನಗಳಲ್ಲಿ ಸಂಘ, ಗಣ, ಗಚ್ಛ, ಬಳಿ, ಅನ್ವಯ
ಜೈನಧರ್ಮದಲ್ಲಿ ಸಾಧಕರನ್ನು ಕುರಿತು ಹೇಳುವಾಗ ಅವರ ಸಂಘ, ಗಣ, ಗಚ್ಛ, ಬಳಿ, ಅನ್ವಯಗಳನ್ನು ಹೇಳುವ ಮೂಲಕ ಅವರನ್ನು ಗುರುತಿಸುವುದನ್ನು ಕಾಣುತ್ತೇವೆ. ನಿಸಿದಿ ಶಾಸನಗಳಲ್ಲಿ ಜೈನ ಮುನಿಗಳನ್ನು ಕುರಿತಂತೆ ವಿವರಿಸುವ ಬಹುತೇಕ ಎಲ್ಲ ಶಾಸನಗಳಲ್ಲಿಯೂ ಅವರ ಸಂಘ, ಗಣ, ಗಚ್ಛ, ಬಳಿ, ಅನ್ವಯಗಳನ್ನು ಕುರಿತ ವಿವರಗಳಿವೆ. ಇವುಗಳಲ್ಲಿ ಪ್ರಧಾನವಾದುದು ಸಂಘ, ಸಂಘದ ಶಾಖೆಗಳು ಗಣಗಳು, ಗಣದ ಶಾಖೆಗಳು ಗಚ್ಛಗಳು, ಹೀಗೆ ಈ ಗುಂಪುಗಳಲ್ಲಿನ ಒಳ ಪ್ರಭೇದಗಳನ್ನು ಕಾಣಬಹುದು. ಸಂಘ ಎಂದರೆ ಗುಂಪು ಎಂದರ್ಥ. ದಿಗಂಬರ ಮತ್ತು ಶ್ವೇತಾಂಬರ ಎಂದು ಪ್ರಾರಂಭದಲ್ಲಿ ಸಾಧುಗಳ ವಸ್ತ್ರ ಪರಿದಾನವನ್ನು ಕುರಿತು ಹುಟ್ಟಿದ ಸಂಘ ಭೇದವು ತರುವಾಯ ಈ ಎರಡೂ ಸಂಪ್ರದಾಯಗಳಲ್ಲಿ ಅನೇಕ ಪ್ರಭೇದಗಳಾಗಿ ಒಡೆದುದ್ದನ್ನು ಕಾಣಬಹುದು. ನಿಸಿದಿ ಶಾಸನಗಳಲ್ಲಿ ಉಲ್ಲೇಖವಾಗಿರುವ ಸಂಘಗಳಲ್ಲಿ ಮೂಲಸಂಘದ ಉಲ್ಲೇಖ ಅತ್ಯಂತ ಹೆಚ್ಚಿನ ಸಂಖ್ಯೆಯ ಶಾಸನಗಳಲ್ಲಿ ಕಂಡುಬರುತ್ತದೆ. ದಿಗಂಬರ ಸಂಪ್ರದಾಯವನ್ನು ಮೂಲ ಸಂಘವೆಂದು ಕರೆಯುವುದು ರೂಢಿ. ಶ್ವೇತಾಂಬರ ಸಂಘಕ್ಕಿಂತ ತಮ್ಮದು ಪ್ರಾಚೀನ ಸಂಘವೆಂದು ಗುರುತಿಸುವುದಕ್ಕಾಗಿ ಹೀಗೆ ಕರೆದಿರಬಹುದು. ಪ್ರಾಚೀನ ಕರ್ನಾಟಕದ ನಿಸಿದಿ ಶಾಸನಗಳಲ್ಲಿ ಮೂಲಸಂಘ, ನಂದಿಸಂಘ, ದ್ರಾವಿಳಸಂಘ, ಯಾಪನೀಯಸಂಘ ಮತ್ತು ನವಿಲೂರು ಸಂಘಗಳ ಉಲ್ಲೇಖಗಳನ್ನು