ಹಾವೇರಿ ಜಿಲ್ಲೆಯ ಮಾಂಡಳಿಕ ಅರಸು ಮನೆತನಗಳು- ವೈ. ಮದ್ದಾನಸ್ವಾಮಿ.

ಮೊದಲು ಧಾರವಾಡ ಜಿಲ್ಲೆಯ ಅವಿಭಾಜ್ಯ ಅಂಗವಾಗಿದ್ದ ಹಾವೇರಿ ಜಿಲ್ಲೆ ದಿನಾಂಕ 24-08-1997 ರಂದು ಧಾರವಾಡ ಜಿಲ್ಲೆಯಿಂದ ಬೇರ್ಪಟ್ಟು ಹೊಸ ಜಿಲ್ಲೆಯಾಗಿ ರೂಪಗೊಂಡಿತು. ಸದ್ಯ ಹಾವೇರಿ ಜಿಲ್ಲೆಯು ಬ್ಯಾಡಗಿ, ರಾಣೇಬೆನ್ನೂರು, ಶಿಗ್ಗಾಂವಿ, ಹಾನಗಲ್ಲು, ಸವಣೂರು, ಹಿರೇಕೆರೂರು, ರಟ್ಟಿಹಳ್ಳಿ ಮತ್ತು ಹಾವೇರಿ ಎಂಬ ಎಂಟು ತಾಲೂಕುಗಳನ್ನು ಒಳಗೊಂಡ ವಿಶಾಲ ಜಿಲ್ಲೆಯಾಗಿದೆ. ಇದು 4823 ಚದರ ಕಿ. ಮೀ. ವಿಸ್ಥೀರ್ಣವನ್ನು ಹೊಂದಿದ್ದು, ಮಲೆನಾಡು, ಅರೆಮಲೆನಾಡು, ಮತ್ತು ಬಯಲುಸೀಮೆಗಳಿಂದ ಕೂಡಿದೆ. ಹಾವೇರಿ ಜಿಲ್ಲೆಯು ಧಾರವಾಡ, ಗದಗ, ಶಿವಮೊಗ್ಗ, ದಾವಣಗೆರೆ, ಉತ್ತರಕನ್ನಡ ಮತ್ತು ವಿಜಯನಗರ ಜಿಲ್ಲೆಗಳೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ. ಹಾವೇರಿ ಜಿಲ್ಲಾ ಪ್ರದೇಶವು ಕಾಲಕಾಲಕ್ಕೆ ಕರ್ನಾಟಕವನ್ನಾಳಿದ ಅನೇಕ ಅರಸು ಮನೆತನಗಳ ಆಳ್ವಿಕೆಗೆ ಒಳಪಟ್ಟಿತೆಂದು ಅಲ್ಲಿಯ ಶಾಸನಗಳು ಮತ್ತು ಸಾಹಿತ್ಯ ಗ್ರಂಥಗಳು ದೃಢಪಡಿಸುತ್ತವೆ. ಹಾಗೆಯೇ ಈ ಅರಸು ಮನೆತನಗಳ ಅಧೀನದಲ್ಲಿ ಕೆಲವಾರು ಮಾಂಡಳಿಕರು ಜಿಲ್ಲೆಯ ಬೇರೆ ಬೇರೆ ಭಾಗಗಳಲ್ಲಿ ಆಳ್ವಿಕೆ ಮಾಡಿದ ಕುರುಹುಗಳಾಗಿ ವಿಫುಲ ಆಕರಗಳು ದೊರೆಯುತ್ತವೆ. ಪ್ರಮುಖವಾಗಿ ಹಾವೇರಿ ಜಿಲ್ಲೆಯಲ್ಲಿ ದೊರೆಯುವ ಶಾಸನಗಳನ್ನು ಅವಲೋಕಿಸಿ, ಪೂರಕ ಸಾಹಿತ್ಯ ಕೃತಿಗಳನ್ನು ಬಳಸಿಕೊಂಡು ಪ್ರಸ್ತುತ ಸಂಶೋಧನಾ ಲೇಖನವನ್ನು ಸಿದ್ಧಪಡಿಸಲಾಗಿದೆ. 1. ಬಾಸವೂರಿನ ಸೇನವಾರರು ಇವರು ಎಂಟನೆಯ ಶತಮಾನದಿಂದ ಹನ್ನೊಂದನೆಯ ಶತಮಾನದ ಪೂರ್ವದವರ...