ಕಾಣಬಹುದು. ಇವುಗಳಲ್ಲದೆ ನಂದಿ, ವೀರ, ಅಪರಾಜಿತ, ದೇವ, ಪಂಚಸ್ತೂಪ, ಸೇನ, ಭದ್ರ, ಗುಪ್ತ, ಸಿಂಹ, ಬೌದ್ಧ, ಕಾಷ್ಠ, ಮಥುರ ಮತ್ತು ಭಿಲ್ಲಕ ಎಂಬ ಸಂಘಗಳಿದ್ದವೆಂದು ಜೈನ ಧಾರ್ಮಿಕ ಗ್ರಂಥಗಳು ತಿಳಿಸುತ್ತವೆ. ಶ್ರವಣಬೆಳಗೋಳದ ಕ್ರಿ.ಶ.ಸು.600ರ ಶಾಸನದಲ್ಲಿ ಬರುವ ‘ಭದ್ರಬಾಹು ಮುನಿಗಳು ತಮ್ಮ ಸಂಘದೊಂದಿಗೆ ದಕ್ಷಿಣಕ್ಕೆ ಬಂದರು ಎಂಬ ಉಲ್ಲೇಖ ಕರ್ನಾಟಕದ ಶಾಸನಗಳಲ್ಲಿ ಬರುವ ಸಂಘದ ಪ್ರಥಮ ಉಲ್ಲೇಖವಾಗಿದ್ದು, ಆ ಕಾಲಕ್ಕಾಗಲೇ ಸಂಘಭೇದ ಉಂಟಾಗುತ್ತೆಂದು ಹೇಳಬಹುದು.70 
ಸಂಘಗಳ ಭೇದಗಳಿಗೆ ಗಣವೆಂದು ಕರೆಯುತ್ತಾರೆ. ಒಬ್ಬ ಆಚಾರ್ಯನ ನೇತೃತ್ವದಲ್ಲಿರುವ ಮುನಿಗಳ ಸಮುದಾಯವನ್ನೇ ಗಣ ಎಂದು ಕರೆಯಲಾಗುತ್ತದೆ. ಅನ್ವಯಗಳ ಅಥವಾ ಕುಲಗಳ ಸಮುದಾಯವೇ ಗಣ ಎಂದು ವಿದ್ವಾಂಸರ ಅಭಿಪ್ರಾಯವಾಗಿದೆ. ಜೈನÀ ಶಾಸ್ತ್ರಗ್ರಂಥಗಳು ಅರ್ಹದ್ಬಲಿಗಳು ಜೈನಧರ್ಮದಲ್ಲಿ ಸಂಘ ಅಥವಾ ಗಣಗಳನ್ನು ಪ್ರಥಮ ಬಾರಿಗೆ ಸ್ಥಾಪಿಸಿದ ಬಗ್ಗೆ ತಿಳಿಸುತ್ತವೆ. ಈ ಗಣ ಭೇದವು ಕ್ರಿ.ಶ.1215ರ ವೇಳೆಗೆ ಉಂಟಾಯಿತೆಂದು ಹೇಳಲಾಗುತ್ತದೆ. ಶ್ರವಣಬೆಳಗೋಳದ ಕ್ರಿ.ಶ.400ರ ಕಾಲದ ಶಾಸನಗಳಲ್ಲಿ ಬರುವ ‘ಸಂದ್ವಿಗ ಗಣ’ ಎಂಬುದೇ ಕರ್ನಾಟಕದ ಅತ್ಯಂತ ಪ್ರಾಚೀನ ‘ಗಣ’ದ ಉಲ್ಲೇಖವಾಗಿದೆ. ಗಣಗಳಲ್ಲಿ ದೇಸಿ ಗಣದ ಉಲ್ಲೇಖ ಅತಿ ಹೆಚ್ಚು ಕಡೆಗಳಲ್ಲಿ ಕಂಡುಬರುತ್ತದೆ. ಇವುಗಳಲ್ಲದೆ ಶಾಸನಗಳು ದ್ರವಿಳಗಣ, ಬಲಾತ್ಕಾರಗಣ, ಕಾಣೂರ್ಗಣ, ಕಾಲೋಗ್ರಗಣ, ಕಾಲೆಯಗಣ, ನಂದಿಗಣ, ಕುಮುದಿಗಣ, ದೇವಗಣ, ಸೂರಸ್ತಗಣ, ಬಲಗಾರಗಣ, ಸೇನಗಣ, ಪುನ್ನಾಗವೃಕ್ಷಮೂಲಗಣ ಮತ್ತು ಮೂಲಗಣಗಳನ್ನು ಉಲ್ಲೇಖಿಸುತ್ತವೆ.71 
ಗಣದ ಶಾಖೆಗಳನ್ನು ‘ಗಚ್ಛ’ಗಳೆಂದು ಕರೆಯಲಾಗುತ್ತದೆ. ಗಚ್ಛವನ್ನು ಏಕಾಚಾರ್ಯ ಪರಿವಾರಃ ಎಂದು ವಿವರಿಸಲಾಗಿದೆ. ಬಹುಶಃ ಗಣ, ಗಚ್ಛಗಳೆರಡೂ ರಚನೆಯಲ್ಲಿ ಒಂದೇ ಆಗಿದ್ದು, ಗಣವು ದೊಡ್ಡ ಗುಂಪನ್ನು, ಗಚ್ಛವು ಅದರಲ್ಲಿನ ಒಳಗುಂಪುಗಳನ್ನು ಸೂಚಿಸುತ್ತವೆ. ಜೈನ ಗಚ್ಛಗಳ ಸಂಖ್ಯೆ ಎಂಭತ್ತನಾಲ್ಕು ಎಂದೂ, ಇವುಗಳಲ್ಲಿ ಪ್ರತಿಯೊಂದಕ್ಕೂ ಒಬ್ಬೊಬ್ಬ ದೇವತೆ ಇರುವಳೆಂದೂ ಅಭಿಪ್ರಾಯವಿದೆ. ದೇಸಿ ಗಣದಲ್ಲಿ ಪ್ರಮುಖವಾದದ್ದು, ಪುಸ್ತಕ ಗಚ್ಛ, ಕೆಲವೊಮ್ಮೆ ಇದನ್ನೇ ‘ಪುಸ್ತಕಾನ್ವಯ’ ಎಂದೂ ‘ಪೊತ್ಥಗೆಯ ಬಳಿಯ’ ಎಂದೂ ಉಲ್ಲೇಖಿಸಿರುವುದನ್ನು ಕಾಣಬಹುದು. ವಕ್ರಗಚ್ಚ, ತಿಂತ್ರಿಣೀಕಗಚ್ಛ, ಸರಸ್ವತೀಗಚ್ಛಗಳು ಇತರೆ ಶಾಸನೋಕ್ತ ಗಚ್ಛಗಳಾಗಿವೆ. ‘ಬಳಿ’ ಅಥವಾ ‘ವಲಿ’ಯು ಶಾಖೆಯ ಹೆಸರಾಗಿದ್ದು, ಗುರುವಿನ ಹೆಸರು ಅಥವಾ ಸ್ಥಾನವನ್ನು ಸೂಚಿಸುತ್ತದೆ. ಕೆಲವು ವೇಳೆ ಇದು ಧಾರ್ಮಿಕ ವಂಶ ಎಂಬರ್ಥದಲ್ಲಿ ಬಳಕೆಯಾದರೆ, ಇನ್ನೂ ಕೆಲವು ವೇಳೆ ಊರಿನ ಹೆಸರೂ ಸಹ ಬಳಿಯಾಗಿ ರೂಪಗೊಂಡಿರುವುದುಂಟು. ಸಂಘ, ಗಣ, ಗಚ್ಛ, ಬಳಿಗಳನ್ನು ಹೇಳುವಂತೆಯೇ ‘ಅನ್ವಯ’ ಮತ್ತು ‘ವಿಭವ’ಗಳನ್ನು ಉಲ್ಲೇಖಿಸಿರುವ ಶಾಸನಗಳು ಕಂಡುಬರುತ್ತವೆ. ಇವುಗಳು ಒಳಭೇಧಗಳನ್ನು ಸೂಚಿಸುತ್ತಿದ್ದು, ಶಾಸನಗಳು ಕುಂದಕುಂದಾನ್ವಯ, ಆರುಂಗಳಾನ್ವಯ, ಶ್ರೀನಂದ್ಯಾನ್ವಯ, ನವಿಲುಗುಂದಾನ್ವಯ, ಮೈಳಾಪಾನ್ವಯ, ಹನಸೋಗೆ ಅನ್ವಯ, ತಾಳಕೋಲಾನ್ವಯ, ಗಂಗಾನ್ವಯ, ಬೊದಾಮ್ನಾಯ, ಇಂಗುಳೇಶ್ವರ ಬಳಿ, ವಡ್ಡದೇವರ ಬಳಿ, ಹನಸೂಗೆ ಬಳಿ, ಪೊತ್ತಗೆ ಬಳಿ, ಬೋಧ ವಿಭವ ಮುಂತಾದ ಸಂಘ, ಗಣ, ಗಚ್ಛ, ಬಳಿ ಅನ್ವಯ ಮತ್ತು ವಿಭವ ಎಂಬ ಜೈನ ಧರ್ಮದ ಒಳಭೇದಗಳನ್ನು ಉಲ್ಲೇಖಿಸುತ್ತವೆ.72 ಈ ರೀತಿಯ ಭೇದಗಳು ಕೇವಲ ಆ ಶಾಸನೋಕ್ತ ಮುನಿಗಳು ಹಾಗೂ ಕಂತಿಯರು ಯಾವ ಪರಂಪರೆಗೆ ಸೇರಿದವರೆಂಬುದನ್ನು ಗುರುತಿಸುವ ಸಲುವಾಗಿ ದಾಖಲಾಗಿವೆಯೇ ಹೊರತು ಅವು ಅವರ ಶ್ರೇಣಿಗಳನ್ನು ಗುರುತಿಸಲು ಅಲ್ಲ ಎಂಬುದನ್ನು ಗಮನಿಸಬೇಕು. 
ಯಾವುದೋ ಸಂಘದಿಂದ ಹೊರಟು ಬೇರೆ ಕಡೆ ಶಾಖೆಗಳನ್ನು(ಗಣ) ಸ್ಥಾಪಿಸಿದವರು ಮೊದಲು ತಮ್ಮ ಹೆಸರನ್ನು ಹೇಳಿಕೊಳ್ಳುವಾಗ ತಮ್ಮ ಸಂಘದ ಹೆಸರನ್ನು ಹೇಳಿಕೊಳ್ಳುತ್ತಿದ್ದರು. ಈ ಗಣಗಳಿಂದ ಹೊರಟು ಬೇರೆ ಕಡೆ ಹೋಗಿ ಬೇರೆ ಶಾಖೆಗಳನ್ನು(ಗಚ್ಛ) ಸ್ಥಾಪಿಸಿದವರು ತಮ್ಮ ಹಿಂದಿನ ಸಂಘ ಮತ್ತು ಗಣಗಳನ್ನು ಹೇಳಿಕೊಂಡರು. ಇವರು ಮತ್ತೆ ಬೇರೆ ಕಡೆ ಹೋಗಿ ಬೇರೆ ಶಾಖೆಗಳನ್ನು(ಅನ್ವಯ) ಸ್ಥಾಪಿಸಿದಾಗ ಹಿಂದಿನ ಸಂಘ, ಗಣ, ಗಚ್ಛಗಳನ್ನು ಹೇಳಿಕೊಂಡಿರಬೇಕು.73 ಈ ರೀತಿ ಸಂಘ, ಗಣ, ಗಚ್ಛ, ಅನ್ವಯಗಳು ಹುಟ್ಟಿಕೊಂಡಿರಬಹುದೆಂದು ತೋರುತ್ತದೆ. ಆನಂತರದಲ್ಲಿ ಒಳ ಪ್ರಭೇದಗಳುಂಟಾಗಿ ‘ಬಳಿ’, ‘ವಿಭವ’ ಗಳು ರೂಪಗೊಂಡಂತೆ ತೋರುತ್ತದೆ.
‘ಅನೇಕತೆಯಲ್ಲಿ ಏಕತೆ’ ಎಂಬ ವ್ಯಾಪಕ ದೃಷ್ಟಿಕೋನವನ್ನು ತನ್ನ ಮೂಲ ಸೂತ್ರವಾಗಿಸಿಕೊಂಡಿರುವ ಭಾರತವು ಸಮನ್ವಯ ಸಂಸ್ಕøತಿಯನ್ನು ಮೈಗೂಡಿಸಿಕೊಂಡು ಬೆಳೆದ ರಾಷ್ಟ್ರವಾಗಿದೆ. ಭಾರತದ ಇತಿಹಾಸ ಪುನರ್ ನಿರ್ಮಾಣಕ್ಕೆ ಉತ್ಖನನಗಳಲ್ಲಿ ದೊರೆತ ಪುರಾತತ್ವ ವಸ್ತು-ಅವಶೇಷಗಳು, ನಾಣ್ಯಗಳು, ಸ್ಮಾರಕಗಳು, ಸಾಹಿತ್ಯ ಕೃತಿಗಳು, ವಿದೇಶಿ ಯಾತ್ರಿಕರ ವರದಿಗಳು, ರಾಜಮಹಾರಾಜರ ಆಸ್ಥಾನದಲ್ಲಿದ್ದ ದಾಖಲೆಗಳು ಸಹಕಾರಿಯಾದರೂ ಶಾಸನಗಳು ಒದಗಿಸುವಷ್ಟು, ಇಲ್ಲಿಯ ಸಾಮಾಜಿಕ ಮತ್ತು ಸಾಂಸ್ಕøತಿಕ ಪರಂಪರೆಯನ್ನು ಇತರೆ ಮೂಲಾಧಾರಗಳು ಒದಗಿಸಲಾರವು.  ಶಾಸನಗಳಿಗೆ ಪ್ರಧಾನವಾದ ಪ್ರೇರಕ ಶಕ್ತಿ ಧರ್ಮವೇ ಆದರೂ, ಅವುಗಳಲ್ಲಿ ಊಕ್ತವಾದ ಸಾಂದರ್ಭಿಕ ಅಂಶಗಳಿಂದ ಸಮಕಾಲೀನ ಸಮಾಜದ ರಾಜಕೀಯ ಇತಿಹಾಸವಷ್ಟೇ ಅಲ್ಲದೆ ಅಂದಿನ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿ, ಭಾಷೆ, ಸಾಹಿತ್ಯ, ಆಡಳಿತ, ಕಲೆ ಮತ್ತು ವಾಸ್ತುಶಿಲ್ಪ ಮುಂತಾದ ಸಾಂಸ್ಕøತಿಕ ವಿಷಯಗಳಿಗೆ ಪೂರಕವಾದ ವಿಫುಲ ಮಾಹಿತಿ ದೊರೆಯುತ್ತದೆ. ಪ್ರಾಚೀನ ಮತ್ತು ಮಧ್ಯಕಾಲೀನ ಭಾರತದ ಐತಿಹಾಸಿಕ ಘಟನಾವಳಿಗಳ ಬಗ್ಗೆ ವಸ್ತುನಿಷ್ಠವಾಗಿ ಮಾತನಾಡಲು ಸಾಧ್ಯವಾಗಿರುವುದು ಶಾಸನ ಆಕರಗಳಿಂದಾಗಿಯೇ ಎಂದರೆ ತಪ್ಪಾಗಲಾರದು. ಕರ್ನಾಟಕಕ್ಕೂ ಈ ಮಾತು ಅನ್ವಯಿಸುತ್ತದೆ. ಲಕ್ಷಾಂತರ ಶಾಸನಗಳು ಈವರೆಗೆ ಪ್ರಕಟವಾಗಿದ್ದರೂ, ಶಾಸನಗಳ ಇನ್ನೊಂದು ಪ್ರಕಾರವಾದ ಸ್ಮಾರಕಶಿಲ್ಪಗಳು ವಿದ್ವಾಂಸರ ಅನಾದಾರಕ್ಕೆ ಒಳಗಾದವೆಂದೇ ಹೇಳಬೇಕಾಗುತ್ತದೆ.  ಸ್ಮಾರಕ ಶಿಲ್ಪಗಳನ್ನು ಕುರಿತು ಈವರೆಗೂ ತಕ್ಕಮಟ್ಟಿನ ಅಧ್ಯಯನಗಳು ನಡೆದಿವೆಯಾದರೂ, ಅಲ್ಲಲ್ಲಿ ಕೆಲವಾರು ವೀರಗಲ್ಲುಗಳ ಪಾಠಗಳನ್ನು ಹೊರತುಪಡಿಸಿದರೆ ಅವುಗಳ ಸಮಗ್ರ ಅಧ್ಯಯನ ನಡೆಯದಿರುವುದು ಶೋಚನೀಯ ಸಂಗತಿ. ಪ್ರಧಾನವಾಗಿ ಕರ್ನಾಟಕದ ಸಾವಿರಾರು ಶಾಸನಗಳಿಗೆ ವಸ್ತುವಾಗಿ ಪರಿಣಮಿಸಿದ ವೀರಗಲ್ಲುಗಳನ್ನು, ಮೃತ ಪತಿಯನ್ನು ಏಕೈಕ ನಿಷ್ಠೆಯಿಂದ ಹಿಂಬಾಲಿಸಿ ಚಿತೆ ಏರಿದ ಸತಿಯ ಸ್ಮರಣೆಗಾಗಿ ನಿಲ್ಲಿಸಿದ ಮಹಾಸತಿಕಲ್ಲುಗಳನ್ನು, ತನ್ನ ಒಡೆಯನ ಜೋಳವಾಳಿ ಋಣವನ್ನು ತೀರಿಸಲು ಅಥವಾ ತನ್ನನ್ನು ಸಲುಹಿದ ಅರಸನ ಒಳಿತನ್ನು ಬಯಸಿ ತನ್ನನ್ನು ತಾನು ಬಲಿದಾನಗೈದುಕೊಂಡವರ ಸ್ಮರಣೆಗಾಗಿ ನೆಟ್ಟ ಆತ್ಮಬಲಿದಾನ ಶಿಲ್ಪಗಳನ್ನು ಅಲ್ಲದೆ ಹಿಂದೂ ಮತ್ತು ಜೈನ ಧರ್ಮೀಯರು ಕಠೋರ ವ್ರತವನ್ನಾಚರಿಸಿ ಮೋಕ್ಷವನ್ನು ಪಡೆದ ನೆನಪಿಗಾಗಿ ನಿಲ್ಲಿಸಿದ ನಿಷಿದಿಕಲ್ಲುಗಳನ್ನು ಇಲ್ಲಿ ಸ್ಮರಿಸಬಹುದು.

# ವೈ. ಮದ್ದಾನಸ್ವಾಮಿ. 
   ಸಹಾಯಕ ಪ್ರಾಧ್ಯಾಪಕರು
   ಸರಕಾರಿ ಪ್ರಥಮ ದರ್ಜೆ ಕಾಲೇಜು, ಹಾವೇರಿ.
   ಮೊ: 9620179987 

Comments

Popular posts from this blog

ಹೊಯ್ಸಳರ ಲಾಂಛನದಲ್ಲಿಯ ಪ್ರಾಣಿ ಹುಲಿಯಲ್ಲ ಸಿಂಹ...!

ಹಾವೇರಿ ಜಿಲ್ಲೆಯಲ್ಲಿಯ ಶಾಸನಗಳಲ್ಲಿ ಬಸವಣ್ಣನವರು

ಹಾವೇರಿ ಜಿಲ್ಲೆಯ ಎಂಟು ತಾಲೂಕುಗಳ ಕಿರು ಪರಿಚಯ....!!!!